SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಅಂಕೆ ಮೀರಿದ ಮಾಲಿನ್ಯ: ದೆಹಲಿಯಲ್ಲಿ ಆರೋಗ್ಯ ತುರ್ತುಸ್ಥಿತಿ ಘೋಷಣೆ

01 delhi air pollutionನವೆಂಬರ್ ೫ರವರೆಗೆ ಎಲ್ಲ ಶಾಲೆಗಳಿಗೂ ರಜೆ, ನಿರ್ಮಾಣ ಚಟುವಟಿಕೆ ನಿಷೇಧ

ನವದೆಹಲಿ: ರಾಜಧಾನಿ ನವದೆಹಲಿಯಲ್ಲಿ ವಾಯು ಮಾಲಿನ್ಯವು ಅಂಕೆ ಮೀರಿ ’ವಿಷಮ ಸ್ಥಿತಿ’ಗೆ (ಸಿವಿಯರ್ ಪ್ಲಸ್) ತಲುಪಿದ್ದನ್ನು ಅನುಸರಿಸಿ ಸುಪ್ರೀಂಕೋರ್ಟ್ ನೇಮಿಸಿದ ಪರಿಸರ ಮಾಲಿನ್ಯ (ತಡೆ ಮತ್ತು ನಿಯಂತ್ರಣ) ಪ್ರಾಧಿಕಾರವು (ಇಪಿಸಿಎ) ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಆರೋಗ್ಯ ತುರ್ತುಸ್ಥಿತಿಯನ್ನು ಘೋಷಣೆ ಮಾಡಿದ್ದು 2019 ನವೆಂಬರ್ ೫ರವರೆಗೆ ಎಲ್ಲ ನಿರ್ಮಾಣ ಚಟುವಟಿಕೆಗಳನ್ನೂ 2019 ನವೆಂಬರ್ 01ರ ಶುಕ್ರವಾರ ನಿಷೇದಿಸಿತು. ಇದೇ ವೇಳೆಗೆ ದೆಹಲಿ ಸರ್ಕಾರವು ನವೆಂಬರ್ ೫ರವರೆಗೆ ಶಾಲೆಗಳಿಗೆ ರಜೆ ಘೋಷಿಸಿತು.

ವಾಯುಗುಣಮಟ್ಟ ವಿಪರೀತ ಎನಿಸುವಷ್ಟು ಕೆಳಕ್ಕೆ ಕುಸಿದಿದ್ದು, ದೆಹಲಿಗರು ಉಸಿರು ಎಳೆದುಕೊಳ್ಳಲು ಚಡಪಡಿಸಬೇಕಾದ ಸ್ಥಿತಿ ಉಂಟಾಗಿದೆ ಎಂದು ಹೇಳಿರುವ ಪ್ರಾಧಿಕಾರ ಚಳಗಾಲದ ಅವಧಿಯಲ್ಲಿ ಪಟಾಕಿ ಸಿಡಿಸುವುದನ್ನೂ ನಿಷೇಧಿಸಿತು.

ಉತ್ತರ ಪ್ರದೇಶ, ಹರಿಯಾಣ ಮತ್ತು ದೆಹಲಿಯ ಮುಖ್ಯಕಾರ್‍ಯದರ್ಶಿಗಳಿಗೆ ಬರೆದಿರುವ ಪತ್ರದಲ್ಲಿ ಪ್ರಾಧಿಕಾರದ ಅಧ್ಯಕ್ಷ ಭುರೇಲಾಲ್ ಅವರು ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ವಾಯುಗುಣಮಟ್ಟ ಗುರುವಾರ ರಾತ್ರಿ ಇನ್ನಷ್ಟು ಕುಸಿದಿದ್ದು, ಪ್ರಸ್ತುತ ವಿಷಮ ಸ್ಥಿತಿಯ ಹಂತದಲ್ಲಿದೆ ಎಂದು ತಿಳಿಸಿದರು.

‘ವಾಯುಮಾಲಿನ್ಯವು ಎಲ್ಲರ ಮೇಲೆ, ನಿರ್ದಿಷ್ಟವಾಗಿ ನಮ್ಮ ಮಕ್ಕಳ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ನಾವು ಇದನ್ನು ಆರೋಗ್ಯ ತುರ್ತುಸ್ಥಿತಿ ಎಂಬುದಾಗಿ ಪರಿಗಣಿಸಬೇಕು’ ಎಂದು ಭುರೇಲಾಲ್ ಪತ್ರದಲ್ಲಿ ಬರೆದರು.

ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ರಾಜಧಾನಿಯ ಎಲ್ಲ ಶಾಲೆಗಳಿಗೂ ನವೆಂಬರ್ 5ರ ಮಂಗಳವಾರದವರೆಗೆ ರಜೆ ಘೋಷಣೆ ಮಾಡಿದರು.

ದೆಹಲಿಯನ್ನು ಗ್ಯಾಸ್ ಚೇಂಬರ್ ಆಗಿ ಪರಿವರ್ತಿಸಿದ್ದಕ್ಕಾಗಿ ರಾಜ್ಯಗಳನ್ನು ದೂಷಿಸಿದ ಮುಖ್ಯಮಂತ್ರಿ ಕೇಜ್ರಿವಾಲ್, ಈದಿನ ಶಾಲಾ ಮಕ್ಕಳಿಗೆ ೫೦ ಲಕ್ಷ ಮುಖವಾಡಗಳನ್ನು (ಮಾಸ್ಕ್) ವಿತರಿಸಿದರು ಮತ್ತು ಅವುಗಳನ್ನು ಬಳಸುವಂತೆ ಇತರ ನಿವಾಸಿಗಳಿಗೂ ಮನವಿ ಮಾಡಿದರು.

‘ನೆರೆಯ ರಾಜ್ಯಗಳಲ್ಲಿ ಕೊಯ್ದ ಪೈರಿನ ಕೂಳೆ ಸುಡುವುದರಿಂದಾಗಿ ದೆಹಲಿ ಗ್ಯಾಸ್ ಚೇಂಬರ್ ಆಗಿ ಪರಿವರ್ತನೆಯಾಗಿದೆ. ಈ ಮಾಲಿನ್ಯಭರಿತ ಗಾಳಿಯಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕಾದುದು ಈಗ ಅತ್ಯಂತ ಮಹತ್ವದ ಕೆಲಸವಾಗಿದೆ. ಖಾಸಗಿ ಮತ್ತು ಸರ್ಕಾರಿ ಶಾಲೆಗಳಲ್ಲಿ ೫೦ ಲಕ್ಷ ಮುಖವಾಡಗಳನ್ನು ನಾವು ಈದಿನ ವಿತರಿಸುತ್ತಿದ್ದೇವೆ. ಅಗತ್ಯ ಬಿದ್ದಲ್ಲಿ ಇವುಗಳನ್ನು ಬಳಸುವಂತೆ ನಾನು ಎಲ್ಲ ದೆಹಲಿ ನಿವಾಸಿಗಳಿಗೂ ಮನವಿ ಮಾಡುತ್ತೇನೆ’ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದರು.

ಪಂಜಾಬ್ ಮತ್ತು ಹರಿಯಾಣದಲ್ಲಿ ಕೊಯ್ದ ಪೈರಿನ ಕೂಳೆ ಸುಡುವುದರಿಂದ ಉಂಟಾಗುವ ಹೊಗೆ ದೆಹಲಿಯಲ್ಲಿ ಮಾಲಿನ್ಯ ಉಂಟು ಮಾಡುತ್ತಿದೆ. ದಯವಿಟ್ಟು ಕ್ಯಾಪ್ಟನ್ ಅಂಕಲ್ (ಪಂಜಾಬ್ ಮುಖ್ಯಮಂತ್ರಿ) ಮತ್ತು ಖಟ್ಟರ್ ಅಂಕಲ್ (ಹರಿಯಾಣ ಮುಖ್ಯಮಂತ್ರಿ) ಅವರಿಗೆ ಪತ್ರಗಳನ್ನು ಬರೆದು ’ನಮ್ಮ ಆರೋಗ್ಯದ ಬಗ್ಗೆ ಚಿಂತಿಸಿ’ ಎಂದು ಒತ್ತಾಯಿಸಿ ಎಂದು ಅರವಿಂದ ಕೇಜ್ರಿವಾಲ್ ಮಕ್ಕಳಿಗೆ ಸಲಹೆ ಮಾಡಿದರು.

ರಾಜಧಾನಿಯ ಮಾಲಿನ್ಯ ಮಟ್ಟ ಏರುತ್ತಿರುವುದರಿಂದಾಗಿ ದೆಹಲಿಯನ್ನು ಮುಸುಕಿರುವ ಮಬ್ಬು ರಾತ್ರಿ ವೇಳೆಯಲ್ಲಿ ೫೦ ಪಾಯಿಂಟ್‌ನಷ್ಟು ಹೆಚ್ಚುತ್ತಿದೆ. ಪರಿಣಾಮವಾಗಿ ಶುಕ್ರವಾರ ಬೆಳಗ್ಗೆ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ೪೫೯ಕ್ಕೆ ಏರಿತ್ತು.

ಗುರುವಾರ ರಾತ್ರಿ ವಾಯು ಗುಣಮಟ್ಟ ಸೂಚ್ಯಂಕವು (ಎಕ್ಯೂಐ) ವಿಷಮ ಅಂದರೆ ’ಸಿವಿಯರ್ ಪ್ಲಸ್’ ಅಥವಾ ’ತುರ್ತು’ ಸ್ಥಿತಿಗೆ ಮುಟ್ಟಿತ್ತು. ಈ ವರ್ಷ ಜನವರಿಯಿಂದ ವಾಯು ಗುಣಮಟ್ಟ ಸೂಚ್ಯಂಕ ಈ ಮಟ್ಟಕ್ಕೆ ಮುಟ್ಟಿದ್ದು ಇದೇ ಮೊದಲು.

ವಾಯು ಗುಣಮಟ್ಟವು ವಿಷಮ ಸ್ಥಿತಿಯಲ್ಲಿಯೇ ೪೮ ಗಂಟೆಗಳಿಗಿಂತಲೂ ಹೆಚ್ಚು ಕಾಲ ಮುಂದುವರೆದರೆ, ಸಮ-ಬೆಸ ಯೋಜನೆಯ ಜಾರಿ, ಟ್ರಕ್ ಪ್ರವೇಶ ನಿಷೇಧ, ನಿರ್ಮಾಣ ಚಟುವಟಿಕೆಗಳ ನಿಷೇಧ ಹಾಗೂ ಶಾಲೆಗಳನ್ನು ಮುಚ್ಚುವುದೇ ಇತ್ಯಾದಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಅಧಿಕಾರಿ ನುಡಿದರು.

ದೆಹಲಿಯಲ್ಲಿ ಸೋಮವಾರದಿಂದ ಸಮ-ಬೆಸ ವಾಹನ ಸಂಚಾರ ವ್ಯವಸ್ಥೆ ಜಾರಿಗೆ ಉದ್ದೇಶಿಸಲಾಗಿದ್ದು, ಅದಕ್ಕೂ ಮುನ್ನವೇ ಮುಖ್ಯಮಂತ್ರಿ ಎಚ್ಚರಿಕೆ ವಹಿಸಲು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ವಾಯುಮಾಲಿನ್ಯವನ್ನು ಇಳಿಸಲು ನೆರವಾಗುವ ಸಮ-ಬೆಸ ವಾಹನ ಸಂಚಾರವು ನವೆಂಬರ್ ೧೫ರವರೆಗೂ ಮುಂದುವರೆಯಲಿದೆ ಎಂದು ಸರ್ಕಾರ ಹೇಳಿದೆ.

ದೆಹಲಿಯ ಎಲ್ಲ ೩೭ ವಾಯುಗುಣಮಟ್ಟ ನಿಗಾ ಕೇಂದ್ರಗಳೂ ಶುಕ್ರವಾರ ಬೆಳಗ್ಗೆ ವಾಯುಗುಣಮಟ್ಟ ವಿಷಮ ಸ್ಥಿತಿಗೆ ತಲುಪಿದ್ದನ್ನು ದಾಖಲಿಸಿವೆ.

ಬವಾನ ಪ್ರದೇಶವು ಅತ್ಯಂತ ಹೆಚ್ಚು ಮಾಲಿನ್ಯಕ್ಕೊಳಗಾದ ಪ್ರದೇಶವಾಗಿದ್ದು ಇಲ್ಲಿ ವಾಯು ಗುಣಮಟ್ಟ ಸೂಚ್ಯಂಕವು ೪೯೭ಕ್ಕೆ ಮುಟ್ಟಿದ್ದರೆ, ದೆಹಲಿ ತಾಂತ್ರಿಕ ವಿಶ್ವವಿದ್ಯಾಯ ಪ್ರದೇಶದಲ್ಲಿ ೪೮೭ಕ್ಕೆ, ಆನಂದ ವಿಹಾರದಲ್ಲಿ ೪೮೪ಕ್ಕೆ ಮತ್ತು ವಿವೇಕ ವಿಹಾರದಲಿ ೪೮೨ಕ್ಕೆ ತಲುಪಿತ್ತು.

ನೆರೆಯ ಗಾಜಿಯಾಬಾದ್ ದೇಶದಲ್ಲೇ ಅತ್ಯಂತ ಹೆಚ್ಚು ಮಾಲಿನ್ಯಕ್ಕೆ ಒಳಗಾಗಿರುವ ನಗರವಾಗಿದ್ದು, ಇಲ್ಲಿ ಸೂಕ್ಷ್ಮ ಕಣಗಳ ಗಾತ್ರ ಪಿಎಂ೨.೫ರಷ್ಟಿದ್ದು ಇದು ೨.೫ ಮೈಕ್ರೋನ್ ಗಿಂತಲೂ ಕಡಿಮೆ. ಇದು ನೇರವಾಗಿ ಶ್ವಾಸಕೋಶವನ್ನು ಪ್ರವೇಶಿಸುತ್ತದೆ. ನೋಯ್ಡಾ , ಗ್ರೇಟರ್ ನೋಯ್ಡಾ ಮತ್ತು ಫರೀದಾಬಾದ್ ಕೂಡಾ ಅತ್ಯಂತ ಮಾಲಿನ್ಯಭರಿತ ಪ್ರದೇಶಗಳಾಗಿವೆ.

ದೆಹಲಿ ವಾಯುಮಾಲಿನ್ಯ: ಗಾಳಿಯಲ್ಲಿ ಪತ್ತೆಯಾಗಿದೆಪಿಎಂ 2.5’ ಕಣ

 ರಾಷ್ಟ್ರ ರಾಜಧಾನಿಯಲ್ಲಿ ವಾಯುಮಾಲಿನ್ಯದ ಪ್ರಮಾಣ ಗಂಭೀರ ಸ್ವರೂಪ ಪಡೆದುಕೊಂಡಿರುವ ಬಗ್ಗೆ ದೇಶದಾದ್ಯಂತ ಚರ್ಚೆಯಾಗುತ್ತಿದೆ. ದೆಹಲಿಯ ಗಾಳಿಯಲ್ಲಿ ‘ಪಿಎಂ 2.5’ ಕಣಗಳು ಪತ್ತೆಯಾಗಿವೆ ಎಂದು ವರದಿಗಳು ಹೇಳಿವೆ.

ಏನಿದು ‘ಪಿಎಂ 2.5’?

‘ಪಿಎಂ’ ಎಂಬುದು ‘ಪರ್ಟಿಕ್ಯುಲೇಟ್ ಮ್ಯಾಟರ್‌’ ಎಂಬುದರ ಸಂಕ್ಷಿಪ್ತ ರೂಪ. ಗಾಳಿಯಲ್ಲಿರುವ ಮಾಲಿನ್ಯಕಾರಕ ಕಣಗಳನ್ನು ಗುರುತಿಸಲು ‘ಪಿಎಂ’ ಎಂಬ ಹೆಸರನ್ನು ಬಳಸಲಾಗುತ್ತದೆ. ಗಾತ್ರಕ್ಕೆ ಅನುಗುಣವಾಗಿ ಇವನ್ನು ‘ಪಿಎಂ 2.5’ ಮತ್ತು ಪಿಎಂ 10’ ಎಂದು ವರ್ಗೀಕರಿಸಲಾಗಿದೆ. 2.5 ಮೈಕ್ರಾನ್‌ಗಿಂತ ಕಡಿಮೆ ಗಾತ್ರದ ಕಣಗಳನ್ನು ಪಿಎಂ 2.5 ಎಂದು ಕರೆಯಲಾಗುತ್ತದೆ. ಇವು ಹೆಚ್ಚು ಅಪಾಯಕಾರಿಯಾದ ಕಣಗಳಾಗಿವೆ.

ಇಂಗಾಲದ ಡೈ ಆಕ್ಸೈಡ್‌, ಇಂಗಾಲದ ಮಾನಾಕ್ಸೈಡ್‌, ಸಾರಜನಕದ ಆಕ್ಸೈಡ್‌ನ ಕಣಗಳು ಈ ರೂಪದಲ್ಲಿ ಇರುತ್ತವೆ. ದೆಹಲಿಯ ಗಾಳಿಯಲ್ಲಿ ಕಂಡುಬಂದಿರುವುದು ಇದೇ ಕಣಗಳು.

ತೊಂದರೆಯೇನು?

ಇವು ತೀರಾ ಚಿಕ್ಕದಾಗಿರುವ ಕಾರಣ ಬರಿಗಣ್ಣಿಗೆ ಗೋಚರಿಸುವುದಿಲ್ಲ. 40 ‘ಪಿಎಂ 2.5’ ಕಣಗಳನ್ನು ಒಟ್ಟುಸೇರಿಸಿದರೆ ಮಾತ್ರ ಅವು ಬರಿಗಣ್ಣಿಗೆ ಗೋಚರಿಸುತ್ತವೆ. ಈ ಕಣಗಳ ಗಾತ್ರ ತೀರಾ ಸಣ್ಣದಾಗಿರುವ ಕಾರಣ ಮೂಗು ಮತ್ತು ಬಾಯಿಯ ಮೂಲಕ ಶ್ವಾಸಕೋಶವನ್ನು ಸುಲಭವಾಗಿ ಪ್ರವೇಶಿಸುತ್ತವೆ

ಪಿಎಂ 2.5’ ಮೂಲಗಳು

ಕೃಷಿತ್ಯಾಜ್ಯದ ದಹನ, ಕಾರ್ಖಾನೆಗಳು ಮತ್ತು ಉಷ್ಣವಿದ್ಯುತ್ ಸ್ಥಾವರ, ವಾಹನಗಳ ಹೊಗೆ, ಘನತ್ಯಾಜ್ಯ ದಹನ

ಪಿಎಂ 2.5’ ಕಣಗಳಿಂದ ಎದುರಾಗುವ ಸಮಸ್ಯೆಗಳು

ಕಣ್ಣಿನ ನವೆ, ಚರ್ಮದ ಅಲರ್ಜಿ, ಕೆಮ್ಮು, ನೆಗಡಿ, ಉಸಿರಾಟದ ತೊಂದರೆ, ಶ್ವಾಸಕೋಶದ ಕ್ಯಾನ್ಸರ್‌, ಹೃದಯ ಸಂಬಂಧಿ ಕಾಯಿಲೆ, ಹೃದಯಾಘಾತ, ಪಾರ್ಶ್ವವಾಯು.

ಯಾರಿಗೆಲ್ಲಾ ಅಪಾಯ?

ಶಿಶುಗಳು, ಮಕ್ಕಳು, ಗರ್ಭಿಣಿಯರು, ವೃದ್ಧರು

November 1, 2019 Posted by | ಭಾರತ, ರಾಷ್ಟ್ರೀಯ, ಸುಪ್ರೀಂಕೋರ್ಟ್, environment /endangered species, Flash News, General Knowledge, Health, India, Nation, News, News, Environment, ಸುದ್ದಿ, ಪರಿಸರ, ಸಾಮಾನ್ಯ ಜ್ಞಾನ, ವಿಜ್ಞಾನ, Spardha | , , , , , , , | Leave a comment

ಮುಂಬೈಯ ಬಹುತೇಕ ಭಾಗ ೨೦೫೦ ರ ವೇಳೆಗೆ ಸಮುದ್ರಕ್ಕೆ ಆಪೋಶನ?

30 mumbai-Artboard
ವಿಶ್ವದ ಹಲವು ದೊಡ್ಡ ಕರಾವಳಿ ನಗರಗಳೂ ಅಪಾಯದಲ್ಲಿ; ಉಪಗ್ರಹ
ಮಾಹಿತಿ ಆಧಾರಿತ ಹೊಸ ಸಂಶೋಧನಾ ವರದಿಯ ಎಚ್ಚರಿಕೆ

ನ್ಯೂಯಾರ್ಕ್:  ಹೊಸ ಸಂಶೋಧನೆಗಳ ಪ್ರಕಾರ, ಏರುತ್ತಿರುವ ಸಮುದ್ರಗಳು ೨೦೫೦ ರ ವೇಳೆಗೆ ಮುಂಬೈ ಸೇರಿದಂತೆ ವಿಶ್ವದ ಕೆಲವು ದೊಡ್ಡ ಕರಾವಳಿ ನಗರಗಳನ್ನು ಆಪೋಶನ ತೆಗೆದುಕೊಂಡು ಹಿಂದೆ ಯೋಚಿಸಿದ್ದುದಕ್ಕಿಂತ ಮೂರು ಪಟ್ಟು ಹೆಚ್ಚು ಜನರ ಮೇಲೆ ಪರಿಣಾಮ ಬೀರುವ ಅಪಾಯವಿದೆ ಎಂದು ಹೊಸ ಸಂಶೋಧನಾ ವರದಿಯೊಂದು ಎಚ್ಚರಿಕೆ ನೀಡಿತು.

ನಿಯತಕಾಲಿಕ ಒಂದರಲ್ಲಿ 2019 ಅಕ್ಟೋಬರ್ 29ರ ಮಂಗಳವಾರ ಪ್ರಕಟವಾದ ಸಂಶೋಧನಾ ಪ್ರಬಂಧದ ಲೇಖಕರು ಹಿಂದಿನ ಕಲ್ಪಿತ ಅಂಕಿಸಂಖ್ಯೆಗಳ ಬದಲಿಗೆ ಉಪಗ್ರಹ ಮಾಹಿತಿಯನ್ನು ಆಧರಿಸಿ ಭೂ ಎತ್ತರವನ್ನು ಲೆಕ್ಕಾಚಾರ ಮಾಡುವ ಹೆಚ್ಚು ನಿಖರವಾದ ಮಾರ್ಗವನ್ನು ಅಭಿವೃದ್ಧಿಪಡಿಸಿದ್ದು, ವಿಶಾಲ ಪ್ರದೇಶಗಳಲ್ಲಿ ಸಮುದ್ರ ಮಟ್ಟಏರಿಕೆಯ ಪರಿಣಾಮಗಳನ್ನು ಅಂದಾಜು ಮಾಡುವ ಪ್ರಮಾಣಿತ ಮಾರ್ಗವನ್ನು ಅನುಸರಿಸಿದ್ದಾರೆ ಎಂದು ವರದಿ ಹೇಳಿತು.

ಹೊಸ ಸಂಶೋಧನೆಯ ಪ್ರಕಾರ ಸುಮಾರು ೧೫೦ ಮಿಲಿಯನ್ (೧೫ ಕೋಟಿ) ಜನರು ಈಗ ವಾಸಿಸುತ್ತಿರುವ ಭೂಪ್ರದೇಶವು ಪ್ರಸ್ತುತ ಶತಮಾನದ ಮಧ್ಯಾವಧಿಯ ವೇಳೆಗೆ ಹೆಚ್ಚಿನ ಉಬ್ಬರವಿಳಿತದ ರೇಖೆಗಿಂತ ಕೆಳಗಿರುತ್ತದೆ. ಅಂದರೆ ಅಷ್ಟೂ ಮಂದಿ ನೀರಿನಡಿ ಮುಳುಗಡೆಯಾಗುವ ಪ್ರದೇಶದಲ್ಲಿ ವಾಸವಾಗಿದ್ದಾರೆ ಎಂದು ವರದಿ ಹೇಳಿತು.

ದಕ್ಷಿಣ ವಿಯೆಟ್ನಾಂ ಸಂಪೂರ್ಣ ಕಣ್ಮರೆ: ವಿಯೆಟ್ನಾಂನಲ್ಲಿ ಸುಮಾರು ೨೦ ದಶಲಕ್ಷಕ್ಕೂ (೨ ಕೋಟಿ) ಹೆಚ್ಚು ಜನರು, ಅಂದರೆ ಜನಸಂಖ್ಯೆಯ ಸುಮಾರು ಕಾಲು ಭಾಗದಷ್ಟು ಜನರು ಮುಳುಗಡೆ ವ್ಯಾಪ್ತಿಯಲ್ಲಿರುವ ಭೂಮಿಯಲ್ಲಿ ವಾಸಿಸುತ್ತಿದ್ದಾರೆ.

ನ್ಯೂಜೆರ್ಸಿ ಮೂಲದ ’ಕ್ಲೈಮೇಟ್ ಸೆಂಟ್ರಲ್’ ಎಂಬ ವಿಜ್ಞಾನ ಸಂಸ್ಥೆಯ ‘ನೇಚರ್ ಕಮ್ಯುನಿಕೇಷನ್ಸ್ ಜರ್ನಲ್’ ಪ್ರಕಟಿಸಿರುವ ಈ ಸಂಶೋಧನೆಯ ಪ್ರಕಾರ, ವಿಯೆಟ್ನಾಮಿನ ಆರ್ಥಿಕ ಕೇಂದ್ರವಾದ ಹೋ ಚಿ ಮಿನ್ಹ್ ನಗರ ಬಹುಪಾಲು ಕಣ್ಮರೆಯಾಗುತ್ತದೆ. ಭವಿಷ್ಯದ ಜನಸಂಖ್ಯೆಯ ಬೆಳವಣಿಗೆ ಅಥವಾ ಕರಾವಳಿ ಸವೆತಕ್ಕೆ ಕಳೆದುಹೋಗುವ ಭೂಮಿಯ ವಿವರಗಳನ್ನು ಈ ವರದಿ ನೀಡಿಲ್ಲ.

ಉಪಗ್ರಹಗಳನ್ನು ಬಳಸುವ ಪ್ರಮಾಣಿತ ಎತ್ತರದ ಮಾಪನಗಳು ನಿಜವಾದ ನೆಲದ ಮಟ್ಟವನ್ನು ಮರಗಳು ಅಥವಾ ಕಟ್ಟಡಗಳ ಮೇಲ್ಭಾಗದಿಂದ ಪ್ರತ್ಯೇಕಿಸಲು ಹೆಣಗಾಡುತ್ತವೆ ಈ ಕಾರಣಕ್ಕಾಗಿ ತಾವು ಮತ್ತು ಕ್ಲೈಮೇಟ್ ಸೆಂಟ್ರಲ್‌ನ  ಮುಖ್ಯಕಾರ್ಯನಿರ್ವಾಹಕ ಬೆಂಜಮಿನ್ ಸ್ಟ್ರಾಸ್‌ಕೃತಕ ಲೆಕ್ಕಾಚಾರದ ತಪ್ಪಿನ ಪ್ರಮಾಣವನ್ನು ನಿರ್ಧರಿಸಲು ಮತ್ತು ಅದನ್ನು ಸರಿಪಡಿಸಲು  ಬುದ್ಧಿಮತ್ತೆಯನ್ನು ಬಳಸಿರುವುದಾಗಿ ಎಂದು ಹವಾಮಾನ ಕೇಂದ್ರದ ಸಂಶೋಧಕ ಮತ್ತು ಸಂಶೋಧನಾ ಪ್ರಬಂಧದ ಲೇಖಕರಲ್ಲಿ ಒಬ್ಬರಾದ ಸ್ಕಾಟ್ ಎ. ಕುಲ್ಪ್ ಹೇಳಿದರು.

ಥೈಲ್ಯಾಂಡಿನಲ್ಲಿ  ಶೇಕಡಾ ೧೦ ಕ್ಕಿಂತ ಹೆಚ್ಚು ಜನರು  ೨೦೫೦ ರ ಹೊತ್ತಿಗೆ ಮುಳುಗಡೆಯಾಗುವ  ಭೂಮಿಯಲ್ಲಿ ಪ್ರಸ್ತುತ ವಾಸಿಸುತ್ತಿದ್ದಾರೆ, ಹಿಂದಿನ ಅಂದಾಜಿನ  ಪ್ರಕಾರ ಕೇವಲ ಶೇಕಡಾ ೧ರಷ್ಟು ಜನರು ಮಾತ್ರ ಮುಳುಗಡೆ ಪ್ರದೇಶದಲ್ಲಿ ಇದ್ದಾರೆ ಎಂದು ಭಾವಿಸಲಾಗಿತ್ತು. ದೇಶದ ರಾಜಕೀಯ ಮತ್ತು ವಾಣಿಜ್ಯ ರಾಜಧಾನಿ ಬ್ಯಾಂಕಾಕ್ ವಿಶೇಷವಾಗಿ ಈ ಅಪಾಯದ ವ್ಯಾಪ್ತಿಯಲ್ಲಿದೆ.

ಹವಾಮಾನ ಬದಲಾವಣೆಯು ನಗರಗಳ ಮೇಲೆ ಅನೇಕ ವಿಧಗಳಲ್ಲಿ ಒತ್ತಡವನ್ನುಂಟು ಮಾಡುತ್ತದೆ ಎಂದು ಬ್ಯಾಂಕಾಕ್ ನಿವಾಸಿ ಮತ್ತು ವಿಶ್ವಸಂಸ್ಥೆಯ ವಿಪತ್ತು ಅಪಾಯ ಇಳಿಕೆ ಅಧಿಕಾರಿ ಲೊರೆಟ್ಟಾ ಹೈಬರ್ ಗಿರಾರ್ಡೆಟ್ ಹೇಳಿದರು.  ಜಾಗತಿಕ ತಾಪಮಾನ ಏರಿಕೆಯಿಂದಾಗಿ ಹೆಚ್ಚಿನ ಸ್ಥಳಗಳು ಪ್ರವಾಹಗಳಿಗೆ ಬಲಿಯಾಗುತ್ತಿವೆ. ಇದು ಬಡರೈತರನ್ನು ಅವರ ನೆಲದಿಂದ ಹೊರದಬ್ಬಿ ಅವರು ನಗರಗಳಲ್ಲಿ ಕೆಲಸ ಅರಸುವಂತೆ ಮಾಡುತ್ತದೆ.

‘ಇದೊಂದು  ಭೀಕರ ಸೂತ್ರವಾಗಿದೆ’ ಎಂದು ಲೊರೆಟ್ಟಾ ನುಡಿದರು.

ಏಷ್ಯಾದ ಪ್ರಮುಖ ಆರ್ಥಿಕ ಯಂತ್ರಗಳಲ್ಲಿ ಒಂದಾದ ಶಾಂಘೈಯಲ್ಲಿ, ನಗರದ ಹೃದಯಭಾಗ ಮತ್ತು ಅದರ ಸುತ್ತುಮತ್ತಲಿನ ಇತರ  ಅನೇಕ ನಗರಗಳನ್ನು ನೀರು ಆಪೋಶನ ತೆಗೆದುಕೊಳ್ಳುವ ಅಪಾಯವಿದೆ.

ಅಧ್ಯಯನದ  ಅಂಕಿಸಂಖ್ಯೆಗಳು  ಆ ಪ್ರದೇಶಗಳ ಅಂತ್ಯವನ್ನು ಉಚ್ಚರಿಸಬೇಕಾಗಿಲ್ಲ.  ಹೊಸ ದತ್ತಾಂಶವು ೧೧೦ ದಶಲಕ್ಷ ಜನರು ಈಗಾಗಲೇ ಹೆಚ್ಚಿನ ಉಬ್ಬರವಿಳಿತದ ರೇಖೆಯ ಕೆಳಗಿರುವ ಸ್ಥಳಗಳಲ್ಲಿ ವಾಸಿಸುತ್ತಿದ್ದಾರೆ ಎಂದು ತೋರಿಸುತ್ತಿದೆ,  ಇದು ಸಮುದ್ರ ತಡೆಗೋಡೆಯಂತ ರಕ್ಷಣಾತ್ಮಕ ಕ್ರಮಗಳ ಅಗತ್ಯವನ್ನು ಸೂಚಿಸುತ್ತದೆ. ಅಂತಹ ರಕ್ಷಣಾತ್ಮಕ ಕ್ರಮಗಳಿಗಾಗಿ ಈ  ನಗರಗಳು ಹೆಚ್ಚಿನ ಮೊತ್ತವನ್ನು ಹೂಡಿಕೆ ಮಾಡಬೇಕು, ಮತು ಅವರು ಅದನ್ನು ಅತ್ಯಂತ ತ್ವರಿತವಾಗಿ ಮಾಡಬೇಕು ಎಂದು ಸ್ಟ್ರಾಸ್ ಸಲಹೆ ಮಾಡಿದರು.

ಆದರೆ ಆ ಹೂಡಿಕೆಗಳು ಕೂಡಾ ಎಷ್ಟರ ಮಟ್ಟಿಗೆ ಉಪಯುಕ್ತವಾಗಬಹುದು ಎಂದು ಹೇಳಲು ಸಾಧ್ಯವಿಲ್ಲ ಎಂದು ನುಡಿದ ಅವರು ೨೦೦೫ ರಲಿ ಕತ್ರಿನಾ ಚಂಡಮಾರುತ ಬೀಸಿದಾಗ ಸಮುದ್ರ ಮಟ್ಟಕ್ಕಿಂತ ಕೆಳಗಿದ್ದ  ನ್ಯೂಓರ್ಲಿಯನ್ಸ್ ನಗರವು  ನಾಶವಾದುದನ್ನು ಸ್ಟ್ರಾಸ್ ಉದಾಹರಿಸಿದರು. ಅಲ್ಲಿ ಸಾಕಷ್ಟು ರಕ್ಷಣಾತ್ಮಕ ಕ್ರಮಗಳನ್ನು ಕೈಗೊಂಡಿದ್ದರೂ ವಿನಾಶ ತಪ್ಪಿಸಲಾಗಲಿಲ್ಲ ಎಂದು ಅವರು ನುಡಿದರು .

ಮುಂಬೈ ಮುಳುಗಡೆ ಭೀತಿ:  ಹೊಸ ಅಧ್ಯಯನದ ಪ್ರಕಾರ ಭಾರತದ ವಾಣಿಜ್ಯ ರಾಜಧಾನಿ ಮತ್ತು ವಿಶ್ವದ ಅತಿದೊಡ್ಡ ನಗರಗಳಲ್ಲಿ ಒಂದಾದ ಮುಂಬೈಯ ಹೆಚ್ಚಿನ ಭಾಗವು ನಾಶವಾಗುವ ಅಪಾಯದಲ್ಲಿದೆ.  ಒಂದು ಕಾಲದಲ್ಲಿ ದ್ವೀಪಗಳ ಸರಣಿಯಾಗಿದ್ದ ನಗರದ ಐತಿಹಾಸಿಕ  ಕೆಳಪಟ್ಟಣ ವಿಶೇಷವಾಗಿ ದುರ್ಬಲ ಸ್ಥಳವಾಗಿದೆ.

ಒಟ್ಟಾರೆಯಾಗಿ, ಹೆಚ್ಚಿನ ನಾಗರಿಕರು ಆಂತರಿಕವಾಗಿ ಸ್ಥಳಾಂತರಗೊಳ್ಳಲು ದೇಶಗಳು ಈಗ ತಯಾರಿ ಪ್ರಾರಂಭಿಸಬೇಕು ಎಂದು ಸಂಶೋಧನೆ ತೋರಿಸುತ್ತದೆ  ಎಂದು ವಲಸೆ ಮತ್ತು ಅಭಿವೃದ್ಧಿಯ ಬಗ್ಗೆ ಕ್ರಮಗಳನ್ನು ಸಂಘಟಿಸುವ ಅಂತರ ಸರ್ಕಾರೀ  ಗುಂಪಿನ ಇಂಟರ್ನ್ಯಾಷನಲ್ ಆರ್ಗನೈಸೇಶನ್ ಫಾರ್ ಮೈಗ್ರೇಶನ್‌ನ ಡೀನಾ ಅಯೋನೆಸ್ಕೊ ಹೇಳಿದ್ದಾರೆ.

‘ನಾವು ಎಚ್ಚರಿಕೆಯ ಗಂಟೆಗಳನ್ನು ರಿಂಗಣಿಸಲು ಪ್ರಯತ್ನಿಸುತ್ತಿದ್ದೇವೆ’ ಎಂದು ಅಯೋನೆಸ್ಕೊ ಹೇಳಿದರು. ’ಅದು ಬರುತ್ತಿದೆ ಎಂದು ನಮಗೆ ತಿಳಿದಿದೆ. ಈ ಪ್ರಮಾಣದಲ್ಲಿ ಜನರು ಸ್ಥಳಾಂತರ ಮಾಡಬೇಕಾಗಿ ಬಂದಿರುವ ಆಧುನಿಕ ಪೂರ್ವನಿದರ್ಶನಗಳಿಲ್ಲ’  ಎಂದು ಅವರು ಹೇಳಿದರು.

ಸಾಂಸ್ಕೃತಿಕ ಪರಂಪರೆಯ ಕಣ್ಮರೆಯು ತನ್ನದೇ ಆದ ಮಾದರಿಯ ವಿನಾಶವನ್ನು ತರಬಹುದು. ಕ್ರಿ.ಪೂ ೩೩೦ ರ ಸುಮಾರಿಗೆ ಅಲೆಕ್ಸಾಂಡರ್ ದಿ ಗ್ರೇಟ್ ಸ್ಥಾಪಿಸಿದ ಈಜಿಪ್ಟಿನ ಅಲೆಕ್ಸಾಂಡ್ರಿಯಾ ಏರುತ್ತಿರುವ ಕಡಲ ನೀರಿನಲ್ಲಿ ಕಳೆದುಹೋಗಬಹುದು.

ಇತರ ಸ್ಥಳಗಳಲ್ಲಿ, ಏರುತ್ತಿರುವ ಸಮುದ್ರಗಳಿಂದ ಉಂಟಾಗುವ ವಲಸೆ ಪ್ರಾದೇಶಿಕ ಘರ್ಷಣೆಯನ್ನು ಪ್ರಚೋದಿಸಬಹುದು ಅಥವಾ ವಲಸೆ ಘರ್ಷಣೆಗಳನ್ನು ಉಲ್ಬಣಗೊಳಿಸಬಹುದು.

ಇರಾಕಿನ ಎರಡನೇ ಅತಿದೊಡ್ಡ ನಗರವಾದ ಬಸ್ರಾ ೨೦೫೦ ರ ಹೊತ್ತಿಗೆ ಬಹುತೇಕ ನೀರೊಳಗಿರಬಹುದು. ಅದು ಸಂಭವಿಸಿದಲ್ಲಿ, ಪರಿಣಾಮಗಳು ಇರಾಕಿನ ಗಡಿಯಾಚೆಯಲ್ಲೂ ಪ್ರತಿಫಲಿಸಬಹುದು ಎಂದು ಇರಾಕ್ ಸಮರಕಾಲದಲ್ಲಿ ಅಮೆರಿಕದ ಕೇಂದ್ರ ಕಮಾಂಡ್ ಮುಖ್ಯಸ್ಥರಾಗಿದ್ದ ಮೆರೈನ್ ಕಾರ್ಪ್ಸ್‌ನ ನಿವೃತ್ತ ಲೆಫ್ಟಿನೆಂಟ್ ಜನರಲ್ ಜಾನ್ ಕ್ಯಾಸ್ಟೆಲ್ಲಾವ್ ಹೇಳಿದರು.

ಏರುತ್ತಿರುವ ಸಮುದ್ರದ ನೀರಿಗೆ ನಷ್ಟವಾಗುವ ಭೂಮಿಯ ಪ್ರಮಾಣ ಇನ್ನಷ್ಟು ಹೆಚ್ಚಿದರೆ ಈ ಪ್ರದೇಶದಲ್ಲಿ ಮತ್ತಷ್ಟು ಸಾಮಾಜಿಕ ಮತು ರಾಜಕೀಯ ಅಸ್ಥಿರತೆ ಉಂಟಾಗಬಹುದು. ಸಶಸ್ತ್ರ ಸಂಘರ್ಷ ಮತ್ತು ಭಯೋತ್ಪಾದನೆಯನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆಗಳಿವೆ ಎಂದು ಈಗ ಹವಾಮಾನ ಮತ್ತು ಭದ್ರತಾ ಕೇಂದ್ರದ ಸಲಹಾ ಮಂಡಳಿಯಲ್ಲಿರುವ ಕ್ಯಾಸ್ಟೆಲ್ಲಾವ್ ನುಡಿದರು.

‘ಆದ್ದರಿಂದ ಇದು ಪರಿಸರ ಸಮಸ್ಯೆಗಿಂತ ಹೆಚ್ಚು ಆತಂಕಕಾರಿಯಾದ ವಿಷಯ ಮತ್ತು ಮಾನವೀಯ ಭದ್ರತೆ ಹಾಗೂ ಸಂಭವನೀಯ ಸೇನಾ ಸಮಸ್ಯೆ ಕೂಡಾ’ ಎಂದು ಎಂದು ಅವರು ಹೇಳಿದರು.

October 30, 2019 Posted by | ಭಾರತ, ರಾಷ್ಟ್ರೀಯ, ವಿಶ್ವ/ ಜಗತ್ತು, ಸಂಶೋಧನೆ, Flash News, General Knowledge, India, Nation, News, News, Environment, ಸುದ್ದಿ, ಪರಿಸರ, ಸಾಮಾನ್ಯ ಜ್ಞಾನ, ವಿಜ್ಞಾನ, Spardha, World | , | Leave a comment

ವಿಶ್ವದಲ್ಲೇ ಪ್ರಥಮ: ದೆಹಲಿ ನಿಲ್ದಾಣದಲ್ಲಿ ವಿಮಾನ ನಿರ್ವಹಣೆಗೆ ರೊಬೊಟಿಕ್ ಟ್ಯಾಕ್ಸಿ ಬೋಟ್

15 robotic taxi bot
ನವದೆಹಲಿ:
 ಪಯಾಣ ಮುಗಿಸಿ ಬಂದ ವಿಮಾನ ಮತ್ತು ಪಯಣ ಹೊರಡಲು ಸಜ್ಜಾಗಿ ರನ್ ವೇಗೆ ತೆರಳುವ ವಿಮಾನಗಳಲ್ಲಿ ಆಗುವ ಇಂಧನ ವ್ಯಯವನ್ನು ತಪ್ಪಿಸಲು ಪೈಲಟ್ ನಿರ್ದೇಶಿತ ಸೆಮಿ ರೊಬೋಟಿಕ್ ಟ್ಯಾಕ್ಸಿ ಬೋಟ್ ಎಂಬ ಹೆಸರಿನ ಟ್ರ್ಯಾಕ್ಟರ್ ಮಾದರಿಯ ಉಪಕರಣಗಳನ್ನು ವಿಶ್ವದಲ್ಲಿ ಇದೇ ಮೊದಲ ಬಾರಿಗೆ ಏರ್ ಇಂಡಿಯಾ ಬಳಸಲು ಆರಂಭಿಸಿತು.

ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರೊಬೋಟಿಕ್ ಟ್ಯಾಕ್ಸಿ ಬೋಟ್ ವ್ಯವಸ್ಥೆ ಮಾಡಲಾಗಿದ್ದು, ಇದು ಮೊದಲ ಬಾರಿಗೆ ಏರ್ ಬಸ್ – ೩೨೦ ದೆಹಲಿ- ಮುಂಬೈ ಎಐ ೬೬೫ ವಿಮಾನವನ್ನು  2019 ಅಕ್ಟೋಬರ್ 15ರ ಮಂಗಳವಾರ ರನ್ ವೇಗೆ ಎಳೆದು ತಂದು ನಿಲ್ಲಿಸಿತು.

ಸದ್ಯ ಏರ್ ಬಸ್ ವಿಮಾನಗಳಿಗೆ ಮಾತ್ರ ಈ ಸೇವೆ ಲಭ್ಯವಿದ್ದು ವಿಶ್ವದ ಯಾವುದೇ ಕಡೆಯಿಂದ ಬಂದ ಏರ್ ಬಸ್  ವಿಮಾನಗಳು ಇವುಗಳನ್ನು ಬಳಸಬಹುದು.

ಪಾರ್ಕಿಂಗ್ ಸ್ಥಳದಿಂದ ರನ್ ವೇಗೆ  ವಿಮಾನವನ್ನು ಎಳೆದು ತಂದು ನಿಲ್ಲಿಸುವ ಕೆಲಸವನ್ನು ಮಾತ್ರ ಸದ್ಯಕ್ಕೆ ಟ್ಯಾಕ್ಸಿ ಬೋಟ್‌ಗೆ ವಹಿಸಲಾಯಿತು.

ಏನಿದು ಟ್ಯಾಕ್ಸಿ ಬೋಟ್?

ಸಾಮಾನ್ಯವಾಗಿ ಬೇರೆಡೆಯಿಂದ ಬಂದು ನಿಂತ ವಾವನವನ್ನು ತುಸು ಆ ಕಡೆ ಅಥವಾ ಈ ಕಡೆಗೆ ತೆಗೆದುಕೊಂಡು ಹೋಗಲು ಟ್ರ್ಯಾಕ್ಟರ್ ಬಳಸುತ್ತಾರೆ. ಆದರೆ ಟ್ಯಾಕ್ಸಿ ಬೋಟ್ ಹಾಗಲ್ಲ. ಇದು ಸೆಮಿ ರೊಬೊಟಿಕ್ ಮಾದರಿಯದ್ದು. ಹೆಚ್ಚು ಸ್ವಯಂಚಾಲಿತವಾಗಿ ಕೆಲಸ ಮಾಡುತ್ತದೆ. ಪೈಲಟ್ ಸೂಚನೆ ಮೇರೆಗೆ ವಿಮಾನವನ್ನು ತೆಗೆದುಕೊಂಡು ಹೋಗಿ ಪಾರ್ಕಿಂಗ್ ಸ್ಥಳಕ್ಕೆ ಅಥವಾ ರನ್‌ವೇಗೆ  ತರುವ ಕೆಲಸವನ್ನು ಮಾಡಬಲ್ಲದು.

ವಿಮಾನದ ಎಂಜಿನ್ ಸಂಪೂರ್ಣ ಸ್ವಿಚ್ ಆಫ್ ಆಗಿದ್ದರೂ ಟ್ಯಾಕ್ಸಿ ಬೋಟ್ ಕಾರ್ಯನಿರ್ವಹಿಸುತ್ತದೆ. ಇದರಿಂದ ವಿಮಾನ ಇಳಿದ ಬಳಿಕ ರನ್ ವೇಗೆ  ಹೋಗುವಲ್ಲಿ ಅಥವಾ ರನ್‌ವೇಯಿಂದ ಪಾರ್ಕಿಂಗ್ ಜಾಗಕ್ಕೆ ಬರುವಲ್ಲಿ ಬೇಕಾಗುವ ಇಂಧನದ ಶೇ.೮೫ರಷ್ಟು ಉಳಿತಾಯವಾಗುತ್ತದೆ ಅಗಾಧ ಪ್ರಮಾಣದ ವಾಯುಮಾಲಿನ್ಯ ಕೂಡಾ ತಗ್ಗುತ್ತದೆ.

ಟ್ಯಾಕ್ಸಿಬೋಟ್ ವಿಮಾನದ ಮುಂದಿನ ಚಕ್ರವನ್ನು ಎತ್ತಿ ತನ್ನಲ್ಲಿ ಇಟ್ಟುಕೊಳ್ಳುತ್ತದೆ. ಈ ವೇಳೆ ಅದು ನಿಯಂತ್ರಣವನ್ನು ಪೈಲಟ್‌ಗೆ ವರ್ಗಾಯಿಸುತ್ತದೆ. ಟ್ಯಾಕ್ಸಿಬೋಟಿನಲ್ಲಿ ವಿಮಾನ ಇರುವ ಸಂದರ್ಭದಲ್ಲಿ ಟ್ರಾಫಿಕ್ ಕಂಟ್ರೋಲರ್, ವಿಮಾನ ನಿಲ್ದಾಣದ ನಿರ್ವಹಣೆಯವರಿಗೆ, ಪೈಲಟ್‌ಗೆ ಅದು ಸಂದೇಶಗಳನ್ನು ಕಳಿಸುತ್ತದೆ.

ವಾಯುಮಾಲಿನ್ಯವನ್ನು ನಿಗ್ರಹಿಸಲು ಮತ್ತು ವಿಮಾನಯಾನ ಸಂಸ್ಥೆಗಳಿಗೆ ಇಂಧನವನ್ನು ಉಳಿಸುವ ನಿಟ್ಟಿನಲ್ಲಿ ನೆರವಾಗಲು ಏರ್ ಇಂಡಿಯಾ ಟ್ಯಾಕ್ಸಿ ಬೋಟ್‌ಗಳನ್ನು ವ್ಯವಸ್ಥೆ ಮಾಡಿದೆ.

‘ಪೈಲಟ್-ನಿಯಂತ್ರಿತ ಅರೆ-ರೊಬೊಟಿಕ್ ಯಂತ್ರಗಳು’ ವಿಮಾನಗಳನ್ನು ಪಾರ್ಕಿಂಗ್ ಸ್ಥಳದಿಂದ ರನ್‌ವೇಗೆ ಅವುಗಳ ಎಂಜಿನ್ ಸ್ವಿಚ್ ಆಫ್ ಆಗಿದ್ದರೂ ಎಳೆದು ತರುವುದರಿಂದ ವಿಮಾನದ ಇಂಧನ ವ್ಯಯ ತಪ್ಪುತ್ತದೆ.

ಕಾನ್ಪುರ ಐಐಟಿಯು ನಡೆಸಿದ ಅಧ್ಯಯನವು ಈ ಟ್ಯಾಕ್ಸಿ ಬೋಟ್‌ನಿಂದ ವಿಮಾನದ ವಾಯುಮಾಲಿನ್ಯ ನಿಯಂತ್ರಣಕ್ಕೆ ಅನುಕೂಲವಾಗುತ್ತದೆ ಎಂದು ಹೇಳಿದೆ.

ಇದನ್ನು ಬಳಸುವುದರಿಂದ ವಿಮಾನವು ರನ್ ವೇ ಪ್ರಾರಂಭದ ಹಂತವನ್ನು ತಲುಪಿದಾಗ ಮಾತ್ರ ಟೇಕ್-ಆಫ್ಗಾಗಿ ಇಗ್ನಿಷನ್ ಆನ್ ಆಗುತ್ತದೆ. ಈ ಬೋಟನ್ನು ವಿಮಾನ ನಿರ್ಗಮನಕ್ಕೆ ಮಾತ್ರ ಸಧ್ಯಕ್ಕೆ ಬಳಸಲಾಗುವುದು. ಇವುಗಳ ಬಳಕೆಯಿಂದ ವಿಮಾನವನ್ನು ರನ್ ವೇ ವರೆಗೆ ಓಡಿಸಲು ಬಳಕೆಯಾಗುವ ಇಂಧನದ ಶೇಕಡಾ ೮೦ರಷ್ಟು ಇಂಧನ ನಷ್ಟ ತಪ್ಪಿಸಲು ಸಾಧ್ಯ ಎಂಬುದು ಸಾಬೀತಾಗಿದೆ ಎಂದು ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (ಡಿಐಎಎಲ್- ಡಯಲ್) ಅಧಿಕಾರಿಗಳು ತಿಳಿಸಿದರು.

ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ  ಟ್ಯಾಕ್ಸಿ ಬೋಟ್‌ನ್ನು ಹಾರಲು ಸಜ್ಜಾಗಿರುವ ಏಪ್ರನ್ ಪ್ರದೇಶದಲ್ಲಿ ನಿಂತಿರುವ ವಿಮಾನದ ಬಳಿಗೆ ಒಯ್ದು ವಿಮಾನಕ್ಕೆ ಜೋಡಿಸಲಾಗುತ್ತದೆ. ಟ್ಯಾಕ್ಸಿಬೋಟ್ ವಿಮಾನದ ಮೂಗಿನ ಚಕ್ರವನ್ನು ಹಿಡಿದು ಸ್ವಲ್ಪ ಎತ್ತುತ್ತದೆ. ಆಗ ವಿಮಾನದ ಪೈಲಟ್ ವಿಮಾನದ ಎಂಜಿನನ್ನು ಚಾಲನೆ ಮಾಡದೆಯೇ ರೊಬೋಟಿಕ್ ಟ್ಯಾಕ್ಸಿ ಬೋಟ್ ಮೂಲಕ ವಿಮಾನವನ್ನು ಟರ್ಮಿನಲ್ ಗೇಟ್‌ನಿಂದ ರನ್‌ವೇಗೆ ಓಡಿಸುತ್ತಾನೆ.  ವಿಮಾನ ಹಾರುವುದಕ್ಕೆ  ಸ್ವಲ್ಪ ಮುನ್ನ ಅಭ್ಯಾಸ ಮತ್ತು ತಾಂತ್ರಿಕ ತಪಾಸಣೆಗಳನ್ನು ಸಕ್ರಿಯಗೊಳಿಸುವ ಸಲುವಾಗಿ ವಿಮಾನದ ಎಂಜಿನನ್ನು ಚಾಲನೆಗೊಳಿಸಲಾಗುತ್ತದೆ ಎಂದು ಎಂದು ಡಯಲ್ ಅಧಿಕಾರಿ ವಿವರಿಸಿದರು.

ಹಾಲಿ ವ್ಯವಸ್ಥೆಯಲ್ಲಿ ಪ್ರಯಾಣಿಕರು ವಿಮಾನ ಏರಿದ ಬಳಿಕ ವಿಮಾನದ ಎಂಜಿನ್‌ಗಳು ಚಾಲನೆಗೊಳುತ್ತವೆ ಮತ್ತು ತನ್ನ ನಿಯೋಜಿತ ರನ್ ವೇ ತಲುಪುವವರೆಗೂ ಚಾಲನೆಯಲ್ಲಿಯೇ ಇರುತ್ತವೆ. ಹೀಗಾಗಿ ಅಷ್ಟು ಹೊತ್ತೂ ವಿಮಾನದ ಇಂಧನ ವ್ಯಯವಾಗುತ್ತಿರುತ್ತದೆ.

ವಿಮಾನವನ್ನು ಒಯ್ಯಲು ಬಳಸಲಾಗುವ ಈ ಟ್ಯಾಕ್ಸಿ ಬೋಟ್ ಗರಿಷ್ಠ ೨೩ ಗಂಟೆಗಳ ವೇಗವನ್ನು ಪಡೆಯಬಹುದು.

ಟ್ಯಾಕ್ಸಿ ಬೋಟ್ ಬಳಕೆಯಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಹಲವು ವಿಧದ ಅನುಕೂಲಗಳು ಲಭಿಸಲಿವೆ. ಟ್ಯಾಕ್ಸಿಬೋಟ್‌ಗಳು ಬೋರ್ಡಿಂಗ್ ಗೇಟುಗಳಲ್ಲಿನ ದಟ್ಟಣೆಯನ್ನು ಕಡಿಮೆ ಮಾಡುತ್ತವೆ, ಇದರ ಜೊತೆಗೆ ಇಂಗಾಲದ ಡೈ ಆಕ್ಸೈಡ್ ಮತ್ತು ಇತರ ಹಾನಿಕಾರಕ ಅನಿಲಗಳ ಹೊರಸೂಸುವಿಕೆ ಗಮನಾರ್ಹವಾಗಿ ತಗ್ಗುತ್ತದೆ. ಏಪ್ರನ್ ಪ್ರದೇಶದಲ್ಲಿ ಜೆಟ್ ಸ್ಫೋಟದ ಅಪಾಯವನ್ನೂ ಇದು ಕಡಿಮೆ ಮಾಡುತ್ತದೆ ಎಂದು ಅಧಿಕಾರಿಗಳು ಹೇಳಿದರು.

ಟ್ಯಾಕ್ಸಿ ಬೋಟ್ ಬಳಕೆಯಿಂದ ವಿಮಾನಯಾನ ಸಂಸ್ಥೆಗಳಿಗೆ ಇಂಧನ ಉಳಿತಾಯದ ಜೊತೆಗೆ ವಿಮಾನದ ಬ್ರೇಕ್‌ಗಳಿಗೆ ಆಗುವ ಹಾನಿ ಕಡಿಮೆಯಾಗುತ್ತದೆ. ವಿಮಾನವು ಬ್ರೇಕ್‌ಗಳನ್ನು ಅನ್ವಯಿಸಿದಾಗಲೆಲ್ಲಾ, ವಿಮಾನದ ಸಂಪೂರ್ಣ ತೂಕವು ಮೂಗಿನ ಚಕ್ರದಲ್ಲಿರುತ್ತದೆ. ಟ್ಯಾಕ್ಸಿ ಬೋಟ್ ಬಳಸಿದಾಗ ಸಂಪೂರ್ಣ ಒತ್ತಡವು  ಟ್ಯಾಕ್ಸಿ ಬೋಟ್ ಮೇಲೆ ಇರುತ್ತದೆ, ಇದರಿಂದ ಬ್ರೇಕ್ ಮೇಲಿನ ಹಾನಿ ಕಡಿಮೆಯಾಗುತ್ತದೆ ಎಂದು ಅವರು ನುಡಿದರು.

ಈ ಉಪಕ್ರಮವು ವಿಮಾನ ನಿಲ್ದಾಣ ಮತ್ತು ಆಸುಪಾಸಿನ ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟವನ್ನು ಗಮನಾರ್ಹವಾಗಿ ಸುಧಾರಿಸುತ್ತದೆ. ಶಬ್ದ ಮಾಲಿನ್ಯ ಮತ್ತು ಇಂಧನ ಮಾಲಿನ್ಯವನ್ನು ಕಡಿಮೆ ಮಾಡಲು ಸಹ ಇದು ಸಹಾಯ ಮಾಡುತ್ತದೆ. ಎಂದು ಅವರು ಹೇಳಿದರು.

ಟ್ಯಾಕ್ಸಿ ಬೋಟ್‌ಗಳ ಪ್ರಯೋಗವನ್ನು  ಕೆಎಸ್‌ಯು ಏವಿಯೇಷನ್ ಪ್ರೈವೇಟ್ ಲಿಮಿಟೆಡ್‌ನ ಸಹಯೋಗದೊಂದಿಗೆ ಸೆಪ್ಟೆಂಬರಿನಲ್ಲಿ ನಡೆಸಲಾಗಿತ್ತು. ಕೆಎಸ್‌ಯು ಏವಿಯೇಷನ್ ಪ್ರೈವೇಟ್ ಲಿಮಿಟೆಡ್ ಒದಗಿಸಿರುವ ಟ್ಯಾಕ್ಸಿ ಬೋಟ್‌ಗಳನ್ನು  ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ (ಐಎಐ) ಅಭಿವೃದ್ಧಿಪಡಿಸಿದೆ.

October 15, 2019 Posted by | Auto World, ಆಟೋ ಜಗತ್ತು, ಆರ್ಥಿಕ, ತಂತ್ರಜ್ಞಾನ, ಪೈಲಟ್, ಭಾರತ, ರಾಷ್ಟ್ರೀಯ, ವಿಮಾನ, ವಿಶ್ವ/ ಜಗತ್ತು, ಸಂಶೋಧನೆ, Commerce, Finance, Flash News, General Knowledge, Health, India, Nation, News, News, Environment, ಸುದ್ದಿ, ಪರಿಸರ, ಸಾಮಾನ್ಯ ಜ್ಞಾನ, ವಿಜ್ಞಾನ, Spardha, Technology, World | , , , , , , | Leave a comment

ಸಮುದ್ರ ದಡದಲ್ಲಿ ಕಸ ಆಯ್ದು ಸ್ವಚ್ಛತೆಯ ಸಂದೇಶ ಸಾರಿದ ಪ್ರಧಾನಿ ಮೋದಿ

12 modi plogging
ಚೆನ್ನೈ
: ಪ್ರಧಾನಿ ಮೋದಿ 2019 ಅಕ್ಟೋಬರ್ 12ರ ಶನಿವಾರ ಬೆಳ್ಳಂಬೆಳಗ್ಗೆ ಮಹಾಬಲಿಪುರಂನಲ್ಲಿರುವ ಸಮುದ್ರ ದಂಡೆಯಲ್ಲಿ ಕಸ ತೆಗೆಯುವ (ಪ್ಲಾಗಿಂಗ್ = ಪ್ಲಾಸ್ಟಿಕ್ ಹೆಕ್ಕುತ್ತಾ ಜಾಗಿಂಗ್ ಮಾಡುವುದು) ಕೆಲಸ ಮಾಡುವ ಮೂಲಕ ಜನರಿಗೆ ಸ್ವಚ್ಛತೆಯ ಸಂದೇಶ ಸಾರಿದರು. ಸದ್ಯ ಈ ವಿಡಿಯೋ ಎಲ್ಲೆಡೆ ಭಾರೀ ವೈರಲ್​ ಆಯಿತು. ದೇಶದ ಪ್ರಧಾನಿ ಇಂತಹ ಸ್ವಚ್ಛತಾ ಕಾರ್ಯ ಮಾಡಿರುವುದು ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.

ಪ್ರಧಾನಿ ಮೋದಿ ಸುಮಾರು 30 ನಿಮಿಷಕ್ಕೂ ಹೆಚ್ಚು ಕಾಲ ಸಮುದ್ರದ ತೀರದಲ್ಲಿ ವಾಕಿಂಗ್ ಮಾಡಿದರು. ಇದೇ ವೇಳೆ ಅಲ್ಲಿ ಬಿದ್ದಿದ್ದ ಪ್ಲಾಸ್ಟಿಕ್​ ತ್ಯಾಜ್ಯಗಳು, ಮತ್ತಿತರ ಕಸವನ್ನು ಬ್ಯಾಗ್​ವೊಂದಕ್ಕೆ ತುಂಬಿಸಿದರು. ಈ ವಿಡಿಯೋವನ್ನು ಮೋದಿ ಟ್ವಿಟರ್​ನಲ್ಲಿ ಹಂಚಿಕೊಂಡರು.

“ಇಂದು ಬೆಳಗ್ಗೆ ಮಹಾಬಲಿಪುರಂನ ಸಮುದ್ರ ತೀರವೊಂದರಲ್ಲಿ ಪ್ಲಾಗಿಂಗ್​  ಮಾಡಿದೆ. ಈ ವೇಳೆ ಸಮುದ್ರದ ದಡದಲ್ಲಿ ಬಿದ್ದಿದ್ದ ಕಸವನ್ನು ಬ್ಯಾಗ್​ಗೆ ತುಂಬಿಸಿದೆ. ಬಳಿಕ ಆ ಬ್ಯಾಗನ್ನು ಹೋಟೆಲ್​ ಸಿಬ್ಬಂದಿ ಜಯರಾಜ್​ಗೆ ಕೊಟ್ಟೆ. ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಟ್ಟುಕೊಳ್ಳೋಣ. ಜೊತೆಗೆ ನಾವು ಸಹ ಸದೃಢ ಹಾಗೂ ಆರೋಗ್ಯವಾಗಿರಬೇಕು,” ಎಂದು ಮೋದಿ ಟ್ವೀಟ್​ ಮಾಡಿದರು. ಪ್ಲಾಗಿಂಗ್ ಎಂದರೆ ವಾಕ್ ಮಾಡುತ್ತಾ ಅಥವಾ ಜಾಗಿಂಗ್ ಮಾಡುತ್ತಾ ರಸ್ತೆಯಲ್ಲಿ ಬಿದ್ದ ಕಸವನ್ನು ಆಯ್ದು ಸ್ವಚ್ಛಗೊಳಿಸುವುದು.

ಮಹಾಬಲಿಪುರಂ ಸಮುದ್ರ ತೀರದಲ್ಲಿ ಮನಸ್ಸಿಗೆ ಆಹ್ಲಾದ ಉಂಟು ಮಾಡುವ ನಡಿಗೆ ಎಂದು ಮೋದಿ ಮತ್ತೊಂದು ಟ್ವೀಟ್​ನಲ್ಲಿ ಬರೆದುಕೊಂಡರು.

ಪ್ರಧಾನಿ ಮೋದಿ ಚೀನಾ ಅಧ್ಯಕ್ಷ ಕ್ಷಿ ಜಿನ್​ಪಿಂಗ್​ ಜೊತೆ ಅನೌಪಚಾರಿಕ ಸಭೆ ನಡೆಸಲು ತಮಿಳುನಾಡಿನ ಮಹಾಬಲಿಪುರಂಗೆ ಬಂದಿದ್ದರು.

October 14, 2019 Posted by | ನರೇಂದ್ರ ಮೋದಿ, ಪ್ರಧಾನಿ, ಭಾರತ, ರಾಷ್ಟ್ರೀಯ, environment /endangered species, Flash News, General Knowledge, India, Nation, News, News, Environment, ಸುದ್ದಿ, ಪರಿಸರ, ಸಾಮಾನ್ಯ ಜ್ಞಾನ, ವಿಜ್ಞಾನ, Spardha, World | , , , | Leave a comment

ಆರೇ ಕಾಲೋನಿ: ಮುಂಬೈ ಮೆಟ್ರೋ ಕಡಿದಾಗಿದೆ 2,141 ಮರ..!

07 aarey-2
ಇಷ್ಟರಲ್ಲೇ ಶುರು ತೆರವು ಜಾಗದಲ್ಲಿ ನಿರ್ಮಾಣ ಚಟುವಟಿಕೆ

ಮುಂಬೈ:  ನಗರದ ’ಹಸಿರು ಶ್ವಾಸಕೋಶ’ದಲ್ಲಿ ಹೆಚ್ಚಿನ ಮರಗಳನ್ನು ಕಡಿಯುವುದನ್ನು ಸುಪ್ರೀಂ ಕೋರ್ಟ್ ತಡೆಹಿಡಿದ ಕೆಲವೇ ಗಂಟೆಗಳ ನಂತರ, ಉತ್ತರ ಮುಂಬೈನ ಆರೇ ಕಾಲೋನಿಯಲ್ಲಿ ೨,೧೪೧ ಮರಗಳನ್ನು ಕಾರ್ ಶೆಡ್ ನಿರ್ಮಾಣಕ್ಕಾಗಿ ಈಗಾಗಲೇ ಕತ್ತರಿಸಲಾಗಿದೆ ಎಂದು ಮುಂಬೈ ಮೆಟ್ರೋ ರೈಲು ನಿಗಮ (ಎಂಎಂಆರ್ ಸಿ)  2019 ಅಕ್ಟೋಬರ್ 07ರ ಸೋಮವಾರ ಪ್ರಕಟಿಸಿತು .

ಸುಪ್ರೀಂ ಕೋರ್ಟ್ ಯಾವುದೇ ಹೆಚ್ಚಿನ ನಿರ್ದೇಶನಗಳನ್ನು ನೀಡುವವರೆಗೂ ಈ ಸ್ಥಳದಲ್ಲಿ ಭವಿಷ್ಯದ ಮರ ಕಡಿಯುವಿಕೆಯನ್ನು ಕೈಗೊಳ್ಳಲಾಗುವುದಿಲ್ಲ . ಆದರೆ ಮರವನ್ನು ತೆರವುಗೊಳಿಸಿದ ಪ್ರದೇಶದಲ್ಲಿ ನಿರ್ಮಾಣ ಚಟುವಟಿಕೆಗಳನ್ನು ಪ್ರಾರಂಭಿಸಲಾಗುವುದು ಎಂದು ಎಂಎಂಆರ್ ಸಿ ಪ್ರಕಟಣೆ ತಿಳಿಸಿತು.

ಎಂಎಂಆರ್ ಸಿ  ಹೇಳಿಕೆಯು “ಯಥಾಸ್ಥಿತಿ (ಉಳಿಸಿಕೊಳ್ಳಬೇಕು) … ಎಂಬ ಸುಪ್ರೀಂಕೋರ್ಟ್ ಆದೇಶವು  ಮರಗಳನ್ನು ಕಡಿಯುವುದಕ್ಕೆ ಸಂಬಂಧಿಸಿದಂತೆ ಮಾತ್ರ” ಎಂಬುದಾಗಿ ರಾಜ್ಯ ಸರ್ಕಾರವು ವ್ಯಕ್ತ ಪಡಿಸಿದ  ಅಭಿಪ್ರಾಯಕ್ಕೆ ಅನುಗುಣವಾಗಿರುವುದನ್ನು ದೃಢಪಡಿಸಿತು.

ಈದಿನದ  ವಿಚಾರಣೆಯ ಸಮಯದಲ್ಲಿ, ಮರಗಳನ್ನು ಕಡಿಯುವುದರ ವಿರುದ್ಧದ ಅರ್ಜಿಯನ್ನು ಆಲಿಸಿದ ವಿಶೇಷ ಸುಪ್ರೀಂ ಕೋರ್ಟ್ ಪೀಠವು ಆರೇ ಪ್ರದೇಶವು “ಯಾವುದೇ   ಅಭಿವೃದ್ಧಿ ರಹಿತ ವಲಯ”  ಎಂದು  ಹೇಳಿತ್ತು. ಅರ್ಜಿದಾರರು ಹೇಳಿದಂತೆ  ಪರಿಸರ ಸೂಕ್ಷ್ಮ ವಲಯವಲ್ಲ ಎಂದು ಅದು ಅಭಿಪ್ರಾಯಪಟ್ಟಿತ್ತು. ’ಯಾವುದೇ ಅಭಿವೃದ್ಧಿ ರಹಿತ  ವಲಯ’ದಲ್ಲಿ ನಿರ್ಮಾಣ ಚಟುವಟಿಕೆಯನ್ನು ಕೈಗೊಳ್ಳಲು ಸಾಧ್ಯವಿಲ್ಲ.

ಮೂಲ ಯೋಜನೆ ಪ್ರಕಾರ ೨,೬೪೬ ಮರಗಳನ್ನು ಕಡಿಯಲು ಉದ್ದೇಶಿಸಲಾಗಿತ್ತು.  ಆದರೆ ಈದಿನ, ಮಹಾರಾಷ್ಟ್ರ ಸರ್ಕಾರವು  “ಕತ್ತರಿಸಬೇಕಾದದ್ದನ್ನು ಈಗಾಗಲೇ ಮಾಡಲಾಗಿದೆ”,  ಈಗಾಗಲೇ ತೆರವುಗೊಳಿಸಿದ ಪ್ರದೇಶದಲ್ಲಿ ಶೆಡ್ ಅನ್ನು ನಿರ್ಮಿಸುವುದಾಗಿ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಆರೇ  ಕಾಲೊನಿಯನ್ನು ಅರಣ್ಯವೆಂದು ಘೋಷಿಸಲು ಬಾಂಬೆ ಹೈಕೋರ್ಟ್ ನಿರಾಕರಿಸಿದ ಕೆಲವೇ ಗಂಟೆಗಳಲ್ಲಿ ಎಂಎಂಆರ್ ಸಿ ಎಲ್  ಮರಗಳನ್ನು ಕಡಿಯಲು ಪ್ರಾರಂಭಿಸಿತ್ತು ಮತ್ತು  ಪರಿಸರ ಕಾರ್ಯಕರ್ತರ  ಮತ್ತು ಸ್ಥಳೀಯ ನಿವಾಸಿಗಳ ತೀವ್ರ ವಿರೋಧದ ನಡುವೆಯೂ ಹಸಿರು ವಲಯದಲ್ಲಿ ಮರಗಳನ್ನು ಕಡಿಯಲು ಅನುಮತಿ ನೀಡುವ ಮುಂಬೈ ಮಹಾನಗರ ಪಾಲಿಕೆಯ ನಿರ್ಧಾರವನ್ನು ರದ್ದುಗೊಳಿಸಲು ನಿರಾಕರಿಸಿತು.

ಎಂಎಂಆರ್ ಸಿ ಎಲ್  ನಡೆಸಿದ ನಡುರಾತ್ರಿಯ  ಕಾರ್ಯಾಚರಣೆಯು ತೀವ್ರ ಕೋಪತಾಪದ ಪ್ರತಿಭಟನೆಗೆ ಕಾರಣವಾಯಿತು. ಮರಗಳನ್ನು ಕಡಿಯುವಾಗ ಪೊಲೀಸ್ ಸಿಬ್ಬಂದಿಗೆ ಅಡ್ಡಿಪಡಿಸಿ ಹಲ್ಲೆ ಮಾಡಿದ ಆರೋಪದಲ್ಲಿ  ೨೯ ಪ್ರತಿಭಟನಾಕಾರರನ್ನು ಬಂಧಿಸಲಾಗಿತ್ತು.

ಈಗಾಗಲೇ ೨೩,೮೪೬ ಮರಗಳನ್ನು ನೆಟ್ಟಿದೆ ಮತ್ತು ಹೆಚ್ಚುವರಿಯಾಗಿ ೨೫,೦೦೦ ಸಸಿಗಳನ್ನು ತನ್ನ ಹಸಿರು ಉಪಕ್ರಮಗಳ ಭಾಗವಾಗಿ ವಿತರಿಸಿದೆ ಎಂದು  ತನ್ನ ಕಾರ್ಯಾಚರಣೆಗೆ ಸಮರ್ಥನೆಯಾಗಿ ಎಂಎಂಆರ್ ಸಿಎಲ್   ಪ್ರತಿಪಾದಿಸಿದೆ.

ಕಾನೂನು ಮತ್ತು ಇತರ ಅಡೆತಡೆಗಳ ಕಾರಣದಿಂದಾಗಿ ಈಗಾಗಲೇ ೬ ತಿಂಗಳಿಗಿಂತ ಹೆಚ್ಚು ವಿಳಂಬವಾಗಿದೆ. ಆದರೂ ಗಡುವಿನ ಒಳಗಾಗಿ ಕೆಲಸವನ್ನು ಪೂರೈಸುವ ನಿರೀಕ್ಷೆ ನಮ್ಮದು’ ಎಂದು  ಎಂಎಂಆರ್ ಎಲ್  ಹೇಳಿಕೆ ತಿಳಿಸಿದೆ.

October 7, 2019 Posted by | ಆರ್ಥಿಕ, ತಂತ್ರಜ್ಞಾನ, ಭಾರತ, ರಾಷ್ಟ್ರೀಯ, ಸುಪ್ರೀಂಕೋರ್ಟ್, environment /endangered species, Flash News, General Knowledge, Health, Nation, News, News, Environment, ಸುದ್ದಿ, ಪರಿಸರ, ಸಾಮಾನ್ಯ ಜ್ಞಾನ, ವಿಜ್ಞಾನ, Politics, Spardha, supreme court, Technology | , , , , , , , , , , , | Leave a comment

ಆರೇ ಕಾಲೋನಿ ಮರಗಳಿಗೆ ‘ಸುಪ್ರೀಂ ‘ ರಕ್ಷಣೆ, ಯಥಾಸ್ಥಿತಿಗೆ ಆದೇಶ

07 arrey-SC spardha web
ಮುಂದಿನ ವಿಚಾರಣೆ ಅಕ್ಟೋಬರ್ ೨೧ಕ್ಕೆ

ನವದೆಹಲಿ: ಹಸಿರು ಕಾರ್ಯಕರ್ತರಿಗೆ ಕೆಲವು ಒಳ್ಳೆಯ ಸುದ್ದಿಯೊಂದರಲ್ಲಿ, ಸುಪ್ರೀಂ ಕೋರ್ಟ್ 2019 ಅಕ್ಟೋಬರ್  07ರ ಸೋಮವಾರ ಮುಂಬೈಯ ಆರೇ ಕಾಲೋನಿಯಲ್ಲಿ ಮೆಟ್ರೊ ಕಾರ್  ಶೆಡ್ ಸ್ಥಾಪಿಸಲು ಮರಗಳನ್ನು ಕಡಿಯುವುದನ್ನು ತಡೆ ನೀಡಿ, ಯಥಾಸ್ಥಿತಿ ಪಾಲನೆಗೆ ಆದೇಶ ನೀಡಿತು.

ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ ಮತ್ತು ಅಶೋಕ್ ಭೂಷಣ್ ಅವರನ್ನೊಳಗೊಂಡ ವಿಶೇಷ ನ್ಯಾಯಪೀಠವು ವಿಷಯವನ್ನು  ಸಮಗ್ರವಾಗಿ ಪರಿಶೀಲಿಸಬೇಕಾಗಿದೆ ಎಂದು ಹೇಳಿ, ವಿಷಯವನ್ನು ಅಕ್ಟೋಬರ್ ೨೧ ರಂದು ತನ್ನ ಅರಣ್ಯ ಪೀಠದ ಮುಂದೆ ವಿಚಾರಣೆಗೆ  ನಿಗದಿ ಪಡಿಸಿತು.  “ಈಗ ಏನನ್ನೂ ಕತ್ತರಿಸಬೇಡಿ” ಎಂದು ನ್ಯಾಯಪೀಠ   ನಿರ್ದೇಶಿಸಿತು.

ಮರಗಳ ನಾಶವನ್ನು  ಪ್ರತಿಭಟಿಸಿದ್ದಕ್ಕಾಗಿ  ಯಾರಾದರೂ ಇನ್ನೂ ಬಂಧನದಲ್ಲಿದ್ದರೆ, ವೈಯಕ್ತಿಕ ಬಾಂಡ್‌ಗಳ ಮೇಲೆ  ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಆಜ್ಞಾಪಿಸಿತು.  ಆರೇಯಲ್ಲಿ ಮರ ಕಡಿಯುವುದನ್ನು ವಿರೋಧಿಸಿ ಬಂಧನಕ್ಕೊಳಗಾದ ಎಲ್ಲರನ್ನೂ ಬಿಡುಗಡೆ ಮಾಡಲಾಗಿದೆ ಎಂದು ವಿಚಾರಣೆಯ ವೇಳೆ ಮಹಾರಾಷ್ಟ್ರ ಸರ್ಕಾರವು ನ್ಯಾಯಪೀಠಕ್ಕೆ ತಿಳಿಸಿತು.

ರಾಜ್ಯ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು  ತಮಗೆ ಎಲ್ಲಾ ದಾಖಲೆಗಳ ಬಗ್ಗೆ ತಿಳಿದಿಲ್ಲ ಎಂದು ಹೇಳಿ,  ಪ್ರಕರಣವು ತೀರ್ಮಾನವಾಗುವವರೆಗೂ ಆರೇಯಲ್ಲಿ ಏನನ್ನೂ ಕಡಿಯುವುದಿಲ್ಲ ಎಂದು ನ್ಯಾಯಪೀಠಕ್ಕೆ ಭರವಸೆ ನೀಡಿದರು.

ಆರೇ  ಅರಣ್ಯವನ್ನು ರಾಜ್ಯ ಸರ್ಕಾರವು  “ವರ್ಗೀಕರಿಸದ ಅರಣ್ಯ” ಎಂದು ಪರಿಗಣಿಸಿದೆ ಮತ್ತು ಅಲ್ಲಿ ಮರಗಳನ್ನು ಕಡಿಯುವುದು ಕಾನೂನುಬಾಹಿರ ಎಂದು ಸಾರ್ವಜನಿಕ ಹಿತಾಸಕ್ತಿ ಖಟ್ಲೆಯ ( ಪಿಐಎಲ್) ಅರ್ಜಿದಾರರು ನ್ಯಾಯಪೀಠಕ್ಕೆ ತಿಳಿಸಿದರು.

ಆದರೆ, ಮಹಾರಾಷ್ಟ್ರ ಸರ್ಕಾರ ಹೊರಡಿಸಿದ ಅಧಿಸೂಚನೆಯನ್ನು ಅವಲೋಕಿಸಿದ ನಂತರ, ನ್ಯಾಯಪೀಠವು ಆರೆ ಪ್ರದೇಶವು ಅಭಿವೃದ್ಧಿಯಿಲ್ಲದ ವಲಯವಾಗಿದೆ ಮತ್ತು ಅರ್ಜಿದಾರರು ಹೇಳಿದಂತೆ  ಪರಿಸರ ಸೂಕ್ಷ್ಮ ವಲಯವಲ್ಲ ಎಂದು ಅಭಿಪ್ರಾಯಪಟ್ಟಿತು.

ಮರಗಳನ್ನು ಕಡಿಯುವುದನ್ನು ತಡೆಹಿಡಿಯಬೇಕೆಂದು ಕೋರಿ ಕಾನೂನು ವಿದ್ಯಾರ್ಥಿ ರಿಶವ್ ರಂಜನ್ ಅವರು  ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರಿಗೆ ಬರೆದ ಪತ್ರವನ್ನು ಸಾರ್ವಜನಿಕ ಹಿತಾಸಕ್ತಿ ಖಟ್ಲೆಯಾಗಿ (ಪಿಐಎಲ್) ಆಗಿ ನೋಂದಾಯಿಸಲು ಸುಪ್ರೀಂ ಕೋರ್ಟ್ 2019 ಅಕ್ಟೋಬರ್ 06ರ ಭಾನುವಾರ ನಿರ್ಧರಿಸಿತ್ತು.  ವಿಶೇಷ ನ್ಯಾಯಪೀಠವನ್ನು ರಚಿಸುವ ಮೂಲಕ ತುರ್ತು ವಿಚಾರಣೆಯನ್ನು ನಡೆಸುವ ಬಗ್ಗೆ ಸುಪ್ರೀಂ ಕೋರ್ಟ್ ವೆಬ್‌ಸೈಟ್‌ನಲ್ಲಿ ನೋಟಿಸ್  ಪ್ರಕಟಿಸಲಾಗಿತ್ತು

ಅಕ್ಟೋಬರ್ ೪ ರಂದು ಬಾಂಬೆ ಹೈಕೋರ್ಟ್ ಆರೇ ಕಾಲೊನಿಯನ್ನು ಅರಣ್ಯವೆಂದು ಘೋಷಿಸಲು  ಮತ್ತು ಹಸಿರು ವಲಯದಲ್ಲಿ ೨,೬೦೦ ಕ್ಕೂ ಹೆಚ್ಚು ಮರಗಳನ್ನು ಕಡಿಯಲು ನಿರಾಕರಿಸಿ,  ಮೆಟ್ರೊ ಕಾರ್ ಶೆಡ್ ಸ್ಥಾಪಿಸಲು ಅನುಮತಿ ನೀಡುವ ಮುಂಬೈ ಮಹಾನಗರ ಪಾಲಿಕೆಯ ನಿರ್ಧಾರವನ್ನು ರದ್ದುಗೊಳಿಸಬೇಕೆಂಬ ಮನವಿಯನ್ನು ತಿರಸ್ಕರಿಸಿತ್ತು.

ಹೈಕೋರ್ಟ್ ತೀರ್ಪಿನ ಬೆನ್ನಲ್ಲೇ  ಮುಂಬೈ ಮೆಟ್ರೋ  ರೈಲು ನಿಗಮವು ಮರಗಳನ್ನು ಕಡಿಯಲು ಪ್ರಾರಂಭಿಸಿತು ಮತ್ತು ಅಂದಾಜಿನ ಪ್ರಕಾರ ಈಗಾಗಲೇ ೧,೦೦೦ ಕ್ಕೂ ಹೆಚ್ಚು ಮರಗಳನ್ನು ಕತ್ತರಿಸಿತು.

ಸುಪ್ರೀಂಕೋರ್ಟೆಗೆ ಬರೆದ ಪತ್ರದಲ್ಲಿ ಕಾನೂನು ವಿದ್ಯಾರ್ಥಿ  ರಿಶವ್ ರಂಜನ್ ಅವರು , “ನಾವು ನಿಮಗೆ ಈ ಪತ್ರವನ್ನು ಬರೆಯುತ್ತಿರುವಂತೆಯೇ ಮುಂಬೈ ಅಧಿಕಾರಿಗಳು ಮಿಥಿ ನದಿ ತೀರಕ್ಕೆ ಸಮೀಪವಿರುವ ಮರಗಳನ್ನು ತೆರವುಗೊಳಿಸುವ ಮೂಲಕ ಮುಂಬೈನ ಶ್ವಾಸಕೋಶವನ್ನು ಅಂದರೆ ಆರೇ ಅರಣ್ಯ ನಾಶವನ್ನು  ಮುಂದುವರೆಸಿದ್ದಾರೆ. ಸುದ್ದಿ ವರದಿಗಳ ಪ್ರಕಾರ ೧,೫೦೦ ಮರಗಳನ್ನು ಈಗಾಗಲೇ ಅಧಿಕಾರಿಗಳು ತೆರವುಗೊಳಿಸಿದ್ದಾರೆ”  ಎಂದು ತಿಳಿಸಿದ್ದರು.

‘ಇದಲ್ಲದೆ, ನಮ್ಮ ಸ್ನೇಹಿತರನ್ನು ಜೈಲಿನಲ್ಲಿ ಇರಿಸಲಾಗಿದೆ, ಅವರು ಗ್ರೇಟರ್ ಮುಂಬೈ ಮುನಿಸಿಪಲ್  ಕಾರ್ಪೊರೇಷನ್  (ಎಂಸಿಜಿಎಂ)  ಮುಂಬೈ ಮೆಟ್ರೋ ರೈಲು ನಿಗಮದ  (ಎಂಎಂಆರ್ ಸಿ) ಕ್ರಮಗಳ ವಿರುದ್ಧ ಶಾಂತಿಯುತ ಜನ ಜಾಗೃತಿ ನಡೆಸುತ್ತಿದ್ದಾಗ   ಅವರನ್ನು ಬಂಧಿಸಲಾಗಿದೆ ‘  ಎಂದು ರಿಶವ್ ಬರೆದಿದ್ದರು.

‘ಸರಿಯಾದ ಮೇಲ್ಮನವಿ ಅರ್ಜಿಯನ್ನು ತಯಾರಿಸಲು ಸಮಯವಿಲ್ಲದ ಕಾರಣ ಮತ್ತು ಗಂಭೀರ ಪರಿಸರ ಕಾಳಜಿಗಳಿಗಾಗಿ ನಿಂತಿರುವ ಜವಾಬ್ದಾರಿಯುತ ನಾಗರಿಕರಾಗಿರುವ ಈ ಯುವ ಕಾರ್ಯಕರ್ತರನ್ನು ರಕ್ಷಿಸುವ ಸಲುವಾಗಿ  ತಾಂತ್ರಿಕತೆಗಳನ್ನು ಗಮನಿಸದೆ  ಪ್ರಕರಣದ ಮಹತ್ವ ಗಮನಿಸಿ ನ್ಯಾಯಾಲಯವು ಎಪಿಸ್ಟೊಲರಿ ನ್ಯಾಯವ್ಯಾಪ್ತಿಯನ್ನು ಚಲಾಯಿಸಬೇಕು ಎಂದು ವಿದ್ಯಾರ್ಥಿ ಸುಪ್ರೀಂ ಕೋರ್ಟ್‌ಗೆ ವಿನಂತಿಸಿದ್ದರು.

ಮರ ಕಡಿಯುವಿಕೆಯ ವಿರುದ್ಧ “ಶಾಂತಿಯುತ  ಜನಜಾಗೃತಿಯಲ್ಲಿ ನಡೆಸುತ್ತಿದ್ದ  ೨೯ ಕಾರ್ಯಕರ್ತರ ಜಾಮೀನು ಅರ್ಜಿಯನ್ನು ಬಾಂಬೆ ಹೈಕೋರ್ಟ್ ತಿರಸ್ಕರಿಸಿದ್ದರಿಂದ ವಿದ್ಯಾರ್ಥಿಗಳು ಸುಪ್ರೀಂ ಕೋರ್ಟ್‌ಮೆಟ್ಟಿಲೇರಿದ್ದಾರೆ ಎಂದು ಎಂದು ಪತ್ರ ಹೇಳಿತ್ತು.

’ಸಾರ್ವಜನಿಕ ಸೇವಕನ ಮೇಲೆ ತನ್ನ ಕರ್ತವ್ಯವನ್ನು ನಿರ್ವಹಿಸದಂತೆ ತಡೆಯಲು  ಹಲ್ಲೆ ನಡೆಸಲಾಗಿದೆ’ ಎಂದು  ವಿದ್ಯಾರ್ಥಿ-ಕಾರ್ಯಕರ್ತರನ್ನು ನಿಂದಿಸಿ ಅವರ ಮೇಲೆ ಕೈ ಮಾಡಿದ ಪೊಲೀಸರು ಐಪಿಸಿ ಅಡಿಯಲ್ಲಿ ’ಕಾನೂನುಬಾಹಿರ ಸಭೆ’ ನಡೆಸಿದ  ಅಪರಾಧಗಳಿಗಾಗಿ ಅವರನ್ನು ಬಂಧಿಸಿದೆ ಎಂದೂ ಅವರು ತಿಳಿಸಿದ್ದರು.

ಪತ್ರದ ಪ್ರಕಾರ, ಆರೆ ಅರಣ್ಯವು ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನವನದ ಪಕ್ಕದಲ್ಲಿದೆ ಮತ್ತು ಐದು ಲಕ್ಷ ಮರಗಳನ್ನು ಹೊಂದಿದೆ.

ಮುಂಬೈ ಮೆಟ್ರೋ -೩ ಯೋಜನೆಗಾಗಿ ಮತ್ತು ನಿರ್ದಿಷ್ಟವಾಗಿ ಕಾರ್ ಶೆಡ್ ನಿರ್ಮಾಣಕ್ಕಾಗಿ ಮರಗಳನ್ನು ಕಡಿಯಲು ಪ್ರಸ್ತಾಪಿಸಲಾಗಿತ್ತು, ಮತ್ತು ಆರೇ ಪ್ರದೇಶವನ್ನು ಅರಣ್ಯವೆಂದು ಗುರುತಿಸಲು ಅಥವಾ ಅದನ್ನು ಪರಿಸರ ಸೂಕ್ಷ್ಮ ವಿಷಯವೆಂದು ಘೋಷಿಸಲು ನ್ಯಾಯವ್ಯಾಪ್ತಿಯ ಮಿತಿಗಳಿಂದಾಗಿ ಹೈಕೋರ್ಟ್ ನಿರಾಕರಿಸಿದೆ ಎಂದು  ಪತ್ರ ತಿಳಿಸಿತ್ತು.

ಪೊಲೀಸರು ಶನಿವಾರ ಆರೇಯಲ್ಲಿ ಅಪರಾಧ ದಂಡ ಸಂಹಿತೆಯ ಸೆಕ್ಷನ್ ೧೪೪ ಅಡಿಯಲ್ಲಿ ನಿರ್ಬಂಧಕಾಜ್ಞೆ ವಿಧಿಸಿ, ಗುಂಪುಗೂಡುವಿಕೆಯನ್ನು  ನಿರ್ಬಂಧಿಸಿದ್ದರು. ಪ್ರದೇಶವನ್ನು ಸುತ್ತುವರಿದ ಪೊಲೀಸರು  ಘರ್ಷಣೆಯ ನಂತರ ಇಪ್ಪತ್ತೊಂಬತ್ತು ಕಾರ್ಯಕರ್ತರನ್ನು ಬಂಧಿಸಿದ್ದರು. ನಂತರ ಅವರನ್ನು ಭಾನುವಾರ ಬಿಡುಗಡೆ ಮಾಡಲಾಗಿತ್ತು.

ಈ ಕ್ರಮವು  ಆಡಳಿತಾರೂಢ  ಮೈತ್ರಿಕೂಟದ ಮಿತ್ರ ಪಕ್ಷಗಳಾದ  ಶಿವಸೇನೆ ಮತ್ತು ಬಿಜೆಪಿ ನಡುವಿನ ಒಳಜಗಳಕ್ಕೂ ಹೇತುವಾಗಿದೆ. ಶಿವ ಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ  ‘ಶೀಘ್ರದಲ್ಲೇ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಮತ್ತುಮರಗಳ ಕೊಲೆಗಡುಕರಿಗೆ  ಪಾಠ ಕಲಿಸುತ್ತದೆ’ ಎಂದು ಹೇಳಿದ್ದರು.

ಯುವಸೇನಾ ಮುಖ್ಯಸ್ಥ ಮತ್ತು ಚುನಾವಣಾ ಕಣಕ್ಕೆ ಇದೇ ಮೊದಲ ಬಾರಿಗೆ ಪ್ರವೇಶಿಸಿದ  ಆದಿತ್ಯ  ಠಾಕ್ರೆ ಆದಿತ್ಯ ಠಾಕ್ರೆ  ಪರಿಸರ ಕಾರ್ಯಕರ್ತರನ್ನು ಬೆಂಬಲಿಸಿದ್ದರು..

“ಹೊಸತರ ನಿರ್ಮಾಣಕ್ಕಾಗಿ ಕೆಲವೊಂದು  ವಿನಾಶ ಅನಿವಾರ್ಯ” ಎಂದು ಮುಂಬೈ ಮೆಟ್ರೋ ಮುಖ್ಯಸ್ಥೇ ಸ್ಥ ಅಶ್ವಿನಿ ಭಿಡೆ ಭಾನುವಾರ  ಟ್ವೀಟ್ ಮಾಡಿದ್ದರು.

October 7, 2019 Posted by | ಆರ್ಥಿಕ, ತಂತ್ರಜ್ಞಾನ, ಭಾರತ, ರಾಷ್ಟ್ರೀಯ, ಸುಪ್ರೀಂಕೋರ್ಟ್, environment /endangered species, Finance, Flash News, General Knowledge, Health, India, Nation, News, News, Environment, ಸುದ್ದಿ, ಪರಿಸರ, ಸಾಮಾನ್ಯ ಜ್ಞಾನ, ವಿಜ್ಞಾನ, Politics, Spardha, supreme court, Technology | , , , , , , , , , , , | 1 Comment

ಮುಂಬೈಯ ಆರೇ ಕಾಲೋನಿ: ಮೆಟ್ರೋಕಾರ್ ಶೆಡ್‌ಗಾಗಿ ಮರಗಳಿಗೆ ಕೊಡಲಿ

This slideshow requires JavaScript.

ತೀವ್ರ ಪ್ರತಿಭಟನೆ, ೩೮ ಜನರ ಸೆರೆ, ಬಂಧಿತರ ಜಾಮೀನಿಗೆ ನಕಾರ,
ತಡೆ ಕೋರಿದ ಹೊಸ ಅರ್ಜಿಗೂ ತಿರಸ್ಕಾರ

ಮುಂಬೈ:  ಮಹಾನಗರದ ಆರೇ ಕಾಲೋನಿಯಲ್ಲಿ ಮುಂಬೈ ಮೆಟ್ರೋ ರೈಲು ಕಾರ್ಪೋರೇಷನ್ನಿನ (ಎಂಎಂಆರ್‌ಸಿ) ಮೆಟ್ರೋ ಕಾರು ಶೆಡ್ ನಿರ್ಮಾಣಕ್ಕಾಗಿ ಸಹಸ್ರಾರು ಮರಗಳ ನಾಶವನ್ನು ವಿರೋಧಿಸಿ ಪ್ರತಿಭಟಿಸಿದ ೩೮ ಮಂದಿಯನ್ನು ಪೊಲೀಸರು  2019 ಅಕ್ಟೋಬರ್ 05ರ ಶನಿವಾರ ಬಂಧಿಸಿದ್ದು, ಅವರ ಜಾಮೀನು ಅರ್ಜಿಗಳನ್ನು ನ್ಯಾಯಾಲಯ ತಿರಸ್ಕರಿಸಿತು. ಇದರ ಜೊತೆಗೆ ಮರಗಳ ನಾಶಕ್ಕೆ ತಡೆ ಕೋರಿ ಪರಿಸರ ಕಾರ್ಯಕರ್ತರು ಸಲ್ಲಿಸಿದ ಹೊಸ ಅರ್ಜಿಯನ್ನೂ ಬಾಂಬೆ ಹೈಕೋರ್ಟ್ ತಳ್ಳಿ ಹಾಕಿತು.

ಮರ ಕಡಿಯುವುದನ್ನು ಪ್ರತಿಭಟಿಸಿದ ೩೮ ಮಂದಿ ಪರಿಸರ ಕಾರ್ಯಕರ್ತರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಲಯ ಅವರಿಗೆ ಸೋಮವಾರದವರೆಗೆ ನ್ಯಾಯಾಂಗ ಬಂಧನವನ್ನು ವಿಧಿಸಿತು. ಇವರ ಹೊರತಾಗಿ ೫೫ ಮಂದಿಯನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

ಈಮಧ್ಯೆ ಆರೇ ಕಾಲೋನಿಯಲ್ಲಿ ಮರಗಳನ್ನು ಕಡೆಯುವುದಕ್ಕೆ ತೀವ್ರ ಪ್ರತಿಭಟನೆ ವ್ಯಕ್ತವಾಗಿರುವುದರ ನಡುವೆ ಮರಕಡಿಯಲು ಶುಕ್ರವಾರ ಒಪ್ಪಿಗೆ ನೀಡಿದ್ದ ಬಾಂಬೆ ಹೈಕೋರ್ಟ್, ಮರ ಕಡಿಯುವುದಕ್ಕೆ ತಡೆಯಾಜ್ಞೆ ಕೋರಿ ಪರಿಸರವಾದಿಗಳು ಹೊಸದಾಗಿ ಸಲ್ಲಿಸಿದ ಅರ್ಜಿಯನ್ನೂ  ಈದಿನ  ತಿರಸ್ಕರಿಸಿತು.

“ಮರಗಳನ್ನು ಕಡಿಯಲು ಮುನಿಸಿಪಲ್ ಕಾರ್ಪೋರೇಷನ್ನಿನ  ಮರ ಪ್ರಾಧಿಕಾರವು ಸೆಪ್ಟೆಂಬರ್ ೧೩ರಂದು ಅನುಮತಿ ನೀಡಿತ್ತು. ಹೈಕೋರ್ಟ್ ಮರ ಕಡಿಯುವುದರ ವಿರುದ್ಧ ಸಲ್ಲಿಸಲಾಗಿದ್ದ ನಾಲ್ಕು ಅರ್ಜಿಗಳನ್ನು ವಜಾಗೊಳಿಸಿದ್ದಲ್ಲದೆ, ಕ್ಷುಲ್ಲಕ ಅರ್ಜಿ ಸಲ್ಲಿಸಿದ್ದಕ್ಕಾಗಿ ೫೦,೦೦೦ ರೂಪಾಯಿ ದಂಡವನ್ನೂ ವಿಧಿಸಿದೆ’ ಎಂದು ಎಂಎಂಆರ್‌ಸಿ ಆಡಳಿತ ನಿರ್ದೇಶಕಿ ಅಶ್ವಿನಿ ಭಿಡೆ ಹೇಳಿದರು.

‘ಅವರ ಚಟುವಟಿಕೆಗಳು ಅಕ್ರಮವಷ್ಟೇ ಅಲ್ಲ, ಭಂಡತನದ್ದೂ ಆಗಿವೆ. ನೀವು ನ್ಯಾಯಾಲಯದಲ್ಲಿ ಸೋತರೆ, ಗೌರವಪೂರ್ವಕವಾಗಿ ಅದನ್ನು ಅಂಗೀಕರಿಸುವುದು ಒಳ್ಳೆಯದು, ಬೀದಿಗೆ ಒಯ್ಯುವುದಲ್ಲ’ ಎಂದು ಆಕೆ ಟ್ವೀಟ್ ಮಾಡಿದರು.

ಆರೇಯಲ್ಲಿ ಮರಗಳನ್ನು ಕಡಿಯಲು ಹೊಸದಾಗಿ ಅನುಮತಿ ಪಡೆಯಬೇಕು ಎಂಬ ಪರಿಸರವಾದಿಗಳ ಪ್ರತಿಪಾದನೆಯನ್ನು ಮುಂಬೈ ಮೆಟ್ರೋ ರೈಲು ನಿಗಮವು (ಎಂಎಂಆರ್‌ಸಿ) ತಳ್ಳಿಹಾಕಿತು.

ಹಿಂದಿನ ದಿನ ತಡರಾತ್ರಿ ಎಂಎಂಆರ್‌ಸಿಯು ಮುಂಬೈ ಮೆಟ್ರೋದ ಮೂರನೇ ಹಂತಕ್ಕಾಗಿ ಕಾರು ಶೆಡ್ ನಿರ್ಮಿಸಲು ಕಡಿಯಲು ಆರಂಭಿಸಿದಾಗ ಆರೇ ಕಾಲೋನಿಯಲ್ಲಿ ಪ್ರತಿಭಟನೆ ಭುಗಿಲೆದ್ದಿತ್ತು.

ಎಂಎಂಆರ್‌ಸಿ ಆಡಳಿತ ನಿರ್ದೇಶಕಿ ಅಶ್ವಿನಿ ಭಿಡೆ ಅವರು ಸರಣಿ ಟ್ವೀಟ್‌ಗಳ ಮೂಲಕ ಪರಿಸರವಾದಿಗಳು ನ್ಯಾಯಾಲಯದಲ್ಲಿ ತಮಗೆ ಆಗಿರುವ ಪರಾಭವವನ್ನು ಗೌರವಪೂರ್ವಕವಾಗಿ ಅಂಗೀಕರಿಸಬೇಕು ಎಂದು ಆಗ್ರಹಿಸಿದರು.

ಮೆಟ್ರೋ ಯೋಜನೆಗಾಗಿ ೨,೫೦೦ಕ್ಕೂ ಹೆಚ್ಚು ಮರಗಳನ್ನು ಕಡಿಯಲು ನ್ಯಾಯಾಲಯ ಒಪ್ಪಿಗೆ ನೀಡಿದ ಒಂದು ದಿನದ ಬಳಿಕ ಪ್ರತಿಭಟನಕಾರರು ತಮ್ಮ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಿದ ಹಿನ್ನೆಲೆಯಲ್ಲಿ ಆರೇಯನ್ನು ಸಂಪರ್ಕಿಸುವ ರಸ್ತೆಗಳಲ್ಲಿ ಸೆಕ್ಷನ್ ೧೪೪ರ ಅಡಿಯಲ್ಲಿ ಪ್ರತಿಬಂಧಕಾಜ್ಞೆ ಜಾರಿಗೊಳಿಸಲಾಯಿತು.

ಆರೇ ಪ್ರದೇಶವು ಕಾಡು ಎಂಬುದಾಗಿ ಮಾನ್ಯ ಮಾಡಲು ಹೈಕೋರ್ಟ್  ಅಕ್ಟೋಬರ್ 4ರ ಶುಕ್ರವಾರ ನಿರಾಕರಿಸಿ, ಅಧಿಕಾರಿಗಳಿಗೆ ಮುಂಬೈ ಮೆಟ್ರೋಕ್ಕಾಗಿ ಶೆಡ್ ನಿರ್ಮಿಸಲು ಮರಗಳನ್ನು ಕಡಿಯಲು ಅನುಮತಿ ನೀಡಿತ್ತು. ನ್ಯಾಯಾಲಯದ ಆದೇಶವನ್ನು ತತ್ ಕ್ಷಣವೇ ಪಾಲಿಸಿದ ಅಧಿಕಾರಿಗಳು ಶನಿವಾರ ನಸುಕಿನ ೩.೧೫ರ ವೇಳೆಯಲ್ಲಿ ಪೊಲೀಸರ ನೆರವಿನೊಂದಿಗೆ ಸುಮಾರು ೨೦೦ ಮರಗಳನ್ನು ಕಡೆದಿದ್ದಾರೆ ಎಂದು ಪರಿಸರ ಕಾರ್‍ಯಕರ್ತರು ಆಪಾದಿಸಿದ್ದಾರೆ.

ಇದರ ಬೆನ್ನಲ್ಲೇ ಆರೇ ಹೋರಾಟ ರಾಜಕೀಯ ತಿರುವು ಪಡೆದುಕೊಂಡಿತು. ವಿರೋಧ ಪಕ್ಷಗಳು ಮಾತ್ರವೇ ಅಲ್ಲ, ಬಿಜಿಪಿಯ ಮಹಾರಾಷ್ಟ್ರದ ಮಿತ್ರ ಪಕ್ಷ ಶಿವಸೇನೆ ಕೂಡಾ ಸರ್ಕಾರದ ನಿರ್ಧಾರವನ್ನು ಟೀಕಿಸಿತು. ಪೊಲೀಸರು ಬಂಧಿಸಿರುವ ಪ್ರತಿಭಟನಕಾರರಲ್ಲಿ ಶಿವಸೇನಾ ನಾಯಕಿ ಪ್ರಿಯಾಂಕ ಚತುರ್ವೇದಿ ಕೂಡಾ ಸೇರಿದ್ದಾರೆ. ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿದ ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ ’ನಮ್ಮ ಸರ್ಕಾರವು ಶೀಘ್ರದಲ್ಲೇ ಅಧಿಕಾರಕ್ಕೆ ಬರಲಿದೆ ಮತ್ತು ಮರಗಳ ಈ ಕೊಲೆಗಡುಕರನ್ನು ಏನು ಮಾಡಬೇಕು ಎಂದು ನಾವು ನೋಡುತ್ತೇವೆ’ ಎಂದು ಹೇಳಿದರು.

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ಉದ್ಧವ್ ಠಾಕ್ರೆ ಪುತ್ರ ಯುವ ಸೇನಾ ಮುಖ್ಯಸ್ಥ ಆದಿತ್ಯ ಠಾಕ್ರೆ ಕೂಡಾ ಮರಗಳನ್ನು ಕಡಿಯುವ ಕ್ರಮವನ್ನು ಖಂಡಿಸಿದರು.

ಮುಂಬೈ ಮೆಟ್ರೋ ನಿಗಮವು ಅತ್ಯಂತ ತ್ವರಿತವಾಗಿ ಮರಗಳನ್ನು ಕಡಿದು ಆರೇ ಪರಿಸರಕ್ಕೆ ಹಾನಿ ಉಂಟುತ್ತಿರುವುದು ನಾಚಿಕೆಗೇಡು ಮತ್ತು ಭ್ರಮನಿರಸನದಾಯಕ. ಈ ಅಧಿಕಾರಿಗಳನ್ನು ಪಾಕ್ ಆಕ್ರಮಿಕ ಕಾಶ್ಮಿರದಲ್ಲಿ ನಿಯೋಜಿಸಿ, ಮರಗಳನ್ನು ಕಡಿಯುವ ಬದಲಿಗೆ ಭಯೋತ್ಪಾದನಾ ಶಿಬಿರಗಳನ್ನು ನಾಶ ಪಡಿಸುವ ಹೊಣೆಗಾರಿಕೆ ವಹಿಸಿದರೆ ಹೇಗೆ?’ ಎಂದು ಟ್ವೀಟ್ ಮಾಡಿದರು.

ಈ ಕೋಲಾಹಲದ ಮಧ್ಯೆ ಕೇಂದ್ರ ಪರಿಸರ ಸಚಿವ ಪ್ರಕಾಶ ಜಾವಡೇಕರ್ ಅವರು ದೆಹಲಿ ಹಾಗೂ ಮುಂಬೈ ಮಧ್ಯೆ ಕೆಲವು ಸಾಮ್ಯತೆಗಳಿವೆ ಎಂದು ಪ್ರತಿಪಾದಿಸಿದರು. ’ಬಾಂಬೆ ಹೈಕೋರ್ಟ್ ಆರೇಯು ಕಾಡು ಅಲ್ಲ ಎಂಬುದಾಗಿ ತೀರ್ಪು ನೀಡಿದೆ. ದೆಹಲಿಯಲ್ಲಿ ಮೊದಲ ಮೆಟ್ರೋ ನಿಲ್ದಾಣ ನಿರ್ಮಿಸುವಾಗ ೨೦-೨೫ ಮರಗಳನ್ನು ಕಡಿಯಲಾಗಿತ್ತು. ಜನರು ಆಗಲೂ ಪ್ರತಿಭಟಿಸಿದ್ದರು. ಆದರೆ ಕಡಿದ ಪ್ರತಿಯೊಂದು ಮರಕ್ಕೆ ಬದಲಿಯಾಗಿ ೫ ಮರಗಳನ್ನು ನೆಟ್ಟು ಬೆಳೆಸಲಾಗಿದೆ ಎಂದು ಸಚಿವರು ಹೇಳಿದರು.

ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ ಜೊತೆ ಜೊತೆಯಾಗಿ ಸಾಗಬಲ್ಲುದು ಎಂಬುದಕ್ಕೆ ದೆಹಲಿ ಉತ್ತಮ ಉದಾಹರಣೆಯಾಗಿದೆ. ಮುಂಬೈಯಲ್ಲೂ ಇದು ಸಾಧ್ಯ ಎಂದು ಅವರು ಪ್ರತಿಪಾದಿಸಿದರು.

೧,೨೮೭ ಹೆಕ್ಟೇರ್ ವ್ಯಾಪ್ತಿಯ ಆರೇ ಕಾಲೋನಿ ಮೆಟ್ರೋಪಾಲಿಟನ್ ನಗರದ ಪ್ರಮುಖ ಹಸಿರು ತಾಣವಾಗಿರುವ ಸಂಜಯ್ ಗಾಂಧಿ ನ್ಯಾಷನಲ್ ಪಾರ್ಕಿಗೆ ಸೇರಿಕೊಂಡಂತಿರುವ ಪ್ರದೇಶವಾಗಿದೆ. ಹಲವಾರು ಬಾಲಿವುಡ್ ಗಣ್ಯರು ಮತ್ತು ರಾಜಕಾರಣಿಗಳು ಕೂಡಾ ಆರೇ ಕಾಲೋನಿಯಲ್ಲಿ ಮರಗಳನ್ನು ಕಡಿಯುವುದರ ವಿರುದ್ಧ ಪರಿಸರವಾದಿಗಳು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿದರು.

ಹಸಿರುಮಯವಾಗಿದೆ ಎಂಬ ಕಾರಣಕ್ಕಾಗಿ ಆರೇಯನ್ನು ಕಾಡು ಎಂಬುದಾಗಿ ಘೋಷಿಸಲು ಸಾಧ್ಯವಿಲ್ಲ ಎಂದು ಮಹಾರಾಷ್ಟ್ರ ಸರ್ಕಾರವು ಸೆಪ್ಟಂಬರ್ ೨೦ರಂದು ನ್ಯಾಯಾಲಯಕ್ಕೆ ತಿಳಿಸಿತ್ತು.

ಯೋಜನೆಯು ಮುಂಬೈ ಮಹಾನಗರಕ್ಕೆ ಅತ್ಯಂತ ಅಗತ್ಯವಾದ ಯೋಜನೆಯಾಗಿದ್ದು ದೂರಗಾಮೀ ಮಹತ್ವವನ್ನು ಹೊಂದಿದೆ ಎಂದು ಮುಂಬೈ ಮೆಟ್ರೋ ರೈಲು ನಿಗಮ ನಿಯಮಿತವು ಪ್ರತಿಪಾದಿಸಿದೆ. ’ಸ್ಥಳೀಯ ಉಪನಗರ ರೈಲುಗಳಲ್ಲಿ ಜನಸಂದಣಿಯಿಂದಾಗಿ ಪ್ರತಿದಿನ ೧೦ ಪ್ರಯಾಣಿಕರು ಸಾವನ್ನಪ್ಪುತ್ತಾರೆ. ಮೆಟ್ರೋ ಯೋಜನೆಯು ಈ ಜನಸಂದಣಿಯ ಒತ್ತಡವನ್ನು ನಿವಾರಿಸಲಿದೆ’ ಎಂದು ಎಂಎಂಆರ್‌ಸಿಎಲ್ ವಕೀಲ ಅಶುತೋಶ್ ಕುಂಭಕೋಣಿ ಹೇಳಿದರು.

ಪತ್ರಿಕಾಹೇಳಿಕೆಯೊಂದನ್ನು ನೀಡಿರುವ ಪೊಲೀಸರು ಪ್ರತಿಭಟಿಸುತ್ತಿದ್ದ ೧೦೦ರಿಂದ ೨೦೦ರಷ್ಟು ಜನರ ಪೈಕಿ ಕೆಲವರು ಪೊಲೀಸ್ ಅಧಿಕಾರಿಗಳ ಜೊತೆಗೆ ಘರ್ಷಣೆಗೆ ಇಳಿದರು ಮತ್ತು ಹಲ್ಲೆ ನಡೆಸಿದರು. ಇದನ್ನು ಅನುಸರಿಸಿ ೬ ಮಹಿಳೆಯರು ಸೇರಿದಂತೆ ೨೯ ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

ಬಂಧಿತರನ್ನು ಸ್ಥಳೀಯ ನ್ಯಾಯಾಲಯದಲ್ಲಿ ಹಾಜರು ಪಡಿಸಲಾಯಿತು. ಅಸಂಖ್ಯಾತ ಪ್ರತಿಭಟನಕಾರರನ್ನು ಬಲವಂತವಾಗಿ ಆರೇ ಚೆಕ್ ಪೋಸ್ಟಿನಿಂದ ತೆರವುಗೊಳಿಸಿ ಗೋರೆಗಾಂವ್ ಸ್ಥಳೀಯ ಪೊಲೀಸ್ ಠಾಣೆಗೆ ಒಯ್ಯಲಾಯಿತು ಎಂದು ಪೊಲೀಸರು ಹೇಳಿದರು.

ಇದಕ್ಕೆ ಮುನ್ನ ಬೆಳಗ್ಗೆ ಪೊಲೀಸರು ಪ್ರತಿಭಟನಕಾರರು ಆರೇ ಕಾಲೋನಿ ಕಡೆಗೆ ಬಾರದಂತೆ ತಡೆಯಲು ಚೆಕ್ ಪೋಸ್ಟ್ ನಿರ್ಮಿಸಿದ್ದರು.

ಮರ ಕಡಿಯುವ ಕಾರ್‍ಯಾಚರಣೆಗೆ ಕಾಂಗ್ರೆಸ್ ಪಕ್ಷವು ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತ ಪಡಿಸಿದೆ. ’ಪ್ರಧಾನಿ ನರೇಂದ್ರ ಮೋದಿ ಅವರು ಪರಿಸರ ಸಂರಕ್ಷಣೆ ಬಗ್ಗೆ ’ಡಬಲ್ ಸ್ಟ್ಯಾಂಡರ್ಡ್’ ಹೊಂದಿದ್ದಾರೆ ಎಂದು ಅದು ಟೀಕಿಸಿತು.

’ಪರಿಸರ ಸಂರಕ್ಷಣೆಯ ಯೋಧ ಎಂಬಂತೆ ಜಾಗತಿಕ ವೇದಿಕೆಗಳಲ್ಲಿ ತಮ್ಮನ್ನು ಬಿಂಬಿಸಿಕೊಂಡಿರುವ ಪ್ರಧಾನಿ ಮೋದಿಯವರ ಪರಿಸರ ಸಂರಕ್ಷಣೆಯ ಪೊಳ್ಳುತನ ಅನಾವರಣಗೊಂಡಿದೆ. ದೇಶದಲ್ಲಿ ಅವರ ಸರ್ಕಾರದ ಕ್ರಮಗಳು ಸಂಪೂರ್ಣ ವಿರುದ್ಧ’ ಎಂದು ಕಾಂಗ್ರೆಸ್ ಟೀಕಿಸಿತು.

October 5, 2019 Posted by | ಭಾರತ, ರಾಷ್ಟ್ರೀಯ, environment /endangered species, Finance, Flash News, General Knowledge, India, Nation, News, News, Environment, ಸುದ್ದಿ, ಪರಿಸರ, ಸಾಮಾನ್ಯ ಜ್ಞಾನ, ವಿಜ್ಞಾನ, Politics, Spardha | , , , , , , , , , , , , , | 2 Comments

ಕರ್ತಾರಪುರ ಕಾರಿಡಾರ್ ಉದ್ಘಾಟನೆ:  ಪಾಕ್  ಆಹ್ವಾನಕ್ಕೆ ಮನಮೋಹನ್ ಸಿಂಗ್‌ ತಿರಸ್ಕಾರ

01 manmohan-kartarpur
ನವದೆಹಲಿ
: ಗುರುನಾನಕ್ ಅವರ ೫೫೦ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ ಕರ್ತಾರಪುರ ಕಾರಿಡಾರ್ ಉದ್ಘಾಟನಾ ಸಮಾರಂಬಕ್ಕೆ ಪಾಕಿಸ್ತಾನ ನೀಡಿದ ಆಹ್ವಾನವನ್ನು ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್  ಅವರು ಸ್ವೀಕರಿಸುವುದಿಲ್ಲ ಎಂದು ಕಾಂಗ್ರೆಸ್ ಮೂಲಗಳು 2019 ಅಕ್ಟೋಬರ್ 01ರ ಮಂಗಳವಾರ ದೃಢಪಡಿಸಿದವು.

ನವೆಂಬರ್ 9ಕ್ಕೆ ನಿಗದಿಯಾದ ಕರ್ತಾರಪುರ ಕಾರಿಡಾರ್ ಉದ್ಘಾಟನೆಗೆ ಮನಮೋಹನ್ ಸಿಂಗ್ ಅವರನ್ನು ಆಹ್ವಾನಿಸಲು ತಮ್ಮ ರಾಷ್ಟ್ರವು ತೀರ್ಮಾನಿಸಿದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಶಿ ಅವರು ವಿಡಿಯೋ ಸಂದೇಶ ಒಂದರಲ್ಲಿ  2019 ಸೆಪ್ಟೆಂಬರ್ 30ರ  ಸೋಮವಾರ ತಿಳಿಸಿದ್ದರು.

‘ಕರ್ತಾರಪುರ ಕಾರಿಡಾರ್ ಉದ್ಘಾಟನೆಯು ದೊಡ್ಡ ಕಾರ್ಯಕ್ರಮವಾಗಿದ್ದು, ಪಾಕಿಸ್ತಾನವು ಇದಕ್ಕಾಗಿ ದೊಡ್ಡ ಪ್ರಮಾಣದ ಸಿದ್ಧತೆ ನಡೆಸುತ್ತಿದೆ. ಸಮಾರಂಭಕ್ಕೆ ಸಾಕ್ಷಿಯಾಗಲು ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಆಮಂತ್ರಿಸಲು ನಾವು ನಿರ್ಧರಿಸಿದ್ದೇವೆ. ನಾವು ಶೀಘ್ರದಲ್ಲೇ ಔಪಚಾರಿಕ ಪತ್ರವನ್ನು ಅವರಿಗೆ ಕಳುಹಿಸಲಿದ್ದೇವೆ. ಗುರುನಾನಕ್ ಅವರ ೫೫೦ನೇ ಜನ್ಮದಿನಾಚರಣೆಗಾಗಿ ಕರ್ತಾರಪುರಕ್ಕೆ ಆಗಮಿಸುವ ಸಿಖ್ ಯಾತ್ರಾರ್ಥಿಗಳನ್ನು ಸ್ವಾಗತಿಸಲು ನಮಗೆ ಅತ್ಯಂತ ಸಂತಸವಿದೆ’ ಎಂದು ಖುರೇಶಿ ವಿಡಿಯೋದಲ್ಲಿ ತಿಳಿಸಿದ್ದರು.

ಕರ್ತಾರಪುರ ಕಾರಿಡಾರ್ ಉದ್ಘಾಟನೆಗೆ ಪಾಕಿಸ್ತಾನವು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಆಹ್ವಾನಿಸಲಿದೆ. ಈ ಕಾರಿಡಾರ್ ಭಾರತದ ಸಿಖ್ ಯಾತ್ರಾರ್ಥಿಗಳಿಗೆ ಪ್ರಸ್ತುತ ಪಾಕಿಸ್ತಾನದಲ್ಲಿ ಇರುವ ಗುರುನಾನಕ್ ಅವರ ಅಂತಿಮ ವಿಶ್ರಾಂತಿ ತಾಣಕ್ಕೆ ಭೇಟಿ ನೀಡಲು ಅವಕಾಶ ಕಲ್ಪಿಸುತ್ತದೆ ಎಂದು ಖುರೇಶಿ ವಿಡಿಯೋದಲ್ಲಿ ಹೇಳಿದ್ದರು.

ಪಾಕಿಸ್ತಾನದ ಕರ್ತಾರಪುರದಲ್ಲಿನ ದರ್ಬಾರ್ ಸಾಹಿಬ್ ಗುರುದ್ವಾರ ಮತ್ತು ಭಾರತದ ಗುರುದಾಸಪುರ ಜಿಲ್ಲೆಯಲ್ಲಿ ಇರುವ ಡೇರಾ ಬಾಬಾ ನಾನಕ್ ಮಂದಿರವನ್ನು ಸಂಪರ್ಕಿಸುವ ಕಾರಿಡಾರ್ ನಿರ್ಮಾಣಕಾರ್ಯ ಪೂರೈಸುವುದರೊಂದಿಗೆ ಭಾರತದ ಸಿಖ್ ಯಾತ್ರಿಕರಿಗೆ ವೀಸಾಮುಕ್ತ ಪಯಣಕ್ಕೆ ಅವಕಾಶ ಲಭಿಸಲಿದೆ.

ಇದರೊಂದಿಗೆ ೧೫೨೨ರಲ್ಲಿ ಸಿಖ್ ಪಂಥದ ಸ್ಥಾಪಕ ಗುರು ನಾನಕ್ ದೇವ್ ಅವರು ಸ್ಥಾಪಿಸಿದ ಪ್ರಮುಖ ತಾಣವಾದ ಕರ್ತಾರಪುರ ಸಾಹಿಬ್ ಗೆ ಭೇಟಿ ನೀಡಲು ಅನುಮತಿ ಕೋರಿದರೆ ಸಾಕಾಗುತ್ತದೆ.

ಆದರೆ, ಪಾಕಿಸ್ತಾನವು ಕರ್ತಾರಪುರ ಕಾರಿಡಾರ್ ಮೂಲಕ ದರ್ಬಾರ್ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡುವ ಭಾರತೀಯ ಯಾತ್ರಿಗಳಿಗೆ ೨೦ ಅಮೆರಿಕನ್ ಡಾಲರುಗಳನ್ನು ಸೇವಾ ಶುಲ್ಕವಾಗಿ ವಿಧಿಸಲು ನಿರ್ಧರಿಸಿದ್ದು, ಈ ನಿರ್ಧಾರವನ್ನು ಮರುಪರಿಶೀಲಿಸುವಂತೆ ಭಾರತವು ಪಾಕಿಸ್ತಾನಕ್ಕೆ ಸೂಚಿಸಿದೆ.

ಮೊದಲಿಗೆ ಭಾರತದಿಂದ ಬರುವ ೫,೦೦೦ ಮಂದಿ ಯಾತ್ರಾರ್ಥಿಗಳಿಗೆ ಕಾರಿಡಾರ್ ಮೂಲಕ ಗುರುದ್ವಾರ ದರ್ಬಾರ್ ಸಾಹಿಬ್ ಭೇಟಿಗೆ ಅವಕಾಶ ನೀಡಲಾಗುವುದು. ಮುಂದಕ್ಕೆ ಪ್ರತಿದಿನ ೧೦,೦೦೦ ಯಾತ್ರಿಕರಿಗೆ ಭೇಟಿ ಅವಕಾಶ ಲಭಿಸಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಭಾರತದ ಕಡೆಯಿಂದ ಗುರುದ್ವಾರ ದರ್ಬಾರ್ ಸಾಹಿಬ್‌ವರೆಗೆ ತನ್ನ ನೆಲದಲ್ಲಿ ಯಾತ್ರಿಕರಿಗೆ ಸಾಗಲು ಅನುಕೂಲವಾಗುವಂತೆ ಪಾಕಿಸ್ತಾನವು ಕಾರಿಡಾರ್ ನಿರ್ಮಾಣ ಮಾಡುತ್ತಿದ್ದು ಗುರುದಾಸಪುರದ ಡೇರಾ ಬಾಬಾ ನಾನಕ್‌ನಿಂದ ಗಡಿಯವರೆಗೆ ಭಾರತವು ಕಾರಿಡಾರ್ ನಿರ್ಮಾಣ ಮಾಡುತ್ತಿದೆ.

ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ರಾಷ್ಟ್ರೀಯ ಹೆದ್ದಾರಿ -೩೫೪ರಿಂದ ಕಾರಿಡಾರ್‌ವರೆಗೆ ನಾಲ್ಕು ಪಥಗಳ  ಹೆದ್ದಾರಿಯನ್ನು ನಿರ್ಮಿಸುತ್ತಿದೆ. ಇದಲ್ಲದೆ ಪ್ರಯಾಣಿಕ ಟರ್ಮಿನಲ್‌ನ್ನು ಕೂಡಾ ನಿರ್ಮಿಸಲಾಗುತ್ತಿದೆ.

October 1, 2019 Posted by | ಪಾಕಿಸ್ತಾನ, ಪ್ರಧಾನಿ, ರಾಷ್ಟ್ರೀಯ, ವಿಶ್ವ/ ಜಗತ್ತು, culture, Flash News, General Knowledge, India, Nation, News, Environment, ಸುದ್ದಿ, ಪರಿಸರ, ಸಾಮಾನ್ಯ ಜ್ಞಾನ, ವಿಜ್ಞಾನ, Pakistan, Politics, Prime Minister, Spardha, Temples, World | , , , , , , , , , , | Leave a comment

ಈ ಫೋನುಗಳಲ್ಲಿ ಮುಂದಿನ ಫೆಬ್ರುವರಿಯಿಂದ ವಾಟ್ಸಪ್ ಕೆಲಸ ಮಾಡದು!

30 whatsapp
ನವದೆಹಲಿ
: ಆಪರೇಟಿಂಗ್ ಸಿಸ್ಟಂನ ಹೊಸ ಆವೃತ್ತಿಗೆ ದೀರ್ಘಕಾಲದವರೆಗೆ ಅಪ್‌ಗ್ರೇಡ್ ಮಾಡದ ಐಫೋನ್ ಬಳಕೆದಾರರು, ಹಾಗೆ ಮಾಡಲು ಇನ್ನೂ ಒಂದು ಕಾರಣವಿದೆ. ನಿಮ್ಮ ಐಒಎಸ್ ೮ ಸಾಧನದಲ್ಲಿ ಪ್ರಸ್ತುತ ವಾಟ್ಸಪ್ ಸಕ್ರಿಯವಾಗಿದ್ದರೆ, ತ್ವರಿತ ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ನ ಪ್ರಕಟಣೆಯ  ಪ್ರಕಾರ, ಫೆಬ್ರವರಿ ೧, ೨೦೨೦ ರವರೆಗೆ ಮಾತ್ರ ನೀವು ಅದನ್ನು ಬಳಸಲು ಸಾಧ್ಯವಾಗುತ್ತದೆ.

ಆಂಡ್ರಾಯ್ಡ್ ಆವೃತ್ತಿ ೨.೩.೭ ಮತ್ತು ಅದಕ್ಕಿಂತ ಹೆಚ್ಚಿನ ಹಳೆಯ ಬಳಕೆದಾರರು ಇನ್ನು ಮುಂದೆ ಹೊಸ ಖಾತೆಗಳನ್ನು ತೆರೆಯಲು ಅಥವಾ ಅಸ್ತಿತ್ವದಲ್ಲಿರುವ ಖಾತೆಗಳನ್ನು ಮರುಪರಿಶೀಲಿಸಲು ಸಾಧ್ಯವಾಗುವುದಿಲ್ಲ ಎಂದು ವಾಟ್ಸಪ್  ಹೇಳಿದೆ. ಆದರೂ ಅವರು ಫೆಬ್ರವರಿ ೧, ೨೦೨೦ ರವರೆಗೆ ವಾಟ್ಸಪ್  ಬಳಕೆಯನ್ನು ಮುಂದುವರಿಸಲು ಸಾಧ್ಯ ಎಂದು ಸಂಸ್ಥೆ ತಿಳಿಸಿದೆ.

“ಐಒಎಸ್ ೮ ನಲ್ಲಿ, ನೀವು ಇನ್ನು ಮುಂದೆ ಹೊಸ ಖಾತೆಗಳನ್ನು ತೆರೆಯಲು ಅಥವಾ ಅಸ್ತಿತ್ವದಲ್ಲಿರುವ ಖಾತೆಗಳನ್ನು ಪರಿಶೀಲಿಸಲು ಸಾಧ್ಯವಿಲ್ಲ” ಎಂದು ಸಂಸ್ಥೆಯ ಹೇಳಿಕೆ ತಿಳಿಸಿದೆ.

‘ ಆದ್ದರಿಂದ ಐಫೋನ್ ಬಳಕೆದಾರರಿಗೆ  ವಾಟ್ಸಪ್ ಬಳಸಲು  ಐಒಎಸ್ ೯ ಅಥವಾ ನಂತರದ  ಅವೃತ್ತಿಯ ಅಗತ್ಯವಿದೆ. ಹೀಗಾಗಿ ನಿಮ್ಮ ಫೋನ್‌ಗೆ ಲಭ್ಯವಿರುವ ಐಒಎಸ್‌ನ ಇತ್ತೀಚಿನ ಆವೃತ್ತಿಯನ್ನು ಬಳಸಲು ನಾವು ಶಿಫಾರಸು ಮಾಡುತ್ತೇವೆ” ಎಂದು ವಾಟ್ಸಪ್  ಹೇಳಿದೆ.

“ಜೈಲ್ ಬ್ರೋಕನ್ ಅಥವಾ ಅನ್ಲಾಕ್ ಮಾಡಲಾದ ಸಾಧನಗಳ ಬಳಕೆಯನ್ನು ನಾವು ಸ್ಪಷ್ಟವಾಗಿ ನಿರ್ಬಂಧಿಸುವುದಿಲ್ಲ. ಆದರೂ, ಈ ಮಾರ್ಪಾಡುಗಳು ನಿಮ್ಮ ಸಾಧನದ ಕ್ರಿಯಾತ್ಮಕತೆಯ ಮೇಲೆ ಪರಿಣಾಮ ಬೀರಬಹುದು, ಐಫೋನ್‌ನ ಆಪರೇಟಿಂಗ್ ಸಿಸ್ಟಂನ ಮಾರ್ಪಡಿಸಿದ ಆವೃತ್ತಿಗಳನ್ನು ಬಳಸುವ ಸಾಧನಗಳಿಗೆ ನಾವು ಬೆಂಬಲವನ್ನು ನೀಡಲು ಸಾಧ್ಯವಿಲ್ಲ” ಎಂದು ಸಂಸ್ಥೆ  ಹೇಳಿದೆ.

September 30, 2019 Posted by | ಆರ್ಥಿಕ, ತಂತ್ರಜ್ಞಾನ, ವಿಶ್ವ/ ಜಗತ್ತು, Commerce, Consumer Issues, Finance, Flash News, General Knowledge, News, News, Environment, ಸುದ್ದಿ, ಪರಿಸರ, ಸಾಮಾನ್ಯ ಜ್ಞಾನ, ವಿಜ್ಞಾನ, Science, Social Media, Spardha, Technology | , | Leave a comment

ಅಯೋಧ್ಯಾ ದೇಗುಲ ಕುರಿತ ಗಜೆಟಿಯರ್‌, ಪುಸ್ತಕಗಳು ಬರೀ ಗಾಳಿ ಮಾತು, ಕಟ್ಟುಕಥೆ

29 Supreme-Court-Ayodhya
ಎಎಸ್‌ಐ ವರದಿ ಪ್ರಶ್ನಿಸಿದ ಬಳಿಕ ಈಗ ಸುಪ್ರೀಂಕೋರ್ಟಿನಲ್ಲಿ ಮುಸ್ಲಿಂ ಕಕ್ಷಿದಾರರ ಹೊಸ ವಾದ

ನವದೆಹಲಿ: ಭಾರತೀಯ ಪ್ರಾಕ್ತನ ಇಲಾಖಾ (ಎಎಸ್‌ಐ) ಸಮೀಕ್ಷೆಯ ವರದಿಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ ಬಳಿಕ, ಅಯೋಧ್ಯೆರಾಮಜನ್ಮಭೂಮಿ-ಬಾಬರಿ ಮಸೀದಿ ಭೂ ವಿವಾದ ಪ್ರಕರಣದ ಮುಸ್ಲಿಮ್ ಕಕ್ಷಿದಾರರರು ಈಗ ಬಾಬರಿ ಮಸೀದಿ ನಿರ್ಮಿಸಲಾಗಿದ್ದ ಸ್ಥಳದಲ್ಲಿ  ಅದಕ್ಕೂ ಹಿಂದೆ ಹಿಂದೂ ದೇಗುಲವಿದ್ಧ ಸಾಧ್ಯತೆಗಳ ಕುರಿತು ಪುಸ್ತಕಗಳಲ್ಲಿ ಕಾಲಾಕಾಲದ ವರದಿಗಳೆಲ್ಲವೂ ’ಗಾಳಿ ಮಾತುಗಳು’ ಮತ್ತು ’ಕಟ್ಟು ಕಥೆಗಳು’ ಎಂಬುದಾಗಿ ಸುಪ್ರೀಂಕೋರ್ಟಿನಲ್ಲಿ ವಾದ ಮಂಡಿಸಿದರು.

ಪ್ರಕರಣದಲ್ಲಿ ಮುಸ್ಲಿಮ್ ಕಕ್ಷಿದಾರರ ಪರವಾಗಿ ವಾದಿಸಿದ ಹಿರಿಯ ವಕೀಲರಾದ ಮೀನಾಕ್ಷಿ ಅರೋರಾ ಅವರು ವಿವಾದಿತ ಸ್ಥಳದಲ್ಲಿ ಹಿಂದೂ ಧಾರ್ಮಿಕ ರಚನೆಯಿತ್ತು ಎಂಬುದನ್ನು ನಂಬಲು ೨೦೦೩ರ ಭಾರತೀಯ ಪುರಾತತ್ವ ಸಮೀಕ್ಷೆಯನ್ನು ನೆಚ್ಚಿಕೊಳ್ಳುವುದು ಎಷ್ಟು ಅಪಾಯಕಾರಿಯೋ ಅಷ್ಟೇ ಅಪಾಯಕಾರಿ ೧೮ ಮತ್ತು ೧೯ನೇ ಶತಮಾನದ ಪುಸ್ತಕಗಳಲ್ಲಿ ಇರುವ ಇಂತಹ ವಿವರಗಳನ್ನು ನೆಚ್ಚಿಕೊಳ್ಳುವುದು ಎಂದು ಹೇಳಿದರು.

‘ಈ ಪುಸ್ತಕಗಳು ಮತ್ತು ಗಜೆಟಿಯರ್‌ಗಳಲ್ಲಿ ದಾಖಲಾಗಿರುವ ವಿಷಯಗಳು ಗ್ರಂಥಕರ್ತರ ವೈಯಕ್ತಿಕ ಅನುಭವಗಳಲ್ಲ, ಬದಲಿಗೆ ಗಾಳಿಮಾತುಗಳನ್ನು ಅಧರಿಸಿದ್ದು’ ಎಂದು ಅರೋರಾ ಅವರು ಪ್ರಕರಣವನ್ನು ಆಲಿಸುತ್ತಿರುವ ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ನೇತೃತ್ವದ ಸಂವಿಧಾನ ಪೀಠದ ಮುಂದೆ ಸಲ್ಲಿಸಿರುವ ಟಿಪ್ಪಣಿ ಹೇಳಿತು.

ಈ ಪುಸ್ತಕಗಳು ಅಥವಾ ಗಜೆಟಿಯರ್‌ಗಳ ಕರ್ತೃಗಳು ಯಾರೂ ವೈಯಕ್ತಿಕವಾಗಿ ನಿವೇಶನದಲ್ಲಿ ರಾಮಮಂದಿರ ಇದ್ದುದನ್ನು ನೋಡಿಲ್ಲ ಆಥವಾ ಅದನ್ನು ಮುಸ್ಲಿಮರು ಕೆಡವಿ ಹಾಕಿದ್ದನ್ನು ನೋಡಿಲ್ಲ. ಬದಲಿಗೆ, ಅವರ ಬರಹಗಳು, ಹೆಚ್ಚೆಂದರೆ ಸ್ಥಳೀಯ ಜನರಿಂದ ಕೇಳಿದ ಕಟ್ಟುಕಥೆಗಳು ಮತ್ತು ಗಾಳಿಮಾತುಗಳನ್ನು ಆಧರಿಸಿದ್ದು. ಇವು ಯಾವುವೂ ಭಾರತೀಯ ಪುರಾತತ್ವ ಸಮೀಕ್ಷೆಗೆ ಪೂರಕವಾದ ನೇರ ಸಾಕ್ಷ್ಯಾಧರಗಳಾಗುವುದಿಲ್ಲ ಎಂದು ಟಿಪ್ಪಣಿ ಪ್ರತಿಪಾದಿಸಿತು.

ಹಲವಾರು ಸಿವಿಲ್ ಖಟ್ಲೆಗಳಲ್ಲಿ  ೧೭ನೇ ಶತಮಾನದ ಈಸ್ಟ್ ಇಂಡಿಯಾ ಕಂಪೆನಿಯ ಇಂಗ್ಲಿಷ್ ವ್ಯಾಪಾರಿ ವಿಲಿಯಂ ಫೀಂಚ್ ಪ್ರವಾಸ ಕಥನವನ್ನು ಉಲ್ಲೇಖಿಸಲಾಗಿದ್ದು ಅದು ಅಯೋಧ್ಯೆಯಲ್ಲಿ ಶ್ರೀರಾಮನ ಆರಾಧನೆ ಬಗ್ಗೆ ಪ್ರಸ್ತಾಪಿಸಿದೆ, ಆದರೆ ಅಲ್ಲಿ ಯಾವುದೇ ಮಸೀದಿ ಇದ್ದ ಬಗ್ಗೆ ಪ್ರಸ್ತಾಪವನ್ನೇ ಮಾಡಿಲ್ಲ.

ಇದೇ ರೀತಿ ೧೭೪೦-೧೭೭೦ರ ಅವಧಿಯ ಜೆಸುಯಿಟ್ ಮಿಷನರಿಯ ಪ್ರವಾಸ ಕಥನವು ಸರಯೂ ನದಿಯ ದಡದಲ್ಲಿ ಶ್ರೀರಾಮನ ನೆನಪಿಗಾಗಿ ನಿರ್ಮಿಸಲಾದ ಹಲವಾರು ಕಟ್ಟಡಗಳ ಬಗ್ಗೆ ಪ್ರಸ್ತಾಪಿಸಿದೆ. ಈ ಪುಸ್ತಕವು ಅಯೋಧ್ಯೆಯಲ್ಲಿನ ’ಶ್ರೀರಾಮನ ತೊಟ್ಟಿಲು’ ಕುರಿತ ನಂಬಿಕೆ ಬಗೆಗೂ ಪ್ರಸ್ತಾಪ ಮಾಡಿದೆ.

ಮಾಂಟ್ಗೊಮೆರಿ ಮಾರ್ಟಿನ್ ಸಮೀಕ್ಷಾ ವರದಿ ’೧೮೩೮ರ ವೇಳೆಯ ಹಿಸ್ಟರಿ, ಆಂಟಿಕ್ವಿಟೀಸ್, ಟೊಪೋಗ್ರಫಿ ಅಂಡ್ ಸ್ಟಾಟಿಸ್ಟಿಕ್ಸ್ ಆಫ್ ಈಸ್ಟರ್ನ್ ಇಂಡಿಯಾ’ ಕೂಡಾ ರಾಮಗಢ ಕೋಟೆ ಮತ್ತು ರಾಮಜನ್ಮಭೂಮಿ ದೇವಾಲಯದ ನಂಬಿಕೆ ಬಗ್ಗೆ ಪ್ರಸ್ತಾಪಿಸಿದೆ. ಶ್ರೀರಾಮನ ವಂಶಜ ಎನ್ನಲಾದ ದೊರೆ ವಿಕ್ರಮ ಈ ಕೋಟೆ ಮತ್ತು ದೇವಾಲಯಗಳನ್ನು ಮರುನಿರ್ಮಾಣ ಮಾಡಿದ್ದ ಎಂದು ವರದಿ ಪ್ರಸ್ತಾಪಿಸಿದೆ. ಕೋಟೆ ಮತ್ತು ದೇವಾಲಯ ಬಾಬರನ ದಾಳಿಯಿಂದ ನಾಶಗೊಂಡಿತು ಎಂಬುದಾಗಿ ಸ್ಥಳೀಯ ಹಿಂದುಗಳು ಹೇಳಿದ್ದು ಈ ವರದಿಯಲ್ಲಿ ಉಲ್ಲೇಖಗೊಂಡಿದೆ.

೧೮೫೪ರಿಂದೀಚಿನ ಈಸ್ಟ್ ಇಂಡಿಯಾ ಕಂಪೆನಿಯ ಪ್ರಾದೇಶಿಕ ಗಜೆಟಿಯರ್‌ಗಳು ಕೂಡಾ ಸರಯೂ ನದಿದಂಡೆಯಲ್ಲಿ ಅಯೋಧ್ಯೆಯ ದೊರೆ ಶ್ರೀರಾಮನ ಆಸ್ಥಾನದ ಅವಶೇಷಗಳು ಇರುವ ಬಗ್ಗೆ ಹಿಂದುಗಳ ನಂಬಿಕೆಯನ್ನು ಉಲ್ಲೇಖಿಸಿವೆ.

ಏನಿದ್ದರೂ, ಮುಸ್ಲಿಮ್ ಕಕ್ಷಿದಾರರು ಇವ್ಯಾವುದೂ ನೆಚ್ಚಿಕೊಳ್ಳಬಹುದಾದ ಸಾಕ್ಷ್ಯಾಧಾರಗಳಲ್ಲ, ಇವೆಲ್ಲ ಬರೀ ಗಾಳಿಮಾತುಗಳು ಮತ್ತು ಕಟ್ಟು ಕಥೆಗಳನ್ನು ಆಧರಿಸಿದ್ದು ಎಂದು ನ್ಯಾಯಾಲಯಕ್ಕೆ ಸಲ್ಲಿಸಿದ ಟಿಪ್ಪಣಿಯಲ್ಲಿ ಹೇಳಿದೆ. ಇದಕ್ಕೆ ಮುನ್ನ ಪ್ರಾಕ್ತನಶಾಸ್ತ್ರವು ’ಸಮಾಜ ವಿಜ್ಞಾನ’ ಮಾತ್ರ, ನಿರ್ಣಾಯಕ ಸಾಕ್ಷ್ಯಾಧಾರವಾಗಿ ನೆಚ್ಚಿಕೊಳ್ಳಬಹುದಾದದ್ದು ಅಲ್ಲ’ ಎಂದು ಅವರು ವಾದಿಸಿದ್ದರು.

ನ್ಯಾಯಮೂರ್ತಿಗಳಾದ ಎಸ್‌ಎ ಬೊಬ್ಡೆ, ಡಿವೈ ಚಂದ್ರಚೂಡ್, ಅಶೋಕ ಭೂಷಣ್ ಮತ್ತು ಎಸ್‌ಎ ನಜೀರ್ ಅವರನ್ನೂ ಒಳಗೊಂಡ ಪಂಚಸದಸ್ಯ ಸಂವಿಧಾನ ಪೀಠವು ಈವರೆಗೆ ೩೩ ದಿನಗಳ ವಿಚಾರಣೆಯನ್ನು ನಡೆಸಿದೆ. ಪೀಠದ ಮುಖ್ಯಸ್ಥರಾದ ಸಿಜೆಐ ರಂಜನ್ ಗೊಗೋಯಿ ಅವರು ನವೆಂಬರ್ ೧೭ರಂದು ನಿವೃತ್ತರಾಗುತ್ತಿರುವ ಹಿನ್ನೆಲೆಯಲ್ಲಿ  ಪೀಠವು ಪ್ರಕರಣದ ವಾದ ವಿವಾದಗಳನ್ನು ಪೂರ್ಣಗೊಳಿಸಲು ಅಕ್ಟೋಬರ್ ೧೮ರ ಗಡುವನ್ನು ನೀಡಿದೆ. ಸಿಜೆಐ ಅವರ ನಿವೃತ್ತಿಗೆ ಮುನ್ನ ಪ್ರಕರಣದ ತೀರ್ಪು ಬರಬೇಕಾಗಿದೆ, ಇಲ್ಲದೇ ಇದ್ದಲ್ಲಿ ಪ್ರಕರಣದ ವಿಚಾರಣೆಯನ್ನು ಮತ್ತೆ ಸಂಪೂರ್ಣವಾಗಿ ಪುನಃ ಮಾಡಬೇಕಾಗುತ್ತದೆ.

ಸೋಮವಾರ ವಿಚಾರಣೆ ಪುನಾರಂಭವಾಗಲಿದ್ದು ಮುಸ್ಲಿಮ್ ಕಕ್ಷಿದಾರರು ತಮ್ಮ ವಾದ ಮುಂದುವರೆಸಲಿದ್ದಾರೆ.

September 29, 2019 Posted by | ಅಯೋಧ್ಯೆ, ಭಾರತ, ರಾಷ್ಟ್ರೀಯ, ವಿಶ್ವ/ ಜಗತ್ತು, ಸುಪ್ರೀಂಕೋರ್ಟ್, Finance, Flash News, General Knowledge, India, News, News, Environment, ಸುದ್ದಿ, ಪರಿಸರ, ಸಾಮಾನ್ಯ ಜ್ಞಾನ, ವಿಜ್ಞಾನ, Prime Minister, Spardha, World | Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ