SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

೩೭೦ನೇ ವಿಧಿ ರದ್ದು ಮೂಲಕ ಸರ್ದಾರ್ ಪಟೇಲ್ ಕನಸು ನನಸು: ಪ್ರಧಾನಿ ಮೋದಿ

31 pm modi at kevadiaಜಮ್ಮು ಮತ್ತು ಕಾಶ್ಮೀರವನ್ನು ಭಾರತದಿಂದ ಪ್ರತ್ಯೇಕಿಸುತ್ತಿದ್ದ ‘ಕೃತಕ’ ಗೋಡೆ ಇದೀಗ ನಾಶ

ನವದೆಹಲಿ/ ಕೇವಡಿಯಾ: ಸಂವಿಧಾನದ ೩೭೦ನೇ ವಿಧಿಯು ಜಮ್ಮು ಮತ್ತು ಕಾಶ್ಮೀರವನ್ನು ರಾಷ್ಟ್ರದ ಇತರ ಭಾಗಳಿಂದ ಪ್ರತ್ಯೇಕಿಸುವ ’ಕೃತಕಗೋಡೆಯನ್ನು’ ಸೃಷ್ಟಿಸಿತ್ತು; ಆಗಸ್ಟ್ ೫ರಂದು ಅದನ್ನು ರದ್ದು ಪಡಿಸುವ ಮೂಲಕ ಸರ್ದಾರ್ ಪಟೇಲ್‌ಅವರು ಕಂಡಿದ್ದ ಭಾರತವನ್ನು ಏಕೀಕರಣ ಮಾಡುವ ಕನಸಿನ ಯೋಜನೆಯನ್ನು ಈಡೇರಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು 2019 ಅಕ್ಟೋಬರ್ 31ರ ಗುರುವಾರ ಹೇಳಿದರು.

ಪ್ರಧಾನಿಯವರು ಗುಜರಾತಿನ ಕೇವಡಿಯಾದಲ್ಲಿ ಭಾರತದ ಮೊದಲ ಗೃಹ ಸಚಿವರ ೧೪೪ನೇ ಜನ್ಮದಿನವನ್ನು ‘ರಾಷ್ಟ್ರೀಯ ಏಕತಾ ದಿನ’ವಾಗಿ ಆಚರಿಸುವ ಸಲುವಾಗಿ ನಡೆದ ಸಮಾರಂಭದಲ್ಲಿ ಮಾತನಾಡುತ್ತಿದ್ದರು.

ಸರ್ದಾರ್ ಪಟೇಲರ ೧೪೪ನೇ ಜನ್ಮದಿನದಂದು ಪ್ರಧಾನಿ ಮೋದಿಯವರು ಏಕತಾ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ತಮ್ಮ ಶ್ರದ್ಧಾಂಜಲಿಯನ್ನು ಸಲ್ಲಿಸಿದರು. ಪ್ರಧಾನಿ ಭೇಟಿಯ ಹಿನ್ನೆಲೆಯಲ್ಲಿ ಪ್ರದೇಶದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿತ್ತು.

ಏಕತಾ ಪ್ರತಿಮೆಯನ್ನು ಕಳೆದ ವರ್ಷ ಸರ್ದಾರ್ ಪಟೇಲ್ ಅವರ ಗೌರವಾರ್ಥವಾಗಿ ನಿರ್ಮಿಸಿ ಉದ್ಘಾಟಿಸಲಾಗಿತ್ತು.  ಮೋದಿ ನೇತೃತ್ವದ ಕೇಂದ್ರದ ಎನ್‌ಡಿಎ ಸರ್ಕಾರವು ೨೦೧೪ರಿಂದೀಚೆಗೆ ಸರ್ದಾರ್ ಪಟೇಲ್‌ ಜನ್ಮದಿನವನ್ನು ರಾಷ್ಟ್ರೀಯ ಏಕತಾ ದಿನವಾಗಿ ಆಚರಿಸುತ್ತಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ‘ರಾಜಕೀಯ ಸ್ಥಿರತೆಯ ಮತ್ತು ಅಭಿವೃದ್ಧಿಯ ಹೊಸ ಯುಗ’ ಉದಯಿಸಿದ್ದು, ಸ್ವಾತಂತ್ರ್ಯಾ ನಂತರ ಇದೇ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಬ್ಲಾಕ್ ಮತು ಅಭಿವೃದ್ಧಿ ಮಂಡಳಿ (ಬಿಡಿಸಿ) ಚುನಾವಣೆಗಳು ಇತ್ತೀಚೆಗೆ ನಡೆದವು ಎಂದು ಮೋದಿ ಹೇಳಿದರು.

‘ಹೊಸ ಹೆದ್ದಾರಿಗಳು, ರೈಲ್ವೇ ಮಾರ್ಗಗಳು, ಹೊಸ ಆಸ್ಪತ್ರೆಗಳು, ಹೊಸ ಕಾಲೇಜುಗಳು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಪ್ರದೇಶಗಳ ಜನರನ್ನು ಹೊಸ ಎತ್ತರಕ್ಕೆ ಒಯ್ಯಲಿವೆ’ ಎಂದು ಪ್ರಧಾನಿ, ಒಂದೇ ಏಟಿಗೆ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಅಧಿಕೃತವಾಗಿ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ಕ್ರಮವು ಬುಧವಾರ ಮಧ್ಯರಾತ್ರಿ ಅನುಷ್ಠಾನಗೊಂಡ ಕೆಲವೇ ಗಂಟೆಗಳ ಬಳಿಕ ಹೇಳಿದರು.

೩೭೦ನೇ ವಿಧಿ ಇದ್ದ ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಮೂರು ದಶಕಗಳಲ್ಲಿ ೪೦,೦೦೦ಕ್ಕೂ ಹೆಚ್ಚು ಜನರು ಭಯೋತ್ಪಾದನೆಗೆ ಬಲಿಯಾಗಿ ಪ್ರಾಣತೆತ್ತಿದ್ದಾರೆ. ಮುಗ್ಧ ಜನರ ಇಂತಹ ಸಾವನ್ನು ರಾಷ್ಟ್ರ ಎಷ್ಟು ಸಮಯದವರೆಗೆ ನೋಡಬೇಕು? ಈಗ ಗೋಡೆಯನ್ನು ಕೆಡವಿ ಹಾಕಲಾಗಿದೆ ಮತ್ತು ಸರ್ದಾರ್ ಪಟೇಲರ ಕನಸು ನನಸಾಗಿದೆ’ ಎಂದು ೧೮೨ ಮೀಟರ್‌ಎತ್ತರದ ಏಕತಾ ಪ್ರತಿಮೆಯ ಬುಡದಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ನುಡಿದರು.

ಭಯೋತ್ಪಾದನೆಯ ಮಹಾದ್ವಾರ ಬಂದ್: ಅಮಿತ್ ಶಾ

ಸಂವಿಧಾನದ ೩೭೦ ಮತ್ತು ೩೫ಎ ವಿಧಿಗಳನ್ನು ರದ್ದು ಪಡಿಸುವ ಮೂಲಕ ದೇಶದಲ್ಲಿದ್ದ ಭಯೋತ್ಪಾದನೆಯ ಮಹಾದ್ವಾರಗಳನ್ನು ಪ್ರಧಾನಿ ಮೋದಿ ಮುಚ್ಚಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ನವದೆಹಲಿಯಲ್ಲಿ ಹೇಳಿದರು.

ಭಾರತದ ಮೊತ್ತ ಮೊದಲ ಉಪಪ್ರಧಾನಿ ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ ಜನ್ಮದಿನದ ಅಂಗವಾಗಿ ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಅಮಿತ್ ಶಾ ಅವರು ಮಾತನಾಡಿದರು.

ಜಮ್ಮು ಮತ್ತು ಕಾಶ್ಮೀರ ರಾಜ್ಯವು ಹಿಂದಿನ ದಿನ ನಡುರಾತ್ರಿ ರದ್ದಾಗಿ, ಹೊಸ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶಗಳು ಅಸ್ತಿತ್ವಕ್ಕೆ ಬಂದ ಕೆಲವೇ ಗಂಟೆಗಳ ಬಳಿಕ  ಈ ಮಾತುಗಳನ್ನು ಹೇಳಿದ ಅಮಿತ್ ಶಾ ಅವರು ‘ಸ್ವಾತಂತ್ರ್ಯ ಲಭಿಸಿದ ಬಳಿಕ  ೫೫೦ ರಾಜಪ್ರಭುತ್ವದ ಪ್ರಾಂತ್ಯಗಳಾಗಿ ಹಂಚಿಹೋಗಿದ್ದ ದೇಶವನ್ನು ಒಗ್ಗೂಡಿಸಿ ನಾವು ಇಂದು ನಕ್ಷೆಯಲ್ಲಿ ನೋಡುತ್ತಿರುವ ಸಂಯುಕ್ತ ಭಾರತ ಸೃಷ್ಟಿಯಾದದ್ದು ಕೇವಲ ಸರ್ದಾರ್ ಪಟೇಲರ ಪ್ರಯತ್ನಗಳ ಫಲವಾಗಿ’  ಎಂದು ಗೃಹ ಸಚಿವರು ಹೇಳಿದರು.

‘ಸರ್ದಾರ್ ಪಟೇಲ್ ಅವರು ೫೫೦ ಪ್ರಾಂತ್ಯಗಳನ್ನು ಒಗ್ಗೂಡಿಸಿ ಭಾರತದ ಏಕತೆಯನ್ನು ಸಾಧಿಸಿದರು. ಆದರೆ ಜಮ್ಮು ಮತ್ತು ಕಾಶ್ಮೀರವನ್ನು ದೇಶದಲ್ಲಿ ಸೇರ್ಪಡೆ ಮಾಡಲಾಗಲಿಲ್ಲ ಎಂಬ ವಿಷಾದ ಅವರದಾಗಿತ್ತು. ಜಮ್ಮು ಮತ್ತು ಕಾಶ್ಮೀರ ಭಾರತದಲ್ಲಿ ವಿಲೀನಗೊಂಡಿತು, ಆದರೆ ೩೭೦ ಮತ್ತು ೩೫ಎ ವಿಧಿಗಳಿಂದಾಗಿ ಅದು ನಮಗೆ ಸಮಸ್ಯೆಯಾಗಿ ಉಳಿಯಿತು’ ಎಂದು ಶಾ ಹೇಳಿದರು.

೭೦ ವರ್ಷಗಳ ಕಾಲ ಯಾರೊಬ್ಬರೂ ಈ ವಿಧಿಗಳ ಬಗ್ಗೆ ಯೋಚಿಸಲಿಲ್ಲ. ಆದರೆ ೨೦೧೯ರಲ್ಲಿ, ಜನರು ಅಧಿಕಾರದ ಸೂತ್ರವನ್ನು ಪ್ರಧಾನಿ ಮೋದಿಯವರಿಗೆ ಕೊಟ್ಟರು ಮತ್ತು ಆಗಸ್ಟ್ ೫ರಂದು ಸಂಸತ್ತು ೩೭೦ ಮತ್ತು ೩೫ಎ ವಿಧಿಗಳನ್ನು ರದ್ದು ಪಡಿಸಿ ಸರ್ದಾರ್ ಪಟೇಲ್ (ವಲ್ಲಭಭಾಯಿ ಪಟೇಲ್) ಅವರ ಕನಸನ್ನು ನನಸು ಮಾಡಿತು ಎಂದು ಗೃಹ ಸಚಿವರು ನುಡಿದರು.

ಮೋದಿ ಸರ್ಕಾರವು ೨೦೧೪ರಿಂದ ಅಕ್ಟೋಬರ್ ೩೧ನ್ನು ರಾಷ್ಟ್ರೀಯಏಕತಾ ದಿನವಾಗಿ ಆಚರಿಸುತ್ತಿದೆ. ಏಕತಾ ದಿನದ ಅಂಗವಾಗಿ ನವದೆಹಲಿಯಲ್ಲಿ ನಡೆಸಲಾದ ಬೃಹತ್ ಮೆರವಣಿಗೆಯಲ್ಲಿ ಶಾಲಾ ಮಕ್ಕಳು, ಮಾಜಿಯೋಧರು, ಹಿರಿಯ ನಾಗರಿಕರು ಸೇರಿದಂತೆ ಸಹಸ್ರಾರು ಮಂದಿ ಪಾಲ್ಗೊಂಡರು. ಮೆರವಣಿಗೆಯು ಇಂಡಿಯಾಗೇಟಿನಲ್ಲಿರುವ ಅಮರ ಜವಾನ್ ಜ್ಯೋತಿಯಲ್ಲಿ ಸಮಾಪ್ತಿಗೊಂಡಿತು.

October 31, 2019 Posted by | ನರೇಂದ್ರ ಮೋದಿ, ಪ್ರಧಾನಿ, ಭಾರತ, ರಾಷ್ಟ್ರೀಯ, ವಿಶ್ವ/ ಜಗತ್ತು, Flash News, General Knowledge, India, Nation, News, Prime Minister, Spardha, World | | Leave a comment

ಅ.29ರ ಮಂಗಳವಾರ ಜಮ್ಮು- ಕಾಶ್ಮೀರಕ್ಕೆ ಐರೋಪ್ಯ ಸಂಸದರ ತಂಡದ ಭೇಟಿ

28 modi-euಸರ್ಕಾರದ ಆದ್ಯತೆಗಳ ಸ್ಪಷ್ಟ ಚಿತ್ರಣ ಸಿಗಲಿದೆ: ಪ್ರಧಾನಿ ಮೋದಿ

ನವದೆಹಲಿ: ಐರೋಪ್ಯ ಸಂಸತ್ತಿನ ಸಂಸತ್ ಸದಸ್ಯರ ತಂಡವೊಂದಕ್ಕೆ  2019 ಅಕ್ಟೋಬರ್ 29ರ ಮಂಗಳವಾರ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲು ಕೇಂದ್ರ ಸರ್ಕಾರವು ಅನುಮತಿ ನೀಡಿದ್ದು, 2019 ಅಕ್ಟೋಬರ್ 28ರ ಸೋಮವಾರ ತಂಡದ ಸದಸ್ಯರ ಜೊತೆ ಸಂವಹನ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು ’ಈ ಭೇಟಿಯು ಸರ್ಕಾರದ ಆದ್ಯತೆಗಳ ಸ್ಪಷ್ಟ ಚಿತ್ರಣವನ್ನು ತಂಡಕ್ಕೆ ನೀಡಲಿದೆ’ ಎಂದು ಹೇಳಿದರು.

‘ಭಯೋತ್ಪಾದನೆಗೆ ಬೆಂಬಲ ನೀಡುವವರು ಅಥವಾ ಭಯೋತ್ಪಾದನೆಯನ್ನು ರಾಷ್ಟ್ರೀಯ ನೀತಿಯನ್ನಾಗಿ ಮಾಡಿಕೊಂಡಿರುವವರ ವಿರುದ್ಧ ತುರ್ತು ಕ್ರಮ ಕೈಗೊಳ್ಳುವಂತೆ’ ಪ್ರಧಾನಿ ಈ ಸಂದರ್ಭದಲ್ಲಿ ಕರೆ ನೀಡಿದರು.

‘ಭಯೋತ್ಪಾದನೆ ಬಗ್ಗೆ ಶೂನ್ಯ ಸಹನೆ ಇರಬೇಕು’ ಎಂದು ಪ್ರಧಾನಿ ಭಾರತಕ್ಕೆ ಪ್ರವಾಸ ಬಂದಿರುವ ಐರೋಪ್ಯ ಒಕ್ಕೂಟದ ಶಾಸನಕರ್ತರ ಜೊತೆ ಮಾತನಾಡುತ್ತಾ ಹೇಳಿದರು.

ದೇಶದ ವಿವಿಧ ಭಾಗಗಳಿಗೆ ಭೇಟಿ ನೀಡಲಿರುವ ಐರೋಪ್ಯ ಸಂಸತ್ತಿನ ಸದಸ್ಯರ ತಂಡವು ಜಮ್ಮು ಮತ್ತು ಕಾಶ್ಮೀರಕ್ಕೆ ಮಂಗಳವಾರ ಭೇಟಿ ನೀಡಲಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ  ವಿಶೇಷ ಸ್ಥಾನಮಾನವನ್ನು ಒದಗಿಸಿದ್ದ ಸಂವಿಧಾದ ೩೭೦ನೇ ವಿಧಿಯನ್ನು ರದ್ದು ಪಡಿಸಿ, ರಾಜ್ಯವನ್ನು ಜಮ್ಮು-ಕಾಶ್ಮೀರ ಹಾಗೂ ಲಡಾಖ್ ಎಂಬುದಾಗಿ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲು ಕೇಂದ್ರ ಸರ್ಕಾರವು ನಿರ್ಧರಿಸಿದ ಬಳಿಕ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡುತ್ತಿರುವ ಮೊತ್ತ ಮೊದಲ ಶಾಸನಕರ್ತರ ತಂಡ ಇದಾಗಿದೆ.

‘ಈ ಭೇಟಿಯು ನಿಮಗೆ ರಾಜ್ಯದ ಜಮ್ಮು, ಕಾಶ್ಮೀರ ಮತ್ತು ಲಡಾಖ್ ಈ ಮೂರು ಪ್ರದೇಶಗಳ ಸಾಂಸ್ಕೃತಿಕ ಮತ್ತು ಧಾರ್ಮಿಕ ವೈವಿಧ್ಯವನ್ನು ಚೆನ್ನಾಗಿ ಅರ್ಥ ಮಾಡಿಸಲಿದೆ ಮತ್ತು ಈ ಪ್ರದೇಶದಲ್ಲಿನ ಅಭಿವೃದ್ಧಿ ಮತ್ತು ಆಡಳಿತದ ಆದ್ಯತೆಗಳ ಬಗ್ಗೆ ಸ್ಪಷ್ಟ ಚಿತ್ರವನ್ನು ನೀಡಲಿದೆ’ ಎಂದು ಪ್ರಧಾನಿ ಮೋದಿ ತಂಡಕ್ಕೆ ತಿಳಿಸಿದರು.

ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿಂತೆ ಸರ್ಕಾರ ಇತ್ತೀಚೆಗೆ ಕೈಗೊಂಡ ಕ್ರಮದ ಸಂದರ್ಭವನ್ನು ಕೂಡಾ ಪ್ರಧಾನಿ ಮೋದಿ ಐರೋಪ್ಯ ಸಂಸದರ ತಂಡಕ್ಕೆ ತಿಳಿಸಿದರು ಎಂದು ಹೇಳಲಾಗಿದೆ.  ಐರೋಪ್ಯ ಒಕ್ಕೂಟದ ಶಾಸನಕರ್ತರ ತಂಡವು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ಭೇಟಿ ಮಾಡಿದ್ದು, ಈ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಸೂಚ್ಯವಾಗಿ ಹೇಳಿದ ವಿಚಾರವನ್ನು ದೋವಲ್ ಅವರು ವಿಷದವಾಗಿ ತಿಳಿಸಿದರು ಎಂದು ಸುದ್ದಿ ಮೂಲಗಳು ತಿಳಿಸಿದವು.

ಐರೋಪ್ಯ ಸಂಸತ್ತಿನಲ್ಲಿ ಈಸ್ಟ್ ಮಿಡ್‌ಲ್ಯಾಂಡನ್ನು  ಪ್ರತಿನಿಧಿಸುವ ಬಿಲ್ ನ್ಯೂಟನ್ ಡನ್ ಅವರು ’ತಂಡವು ಮಂಗಳವಾರ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲಿದೆ’ ಎಂದು ಸುದ್ದಿ ಸಂಸ್ಥೆಗೆ ತಿಳಿಸಿದರು.

‘ಪ್ರಧಾನಿಯವರು ನಮಗೆ ಅಲ್ಲಿನ ವಿಷಯದ ಬಗ್ಗೆ (೩೭೦ನೇ ವಿಧಿ ರದ್ದು) ವಿವರಿಸಿದರು. ಆದರೆ ಆ ನೆಲ ನಿಜವಾಗಿ  ಹೇಗಿದೆ ಎಂಬುದಾಗಿ ನೋಡಲು ಮತ್ತು ಕೆಲವು ಜನರ ಜೊತೆಗೆ ಮಾತನಾಡಲು ನಾನು ಬಯಸಿದ್ದೇನೆ. ನಾವೆಲ್ಲರೂ ಬಯಸಿರುವುದು ಸಹಜ ಸ್ಥಿತಿ ಮತ್ತು ಪ್ರತಿಯೊಬ್ಬರಿಗೂ ಶಾಂತಿ’ ಎಂದು ಅವರು ನುಡಿದರು.

ತಂಡವು ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಿರುವ ಭೇಟಿಯನ್ನು ಉಲ್ಲೇಖಿಸಿರುವ ಪ್ರಧಾನ ಮಂತ್ರಿಯವರ ಕಚೇರಿಯ ಹೇಳಿಕೆಯು, ತಮ್ಮ ಅವಧಿಯ ಆರಂಭದಲ್ಲೇ ಭಾರತಕ್ಕೆ ಭೇಟಿ ನೀಡುವ ಮೂಲಕ ಭಾರತದ ಜೊತೆಗಿನ ಬಾಂಧವ್ಯಕ್ಕೆ ಸಂಬಂಧಿಸಿದಂತೆ ಮಹತ್ವ ನೀಡಿರುವ ತಂಡದ ಕ್ರಮವನ್ನು ಶ್ಲಾಘಿಸಿದೆ.

‘ಐರೋಪ್ಯ ಒಕ್ಕೂಟದ ಜೊತೆಗಿನ ಭಾರತದ ಬಾಂಧವ್ಯವು ಪ್ರಜಾತಾಂತ್ರಿಕ ಮೌಲ್ಯಗಳ ಬಗೆಗೆ ಹಂಚಿಕೊಳ್ಳಲಾಗಿರುವ ಹಿತಾಸಕ್ತಿಗಳು ಮತ್ತು ಸಮಾನ ಬದ್ಧತೆಯನ್ನು  ಆಧರಿಸಿರುವಂತಹುದು’ ಎಂದು ಪ್ರಧಾನಿ ಮೋದಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ ವಾಸ್ತವ ಸ್ಥಿತಿ ಅರಿಯಲು ಅಲ್ಲಿಗೆ ಭೇಟಿ ನೀಡಲಿರುವ ೨೮ ಮಂದಿ ಸದಸ್ಯರನ್ನು ಒಳಗೊಂಡ ಯೂರೋಪ್ ಒಕ್ಕೂಟದ ತಂಡ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ಭೇಟಿ ಮಾಡಿ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನ ಮಾನ ರದ್ದಾದ ನಂತರ ಉದ್ಭವಿಸಿರುವ ಬೆಳವಣಿಗೆಗಳ ಕುರಿತು ಚರ್ಚಿಸಿದೆ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿದವು.

ಇತ್ತೀಚೆಗೆ ಅಮೆರಿಕದ ವಾಷಿಂಗ್ಟನ್‌ನಲ್ಲಿ ನಡೆದ ಜನಪ್ರತಿನಿಧಿಗಳ ಸಭೆಯಲ್ಲಿ ತಜ್ಞರ ಒಂದು ಗುಂಪು ಜಮ್ಮು-ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನ ರದ್ದಾದ ನಂತರ ಉದ್ಭವಿಸಿರುವ ಸಮಸ್ಯೆಗಳ ಕುರಿತು ಕಾಳಜಿ ವ್ಯಕ್ತಪಡಿಸಿತ್ತು. ಈ ಬೆಳವಣಿಗೆ ನಂತರ ಯೂರೋಪಿಯನ್ ರಾಷ್ಟ್ರಗಳ ಈ ತಂಡ ಭೇಟಿ ನೀಡಿರುವುದು ಮಹತ್ವ ಪಡೆದುಕೊಂಡಿದೆ.

ಈ ಸಂಬಂಧ ಅಮೆರಿಕಾದ ರಾಜ್ಯ ಸಹಾಯಕ ಕಾರ್ಯದರ್ಶಿ ಅಲೈಸ್ ವೆಲ್ಸ್ ಮಾತನಾಡಿ, ಜಮ್ಮು-ಕಾಶ್ಮೀರದಲ್ಲಿ ಮಾನವ ಹಕ್ಕುಗಳಿಗೆ ರಕ್ಷಣೆ ಹಾಗೂ ಗೌರವ ನೀಡಬೇಕು, ಇಂಟರ್ ನೆಟ್ ಮತ್ತು ಮೊಬೈಲ್ ನೆಟ್ ವರ್ಕ್ ಕಾರ್ಯನಿರ್ವಹಿಸಲು ಅವಕಾಶ ನೀಡಬೇಕೆಂದು ಭಾರತ ಸರ್ಕಾರವನ್ನು ಒತ್ತಾಯಿಸಿ ಎಂದು ಹೇಳಿದ್ದರು.

ಅಲ್ಲದೆ, ಜಮ್ಮು ಕಾಶ್ಮೀರದಲ್ಲಿ ವಿಶೇಷ ಸ್ಥಾನ ಮಾನ ರದ್ದಾದ ಸಂದರ್ಭದಿಂದ ಮೂವರು ಮಾಜಿ ಮುಖ್ಯಮಂತ್ರಿಗಳನ್ನು ಗೃಹ ಬಂಧನದಲ್ಲಿ ಇರಿಸಿದ್ದು, ರಾಜಕೀಯ ಮುಖಂಡರು ಹಾಗೂ ಸ್ಥಳೀಯ ನಿವಾಸಿಗಳನ್ನು ವಶಕ್ಕೆ ತೆಗೆದುಕೊಂಡಿರುವುದರ ಕುರಿತು ಕಾಳಜಿ ವ್ಯಕ್ತಪಡಿಸುವುದು ನಮ್ಮ ಕರ್ತವ್ಯ ಎಂದೂ ಅವರು ಹೇಳಿದ್ದರು.

ಸುಬ್ರಮಣಿಯನ್ ಸ್ವಾಮಿ ವಿರೋಧ: ಈ ಮಧ್ಯೆ, ಜಮ್ಮು ಮತ್ತು ಕಾಶ್ಮೀರಕ್ಕೆ ಐರೋಪ್ಯ ಸಂಸದರ ತಂಡದ ಭೇಟಿಯನ್ನು ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರು ಸೋಮವಾರ ’ಇದು ಅನೈತಿಕ’ ಎಂಬುದಾಗಿ ಖಂಡಿಸಿ, ತತ್ ಕ್ಷಣ ಅದನ್ನು ರದ್ದು ಪಡಿಸುವಂತೆ ಆಗ್ರಹಿಸಿದರು.

‘ಈ ಕ್ರಮವು ರಾಷ್ಟ್ರದ ನೀತಿಯ ವಿಕೃತಿಯಾಗಿದೆ. ಐರೋಪ್ಯ ಒಕ್ಕೂಟದ ಸಂಸದರಿಗೆ ಖಾಸಗಿಯಾಗಿ (ಐರೋಪ್ಯ ಒಕ್ಕೂಟದ ಅಧಿಕೃತ ನಿಯೋಗವಲ್ಲ) ಭೇಟಿಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ವ್ಯವಸ್ಥೆ ಮಾಡಿದ್ದು ನನಗೆ ಅಚ್ಚರಿ ಉಂಟು ಮಾಡಿದೆ. ಇದು ರಾಷ್ಟ್ರೀಯ ನೀತಿಯ ವಿಕೃತಿ. ಇದು ಅನೈತಿಕವಾದ್ದರಿಂದ ಸರ್ಕಾರ ತತ್ ಕ್ಷಣ ಇದನ್ನು ರದ್ದು ಪಡಿಸಬೇಕು’ ಎಂದು ಸ್ವಾಮಿ ಟ್ವೀಟ್ ಮಾಡಿದರು.

October 28, 2019 Posted by | ನರೇಂದ್ರ ಮೋದಿ, ಪಾಕಿಸ್ತಾನ, ಪ್ರಧಾನಿ, ಭಯೋತ್ಪಾದಕ, ಭಾರತ, ರಾಷ್ಟ್ರೀಯ, ವಿಶ್ವ/ ಜಗತ್ತು, Flash News, General Knowledge, India, Nation, News, Pakistan, Prime Minister, Spardha, Terror, World | | Leave a comment

ಬಿಜೆಪಿಗೆ ‘ಮಹಾ’  ಆಘಾತ: ಸಿಗಲಿಲ್ಲ ನಿರೀಕ್ಷಿತ ‘ಪ್ರಚಂಡ’ ಬಹುಮತ

24 modi amith shah
ಮಹಾರಾಷ್ಟ್ರದಲ್ಲಿ ಸರಳ ಬಹುಮತ, ಅತಂತ್ರ ಹರಿಯಾಣದಲ್ಲಿ ಸರ್ಕಾರ ರಚನೆಗೆ ತಂತ್ರ

ನವದೆಹಲಿ: ಭಾರತೀಯ ಜನತಾ ಪಕ್ಷ ನೇತೃತ್ವದ ಎನ್‌ಡಿಎ-೨ ಸರ್ಕಾರವು ಕೇಂದ್ರದಲ್ಲಿ ಅಧಿಕಾರಕ್ಕೆ ಏರಿದ ಬಳಿಕ ಮಹಾರಾಷ್ಟ್ರ ಮತ್ತು ಹರಿಯಾಣ ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಉದಯಿಸಿ, ಸರ್ಕಾರ ರಚನೆಯ ಘೋಷಣೆ ಮಾಡಿದ್ದರೂ, ನಿರೀಕ್ಷೆಗಳಿಗೆ ವಿರುದ್ಧವಾಗಿ ಸ್ಥಾನಗಳ ನಷ್ಟದ ಭಾರೀ ಆಘಾತವನ್ನು 2019 ಅಕ್ಟೋಬರ್ 24ರ ಗುರುವಾರ ಅನುಭವಿಸಿತು.

ಮಹಾರಾಷ್ಟ್ರದಲ್ಲಿ ೨೮೮ ಸ್ಥಾನಗಳ ಪೈಕಿ ಬಿಜೆಪಿ ಮತ್ತು ಶಿವಸೇನಾ ಮೈತ್ರಿಕೂಟ ೧೬೨ ಸ್ಥಾನಗಳೊಂದಿಗೆ ಬಹುಮತ ಪಡೆದರೂ, ೨೦೧೪ಕ್ಕೆ ಹೋಲಿಸಿದರೆ ಮೈತ್ರಿಕೂಟ ೨೩ ಸ್ಥಾನಗಳ ನಷ್ಟ ಅನುಭವಿಸಿತು. ೯೦ ಸದಸ್ಯಬಲದ ಹರಿಯಾಣದಲ್ಲಿ ಅತಂತ್ರ ವಿಧಾನಸಭೆ ರೂಪುಗೊಂಡಿದ್ದು, ೪೦ ಸ್ಥಾನಗಳೊಂದಿಗೆ ಏಕೈಕ ದೊಡ್ಡ ಪಕ್ಷವಾಗಿ ಉದಯಿಸಿದ ಬಿಜೆಪಿ ೭ ಸ್ಥಾನಗಳ ನಷ್ಟ ಅನುಭವಿಸಿತು.

ಉಭಯ ರಾಜ್ಯಗಳಲ್ಲೂ ವಿರೋಧಿ ಕಾಂಗ್ರೆಸ್ ಚೇತರಿಸಿಕೊಂಡಿತು. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಮತ್ತು ಎನ್‌ಸಿಪಿ ಮೈತ್ರಿಕೂಟ ೧೨ ಸ್ಥಾನಗಳ ಹೆಚ್ಚುವರಿ ಗಳಿಕೆಯೊಂದಿಗೆ 104  ಸ್ಥಾನಗಳನ್ನು ಗೆದ್ದಿವೆ. ಹರಿಯಾಣದಲ್ಲಿ ೧೬ ಹೆಚ್ಚುವರಿ ಸ್ಥಾನಗಳಿಕೆಯೊಂದಿಗೆ ೩೧ ಸ್ಥಾನಗಳನ್ನು ಕಾಂಗ್ರೆಸ್ ಗೆದ್ದಿದೆ. ಮಹಾರಾಷ್ಟ್ರದಲ್ಲಿ ಇತರರು ೩೧ ಸ್ಥಾನಗಳನ್ನು ಗೆದ್ದರೆ, ಹರಿಯಾಣದಲ್ಲಿ ೧೯ ಮಂದಿ ಇತರರು ಗೆದ್ದಿದ್ದು ಈ ಪೈಕಿ ಜನನಾಯಕ ಜನತಾ ಪಕ್ಷದ (ಜೆಜೆಪಿ) ನಾಯಕ ದುಶ್ಯಂತ್ ’ಕಿಂಗ್ ಮೇಕರ್’ ಸ್ಥಾನಕ್ಕೆ ಏರಿದರು.

ಬಿಜೆಪಿ ಮತ್ತು ಕಾಂಗ್ರೆಸ್ ಅಧಿಕಾರಕ್ಕಾಗಿ ಹಣಾಹಣಿಗೆ ಇಳಿದಿದ್ದು, ಬೆಂಬಲಕ್ಕಾಗಿ ದುಶ್ಯಂತ್ ಕಡೆಗೆ ನೋಡುವಂತಾಗಿದೆ. ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ಅವರು ಸರ್ಕಾರ ರಚನೆಗೆ ರಾಜ್ಯಪಾಲ ಸತ್ಯದೇವ್ ನಾರಾಯಣ್ ಆರ್ಯ ಬಳಿ ಹಕ್ಕು ಮಂಡಿಸಿ, ಏಕೈಕ ದೊಡ್ಡ ಪಕ್ಷವಾಗಿರುವ ನೆಲೆಯಲ್ಲಿ ಬಿಜೆಪಿಯನ್ನು ಸರ್ಕಾರ ರಚಿಸಲು ಆಹ್ವಾನಿಸಬೇಕು ಎಂದು ಕೋರಿದರು.

ಚುನಾವಣಾ ಫಲಿತಾಂಶದ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರು ಪಕ್ಷದ ಸಾಧನೆಗಾಗಿ ಮಹಾರಾಷ್ಟ್ರ ಮತ್ತು ಹರಿಯಣದ ಮುಖ್ಯಮಂತ್ರಿಗಳನ್ನು ಅಭಿನಂದಿಸಿ ಪಕ್ಷಕ್ಕೆ ಮತ್ತೊಮ್ಮೆ ಜನರ ಸೇವೆ ಮಾಡಲು ಅವಕಾಶ ಕಲ್ಪಿಸಿಕೊಟ್ಟದ್ದಕ್ಕಾಗಿ ಧನ್ಯವಾದ ಸಲ್ಲಿಸಿದರು.

ಮಹಾರಾಷ್ಟ್ರದಲ್ಲಿ ೨೨೦ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲುವ ಮಹತ್ವಾಕಾಂಕ್ಷೆಯ ಗುರಿ ಇಟ್ಟುಕೊಂಡಿದ್ದ ಬಿಜೆಪಿ-ಶಿವಸೇನಾ ಮೈತ್ರಿಕೂಟ ತನ್ನ ಗುರಿ ತಲುಪುವಲ್ಲಿ ಮುಗ್ಗರಿಸಿತು. ಆದರೆ ಸರ್ಕಾರ ರಚನೆಗೆ ಬೇಕಾದ ಸರಳ ಬಹುಮತವನ್ನು ಪಡೆಯಿತು. ಆದರೆ ಬಿಜೆಪಿಯ ಸ್ಥಾನ ನಷ್ಟದ ಲಾಭ ಪಡೆಯಲು ಹೆಜ್ಜೆ ಮುಂದಿಟ್ಟಿರುವ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ  ಅಧಿಕಾರ ಹಂಚಿಕೆಯಲ್ಲಿ  ೫೦:೫೦ ಸೂತ್ರದ ಪಾಲನೆಯಾಗಬೇಕು’ ಎಂಬ ಸಂದೇಶವನ್ನು ಬಿಜೆಪಿಗೆ ರವಾನಿಸಿದರು. ಸರ್ಕಾರ ರಚನೆಗೆ ತಮಗೆ ಅವಸರವಿಲ್ಲ ಎಂಬುದಾಗಿ ಹೇಳುವ ಮೂಲಕ ಬಿಜೆಪಿಯು ತರಾತುರಿಯಲ್ಲಿ ಸರ್ಕಾರ ರಚಿಸದಂತೆ ತಡೆಯುವ ನಿಟ್ಟಿನಲ್ಲಿ ಅವರು ಕಾಲಿಟ್ಟರು.

ಇತ್ತ ೯೦ ಸ್ಥಾನಗಳಿಗೂ ಸ್ಪರ್ಧಿಸಿದ್ದ ಹರಿಯಾಣದಲ್ಲಿ ಕೇವಲ ೪೦ ಸ್ಥಾನ ಗೆಲ್ಲಲು ಸಮರ್ಥವಾಗಿರುವ ಬಿಜೆಪಿಗೆ ಬಹುಮತದ ಅಂಚಿಗೆ ಬರಲು ಅಸಾಧ್ಯವಾದ್ದರಿಂದ ಸರ್ಕಾರ ರಚನೆ ಅಷ್ಟೊಂದು ಸುಲಭವಲ್ಲ. ೯೦ ಸದಸ್ಯಬಲದ ವಿಧಾನಸಭೆಯಲ್ಲಿ ಬಹುಮತಕ್ಕೆ ೪೬ ಸ್ಥಾನಗಳು ಬೇಕಾಗಿವೆ.

ಹರಿಯಾಣದಲ್ಲಿ ಅತಂತ್ರ ವಿಧಾನಸಭೆ ರಚನೆಯಾಗುತ್ತಿದ್ದಂತೆಯೇ  ಮ್ಯಾಜಿಕ್ ಸಂಖ್ಯೆ ೪೬ ತಲುಪಲು ರಾಜಕೀಯ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆ ಶುರುವಾಯಿತು. ರಾಜ್ಯದಲ್ಲಿ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ವಿರುದ್ಧ ಪ್ರಚಾರ ಸಮರದ ನೇತೃತ್ವ ವಹಿಸಿದ್ದ ಕಾಂಗ್ರೆಸ್ ನಾಯಕ ಭೂಪೀಂದರ್ ಹೂಡಾ ಅವರು ಬಿಜೆಪಿಯು ಅಧಿಕಾರಕ್ಕೆ ಮರಳದಂತೆ ತಡೆಯಲು ಕೈಜೋಡಿಸುವಂತೆ ಇತರ ಪಕ್ಷಗಳು ಮತ್ತು ಪಕ್ಷೇತರರಿಗೆ ಕ್ಷಿಪ್ರ ಮನವಿ ಮಾಡಿದರು.

ಬಿಜೆಪಿಯು ಸರ್ಕಾರ ರಚನೆಯ ಹಕ್ಕು ಮಂಡನೆಯ ಸುಳಿವನ್ನು ನೀಡಿತು. ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷಾಧ್ಯಕ್ಷ ಅಮಿತ್ ಶಾ ಅವರು ತಮ್ಮ ಟ್ವೀಟ್‌ಗಳಲ್ಲಿ ಈ ಇಂಗಿತ ವ್ಯಕ್ತ ಪಡಿಸುವುದರ ಜೊತೆಗೆ ಮನೋಹರಲಾಲ್ ಖಟ್ಟರ್ ಮೊದಲಿಗರಾಗಿ ರಾಜ್ಯಪಾಲರ ಬಳಿ ಸರ್ಕಾರ ರಚನೆಯ ಹಕ್ಕು ಮಂಡಿಸಿದರು.

‘ಹರಿಯಾಣದಲ್ಲಿ ಮನೋಹರಲಾಲ್ ಖಟ್ಟರ್ ಅವರ ಸರ್ಕಾರವು ಜನರ ಕಲ್ಯಾಣಕ್ಕಾಗಿ ಕೇಂದ್ರದಲ್ಲಿನ (ನರೇಂದ್ರ) ಮೋದಿ ನಾಯಕತ್ವದ ಅಡಿಯಲ್ಲಿ ಸರ್ವ ಪ್ರಯತ್ನ ಮಾಡಿದೆ. ಬಿಜೆಪಿಯನ್ನು ಏಕೈಕ ದೊಡ್ಡ ಪಕ್ಷವಾಗಿ ಆಯ್ಕೆ ಮಾಡಿರುವುದಕ್ಕಾಗಿ ಮತ್ತು ಇನ್ನೊಮ್ಮೆ ಅವರ ಸೇವೆ ಸಲ್ಲಿಸಲು ಅವಕಾಶ ನೀಡಿರುವುದಕ್ಕಾಗಿ ನಾನು ಜನತೆಗೆ ಧನ್ಯವಾದ ಸಲ್ಲಿಸುತ್ತೇನೆ’ ಎಂದು ಶಾ ತಮ್ಮ ಟ್ವೀಟಿನಲ್ಲಿ  ತಿಳಿಸಿದರು.

ಕೆಲವೇ ನಿಮಿಷಗಳಲ್ಲಿ ಇದಕ್ಕೆ ಬೆಂಬಲವಾಗಿ ಟ್ವೀಟ್ ಮಾಡಿದ ಪ್ರಧಾನಿ ಮೋದಿ, ’ನಮ್ಮನ್ನು ಆಶೀರ್ವದಿಸಿದ್ದಕ್ಕಾಗಿ ಹರಿಯಾಣದ ಜನತೆಗೆ ಧನ್ಯವಾದ ಅರ್ಪಿಸುವೆ. ಇದೇ ಉತ್ಸಾಹ ಮತ್ತು ಸಮರ್ಪಣಾ ಭಾವದೊಂದಿಗೆ ನಾವು ಕೆಲಸ ಮುಂದುವರೆಸುತ್ತೇವೆ. ನಮ್ಮ ಅಭಿವೃದ್ಧಿ ಕಾರ್‍ಯಸೂಚಿಯನ್ನು ಜನತೆಯ ಬಳಿಗೆ ಒಯ್ಯಲು ವಿಶೇಷವಾಗಿ ಶ್ರಮಿಸಿದ ಹರಿಯಾಣದ ಬಿಜೆಪಿ ಕಾರ್‍ಯಕರ್ತರಿಗೂ ನನ್ನ ವಂದನೆಗಳು ಸಲ್ಲುತ್ತವೆ’ ಎಂದು ಬರೆದರು.

ಮಹಾರಾಷ್ಟ್ರ ಮತ್ತು ಹರಿಯಾಣ ಎರಡೂ ಕಡೆ ಗೆದ್ದಿರುವ ಕೆಲವು ಬಂಡಾಯ ಶಾಸಕರ ಜೊತೆಗೆ ಬಿಜೆಪಿಯ ಸಂಪರ್ಕ ಸಾಧಿಸಿದೆ ಎನ್ನಲಾಯಿತು. ಹರಿಯಾಣದಲ್ಲಿ ಬಂಡಾಯ ಶಾಸಕರು ಮತ್ತು ಸಣ್ಣ ಪಕ್ಷಗಳ ಬೆಂಬಲದೊಂದಿಗೆ ಮುಂದಿನ  ಸರ್ಕಾರ ರಚಿಸಲು  ಬಿಜೆಪಿ ಮುಂದಾಗಲಿದೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಮಾಧ್ಯಮ ಒಂದಕ್ಕೆ ತಿಳಿಸಿದರು.

ಪಕ್ಷದ ತಂತ್ರದ ಬಗ್ಗೆ ಬಿಜೆಪಿ ನಾಯಕ ವಿವರಿಸಲಿಲ್ಲ. ಆದರೆ ಇಂಡಿಯನ್ ನ್ಯಾಷನಲ್ ಲೋಕದಳದ ಅಭಯ್ ಸಿಂಗ್ ಚೌಟಾಲರಂತಹ ಕೆಲವರು ಜನನಾಯಕ ಜನತಾ ಪಕ್ಷದ ಪ್ರತಿಸ್ಪರ್ಧಿ ದುಶ್ಯಂತ ಚೌಟಾಲ ’ಕಿಂಗ್ ಮೇಕರ್’ ಆಗದಂತೆ ತಡೆಯಲು ಬಿಜೆಪಿಯನ್ನು ಬೆಂಬಲಿಸುವ ಸಾಧ್ಯತೆ ಇದೆ ಎಂದು ಹೇಳಿದರು.

ಹರಿಯಾಣ ಸಮೀಕ್ಷೆ ಲೆಕ್ಕಾಚಾರ ತಪ್ಪಾಗಿದ್ದು ಹೇಗೆ?

ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭಾ ಮತಎಣಿಕೆಯ ಅಂತಿಮ ಘಟ್ಟ ತಲುಪುತ್ತಿದ್ದಂತೆಯೇ ಫಲಿತಾಂಶ ಎಲ್ಲರಿಗೂ ಅಚ್ಚರಿ ತಂದಿತು. ೨೦೧೯ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹರಿಯಾಣದ ಹತ್ತೂ ಲೋಕಸಭಾ ಕ್ಷೇತ್ರಗಳಲ್ಲಿ ಜಯಗಳಿಸಿತ್ತು. ಅಲ್ಲದೇ ಇಂಡಿಯಾ ಟುಡೇ, ಆಕ್ಸಿಸ್ ಹೊರತು ಪಡಿಸಿ ಇತರ ಎಲ್ಲಾ ಮತದಾನೋತ್ತರ ಸಮೀಕ್ಷೆಗಳೂ ೯೦ ಸದಸ್ಯಬಲದ ಹರಿಯಾಣದಲ್ಲಿ ಬಿಜೆಪಿ ೭೦ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಭವಿಷ್ಯ ನುಡಿದಿದ್ದವು. ಮಹಾರಾಷ್ಟ್ರದಲ್ಲೂ ಬಿಜೆಪಿ-ಶಿವಸೇನಾ ಮೈತ್ರಿಕೂಟದ ಬಲ ೨೦೦ರ ಗಡಿ ದಾಟಬಹುದು ಎಂದು ಹೇಳಿದ್ದವು.

ಆದರೆ ಇದೀಗ ಹರಿಯಾಣ ಅತಂತ್ರ ವಿಧಾನಸಭೆಯಾದರೆ, ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನಾ ಮೈತ್ರಿಕೂಟದಕ್ಕೆ ಸರಳ ಬಹುಮತವಷ್ಟೇ ಲಭಿಸಿದೆ.

ಬಿಜೆಪಿ ೪೦ ಸ್ಥಾನಗಳಲ್ಲಿ, ಕಾಂಗ್ರೆಸ್ ೩೧ ಹಾಗೂ ಜೆಜೆಪಿ ೧೨ ಸ್ಥಾನಗಳಲ್ಲಿ ಜಯ ಸಾಧಿಸುವತ್ತ ಹೆಜ್ಜೆ ಇಟ್ಟವು. ಶೇ.೪೦ರಷ್ಟು ಮತಎಣಿಕೆ ಮುಕ್ತಾಯಗೊಂಡಾಗ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿಗೆ ಸಾಕ್ಷಿಯಾಗಿತ್ತು.

ಈ ಹಿನ್ನೆಲೆಯಲ್ಲಿ ಎಲ್ಲಾ ಸಮೀಕ್ಷೆಗಳ ಲೆಕ್ಕಚಾರ ತಲೆಕೆಳಗಾಗಿದ್ದು ಹೇಗೆ ಎಂಬ ಪ್ರಶ್ನೆ ಉದ್ಭವಿಸಿತು. ಅದಕ್ಕೆ ಮುಖ್ಯ ಕಾರಣ ಬಹುತೇಕ ಸಮೀಕ್ಷೆಗಳು ೨೦೧೯ರ ಲೋಕಸಭಾ ಚುನಾವಣೆಯ ಫಲಿತಾಂಶವನ್ನೇ ನೂತನ ಮಾನದಂಡವಾಗಿ ಪರಿಗಣಿಸಿದ್ದು ಎಂದು ಇದೀಗ ವಿಶ್ಲೇಷಿಸಲಾಗಿದೆ.

೨೦೧೯ರ ಲೋಕಸಭಾ ಚುನಾವಣೆಯಲ್ಲಿ ಹರಿಯಾಣದಲ್ಲಿ ಬಿಜೆಪಿ ಶೇ.೫೮ರಷ್ಟು ಮತ ಪಡೆದಿತ್ತು. ಇದೀಗ ವಿಧಾನಸಭಾ ಚುನಾವಣೆಯಲ್ಲಿ ಶೇ.೩೬ಕ್ಕೆ ಕುಸಿತ ಕಂಡಿದೆ. ೨೦೧೪ರ ಚುನಾವಣೆಗೆ ಹೋಲಿಸಿದರೆ ಬಿಜೆಪಿ ಕೇವಲ ಶೇ.೨-೩ರಷ್ಟು ಮತಗಳನ್ನಷ್ಟೇ ಹೆಚ್ಚು ಪಡೆದಿದೆ. ಆದರೆ ೨೦೧೯ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಶೇ.೨೦ರಷ್ಟು ಭಾರೀ ನಷ್ಟ ಅನುಭವಿಸಿದೆ.

ಮಹಾರಾಷ್ಟ್ರದ ಪ್ರವಾಹಪೀಡಿತ ಪ್ರದೇಶಗಳಲ್ಲಿ ಬಿಜೆಪಿಗೆ ಸೋಲು:

ಮಹಾರಾಷ್ಟ್ರದ ಕೊಲ್ಹಾಪುರದ ಹತ್ತು ಕ್ಷೇತ್ರಗಳಲ್ಲಿ ಬಿಜೆಪಿಗೆ ಹೀನಾಯ ಸೋಲು ಅನುಭವಿಸಿದೆ. ಅಲ್ಲದೇ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಪ್ರವಾಹ ಪೀಡಿತ ಕ್ಷೇತ್ರಗಳಲ್ಲಿ ಬಿಜೆಪಿ ಪರಾಜಯಗೊಂಡಿದೆ. ೨೦೧೪ರ ಚುನಾವಣೆಯಲ್ಲಿ ಬಿಜೆಪಿ ೧೨೨ ಸ್ಥಾನಗಳಲ್ಲಿ ಜಯ ಸಾಧಿಸಿತ್ತು. ಆದರೆ ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ನೂರು ಸ್ಥಾನಗಳಲ್ಲಷ್ಟೇ ಗೆಲುವು ಪಡೆಯಲು ಯಶಸ್ವಿಯಾಗಿದೆ. ಚುನಾವಣೋತ್ತರ ಮತ್ತು ಮತದಾನೋತ್ತರ ಸಮೀಕ್ಷೆಗಳೆಲ್ಲವೂ ಮಹಾರಾಷ್ಟ್ರದಲ್ಲಿ ಬಿಜೆಪಿಯೇ ೧೫೦ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಭವಿಷ್ಯ ನುಡಿದಿದ್ದವು.

ಆದರೆ ಈ ಬಾರಿ ಬಿಜೆಪಿ 105 ಸ್ಥಾನಗಳಲ್ಲಿ ಶಿವಸೇನಾ 56, ಕಾಂಗ್ರೆಸ್ 44, ಎನ್ ಸಿಪಿ 54 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದವು. ಈ ಮೂಲಕ ಕೇವಲ ಬಿಜೆಪಿ ಏಕಾಂಗಿಯಾಗಿಯೇ ಸ್ಪಷ್ಟ ಬಹುಮತ ಪಡೆಯಲಿದೆ ಎಂಬ ಭವಿಷ್ಯ ಹುಸಿಯಾಯಿತು.

ಯಾರಿಗೆ ಎಷ್ಟು ಸ್ಥಾನ

ಮಹಾರಾಷ್ಟ್ರ    ಒಟ್ಟು ಸ್ಥಾನ 288  ಮ್ಯಾಜಿಕ್ ಸಂಖ್ಯೆ 145

ಪಕ್ಷ                           ಗೆಲುವು                                                        2014ರ ಸ್ಥಾನ

ಬಿಜೆಪಿ+                     162 (ಬಿಜೆಪಿ 103+ ಶಿವಸೇನಾ 54)                     185

ಕಾಂಗ್ರೆಸ್ +                  98  (ಕಾಂಗ್ರೆಸ್ 44+ ಎನ್‌ಸಿಪಿ 54)                      83

ಇತರರು                       22                                                                    20

 

ಹರಿಯಾಣ  ಒಟ್ಟು ಸ್ಥಾನ 90  ಮ್ಯಾಜಿಕ್ ಸಂಖ್ಯೆ  46

ಪಕ್ಷ                     ಗೆಲುವು                                                              2014ರ ಸ್ಥಾನ

ಬಿಜೆಪಿ                      40                                                                         47

ಕಾಂಗ್ರೆಸ್                   31                                                                        15

ಜೆಜೆಪಿ                       10                                                                         –

ಇತರರು                     9                                                                        28

October 24, 2019 Posted by | ನರೇಂದ್ರ ಮೋದಿ, ಪಾಕಿಸ್ತಾನ, ಭಾರತ, ರಾಷ್ಟ್ರೀಯ, Flash News, General Knowledge, India, Nation, News, Politics, Prime Minister, Spardha | , | Leave a comment

ದೆಹಲಿ ಅನಧಿಕೃತ ಕಾಲೋನಿಗಳ ೪೦ ಲಕ್ಷ ಮಂದಿಗೆ ಮಾಲೀಕತ್ವ ಹಕ್ಕು: ಕೇಂದ್ರ ನಿರ್ಧಾರ

23 modi deli sites
ನವದೆಹಲಿ:
ರಾಷ್ಟ್ರದ ರಾಜಧಾನಿ ದೆಹಲಿಯ ಅನಧಿಕೃತ ಕಾಲೋನಿಗಳಲ್ಲಿ ವಾಸವಾಗಿರುವ ೪೦ ಲಕ್ಷ ಮಂದಿಗೆ ಈ ಕಾಲೋನಿಗಳ ತಮ್ಮ ಮನೆಗಳ ಮೇಲಿನ ಮಾಲೀಕತ್ವ ಹಕ್ಕು ಒದಗಿಸಲು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ  2019 ಅಕ್ಟೋಬರ್ 23ರ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ನಿರ್ಧರಿಸಿತು.

ಈ ಅನಧಿಕೃತ ಕಾಲೋನಿಗಳಲ್ಲಿನ ಮನೆಗಳು ಸರ್ಕಾರಿ ಭೂಮಿಯಲ್ಲಿ ನಿರ್ಮಿಸಲ್ಪಟ್ಟಿರಲಿ ಅಥವಾ ಖಾಸಗಿ ಭೂಮಿಯಲ್ಲಿ ನಿರ್ಮಿಸಲ್ಪಟ್ಟಿರಲಿ ಅವುಗಳ ಮೇಲಿನ ಮಾಲೀಕತ್ವ ಹಕ್ಕು ಅಂತಹ ಮನೆಗಳಲ್ಲಿ ವಾಸವಾಗಿರುವವರಿಗೆ ಲಭಿಸಲಿದೆ ಎಂದು ನಗರಾಭಿವೃದ್ಧಿ ಸಚಿವ ಹರದೀಪ್ ಸಿಂಗ್ ಪುರಿ ಹೇಳಿದರು.

ಸೈನಿಕ್ ಫಾಮ್ಸ್, ಮಹೇಂದ್ರು ಎನ್ ಕ್ಲೇವ್ ಮತ್ತು ಅನಂತರಾಮ್ ಡೈರಿಗಳಂತಹ ೬೭ ಶ್ರೀಮಂತ ಆದರೆ ಅನಧಿಕೃತ ಕಾಲೋನಿಗಳು ಮಾತ್ರ ಸರ್ಕಾರದ ನಿರ್ಣಯಕ್ಕೆ ಅಪವಾದವಾಗಿವೆ. ಅಂದರೆ ಈ ಕಾಲೋನಿಗಳಲ್ಲಿ ವಾಸವಾಗಿರುವವರಿಗೆ ಮಾಲೀಕತ್ವ ಹಕ್ಕು ಲಭಿಸುವುದಿಲ್ಲ.

‘ಬುಧವಾರದ ಸಚಿವ ಸಂಪುಟ ಸಭೆಗೆ ಅತ್ಯಂತ ದೊಡ್ಡ ನಿರ್ಣಯ ಇದು. ಈ ಕಾಲೋನಿಗಳಲ್ಲಿ ವಾಸವಾಗಿರುವವರಿಗೆ ಮಾಲೀಕತ್ವದ ಹಕ್ಕು ನೀಡುವ ಈ ನಿರ್ಣಯ ಚಾರಿತ್ರಿಕ’ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ ಜಾವಡೇಕರ್ ಸಂಪುಟ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಬಣ್ಣಿಸಿದರು. ನಗರಾಭಿವೃದ್ಧಿ ಸಚಿವ ಹರದೀಪ್ ಸಿಂಗ್ ಪುರಿ ಅವರು ನಿರ್ಣಯವನ್ನು ’ದೂರ ದೃಷ್ಟಿಯ ಕ್ರಾಂತಿಕಾರಿ ನಿರ್ಣಯ’ ಎಂದು ಹೇಳಿದರು.

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಕೂಡಾ ಈ ವರ್ಷ ಜುಲೈ ತಿಂಗಳಲ್ಲಿ ಈ ಕಾಲೋನಿಗಳಲ್ಲಿ  ವಾಸವಾಗಿರುವ ಜನರಿಗೆ ಮಾಲೀಕತ್ವ ಹಕ್ಕು ನೀಡುವ ಪ್ರಸ್ತಾವವನ್ನು ಪ್ರಕಟಿಸಿದ್ದರು. ಆಮ್ ಆದ್ಮಿ ಪಕ್ಷಕ್ಕೆ ಈ ವಿಚಾರದಲ್ಲಿ  ಕೇಂದ್ರ ಸರ್ಕಾರದ ಸಮ್ಮತಿ ಲಭಿಸಿದೆ ಎಂದು ಕೇಜ್ರಿವಾಲ್ ಅವರು ಆಗ ಪ್ರಕಟಿಸಿದ್ದರು.

ಮುಂದಿನ ವರ್ಷ ದೆಹಲಿಯಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳಿಗೆ ಕೆಲವು ತಿಂಗಳುಗಳಷ್ಟು ಮುಂಚಿತವಾಗಿ ದೆಹಲಿಯಲ್ಲಿನ ಈ ೧,೭೯೭ ಕಾಲೋನಿಗಳಲ್ಲಿ ವಾಸವಾಗಿರುವವರಿಗೆ ಮಾಲೀಕತ್ವ ಹಕ್ಕು ನೀಡುವ ವಿಚಾರದ ಮೇಲೆ ಬೆಳಕು ಬಿದ್ದಿದೆ.

ಆಮ್ ಆದ್ಮಿ ಪಕ್ಷ ಅಥವಾ ಆಪ್ (ಎಎಪಿ) ಸರ್ಕಾರ ತನ್ನ ಕಾಲೆಳೆಯುತ್ತಿದೆ ಎಂಬುದಾಗಿ ಹೇಳುವ ಮೂಲಕ ಹರದೀಪ್ ಪುರಿ ಅವರು ಅರವಿಂದ ಕೇಜ್ರಿವಾಲ್ ಸರ್ಕಾರದ ವಿರುದ್ಧ ಬುಧವಾರ ಹರಿಹಾಯ್ದರು.

‘ಈ ಕಾಲೋನಿಗಳನ್ನು ಗುರುತಿಸುವ ವಿಚಾರವನ್ನು ಮುಂದಕ್ಕೆ ಒಯ್ಯಬೇಕಾದ್ದು ನಿಮ್ಮ ಜವಾಬ್ದಾರಿಯಾಗಿದೆ ಎಂಬುದಾಗಿ ಸೂಚಿಸುವ ಮೂಲಕ ದೆಹಲಿ ಮುಖ್ಯಮಂತ್ರಿಯನ್ನು ಪ್ರೋತ್ಸಾಹಿಸಲು ನಾನು ಹಲವಾರು ಪ್ರಯತ್ನಗಳನ್ನು ಮಾಡಿದೆ. ಆದರೆ ನಗರದ ಸರ್ಕಾರವು ಈ ಕಾಲೋನಿಗಳ ಗಡಿ ಗುರುತಿಸುವ ಕೆಲಸ ನಿರ್ವಹಿಸಲು ಸಂಸ್ಥೆಯೊಂದನ್ನು ಕೂಡಾ ಆಯ್ಕೆ ಮಾಡಲಿಲ್ಲ’ ಎಂದು ಪುರಿ ದೂರಿದರು.

‘೨೦೦೮ರಲ್ಲಿ ದೆಹಲಿ ಅಭಿವೃದ್ಧಿ ಪ್ರಾಧಿಕಾರ (ಡಿಡಿಎ) ರೂಪಿಸಿದ್ದ ನಿಯಮಾವಳಿಗಳ ಪ್ರಕಾರ ಸಕ್ರಮೀಕರಣಕ್ಕೆ ಈ ಕಾಲೋನಿಗಳ ಗಡಿ ಗುರುತಿಸುವ ಪ್ರಕಿಯೆಯೇ ಆರಂಭಿಕ ಹಂತ’ ಎಂದು ಕೇಂದ್ರ ಸಚಿವ ಹೇಳಿದರು.

‘ದೆಹಲಿ ಸರ್ಕಾರವು ನಿಯಮಾವಳಿಗಳನ್ನು ಪ್ರಕಟಿಸಿದ ೧೧ ವರ್ಷಗಳ ಬಳಿಕ ಕೂಡಾ ಈ ಕಾಲೋನಿಗಳ ಗಡಿ ಗುರುತಿಸುವ ಪ್ರಕ್ರಿಯೆ ಆರಂಭಿಸಿಲ್ಲ, ಬದಲಿಗೆ ಈ ಪ್ರಕ್ರಿಯೆ ಪೂರ್ಣಗೊಳಿಸಲು ೨೦೨೧ರವರೆಗೆ ಕಾಲಾವಕಾಶ ಕೋರಿದೆ’ ಎಂದು ಅವರು ನುಡಿದರು.

ಹೀಗಾಗಿ ಈ ಹಂತದಲ್ಲಿ ಮಧ್ಯಪ್ರವೇಶಕ್ಕೆ ಕೇಂದ್ರ ಸರ್ಕಾರ ನಿರ್ಧರಿಸಿತು ಎಂದು ಪುರಿ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

ಕೇಂದ್ರದ ನಿರ್ಧಾರವನ್ನು ಆಮ್ ಆದ್ಮಿ ಪಕ್ಷದ ನಾಯಕ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸ್ವಾಗತಿಸಿದರು.

ಅನಧಿಕೃತ ಕಾಲೋನಿಗಳ ಸಕ್ರಮೀಕರಣ ಮತ್ತು ಮಾಲೀಕತ್ವ ಹಕ್ಕು ನೀಡುವ ವಿಚಾರವು ನಗರದ ರಾಜಕಾರಣದಲ್ಲಿ ರಾಜಕೀಯವಾಗಿ ಅತ್ಯಂತ ಸೂಕ್ಷ್ಮವಾಗಿರುವ ವಿಷಯವಾಗಿದೆ. ಈ ಕಾಲೋನಿಗಳಲ್ಲಿ ದೆಹಲಿಯ ಜನಸಂಖ್ಯೆಯ ಮೂರನೇ ಒಂದರಷ್ಟು  ಜನರು ವಾಸವಾಗಿದ್ದು, ಅಷ್ಟೂ ಮಂದಿಗೆ ಮತದಾನದ ಹಕ್ಕಿದೆ.

‘ಪ್ಲಾಟಿನ ಗಾತ್ರ ಮತ್ತು ವಾಸಿಸುವಷ್ಟು ಸ್ಥಳದ (ಕಾರ್ಪೆಟ್ ಏರಿಯಾ) ಆಧಾರದಲ್ಲಿ ಸಾಂಕೇತಿಕ ಶುಲ್ಕವನ್ನು ಪಡೆದು ಮಾಲೀಕತ್ವ ಹಕ್ಕು ನೀಡಲಾಗುವುದು’ ಎಂದು ಸಚಿವರು ಹೇಳಿದರು.

ಸರ್ಕಾರಿ ಭೂಮಿಯಲ್ಲಿನ ಕಾಲೋನಿಗಳಿಗೆ ಅನಧಿಕೃತ ಕಾಲೋನಿಗಳನ್ನು ಸುತ್ತುವರಿದಿರುವ ವಸತಿ ಪ್ರದೇಶದ  ಸ್ಥಳಗಳಲ್ಲಿನ ಗರಿಷ್ಠ ವರ್ಗದ ದರದ ಶೇಕಡಾ ೦.೫ (೧೦೦ ಚದರ ಮೀಟರುಗಳಿಗಿಂತ ಕಡಿಮೆ ಸ್ಥಳಕ್ಕೆ), ಶೇಕಡಾ ೧ (೧೦೦-೨೫೦ ಚದರ ಮೀಟರುಗಳು), ಶೇಕಡಾ ೨.೫ (೨೫೦ ಚದರ ಮೀಟರುಗಳಿಗಿಂತ ಹೆಚ್ಚಿನ ಸ್ಥಳ) ಶುಲ್ಕ ಪಡೆಯಲಾಗುವುದು. ಖಾಸಗಿ ಭೂಮಿಯಲ್ಲಿನ ಕಾಲೋನಿಗಳಿಗೆ ಸರ್ಕಾರಿ ಭೂಮಿಯಲ್ಲಿ ವಿಧಿಸಲಾಗುವ ದರದ ಅರ್ಧದಷ್ಟು ಶುಲ್ಕ ವಿಧಿಸಲಾಗುವುದು.

ಕೊಳಚೆಗೇರಿಗಳನ್ನು ಹೊರತು ಪಡಿಸಿ, ಬೆಳವಣಿಗೆ ಹೊಂದಿರುವ ಈ ಅನಧಿಕೃತ ಕಾಲೋನಿಗಳು ಶುಲ್ಕಪಾವತಿಗೆ ಸಿದ್ಧರಿರುವ ಜನರಿಗೆ ವಸತಿ ವ್ಯವಸ್ಥೆ ಒದಗಿಸುವಲ್ಲಿನ ವೈಫಲ್ಯದ ಪರಿಣಾಮವಾಗಿದೆ. ಈ ಹಿಂದೆಯೂ ಬಹುತೇಕ ಚುನಾವಣೆಗಳು ಹತ್ತಿರ ಬಂದಾಗ ಅನಧಿಕೃತ ಕಾಲೋನಿಗಳಿಗೆ ಸಂಬಂಧಿಸಿದಂತೆ ಅನೇಕ ಪ್ರಕಟಣೆಗಳು, ನಿರ್ಣಯಗಳು ಹೊರಬಿದ್ದಿದ್ದವು.

October 23, 2019 Posted by | ಆರ್ಥಿಕ, ನರೇಂದ್ರ ಮೋದಿ, ಪ್ರಧಾನಿ, ಭಾರತ, ರಾಷ್ಟ್ರೀಯ, Finance, Flash News, General Knowledge, India, Nation, News, Politics, Prime Minister, Spardha | , , , , , | Leave a comment

ತಪ್ಪು ಸಂದೇಶಕ್ಕಾಗಿ ಮಾಧ್ಯಮಗಳಿಗೆ ಮದ್ರಾಸ್ ಹೈಕೋರ್ಟ್ ತರಾಟೆ

23 madras high court
ಮಹಾಬಲಿಪುರಂ: ಮೋದಿ-ಕ್ಸಿ ಭೇಟಿಯ ಫ್ಲೆಕ್ಸ್ ಬೋರ್ಡ್

ಚೆನ್ನೈ: ಮಹಾಬಲಿಪುರಂನಲ್ಲಿ ಇತ್ತೀಚೆಗೆ ನಡೆದ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನೀ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಅನೌಪಚಾರಿಕ ಶೃಂಗಕ್ಕೆ ಸಂಬಂಧಿಸಿದಂತೆ ಫ್ಲೆಕ್ಸ್ ಬೋರ್ಡ್‌ಗಳನ್ನು ಹಾಕಲು ತಾನು ಅನುಮತಿ ನೀಡಿದ್ದುದಾಗಿ ಮಾಧ್ಯಮಗಳಲ್ಲಿ ಬಂದ ವರದಿಯನ್ನು ಮದ್ರಾಸ್ ಹೈಕೋರ್ಟ್ 2019 ಅಕ್ಟೋಬರ್ 23ರ ಬುಧವಾರ ನಿರಾಕರಿಸಿತು ಮತ್ತು ತಪ್ಪು ವರದಿಗಳಿಗಾಗಿ ಮಾಧ್ಯಮಗಳನ್ನು ತರಾಟೆಗೆ ತೆಗೆದುಕೊಂಡಿತು.

‘ನಾವು ಫ್ಲೆಕ್ಸ್ ಬೋರ್ಡ್‌ಗಳನ್ನು ಹಾಕಲು ಅನುಮತಿ ಕೊಟ್ಟಿರಲಿಲ್ಲ. ನಿಯಮಾವಳಿಗಳನ್ನು ಪಾಲಿಸಿ ಎಂದಷ್ಟೇ ನಾವು ಹೇಳಿದ್ದೆವು. ಮಾಧ್ಯಮವು ಆದೇಶವನ್ನು ಸಮರ್ಪಕವಾಗಿ ಓದದೇ ಸಾರ್ವಜನಿಕರಿಗೆ ತಪ್ಪು ಸಂದೇಶವನ್ನು ರವಾನಿಸಿತು. ಮುಂದಿನಬಾರಿ, ಕೋರ್ಟ್ ಆದೇಶಗಳನ್ನು ತಪ್ಪಾಗಿ ವರದಿ ಮಾಡಿದ್ದು ನಮ್ಮ ಗಮನಕ್ಕೆ ಬಂದಲ್ಲಿ ನ್ಯಾಯಾಂಗ ನಿಂದನೆಯ ಕಷ್ಟಕ್ಕೆ ಗುರಿಯಾಗಬೇಕಾದೀತು’ ಎಂದು ನ್ಯಾಯಾಲಯ ಎಚ್ಚರಿಕೆ ನೀಡಿತು.

೬೦ಕಿಮೀ ವ್ಯಾಪ್ತಿಯಲ್ಲಿ ಫ್ಲೆಕ್ಸ್ ಬೋರ್ಡ್‌ಗಳನ್ನು ಹಾಕಲು ಈ ತಿಂಗಳ ಆದಿಯಲ್ಲಿ ಹಸಿರು ನಿಶಾನೆ ತೋರಿದ್ದ ನ್ಯಾಯಮೂರ್ತಿ ಎಂ. ಸತ್ಯನಾರಾಯಣನ್ ಮತ್ತು ನ್ಯಾಯಮೂರ್ತಿ ಎನ್ ಶೇಷಸಾಯಿ ಅವರನ್ನು ಒಳಗೊಂಡ ವಿಭಾಗೀಯ ಪೀಠವು ಫ್ಲೆಕ್ಸ್ ಬೋರ್ಡ್‌ಗಳನ್ನು ಹಾಕದಂತೆ ತಾನು ನಿರ್ಬಧಿಸಿರುವುದು ಸರ್ಕಾರವನ್ನಲ್ಲ, ಕೇವಲ ರಾಜಕೀಯ ಪಕ್ಷಗಳನ್ನಾದ್ದರಿಂದ ನಿಜವಾಗಿ ಅನುಮತಿ ಪಡೆಯುವ ಅಗತ್ಯವಿಲ್ಲ ಎಂದು ಹೇಳಿತ್ತು.

ಸರ್ಕಾರದ ಮನವಿಯನ್ನು ವಿರೋಧಿಸಿದ್ದ ಡಿಎಂಕೆಯು ಆಡಳಿತಾರೂಢ ಎಐಎಡಿಎಂಕೆಯು ’ಹಲವಾರು ಬ್ಯಾನರುಗಳನ್ನು ಹಾಕುವ’ ರಹಸ್ಯ ಕಾರ್‍ಯಸೂಚಿ ಇಟ್ಟುಕೊಂಡಿರುವಂತಿದೆ ಎಂದು ಆಪಾದಿಸಿತ್ತು.

‘ಬ್ಯಾನರ್ ಸಂಸ್ಕೃತಿ’ಯನ್ನು ನ್ಯಾಯಾಲಯವು ನಿಷೇಧಿಸಿದ ಬಳಿಕ, ರಾಜ್ಯಾದ್ಯಂತ ಬ್ಯಾನರುಗಳನ್ನು ಹಾಕಲು ಅಧಿಕಾರಿಗಳು ಅನುಮತಿ ನೀಡುತ್ತಿಲ್ಲ ಎಂದು ಸರ್ಕಾರದ ಪರವಾಗಿ ಮುನಿಸಿಪಲ್ ಆಡಳಿತದ ಕಮೀಷನರ್  ಸಲ್ಲಿಸಿದ್ದ ಅರ್ಜಿಯು ಹೇಳಿತ್ತು.  ಕಳೆದ ತಿಂಗಳು ೨೩ರ ಹರೆಯದ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರು ಸಾವನ್ನಪ್ಪಿದ ಬಳಿಕ ನ್ಯಾಯಾಲಯವು ಬ್ಯಾನರ್ ಸಂಸ್ಕೃತಿ ವಿರುದ್ಧ ಹರಿಹಾಯ್ದಿತ್ತು.

ಇದಕ್ಕೆ ಮುನ್ನ ರಸ್ತೆ ಬದಿಗಳಲ್ಲಿ ಬ್ಯಾನರ್ ಅಳವಡಿಸುವುದನ್ನು ನಿಷೇಧಿಸಿದ್ದ ಮದ್ರಾಸ್ ಹೈಕೋರ್ಟ್, ಮಹಿಳಾ ಟೆಕ್ಕಿಯ ಸಾವಿನ  ಹಿನ್ನೆಲೆಯಲ್ಲಿ ತಾನು ನೀಡಿದ್ದ ಆದೇಶವನ್ನು ಸರ್ಕಾರವು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುತ್ತಿಲ್ಲ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು.

೨೩ರ ಹರೆಯದ ಮಹಿಳೆ ದ್ವಿಚ್ರಕ್ರವಾಹನದಲ್ಲಿ ಸವಾರಿ ಮಾಡುತ್ತಿದ್ದಾಗ ಅಕ್ರಮವಾಗಿ ಹಾಕಲಾಗಿದ್ದ ಬ್ಯಾನರ್ ಒಂದು ಆಕೆಯ ಮೇಲೆ ಬಿದ್ದು ಆಕೆ ಕೆಳಕ್ಕೆ ಬಿದ್ದಿದ್ದಳು. ಆಗ ಹಿಂದಿನಿಂದ ಬಂದ ಟ್ಯಾಂಕರ್ ಆಕೆಯ ಮೇಲೆಯೇ ಚಲಿಸಿತ್ತು. ಈ ಸಾವು ಚೆನ್ನೆಯಲ್ಲಿ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿತ್ತು. ಅದನ್ನು ಅನುಸರಿಸಿ ರಾಜಕೀಯ ಪಕ್ಷಗಳು ಭಿತ್ತಿ ಫಲಕ ಮತ್ತು ಬ್ಯಾನರ್ ಅಳವಡಿಸುವುದನ್ನು ನಿಲ್ಲಿಸುವಂತೆ ತಮ್ಮ ಕಾರ್‍ಯಕರ್ತರಿಗೆ ಸೂಚಿಸಿದ್ದವು.

ಘಟನೆಯ ಬಳಿಕ ತಮಿಳುನಾಡು ಸರ್ಕಾರ, ಚೆನ್ನೈ ಮುನಿಸಿಪಲ್ ಕಾರ್ಪೋರೇಷನ್ ಗೆ ಮಹಿಳೆಯ ಸಾವಿಗೆ ಕಾರಣವಾದ ಫ್ಲೆಕ್ಸ್ ಬೋರ್ಡ್‌ನ್ನು ಅಕ್ರಮವಾಗಿ ಹಾಕಿದ್ದನ್ನು ತಡೆಗಟ್ಟುವಲ್ಲಿ ವಿಫಲರಾದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಮದ್ರಾಸ್ ಹೈಕೋರ್ಟ್ ಆಜ್ಞಾಪಿಸಿತ್ತು.

ಬ್ಯಾನರ್ ಸಂಸ್ಕೃತಿಯ ಹಾವಳಿಯನ್ನು ಕಿತ್ತು ಹಾಕಲು ಕ್ರಮಗಳನ್ನು ಸೂಚಿಸಿ ವರದಿಯೊಂದನ್ನು ಸಲ್ಲಿಸಬೇಕು ಮತ್ತು ಮಹಿಳೆ ಸಾವನ್ನಪ್ಪಿದ ನಿರ್ದಿಷ್ಟ ಪ್ರಕರಣದಲ್ಲಿ ಕೈಗೊಳ್ಳಲಾದ ಕ್ರಮಗಳ ಬಗೆ ತಿಳಿಸಬೇಕು ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿತ್ತು.

October 23, 2019 Posted by | ನರೇಂದ್ರ ಮೋದಿ, ಪ್ರಧಾನಿ, ಭಾರತ, ರಾಷ್ಟ್ರೀಯ, Flash News, General Knowledge, India, Nation, News, Prime Minister, Spardha | | Leave a comment

ಬಿಜೆಪಿ ನೇತೃತ್ವದ  ಎನ್ ಡಿಎಗೆ ಪ್ರಚಂಡ ವಿಜಯ: ಮತಗಟ್ಟೆ ಸಮೀಕ್ಷೆಗಳ ಭವಿಷ್ಯ

21 BJP-Flags
ಮಹಾರಾಷ್ಟ್ರ, ಹರಿಯಾಣ: ಶೇ.೬೦-೬೫ ಮತದಾನ

ನವದೆಹಲಿ: ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭೆಗಳಿಗೆ  2019 ಅಕ್ಟೋಬರ್ 21ರ ಸೋಮವಾರ ನಡೆದ ಚುನಾವಣೆಯಲ್ಲಿ ಶೇಕಡಾ ೬೦ರಿಂದ ೬೫ರಷ್ಟು ಮತದಾನವಾಗಿದ್ದು, ಮತದಾನ ಮುಗಿಯುತ್ತಿದ್ದಂತೆಯೇ ಪ್ರಕಟಗೊಂಡಿರುವ ವಿವಿಧ ಮತದಾನೋತ್ತರ ಸಮೀಕ್ಷೆಗಳು ಉಭಯ ರಾಜ್ಯಗಳಲ್ಲೂ ದೀಪಾವಳಿಯ ಕೊಡುಗೆಯಾಗಿ ಬಿಜೆಪಿ ನೇತೃತ್ವದ ಎನ್ ಡಿಎಗೆ ಪ್ರಚಂಡ ವಿಜಯದ ಭವಿಷ್ಯ ನುಡಿದವು.

ಸಂಜೆ ೬.೩೦ರ ವೇಳೆಗೆ ಬಂದ ವರದಿಯಂತೆ ಮಹಾರಾಷ್ಟ್ರದಲ್ಲಿ ಶೇಕಡಾ ೬೦.೫ರಷ್ಟು ಮತ್ತು ಹರಿಯಾಣದಲ್ಲಿ ಶೇಕಡಾ ೬೫ರಷ್ಟು ಮತದಾನವಾಯಿತು. ಬಿರುಮಳೆಯ ಪರಿಣಾಮವಾಗಿ ಉಭಯ ರಾಜ್ಯಗಳ ವಿಧಾನಸಭೆಗಳಲ್ಲದೆ, ಕೇರಳ ಸೇರಿದಂತೆ ಇತರ ರಾಜ್ಯಗಳಲ್ಲಿ ನಡೆದ ವಿಧಾನಸಭೆ ಮತ್ತು ಲೋಕಸಭಾ ಉಪಚುನಾವಣೆಗಳಲ್ಲಿ ಮಂದಗತಿಯ ಮತದಾನ ನಡೆಯಿತು ಎಂದು ವರದಿಗಳು ಹೇಳಿದವು.  ಮತಗಳ ಎಣಿಕೆ ಅಕ್ಟೋಬರ್ ೨೪ರ ಗುರುವಾರ ನಡೆಯಲಿದೆ.

ಮತದಾನ ಮುಕ್ತಾಯವಾಗುತ್ತಿದ್ದಂತೆಯೇ ಪ್ರಕಟಗೊಂಡ ಬಹುತೇಕ ಮತಗಟ್ಟೆ ಸಮೀಪದ ಸಮೀಕ್ಷೆಗಳು ಭಾರತೀಯ ಜನತಾ ಪಕ್ಷ ನೇತೃತ್ವದ ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟಕ್ಕೆ ಪ್ರಚಂಡ ವಿಜಯದ ಭವಿಷ್ಯ ನುಡಿದವು.

ಟೈಮ್ಸ್  ನೌ ಮತದಾನೋತ್ತರ ಸಮೀಕ್ಷೆಯು ಮಹಾರಾಷ್ಟ್ರ ವಿಧಾನಸಭೆಯ ೨೮೮ ಸ್ಥಾನಗಳ ಪೈಕಿ ಬಿಜೆಪಿ-ಶಿವಸೇನಾ ಮೈತ್ರಿಕೂಟಕ್ಕೆ ಒಟ್ಟು ೨೩೦ ಸ್ಥಾನಗಳು ಲಭಿಸುವ ಭವಿಷ್ಯ ನುಡಿಯಿತು. ಅದರ ಪ್ರಕಾರ ಕಾಂಗ್ರೆಸ್ -ಎನ್‌ಸಿಪಿ ಮೈತ್ರಿಕೂಟಕ್ಕೆ ಕೇವಲ ೪೮ ಸ್ಥಾನಗಳು ಲಭಿಸಲಿವೆ. ಹರಿಯಾಣದಲ್ಲಿ ಬಿಜೆಪಿ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ಅವರಿಗೆ ಎರಡನೇ ಅವಧಿಗೆ ಅಧಿಕಾರ ಪ್ರಾಪ್ತಿಯ ಸಾಧ್ಯತೆ ದಟ್ಟವಾಯಿತು.

ಬಿಜೆಪಿಯು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸಿದ್ದ ೩೭೦ನೇ ವಿಧಿ ರದ್ದು ಪಡಿಸಿದ ವಿಚಾರ ಮತ್ತು ರಾಷ್ಟ್ರೀಯ ಭದ್ರತೆಗೆ ಒತ್ತು ನೀಡಿ ಉಭಯ ರಾಜ್ಯಗಳಲ್ಲೂ ತುರುಸಿನ ಪ್ರಚಾರ ನಡೆಸಿತ್ತು.  ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಉಭಯ ರಾಜ್ಯಗಳಲ್ಲೂ ಬಿರುಸಿನ ಚುನಾವಣಾ ಪ್ರಚಾರದ ನೇತೃತ್ವ ವಹಿಸಿದ್ದರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಪಕ್ಷವು ದುರ್ಬಲ ಪ್ರಚಾರವನ್ನು ನಡೆಸಿತ್ತು. ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕೆಲವು ಪ್ರಚಾರ ಸಭೆಗಳಲ್ಲಿ ಪಾಲ್ಗೊಂಡದ್ದು ಬಿಟ್ಟರೆ, ಕಾಂಗ್ರೆಸ್ ಪಕ್ಷದ ಬೇರೆ ಯಾರೇ ಪ್ರಮುಖ ನಾಯಕರು ಚುನಾವಣಾ ಪ್ರಚಾರದಲ್ಲಿ ಕಾಣಿಸಿಕೊಂಡಿರಲಿಲ್ಲ. ಸೋನಿಯಾ ಗಾಂಧಿಯವರು ಹರಿಯಾಣದ ಮಹೇಂದ್ರಗಢದಲ್ಲಿ ನಿಗದಿತವಾಗಿದ್ದ ಏಕೈಕ ಪ್ರಚಾರಸಭೆಯಲ್ಲೂ ಪಾಲ್ಗೊಳ್ಳಲಿಲ್ಲ.

ಮತದಾನ ಮುಕ್ತಾಯದ ಬೆನ್ನಲ್ಲೇ ಬಹುತೇಕ ಸಂಸ್ಥೆಗಳು ತಮ್ಮ ಮತದಾನೋತ್ತರ ಸಮೀಕ್ಷೆಗಳ ಫಲಿತಾಂಶವನ್ನು ಪ್ರಕಟಿಸಿದ್ದು, ದೀಪಾವಳಿ ಹಬ್ಬದ ಸಡಗರ ಆರಂಭವಾಗುವುದಕ್ಕೂ ಮುನ್ನವೇ ಬಿಜೆಪಿಯಲ್ಲಿ ಸಡಗರವನ್ನು ಹುಟ್ಟು ಹಾಕಿತು. ಬಹುತೇಕ ಎಲ್ಲ ಸಮೀಕ್ಷೆಗಳೂ ಮಹಾರಾಷ್ಟ್ರ ಮತ್ತು ಹರಿಯಾಣ ಎರಡೂ ರಾಜ್ಯಗಳಲ್ಲೂ ಬಿಜೆಪಿ ನೇತೃತ್ವದ ಮೈತ್ರಿಕೂಟಕ್ಕೆ ಪ್ರಚಂಡ ವಿಜಯ ಪ್ರಾಪ್ತವಾಗುವ ಬಗ್ಗೆ ಸರ್ವಾನುಮತದ ಭವಿಷ್ಯ ನುಡಿದವು.

ಆರು ಮತಗಟ್ಟೆ ಸಮೀಪದ ಸಮೀಕ್ಷೆಗಳ ಪ್ರಕಾರ ಮಹಾರಾಷ್ಟ್ರದ ೨೮೮ ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ-ಶಿವಸೇನಾ ಮೈತ್ರಿಕೂಟವು ಸರಾಸರಿ ೨೧೩ ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ – ಎನ್‌ಸಿಪಿ ಮೈತ್ರಿಕೂಟವು ಕೇವಲ ೬೧ ಸ್ಥಾನಗಳನ್ನು ಪಡೆಯಲಿದೆ. ಇತರೆ ಪಕ್ಷಗಳಾದ ಎಐಎಂಐಎಂ ಮತ್ತು ವಿಬಿಎ ೧೪ ಕ್ಷೇತ್ರಗಳಲ್ಲಿ ಜಯ ಸಾಧಿಸುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಹರಿಯಾಣದ ೯೦ ಸದಸ್ಯಬಲದ ವಿಧಾನಸಭೆಯಲ್ಲಿ ಸಮೀಕ್ಷಾ ಫಲಿತಾಂಶದ ಪ್ರಕಾರ ಬಿಜೆಪಿ ೬೩ ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ ಕೇವಲ ೧೬ ಸ್ಥಾನಗಳಿಗೆ ತೃಪ್ತಿ ಪಟ್ಟುಕೊಳ್ಳಬೇಕಾಗಿದೆ.

ಯಾವ ಸಮೀಕ್ಷೆ ಏನು ಹೇಳುತ್ತದೆ?

ಮಹಾರಾಷ್ಟ್ರ ಚುನಾವಣೋತ್ತರ ಸಮೀಕ್ಷಾ ಭವಿಷ್ಯ:

ಟೈಮ್ಸ್ ನೌ ಸಮೀಕ್ಷೆ: ಬಿಜೆಪಿ ಮತ್ತು ಮಿತ್ರ ಪಕ್ಷಗಳಿಗೆ ೨೩೦ ಸ್ಥಾನ, ಕಾಂಗ್ರೆಸ್ ಮತ್ತು ಎನ್‌ಸಿಪಿಗೆ ೪೮ ಸ್ಥಾನ, ಇತರರಿಗೆ ೧೦ ಸ್ಥಾನ.

ಇಂಡಿಯಾ ಟುಡೇ, ಆಕ್ಸಿಸ್ ಪೋಲ್:  ಬಿಜೆಪಿ-ಶಿವಸೇನಾ ಮೈತ್ರಿ ಕೂಟಕ್ಕೆ ೧೬೬ರಿಂದ ೧೯೪ ಸ್ಥಾನ, ಕಾಂಗ್ರೆಸ್+ಎನ್ ಸಿಪಿ ೭೨-೯೦ ಹಾಗೂ ಇತರ ಪಕ್ಷಗಳಿಗೆ  ೨೨-೩೪ ಸ್ಥಾನ.

ಸಿಎನ್‌ಎನ್ ನ್ಯೂಸ್ ೧೮: ಬಿಜೆಪಿ ಮತ್ತು ಮಿತ್ರ ಪಕ್ಷಗಳಿಗೆ ೨೪೩, ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳಿಗೆ ೪೧, ಇತರರಿಗೆ ೪.

ದಿ ರಿಪಬ್ಲಿಕನ್ – ಜನ್ ಕಿ ಬಾತ್: ಬಿಜೆಪಿ ಮತ್ತು ಮಿತ್ರ ಪಕ್ಷಗಳಿಗೆ ೨೨೩, ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳಿಗೆ ೫೪, ಇತರರಿಗೆ ೧೧.

ಎಬಿಪಿ ನ್ಯೂಸ್: ಬಿಜೆಪಿ ಮತ್ತು ಮಿತ್ರ ಪಕ್ಷಗಳಿಗೆ ೨೦೪, ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳಿಗೆ ೬೯, ಇತರರಿಗೆ ೧೫.

ನ್ಯೂಸ್- ೧೮- ಐಪಿಎಸ್-ಒಎಸ್ ಮತಗಟ್ಟೆ ಸಮೀಕ್ಷೆ ಪ್ರಕಾರ ೨೦೧೪ರ ಚುನಾವಣಾ ಫಲಿತಾಂಶಕ್ಕೆ ಹೋಲಿಸಿದರೆ ಮಹಾರಾಷ್ಟ್ರದಲ್ಲಿ ಈ ಬಾರಿ ಶಿವಸೇನೆ ಈ ಬಾರಿ ಅತಿಹೆಚ್ಚಿನ ಮತ ಪಡೆಯಲಿದೆ. ೨೦೧೪ರಲ್ಲಿ ೬೩ ಕ್ಷೇತ್ರಗಳಲ್ಲಿ ಗೆದ್ದ ಶಿವಸೇನೆ ಈ ಬಾರಿ ೧೦೨ ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆ ಇದೆ. ಬಿಜೆಪಿ ಕೂಡ ಕಳೆದ ಬಾರಿಗೆ ಹೋಲಿಸಿದರೆ ಹೆಚ್ಚಿನ ಸಂಖ್ಯೆಯಲ್ಲಿ ಮತಗಳನ್ನು ಪಡೆಯಲಿದೆ. ೨೦೧೪ರಲ್ಲಿ ೧೨೨ ಸ್ಥಾನಗಳಲ್ಲಿ ಗೆದ್ದ ಬಿಜೆಪಿ, ಈ ಬಾರಿ ೧೪೪ ಅಂದರೆ ಅರ್ಧದಷ್ಟು ಕ್ಷೇತ್ರಗಳಲ್ಲಿ ಗೆಲುವು ನಿರೀಕ್ಷಿಸಬಹುದಾಗಿದೆ

ಹರಿಯಾಣದಲ್ಲಿ ಮತ್ತೆ ಅರಳಲಿದೆ ಕಮಲ:

ಹರಿಯಾಣ ವಿಧಾನಸಭಾ ಚುನಾವಣೆಯ ಮತದಾನೋತ್ತರ ಸಮೀಕ್ಷೆಯಲ್ಲಿ  ೫೨ ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಮತ್ತೆ ಬಿಜೆಪಿ ಅಧಿಕಾರದ ಗದ್ದುಗೆ ಏರಲಿದೆ ಎಂದು ಟೈಮ್ಸ್ ನೌ ಹೇಳಿತು.

ಕಾಂಗ್ರೆಸ್ ಪಕ್ಷ ೧೯ ಸ್ಥಾನ, ಇತರರು ೦೯ ಸ್ಥಾನಗಳಲ್ಲಿ, ಜೆಜೆಪಿ-೦೯ ಸ್ಥಾನ ಹಾಗೂ ಐಎನ್ ಎಲ್ ಡಿ ೦೧ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಸಮೀಕ್ಷೆ ತಿಳಿಸಿತು.

ಸಿಎನ್ ಎನ್ ಮತ್ತು ನ್ಯೂಸ್ ೧೮ ಪ್ರಕಾರ ಬಿಜೆಪಿ ೭೫ ಸ್ಥಾನ, ಕಾಂಗ್ರೆಸ್ ೧೦, ಜೆಜೆಪಿ ಮತ್ತು ಐಎನ್‌ಎಲ್‌ಡಿ ಶೂನ್ಯ ಸಾಧನೆ ಮಾಡಲಿವೆ.

ದಿ ರಿಪಬ್ಲಿಕನ್ – ಜನ್ ಕಿ ಬಾತ್ ಪ್ರಕಾರ ಬಿಜೆಪಿ ೨೫-೬೩ ಸ್ಥಾನ, ಜೆಜೆಪಿ ೫-೯ ಸ್ಥಾನ ಗೆಲ್ಲಲಿವೆ.

ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನಾ ಮೈತ್ರಿಕೂಟ ಸರ್ಕಾರವನ್ನು ಅಧಿಕಾರದಿಂದ ಇಳಿಸಲು ಕಾಂಗ್ರೆಸ್ – ಎನ್‌ಸಿಪಿ ಮೈತ್ರಿಕೂಟ ಬಯಸಿದ್ದರೆ, ಹರಿಯಾಣದಲ್ಲಿ ಆಡಳಿತಾರೂಢ ಬಿಜೆಪಿಯು ಕಾಂಗ್ರೆಸ್ ಮತ್ತು ಜೆಜೆಪಿ ಜೊತೆಗೆ ಅಧಿಕಾರಕ್ಕಾಗಿ ಹೋರಾಟ ನಡೆಸಿದೆ.

ಪ್ರಚಾರ ಸಮರದಲ್ಲಿ ಬಿಜೆಪಿಯು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ೩೭೦ನೇ ವಿಧಿ ರದ್ದು ವಿಚಾರದ ಮೇಲೆ ಬೆಳಕು ಚೆಲ್ಲಿ ರಾಷ್ಟ್ರೀಯತೆ ಮತ್ತು ಭ್ರಷ್ಟಾಚಾರ ನಿಗ್ರಹಕ್ಕೆ ಒತ್ತು ಕೊಟ್ಟರೆ, ವಿರೋಧಿ ಕಾಂಗ್ರೆಸ್ ಪಕ್ಷವು ಬಿಜೆಪಿ ಆಡಳಿತದಲ್ಲಿ ಆರ್ಥಿಕ ಹಿನ್ನಡೆಯಾಗಿರುವುದನ್ನೇ ಮುಖ್ಯ ಅಸ್ತ್ರವನ್ನಾಗಿ ಮಾಡಿಕೊಂಡಿತ್ತು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ನೋಟು ಅಮಾನ್ಯೀಕರಣ ಮತ್ತು  ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಉಪಕ್ರಮಗಳ ವೈಫಲ್ಯದ ಪರಿಣಾಮವಾಗಿ ದೇಶವು ಆರ್ಥಿಕ ಹಿನ್ನಡೆ ಮತ್ತು ನಿರುದ್ಯೋಗದ ಸಂಕಷ್ಟಕ್ಕೆ ಗುರಿಯಾಗಿದೆ ಎಂದು ಬಿಜೆಪಿ ವಿರುದ್ಧ ಟೀಕಾಸ್ತ್ರ ಹೂಡಿದ್ದರು.

October 22, 2019 Posted by | ನರೇಂದ್ರ ಮೋದಿ, ಪ್ರಧಾನಿ, ಭಾರತ, ರಾಷ್ಟ್ರೀಯ, Flash News, India, Nation, News, Politics, Prime Minister, Spardha | , , | Leave a comment

೩೭೦ನೇ ವಿಧಿ: ಕೊಟ್ಟ ಭರವಸೆ ಈಡೇರಿಸಲು ಕಾಂಗ್ರೆಸ್ ವಿಫಲ: ಪ್ರಧಾನಿ ಮೋದಿ

19 modi at sirsa rally
ಹರಿಯಾಣದ ಸಿರ್ಸಾದಲ್ಲಿ ಕೊನೆಯ ದಿನದ ಪ್ರಚಾರ

ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ  ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ ೩೭೦ನೇ ವಿಧಿ ರದ್ದು ಪಡಿಸುವುದಾಗಿ ೧೯೬೪ರಲ್ಲೇ ಸಂಸತ್ತಿಗೆ ಕೊಟ್ಟಿದ ಭರವಸೆಯನ್ನು ಈಡೇರಿಸುವಲ್ಲಿ ಕಾಂಗ್ರೆಸ್ ಪಕ್ಷ ವಿಫಲವಾಯಿತು ಎಂದು ಪ್ರಧಾನಿ ನರೇಂದ್ರ ಮೋದಿ ಅವರು  2019 ಅಕ್ಟೋಬರ್ 19ರ ಶನಿವಾರ ಕಾಂಗ್ರೆಸ್ ವಿರುದ್ಧ  ಹರಿಹಾಯ್ದರು.

ಹರಿಯಾಣ ವಿಧಾನಸಭೆಗೆ ಸೋಮವಾರ ನಡೆಯಲಿರುವ ಚುನಾವಣೆಗಾಗಿ ಪ್ರಚಾರದ ಕೊನೆಯ ದಿನ  ಸಿರ್ಸಾದಲ್ಲಿ ಭಾಷಣ ಮಾಡಿದ ಪ್ರಧಾನಿ, ’೧೯೬೪ರಲ್ಲಿ ಸಂಸತ್ತಿನಲ್ಲಿ ನಡೆದ ಚರ್ಚೆಯ ವೇಳೆಯಲ್ಲಿ ಕಾಂಗ್ರೆಸ್ ಪಕ್ಷ ಹೋಳಾಗಿದೆ ಎಂದು ರಾಷ್ಟ್ರದ ಉದ್ದಾಮ ನಾಯಕ ಭ್ರಮನಿರಸನಗೊಂಡಿದ್ದರು. ೩೭೦ನೇ ವಿಧಿಯನ್ನು ರದ್ದು ಪಡಿಸಬೇಕು ಮತ್ತು ವಿಷಯದ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆಯಬೇಕು ಎಂಬ ಒತ್ತಾಯ ಆಗ ಕೇಳಿಬಂದಿತ್ತು’ ಎಂದು ಹೇಳಿದರು.

ಆ ಸಮಯದಲ್ಲಿ ಕಾಂಗ್ರೆಸ್ ನಾಯಕರು ಕೈ ಮುಗಿದುಕೊಂಡು ಅವರ ಬೇಡಿಕೆಯನ್ನು ಈಡೇರಿಸಲಾಗುವುದು ಮತ್ತು ೩೭೦ನೇ ವಿಧಿಯನ್ನು ಒಂದು ವರ್ಷದ ಒಳಗಾಗಿ ರದ್ದು ಪಡಿಸಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ ವಿಷಯನ್ನು ಬಳಿಕ ಪುನಃ ಮೂಲೆಗುಂಪು ಮಾಡಲಾಯಿತು ಎಂದು ಶನಿವಾರ ದಿನದ ತಮ್ಮ ಎರಡನೇ ಪ್ರಚಾರಸಭೆಯಲ್ಲಿ ಮೋದಿ ನುಡಿದರು. ‘ಇದ್ದ ಒತ್ತಡ ಏನು? ಮತ್ತು ಎಂತಹ ಆಟವನ್ನು ಆಡಲಾಗುತ್ತಿದೆ?’ ಎಂದು ಪ್ರಧಾನಿ ಪ್ರಶ್ನಿಸಿದರು.

ಇದಕ್ಕೆ ಮುನ್ನ ಎಲೆನಾಬಾದ್ ಪ್ರಚಾರ ಸಭೆಯಲ್ಲಿ ೩೭೦ನೇ ವಿಧಿ ಮತ್ತು ಕರ್ತಾರಪುರ ಕಾರಿಡಾರ್‌ಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷವು ತನ್ನ ತಪ್ಪು ನೀತಿಗಳು ಮತ್ತು ತಂತ್ರಗಳ ಮೂಲಕ ದೇಶವನ್ನು ನಾಶ ಮಾಡುತ್ತಿದೆ ತಮ್ಮ ಟೀಕಾಪ್ರಹಾರ ಮುಂದುವರೆಸಿದ್ದ ಮೋದಿ, ಬಿಆರ್ ಅಂಬೇಡ್ಕರ್ ಅವರು ತಾತ್ಕಾಲಿಕ ಎಂಬುದಾಗಿ ಬಣ್ಣಿಸಿದ್ದ  ವಿಧಿಯನ್ನು ೭೦ ವರ್ಷಗಳ ಕಾಲ ಮುಂದುವರೆಸಲಾಯಿತು ಮತ್ತು ಅದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಏನನ್ನೂ ಮಾಡಲಿಲ್ಲ ಎಂದು ಹೇಳಿದರು.

‘ಕಾಂಗ್ರೆಸಿನ ತಪ್ಪು ನೀತಿಗಳು ಮತ್ತು ತಂತ್ರಗಳು ರಾಷ್ಟ್ರವನ್ನು ಹಾಳುಮಾಡಿದೆ. ಈಗ ಭಾರತ ಮತ್ತು ಕಾಶ್ಮೀರದ ಜನರು ನೀತಿಗಳನ್ನು ರೂಪಿಸುತ್ತಿದ್ದಾರೆ. ಸಮಯ ಬದಲಾಗಿದೆ, ರಾಷ್ಟ್ರ ಬದಲಾಗಿದೆ’ ಎಂದು ಒತ್ತಿ ಹೇಳಿದರು.

೩೭೦ನೇ ವಿಧಿ ರದ್ದು ಪಡಿಸಿದ್ದನ್ನು ಸಮರ್ಥಿಸಿದ ಪ್ರಧಾನಿ ’ದೆಹಲಿಯಲ್ಲಿ ಅಧಿಕಾರ ಉಳಿಸಿಕೊಳ್ಳುವುದಕ್ಕಾಗಿ ಕಾಶ್ಮೀರವನ್ನು ಹಾಳಾಗಲು ಬಿಡಬೇಕಾಗಿತ್ತೆ? ಕಾಶ್ಮೀರವು ಹೆಚ್ಚು ಮುಖ್ಯವಾಗಬೇಕಾಗಿತ್ತೋ ಅಥವಾ ಪ್ರಧಾನಿ ಹುದ್ದೆಯೋ? ಪ್ರಧಾನಿ ಹೋಗಬಹುದು ಮತ್ತು ಬರಬಹುದು. ಕಾಶ್ಮೀರ ಸಮೃದ್ಧವಾಗಿ ಉಳಿಯಬೇಕು ಎಂಬುದು ಪ್ರತಿಯೊಬ್ಬ ಭಾರತೀಯನ ಉತ್ತರ’ ಎಂದು ಪ್ರಧಾನಿ ಮೋದಿ ನುಡಿದರು.

೭೦ ವರ್ಷಗಳ ಕಾಲ ಜಮ್ಮು ಮತ್ತು ಕಾಶ್ಮೀರದಲ್ಲಿ ಮುಗ್ಧರು ಸಾಯುತ್ತಿರುವಾಗ ಮತ್ತು ಅಲ್ಲಿನ ಜನರ ಭದ್ರತೆ ಮತ್ತು ಸುರಕ್ಷತೆಗಾಗಿ ಯೋಧರು ತಮ್ಮ ಪ್ರಾಣಗಳನ್ನೇ ಬಲಿದಾನ ಮಾಡುತ್ತಿರುವಾಗ ವಿಷಯಕ್ಕೆ ಪರಿಹಾರ ಹುಡುಕುವ ಪ್ರಾಮಾಣಿಕ ಯತ್ನ ನಡೆಯಲಿಲ್ಲ ಎಂದು ಮೋದಿ ನುಡಿದರು. ಬಿಜೆಪಿ ಸರ್ಕಾರವು ಕ್ರಮ ಕೈಗೊಂಡಂದಿನಿಂದಲೂ ಕಾಂಗ್ರೆಸ್ ಅದನ್ನು ವಿರೋಧಿಸುತ್ತಿದೆ ಎಂದು ಅವರು ಆಪಾದಿಸಿದರು. ‘

ನೀವು ಐದು ವರ್ಷಗಳ ಅವಧಿಗೆ ನನ್ನನ್ನು ಕಾಯಂ ಮಾಡಿರುವಾಗ ನಾನು ತಾತ್ಕಾಲಿಕವಾದದ್ದನ್ನು ಮುಂದುವರೆಸಬೇಕೆ?’ ಎಂದು ಪ್ರಧಾನಿ ಮೋದಿ ಪ್ರಶ್ನಿಸಿದರು.

ಗುರು ನಾನಕ್ ಅವರು ಅಂತಿಮವಾಗಿ ವಿರಮಿಸಿದ್ದ ಪ್ರಸ್ತುತ ಪಾಕಿಸ್ತಾನದಲ್ಲಿ ಇರುವ ಚಾರಿತ್ರಿಕ ಸ್ಥಳವಾದ ಗುರುದ್ವಾರ ದರ್ಬಾರ್ ಸಾಹಿಬ್‌ನ್ನು ಭಾರತದ ಪಂಜಾಬಿನಲ್ಲಿರುವ ಗುರುದಾಸಪುರ ಜೊತೆಗೆ ಸಂಪರ್ಕಿಸುವ ಕರ್ತಾರಪುರ ಕಾರಿಡಾರ್ ಈಗ ಕೇಂದ್ರದಿಂದ ಪೂರ್ಣಗೊಳ್ಳುವ ಹಂತಕ್ಕೆ  ಬಂದಿದೆ ಮತ್ತು ಭವ್ಯವಾದ ರೀತಿಯಲ್ಲಿ ಸಿಖ್ ಪಂಥದ ಸ್ಥಾಪಕನ ೫೫೦ನೇ ಜನ್ಮದಿನದ ಆಚರಣೆಗೆ ಸಿದ್ಧತೆಗಳು ನಡೆಯುತ್ತಿವೆ ಎಂದು ಮೋದಿ ನುಡಿದರು.

‘ಕರ್ತಾರಪುರ ಗುರುದ್ವಾರವನ್ನು ಭಾರತೀಯ ಪ್ರದೇಶದ ವ್ಯಾಪ್ತಿಗೆ ತರಲು ಅಸಮರ್ಥವಾದದ್ದು ದೇಶ ವಿಭಜನೆ ವೇಳೆಯ ತಪ್ಪು’ ಎಂದು ಪ್ರಧಾನಿ ಹೇಳಿದರು. ಭಕ್ತರು ತಮ್ಮ ಗುರುವಿನಿಂದ ಪ್ರತ್ಯೇಕಿತರಾಗದಂತೆ ಖಚಿತ ಪಡಿಸಲು ಕಾಂಗ್ರೆಸ್ ಯಾವ ಪ್ರಯತ್ನವನ್ನೂ ಮಾಡಲಿಲ್ಲ ಎಂದು ಅವರು ದೂರಿದರು.

ಕಾಂಗ್ರೆಸ್ ಮತ್ತು ಆ ಸಂಸ್ಕೃತಿಗೆ ಸಂಬಂಧಿಸಿದ ಪಕ್ಷಗಳು ಭಾರತೀಯರ ನಂಬಿಕೆ, ಸಂಪ್ರದಾಯ ಮತ್ತು ಸಂಸ್ಕೃತಿಗೆ  ಎಂದೂ ಬೆಲೆಯನ್ನೇ ಕೊಡಲಿಲ್ಲ. ಪವಿತ್ರ ಸ್ಥಳಗಳ ಬಗ್ಗೆ ಹೊಂದಿದ್ದಂತಹ ಧೋರಣೆಯನ್ನೇ ಕಾಂಗ್ರೆಸ್ ಜಮ್ಮು ಮತ್ತು ಕಾಶ್ಮೀರದ ಬಗೆಗೂ ಹೊಂದಿದೆ ಎಂದು ಪ್ರಧಾನಿ ಹೇಳಿದರು.

October 19, 2019 Posted by | ನರೇಂದ್ರ ಮೋದಿ, ಪ್ರಧಾನಿ, ಭಾರತ, ರಾಷ್ಟ್ರೀಯ, Flash News, General Knowledge, India, Nation, News, Politics, Spardha | , | Leave a comment

ನೊಬೆಲ್ ಪ್ರಶಸ್ತಿ ವಿಜೇತ ಅಭಿಜಿತ್ ಬ್ಯಾನರ್ಜಿಗೆ ಪ್ರಧಾನಿ ಮೋದಿ ಅಭಿನಂದನೆ

14 narendra-modi
ನವದೆಹಲಿ:
 ಎಸ್ತರ್  ಡ್ಯುಫ್ಲೋ ಮತ್ತು ಮೈಕೆಲ್ ಕ್ರೇಮರ್ ಜೊತೆಗೆ ೨೦೧೯ರ ಸಾಲಿನ ಅರ್ಥಶಾಸ್ತ್ರ ನೊಬೆಲ್ ಪಾರಿತೋಷಕಕ್ಕೆ ಭಾಜನರಾಗಿರುವ ಭಾರತೀಯ ಮೂಲಕ ಅಮೆರಿಕನ್ ಆರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು  2019 ಅಕ್ಟೋಬರ್ 14ರ ಸೋಮವಾರ ಅಭಿನಂದಿಸಿದರು.

‘ಅಲ್ಫ್ರೆಡ್ ನೊಬೆಲ್ ಅವರ ನೆನಪಿಗಾಗಿ ಅರ್ಥಶಾಸ್ತ್ರ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಕೊಡಲಾಗುವ ೨೦೧೯ರ ಸ್ವೆರ್ಗೆಸ್ ರಿಕ್ಸಬ್ಯಾಂಕ್ ಪ್ರಶಸ್ತಿಗೆ ಭಾಜನರಾದುದಕ್ಕಾಗಿ ಅಭಿಜಿತ್ ಬ್ಯಾನರ್ಜಿ ಅವರಿಗೆ ಅಭಿನಂದನೆಗಳು. ಬಡತನ ನಿವಾರಣೆಯ ಕ್ಷೇತ್ರಕ್ಕೆ ಅವರು ಗಮನಾರ್ಹ ಕೊಡುಗೆ ನೀಡಿದ್ದಾರೆ’ ಎಂದು ಮೋದಿ ಟ್ವೀಟ್ ಮಾಡಿದರು.

ರಾಯಲ್ ಸ್ವೀಡಿಶ್ ಅಕಾಡೆಮಿಯ ಅತ್ಯುನ್ನತ ಪ್ರಶಸ್ತಿಗೆ ಭಾಜನರಾದ ಎಸ್ತರ್ ಡ್ಯುಫ್ಲೋ ಮತ್ತು ಮೈಕೆಲ್ ಕ್ರೇಮರ್ ಅವರನ್ನೂ ಪ್ರಧಾನಿ ಅಭಿನಂದಿಸಿದರು.

ಪ್ರಧಾನಿಯವರ ಹೊರತಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರೂ ಅಭಿಜಿತ್ ಬ್ಯಾನರ್ಜಿ, ಎಸ್ತರ್ ಡ್ಯೂಫ್ಲೋ ಮತ್ತು ಮೈಕೆಲ್ ಕ್ರೇಮರ್ ಅವರನ್ನು ಅಭಿನಂದಿಸಿ ಟ್ವೀಟ್ ಮಾಡಿದರು.

ಮುಂಬೈಯಲ್ಲಿ ಜನಿಸಿದ್ದ ೫೮ರ ಹರೆಯದ ಅಭಿಜಿತ್ ಬ್ಯಾನರ್ಜಿ ಅವರು ಪ್ರಸ್ತುತ ಅಮೆರಿಕದ ಮೆಸ್ಯಾಚ್ಯುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿನ (ಎಂಐಟಿ) ಫೋರ್ಡ್ ಫೌಂಡೇಷನ್ ಇಂಟರ್ ನ್ಯಾಷನಲ್‌ನ ಅರ್ಥಶಾಸ್ರ್ರ ಪ್ರೊಫೆಸರ್ ಆಗಿದ್ದಾರೆ. ಅವರು ೧೯೮೮ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪಡೆಯುವುದಕ್ಕೆ ಮುನ್ನ ಕಲ್ಕತ್ತ ವಿಶ್ವ ವಿದ್ಯಾಲಯ ಮತ್ತು ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದ್ದರು.

October 15, 2019 Posted by | Award, ಆರ್ಥಿಕ, ನರೇಂದ್ರ ಮೋದಿ, ಪ್ರಧಾನಿ, ಭಾರತ, ರಾಷ್ಟ್ರೀಯ, ವಿಶ್ವ/ ಜಗತ್ತು, ಸಂಶೋಧನೆ, Finance, Flash News, General Knowledge, India, Nation, News, Spardha, World | | Leave a comment

ಇನ್‌ಸ್ಟಾಗ್ರಾಮ್ನಲ್ಲೂ ಮೋದಿ ಅಗ್ರಗಣ್ಯ

13 pm_modi_instagram
೩೦೦ ಲಕ್ಷ  ದಾಟಿದ  ಹಿಂಬಾಲಕರ ಸಂಖ್ಯೆ

ನವದೆಹಲಿ: ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅನುಯಾಯಿಗಳ (ಫಾಲೋಯರ್ಸ್) ಸಂಖ್ಯೆ  2019 ಅಕ್ಟೋಬರ್ 13ರ ಭಾನುವಾರ ೩೦೦ ಲಕ್ಷದ/ ೩ ಕೋಟಿಯ (೩೦ ಮಿಲಿಯನ್) ಗಡಿ ದಾಟಿತು. ಇದರೊಂದಿಗೆ ಮೋದಿಯವರು ಫೊಟೋ ಹಂಚಿಕೊಳ್ಳುವ ಅಪ್ಲಿಕೇಶನ್ನಿನಲ್ಲಿ ಅತ್ಯಂತ ಹೆಚ್ಚು ಹಿಂಬಾಲಕರನ್ನು ಹೊಂದಿರುವ ಜಾಗತಿಕ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಮೋದಿಯವರು ಇನ್‌ಸ್ಟಾಗ್ರಾಮ್‌ನಲ್ಲಿ ೩೦ ಮಿಲಿಯನ್ ಮೈಲಿಗಲ್ಲು ತಲುಪಿದ ಏಕೈಕ ಜಾಗತಿಕ ನಾಯಕರಾಗಿದ್ದಾರೆ. ಹಿಂಬಾಲಕರನ್ನು ಪಡೆಯುವಲ್ಲಿ ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರನ್ನೂ ಹಿಂದಿಕ್ಕಿದ್ದಾರೆ. ಕೇವಲ ಒಂದು ತಿಂಗಳ ಹಿಂದೆ ಪ್ರಧಾನಿಯವರು ಟ್ವಟ್ಟರಿನಲ್ಲಿ ೫೦ ಮಿಲಿಯನ್ (೫೦೦ ಲಕ್ಷ) ಅನುಯಾಯಿಗಳ ಗಡಿಯನ್ನು ದಾಟಿದ್ದರು.

ಪ್ರಧಾನಿ ಮೋದಿಯವರು ಸಾಮಾಜಿಕ ಮಾಧ್ಯಮದಲ್ಲಿ ಅತ್ಯಂತ ಸಕ್ರಿಯರಾಗಿದ್ದು, ನಿಯಮಿತವಾಗಿ ಪೋಸ್ಟ್‌ಗಳನ್ನು ಮತ್ತು ಅಪ್ ಡೇಟ್‌ಗಳನ್ನು ಮಾಡುತ್ತಿರುತ್ತಾರೆ.

‘ಪ್ರಧಾನಿ ನರೇಂದ್ರ ಮೋದಿ ಅವರ ಅನುಯಾಯಿಗಳ ಸಂಖೆಯ ೩೦ ಮಿಲಿಯನ್ ದಾಟಿದೆ. ಅವರು ಈಗ ಇನ್‌ಸ್ಟಾಗ್ರಾಮ್‌ನಲ್ಲಿ ಅತ್ಯಂತ ಹೆಚ್ಚು ಹಿಂಬಾಲಕರನ್ನು ಹೊಂದಿರುವ ಜಾಗತಿಕ ನಾಯಕರಾಗಿದ್ದಾರೆ. ಹಿಂಬಾಲಕರನ್ನು ಗಳಿಸುವಲ್ಲಿ ಅವರು ಅಮೆರಿಕದ ಅಧ್ಯಕ್ಷ ಟ್ರಂಪ್ ಮತ್ತು ಅಮೆರಿಕದ ಮಾಜಿ ಅಧ್ಯಕ್ಷ ಒಬಾಮಾ ಅವರಿಂದಲೂ ಮುಂದೆ ಸಾಗಿದ್ದಾರೆ. ಇದು ಅವರ ಜನಪ್ರಿಯತೆ ಮತ್ತು ಯುವಕರ ಜೊತೆಗಿನ ಸಂಪರ್ಕಕ್ಕೆ ಇನ್ನೊಂದು ಸಾಕ್ಷಿಯಾಗಿದೆ’ ಎಂದು ಬಿಜೆಪಿ ಕಾರ್‍ಯಾಧ್ಯಕ್ಷ ಜೆಪಿ ನಡ್ಡಾ ಟ್ವೀಟ್ ಒಂದರಲ್ಲಿ ತಿಳಿಸಿದರು.

ಇತರ ವಿಶ್ವ ನಾಯಕರ ಪೈಕಿ ಇಂಡೋನೇಶ್ಯಾದ ಅಧ್ಯಕ್ಷ ಜೊಕೊ ವಿಡೊಡೊ ಅವರು ೨೫.೬ ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದರೆ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರು ೨೪.೮ ಮಿಲಿಯನ್ ಹಿಂಬಾಲಕರೊಂದಿಗೆ ಮೂರನೇ ಸ್ಥಾನದಲ್ಲಿ ಇದ್ದಾರೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ೧೪.೯ ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ.

ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟ್ಟರ್ ಮತ್ತು ಫೇಸ್‌ಬುಕ್‌ನಲ್ಲಿ ಕೂಡಾ ಪ್ರಧಾನಿ ಮೋದಿಯವರು ಅತ್ಯಂತ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ರಾಜಕೀಯ ನಾಯಕರಾಗಿದ್ದಾರೆ. ಭಾರತದಲ್ಲಿ ಕೂಡಾ ಸಾಮಾಜಿಕ ಮಾಧ್ಯಮದಲ್ಲಿ ಉಪಸ್ಥಿತಿ ಹೊಂದಿರುವ ರಾಜಕೀಯ ನಾಯಕರ ಪಟ್ಟಿಯಲ್ಲಿ ಅವರು ಅಗ್ರಸ್ಥಾನದಲ್ಲಿ ಇದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಟ್ವಿಟ್ಟರಿನಲ್ಲಿ ೧೦.೧ ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದು, ಫೇಸ್‌ಬುಕ್‌ನ ೩ ಮಿಲಿಯನ್ ಅನುಯಾಯಿಗಳಿಗಿಂತ  ಹೆಚ್ಚು ಹಿಂಬಾಲಕರನ್ನು ಪಡೆದಿದ್ದಾರೆ.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಅವರ ಅಧಿಕೃತ ಟ್ವಿಟ್ಟರ್ ಖಾತೆಯು ೩.೬ ಮಿಲಿಯನ್ ಅನುಯಾಯಿಗಳನ್ನು ಹೊಂದಿದೆ. ಫೇಸ್‌ಬುಕ್‌ನಲ್ಲಿ ಮಮತಾ ಬ್ಯಾನರ್ಜಿ ೩.೨ ಮಿಲಿಯನ್ ಅನುಯಾಯಿಗಳನ್ನು ಪಡೆದಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಟಿಎಂಸಿ ಮುಖ್ಯಸ್ಥರ ಹಿಂಬಾಲಕರ ಸಂಖ್ಯೆ ೨೯.೪ ಸಾವಿರ.

October 14, 2019 Posted by | ನರೇಂದ್ರ ಮೋದಿ, ಪ್ರಧಾನಿ, ಭಾರತ, ರಾಜ್ಯ, ರಾಷ್ಟ್ರೀಯ, ವಿಶ್ವ/ ಜಗತ್ತು, ಸಾಮಾಜಿಕ  ಮಾಧ್ಯಮ, Flash News, General Knowledge, India, Nation, News, Prime Minister, Spardha, World | | Leave a comment

೩೭೦ನೇ ವಿಧಿ  ಪುನಃಸ್ಥಾಪಿಸಿ: ವಿಪಕ್ಷಗಳಿಗೆ ಪ್ರಧಾನಿ ನರೇಂದ್ರ ಮೋದಿ ಸವಾಲು

13 modi challange
ನವದೆಹಲಿ:
ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಿಧಾನದ ೩೭೦ನೇ ವಿಧಿಯನ್ನು ಪುನಃಸ್ಥಾಪನೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು  2019 ಅಕ್ಟೋಬರ್ 13ರ ಭಾನುವಾರ ವಿರೋಧ ಪಕ್ಷಗಳಿಗೆ ಸವಾಲು ಹಾಕಿದರು.

ಮಹಾರಾಷ್ಟ್ರದ ಜಲಗಾಂವ್‌ನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದ ಅವರು ೩೭೦ನೇ ವಿಧಿ ರದ್ದು ಪಡಿಸಿದ್ದಕ್ಕೆ ಸಂಬಂಧಿಸಿದಂತೆ ತಳೆದ ನಿಲುವಿಗಾಗಿ ಕಾಂಗ್ರೆಸ್ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷವನ್ನು (ಎನ್‌ಸಿಪಿ) ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ತಮ್ಮ ಮೊಸಳೆ ಕಣ್ಣೀರಿನ ಮೂಲಕ ಜನರನ್ನು ಮೂರ್ಖರನ್ನಾಗಿ ಮಾಡಲು ಯತ್ನಿಸುತ್ತಿರುವ ಈ ನಾಯಕರು ಕಾಶ್ಮೀರದಲ್ಲಿ ೩೭೦ನೇ ವಿಧಿಯನ್ನು ಪುನಃ ತರಬಲ್ಲರೇ? ಭಾರತದ ಜನರು ಅವರಿಗೆ ಹೀಗೆ ಮಾಡಲು ಅವಕಾಶ ನೀಡುತ್ತಾರೆಯೇ? ಭಾರತದ ಜನರು ಇದನ್ನು ಸ್ವೀಕರಿಸುತ್ತಾರೆಯೇ? ೩೭೦ನೇ ವಿಧಿಯನ್ನು ಪುನಃ ತರುತ್ತೇವೆ ಎಂದು ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸುವಂತೆ ನಾನು ವಿರೋಧ ಪಕ್ಷಗಳಿಗೆ ಸವಾಲು ಹಾಕುತ್ತೇನೆ’ ಎಂದು ಮೋದಿ ನುಡಿದರು.

ಬಿಜೆಪಿಯ ಪಾಲಿಗೆ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಕೇವಲ ಭೂಮಿಯ ತುಂಡಲ್ಲ ಅಥವಾ ಪ್ರದೇಶವಲ್ಲ. ಅದು ಭಾರತದ ಕಿರೀಟವಾಗಿದೆ. ಭದ್ರತಾ ಅಗತ್ಯಗಳನ್ನು ಪರಿಗಣಿಸಿ, ನಾವು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದೇವೆ. ಎಲ್ಲ ನಕಾರಾತ್ಮಕ ಶಕ್ತಿಗಳ ನಡುವೆಯೂ ಪ್ರದೇಶದಲ್ಲಿ ಸಹಜ ಸ್ಥಿತಿಯ ಖಾತರಿಗಾಗಿ ಸಾಧ್ಯವಿರುವ ಎಲ್ಲ ಅತ್ಯುತ್ತಮ ಪ್ರಯತ್ನಗಳನ್ನು ನಾವು ಮಾಡಿದ್ದೇವೆ’ ಎಂದು ಪ್ರಧಾನಿ ಹೇಳಿದರು.

ವಾಲ್ಮೀಕಿ ಸಮುದಾಯದ ಹಕ್ಕುಗಳನ್ನು ಪುನಸ್ಥಾಪಿಸಿದ್ದು ಸೇರಿದಂತೆ ಹಲವಾರು ಚಾರಿತ್ರಿಕ ವಿಷಯಗಳ ಜೊತೆ ೩೭೦ನೇ ವಿಧಿಯನ್ನು ರದ್ದು ಪಡಿಸಿದ ಆಗಸ್ಟ್ ೫ರ ಸರ್ಕಾರದ ನಿರ್ಧಾರಕ್ಕೆ ಸಂಬಂಧವಿದೆ’ ಎಂದು ರಾಮಾಯಣ ಕೃತಿಯ  ಸೃಷ್ಟಕರ್ತ ವಾಲ್ಮೀಕಿ ಋಷಿಯ ಜನ್ಮದಿನವಾದ ಈದಿನ ನಡೆದ ರ್‍ಯಾಲಿಯಲ್ಲಿ ಪ್ರಧಾನಿ ಮೋದಿ ನುಡಿದರು.

೩೭೦ನೇ ವಿಧಿಯ ಕಾರಣದಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ವಾಲ್ಮೀಕಿ ಸಮುದಾಯದ ಜನರಿಗೆ ಯಾವುದೇ ಹಕ್ಕುಗಳೂ ಇರಲಿಲ್ಲ. ಅಲ್ಲಿದ್ದದ್ದು ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದ ಮಾತ್ರ ಎಂದು ಪ್ರಧಾನಿ ಹೇಳಿದರು.

ಪಾಕಿಸ್ತಾನದ ಹೆಸರನ್ನು ಉಲ್ಲೇಖ ಮಾಡದೆಯೇ ಆ ರಾಷ್ಟ್ರವನ್ನು ಟೀಕಿಸಿದ ಮೋದಿ, ’ನೆರೆಯ ರಾಷ್ಟವು ಜಮ್ಮು ಮತ್ತು ಕಾಶ್ಮೀರದಲ್ಲಿ ಅಶಾಂತಿ ಸೃಷ್ಟಿಸಲು ಸಂಚು ಹೂಡಿದೆ’ ಎಂದು ಆಪಾದಿಸಿದರು.

ಸರ್ಕಾರವು ಅಲ್ಲಿ ಆದಷ್ಟೂ ಶೀಘ್ರ ಸಹಜಸ್ಥಿತಿ ಸ್ಥಾಪನೆಗೆ ಬದ್ಧವಾಗಿದೆ ಎಂದು ಅವರು ಒತ್ತಿ ಹೇಳಿದರು.

‘ಭದ್ರತೆಯ ಸಲುವಾಗಿ ನಾವು ಕ್ರಮಗಳನ್ನು ಕೈಗೊಂಡಿದ್ದೇವೆ. ಪರಿಸ್ಥಿತಿಯನ್ನು ಸಹಜಗೊಳಿಸಲು ನಾವು ಶ್ರಮಿಸುತ್ತಿದ್ದೇವೆ. ೪೦ ವರ್ಷಗಳಿಂದ ಕೆಟ್ಟು ಹೋಗಿರುವ ಪರಿಸ್ಥಿತಿಯನ್ನು ಮಾಮೂಲಿಗೆ ತರಲು ನಾಮಗೆ ನಾಲ್ಕು ತಿಂಗಳುಗಳು ಕೂಡಾ ಬೇಕಾಗಿಲ್ಲ’ ಎಂದು ಪ್ರಧಾನಿ ನುಡಿದರು.

ಮಹಾರಾಷ್ಟ್ರದ ಮುಂಬರುವ ವಿಧಾನಸಭಾ ಚುನಾವಣೆಯ ಲಾಭಕ್ಕಾಗಿ ಕಾಶ್ಮೀರ ಕುರಿತ ಸರ್ಕಾರದ ನಿರ್ಧಾರವನ್ನು ಕಾಂಗ್ರೆಸ್ ರಾಜಕೀಯಗೊಳಿಸುತ್ತಿದೆ ಎಂದು ಅವರು ಅಪಾದಿಸಿದರು.

‘ಕೆಲವು ಪಕ್ಷಗಳು ಓಟು ಗಳಿಸುವ ಸಲುವಾಗಿ ಮಹಾರಾಷ್ಟ್ರದಲ್ಲಿ ಕೂಡಾ ಕಾಶ್ಮೀರದ ವಿಷಯಕ್ಕೆ ಸಂಬಂಧಿಸಿದಂತೆ ರಾಜಕೀಯ ಮಾಡುತ್ತಿವೆ. ಕಾಂಗ್ರೆಸ್ ಮತ್ತು ಎನ್‌ಸಿಪಿ ರಾಷ್ಟ್ರವು ಏನು ಚಿಂತನೆ ಮಾಡುತ್ತಿದೆಯೋ ಅದಕ್ಕೆ ವಿರುದ್ಧವಾಗಿ ಯೋಚಿಸುತ್ತಿವೆ. ಅವರು ನೆರೆಯ ರಾಷ್ಟ್ರದ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ ಮತ್ತು ರಾಷ್ಟ್ರದ ಪರ ನಿಲ್ಲಲು ಹಿಂಜರಿಯುತ್ತಿದ್ದಾರೆ’ ಎಂದು ಮೋದಿ ಹೇಳಿದರು.

ರಾಜ್ಯದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ದೇವೇಂದ್ರ ಫಡ್ನವಿಸ್ ಸರ್ಕಾರಕ್ಕೆ ಮತ ನೀಡುವಂತೆ ಪ್ರಧಾನಿ ಮಹಾರಾಷ್ಟ್ರದ ಜನತೆಗೆ ಮನವಿ ಮಾಡಿದರು.

‘ನಾಲ್ಕು ತಿಂಗಳ ಹಿಂದೆ ನೀವು ನವಭಾರತಕ್ಕಾಗಿ ಮತ ನೀಡಿದಿರಿ. ವಿಶ್ವವು ಭಾರತವನ್ನು ಹೊಸ ಕುತೂಹಲದೊಂದಿಗೆ ನೋಡುತ್ತಿದೆ. ನಿಮ್ಮ ವೋಟು ಭಾರತದ ಪ್ರಜಾಪ್ರಭುತ್ವವನ್ನು ಅಲಂಕರಿಸಿದೆ. ನವಭಾರತಕ್ಕೆ ವೇಗ ಲಭಿಸಿರುವುದು ಮೋದಿಯಿಂದಲ್ಲ, ಬದಲಿಗೆ ನಿಮ್ಮ ಒಂದು ವೋಟಿನಿಂದ’ ಎಂದು ಪ್ರಧಾನಿ ನುಡಿದರು.

ಮಹಾರಾಷ್ಟ್ರ ರಾಜ್ಯ ವಿಧಾನಸಭೆಗೆ ಅಕ್ಟೋಬರ್ ೨೧ರಂದು ಮತದಾನ ನಡೆಯಲಿದೆ. ಅಕ್ಟೋಬರ್ ೨೪ರಂದು ಮತಗಳ ಎಣಿಕೆ ನಡೆಯಲಿದೆ.

October 14, 2019 Posted by | ನರೇಂದ್ರ ಮೋದಿ, ಪಾಕಿಸ್ತಾನ, ಪ್ರಧಾನಿ, ಭಯೋತ್ಪಾದಕ, ಭಾರತ, ರಾಷ್ಟ್ರೀಯ, Flash News, General Knowledge, Nation, News, Pakistan, Politics, Spardha, World | , | Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ