SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಪಾಕ್ ಪ್ಯಾಸೆಂಜರ್ ರೈಲಿನಲ್ಲಿ ಗ್ಯಾಸ್ ಸ್ಟವ್ ಸ್ಫೋಟ: ಕನಿಷ್ಠ ೭೩ ಸಾವು

31 pak train fire tragedyಪ್ರಯಾಣಿಕರು ಅಡುಗೆ ಮಾಡುತ್ತಿದ್ದಾಗ ಸಂಭವಿಸಿದ ಭೀಕರ ದುರಂತ

ಇಸ್ಲಾಮಾಬಾದ್: ಕೇಂದ್ರ ಪಾಕಿಸ್ತಾನದ ಪ್ಯಾಸೆಂಜರ್ ರೈಲುಗಾಡಿಯೊಂದಕ್ಕೆ 2019 ಅಕ್ಟೋಬರ್  31ರ ಗುರುವಾರ ಬೆಂಕಿ ಹತ್ತಿಕೊಂಡ ಪರಿಣಾಮವಾಗಿ ಕನಿಷ್ಠ ೭೩ ಮಂದಿ ಸುಟ್ಟು ಕರಕಲಾಗಿದ್ದು, ಇತರ ೪೦ಕ್ಕೂ ಹೆಚ್ಚು ಮಂದಿ ಸುಟ್ಟ ಗಾಯಗಳಿಗೆ ಒಳಗಾಗಿದ್ದಾರೆ ಎಂದು ಪ್ರಾಂತೀಯ ಸಚಿವರು ತಿಳಿಸಿದರು.

ಬೋಗಿಗಳಲ್ಲಿ ಧಗಧಗಿಸುತ್ತಿದ್ದ ಬೆಂಕಿಯ ಕೆನ್ನಾಲಗೆ ಹಾಗೂ ರೈಲುಬೋಗಿಗಳ ಒಳಗಿನಿಂದ ಪ್ರಯಾಣಕರ ಹಾಹಾಕಾರ, ಕಿರಿಚಾಟ ಕೇಳುತ್ತಿದ್ದ ಭೀಕರ ದೃಶ್ಯಗಳನ್ನು ಟೆಲಿವಿಷನ್‌ಗಳು ಪ್ರಸಾರ ಮಾಡಿದವು. ಪಂಜಾಬ್ ಪ್ರಾಂತದ ರಹೀಮ್ ಯಾರ್ ಖಾನ್ ಜಿಲ್ಲೆಯ ಸಮೀಪ ಈ ದುರಂತ ಸಂಭವಿಸಿತು.

’ನಮಗೆ ಬಂದಿರುವ ವರದಿಗಳ ಪ್ರಕಾರ ೬೫ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ೪೦ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ’ ಎಂದು ಪ್ರಾಂತೀಯ ಆರೋಗ್ಯ ಸಚಿವೆ ಡಾ. ಯಾಸ್ಮೀನ್ ರಶೀದ್ ಹೇಳಿದರು.

ಗಾಯಾಳುಗಳನ್ನು ಸಮೀಪದ ಬಹವಾಲ್ಪುರ ಮತ್ತು ಆಸುಪಾಸಿನ ಆಸ್ಪತ್ರೆಗಳಿಗೆ ಒಯ್ಯಲಾಗಿದೆ ಎಂದು ಆಕೆ ನುಡಿದರು. ಕೇವಲ ೧೮ ಶವಗಳು ಗುರುತಿಸುವ ಸ್ಥಿತಿಯಲ್ಲಿದ್ದು, ಉಳಿದ ಶವಗಳು ಗುರುತಿಸಲೂ ಸಾಧ್ಯವಾಗದಷ್ಟು ಕರಟಿಹೋಗಿವೆ ಎಂದು ಅವರು ಹೇಳಿದರು.

’ಭಯಾನಕ.. ಪ್ರಯಾಣಿಕರು ಒಯ್ದಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಿಸಿದ್ದರಿಂದ ಸಂಭವಿಸಿದ ಈ ದುರಂತ ಭಯಾನಕ’ ಎಂದು ಮಾನವ ಹಕ್ಕುಗಳ ಸಚಿವೆ ಶಿರೀನ್ ಮಝಾರಿ ಟ್ವೀಟ್ ಮಾಡಿದರು.

ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಾಗ ಕೆಲವು ಪ್ರಯಾಣಿಕರು ಬೆಳಗಿನ ಉಪಾಹಾರ ಸಿದ್ಧ ಪಡಿಸುವುದರಲ್ಲಿ ತಲ್ಲೀನರಾಗಿದ್ದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದವು.

ದುರಂತಕ್ಕೆ ಈಡಾಗಿರುವ ರೈಲು ಪಾಕಿಸ್ತಾನದ ಅತ್ಯಂತ ಹಳೆಯ ಹಾಗೂ ಜನಪ್ರಿಯ ಸೇವೆ ಒದಗಿಸುತ್ತಿದ್ದ ’ತೇಝಗಮ್’. ಇದು ಇಸ್ಲಾಮಾಬಾದ್ ಸಮೀಪದ ರಾವಲ್ಪಿಂಡಿ ಮತ್ತು ದಕ್ಷಿಣದ ಬಂದರು ನಗರ ಕರಾಚಿ ಮಧ್ಯೆ ಸಂಚರಿಸುತ್ತದೆ.

ರೈಲುಗಾಡಿಯಿಂದ ಬೇರ್ಪಡಿಸಲಾದ ಮೂರು ಬೋಗಿಗಳು ಧಗಧಗನೆ ಉರಿಯುತ್ತಿದ್ದುದನ್ನು ನೂರಾರು ಮಂದಿ ಗುಂಪುಗೂಡಿ ವೀಕ್ಷಿಸುತ್ತಿದ್ದ ದೃಶಗಳನ್ನೂ ಟಿವಿಗಳು ಪ್ರಸಾರ ಮಾಡಿದವು.

ಪಾಕಿಸ್ತಾನದಲ್ಲಿ ದಶಕಗಳ ಕಾಲದ ಭ್ರಷ್ಟಾಚಾರ, ಅಸಮರ್ಪಕ ನಿರ್ವಹಣೆ ಮತ್ತು ಹೂಡಿಕೆ ಕೊರತೆಯ ಪರಿಣಾಮವಾಗಿ ರೈಲು ಅಪಘಾತಗಳು ಸಂಭವಿಸುವುದು ಮಾಮೂಲಾಗಿದೆ.

ಜುಲೈ ತಿಂಗಳಲ್ಲಿ ಇದೇ ಜಿಲ್ಲೆಯಲ್ಲಿ ಪೂರ್ವದ ಲಾಹೋರ್ ನಗರದಿಂದ ಬರುತ್ತಿದ್ದ ಪ್ಯಾಸೆಂಜರ್ ರೈಲುಗಾಡಿಯು ಕ್ರಾಸಿಂಗ್ ಸಲುವಾಗಿ ನಿಂತಿದ್ದ ಗೂಡ್ಸ್ ಗಾಡಿಗೆ ಅಪ್ಪಳಿಸಿದ ಪರಿಣಾಮವಾಗಿ ೨೩ ಪ್ರಯಾಣಿಕರು ಸಾವನ್ನಪ್ಪಿದ್ದರು.

ಕಾವಲುರಹಿತ ಕ್ರಾಸಿಂಗ್ ಗಳಲ್ಲಂತೂ ದುರಂತಗಳು ಅತೀ ಸಾಮಾನ್ಯವಾಗಿವೆ.

ಕಳೆದ ವರ್ಷ ಇಸ್ಲಾಮಿಕ್ ಕಲ್ಯಾಣ ರಾಷ್ಟ್ರ ನಿರ್ಮಾಣದ ಭರವಸೆ ಮೇರೆಗೆ ಚುನಾಯಿತರಾದ ಪ್ರಧಾನಿ ಇಮ್ರಾನ್ ಖಾನ್ ಅವರು ಆರ್ಥಿಕ ಹಿಂಜರಿಕೆ ಪರಿಣಾಮವಾಗಿ ಮಿತವ್ಯಯಕ್ಕೆ ಮೊರೆಹೊಕ್ಕಿದ್ದು ಮೂಲಸವಲತ್ತು ಮತ್ತು ಸಾಮಾಜಿಕ ಕಾರ್‍ಯಕ್ರಮಗಳಲ್ಲಿ ಹೂಡಿಕೆ ಯತ್ನಗಳಿಗೆ ಅಡ್ಡಿಯಾಗಿದೆ.

ಗ್ರಾಮೀಣ ಪಂಜಾಬ್ ಕಳೆದ ಹಲವಾರು ವರ್ಷಗಳಿಂದ ಭೀಕರ ಅಪಘಾತಗಳಿಗೆ ಸಾಕ್ಷಿಯಾಗಿದೆ. ಇವುಗಳಲ್ಲಿ ೨೦೧೭ರಲ್ಲಿ ಸಂಭವಿಸಿದ ತೈಲ ಟ್ಯಾಂಕರ್ ಸ್ಫೋಟವೂ ಸೇರಿದೆ. ಈ ದುರಂತದಲ್ಲಿ ೨೦೦ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಕರಾಚಿಯಿಂದ ಲಾಹೋರಿಗೆ ಸುಮಾರು ೫೦,೦೦೦ ಲೀಟರ್ ಇಂಧನವನ್ನು ಒಯ್ಯುತ್ತಿದ್ದ ಟ್ಯಾಂಕರ್ ಕೇಂದ್ರ ಪಂಜಾಬ್ ಪ್ರಾಂತದ ಮುಖ್ಯ ಹೆದ್ದಾರಿಯಲ್ಲಿ ಸ್ಫೋಟಗೊಂಡ ಪರಿಣಾಮವಾಗಿ ಈ ದುರಂತ ಸಂಭವಿಸಿತ್ತು.

ಚಾಲಕ ಮತ್ತು ಪೊಲೀಸರ ಎಚ್ಚರಿಕೆಯ ಹೊರತಾಗಿಯೂ ಟಾಂಕರಿನಿಂದ ಸೋರಿಕೆಯಾಗುತ್ತಿದ್ದ ತೈಲವನ್ನು ಸಂಗ್ರಹಿಸಲು ಸಮೀಪದ ಹಳ್ಳಿಯೊಂದರ ಜನರು ಗುಂಪುಗೂಡಿದ್ದಾಗ ಟ್ಯಾಂಕರ್ ಸ್ಫೋಟಿಸಿ ಬೆಂಕಿಯ ಜ್ವಾಲೆಗಳ ಮಧ್ಯೆ ಅವರು ಸಿಕ್ಕಿಹಾಕಿಕೊಂಡಿದ್ದರು.

October 31, 2019 Posted by | Accidents, ಪಾಕಿಸ್ತಾನ, ವಿಶ್ವ/ ಜಗತ್ತು, Flash News, General Knowledge, News, Pakistan, Spardha, World | | Leave a comment

ಅ.29ರ ಮಂಗಳವಾರ ಜಮ್ಮು- ಕಾಶ್ಮೀರಕ್ಕೆ ಐರೋಪ್ಯ ಸಂಸದರ ತಂಡದ ಭೇಟಿ

28 modi-euಸರ್ಕಾರದ ಆದ್ಯತೆಗಳ ಸ್ಪಷ್ಟ ಚಿತ್ರಣ ಸಿಗಲಿದೆ: ಪ್ರಧಾನಿ ಮೋದಿ

ನವದೆಹಲಿ: ಐರೋಪ್ಯ ಸಂಸತ್ತಿನ ಸಂಸತ್ ಸದಸ್ಯರ ತಂಡವೊಂದಕ್ಕೆ  2019 ಅಕ್ಟೋಬರ್ 29ರ ಮಂಗಳವಾರ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲು ಕೇಂದ್ರ ಸರ್ಕಾರವು ಅನುಮತಿ ನೀಡಿದ್ದು, 2019 ಅಕ್ಟೋಬರ್ 28ರ ಸೋಮವಾರ ತಂಡದ ಸದಸ್ಯರ ಜೊತೆ ಸಂವಹನ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು ’ಈ ಭೇಟಿಯು ಸರ್ಕಾರದ ಆದ್ಯತೆಗಳ ಸ್ಪಷ್ಟ ಚಿತ್ರಣವನ್ನು ತಂಡಕ್ಕೆ ನೀಡಲಿದೆ’ ಎಂದು ಹೇಳಿದರು.

‘ಭಯೋತ್ಪಾದನೆಗೆ ಬೆಂಬಲ ನೀಡುವವರು ಅಥವಾ ಭಯೋತ್ಪಾದನೆಯನ್ನು ರಾಷ್ಟ್ರೀಯ ನೀತಿಯನ್ನಾಗಿ ಮಾಡಿಕೊಂಡಿರುವವರ ವಿರುದ್ಧ ತುರ್ತು ಕ್ರಮ ಕೈಗೊಳ್ಳುವಂತೆ’ ಪ್ರಧಾನಿ ಈ ಸಂದರ್ಭದಲ್ಲಿ ಕರೆ ನೀಡಿದರು.

‘ಭಯೋತ್ಪಾದನೆ ಬಗ್ಗೆ ಶೂನ್ಯ ಸಹನೆ ಇರಬೇಕು’ ಎಂದು ಪ್ರಧಾನಿ ಭಾರತಕ್ಕೆ ಪ್ರವಾಸ ಬಂದಿರುವ ಐರೋಪ್ಯ ಒಕ್ಕೂಟದ ಶಾಸನಕರ್ತರ ಜೊತೆ ಮಾತನಾಡುತ್ತಾ ಹೇಳಿದರು.

ದೇಶದ ವಿವಿಧ ಭಾಗಗಳಿಗೆ ಭೇಟಿ ನೀಡಲಿರುವ ಐರೋಪ್ಯ ಸಂಸತ್ತಿನ ಸದಸ್ಯರ ತಂಡವು ಜಮ್ಮು ಮತ್ತು ಕಾಶ್ಮೀರಕ್ಕೆ ಮಂಗಳವಾರ ಭೇಟಿ ನೀಡಲಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ  ವಿಶೇಷ ಸ್ಥಾನಮಾನವನ್ನು ಒದಗಿಸಿದ್ದ ಸಂವಿಧಾದ ೩೭೦ನೇ ವಿಧಿಯನ್ನು ರದ್ದು ಪಡಿಸಿ, ರಾಜ್ಯವನ್ನು ಜಮ್ಮು-ಕಾಶ್ಮೀರ ಹಾಗೂ ಲಡಾಖ್ ಎಂಬುದಾಗಿ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲು ಕೇಂದ್ರ ಸರ್ಕಾರವು ನಿರ್ಧರಿಸಿದ ಬಳಿಕ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡುತ್ತಿರುವ ಮೊತ್ತ ಮೊದಲ ಶಾಸನಕರ್ತರ ತಂಡ ಇದಾಗಿದೆ.

‘ಈ ಭೇಟಿಯು ನಿಮಗೆ ರಾಜ್ಯದ ಜಮ್ಮು, ಕಾಶ್ಮೀರ ಮತ್ತು ಲಡಾಖ್ ಈ ಮೂರು ಪ್ರದೇಶಗಳ ಸಾಂಸ್ಕೃತಿಕ ಮತ್ತು ಧಾರ್ಮಿಕ ವೈವಿಧ್ಯವನ್ನು ಚೆನ್ನಾಗಿ ಅರ್ಥ ಮಾಡಿಸಲಿದೆ ಮತ್ತು ಈ ಪ್ರದೇಶದಲ್ಲಿನ ಅಭಿವೃದ್ಧಿ ಮತ್ತು ಆಡಳಿತದ ಆದ್ಯತೆಗಳ ಬಗ್ಗೆ ಸ್ಪಷ್ಟ ಚಿತ್ರವನ್ನು ನೀಡಲಿದೆ’ ಎಂದು ಪ್ರಧಾನಿ ಮೋದಿ ತಂಡಕ್ಕೆ ತಿಳಿಸಿದರು.

ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿಂತೆ ಸರ್ಕಾರ ಇತ್ತೀಚೆಗೆ ಕೈಗೊಂಡ ಕ್ರಮದ ಸಂದರ್ಭವನ್ನು ಕೂಡಾ ಪ್ರಧಾನಿ ಮೋದಿ ಐರೋಪ್ಯ ಸಂಸದರ ತಂಡಕ್ಕೆ ತಿಳಿಸಿದರು ಎಂದು ಹೇಳಲಾಗಿದೆ.  ಐರೋಪ್ಯ ಒಕ್ಕೂಟದ ಶಾಸನಕರ್ತರ ತಂಡವು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ಭೇಟಿ ಮಾಡಿದ್ದು, ಈ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಸೂಚ್ಯವಾಗಿ ಹೇಳಿದ ವಿಚಾರವನ್ನು ದೋವಲ್ ಅವರು ವಿಷದವಾಗಿ ತಿಳಿಸಿದರು ಎಂದು ಸುದ್ದಿ ಮೂಲಗಳು ತಿಳಿಸಿದವು.

ಐರೋಪ್ಯ ಸಂಸತ್ತಿನಲ್ಲಿ ಈಸ್ಟ್ ಮಿಡ್‌ಲ್ಯಾಂಡನ್ನು  ಪ್ರತಿನಿಧಿಸುವ ಬಿಲ್ ನ್ಯೂಟನ್ ಡನ್ ಅವರು ’ತಂಡವು ಮಂಗಳವಾರ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲಿದೆ’ ಎಂದು ಸುದ್ದಿ ಸಂಸ್ಥೆಗೆ ತಿಳಿಸಿದರು.

‘ಪ್ರಧಾನಿಯವರು ನಮಗೆ ಅಲ್ಲಿನ ವಿಷಯದ ಬಗ್ಗೆ (೩೭೦ನೇ ವಿಧಿ ರದ್ದು) ವಿವರಿಸಿದರು. ಆದರೆ ಆ ನೆಲ ನಿಜವಾಗಿ  ಹೇಗಿದೆ ಎಂಬುದಾಗಿ ನೋಡಲು ಮತ್ತು ಕೆಲವು ಜನರ ಜೊತೆಗೆ ಮಾತನಾಡಲು ನಾನು ಬಯಸಿದ್ದೇನೆ. ನಾವೆಲ್ಲರೂ ಬಯಸಿರುವುದು ಸಹಜ ಸ್ಥಿತಿ ಮತ್ತು ಪ್ರತಿಯೊಬ್ಬರಿಗೂ ಶಾಂತಿ’ ಎಂದು ಅವರು ನುಡಿದರು.

ತಂಡವು ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಿರುವ ಭೇಟಿಯನ್ನು ಉಲ್ಲೇಖಿಸಿರುವ ಪ್ರಧಾನ ಮಂತ್ರಿಯವರ ಕಚೇರಿಯ ಹೇಳಿಕೆಯು, ತಮ್ಮ ಅವಧಿಯ ಆರಂಭದಲ್ಲೇ ಭಾರತಕ್ಕೆ ಭೇಟಿ ನೀಡುವ ಮೂಲಕ ಭಾರತದ ಜೊತೆಗಿನ ಬಾಂಧವ್ಯಕ್ಕೆ ಸಂಬಂಧಿಸಿದಂತೆ ಮಹತ್ವ ನೀಡಿರುವ ತಂಡದ ಕ್ರಮವನ್ನು ಶ್ಲಾಘಿಸಿದೆ.

‘ಐರೋಪ್ಯ ಒಕ್ಕೂಟದ ಜೊತೆಗಿನ ಭಾರತದ ಬಾಂಧವ್ಯವು ಪ್ರಜಾತಾಂತ್ರಿಕ ಮೌಲ್ಯಗಳ ಬಗೆಗೆ ಹಂಚಿಕೊಳ್ಳಲಾಗಿರುವ ಹಿತಾಸಕ್ತಿಗಳು ಮತ್ತು ಸಮಾನ ಬದ್ಧತೆಯನ್ನು  ಆಧರಿಸಿರುವಂತಹುದು’ ಎಂದು ಪ್ರಧಾನಿ ಮೋದಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ ವಾಸ್ತವ ಸ್ಥಿತಿ ಅರಿಯಲು ಅಲ್ಲಿಗೆ ಭೇಟಿ ನೀಡಲಿರುವ ೨೮ ಮಂದಿ ಸದಸ್ಯರನ್ನು ಒಳಗೊಂಡ ಯೂರೋಪ್ ಒಕ್ಕೂಟದ ತಂಡ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ಭೇಟಿ ಮಾಡಿ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನ ಮಾನ ರದ್ದಾದ ನಂತರ ಉದ್ಭವಿಸಿರುವ ಬೆಳವಣಿಗೆಗಳ ಕುರಿತು ಚರ್ಚಿಸಿದೆ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿದವು.

ಇತ್ತೀಚೆಗೆ ಅಮೆರಿಕದ ವಾಷಿಂಗ್ಟನ್‌ನಲ್ಲಿ ನಡೆದ ಜನಪ್ರತಿನಿಧಿಗಳ ಸಭೆಯಲ್ಲಿ ತಜ್ಞರ ಒಂದು ಗುಂಪು ಜಮ್ಮು-ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನ ರದ್ದಾದ ನಂತರ ಉದ್ಭವಿಸಿರುವ ಸಮಸ್ಯೆಗಳ ಕುರಿತು ಕಾಳಜಿ ವ್ಯಕ್ತಪಡಿಸಿತ್ತು. ಈ ಬೆಳವಣಿಗೆ ನಂತರ ಯೂರೋಪಿಯನ್ ರಾಷ್ಟ್ರಗಳ ಈ ತಂಡ ಭೇಟಿ ನೀಡಿರುವುದು ಮಹತ್ವ ಪಡೆದುಕೊಂಡಿದೆ.

ಈ ಸಂಬಂಧ ಅಮೆರಿಕಾದ ರಾಜ್ಯ ಸಹಾಯಕ ಕಾರ್ಯದರ್ಶಿ ಅಲೈಸ್ ವೆಲ್ಸ್ ಮಾತನಾಡಿ, ಜಮ್ಮು-ಕಾಶ್ಮೀರದಲ್ಲಿ ಮಾನವ ಹಕ್ಕುಗಳಿಗೆ ರಕ್ಷಣೆ ಹಾಗೂ ಗೌರವ ನೀಡಬೇಕು, ಇಂಟರ್ ನೆಟ್ ಮತ್ತು ಮೊಬೈಲ್ ನೆಟ್ ವರ್ಕ್ ಕಾರ್ಯನಿರ್ವಹಿಸಲು ಅವಕಾಶ ನೀಡಬೇಕೆಂದು ಭಾರತ ಸರ್ಕಾರವನ್ನು ಒತ್ತಾಯಿಸಿ ಎಂದು ಹೇಳಿದ್ದರು.

ಅಲ್ಲದೆ, ಜಮ್ಮು ಕಾಶ್ಮೀರದಲ್ಲಿ ವಿಶೇಷ ಸ್ಥಾನ ಮಾನ ರದ್ದಾದ ಸಂದರ್ಭದಿಂದ ಮೂವರು ಮಾಜಿ ಮುಖ್ಯಮಂತ್ರಿಗಳನ್ನು ಗೃಹ ಬಂಧನದಲ್ಲಿ ಇರಿಸಿದ್ದು, ರಾಜಕೀಯ ಮುಖಂಡರು ಹಾಗೂ ಸ್ಥಳೀಯ ನಿವಾಸಿಗಳನ್ನು ವಶಕ್ಕೆ ತೆಗೆದುಕೊಂಡಿರುವುದರ ಕುರಿತು ಕಾಳಜಿ ವ್ಯಕ್ತಪಡಿಸುವುದು ನಮ್ಮ ಕರ್ತವ್ಯ ಎಂದೂ ಅವರು ಹೇಳಿದ್ದರು.

ಸುಬ್ರಮಣಿಯನ್ ಸ್ವಾಮಿ ವಿರೋಧ: ಈ ಮಧ್ಯೆ, ಜಮ್ಮು ಮತ್ತು ಕಾಶ್ಮೀರಕ್ಕೆ ಐರೋಪ್ಯ ಸಂಸದರ ತಂಡದ ಭೇಟಿಯನ್ನು ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರು ಸೋಮವಾರ ’ಇದು ಅನೈತಿಕ’ ಎಂಬುದಾಗಿ ಖಂಡಿಸಿ, ತತ್ ಕ್ಷಣ ಅದನ್ನು ರದ್ದು ಪಡಿಸುವಂತೆ ಆಗ್ರಹಿಸಿದರು.

‘ಈ ಕ್ರಮವು ರಾಷ್ಟ್ರದ ನೀತಿಯ ವಿಕೃತಿಯಾಗಿದೆ. ಐರೋಪ್ಯ ಒಕ್ಕೂಟದ ಸಂಸದರಿಗೆ ಖಾಸಗಿಯಾಗಿ (ಐರೋಪ್ಯ ಒಕ್ಕೂಟದ ಅಧಿಕೃತ ನಿಯೋಗವಲ್ಲ) ಭೇಟಿಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ವ್ಯವಸ್ಥೆ ಮಾಡಿದ್ದು ನನಗೆ ಅಚ್ಚರಿ ಉಂಟು ಮಾಡಿದೆ. ಇದು ರಾಷ್ಟ್ರೀಯ ನೀತಿಯ ವಿಕೃತಿ. ಇದು ಅನೈತಿಕವಾದ್ದರಿಂದ ಸರ್ಕಾರ ತತ್ ಕ್ಷಣ ಇದನ್ನು ರದ್ದು ಪಡಿಸಬೇಕು’ ಎಂದು ಸ್ವಾಮಿ ಟ್ವೀಟ್ ಮಾಡಿದರು.

October 28, 2019 Posted by | ನರೇಂದ್ರ ಮೋದಿ, ಪಾಕಿಸ್ತಾನ, ಪ್ರಧಾನಿ, ಭಯೋತ್ಪಾದಕ, ಭಾರತ, ರಾಷ್ಟ್ರೀಯ, ವಿಶ್ವ/ ಜಗತ್ತು, Flash News, General Knowledge, India, Nation, News, Pakistan, Prime Minister, Spardha, Terror, World | | Leave a comment

ಕಾಶ್ಮೀರ: ಮುಂದುವರೆದ ಉಗ್ರರ ಅಟ್ಟಹಾಸ,  ದಾಳಿಗೆ ಮತ್ತೊಬ್ಬ ಟ್ರಕ್​ ಚಾಲಕ ಬಲಿ

28 kashmir truck driver killed
ಜಮ್ಮು:
 ಕಣಿವೆ ರಾಜ್ಯದಲ್ಲಿ ಉಗ್ರಗಾಮಿಗಳ ಉಪಟಳ ಹೆಚ್ಚಾಗಿದ್ದು, ಭಯೋತ್ಪಾದಕರ ದಾಳಿಗೆ ಮತ್ತೊಬ್ಬ ಲಾರಿ ಚಾಲಕ 2019 ಅಕ್ಟೋಬರ್ 28ರ ಸೋಮವಾರ ಬಲಿಯಾದ. ದಕ್ಷಿಣ ಕಾಶ್ಮೀರದ ಅನಂತ್​ನಾಗ್​ ಜಿಲ್ಲೆಯ ಬಿಜ್​ಬೆಹರಾದಲ್ಲಿ ಉಗ್ರರು ಚಾಲಕನನ್ನು ಗುಂಡು ಹಾರಿಸಿ ಹತ್ಯೆ ಮಾಡಿದರು.

ಚಾಲಕನನ್ನು ಉಧಮ್​ಪುರ ಜಿಲ್ಲೆಯ ಕಾತ್ರಾ ಪ್ರದೇಶದ ನಾರಾಯಣ್ ದತ್ ಎಂದು ಗುರುತಿಸಲಾಯಿತು. ಈದಿನ ಸಂಜೆ ಈ ಘಟನೆ ಘಟಿಸಿದ್ದು, ಟ್ರಕ್ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಎಂದು ವರದಿಗಳು ತಿಳಿಸಿದವು.

ವಿಷಯ ತಿಳಿದ ಕೂಡಲೇ ಸ್ಥಳೀಯ ಪೊಲೀಸ್​ ಅಧಿಕಾರಿ ಸ್ಥಳಕ್ಕೆ ಧಾವಿಸಿದರು. ಸುತ್ತಮುತ್ತಲ ಪ್ರದೇಶದಲ್ಲಿ ಇದ್ದ ಇನ್ನಿಬ್ಬರು ಟ್ರಕ್​ ಚಾಲಕರನ್ನು ಪೊಲೀಸರು ರಕ್ಷಿಸಿದರು. ಬಳಿಕ ದಾಳಿಕೋರರನ್ನು ಸೆದೆ ಬಡೆಯಲು ಆ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಿದರು.

ಈ ದಾಳಿ ಸೇರಿ ದಕ್ಷಿಣ ಕಾಶ್ಮೀರದಲ್ಲಿ ಕಳೆದ 2 ವಾರಗಳಿಂದೀಚೆಗೆ ನಡೆದ ಉಗ್ರರ ದಾಳಿಗೆ 6 ಮಂದಿ ಟ್ರಕ್ ಚಾಲಕರು ಬಲಿಯಾಗಿದ್ದಾರೆ. ಬಲಿಯಾದವರೆಲ್ಲರೂ ಕಾಶ್ಮೀರೇತರರು ಎಂದು ತಿಳಿದು ಬಂದಿದೆ.

ದಕ್ಷಿಣ ಕಾಶ್ಮೀರದಲ್ಲಿ ಕಳೆದೆರಡು ವಾರಗಳಿಂದ ಕಾಶ್ಮೀರೇತರರನ್ನೇ ಗುರಿಯಾಗಿಸಿಕೊಂಡು ಉಗ್ರರು ದಾಳಿ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಹಿಂದಿನ ದಿನ ಹೊರ ರಾಜ್ಯಗಳ ಟ್ರಕ್ ಚಾಲಕರನ್ನು ಶೋಫಿಯಾನ್ ನಗರದಿಂದ ಹೊರ ಕಳಿಸಲು ಮುಂದಾಗಿದ್ದರು. ಮರುದಿನವೇ ಮತ್ತೊಂದು ದಾಳಿ ನಡೆಯಿತು.

ಕಾಶ್ಮೀರದ ಸೊಪೋರ್‌ನಲ್ಲಿ ಗ್ರೆನೇಡ್ ದಾಳಿ: ೧೯ ಜನರಿಗೆ ಗಾಯ

ಈ ಮಧ್ಯೆ,  ಜಮ್ಮು-ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೊಪೋರ್ ಪಟ್ಟಣದ ಬಸ್ಸು ನಿಲ್ದಾಣದಲ್ಲಿ ಉಗ್ರಗಾಮಿಗಳು ಗ್ರೆನೇಡ್ ಎಸೆದ ಪರಿಣಾಮವಾಗಿ 2019 ಅಕ್ಟೋಬರ್ 28ರ ಸೋಮವಾರ ೧೯ ಮಂದಿ ಗಾಯಗೊಂಡರು ಎಂದು ಪೊಲೀಸರು ತಿಳಿಸಿದರು.

ಹೊಟೇಲ್ ಪ್ಲಾಜಾ ಸಮೀಪ ಸಂಜೆ ೪.೧೫ರ ವೇಳೆಗೆ ಸಂಭವಿಸಿದ ಗ್ರೆನೇಡ್ ದಾಳಿಯ ಗಾಯಾಳುಗಳ ಪೈಕಿ ಮೂವರಿಗೆ ಗಂಭೀರ ಗಾಯಗಳಾದವು. ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಮೇಲೆ ಎರಡು ದಿನಗಳ ಹಿಂದೆ 2019 ಅಕ್ಟೋಬರ್ 26ರ ಶನಿವಾರ ಸಂಜೆ ಶ್ರೀನಗರದಲ್ಲಿ ನಡೆದ ಇಂತಹುದೇ ದಾಳಿಯಲ್ಲಿ ೬ ಮಂದಿ ಸಿಆರ್‌ಪಿಎಫ್ ಯೋಧರು ಗಾಯಗೊಂಡಿದ್ದರು.

ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ೧೭೯ನೇ ಬೆಟಾಲಿಯನ್ ಪಡೆಗಳು ತತ್ ಕ್ಷಣವೇ ಸ್ಥಳಕ್ಕೆ ಧಾವಿಸಿ ಘಟನಾ ಸ್ಥಳವನ್ನು ಸುತ್ತುವರಿದವು ಎಂದು ಪೊಲೀಸರು ಹೇಳಿದರು.

ಆಗಸ್ಟ್ ೫ರಂದು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಪಡಿಸಿ, ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲು ಕೇಂದ್ರವು ನಿರ್ಧರಿಸಿದಂದಿನಿಂದ ಇಲ್ಲಿಯವರೆಗೆ ನಡೆದಿರುವ ಐದನೇ ದಾಳಿ ಇದು.  ರಾಜ್ಯವು ಅಕ್ಟೋಬರ್ ೩೧ರಂದು ಅಧಿಕೃತವಾಗಿ ವಿಭಜನಗೊಳ್ಳಲಿದೆ.

October 28, 2019 Posted by | ಪಾಕಿಸ್ತಾನ, ಭಯೋತ್ಪಾದಕ, ಭಾರತ, ರಾಷ್ಟ್ರೀಯ, Flash News, General Knowledge, India, Nation, News, Pakistan, Spardha, Terror, World | | Leave a comment

ಶ್ರೀನಗರ:  ಕೇಂದ್ರೀಯ ಮೀಸಲು ಭದ್ರತಾ ಪಡೆಯ ಮೇಲೆ ಗ್ರೆನೇಡ್,  6 ಸೈನಿಕರಿಗೆ ಗಾಯ

26 kashmir grenade attack
ನವದೆಹಲಿ
: ಜಮ್ಮು-ಕಾಶ್ಮೀರದ ಶ್ರೀನಗರದ ಕರಣ್ ನಗರದಲ್ಲಿ 2019 ಅಕ್ಟೋಬರ್ 26ರ  ಶನಿವಾರ ಸಂಜೆ ಉಗ್ರರು ಕೇಂದ್ರೀಯಮೀಸಲು ಪಡೆಯ (ಸಿಆರ್​ಪಿಎಫ್​) ಮೇಲೆ ಗ್ರೆನೇಡ್ ಮತ್ತು ಗುಂಡಿನ ದಾಳಿ ನಡೆಸಿದ ಪರಿಣಾಮ ಆರು ಸೈನಿಕರು ಗಾಯಗೊಂಡರು ಎಂದು ಪೊಲೀಸರು ತಿಳಿಸಿದರು.

ಸಿಆರ್​ಪಿಎಫ್​ನ 144ನೇ ಬೆಟಾಲಿಯನ್ ಮೇಲೆ ಉಗ್ರರು ದಾಳಿ ನಡೆಸಿದ್ದು, ಆರು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಸಂಜೆ 6.50ರ ಸಮಯದಲ್ಲಿ ಚೆಕ್​ಪಾಯಿಂಟ್​ ಬಳಿ ಸಿಆರ್​ಪಿಎಫ್​ ತಂಡದ ಮೇಲೆ ಈ ದಾಳಿ ನಡೆಯಿತು. ಗ್ರೆನೇಡ್ ಸ್ಫೋಟದಿಂದ ಸುತ್ತಮುತ್ತಲ ನಗರದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಉಗ್ರರ ದಾಳಿಗೆ ಭದ್ರತಾ ಪಡೆಯ ಸೈನಿಕರು ಪ್ರತಿದಾಳಿ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.

October 26, 2019 Posted by | ಪಾಕಿಸ್ತಾನ, ಭಯೋತ್ಪಾದಕ, ಭಾರತ, ರಾಷ್ಟ್ರೀಯ, Flash News, General Knowledge, Nation, News, Pakistan, Spardha | , | Leave a comment

ಬಿಜೆಪಿಗೆ ‘ಮಹಾ’  ಆಘಾತ: ಸಿಗಲಿಲ್ಲ ನಿರೀಕ್ಷಿತ ‘ಪ್ರಚಂಡ’ ಬಹುಮತ

24 modi amith shah
ಮಹಾರಾಷ್ಟ್ರದಲ್ಲಿ ಸರಳ ಬಹುಮತ, ಅತಂತ್ರ ಹರಿಯಾಣದಲ್ಲಿ ಸರ್ಕಾರ ರಚನೆಗೆ ತಂತ್ರ

ನವದೆಹಲಿ: ಭಾರತೀಯ ಜನತಾ ಪಕ್ಷ ನೇತೃತ್ವದ ಎನ್‌ಡಿಎ-೨ ಸರ್ಕಾರವು ಕೇಂದ್ರದಲ್ಲಿ ಅಧಿಕಾರಕ್ಕೆ ಏರಿದ ಬಳಿಕ ಮಹಾರಾಷ್ಟ್ರ ಮತ್ತು ಹರಿಯಾಣ ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಉದಯಿಸಿ, ಸರ್ಕಾರ ರಚನೆಯ ಘೋಷಣೆ ಮಾಡಿದ್ದರೂ, ನಿರೀಕ್ಷೆಗಳಿಗೆ ವಿರುದ್ಧವಾಗಿ ಸ್ಥಾನಗಳ ನಷ್ಟದ ಭಾರೀ ಆಘಾತವನ್ನು 2019 ಅಕ್ಟೋಬರ್ 24ರ ಗುರುವಾರ ಅನುಭವಿಸಿತು.

ಮಹಾರಾಷ್ಟ್ರದಲ್ಲಿ ೨೮೮ ಸ್ಥಾನಗಳ ಪೈಕಿ ಬಿಜೆಪಿ ಮತ್ತು ಶಿವಸೇನಾ ಮೈತ್ರಿಕೂಟ ೧೬೨ ಸ್ಥಾನಗಳೊಂದಿಗೆ ಬಹುಮತ ಪಡೆದರೂ, ೨೦೧೪ಕ್ಕೆ ಹೋಲಿಸಿದರೆ ಮೈತ್ರಿಕೂಟ ೨೩ ಸ್ಥಾನಗಳ ನಷ್ಟ ಅನುಭವಿಸಿತು. ೯೦ ಸದಸ್ಯಬಲದ ಹರಿಯಾಣದಲ್ಲಿ ಅತಂತ್ರ ವಿಧಾನಸಭೆ ರೂಪುಗೊಂಡಿದ್ದು, ೪೦ ಸ್ಥಾನಗಳೊಂದಿಗೆ ಏಕೈಕ ದೊಡ್ಡ ಪಕ್ಷವಾಗಿ ಉದಯಿಸಿದ ಬಿಜೆಪಿ ೭ ಸ್ಥಾನಗಳ ನಷ್ಟ ಅನುಭವಿಸಿತು.

ಉಭಯ ರಾಜ್ಯಗಳಲ್ಲೂ ವಿರೋಧಿ ಕಾಂಗ್ರೆಸ್ ಚೇತರಿಸಿಕೊಂಡಿತು. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಮತ್ತು ಎನ್‌ಸಿಪಿ ಮೈತ್ರಿಕೂಟ ೧೨ ಸ್ಥಾನಗಳ ಹೆಚ್ಚುವರಿ ಗಳಿಕೆಯೊಂದಿಗೆ 104  ಸ್ಥಾನಗಳನ್ನು ಗೆದ್ದಿವೆ. ಹರಿಯಾಣದಲ್ಲಿ ೧೬ ಹೆಚ್ಚುವರಿ ಸ್ಥಾನಗಳಿಕೆಯೊಂದಿಗೆ ೩೧ ಸ್ಥಾನಗಳನ್ನು ಕಾಂಗ್ರೆಸ್ ಗೆದ್ದಿದೆ. ಮಹಾರಾಷ್ಟ್ರದಲ್ಲಿ ಇತರರು ೩೧ ಸ್ಥಾನಗಳನ್ನು ಗೆದ್ದರೆ, ಹರಿಯಾಣದಲ್ಲಿ ೧೯ ಮಂದಿ ಇತರರು ಗೆದ್ದಿದ್ದು ಈ ಪೈಕಿ ಜನನಾಯಕ ಜನತಾ ಪಕ್ಷದ (ಜೆಜೆಪಿ) ನಾಯಕ ದುಶ್ಯಂತ್ ’ಕಿಂಗ್ ಮೇಕರ್’ ಸ್ಥಾನಕ್ಕೆ ಏರಿದರು.

ಬಿಜೆಪಿ ಮತ್ತು ಕಾಂಗ್ರೆಸ್ ಅಧಿಕಾರಕ್ಕಾಗಿ ಹಣಾಹಣಿಗೆ ಇಳಿದಿದ್ದು, ಬೆಂಬಲಕ್ಕಾಗಿ ದುಶ್ಯಂತ್ ಕಡೆಗೆ ನೋಡುವಂತಾಗಿದೆ. ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ಅವರು ಸರ್ಕಾರ ರಚನೆಗೆ ರಾಜ್ಯಪಾಲ ಸತ್ಯದೇವ್ ನಾರಾಯಣ್ ಆರ್ಯ ಬಳಿ ಹಕ್ಕು ಮಂಡಿಸಿ, ಏಕೈಕ ದೊಡ್ಡ ಪಕ್ಷವಾಗಿರುವ ನೆಲೆಯಲ್ಲಿ ಬಿಜೆಪಿಯನ್ನು ಸರ್ಕಾರ ರಚಿಸಲು ಆಹ್ವಾನಿಸಬೇಕು ಎಂದು ಕೋರಿದರು.

ಚುನಾವಣಾ ಫಲಿತಾಂಶದ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರು ಪಕ್ಷದ ಸಾಧನೆಗಾಗಿ ಮಹಾರಾಷ್ಟ್ರ ಮತ್ತು ಹರಿಯಣದ ಮುಖ್ಯಮಂತ್ರಿಗಳನ್ನು ಅಭಿನಂದಿಸಿ ಪಕ್ಷಕ್ಕೆ ಮತ್ತೊಮ್ಮೆ ಜನರ ಸೇವೆ ಮಾಡಲು ಅವಕಾಶ ಕಲ್ಪಿಸಿಕೊಟ್ಟದ್ದಕ್ಕಾಗಿ ಧನ್ಯವಾದ ಸಲ್ಲಿಸಿದರು.

ಮಹಾರಾಷ್ಟ್ರದಲ್ಲಿ ೨೨೦ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲುವ ಮಹತ್ವಾಕಾಂಕ್ಷೆಯ ಗುರಿ ಇಟ್ಟುಕೊಂಡಿದ್ದ ಬಿಜೆಪಿ-ಶಿವಸೇನಾ ಮೈತ್ರಿಕೂಟ ತನ್ನ ಗುರಿ ತಲುಪುವಲ್ಲಿ ಮುಗ್ಗರಿಸಿತು. ಆದರೆ ಸರ್ಕಾರ ರಚನೆಗೆ ಬೇಕಾದ ಸರಳ ಬಹುಮತವನ್ನು ಪಡೆಯಿತು. ಆದರೆ ಬಿಜೆಪಿಯ ಸ್ಥಾನ ನಷ್ಟದ ಲಾಭ ಪಡೆಯಲು ಹೆಜ್ಜೆ ಮುಂದಿಟ್ಟಿರುವ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ  ಅಧಿಕಾರ ಹಂಚಿಕೆಯಲ್ಲಿ  ೫೦:೫೦ ಸೂತ್ರದ ಪಾಲನೆಯಾಗಬೇಕು’ ಎಂಬ ಸಂದೇಶವನ್ನು ಬಿಜೆಪಿಗೆ ರವಾನಿಸಿದರು. ಸರ್ಕಾರ ರಚನೆಗೆ ತಮಗೆ ಅವಸರವಿಲ್ಲ ಎಂಬುದಾಗಿ ಹೇಳುವ ಮೂಲಕ ಬಿಜೆಪಿಯು ತರಾತುರಿಯಲ್ಲಿ ಸರ್ಕಾರ ರಚಿಸದಂತೆ ತಡೆಯುವ ನಿಟ್ಟಿನಲ್ಲಿ ಅವರು ಕಾಲಿಟ್ಟರು.

ಇತ್ತ ೯೦ ಸ್ಥಾನಗಳಿಗೂ ಸ್ಪರ್ಧಿಸಿದ್ದ ಹರಿಯಾಣದಲ್ಲಿ ಕೇವಲ ೪೦ ಸ್ಥಾನ ಗೆಲ್ಲಲು ಸಮರ್ಥವಾಗಿರುವ ಬಿಜೆಪಿಗೆ ಬಹುಮತದ ಅಂಚಿಗೆ ಬರಲು ಅಸಾಧ್ಯವಾದ್ದರಿಂದ ಸರ್ಕಾರ ರಚನೆ ಅಷ್ಟೊಂದು ಸುಲಭವಲ್ಲ. ೯೦ ಸದಸ್ಯಬಲದ ವಿಧಾನಸಭೆಯಲ್ಲಿ ಬಹುಮತಕ್ಕೆ ೪೬ ಸ್ಥಾನಗಳು ಬೇಕಾಗಿವೆ.

ಹರಿಯಾಣದಲ್ಲಿ ಅತಂತ್ರ ವಿಧಾನಸಭೆ ರಚನೆಯಾಗುತ್ತಿದ್ದಂತೆಯೇ  ಮ್ಯಾಜಿಕ್ ಸಂಖ್ಯೆ ೪೬ ತಲುಪಲು ರಾಜಕೀಯ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆ ಶುರುವಾಯಿತು. ರಾಜ್ಯದಲ್ಲಿ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ವಿರುದ್ಧ ಪ್ರಚಾರ ಸಮರದ ನೇತೃತ್ವ ವಹಿಸಿದ್ದ ಕಾಂಗ್ರೆಸ್ ನಾಯಕ ಭೂಪೀಂದರ್ ಹೂಡಾ ಅವರು ಬಿಜೆಪಿಯು ಅಧಿಕಾರಕ್ಕೆ ಮರಳದಂತೆ ತಡೆಯಲು ಕೈಜೋಡಿಸುವಂತೆ ಇತರ ಪಕ್ಷಗಳು ಮತ್ತು ಪಕ್ಷೇತರರಿಗೆ ಕ್ಷಿಪ್ರ ಮನವಿ ಮಾಡಿದರು.

ಬಿಜೆಪಿಯು ಸರ್ಕಾರ ರಚನೆಯ ಹಕ್ಕು ಮಂಡನೆಯ ಸುಳಿವನ್ನು ನೀಡಿತು. ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷಾಧ್ಯಕ್ಷ ಅಮಿತ್ ಶಾ ಅವರು ತಮ್ಮ ಟ್ವೀಟ್‌ಗಳಲ್ಲಿ ಈ ಇಂಗಿತ ವ್ಯಕ್ತ ಪಡಿಸುವುದರ ಜೊತೆಗೆ ಮನೋಹರಲಾಲ್ ಖಟ್ಟರ್ ಮೊದಲಿಗರಾಗಿ ರಾಜ್ಯಪಾಲರ ಬಳಿ ಸರ್ಕಾರ ರಚನೆಯ ಹಕ್ಕು ಮಂಡಿಸಿದರು.

‘ಹರಿಯಾಣದಲ್ಲಿ ಮನೋಹರಲಾಲ್ ಖಟ್ಟರ್ ಅವರ ಸರ್ಕಾರವು ಜನರ ಕಲ್ಯಾಣಕ್ಕಾಗಿ ಕೇಂದ್ರದಲ್ಲಿನ (ನರೇಂದ್ರ) ಮೋದಿ ನಾಯಕತ್ವದ ಅಡಿಯಲ್ಲಿ ಸರ್ವ ಪ್ರಯತ್ನ ಮಾಡಿದೆ. ಬಿಜೆಪಿಯನ್ನು ಏಕೈಕ ದೊಡ್ಡ ಪಕ್ಷವಾಗಿ ಆಯ್ಕೆ ಮಾಡಿರುವುದಕ್ಕಾಗಿ ಮತ್ತು ಇನ್ನೊಮ್ಮೆ ಅವರ ಸೇವೆ ಸಲ್ಲಿಸಲು ಅವಕಾಶ ನೀಡಿರುವುದಕ್ಕಾಗಿ ನಾನು ಜನತೆಗೆ ಧನ್ಯವಾದ ಸಲ್ಲಿಸುತ್ತೇನೆ’ ಎಂದು ಶಾ ತಮ್ಮ ಟ್ವೀಟಿನಲ್ಲಿ  ತಿಳಿಸಿದರು.

ಕೆಲವೇ ನಿಮಿಷಗಳಲ್ಲಿ ಇದಕ್ಕೆ ಬೆಂಬಲವಾಗಿ ಟ್ವೀಟ್ ಮಾಡಿದ ಪ್ರಧಾನಿ ಮೋದಿ, ’ನಮ್ಮನ್ನು ಆಶೀರ್ವದಿಸಿದ್ದಕ್ಕಾಗಿ ಹರಿಯಾಣದ ಜನತೆಗೆ ಧನ್ಯವಾದ ಅರ್ಪಿಸುವೆ. ಇದೇ ಉತ್ಸಾಹ ಮತ್ತು ಸಮರ್ಪಣಾ ಭಾವದೊಂದಿಗೆ ನಾವು ಕೆಲಸ ಮುಂದುವರೆಸುತ್ತೇವೆ. ನಮ್ಮ ಅಭಿವೃದ್ಧಿ ಕಾರ್‍ಯಸೂಚಿಯನ್ನು ಜನತೆಯ ಬಳಿಗೆ ಒಯ್ಯಲು ವಿಶೇಷವಾಗಿ ಶ್ರಮಿಸಿದ ಹರಿಯಾಣದ ಬಿಜೆಪಿ ಕಾರ್‍ಯಕರ್ತರಿಗೂ ನನ್ನ ವಂದನೆಗಳು ಸಲ್ಲುತ್ತವೆ’ ಎಂದು ಬರೆದರು.

ಮಹಾರಾಷ್ಟ್ರ ಮತ್ತು ಹರಿಯಾಣ ಎರಡೂ ಕಡೆ ಗೆದ್ದಿರುವ ಕೆಲವು ಬಂಡಾಯ ಶಾಸಕರ ಜೊತೆಗೆ ಬಿಜೆಪಿಯ ಸಂಪರ್ಕ ಸಾಧಿಸಿದೆ ಎನ್ನಲಾಯಿತು. ಹರಿಯಾಣದಲ್ಲಿ ಬಂಡಾಯ ಶಾಸಕರು ಮತ್ತು ಸಣ್ಣ ಪಕ್ಷಗಳ ಬೆಂಬಲದೊಂದಿಗೆ ಮುಂದಿನ  ಸರ್ಕಾರ ರಚಿಸಲು  ಬಿಜೆಪಿ ಮುಂದಾಗಲಿದೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಮಾಧ್ಯಮ ಒಂದಕ್ಕೆ ತಿಳಿಸಿದರು.

ಪಕ್ಷದ ತಂತ್ರದ ಬಗ್ಗೆ ಬಿಜೆಪಿ ನಾಯಕ ವಿವರಿಸಲಿಲ್ಲ. ಆದರೆ ಇಂಡಿಯನ್ ನ್ಯಾಷನಲ್ ಲೋಕದಳದ ಅಭಯ್ ಸಿಂಗ್ ಚೌಟಾಲರಂತಹ ಕೆಲವರು ಜನನಾಯಕ ಜನತಾ ಪಕ್ಷದ ಪ್ರತಿಸ್ಪರ್ಧಿ ದುಶ್ಯಂತ ಚೌಟಾಲ ’ಕಿಂಗ್ ಮೇಕರ್’ ಆಗದಂತೆ ತಡೆಯಲು ಬಿಜೆಪಿಯನ್ನು ಬೆಂಬಲಿಸುವ ಸಾಧ್ಯತೆ ಇದೆ ಎಂದು ಹೇಳಿದರು.

ಹರಿಯಾಣ ಸಮೀಕ್ಷೆ ಲೆಕ್ಕಾಚಾರ ತಪ್ಪಾಗಿದ್ದು ಹೇಗೆ?

ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭಾ ಮತಎಣಿಕೆಯ ಅಂತಿಮ ಘಟ್ಟ ತಲುಪುತ್ತಿದ್ದಂತೆಯೇ ಫಲಿತಾಂಶ ಎಲ್ಲರಿಗೂ ಅಚ್ಚರಿ ತಂದಿತು. ೨೦೧೯ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹರಿಯಾಣದ ಹತ್ತೂ ಲೋಕಸಭಾ ಕ್ಷೇತ್ರಗಳಲ್ಲಿ ಜಯಗಳಿಸಿತ್ತು. ಅಲ್ಲದೇ ಇಂಡಿಯಾ ಟುಡೇ, ಆಕ್ಸಿಸ್ ಹೊರತು ಪಡಿಸಿ ಇತರ ಎಲ್ಲಾ ಮತದಾನೋತ್ತರ ಸಮೀಕ್ಷೆಗಳೂ ೯೦ ಸದಸ್ಯಬಲದ ಹರಿಯಾಣದಲ್ಲಿ ಬಿಜೆಪಿ ೭೦ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಭವಿಷ್ಯ ನುಡಿದಿದ್ದವು. ಮಹಾರಾಷ್ಟ್ರದಲ್ಲೂ ಬಿಜೆಪಿ-ಶಿವಸೇನಾ ಮೈತ್ರಿಕೂಟದ ಬಲ ೨೦೦ರ ಗಡಿ ದಾಟಬಹುದು ಎಂದು ಹೇಳಿದ್ದವು.

ಆದರೆ ಇದೀಗ ಹರಿಯಾಣ ಅತಂತ್ರ ವಿಧಾನಸಭೆಯಾದರೆ, ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನಾ ಮೈತ್ರಿಕೂಟದಕ್ಕೆ ಸರಳ ಬಹುಮತವಷ್ಟೇ ಲಭಿಸಿದೆ.

ಬಿಜೆಪಿ ೪೦ ಸ್ಥಾನಗಳಲ್ಲಿ, ಕಾಂಗ್ರೆಸ್ ೩೧ ಹಾಗೂ ಜೆಜೆಪಿ ೧೨ ಸ್ಥಾನಗಳಲ್ಲಿ ಜಯ ಸಾಧಿಸುವತ್ತ ಹೆಜ್ಜೆ ಇಟ್ಟವು. ಶೇ.೪೦ರಷ್ಟು ಮತಎಣಿಕೆ ಮುಕ್ತಾಯಗೊಂಡಾಗ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿಗೆ ಸಾಕ್ಷಿಯಾಗಿತ್ತು.

ಈ ಹಿನ್ನೆಲೆಯಲ್ಲಿ ಎಲ್ಲಾ ಸಮೀಕ್ಷೆಗಳ ಲೆಕ್ಕಚಾರ ತಲೆಕೆಳಗಾಗಿದ್ದು ಹೇಗೆ ಎಂಬ ಪ್ರಶ್ನೆ ಉದ್ಭವಿಸಿತು. ಅದಕ್ಕೆ ಮುಖ್ಯ ಕಾರಣ ಬಹುತೇಕ ಸಮೀಕ್ಷೆಗಳು ೨೦೧೯ರ ಲೋಕಸಭಾ ಚುನಾವಣೆಯ ಫಲಿತಾಂಶವನ್ನೇ ನೂತನ ಮಾನದಂಡವಾಗಿ ಪರಿಗಣಿಸಿದ್ದು ಎಂದು ಇದೀಗ ವಿಶ್ಲೇಷಿಸಲಾಗಿದೆ.

೨೦೧೯ರ ಲೋಕಸಭಾ ಚುನಾವಣೆಯಲ್ಲಿ ಹರಿಯಾಣದಲ್ಲಿ ಬಿಜೆಪಿ ಶೇ.೫೮ರಷ್ಟು ಮತ ಪಡೆದಿತ್ತು. ಇದೀಗ ವಿಧಾನಸಭಾ ಚುನಾವಣೆಯಲ್ಲಿ ಶೇ.೩೬ಕ್ಕೆ ಕುಸಿತ ಕಂಡಿದೆ. ೨೦೧೪ರ ಚುನಾವಣೆಗೆ ಹೋಲಿಸಿದರೆ ಬಿಜೆಪಿ ಕೇವಲ ಶೇ.೨-೩ರಷ್ಟು ಮತಗಳನ್ನಷ್ಟೇ ಹೆಚ್ಚು ಪಡೆದಿದೆ. ಆದರೆ ೨೦೧೯ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಶೇ.೨೦ರಷ್ಟು ಭಾರೀ ನಷ್ಟ ಅನುಭವಿಸಿದೆ.

ಮಹಾರಾಷ್ಟ್ರದ ಪ್ರವಾಹಪೀಡಿತ ಪ್ರದೇಶಗಳಲ್ಲಿ ಬಿಜೆಪಿಗೆ ಸೋಲು:

ಮಹಾರಾಷ್ಟ್ರದ ಕೊಲ್ಹಾಪುರದ ಹತ್ತು ಕ್ಷೇತ್ರಗಳಲ್ಲಿ ಬಿಜೆಪಿಗೆ ಹೀನಾಯ ಸೋಲು ಅನುಭವಿಸಿದೆ. ಅಲ್ಲದೇ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಪ್ರವಾಹ ಪೀಡಿತ ಕ್ಷೇತ್ರಗಳಲ್ಲಿ ಬಿಜೆಪಿ ಪರಾಜಯಗೊಂಡಿದೆ. ೨೦೧೪ರ ಚುನಾವಣೆಯಲ್ಲಿ ಬಿಜೆಪಿ ೧೨೨ ಸ್ಥಾನಗಳಲ್ಲಿ ಜಯ ಸಾಧಿಸಿತ್ತು. ಆದರೆ ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ನೂರು ಸ್ಥಾನಗಳಲ್ಲಷ್ಟೇ ಗೆಲುವು ಪಡೆಯಲು ಯಶಸ್ವಿಯಾಗಿದೆ. ಚುನಾವಣೋತ್ತರ ಮತ್ತು ಮತದಾನೋತ್ತರ ಸಮೀಕ್ಷೆಗಳೆಲ್ಲವೂ ಮಹಾರಾಷ್ಟ್ರದಲ್ಲಿ ಬಿಜೆಪಿಯೇ ೧೫೦ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಭವಿಷ್ಯ ನುಡಿದಿದ್ದವು.

ಆದರೆ ಈ ಬಾರಿ ಬಿಜೆಪಿ 105 ಸ್ಥಾನಗಳಲ್ಲಿ ಶಿವಸೇನಾ 56, ಕಾಂಗ್ರೆಸ್ 44, ಎನ್ ಸಿಪಿ 54 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದವು. ಈ ಮೂಲಕ ಕೇವಲ ಬಿಜೆಪಿ ಏಕಾಂಗಿಯಾಗಿಯೇ ಸ್ಪಷ್ಟ ಬಹುಮತ ಪಡೆಯಲಿದೆ ಎಂಬ ಭವಿಷ್ಯ ಹುಸಿಯಾಯಿತು.

ಯಾರಿಗೆ ಎಷ್ಟು ಸ್ಥಾನ

ಮಹಾರಾಷ್ಟ್ರ    ಒಟ್ಟು ಸ್ಥಾನ 288  ಮ್ಯಾಜಿಕ್ ಸಂಖ್ಯೆ 145

ಪಕ್ಷ                           ಗೆಲುವು                                                        2014ರ ಸ್ಥಾನ

ಬಿಜೆಪಿ+                     162 (ಬಿಜೆಪಿ 103+ ಶಿವಸೇನಾ 54)                     185

ಕಾಂಗ್ರೆಸ್ +                  98  (ಕಾಂಗ್ರೆಸ್ 44+ ಎನ್‌ಸಿಪಿ 54)                      83

ಇತರರು                       22                                                                    20

 

ಹರಿಯಾಣ  ಒಟ್ಟು ಸ್ಥಾನ 90  ಮ್ಯಾಜಿಕ್ ಸಂಖ್ಯೆ  46

ಪಕ್ಷ                     ಗೆಲುವು                                                              2014ರ ಸ್ಥಾನ

ಬಿಜೆಪಿ                      40                                                                         47

ಕಾಂಗ್ರೆಸ್                   31                                                                        15

ಜೆಜೆಪಿ                       10                                                                         –

ಇತರರು                     9                                                                        28

October 24, 2019 Posted by | ನರೇಂದ್ರ ಮೋದಿ, ಪಾಕಿಸ್ತಾನ, ಭಾರತ, ರಾಷ್ಟ್ರೀಯ, Flash News, General Knowledge, India, Nation, News, Politics, Prime Minister, Spardha | , | Leave a comment

ಕರ್ತಾರಪುರ ಕಾರಿಡಾರ್ ಕಾರ್ಯಗತ ಒಪ್ಪಂದಕ್ಕೆ ಭಾರತ- ಪಾಕ್ ಸಹಿ

24 kartarpur corridar agreement signed
ನವದೆಹಲಿ:
ಸಿಖ್ ಪಂಥದ ಸಂಸ್ಥಾಪಕ ಗುರುನಾನಕ್ ದೇವ್ ಅವರು ತಮ್ಮ ಜೀವನದ ಅಂತಿಮ ವರ್ಷಗಳನ್ನು ಕಳೆದ ಸ್ಥಳದಲ್ಲಿ ನಿರ್ಮಿಸಲಾದ ಗುರುದ್ವಾರವನ್ನು ಸಂದರ್ಶನಕ್ಕೆ  ಭಾರತೀಯ ಯಾತ್ರಾರ್ಥಿಗಳಿಗೆ ಅವಕಾಶ ನೀಡುವ ಕರ್ತಾರಪುರ ಕಾರಿಡಾರ್ ಕಾರ್ಯಗತ ಒಪ್ಪಂದಕ್ಕೆ  ಭಾರತ ಮತ್ತು ಪಾಕಿಸ್ತಾನ 2019 ಅಕ್ಟೋಬರ್ 24ರ ಗುರುವಾರ ಗಡಿಯಲ್ಲಿನ ‘ಶೂನ್ಯ ರೇಖೆ’ ಯಲ್ಲಿ ಸಹಿ ಮಾಡಿದವು. ಉಭಯ ರಾಷ್ಟ್ರಗಳ  ಅಧಿಕಾರಿಗಳು ಒಪ್ಪಂದಕ್ಕೆ ಸಹಿ ಹಾಕಿದರು.

ಒಪ್ಪಂದಕ್ಕೆ ಸಹಿ ಹಾಕಲು ಅಕ್ಟೋಬರ್ ೨೩ ರ ದಿನಾಂಕವನ್ನು ಭಾರತವು ಸೋಮವಾರ ಪ್ರಸ್ತಾಪಿಸಿತ್ತು. ಆದರೆ ಪಾಕಿಸ್ತಾನದ ಕಡೆಯ “ಆಡಳಿತಾತ್ಮಕ ಸಮಸ್ಯೆಗಳ’ ಕಾರಣ ಈ ದಿನಾಂಕವನ್ನು ಒಂದು ದಿನ ಮುಂದೂಡಬೇಕಾಯಿತು ಎಂದು ಅಧಿಕಾರಿಗಳು ತಿಳಿಸಿದರು. ಪಾಕಿಸ್ತಾನ ನಿಯೋಗದ ನೇತೃತ್ವವನ್ನು ವಿದೇಶಾಂಗ ಕಚೇರಿ ವಕ್ತಾರ ಮೊಹಮ್ಮದ್ ಫೈಸಲ್ ವಹಿಸಿದ್ದರು.

“ಕರ್ತಾರಪುರ ಸಾಹಿಬ್  ತಲುಪಲು ಕರ್ತಾರಪುರ ಕಾರಿಡಾರ್ ತೆರೆಯುವ ಬಗೆಗಿನ ಐತಿಹಾಸಿಕ ಪಾಕಿಸ್ತಾನ- ಭಾರತ ಒಪ್ಪಂದಕ್ಕೆ ಸಹಿ ಹಾಕಲು  ತೆರಳುತ್ತಿರುವೆ.  ನವೆಂಬರ್ ೯ ರಂದು ಪಾಕಿಸ್ತಾನದ ನರೋವಾಲದಲ್ಲಿ  ಕರ್ತಾರಪುರ ಸಾಹಿಬ್ ಕಾರಿಡಾರನ್ನು ಪ್ರಧಾನಿ ಇಮ್ರಾನ್ ಖಾನ್ ಉದ್ಘಾಟಿಸಲಿದ್ದಾರೆ ”ಎಂದು ಶೂನ್ಯ ರೇಖೆಯತ್ತ ಹೊರಡುವ ಮುನ್ನ ಫೈಸಲ್ ಟ್ವೀಟ್ ಮಾಡಿದ್ದರು.

ಗುರುನಾನಕ್ ದೇವ್‌ಅವರ ೫೫೦ ನೇ ಜನ್ಮದಿನಾಚರಣೆಗೆ ಮುನ್ನ ಮುನ್ನ ಕಾರಿಡಾರ್ ಕಾರ್ಯಗತಕ್ಕಾಗಿ ಭಾರತ ಮತ್ತು ಪಾಕಿಸ್ತಾನ  ಉನ್ನತ ಮಟ್ಟದ ಮಾತುಕತೆ ನಡೆಸಿವೆ. ಭಾರತೀಯ ಯಾತ್ರಿಕರ ವೀಸಾ ಮುಕ್ತ ಸಂಚಾರಕ್ಕೆ ಕಾರಿಡಾರ್ ಅನುಕೂಲಕರವಾಗಲಿದೆ. ೧೫೨೨ ರಲ್ಲಿ ಸಿಖ್ ಪಂಥದ  ಸಂಸ್ಥಾಪಕ ಗುರುನಾನಕ್ ದೇವ್‌ಅವರು ಸ್ಥಾಪಿಸಿದ ಕರ್ತಾರಪುರ ಸಾಹಿಬ್‌ಗೆ ಭೇಟಿ ನೀಡಲು ಭಾರತೀಯ ಯಾತ್ರಿಕರು ಅನುಮತಿ ಪಡೆದರೆ ಸಾಕಾಗುತ್ತದೆ. ವೀಸಾದ ಅಗತ್ಯ ಬೀಳುವುದಿಲ್ಲ.

ಏನಿದು ಕಾರಿಡಾರ್?

ಪಂಜಾಬಿನ ಕರ್ತಾರಪುರದಲ್ಲಿರುವ ಗುರುದ್ವಾರ ದರ್ಬಾರ್ ಸಾಹಿಬ್ ತಲುಪಲು ಸಿದ್ಧ ಪಡಿಸಲಾಗಿರುವ ನೂತನ ಪ್ರವೇಶ ಮಾರ್ಗವಾಗಿದೆ ಈ ಕರ್ತಾರಪುರ ಕಾರಿಡಾರ್.

ಉಭಯ ರಾಷ್ಟ್ರಗಳ ನಡುವಣ ಪ್ರಕ್ಷುಬ್ಧತೆಯ ಪರಿಣಾಮವಾಗಿ ಭಾರತೀಯ ಯಾತ್ರಾರ್ಥಿಗಳಿಗೆ ಈ ದರ್ಬಾರ್ ಸಾಹಿಬ್‌ಗೆ ಪ್ರವೇಶ ಪಡೆಯುವುದು ಈವರೆಗೆ ದುಸ್ತರವಾಗಿತ್ತು.

೧೯೪೭ರಲ್ಲಿ ಭಾರತವನ್ನು ಬಿಟಿಷರಿಂದ ವಿಭಜಿಸಲ್ಪಟ್ಟ ಪಂಜಾಬಿನಲ್ಲಿ ಸಿಖ್ ಪಂಥವು ಶತಕಗಳಷ್ಟು ಹಿಂದೆಯೇ ಜನ್ಮತಾಳಿತ್ತು. ೧೬ನೇ ಶತಮಾನದಲ್ಲಿ ಸಿಖ್ ಪಂಥದ ಸಂಸ್ಥಾಪಕ ಗುರು ನಾನಕ್ ದೇವ್ ಅವರು ನಿರ್ಮಿಸಿದ್ದು ಎಂಬುದಾಗಿ ನಂಬಲಾದ ಕರ್ತಾರಪುರದ ಈ ಗುರುದ್ವಾರವು ಭಾರತದ ಗಡಿಯಿಂದ ಸುಮಾರು ೪ ಕಿಮೀ ದೂರದಲ್ಲಿ (೨.೫ ಮೈಲು) ಪಾಕಿಸ್ತಾನದ ಭೂಪ್ರದೇಶದಲ್ಲಿದೆ.

ಈ ವಾರಾರಂಭದಲ್ಲಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಕರ್ತಾರಪುರ ಗುರುದ್ವಾರವು ವಿಶ್ವದಲ್ಲೇ ಅತ್ಯಂತ ವಿಶಾಲವಾದ ಗುರುದ್ವಾರವಾಗಿದ್ದು, ತಮ್ಮ ರಾಷ್ಟ್ರವು ವಿಶ್ವಾದ್ಯಂತದ ಸಿಕ್ಖರಿಗೆ ಈ ಗುರುದ್ವಾರ ದರ್ಶನಕ್ಕೆ ತನ್ನ ದ್ವಾರಗಳನ್ನು ತೆರೆಯುತ್ತಿದೆ ಎಂದು ಹೇಳಿದ್ದರು.

ನವೆಂಬರ್ ೧೦ರಂದು ಸಾರ್ವಜನಿಕರಿಗೆ ಮುಕ್ತವಾಗಲಿರುವ ಕಾರಿಡಾರ್ ಭಾರತ-ಪಾಕ್ ಗಡಿಯಿಂದ ನೇರವಾಗಿ ಗುರುದ್ವಾರವನ್ನು ಸಂಪರ್ಕಿಸುತ್ತದೆ.

ಕಾರಿಡಾರ್‌ಗೆ ಸಂಬಂಧಿಸಿದ ವಿವರಗಳನ್ನು ಅಂತಿಮಗೊಳಿಸುವುದೇನೂ ಸುಲಭವಾದ ವಿಷಯವಾಗಿರಲಿಲ್ಲ. ಒಂದು ವರ್ಷದ ಹಿಂದೆ ಪ್ರಕಟಿಸಿದ ಬಳಿಕ ಈ ಪ್ರಕ್ರಿಯೆ ಹಲವಾರು ಕಾರಣಗಳಿಂದಾಗಿ ಉದ್ದಕ್ಕೆ ಎಳೆಯಲ್ಪಟ್ಟಿತ್ತು.

ಕಾರಿಡಾರ್ ಬಗ್ಗೆ ನಮಗೇನು ಗೊತ್ತಿದೆ?

ಕಾರಿಡಾರ್ ಪ್ರಸ್ತುತ ನಿರ್ಮಾಣದ ಕೊನೆಯ ಹಂತದಲ್ಲಿದ್ದು ನವೆಂಬರ್ ಆರಂಭದಲ್ಲಿ ಬಳಕೆಗೆ ಮುಕ್ತವಾಗಲಿದೆ ಎಂದು ಅಧಿಕಾರಿಗಳು ಹೇಳಿದರು.

ನೂರಾರು ಮಂದಿ ಕಾರ್ಮಿಕರು ಈಗಲೂ  ೪೨ ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಗುರುದ್ವಾರ ಮತ್ತು ಅದರ ವಿಸ್ತರಣಾ ಕಾರ್‍ಯಕ್ಕೆ ಅಂತಿಮ ಸ್ಪರ್ಶ ನೀಡುವ ಕಾರ್‍ಯದಲ್ಲಿ ಮಗ್ನರಾಗಿದ್ದಾರೆ.

ಸಂದರ್ಶಕರ ಅನುಕೂಲಕ್ಕಾಗಿ ಅಂತಾರಾಷ್ಟ್ರೀಯ ಗಡಿ ಮತ್ತು ಗುರುದ್ವಾರದ ಮಧ್ಯೆ ಹರಿಯುವ ರಾವಿ ನದಿಗೆ ಅಡ್ಡಲಾಗಿ ಒಂದು ಸೇತುವೆ ನಿರ್ಮಾಣ ಕೂಡಾ ಈ ಕಾರಿಡಾರ್ ಯೋಜನೆಯಲ್ಲಿ ಸೇರಿದೆ.

ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಅಧಿಕೃತವಾಗಿ ಯೋಜನೆಯನ್ನು ಘೋಷಿಸಿದ ಬಳಿಕ ಗುರುದ್ವಾರದ ಸುತ್ತ ಮುತ್ತ ಸವಲತ್ತುಗಳನ್ನು ಒದಗಿಸುವ ಸಲುವಾಗಿ ಕಾಮಗಾರಿಗಳೂ ಆರಂಭಗೊಂಡಿದ್ದವು.

ಗುರುದ್ವಾರದ ವಿಸ್ತರಣೆ, ನೂತನ ಸವಲತ್ತುಗಳ ಪಟ್ಟಿಯಲ್ಲಿ ನೂತನ ಪ್ರಾಂಗಣ, ವಸ್ತುಸಂಗ್ರಹಾಲಯ, ಗ್ರಂಥಾಲಯ, ವಸತಿ ನಿಲಯಗಳು (ಡಾರ್ಮೆಟ್ರಿಗಳು), ಲಾಕರ್ ಕೊಠಡಿಗಳು, ವಲಸೆ ಕೇಂದ್ರ ಮತ್ತು ಪ್ರವಾಹದ ಸಂದರ್ಭದಲ್ಲಿ ಗುರುದ್ವಾರ ರಕ್ಷಣೆಗಾಗಿ ಒಂದು ಒಡ್ಡು ನಿರ್ಮಾಣ ಕೂಡಾ ಸೇರಿವೆ.

ಪಾಕಿಸ್ತಾನದಲ್ಲಿರುವ ಗುರುದ್ವಾರಕ್ಕೆ ಕಾರಿಡಾರ್ ಮೂಲಕ ತೆರಳಲು ಭಾರತೀಯ ಯಾತ್ರಾರ್ಥಿಗಳಿಗೆ ಪಾಸ್‌ಪೋರ್ಟ್ ಅಥವಾ ವೀಸಾದ ಅಗತ್ಯವಿಲ್ಲ, ಆದರೆ ಅಲ್ಲಿಗೆ ಹೋಗುವುದಕ್ಕೆ ಮುನ್ನ ಅನುಮತಿ ಪಡೆದುಕೊಳ್ಳಬೇಕಾಗುತ್ತದೆ.

ಪ್ರಕ್ರಿಯೆಯ ಪೂರ್ಣ ಮಾಹಿತಿಗಳನ್ನು ಅಧಿಕಾರಿಗಳು ಇನ್ನೂ ಬಿಡುಗಡೆ ಮಾಡಿಲ್ಲ, ಆದರೆ ಪ್ರವಾಸಿಗರು ಅನುಮತಿಗಾಗಿ ಅಂತರ್ಜಾಲದ (ಆನ್ ಲೈನ್) ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ, ಮತ್ತು ಅದಕ್ಕೆ ಭಾರತ ಮತ್ತು ಪಾಕಿಸ್ತಾನ ಎರಡೂ ರಾಷ್ಟ್ರಗಳ ಸರ್ಕಾರಗಳು ಮಂಜೂರಾತಿ ನೀಡಬೇಕಾಗುತ್ತದೆ ಎಂದು ಹೇಳಲಾಗಿದೆ.

೧೯೯೮ರಿಂದಲೇ ಮಾತುಕತೆ

ಭಾರತದಲ್ಲಿನ ಸಿಖ್ ಸಮುದಾಯವು ಕಾರಿಡಾರ್ ಮೂಲಕ ಗುರುದ್ವಾರ ಸಂದರ್ಶನಕ್ಕೆ ವ್ಯವಸ್ಥೆ ಬೇಕು ಎಂದು ದೀರ್ಘ ಕಾಲದ ಹಿಂದೆಯೇ ಬೇಡಿಕೆ ಇಟ್ಟಿತ್ತು. ಗುರುದ್ವಾರಕ್ಕೆ ಪ್ರವೇಶ ಪಡೆಯುವ ನಿಟ್ಟಿನಲ್ಲಿ ಭಾರತದ ಹಿಂದಿನ ಸರ್ಕಾರಗಳು ಪ್ರಾಥಮಿಕ ಮಾತುಕತೆಗಳನ್ನೂ ಆರಂಭಿಸಿದ್ದವು.

೧೯೯೮ರಲ್ಲಿ ಈ ನಿಟ್ಟಿನ ಮೊದಲ ಮಾತುಕತೆ ನಡೆದಿತ್ತು. ಬಳಿಕ ೨೦೦೪ರಲ್ಲಿ ಮತ್ತು ೨೦೦೮ರಲ್ಲಿ ಮಾತುಕತೆಗಳು ನಡೆದಿದ್ದವು. ಆದರೆ ಈ ಮಾತುಕತೆಗಳಿಂದ ಸ್ಪಷ್ಟವಾದ ತೀರ್ಮಾನ ಸಾಧ್ಯವಾಗಿರಲಿಲ್ಲ.

ವಿಭಜನೆಯ ಬಳಿಕ ಭಾರತೀಯರಿಗೆ ಗುರುದ್ವಾರಕ್ಕೆ ಸೀಮಿತ ಪ್ರವೇಶದ ಅವಕಾಶವಿತ್ತು. ಭೇಟಿಗೆ ವೀಸಾ ಪಡೆಯುವುದೇ ದೊಡ್ಡ ಹೋರಾಟವಾಗುತ್ತಿತ್ತು.

ಕರ್ತಾರಪುರದಲ್ಲಿ ಪ್ರಸ್ತುತ ಇರುವ ಗುರುದ್ವಾರವನ್ನು ಮೂಲ ಗುರುದ್ವಾರವು ಪ್ರವಾಹದಲ್ಲಿ ನಾಶವಾದ ಬಳಿಕ ೧೯೨೫ರಲ್ಲಿ ನಿರ್ಮಿಸಲಾಗಿತ್ತು. ಬಳಿಕ ಪಾಕಿಸ್ತಾನಿ ಸರ್ಕಾರವು ೨೦೦೪ರಲ್ಲಿ ಅದನ್ನು ಪುನರ್ ನಿರ್ಮಿಸಿತ್ತು.

ಗುರುನಾನಕ್ ಅವರು ತಮ್ಮ ಜೀವನದ ಕೊನೆಯ ೧೮ ವರ್ಷಗಳನ್ನು ಕಳೆದುದರ ನೆನಪಿಗಾಗಿ ಇಲ್ಲಿ ಗುರುದ್ವಾರವನ್ನು ನಿರ್ಮಿಸಲಾಗಿತ್ತು.

ಗುರು ನಾನಕ್ ದೇವ್ ಅವರ ಜನ್ಮಸ್ಥಾನದ ಬಳಿಕ ಪಾಕಿಸ್ತಾನದಲ್ಲಿನ ಈ ಗುರುದ್ವಾರವು ಸಿಕ್ಖರ ಪಾಲಿನ ಎರಡನೇ ಪವಿತ್ರ ಸ್ಥಳ ಎಂಬುದಾಗಿ ಪರಿಗಣಿಸಲ್ಪಟ್ಟಿದೆ.

October 24, 2019 Posted by | ಪಾಕಿಸ್ತಾನ, ಭಾರತ, ರಾಷ್ಟ್ರೀಯ, ವಿಶ್ವ/ ಜಗತ್ತು, Festival, Flash News, General Knowledge, India, Nation, News, Spardha, Temples, Temples, ದೇವಾಲಯಗಳು, World | , , , , , , , , | Leave a comment

ಜಮ್ಮು-ಕಾಶ್ಮೀರ: ಪಾಕ್ ನುಸುಳುವಿಕೆ ಯತ್ನ ಭಗ್ನ, ೩ ಭಯೋತ್ಪಾದಕರ ಹತ್ಯೆ

22 infltration bid foiled ಒಬ್ಬ ಸೇನಾ ಅಧಿಕಾರಿ ಹುತಾತ್ಮ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ನೌಶೇರಾ ವಿಭಾಗದಲ್ಲಿ ಭಯೋತ್ಪಾದಕರನ್ನು ಭಾರತಕ್ಕೆ ನುಸುಳುವಂತೆ ಮಾಡುವ ಪಾಕಿಸ್ತಾನಿ ಸೇನೆಯ ಯತ್ನವನ್ನು ಭಾರತೀಯ ಸೇನೆಯು 2019 ಅಕ್ಟೋಬರ್ 22ರ ಮಂಗಳವಾರ ಭಗ್ನಗೊಳಿಸಿದ್ದು, ಮೂವರು ಭಯೋತ್ಪಾದಕರನ್ನು ಸದೆ ಬಡಿಯಿತು. ಈ ಸಂದರ್ಭದಲ್ಲಿ ನಡೆದ ಗುಂಡಿನ ಘರ್ಷಣೆಯಲ್ಲಿ ಭಾರತೀಯ ಸೇನೆಯ ಕಿರಿಯ ಅಧಿಕಾರಿಯೊಬ್ಬರು (ಜ್ಯೂನಿಯರ್ ಕಮಿಷನ್ಡ್ ಆಫೀಸರ್- ಜೆಸಿಒ) ಹುತಾತ್ಮರಾದರು.

ಸುದ್ದಿ ಮೂಲಗಳ ಪ್ರಕಾರ ಪಾಕಿಸ್ತಾನಿ ಸೇನೆಯ ಬೆಂಬಲದೊಂದಿಗೆ ಸಶಸ್ತ್ರ ಭಯೋತ್ಪಾದಕರ ತಂಡವೊಂದು ನಿಯಂತ್ರಣ ರೇಖೆಯನ್ನು ದಾಟಿ ಸುಮಾರು ೪೦೦ ಮೀಟರುಗಳಷ್ಟು ಭಾರತೀಯ ಪ್ರದೇಶದೊಳಕ್ಕೆ ನುಸುಳಿತ್ತು. ಅಷ್ಟರಲ್ಲಿ ಭಾರತೀಯ ಸೇನೆ ಅವರನ್ನು ಅಡ್ಡ ಗಟ್ಟಿತು. ತೀವ್ರ ಗುಂಡಿನ ಹಾರಾಟ ನಡೆದು ಮೂವರು ಭಯೋತ್ಪಾದಕರನ್ನು ಕೊಂದು ಹಾಕುವ ಮೂಲಕ ಪಾಕ್ ಸೇನೆ ಬೆಂಬಲಿತ ಅತಿಕ್ರಮಣ ಯತ್ನವನ್ನು ಭಾರತೀಯ ಸೇನೆಯು ವಿಫಲಗೊಳಿಸಿತು.

ಮೂವರು ಭಯೋತ್ಪಾದಕರ ಹೆಣಗಳು ಉರುಳುತ್ತಿದ್ದಂತೆಯೇ ಉಳಿದ ನುಸುಳುಕೋರರು ರಕ್ಷಣೆಗಾಗಿ ಹಿಂದಕ್ಕೆ ಓಡಿದರು ಎಂದು ಸುದ್ದಿ ಮೂಲಗಳು ಹೇಳಿದವು.

ಭಾರತೀಯ ಸೇನೆಯ ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ಫಿರಂಗಿದಾಳಿ ನಡೆಸಿ ನಾಲ್ಕು ಭಯೋತ್ಪಾದಕ ಶಿಬಿರಗಳನ್ನು ಧ್ವಂಸಗೊಳಿಸಿದ ಬಳಿಕ ಕಾಶ್ಮೀರದಲ್ಲಿ ಸಂಭವಿಸಿದ ಮೊದಲ ಘರ್ಷಣೆ ಇದಾಗಿದೆ.

ಪಾಕಿಸ್ತಾನಿ ಸೇನೆಯು ತಂಗ್‌ಧರ್ ವಿಭಾಗದಲ್ಲಿ ನುಸುಳುಕೋರರಿಗೆ ನೆರವಾಗುವ ಸಲುವಾಗಿ ಕದನವಿರಾಮ ಉಲ್ಲಂಘಿಸಿದ್ದಕ್ಕೆ ಪ್ರತಿಯಾಗಿ ಭಾರತೀಯ ಸೇನೆಯು ಈ ದಾಳಿಯನ್ನು ನಡೆಸಿತ್ತು.

ಜಮ್ಮು- ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿ ಕೂಡಾ ಪಾಕಿಸ್ತಾನವು ಈದಿನ ಕದನವಿರಾಮವನ್ನು ಉಲ್ಲಂಘಿಸಿತ್ತು.

ಪಾಕಿಸ್ತಾನವು ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಬಾಲಾಕೋಟ್‌ನಲ್ಲಿ ಈದಿನ ಬೆಳಗ್ಗೆ ೧೧.೩೦ರ ವೇಳೆಗೆ ಕದನ ವಿರಾಮವನ್ನು ಉಲ್ಲಂಘಿಸಿತ್ತು.

October 22, 2019 Posted by | ಪಾಕಿಸ್ತಾನ, ಬೆಂಗಳೂರು, ಭಯೋತ್ಪಾದಕ, ಭಾರತ, ರಾಷ್ಟ್ರೀಯ, Flash News, General Knowledge, India, Nation, News, Pakistan, Politics, Spardha, supreme court | | Leave a comment

ಕರ್ತಾರ​ಪುರ ಕಾರಿಡಾರ್ ಯೋಜನೆ: ಪಾಕ್ ಜೊತೆ ಒಪ್ಪಂದಕ್ಕೆ ಭಾರತ ಸಿದ್ಧ; ಸೇವಾ ಶುಲ್ಕ ವಾಪಸಿಗೆ ಮನವಿ

21 kartarpur corridar
ನವದೆಹಲಿ
: ಕರ್ತಾರಪುರ ಸಾಹಿಬ್ ಕಾರಿಡಾರ್ ಯೋಜನೆ ಸಂಬಂಧ ಪಾಕಿಸ್ತಾನದ ಜೊತೆ ಒಪ್ಪಂದಕ್ಕೆ ಸಹಿ ಹಾಕಲಾಗುವುದು ಎಂದು ಭಾರತ ಸರ್ಕಾರ 2019 ಅಕ್ಟೋಬರ್ 21ರ  ಸೋಮವಾರ ಹೇಳಿದೆ.

ಈ ಸಂಬಂಧ ಪತ್ರಿಕಾ ಪ್ರಕರಣೆ ನೀಡಿರುವ ಭಾರತೀಯ ವಿದೇಶಾಂಗ ಸಚಿವಾಲಯ,ಗುರುದ್ವಾರದ ಕರ್ತಾರ​ಪುರ ಸಾಹಿಬ್​ಗೆ ವೀಸಾ ಮುಕ್ತ ಪ್ರವೇಶವನ್ನು ನೀಡಬೇಕು ಎಂಬ ಯಾತ್ರಾರ್ಥಿಗಳ ಬಹುದಿನಗಳ ಬೇಡಿಕೆಯ ಹಿನ್ನೆಲೆಯಲ್ಲಿ ನವೆಂಬರ್ 12ರ ಮೊದಲು ಕಾರಿಡಾರನ್ನು ಕಾರ್ಯಗತಗೊಳಿಸಲು ಅಕ್ಟೋಬರ್ 23ರಂದು ಒಪ್ಪಂದಕ್ಕೆ ಸಹಿ ಮಾಡಲು ಭಾರತ ಸಿದ್ಧವಿದೆ ಎಂದು ತಿಳಿಸಿತು.

ಒಪ್ಪಂದಕ್ಕೆ ಸಹಿ ಹಾಕಲು ಒಪ್ಪಿಕೊಳ್ಳಲಾಗಿದೆ. ಯಾತ್ರಾರ್ಥಿಗಳಿಗೆ ವಿಧಿಸುವ ಸೇವಾ ಶುಲ್ಕ 20  ಡಾಲರನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಪಾಕಿಸ್ತಾನ ಸರ್ಕಾರ ಮತ್ತೊಮ್ಮೆ ಮರುಪರಿಶೀಲನೆ ನಡೆಸುವಂತೆ ಮನವಿ ಮಾಡಲಾಗಿದೆ. ತಿದ್ದುಪಡಿ ಒಪ್ಪಂದಕ್ಕೆ ಯಾವುದೇ ಸಮಯದಲ್ಲಿ ಸಹಿ ಮಾಡಲು ಭಾರತ ಸಿದ್ಧವಾಗಿದೆ ಎಂದು ವಿದೇಶಾಂಗ ಇಲಾಖೆ ತಿಳಿಸಿತು.

ಹೇಳಿಕೆಯಲ್ಲಿ ಪಾಕಿಸ್ತಾನದ ಸೇವಾ ಶುಲ್ಕ ಪ್ರಸ್ತಾವನೆಗೆ ವಿದೇಶಾಂಗ ಇಲಾಖೆ ಅಸಮಾಧಾನ ವ್ಯಕ್ತಪಡಿಸಿದೆ. ಸೇವಾ ಶುಲ್ಕವನ್ನು ಹಿಂಪಡೆಯುವಂತೆ ಭಾರತ ಸರ್ಕಾರ ಮನವಿ ಮಾಡಿತ್ತು.

October 22, 2019 Posted by | ಪಾಕಿಸ್ತಾನ, ಭಾರತ, ರಾಷ್ಟ್ರೀಯ, Flash News, General Knowledge, India, Nation, News, Pakistan, Spardha, World | , , , | Leave a comment

ಪಾಕ್ ಆಕ್ರಮಿತ ಕಾಶ್ಮೀರದ ಉಗ್ರ ನೆಲೆಗಳ ಮೇಲೆ ಭಾರತೀಯ ಸೇನೆ ಫಿರಂಗಿದಾಳಿ

20 indian army attack on pok terror camps
೪ ಭಯೋತ್ಪಾದಕ ಶಿಬಿರಗಳು ಧ್ವಂಸ, ೬-೧೦ ಪಾಕ್ ಸೈನಿಕರು, ಅಷ್ಟೇ ಸಂಖ್ಯೆ ಉಗ್ರರ ಸಾವು

ನವದೆಹಲಿ: ಜನ ಸಾಮಾನ್ಯರನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿದ ಪಾಕಿಸ್ತಾನದ ಕ್ರಮಕ್ಕೆ ಪ್ರತಿಯಾಗಿ ಪಾಕ್ ಆಕ್ರಮಿತ ಕಾಶ್ಮೀರದ ತಂಗ್‌ಧರ್ ವಿಭಾಗದಲ್ಲಿ ಉಗ್ರ ನೆಲೆಗಳ ಮೇಲೆ  2019 ಅಕ್ಟೋಬರ್ 20ರ ಭಾನುವಾರ ಫಿರಂಗಿದಾಳಿ ನಡೆಸಿದ ಭಾರತೀಯ ಸೇನೆ ಪಾಕ್ ಆಕ್ರಮಿತ ಪ್ರದೇಶದ ನೀಲಂ ಕಣಿವೆಯಲ್ಲಿ ಕನಿಷ್ಠ ೪ ಭಯೋತ್ಪಾದಕ ಶಿಬಿರಗಳನ್ನು ಧ್ವಂಸಗೊಳಿಸಿದೆ. ದಾಳಿಯಲ್ಲಿ ಹಲವು ಭಯೋತ್ಪಾದಕರ ಜೊತೆಗೆ ಕನಿಷ್ಠ ೬-೧೦ ಪಾಕಿಸ್ತಾನಿ ಸೈನಿಕರು ಮತ್ತು ಅಷ್ಟೇ ಸಂಖ್ಯೆಯ ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಪ್ರಕಟಿಸಿದರು.

ಸಾವು ನೋವುಗಳ ಬಗ್ಗೆ ಇನ್ನೂ ವರದಿಗಳ ಬರುತ್ತಿದ್ದು, ಈ ಸಂಖ್ಯೆ ಇನ್ನೂ ಹೆಚ್ಚಾಗಿರುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದರು.

ಭಾರತದ ಒಳಕ್ಕೆ ಭಯೋತ್ಪಾದಕರಿಗೆ ನುಸುಳಲು ಪಾಕಿಸ್ತಾನಿ ಸೇನೆ ನೀಡುತ್ತಿದ್ದ ಬೆಂಬಲವನ್ನು ನಿಷ್ಕ್ರಿಯಗೊಳಿಲು ಭಾರತೀಯ ಸೇನೆ ಈ ಪ್ರತೀಕಾರದ ಕ್ರಮ ಕೈಗೊಂಡಿತು ಎಂದು ರಾವತ್ ತಿಳಿಸಿದರು.

ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ನಡೆಸಲು ಭಾರತೀಯ ಸೇನೆಯು ಫಿರಂಗಿಗಳನ್ನು ಬಳಸಿದ್ದು, ಲಷ್ಕರ್-ಇ-ತೊಯ್ಬಾ (ಎಲ್ ಇಟಿ), ಹಿಜ್ಬುಲ್ ಮುಜಾಹಿದೀನ್ ಮತ್ತು ಜೈಶ್-ಇ-ಮೊಹಮ್ಮದ್ (ಜೆಇಎಂ) ಇತ್ಯಾದಿ ಭಯೋತ್ಪಾದಕ ಸಂಘಟನೆಗಳಿಗೆ ಸೇರಿದ ಭಯೋತ್ಪಾದಕರಿಗೆ ಆಶ್ರಯ ಕಲ್ಪಿಸಿದ್ದ ನೀಲಂ ಕಣಿವೆಯ ೪ ಭಯೋತ್ಪಾದಕ ಶಿಬಿರಗಳನ್ನು ನಾಶ ಪಡಿಸಿತು.

ಭಾರತೀಯ ಸೇನೆಯ ಪ್ರತೀಕಾರದ ದಾಳಿಯಲ್ಲಿ ಪಾಕಿಸ್ತಾನದ ಕನಿಷ್ಠ ೬-೧೦ಮಂದಿ ಸೈನಿಕರು ಮತ್ತು ಅಷ್ಟೇ ಸಂಖ್ಯೆಯ ಭಯೋತ್ಪಾದಕರು ಹತರಾಗಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ರಾವತ್ ಹೇಳಿದರು.

ಭಾರೀ ಸಂಖ್ಯೆಯ ಭಯೋತ್ಪಾದಕರು ತೀವ್ರ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂಬ ವಿಶ್ವಾಸಾರ್ಹ ಮಾಹಿತಿಯನ್ನು ಅನುಸರಿಸಿ ಪಾಕ್ ಆಕ್ರಮಿತ ಪ್ರದೇಶದ ನೀಲಂ ಕಣಿವೆಯ ಜುರಾ, ಅತ್ಮುಗಂ, ಕುಂಡಲಸಾಹಿ ಮತ್ತು ಇತರ ಕಡೆಗಳಲ್ಲಿನ ಉಗ್ರ ಶಿಬಿರಗಳನ್ನು ಗುರಿಯಾಗಿಟ್ಟು ಸೇನೆ ಫಿರಂಗಿ ದಾಳಿ ನಡೆಸಿತು ಎಂದು ಅವರು ನುಡಿದರು.

ಇದಕ್ಕೆ ಮುನ್ನ ಪಾಕಿಸ್ತಾನವು ಭಾನುವಾರ ಕದನವಿರಾಮ ಉಲ್ಲಂಘಿಸಿತ್ತು. ಇದರಲ್ಲಿ ಒಬ್ಬ ನಾಗರಿಕ ಸಾವನ್ನಪ್ಪಿದರೆ, ಇಬ್ಬರು ಯೋಧರು ಹುತಾತ್ಮರಾಗಿದ್ದರು ಮತ್ತು ಇತರ ಮೂವರು ನಾಗರಿಕರು ಗಾಯಗೊಂಡಿದ್ದರು. ಇದನ್ನು ಅನುಸರಿಸಿ ಭಾರತದ ಸೇನೆ ಪ್ರತೀಕಾರದ ಕಾರ್‍ಯಾಚರಣೆಗೆ ಇಳಿಯಿತು.

ಕೆಲವು ಪ್ರದೇಶಗಳಲ್ಲಿ ಗುಂಡಿನದಾಳಿ ಆರಂಭಿಸಿದ ಭಾರತ ಸ್ವಲ್ಪವೇ ಹೊತ್ತಿನಲ್ಲಿ ಪಾಕಿಸ್ತಾನವು ಮೊದಲು ಕದನವಿರಾಮ ಉಲ್ಲಂಘನೆ ಮಾಡಿದ ತಂಗ್‌ಧರ್ ವಿಭಾಗದಲ್ಲಿ ತನ್ನ ದಾಳಿಯನ್ನು ಗಡಿಯಾಚೆಗೂ ವಿಸ್ತರಿಸಿತು.

ಶನಿವಾರ ಸಂಜೆ ನಡೆದ ಕದನವಿರಾಮ ಉಲ್ಲಂಘನೆಯ ಬಳಿಕ ಭಾರತೀಯ ಸೇನೆಯು  ಪಾಕಿಸ್ತಾನಕ್ಕೆ ಪ್ರಬಲ ಪ್ರತಿಕ್ರಿಯೆ ನೀಡಿತು.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸಿದ್ದ ಸಂವಿಧಾನದ ೩೭೦ನೇ ವಿಧಿಯನ್ನು ರದ್ದು ಪಡಿಸಲು ಭಾರತವು ಕೈಗೊಂಡ ತೀರ್ಮಾನಕ್ಕೆ  ವಿರುದ್ಧವಾಗಿ ಪ್ರತಿಕ್ರಿಯಿಸುತ್ತಿರುವ ಪಾಕಿಸ್ತಾನ ಶಿಬಿರಗಳಲ್ಲಿ ಜಮಾಯಿಸಿದ ಭಯೋತ್ಪಾದಕರನ್ನು ತನ್ನ ಸೇನೆಯ ಬೆಂಬಲದೊಂದಿಗೆ ಭಾರತಕ್ಕೆ ನುಸುಳಿಸಲು ಯತ್ನ ನಡೆಸಿತ್ತು ಎಂದು ಹೇಳಲಾಯಿತು.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರ ಜೊತೆಗೆ ತಂಗ್‌ಧರ್ ವಿಭಾಗದಲ್ಲಿನ ಪರಿಸ್ಥಿತಿ ಬಗ್ಗೆ ಮಾತನಾಡಿದರು.

ರಕ್ಷಣಾ ಸಚಿವರು ಪರಿಸ್ಥಿತಿ ಬಗ್ಗೆ ವೈಯಕ್ತಿಕ ನಿಗಾ ಇರಿಸಿದ್ದು, ತಮಗೆ ನಿರಂತರ ಮಾಹಿತಿ ಒದಗಿಸುವಂತೆ ಸೇನಾ ಮುಖ್ಯಸ್ಥರನ್ನು ಕೋರಿದ್ದಾರೆ ಎಂದು ಮೂಲಗಳು ಹೇಳಿದವು.

ಈ ವರ್ಷ ಸೆಪ್ಟೆಂಬರವರೆಗೆ ಪಾಕಿಸ್ತಾನವು ಗಡಿ ನಿಯಂತ್ರಣ ರೇಖೆಯಲ್ಲಿ ಕನಿಷ್ಠ ೨೦೦೦ ಸಲ ಕದನ ವಿರಾಮ ಉಲ್ಲಂಘನೆ ಮಾಡಿ ಹಲವಾರು ನಾಗರಿಕರು ಮತ್ತು ಯೋಧರನ್ನು ಬಲಿ ಪಡೆದದ್ದಲ್ಲದೆ, ಹಲವರನ್ನು ಗಾಯಗೊಳಿಸಿತ್ತು.

೨೦೦೩ ಕದನವಿರಾಮ ತಿಳುವಳಿಕೆಗೆ ಬದ್ಧವಾಗುವಂತೆ ಮತ್ತು ಗಡಿ ನಿಯಂತ್ರಣ ರೇಖೆ ಮತ್ತು ಅಂತಾರಾಷ್ಟ್ರೀಯ ಗಡಿಯಲ್ಲಿ ಪ್ರಶಾಂತತೆಯನ್ನು ಕಾಯ್ದುಕೊಳ್ಳಲು ಸೇನೆಗೆ ಸೂಚಿಸುವಂತೆ ಭಾರತವು ಪಾಕಿಸ್ತಾನಕ್ಕೆ ಪದೇ ಪದೇ ಆಗ್ರಹಿಸಿತ್ತು.

ಪಾಕ್ ಕುತುಂತ್ರ ಬಯಲು:  ಈ ಮಧ್ಯೆ, ಪಾಕ್ ಸೇನೆಯ ಮತ್ತೊಂದು ಮಹಾ ಕುತಂತ್ರ ಬಯಲಾಯಿತು.  ಭಾರತ ಮತ್ತು ಪಾಕ್ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಅಪ್ರಚೋದಿತವಾಗಿ ಕದನ ವಿರಾಮ ಉಲ್ಲಂಘನೆ ಮಾಡುತ್ತಿರುವ ಪಾಕಿಸ್ತಾನ ಸೇನೆ, ನಾಗರಿಕರನ್ನೇ ತನ್ನ ಗುರಿಯಾಗಿಸಿ ದಾಳಿ ನಡೆಸುವ ಮೂಲಕ ಭಾರತದಲ್ಲಿ ಅತಿ ಹೆಚ್ಚು ಹಾನಿ ಮಾಡಲು ಹಂಚಿಕೆ ಹೂಡಿದೆ ಎಂದು ವರದಿಗಳು ತಿಳಿಸಿದವು.

ಈದಿನ ಬೆಳಗ್ಗೆ  ಕುಪ್ವಾರದಲ್ಲಿ ಕದನ ವಿರಾಮ ಉಲ್ಲಂಘನೆ ಮಾಡಿದ ಪಾಕಿಸ್ತಾನ, ಭಾರತೀಯ ನಾಗರಿಕನೊಬ್ಬನನ್ನು ಹತ್ಯೆಗೈದಿತ್ತು. ಮೂವರು ನಾಗರಿಕರು ಗಾಯಗೊಂಡಿದ್ದರು. ಈ ದಾಳಿಯಲ್ಲಿ ಗಡಿಯಾಚೆಯಿಂದ ಪಾಕಿಸ್ತಾನ ಸೇನೆ ಭಾರೀ ಪ್ರಮಾಣದ ಶೆಲ್ ದಾಳಿ ನಡೆಸಿತು. ಅದೂ ಕೂಡಾ ಜನ ವಸತಿ ಪ್ರದೇಶಗಳ ಮೇಲೇ ಪಾಕಿಸ್ತಾನದ ಶೆಲ್‌ಗಳು ತೂರಿಬಂದವು. ಭಾರತ ಮತ್ತು ಪಾಕ್ ಗಡಿಯಲ್ಲಿರುವ ಮನ್ಯಾರಿ ಎಂಬ ಗ್ರಾಮದಲ್ಲಿ ಈ ದಾಳಿ ನಡೆದಿದ್ದು, ಮನ್ಯಾರಿ ಗ್ರಾಮ ಕತುವಾ ಜಿಲ್ಲೆಯ ವ್ಯಾಪ್ತಿಯಲ್ಲಿದೆ. ಹಿಂದಿನ ದಿನ ತಡರಾತ್ರಿ ಹಾಗೂ ಈದಿನ ಮುಂಜಾನೆವರೆಗೂ ನಡೆದ ದಾಳಿಯಲ್ಲಿ ಮನೆಯೊಂದು ಸಂಪೂರ್ಣವಾಗಿ ಛಿದ್ರಗೊಂಡಿದ್ದು, ಅಕ್ಕಿ ಗೋದಾಮು ಕೂಡಾ ಹಾಳಾಯಿತು. ೨ ವಾಹನಗಳು, ದನದ ಕೊಟ್ಟಿಗೆ ನಾಶವಾಗಿದ್ದು ೧೯ ದನಗಳು ಸಾವನ್ನಪ್ಪಿದ್ದವು.

ಪಾಕಿಸಾನಿ ಸೇನೆ ನಾಗರಿಕರನ್ನೇ ಗುರಿಯಾಗಿಸಿ ದಾಳಿ ನಡೆಸಿದ್ದರಿಂದ ಇಲ್ಲಿನ ಜನರ ರಕ್ಷಣೆ ಭಾರತೀಯ ಸೇನೆಗೆ ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಪಾಕಿಸ್ತಾನಿ ಸೇನೆಯ ನಿರಂತರ ದಾಳಿಯಿಂದಾಗಿ ಸಾಕಷ್ಟು ಹಾನಿ ಸಂಭವಿಸಿದ ಹಿನ್ನೆಲೆಯಲ್ಲಿ, ಸೇನೆ ತಕ್ಕ ಪ್ರತ್ಯುತ್ತರ ನೀಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದರು.

ಪಾಕಿಸ್ತಾನ ಸೇನೆ ಜನ ವಸತಿ ಪ್ರದೇಶಗಳನ್ನೇ ಗುರಿಯಾಗಿಸಿ ದಾಳಿ ನಡೆಸುವ ಹಿನ್ನೆಲೆಯಲ್ಲಿ ಸ್ಥಳೀಯರು ಬಂಕರುಗಳಲ್ಲಿ ರಕ್ಷಣೆ ಪಡೆಯಬೇಕಾದ ಅನಿವಾರ್ಯತೆ ಎದುರಾಗಿದೆ. ಸಂಜೆ ೭ ಗಂಟೆಗೆ ಆರಂಭವಾಗುವ ಗುಂಡಿನ ದಾಳಿ ಮರುದಿನ ಬೆಳಗಿನ ಜಾವದವರೆಗೂ ನಿರಂತರವಾಗಿ ನಡೆಯುತ್ತಿರುತ್ತದೆ. ನಮಗೆ ನಮ್ಮ ಮಕ್ಕಳ ಜೀವ ರಕ್ಷಣೆಯೇ ದೊಡ್ಡ ಸವಾಲಾಗಿದೆ ಎನ್ನುತ್ತಾರೆ ಸ್ಥಳೀಯರು. ಪ್ರಧಾನಿ ಮೋದಿ ಅವರು ವಿಚಾರದಲ್ಲಿ ಕೂಡಲೇ ಏನಾದರೂ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದರು.

October 20, 2019 Posted by | ಪಾಕಿಸ್ತಾನ, ಭಯೋತ್ಪಾದಕ, ಭಾರತ, ರಾಷ್ಟ್ರೀಯ, ವಿಶ್ವ/ ಜಗತ್ತು, Flash News, General Knowledge, India, Nation, News, Pakistan, Spardha, Terror, World | | Leave a comment

ಸ್ಪೈಸ್ ಜೆಟ್ ವಿಮಾನವನ್ನು ಅಡ್ಡಗಟ್ಟಿದ್ದ ಪಾಕ್ ವಾಯುಪಡೆ

17 spice-jet-paksitan
ಸೆಪ್ಟೆಂಬರಿನಲ್ಲಿ ಘಟಿಸಿದ ಘಟನೆ ತಡವಾಗಿ ಬೆಳಕಿಗೆ

ನವದೆಹಲಿ: ದೆಹಲಿಯಿಂದ ಆಫ್ಘಾನಿಸ್ಥಾನದ ಕಾಬೂಲಿಗೆ  ೧೨೦ ಪ್ರಯಾಣಿಕರನ್ನು ಹೊತ್ತು ಹಾರುತ್ತಿದ್ದ ಸ್ಪೈಸ್ ಜೆಟ್ ವಿಮಾನವನ್ನು ಪಾಕ್ ವಾಯುಪಡೆ  ಸೆಪ್ಟೆಂಬರ್ ೨೩ರಂದು ಅಡ್ಡಗಟ್ಟಿದ್ದ ಪ್ರಕರಣದ ತಡವಾಗಿ 2019 ಅಕ್ಟೋಬರ್  17ರ ಗುರುವಾರ ಬೆಳಕಿಗೆ ಬಂದಿತು.

ಸ್ಪೈಸ್ ಜೆಟ್ ವಿಮಾನವನ್ನು ಅಡ್ಡಗಟ್ಟಿದ ಪಾಕಿಸ್ತಾನ ವಾಯುಪಡೆಯ ಯುದ್ಧ ವಿಮಾನಗಳು ಅದನ್ನು ಪಾಕಿಸ್ತಾನದ ಗಡಿ ದಾಟುವವರೆಗೆ ಅದನ್ನು ಹಿಂಬಾಲಿಸಿದ್ದವು ಎಂದು ಮಾಧ್ಯಮವೊಂದು ವರದಿ ಮಾಡಿತು.

ಸ್ಪೈಸ್ ಜೆಟ್ ಸಂಸ್ಥೆಯ ’ಬೋಯಿಂಗ್ ೭೩೭’ ವಿಮಾನದ ’ಕರೆ ಸಂಕೇತ’ (ಕಾಲ್ ಸೈನ್) ವಿಚಾರದಲ್ಲಿ ಆದ ಗೊಂದಲದಿಂದಾಗಿ ಪಾಕ್ ವಾಯುಪಡೆ ತುರ್ತಾಗಿ ತನ್ನ ಯುದ್ಧ ವಿಮಾನಗಳನ್ನು ನಿಯೋಜಿಸಿತು ಎಂದು ನಾಗರಿಕ ವಿಮಾನಯಾನ ಇಲಾಖೆ ನಿರ್ದೇಶಕರ ಕಚೇರಿ (ಡಿಜಿಸಿಎ) ಅಧಿಕಾರಿಗಳು ಹೇಳಿದರು.

ಸ್ಪೈಸ್ ಜೆಟ್ ವಿಮಾನವನ್ನು ಅಡ್ಡಗಟ್ಟಿದ ಪಾಕ್ ವಾಯುಪಡೆಯ ಅತ್ಯಾಧುನಿಕ ಎಫ್-೧೬ ಯುದ್ಧವಿಮಾನಗಳು ಹಾರಾಟದ ಎತ್ತರ ತಗ್ಗಿಸುವಂತೆ ಸೂಚಿಸಿದವು. ನಂತರ ಸ್ಪೈಸ್ ಜೆಟ್ ವಿಮಾನದ ಪೈಲಟ್, ಇದು ವಾಣಿಜ್ಯ ವಿಮಾನ ಎಂದು ಪಾಕ್ ವಾಯುಪಡೆಯ ಪೈಲಟ್‌ಗಳಿಗೆ ಸ್ಪಷ್ಟಪಡಿಸಿದರು ಎಂದು ಸುದ್ದಿ ಸಂಸ್ಥೆಯ ವರದಿ ತಿಳಿಸಿತು.

ಸ್ಪೈಸ್ ಜೆಟ್ ಪೈಲಟ್ ಸ್ಪಷ್ಟನೆಯ ಬಳಿಕ ವಿಮಾನಕ್ಕೆ ಹಾರಾಟ ಮುಂದುವರೆಸಲು ಪಾಕಿಸ್ತಾನ ಅನುಮತಿ ನೀಡಿತು. ಅಷ್ಟೇ ಅಲ್ಲ ವಿಮಾನವು ಪಾಕಿಸ್ತಾನದ ಗಡಿ ದಾಟುವವರೆಗೂ ಅದನ್ನು ಸುತ್ತುವರೆದಿತ್ತು ಎಂದು ಸುದ್ದಿ ಮೂಲಗಳು ಹೇಳಿವೆ. ಏನಿದ್ದರೂ ಈ ಘಟನೆಯ ಬಗ್ಗೆ ಸ್ಪೈಸ್ ಜೆಟ್  ಈವರೆಗೆ ಏನ್ನೂ ಹೇಳಿಲ್ಲ.

‘ಪ್ರತಿ ವಿಮಾನಯಾನ ಸಂಸ್ಥೆಗೂ ಒಂದು ಸಂಕೇತ (ಕೋಡ್) ಇರುತ್ತದೆ. ಸ್ಪೈಸ್ ಜೆಟ್‌ಗೆ ’ಎಸ್ಜಿ’ ಎಂಬ ಸಂಕೇತ ಇದೆ. ಇದನ್ನು ಪಾಕಿಸ್ತಾನದ ವಿಮಾನಯಾನ ನಿಯಂತ್ರಣ ಅಧಿಕಾರಿಗಳು ’ಐಎ’ ಎಂದು ತಪ್ಪಾಗಿ ಅರ್ಥೈಸಿಕೊಂಡಿರುವ ಸಾಧ್ಯತೆ ಇದೆ. ಹೀಗಾಗಿಯೇ ಐಎ ಎನ್ನುವುದನ್ನು ಇಂಡಿಯನ್ ಏರ್ ಫೋರ್ಸ್ ಎಂದು ತಪ್ಪಾಗಿ ಭಾವಿಸಿ ಪಾಕಿಸ್ತಾನದ ವಾಯುಪಡೆಗೆ ಸೂಚನೆ ರವಾನೆಯಾಗಿರಬಹುದು ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಗಳ ಹೇಳಿದರು ಎಂದು ಸುದ್ದಿ ಸಂಸ್ಥೆ ವರದಿ ಮಾಡಿತು.

ವಿಷಯವು ಅತ್ಯಂತ ಸೂಕ್ಷ್ಮ ಸ್ವರೂಪದ್ದಾದ ಕಾರಣ ಹೆಚ್ಚಿನ ವಿವರಗಳನ್ನು ನೀಡಲು ಡಿಜಿಸಿಎ ಅಧಿಕಾರಿಗಳು ನಿರಾಕರಿಸಿದರು.

ಫೆಬ್ರುವರಿ ೨೬ರಂದು ಭಾರತದ ವಾಯುಪಡೆ ವಿಮಾನಗಳು ಪಾಕಿಸ್ತಾನದ ಬಾಲಾಕೋಟ್‌ನಲ್ಲಿನ ಜೈಶ್-ಇ-ಮೊಹಮ್ಮದ್ (ಜೆಇಎಂ) ಭಯೋತ್ಪಾದಕ ತರಬೇತಿ ಶಿಬಿರದ ಮೇಲೆ ವಾಯುದಾಳಿ ನಡೆಸಿದ ಬಳಿಕ ಪಾಕಿಸ್ತಾನವು ಭಾರತಕ್ಕೆ ತನ್ನ ವಾಯುಮಾರ್ಗ ಬಳಸದಂತೆ ನಿಷೇಧ ಹೇರಿತ್ತು. ಆದರೆ ಜುಲೈ ತಿಂಗಳಲ್ಲಿ ತನ್ನ ವಾಯುಮಾರ್ಗವನ್ನು ಭಾಗಶಃ ತೆರೆದಿತ್ತು

ವಾಯುಮಾರ್ಗ ನಿರ್ಬಂಧಗಳ ಪರಿಣಾಮವಾಗಿ ತಮ್ಮ ರಾಷ್ಟವು ೫೦ ಮಿಲಿಯನ್ (೫ ಕೋಟಿ) ಡಾಲರ್‌ನಷ್ಟು ನಷ್ಟ ಅನುಭವಿಸಿತು ಎಂದು ಕೆಲವು ದಿನಗಳ ಬಳಿಕ ಪಾಕಿಸ್ತಾನದ ವಿಮಾನಯಾನ ಸಚಿವರು ಹೇಳಿದ್ದರು.

ಕಳೆದ ತಿಂಗಳು ಪಾಕಿಸ್ತಾನವು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಮೆರಿಕ ಪ್ರವಾಸಕ್ಕೆ ತನ್ನ ವಾಯುಮಾರ್ಗ ಬಳಸಲು ನಿರಾಕರಿಸಿತು. ಇದೇ ರೀತಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಐಸ್ ಲ್ಯಾಂಡ್ ಪಯಣ ಕಾಲದಲ್ಲೂ ತನ್ನ ವಾಯುಮಾರ್ಗ ಬಳಸಲು ಅನುಮತಿ ನಿರಾಕರಿಸಿತ್ತು.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸಿದ್ದ ಸಂವಿಧಾನದ ೩೭೦ನೇ ವಿಧಿ ರದ್ದು ಪಡಿಸಿದ ಭಾರತದ ಇತ್ತೀಚಿನ ಕ್ರಮವನ್ನು ವಿರೋಧಿಸಿ ಭಾರತದ ಪ್ರಧಾನಿ ಮತ್ತು ರಾಷ್ಟ್ರಪತಿಯವರ ವಿಮಾನ ಪಾಕಿಸ್ತಾನದ ವಾಯುಮಾರ್ಗ ಮೂಲಕ ಸಾಗದಂತೆ ನಿರ್ಬಂಧಿಸಲಾಯಿತು ಎಂದು  ಪಾಕ್ ವಿದೇಶಾಂಗ ಸಚಿವ ಮೆಹಮೂದ್ ಖುರೇಶಿ ಹೇಳಿದ್ದರು.

ಪಾಕಿಸ್ತಾನದ ನಿರ್ಧಾರಕ್ಕೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ವಿಷಾದ ವ್ಯಕ್ತ ಪಡಿಸಿತ್ತು. ವಿವಿಐಪಿಗಳ ವಿಶೇಷ ವಿಮಾನ ಹಾರಾಟಕ್ಕೆ ಯಾವುದೇ ರಾಷ್ಟ್ರ ಸಾಮಾನ್ಯವಾಗಿ ತನ್ನ ಅನುಮತಿಯನ್ನು ನೀಡುತ್ತದೆ.

‘ಅಂತಾರಾಷ್ಟ್ರೀಯ ಪದ್ಧತಿಯಿಂದ ವಿಮುಖವಾಗುವ ತನ್ನ ನಿರ್ಣಯವನ್ನು ಪಾಕಿಸ್ತಾನ ಪರಿಶೀಲಿಸಿಕೊಳ್ಳಬೇಕು ಮತ್ತು ಏಕಪಕ್ಷೀಯ ನಿರ್ಣಯಗಳನ್ನು ಕೈಗೊಳ್ಳಲು ಕಾರಣಗಳನ್ನು ತಪ್ಪಾಗಿ ಊಹಿಸಿಕೊಳ್ಳುವ ತನ್ನ ಹಳೆಯ ಚಾಳಿಯನ್ನು ಮರುಪರಿಶೀಲನೆ ಮಾಡಿಕೊಳ್ಳಬೇಕು’ ಎಂದು ವಕ್ತಾರ ರವೀಶ್ ಕುಮಾರ್ ಹೇಳಿದ್ದರು.

October 17, 2019 Posted by | Auto World, ಆಟೋ ಜಗತ್ತು, ಪಾಕಿಸ್ತಾನ, ಪೈಲಟ್, ಭಾರತ, ರಾಷ್ಟ್ರೀಯ, ವಿಮಾನ, ವಿಶ್ವ/ ಜಗತ್ತು, Flash News, General Knowledge, India, Nation, News, Pakistan, Space, Spardha | , , | Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ