ನಾನಲ್ಲ ‘ಮಾತಿನ ಮಲ್ಲ’, ಹಾಗೆ ಹೇಳಲು ಮೋದಿ ಯಾರು ?
ಮುಂಬೈ: ರಾಮಮಂದಿರ ವಿಚಾರ ಸುಪ್ರೀಂ ಕೋರ್ಟ್ ಅಂಗಳದಲ್ಲಿದೆ, ಈ ಸಮಯದಲ್ಲಿ ಮಾತಿನ ಮಲ್ಲರು ಸುಮ್ಮನಿರಬೇಕು ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಗುಡುಗಿದ್ದಕ್ಕೆ ಶಿವಸೇನೆ ನಾಯಕ ಉದ್ಧವ್ ಠಾಕ್ರೆ 2019 ಸೆಪ್ಟೆಂಬರ್ 20ರ ಶುಕ್ರವಾರ ಸ್ಪಷ್ಟನೆ ನೀಡಿ, ನಮ್ಮ ಪಕ್ಷ ಹಿಂದೂಗಳ ಭಾವನೆಗೆ ಸ್ಪಂದಿಸುತ್ತದೆ ಎಂದು ಸಮರ್ಥಿಸಿದರು.
‘ರಾಮಮಂದಿರ ವಿಚಾರವಾಗಿ ಮಾತಿನ ಮಲ್ಲರು ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ದೇಶದ ಪ್ರತಿಯೊಬ್ಬರು ಸುಪ್ರೀಂ ಕೋರ್ಟಿಗೆ ಗೌರವ ಕೊಡಬೇಕು. ಪ್ರಕರಣ ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆ ಹಂತದಲ್ಲಿದೆ. ನಿಮ್ಮೆಲ್ಲರಿಗೂ ಕೈಮುಗಿಯುತ್ತೇನೆ, ದಯವಿಟ್ಟು ನ್ಯಾಯಾಂಗ ವ್ಯವಸ್ಥೆಗೆ ಗೌರವ ಕೊಡಿ’ ಎಂದು ಹಿಂದಿನ ದಿನವಷ್ಟೇ ನಾಸಿಕ್ನಲ್ಲಿ ನಡೆದ ಸಮಾವೇಶದಲ್ಲಿ ಪ್ರಧಾನಿ ಮೋದಿ ಮನವಿ ಮಾಡಿಕೊಳ್ಳುವ ರೂಪದಲ್ಲಿ ತಿವಿದಿದ್ದರು.
ಪ್ರಧಾನಿಯವರ ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಉದ್ಧವ್ ಠಾಕ್ರೆ, ನನ್ನನ್ನು ಮಾತಿನ ಮಲ್ಲರಿಗೆ ಹೋಲಿಸಲು ಮೋದಿ ಯಾರು ಎಂದು ಕೇಳಿದರು. ನಾನೇನೂ ಮಾತಿನ ಮಲ್ಲನಲ್ಲ ಎಂದಿರುವ ಠಾಕ್ರೆ, ನಾನು ಕೇವಲ ಹಿಂದೂಗಳ ಭಾವನೆಯನ್ನು ಬಿಂಬಿಸುತ್ತಿದ್ದೆ ಎಂದು ಸ್ಪಷ್ಟನೆ ನೀಡಿದರು.
ಪ್ರಧಾನಿ ಮೋದಿ ಯಾರ ಹೆಸರನ್ನೂ ಹೇಳದೇ ಇದ್ದರೂ ಕೂಡಾ ಕೆಲವು ಮಾಧ್ಯಮಗಳು ಶಿವಸೇನೆಯತ್ತ ಬೊಟ್ಟು ಮಾಡಿದ್ದವು. ಎನ್ಡಿಎ ಅಂಗಪಕ್ಷವಾದ ಶಿವಸೇನೆ, ರಾಮಮಂದಿರ ವಿಚಾರವಾಗಿ ಕಠಿಣ ನಿಲುವನ್ನು ಕೈಗೊಳ್ಳಲು ಆಗ್ರಹಿಸಿತ್ತು. ಮಂದಿರ ನಿರ್ಮಾಣ ಸಂಬಂಧ ಸುಗ್ರೀವಾಜ್ಞೆ ಹೊರಡಿಸಲು ಆಗ್ರಹಿಸಿತ್ತು.
ತಮ್ಮ ಪಕ್ಷಕ್ಕೆ ಸುಪ್ರೀಂ ಕೋರ್ಟ್ ಮೇಲೆ ನಂಬಿಕೆ ಇದೆ ಎಂದು ಹೇಳಿದ ಉದ್ಧವ್ ಠಾಕ್ರೆ ಹಲವು ವರ್ಷಗಳಿಂದ ಈ ಪ್ರಕರಣದ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಕಳೆದ ವರ್ಷ ನಾನು ಅಯೋಧ್ಯೆಗೆ ಹೋಗಿದ್ದೆ, ಮಹಾರಾಷ್ಟ್ರ ಚುನಾವಣೆಗೆ ಮುನ್ನವೂ ಹೋಗಿದ್ದೆ, ಈಗಲೂ ಹೋಗಿದ್ದೆ. ಮತ್ತೆ ಕೂಡಾ ಅಯೋಧ್ಯೆಗೆ ಹೋಗುವೆ ಎಂದು ಹೇಳಿದರು.
ಕಳೆದ ಬಾರಿ ಅಯೋಧ್ಯೆಗೆ ಭೇಟಿ ನೀಡಿದ್ದ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ್ದ ಉದ್ಧವ್ ಠಾಕ್ರೆ, ನ್ಯಾಯಾಲಯದ ತೀರ್ಪು ವಿಳಂಬವಾದರೆ ಕೇಂದ್ರ ಸರ್ಕಾರ ಧೈರ್ಯ ತೋರಿಸಿ ಮಧ್ಯ ಪ್ರವೇಶ ಮಾಡಬೇಕು ಎಂದು ಹೇಳಿದ್ದರು. ಈ ಬಗ್ಗೆ ಇದೀಗ ಸ್ಪಷ್ಟನೆ ನೀಡಿದ ಠಾಕ್ರೆ, ನ್ಯಾಯಾಲಯ ಶೀಘ್ರದಲ್ಲೇ ತೀರ್ಪು ನೀಡುವ ವಿಶ್ವಾಸ ಪ್ರಧಾನಿಗೆ ಇದ್ದರೆ ನಾವೂ ಕೂಡಾ ತಾಳ್ಮೆಯಿಂದ ಕಾಯುತ್ತೇವೆ ಎಂದು ಹೇಳಿದರು.
No comments yet.
Leave a comment