ಪಾಕ್ ಪ್ಯಾಸೆಂಜರ್ ರೈಲಿನಲ್ಲಿ ಗ್ಯಾಸ್ ಸ್ಟವ್ ಸ್ಫೋಟ: ಕನಿಷ್ಠ ೭೩ ಸಾವು
ಪ್ರಯಾಣಿಕರು ಅಡುಗೆ ಮಾಡುತ್ತಿದ್ದಾಗ ಸಂಭವಿಸಿದ ಭೀಕರ ದುರಂತ
ಇಸ್ಲಾಮಾಬಾದ್: ಕೇಂದ್ರ ಪಾಕಿಸ್ತಾನದ ಪ್ಯಾಸೆಂಜರ್ ರೈಲುಗಾಡಿಯೊಂದಕ್ಕೆ 2019 ಅಕ್ಟೋಬರ್ 31ರ ಗುರುವಾರ ಬೆಂಕಿ ಹತ್ತಿಕೊಂಡ ಪರಿಣಾಮವಾಗಿ ಕನಿಷ್ಠ ೭೩ ಮಂದಿ ಸುಟ್ಟು ಕರಕಲಾಗಿದ್ದು, ಇತರ ೪೦ಕ್ಕೂ ಹೆಚ್ಚು ಮಂದಿ ಸುಟ್ಟ ಗಾಯಗಳಿಗೆ ಒಳಗಾಗಿದ್ದಾರೆ ಎಂದು ಪ್ರಾಂತೀಯ ಸಚಿವರು ತಿಳಿಸಿದರು.
ಬೋಗಿಗಳಲ್ಲಿ ಧಗಧಗಿಸುತ್ತಿದ್ದ ಬೆಂಕಿಯ ಕೆನ್ನಾಲಗೆ ಹಾಗೂ ರೈಲುಬೋಗಿಗಳ ಒಳಗಿನಿಂದ ಪ್ರಯಾಣಕರ ಹಾಹಾಕಾರ, ಕಿರಿಚಾಟ ಕೇಳುತ್ತಿದ್ದ ಭೀಕರ ದೃಶ್ಯಗಳನ್ನು ಟೆಲಿವಿಷನ್ಗಳು ಪ್ರಸಾರ ಮಾಡಿದವು. ಪಂಜಾಬ್ ಪ್ರಾಂತದ ರಹೀಮ್ ಯಾರ್ ಖಾನ್ ಜಿಲ್ಲೆಯ ಸಮೀಪ ಈ ದುರಂತ ಸಂಭವಿಸಿತು.
’ನಮಗೆ ಬಂದಿರುವ ವರದಿಗಳ ಪ್ರಕಾರ ೬೫ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ೪೦ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ’ ಎಂದು ಪ್ರಾಂತೀಯ ಆರೋಗ್ಯ ಸಚಿವೆ ಡಾ. ಯಾಸ್ಮೀನ್ ರಶೀದ್ ಹೇಳಿದರು.
ಗಾಯಾಳುಗಳನ್ನು ಸಮೀಪದ ಬಹವಾಲ್ಪುರ ಮತ್ತು ಆಸುಪಾಸಿನ ಆಸ್ಪತ್ರೆಗಳಿಗೆ ಒಯ್ಯಲಾಗಿದೆ ಎಂದು ಆಕೆ ನುಡಿದರು. ಕೇವಲ ೧೮ ಶವಗಳು ಗುರುತಿಸುವ ಸ್ಥಿತಿಯಲ್ಲಿದ್ದು, ಉಳಿದ ಶವಗಳು ಗುರುತಿಸಲೂ ಸಾಧ್ಯವಾಗದಷ್ಟು ಕರಟಿಹೋಗಿವೆ ಎಂದು ಅವರು ಹೇಳಿದರು.
’ಭಯಾನಕ.. ಪ್ರಯಾಣಿಕರು ಒಯ್ದಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಿಸಿದ್ದರಿಂದ ಸಂಭವಿಸಿದ ಈ ದುರಂತ ಭಯಾನಕ’ ಎಂದು ಮಾನವ ಹಕ್ಕುಗಳ ಸಚಿವೆ ಶಿರೀನ್ ಮಝಾರಿ ಟ್ವೀಟ್ ಮಾಡಿದರು.
ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಾಗ ಕೆಲವು ಪ್ರಯಾಣಿಕರು ಬೆಳಗಿನ ಉಪಾಹಾರ ಸಿದ್ಧ ಪಡಿಸುವುದರಲ್ಲಿ ತಲ್ಲೀನರಾಗಿದ್ದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದವು.
ದುರಂತಕ್ಕೆ ಈಡಾಗಿರುವ ರೈಲು ಪಾಕಿಸ್ತಾನದ ಅತ್ಯಂತ ಹಳೆಯ ಹಾಗೂ ಜನಪ್ರಿಯ ಸೇವೆ ಒದಗಿಸುತ್ತಿದ್ದ ’ತೇಝಗಮ್’. ಇದು ಇಸ್ಲಾಮಾಬಾದ್ ಸಮೀಪದ ರಾವಲ್ಪಿಂಡಿ ಮತ್ತು ದಕ್ಷಿಣದ ಬಂದರು ನಗರ ಕರಾಚಿ ಮಧ್ಯೆ ಸಂಚರಿಸುತ್ತದೆ.
ರೈಲುಗಾಡಿಯಿಂದ ಬೇರ್ಪಡಿಸಲಾದ ಮೂರು ಬೋಗಿಗಳು ಧಗಧಗನೆ ಉರಿಯುತ್ತಿದ್ದುದನ್ನು ನೂರಾರು ಮಂದಿ ಗುಂಪುಗೂಡಿ ವೀಕ್ಷಿಸುತ್ತಿದ್ದ ದೃಶಗಳನ್ನೂ ಟಿವಿಗಳು ಪ್ರಸಾರ ಮಾಡಿದವು.
ಪಾಕಿಸ್ತಾನದಲ್ಲಿ ದಶಕಗಳ ಕಾಲದ ಭ್ರಷ್ಟಾಚಾರ, ಅಸಮರ್ಪಕ ನಿರ್ವಹಣೆ ಮತ್ತು ಹೂಡಿಕೆ ಕೊರತೆಯ ಪರಿಣಾಮವಾಗಿ ರೈಲು ಅಪಘಾತಗಳು ಸಂಭವಿಸುವುದು ಮಾಮೂಲಾಗಿದೆ.
ಜುಲೈ ತಿಂಗಳಲ್ಲಿ ಇದೇ ಜಿಲ್ಲೆಯಲ್ಲಿ ಪೂರ್ವದ ಲಾಹೋರ್ ನಗರದಿಂದ ಬರುತ್ತಿದ್ದ ಪ್ಯಾಸೆಂಜರ್ ರೈಲುಗಾಡಿಯು ಕ್ರಾಸಿಂಗ್ ಸಲುವಾಗಿ ನಿಂತಿದ್ದ ಗೂಡ್ಸ್ ಗಾಡಿಗೆ ಅಪ್ಪಳಿಸಿದ ಪರಿಣಾಮವಾಗಿ ೨೩ ಪ್ರಯಾಣಿಕರು ಸಾವನ್ನಪ್ಪಿದ್ದರು.
ಕಾವಲುರಹಿತ ಕ್ರಾಸಿಂಗ್ ಗಳಲ್ಲಂತೂ ದುರಂತಗಳು ಅತೀ ಸಾಮಾನ್ಯವಾಗಿವೆ.
ಕಳೆದ ವರ್ಷ ಇಸ್ಲಾಮಿಕ್ ಕಲ್ಯಾಣ ರಾಷ್ಟ್ರ ನಿರ್ಮಾಣದ ಭರವಸೆ ಮೇರೆಗೆ ಚುನಾಯಿತರಾದ ಪ್ರಧಾನಿ ಇಮ್ರಾನ್ ಖಾನ್ ಅವರು ಆರ್ಥಿಕ ಹಿಂಜರಿಕೆ ಪರಿಣಾಮವಾಗಿ ಮಿತವ್ಯಯಕ್ಕೆ ಮೊರೆಹೊಕ್ಕಿದ್ದು ಮೂಲಸವಲತ್ತು ಮತ್ತು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಹೂಡಿಕೆ ಯತ್ನಗಳಿಗೆ ಅಡ್ಡಿಯಾಗಿದೆ.
ಗ್ರಾಮೀಣ ಪಂಜಾಬ್ ಕಳೆದ ಹಲವಾರು ವರ್ಷಗಳಿಂದ ಭೀಕರ ಅಪಘಾತಗಳಿಗೆ ಸಾಕ್ಷಿಯಾಗಿದೆ. ಇವುಗಳಲ್ಲಿ ೨೦೧೭ರಲ್ಲಿ ಸಂಭವಿಸಿದ ತೈಲ ಟ್ಯಾಂಕರ್ ಸ್ಫೋಟವೂ ಸೇರಿದೆ. ಈ ದುರಂತದಲ್ಲಿ ೨೦೦ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಕರಾಚಿಯಿಂದ ಲಾಹೋರಿಗೆ ಸುಮಾರು ೫೦,೦೦೦ ಲೀಟರ್ ಇಂಧನವನ್ನು ಒಯ್ಯುತ್ತಿದ್ದ ಟ್ಯಾಂಕರ್ ಕೇಂದ್ರ ಪಂಜಾಬ್ ಪ್ರಾಂತದ ಮುಖ್ಯ ಹೆದ್ದಾರಿಯಲ್ಲಿ ಸ್ಫೋಟಗೊಂಡ ಪರಿಣಾಮವಾಗಿ ಈ ದುರಂತ ಸಂಭವಿಸಿತ್ತು.
ಚಾಲಕ ಮತ್ತು ಪೊಲೀಸರ ಎಚ್ಚರಿಕೆಯ ಹೊರತಾಗಿಯೂ ಟಾಂಕರಿನಿಂದ ಸೋರಿಕೆಯಾಗುತ್ತಿದ್ದ ತೈಲವನ್ನು ಸಂಗ್ರಹಿಸಲು ಸಮೀಪದ ಹಳ್ಳಿಯೊಂದರ ಜನರು ಗುಂಪುಗೂಡಿದ್ದಾಗ ಟ್ಯಾಂಕರ್ ಸ್ಫೋಟಿಸಿ ಬೆಂಕಿಯ ಜ್ವಾಲೆಗಳ ಮಧ್ಯೆ ಅವರು ಸಿಕ್ಕಿಹಾಕಿಕೊಂಡಿದ್ದರು.
ಅ.29ರ ಮಂಗಳವಾರ ಜಮ್ಮು- ಕಾಶ್ಮೀರಕ್ಕೆ ಐರೋಪ್ಯ ಸಂಸದರ ತಂಡದ ಭೇಟಿ
ಸರ್ಕಾರದ ಆದ್ಯತೆಗಳ ಸ್ಪಷ್ಟ ಚಿತ್ರಣ ಸಿಗಲಿದೆ: ಪ್ರಧಾನಿ ಮೋದಿ
ನವದೆಹಲಿ: ಐರೋಪ್ಯ ಸಂಸತ್ತಿನ ಸಂಸತ್ ಸದಸ್ಯರ ತಂಡವೊಂದಕ್ಕೆ 2019 ಅಕ್ಟೋಬರ್ 29ರ ಮಂಗಳವಾರ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲು ಕೇಂದ್ರ ಸರ್ಕಾರವು ಅನುಮತಿ ನೀಡಿದ್ದು, 2019 ಅಕ್ಟೋಬರ್ 28ರ ಸೋಮವಾರ ತಂಡದ ಸದಸ್ಯರ ಜೊತೆ ಸಂವಹನ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು ’ಈ ಭೇಟಿಯು ಸರ್ಕಾರದ ಆದ್ಯತೆಗಳ ಸ್ಪಷ್ಟ ಚಿತ್ರಣವನ್ನು ತಂಡಕ್ಕೆ ನೀಡಲಿದೆ’ ಎಂದು ಹೇಳಿದರು.
‘ಭಯೋತ್ಪಾದನೆಗೆ ಬೆಂಬಲ ನೀಡುವವರು ಅಥವಾ ಭಯೋತ್ಪಾದನೆಯನ್ನು ರಾಷ್ಟ್ರೀಯ ನೀತಿಯನ್ನಾಗಿ ಮಾಡಿಕೊಂಡಿರುವವರ ವಿರುದ್ಧ ತುರ್ತು ಕ್ರಮ ಕೈಗೊಳ್ಳುವಂತೆ’ ಪ್ರಧಾನಿ ಈ ಸಂದರ್ಭದಲ್ಲಿ ಕರೆ ನೀಡಿದರು.
‘ಭಯೋತ್ಪಾದನೆ ಬಗ್ಗೆ ಶೂನ್ಯ ಸಹನೆ ಇರಬೇಕು’ ಎಂದು ಪ್ರಧಾನಿ ಭಾರತಕ್ಕೆ ಪ್ರವಾಸ ಬಂದಿರುವ ಐರೋಪ್ಯ ಒಕ್ಕೂಟದ ಶಾಸನಕರ್ತರ ಜೊತೆ ಮಾತನಾಡುತ್ತಾ ಹೇಳಿದರು.
ದೇಶದ ವಿವಿಧ ಭಾಗಗಳಿಗೆ ಭೇಟಿ ನೀಡಲಿರುವ ಐರೋಪ್ಯ ಸಂಸತ್ತಿನ ಸದಸ್ಯರ ತಂಡವು ಜಮ್ಮು ಮತ್ತು ಕಾಶ್ಮೀರಕ್ಕೆ ಮಂಗಳವಾರ ಭೇಟಿ ನೀಡಲಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಒದಗಿಸಿದ್ದ ಸಂವಿಧಾದ ೩೭೦ನೇ ವಿಧಿಯನ್ನು ರದ್ದು ಪಡಿಸಿ, ರಾಜ್ಯವನ್ನು ಜಮ್ಮು-ಕಾಶ್ಮೀರ ಹಾಗೂ ಲಡಾಖ್ ಎಂಬುದಾಗಿ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲು ಕೇಂದ್ರ ಸರ್ಕಾರವು ನಿರ್ಧರಿಸಿದ ಬಳಿಕ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡುತ್ತಿರುವ ಮೊತ್ತ ಮೊದಲ ಶಾಸನಕರ್ತರ ತಂಡ ಇದಾಗಿದೆ.
‘ಈ ಭೇಟಿಯು ನಿಮಗೆ ರಾಜ್ಯದ ಜಮ್ಮು, ಕಾಶ್ಮೀರ ಮತ್ತು ಲಡಾಖ್ ಈ ಮೂರು ಪ್ರದೇಶಗಳ ಸಾಂಸ್ಕೃತಿಕ ಮತ್ತು ಧಾರ್ಮಿಕ ವೈವಿಧ್ಯವನ್ನು ಚೆನ್ನಾಗಿ ಅರ್ಥ ಮಾಡಿಸಲಿದೆ ಮತ್ತು ಈ ಪ್ರದೇಶದಲ್ಲಿನ ಅಭಿವೃದ್ಧಿ ಮತ್ತು ಆಡಳಿತದ ಆದ್ಯತೆಗಳ ಬಗ್ಗೆ ಸ್ಪಷ್ಟ ಚಿತ್ರವನ್ನು ನೀಡಲಿದೆ’ ಎಂದು ಪ್ರಧಾನಿ ಮೋದಿ ತಂಡಕ್ಕೆ ತಿಳಿಸಿದರು.
ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿಂತೆ ಸರ್ಕಾರ ಇತ್ತೀಚೆಗೆ ಕೈಗೊಂಡ ಕ್ರಮದ ಸಂದರ್ಭವನ್ನು ಕೂಡಾ ಪ್ರಧಾನಿ ಮೋದಿ ಐರೋಪ್ಯ ಸಂಸದರ ತಂಡಕ್ಕೆ ತಿಳಿಸಿದರು ಎಂದು ಹೇಳಲಾಗಿದೆ. ಐರೋಪ್ಯ ಒಕ್ಕೂಟದ ಶಾಸನಕರ್ತರ ತಂಡವು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ಭೇಟಿ ಮಾಡಿದ್ದು, ಈ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಸೂಚ್ಯವಾಗಿ ಹೇಳಿದ ವಿಚಾರವನ್ನು ದೋವಲ್ ಅವರು ವಿಷದವಾಗಿ ತಿಳಿಸಿದರು ಎಂದು ಸುದ್ದಿ ಮೂಲಗಳು ತಿಳಿಸಿದವು.
ಐರೋಪ್ಯ ಸಂಸತ್ತಿನಲ್ಲಿ ಈಸ್ಟ್ ಮಿಡ್ಲ್ಯಾಂಡನ್ನು ಪ್ರತಿನಿಧಿಸುವ ಬಿಲ್ ನ್ಯೂಟನ್ ಡನ್ ಅವರು ’ತಂಡವು ಮಂಗಳವಾರ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲಿದೆ’ ಎಂದು ಸುದ್ದಿ ಸಂಸ್ಥೆಗೆ ತಿಳಿಸಿದರು.
‘ಪ್ರಧಾನಿಯವರು ನಮಗೆ ಅಲ್ಲಿನ ವಿಷಯದ ಬಗ್ಗೆ (೩೭೦ನೇ ವಿಧಿ ರದ್ದು) ವಿವರಿಸಿದರು. ಆದರೆ ಆ ನೆಲ ನಿಜವಾಗಿ ಹೇಗಿದೆ ಎಂಬುದಾಗಿ ನೋಡಲು ಮತ್ತು ಕೆಲವು ಜನರ ಜೊತೆಗೆ ಮಾತನಾಡಲು ನಾನು ಬಯಸಿದ್ದೇನೆ. ನಾವೆಲ್ಲರೂ ಬಯಸಿರುವುದು ಸಹಜ ಸ್ಥಿತಿ ಮತ್ತು ಪ್ರತಿಯೊಬ್ಬರಿಗೂ ಶಾಂತಿ’ ಎಂದು ಅವರು ನುಡಿದರು.
ತಂಡವು ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಿರುವ ಭೇಟಿಯನ್ನು ಉಲ್ಲೇಖಿಸಿರುವ ಪ್ರಧಾನ ಮಂತ್ರಿಯವರ ಕಚೇರಿಯ ಹೇಳಿಕೆಯು, ತಮ್ಮ ಅವಧಿಯ ಆರಂಭದಲ್ಲೇ ಭಾರತಕ್ಕೆ ಭೇಟಿ ನೀಡುವ ಮೂಲಕ ಭಾರತದ ಜೊತೆಗಿನ ಬಾಂಧವ್ಯಕ್ಕೆ ಸಂಬಂಧಿಸಿದಂತೆ ಮಹತ್ವ ನೀಡಿರುವ ತಂಡದ ಕ್ರಮವನ್ನು ಶ್ಲಾಘಿಸಿದೆ.
‘ಐರೋಪ್ಯ ಒಕ್ಕೂಟದ ಜೊತೆಗಿನ ಭಾರತದ ಬಾಂಧವ್ಯವು ಪ್ರಜಾತಾಂತ್ರಿಕ ಮೌಲ್ಯಗಳ ಬಗೆಗೆ ಹಂಚಿಕೊಳ್ಳಲಾಗಿರುವ ಹಿತಾಸಕ್ತಿಗಳು ಮತ್ತು ಸಮಾನ ಬದ್ಧತೆಯನ್ನು ಆಧರಿಸಿರುವಂತಹುದು’ ಎಂದು ಪ್ರಧಾನಿ ಮೋದಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜಮ್ಮು-ಕಾಶ್ಮೀರದಲ್ಲಿ ವಾಸ್ತವ ಸ್ಥಿತಿ ಅರಿಯಲು ಅಲ್ಲಿಗೆ ಭೇಟಿ ನೀಡಲಿರುವ ೨೮ ಮಂದಿ ಸದಸ್ಯರನ್ನು ಒಳಗೊಂಡ ಯೂರೋಪ್ ಒಕ್ಕೂಟದ ತಂಡ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ಭೇಟಿ ಮಾಡಿ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನ ಮಾನ ರದ್ದಾದ ನಂತರ ಉದ್ಭವಿಸಿರುವ ಬೆಳವಣಿಗೆಗಳ ಕುರಿತು ಚರ್ಚಿಸಿದೆ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿದವು.
ಇತ್ತೀಚೆಗೆ ಅಮೆರಿಕದ ವಾಷಿಂಗ್ಟನ್ನಲ್ಲಿ ನಡೆದ ಜನಪ್ರತಿನಿಧಿಗಳ ಸಭೆಯಲ್ಲಿ ತಜ್ಞರ ಒಂದು ಗುಂಪು ಜಮ್ಮು-ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನ ರದ್ದಾದ ನಂತರ ಉದ್ಭವಿಸಿರುವ ಸಮಸ್ಯೆಗಳ ಕುರಿತು ಕಾಳಜಿ ವ್ಯಕ್ತಪಡಿಸಿತ್ತು. ಈ ಬೆಳವಣಿಗೆ ನಂತರ ಯೂರೋಪಿಯನ್ ರಾಷ್ಟ್ರಗಳ ಈ ತಂಡ ಭೇಟಿ ನೀಡಿರುವುದು ಮಹತ್ವ ಪಡೆದುಕೊಂಡಿದೆ.
ಈ ಸಂಬಂಧ ಅಮೆರಿಕಾದ ರಾಜ್ಯ ಸಹಾಯಕ ಕಾರ್ಯದರ್ಶಿ ಅಲೈಸ್ ವೆಲ್ಸ್ ಮಾತನಾಡಿ, ಜಮ್ಮು-ಕಾಶ್ಮೀರದಲ್ಲಿ ಮಾನವ ಹಕ್ಕುಗಳಿಗೆ ರಕ್ಷಣೆ ಹಾಗೂ ಗೌರವ ನೀಡಬೇಕು, ಇಂಟರ್ ನೆಟ್ ಮತ್ತು ಮೊಬೈಲ್ ನೆಟ್ ವರ್ಕ್ ಕಾರ್ಯನಿರ್ವಹಿಸಲು ಅವಕಾಶ ನೀಡಬೇಕೆಂದು ಭಾರತ ಸರ್ಕಾರವನ್ನು ಒತ್ತಾಯಿಸಿ ಎಂದು ಹೇಳಿದ್ದರು.
ಅಲ್ಲದೆ, ಜಮ್ಮು ಕಾಶ್ಮೀರದಲ್ಲಿ ವಿಶೇಷ ಸ್ಥಾನ ಮಾನ ರದ್ದಾದ ಸಂದರ್ಭದಿಂದ ಮೂವರು ಮಾಜಿ ಮುಖ್ಯಮಂತ್ರಿಗಳನ್ನು ಗೃಹ ಬಂಧನದಲ್ಲಿ ಇರಿಸಿದ್ದು, ರಾಜಕೀಯ ಮುಖಂಡರು ಹಾಗೂ ಸ್ಥಳೀಯ ನಿವಾಸಿಗಳನ್ನು ವಶಕ್ಕೆ ತೆಗೆದುಕೊಂಡಿರುವುದರ ಕುರಿತು ಕಾಳಜಿ ವ್ಯಕ್ತಪಡಿಸುವುದು ನಮ್ಮ ಕರ್ತವ್ಯ ಎಂದೂ ಅವರು ಹೇಳಿದ್ದರು.
ಸುಬ್ರಮಣಿಯನ್ ಸ್ವಾಮಿ ವಿರೋಧ: ಈ ಮಧ್ಯೆ, ಜಮ್ಮು ಮತ್ತು ಕಾಶ್ಮೀರಕ್ಕೆ ಐರೋಪ್ಯ ಸಂಸದರ ತಂಡದ ಭೇಟಿಯನ್ನು ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರು ಸೋಮವಾರ ’ಇದು ಅನೈತಿಕ’ ಎಂಬುದಾಗಿ ಖಂಡಿಸಿ, ತತ್ ಕ್ಷಣ ಅದನ್ನು ರದ್ದು ಪಡಿಸುವಂತೆ ಆಗ್ರಹಿಸಿದರು.
‘ಈ ಕ್ರಮವು ರಾಷ್ಟ್ರದ ನೀತಿಯ ವಿಕೃತಿಯಾಗಿದೆ. ಐರೋಪ್ಯ ಒಕ್ಕೂಟದ ಸಂಸದರಿಗೆ ಖಾಸಗಿಯಾಗಿ (ಐರೋಪ್ಯ ಒಕ್ಕೂಟದ ಅಧಿಕೃತ ನಿಯೋಗವಲ್ಲ) ಭೇಟಿಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ವ್ಯವಸ್ಥೆ ಮಾಡಿದ್ದು ನನಗೆ ಅಚ್ಚರಿ ಉಂಟು ಮಾಡಿದೆ. ಇದು ರಾಷ್ಟ್ರೀಯ ನೀತಿಯ ವಿಕೃತಿ. ಇದು ಅನೈತಿಕವಾದ್ದರಿಂದ ಸರ್ಕಾರ ತತ್ ಕ್ಷಣ ಇದನ್ನು ರದ್ದು ಪಡಿಸಬೇಕು’ ಎಂದು ಸ್ವಾಮಿ ಟ್ವೀಟ್ ಮಾಡಿದರು.
ಕಾಶ್ಮೀರ: ಮುಂದುವರೆದ ಉಗ್ರರ ಅಟ್ಟಹಾಸ, ದಾಳಿಗೆ ಮತ್ತೊಬ್ಬ ಟ್ರಕ್ ಚಾಲಕ ಬಲಿ
ಜಮ್ಮು: ಕಣಿವೆ ರಾಜ್ಯದಲ್ಲಿ ಉಗ್ರಗಾಮಿಗಳ ಉಪಟಳ ಹೆಚ್ಚಾಗಿದ್ದು, ಭಯೋತ್ಪಾದಕರ ದಾಳಿಗೆ ಮತ್ತೊಬ್ಬ ಲಾರಿ ಚಾಲಕ 2019 ಅಕ್ಟೋಬರ್ 28ರ ಸೋಮವಾರ ಬಲಿಯಾದ. ದಕ್ಷಿಣ ಕಾಶ್ಮೀರದ ಅನಂತ್ನಾಗ್ ಜಿಲ್ಲೆಯ ಬಿಜ್ಬೆಹರಾದಲ್ಲಿ ಉಗ್ರರು ಚಾಲಕನನ್ನು ಗುಂಡು ಹಾರಿಸಿ ಹತ್ಯೆ ಮಾಡಿದರು.
ಚಾಲಕನನ್ನು ಉಧಮ್ಪುರ ಜಿಲ್ಲೆಯ ಕಾತ್ರಾ ಪ್ರದೇಶದ ನಾರಾಯಣ್ ದತ್ ಎಂದು ಗುರುತಿಸಲಾಯಿತು. ಈದಿನ ಸಂಜೆ ಈ ಘಟನೆ ಘಟಿಸಿದ್ದು, ಟ್ರಕ್ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಎಂದು ವರದಿಗಳು ತಿಳಿಸಿದವು.
ವಿಷಯ ತಿಳಿದ ಕೂಡಲೇ ಸ್ಥಳೀಯ ಪೊಲೀಸ್ ಅಧಿಕಾರಿ ಸ್ಥಳಕ್ಕೆ ಧಾವಿಸಿದರು. ಸುತ್ತಮುತ್ತಲ ಪ್ರದೇಶದಲ್ಲಿ ಇದ್ದ ಇನ್ನಿಬ್ಬರು ಟ್ರಕ್ ಚಾಲಕರನ್ನು ಪೊಲೀಸರು ರಕ್ಷಿಸಿದರು. ಬಳಿಕ ದಾಳಿಕೋರರನ್ನು ಸೆದೆ ಬಡೆಯಲು ಆ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಿದರು.
ಈ ದಾಳಿ ಸೇರಿ ದಕ್ಷಿಣ ಕಾಶ್ಮೀರದಲ್ಲಿ ಕಳೆದ 2 ವಾರಗಳಿಂದೀಚೆಗೆ ನಡೆದ ಉಗ್ರರ ದಾಳಿಗೆ 6 ಮಂದಿ ಟ್ರಕ್ ಚಾಲಕರು ಬಲಿಯಾಗಿದ್ದಾರೆ. ಬಲಿಯಾದವರೆಲ್ಲರೂ ಕಾಶ್ಮೀರೇತರರು ಎಂದು ತಿಳಿದು ಬಂದಿದೆ.
ದಕ್ಷಿಣ ಕಾಶ್ಮೀರದಲ್ಲಿ ಕಳೆದೆರಡು ವಾರಗಳಿಂದ ಕಾಶ್ಮೀರೇತರರನ್ನೇ ಗುರಿಯಾಗಿಸಿಕೊಂಡು ಉಗ್ರರು ದಾಳಿ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಹಿಂದಿನ ದಿನ ಹೊರ ರಾಜ್ಯಗಳ ಟ್ರಕ್ ಚಾಲಕರನ್ನು ಶೋಫಿಯಾನ್ ನಗರದಿಂದ ಹೊರ ಕಳಿಸಲು ಮುಂದಾಗಿದ್ದರು. ಮರುದಿನವೇ ಮತ್ತೊಂದು ದಾಳಿ ನಡೆಯಿತು.
ಕಾಶ್ಮೀರದ ಸೊಪೋರ್ನಲ್ಲಿ ಗ್ರೆನೇಡ್ ದಾಳಿ: ೧೯ ಜನರಿಗೆ ಗಾಯ
ಈ ಮಧ್ಯೆ, ಜಮ್ಮು-ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೊಪೋರ್ ಪಟ್ಟಣದ ಬಸ್ಸು ನಿಲ್ದಾಣದಲ್ಲಿ ಉಗ್ರಗಾಮಿಗಳು ಗ್ರೆನೇಡ್ ಎಸೆದ ಪರಿಣಾಮವಾಗಿ 2019 ಅಕ್ಟೋಬರ್ 28ರ ಸೋಮವಾರ ೧೯ ಮಂದಿ ಗಾಯಗೊಂಡರು ಎಂದು ಪೊಲೀಸರು ತಿಳಿಸಿದರು.
ಹೊಟೇಲ್ ಪ್ಲಾಜಾ ಸಮೀಪ ಸಂಜೆ ೪.೧೫ರ ವೇಳೆಗೆ ಸಂಭವಿಸಿದ ಗ್ರೆನೇಡ್ ದಾಳಿಯ ಗಾಯಾಳುಗಳ ಪೈಕಿ ಮೂವರಿಗೆ ಗಂಭೀರ ಗಾಯಗಳಾದವು. ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಮೇಲೆ ಎರಡು ದಿನಗಳ ಹಿಂದೆ 2019 ಅಕ್ಟೋಬರ್ 26ರ ಶನಿವಾರ ಸಂಜೆ ಶ್ರೀನಗರದಲ್ಲಿ ನಡೆದ ಇಂತಹುದೇ ದಾಳಿಯಲ್ಲಿ ೬ ಮಂದಿ ಸಿಆರ್ಪಿಎಫ್ ಯೋಧರು ಗಾಯಗೊಂಡಿದ್ದರು.
ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ೧೭೯ನೇ ಬೆಟಾಲಿಯನ್ ಪಡೆಗಳು ತತ್ ಕ್ಷಣವೇ ಸ್ಥಳಕ್ಕೆ ಧಾವಿಸಿ ಘಟನಾ ಸ್ಥಳವನ್ನು ಸುತ್ತುವರಿದವು ಎಂದು ಪೊಲೀಸರು ಹೇಳಿದರು.
ಆಗಸ್ಟ್ ೫ರಂದು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಪಡಿಸಿ, ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲು ಕೇಂದ್ರವು ನಿರ್ಧರಿಸಿದಂದಿನಿಂದ ಇಲ್ಲಿಯವರೆಗೆ ನಡೆದಿರುವ ಐದನೇ ದಾಳಿ ಇದು. ರಾಜ್ಯವು ಅಕ್ಟೋಬರ್ ೩೧ರಂದು ಅಧಿಕೃತವಾಗಿ ವಿಭಜನಗೊಳ್ಳಲಿದೆ.
ಶ್ರೀನಗರ: ಕೇಂದ್ರೀಯ ಮೀಸಲು ಭದ್ರತಾ ಪಡೆಯ ಮೇಲೆ ಗ್ರೆನೇಡ್, 6 ಸೈನಿಕರಿಗೆ ಗಾಯ
ನವದೆಹಲಿ: ಜಮ್ಮು-ಕಾಶ್ಮೀರದ ಶ್ರೀನಗರದ ಕರಣ್ ನಗರದಲ್ಲಿ 2019 ಅಕ್ಟೋಬರ್ 26ರ ಶನಿವಾರ ಸಂಜೆ ಉಗ್ರರು ಕೇಂದ್ರೀಯಮೀಸಲು ಪಡೆಯ (ಸಿಆರ್ಪಿಎಫ್) ಮೇಲೆ ಗ್ರೆನೇಡ್ ಮತ್ತು ಗುಂಡಿನ ದಾಳಿ ನಡೆಸಿದ ಪರಿಣಾಮ ಆರು ಸೈನಿಕರು ಗಾಯಗೊಂಡರು ಎಂದು ಪೊಲೀಸರು ತಿಳಿಸಿದರು.
ಸಿಆರ್ಪಿಎಫ್ನ 144ನೇ ಬೆಟಾಲಿಯನ್ ಮೇಲೆ ಉಗ್ರರು ದಾಳಿ ನಡೆಸಿದ್ದು, ಆರು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಸಂಜೆ 6.50ರ ಸಮಯದಲ್ಲಿ ಚೆಕ್ಪಾಯಿಂಟ್ ಬಳಿ ಸಿಆರ್ಪಿಎಫ್ ತಂಡದ ಮೇಲೆ ಈ ದಾಳಿ ನಡೆಯಿತು. ಗ್ರೆನೇಡ್ ಸ್ಫೋಟದಿಂದ ಸುತ್ತಮುತ್ತಲ ನಗರದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಉಗ್ರರ ದಾಳಿಗೆ ಭದ್ರತಾ ಪಡೆಯ ಸೈನಿಕರು ಪ್ರತಿದಾಳಿ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.
ಜಮ್ಮು-ಕಾಶ್ಮೀರ: ಪಾಕ್ ನುಸುಳುವಿಕೆ ಯತ್ನ ಭಗ್ನ, ೩ ಭಯೋತ್ಪಾದಕರ ಹತ್ಯೆ
ಒಬ್ಬ ಸೇನಾ ಅಧಿಕಾರಿ ಹುತಾತ್ಮ
ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ನೌಶೇರಾ ವಿಭಾಗದಲ್ಲಿ ಭಯೋತ್ಪಾದಕರನ್ನು ಭಾರತಕ್ಕೆ ನುಸುಳುವಂತೆ ಮಾಡುವ ಪಾಕಿಸ್ತಾನಿ ಸೇನೆಯ ಯತ್ನವನ್ನು ಭಾರತೀಯ ಸೇನೆಯು 2019 ಅಕ್ಟೋಬರ್ 22ರ ಮಂಗಳವಾರ ಭಗ್ನಗೊಳಿಸಿದ್ದು, ಮೂವರು ಭಯೋತ್ಪಾದಕರನ್ನು ಸದೆ ಬಡಿಯಿತು. ಈ ಸಂದರ್ಭದಲ್ಲಿ ನಡೆದ ಗುಂಡಿನ ಘರ್ಷಣೆಯಲ್ಲಿ ಭಾರತೀಯ ಸೇನೆಯ ಕಿರಿಯ ಅಧಿಕಾರಿಯೊಬ್ಬರು (ಜ್ಯೂನಿಯರ್ ಕಮಿಷನ್ಡ್ ಆಫೀಸರ್- ಜೆಸಿಒ) ಹುತಾತ್ಮರಾದರು.
ಸುದ್ದಿ ಮೂಲಗಳ ಪ್ರಕಾರ ಪಾಕಿಸ್ತಾನಿ ಸೇನೆಯ ಬೆಂಬಲದೊಂದಿಗೆ ಸಶಸ್ತ್ರ ಭಯೋತ್ಪಾದಕರ ತಂಡವೊಂದು ನಿಯಂತ್ರಣ ರೇಖೆಯನ್ನು ದಾಟಿ ಸುಮಾರು ೪೦೦ ಮೀಟರುಗಳಷ್ಟು ಭಾರತೀಯ ಪ್ರದೇಶದೊಳಕ್ಕೆ ನುಸುಳಿತ್ತು. ಅಷ್ಟರಲ್ಲಿ ಭಾರತೀಯ ಸೇನೆ ಅವರನ್ನು ಅಡ್ಡ ಗಟ್ಟಿತು. ತೀವ್ರ ಗುಂಡಿನ ಹಾರಾಟ ನಡೆದು ಮೂವರು ಭಯೋತ್ಪಾದಕರನ್ನು ಕೊಂದು ಹಾಕುವ ಮೂಲಕ ಪಾಕ್ ಸೇನೆ ಬೆಂಬಲಿತ ಅತಿಕ್ರಮಣ ಯತ್ನವನ್ನು ಭಾರತೀಯ ಸೇನೆಯು ವಿಫಲಗೊಳಿಸಿತು.
ಮೂವರು ಭಯೋತ್ಪಾದಕರ ಹೆಣಗಳು ಉರುಳುತ್ತಿದ್ದಂತೆಯೇ ಉಳಿದ ನುಸುಳುಕೋರರು ರಕ್ಷಣೆಗಾಗಿ ಹಿಂದಕ್ಕೆ ಓಡಿದರು ಎಂದು ಸುದ್ದಿ ಮೂಲಗಳು ಹೇಳಿದವು.
ಭಾರತೀಯ ಸೇನೆಯ ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ಫಿರಂಗಿದಾಳಿ ನಡೆಸಿ ನಾಲ್ಕು ಭಯೋತ್ಪಾದಕ ಶಿಬಿರಗಳನ್ನು ಧ್ವಂಸಗೊಳಿಸಿದ ಬಳಿಕ ಕಾಶ್ಮೀರದಲ್ಲಿ ಸಂಭವಿಸಿದ ಮೊದಲ ಘರ್ಷಣೆ ಇದಾಗಿದೆ.
ಪಾಕಿಸ್ತಾನಿ ಸೇನೆಯು ತಂಗ್ಧರ್ ವಿಭಾಗದಲ್ಲಿ ನುಸುಳುಕೋರರಿಗೆ ನೆರವಾಗುವ ಸಲುವಾಗಿ ಕದನವಿರಾಮ ಉಲ್ಲಂಘಿಸಿದ್ದಕ್ಕೆ ಪ್ರತಿಯಾಗಿ ಭಾರತೀಯ ಸೇನೆಯು ಈ ದಾಳಿಯನ್ನು ನಡೆಸಿತ್ತು.
ಜಮ್ಮು- ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿ ಕೂಡಾ ಪಾಕಿಸ್ತಾನವು ಈದಿನ ಕದನವಿರಾಮವನ್ನು ಉಲ್ಲಂಘಿಸಿತ್ತು.
ಪಾಕಿಸ್ತಾನವು ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಬಾಲಾಕೋಟ್ನಲ್ಲಿ ಈದಿನ ಬೆಳಗ್ಗೆ ೧೧.೩೦ರ ವೇಳೆಗೆ ಕದನ ವಿರಾಮವನ್ನು ಉಲ್ಲಂಘಿಸಿತ್ತು.
ಕರ್ತಾರಪುರ ಕಾರಿಡಾರ್ ಯೋಜನೆ: ಪಾಕ್ ಜೊತೆ ಒಪ್ಪಂದಕ್ಕೆ ಭಾರತ ಸಿದ್ಧ; ಸೇವಾ ಶುಲ್ಕ ವಾಪಸಿಗೆ ಮನವಿ
ನವದೆಹಲಿ: ಕರ್ತಾರಪುರ ಸಾಹಿಬ್ ಕಾರಿಡಾರ್ ಯೋಜನೆ ಸಂಬಂಧ ಪಾಕಿಸ್ತಾನದ ಜೊತೆ ಒಪ್ಪಂದಕ್ಕೆ ಸಹಿ ಹಾಕಲಾಗುವುದು ಎಂದು ಭಾರತ ಸರ್ಕಾರ 2019 ಅಕ್ಟೋಬರ್ 21ರ ಸೋಮವಾರ ಹೇಳಿದೆ.
ಈ ಸಂಬಂಧ ಪತ್ರಿಕಾ ಪ್ರಕರಣೆ ನೀಡಿರುವ ಭಾರತೀಯ ವಿದೇಶಾಂಗ ಸಚಿವಾಲಯ,ಗುರುದ್ವಾರದ ಕರ್ತಾರಪುರ ಸಾಹಿಬ್ಗೆ ವೀಸಾ ಮುಕ್ತ ಪ್ರವೇಶವನ್ನು ನೀಡಬೇಕು ಎಂಬ ಯಾತ್ರಾರ್ಥಿಗಳ ಬಹುದಿನಗಳ ಬೇಡಿಕೆಯ ಹಿನ್ನೆಲೆಯಲ್ಲಿ ನವೆಂಬರ್ 12ರ ಮೊದಲು ಕಾರಿಡಾರನ್ನು ಕಾರ್ಯಗತಗೊಳಿಸಲು ಅಕ್ಟೋಬರ್ 23ರಂದು ಒಪ್ಪಂದಕ್ಕೆ ಸಹಿ ಮಾಡಲು ಭಾರತ ಸಿದ್ಧವಿದೆ ಎಂದು ತಿಳಿಸಿತು.
ಒಪ್ಪಂದಕ್ಕೆ ಸಹಿ ಹಾಕಲು ಒಪ್ಪಿಕೊಳ್ಳಲಾಗಿದೆ. ಯಾತ್ರಾರ್ಥಿಗಳಿಗೆ ವಿಧಿಸುವ ಸೇವಾ ಶುಲ್ಕ 20 ಡಾಲರನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಪಾಕಿಸ್ತಾನ ಸರ್ಕಾರ ಮತ್ತೊಮ್ಮೆ ಮರುಪರಿಶೀಲನೆ ನಡೆಸುವಂತೆ ಮನವಿ ಮಾಡಲಾಗಿದೆ. ತಿದ್ದುಪಡಿ ಒಪ್ಪಂದಕ್ಕೆ ಯಾವುದೇ ಸಮಯದಲ್ಲಿ ಸಹಿ ಮಾಡಲು ಭಾರತ ಸಿದ್ಧವಾಗಿದೆ ಎಂದು ವಿದೇಶಾಂಗ ಇಲಾಖೆ ತಿಳಿಸಿತು.
ಹೇಳಿಕೆಯಲ್ಲಿ ಪಾಕಿಸ್ತಾನದ ಸೇವಾ ಶುಲ್ಕ ಪ್ರಸ್ತಾವನೆಗೆ ವಿದೇಶಾಂಗ ಇಲಾಖೆ ಅಸಮಾಧಾನ ವ್ಯಕ್ತಪಡಿಸಿದೆ. ಸೇವಾ ಶುಲ್ಕವನ್ನು ಹಿಂಪಡೆಯುವಂತೆ ಭಾರತ ಸರ್ಕಾರ ಮನವಿ ಮಾಡಿತ್ತು.
ಪಾಕ್ ಆಕ್ರಮಿತ ಕಾಶ್ಮೀರದ ಉಗ್ರ ನೆಲೆಗಳ ಮೇಲೆ ಭಾರತೀಯ ಸೇನೆ ಫಿರಂಗಿದಾಳಿ
೪ ಭಯೋತ್ಪಾದಕ ಶಿಬಿರಗಳು ಧ್ವಂಸ, ೬-೧೦ ಪಾಕ್ ಸೈನಿಕರು, ಅಷ್ಟೇ ಸಂಖ್ಯೆ ಉಗ್ರರ ಸಾವು
ನವದೆಹಲಿ: ಜನ ಸಾಮಾನ್ಯರನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿದ ಪಾಕಿಸ್ತಾನದ ಕ್ರಮಕ್ಕೆ ಪ್ರತಿಯಾಗಿ ಪಾಕ್ ಆಕ್ರಮಿತ ಕಾಶ್ಮೀರದ ತಂಗ್ಧರ್ ವಿಭಾಗದಲ್ಲಿ ಉಗ್ರ ನೆಲೆಗಳ ಮೇಲೆ 2019 ಅಕ್ಟೋಬರ್ 20ರ ಭಾನುವಾರ ಫಿರಂಗಿದಾಳಿ ನಡೆಸಿದ ಭಾರತೀಯ ಸೇನೆ ಪಾಕ್ ಆಕ್ರಮಿತ ಪ್ರದೇಶದ ನೀಲಂ ಕಣಿವೆಯಲ್ಲಿ ಕನಿಷ್ಠ ೪ ಭಯೋತ್ಪಾದಕ ಶಿಬಿರಗಳನ್ನು ಧ್ವಂಸಗೊಳಿಸಿದೆ. ದಾಳಿಯಲ್ಲಿ ಹಲವು ಭಯೋತ್ಪಾದಕರ ಜೊತೆಗೆ ಕನಿಷ್ಠ ೬-೧೦ ಪಾಕಿಸ್ತಾನಿ ಸೈನಿಕರು ಮತ್ತು ಅಷ್ಟೇ ಸಂಖ್ಯೆಯ ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಪ್ರಕಟಿಸಿದರು.
ಸಾವು ನೋವುಗಳ ಬಗ್ಗೆ ಇನ್ನೂ ವರದಿಗಳ ಬರುತ್ತಿದ್ದು, ಈ ಸಂಖ್ಯೆ ಇನ್ನೂ ಹೆಚ್ಚಾಗಿರುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದರು.
ಭಾರತದ ಒಳಕ್ಕೆ ಭಯೋತ್ಪಾದಕರಿಗೆ ನುಸುಳಲು ಪಾಕಿಸ್ತಾನಿ ಸೇನೆ ನೀಡುತ್ತಿದ್ದ ಬೆಂಬಲವನ್ನು ನಿಷ್ಕ್ರಿಯಗೊಳಿಲು ಭಾರತೀಯ ಸೇನೆ ಈ ಪ್ರತೀಕಾರದ ಕ್ರಮ ಕೈಗೊಂಡಿತು ಎಂದು ರಾವತ್ ತಿಳಿಸಿದರು.
ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ನಡೆಸಲು ಭಾರತೀಯ ಸೇನೆಯು ಫಿರಂಗಿಗಳನ್ನು ಬಳಸಿದ್ದು, ಲಷ್ಕರ್-ಇ-ತೊಯ್ಬಾ (ಎಲ್ ಇಟಿ), ಹಿಜ್ಬುಲ್ ಮುಜಾಹಿದೀನ್ ಮತ್ತು ಜೈಶ್-ಇ-ಮೊಹಮ್ಮದ್ (ಜೆಇಎಂ) ಇತ್ಯಾದಿ ಭಯೋತ್ಪಾದಕ ಸಂಘಟನೆಗಳಿಗೆ ಸೇರಿದ ಭಯೋತ್ಪಾದಕರಿಗೆ ಆಶ್ರಯ ಕಲ್ಪಿಸಿದ್ದ ನೀಲಂ ಕಣಿವೆಯ ೪ ಭಯೋತ್ಪಾದಕ ಶಿಬಿರಗಳನ್ನು ನಾಶ ಪಡಿಸಿತು.
ಭಾರತೀಯ ಸೇನೆಯ ಪ್ರತೀಕಾರದ ದಾಳಿಯಲ್ಲಿ ಪಾಕಿಸ್ತಾನದ ಕನಿಷ್ಠ ೬-೧೦ಮಂದಿ ಸೈನಿಕರು ಮತ್ತು ಅಷ್ಟೇ ಸಂಖ್ಯೆಯ ಭಯೋತ್ಪಾದಕರು ಹತರಾಗಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ರಾವತ್ ಹೇಳಿದರು.
ಭಾರೀ ಸಂಖ್ಯೆಯ ಭಯೋತ್ಪಾದಕರು ತೀವ್ರ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂಬ ವಿಶ್ವಾಸಾರ್ಹ ಮಾಹಿತಿಯನ್ನು ಅನುಸರಿಸಿ ಪಾಕ್ ಆಕ್ರಮಿತ ಪ್ರದೇಶದ ನೀಲಂ ಕಣಿವೆಯ ಜುರಾ, ಅತ್ಮುಗಂ, ಕುಂಡಲಸಾಹಿ ಮತ್ತು ಇತರ ಕಡೆಗಳಲ್ಲಿನ ಉಗ್ರ ಶಿಬಿರಗಳನ್ನು ಗುರಿಯಾಗಿಟ್ಟು ಸೇನೆ ಫಿರಂಗಿ ದಾಳಿ ನಡೆಸಿತು ಎಂದು ಅವರು ನುಡಿದರು.
ಇದಕ್ಕೆ ಮುನ್ನ ಪಾಕಿಸ್ತಾನವು ಭಾನುವಾರ ಕದನವಿರಾಮ ಉಲ್ಲಂಘಿಸಿತ್ತು. ಇದರಲ್ಲಿ ಒಬ್ಬ ನಾಗರಿಕ ಸಾವನ್ನಪ್ಪಿದರೆ, ಇಬ್ಬರು ಯೋಧರು ಹುತಾತ್ಮರಾಗಿದ್ದರು ಮತ್ತು ಇತರ ಮೂವರು ನಾಗರಿಕರು ಗಾಯಗೊಂಡಿದ್ದರು. ಇದನ್ನು ಅನುಸರಿಸಿ ಭಾರತದ ಸೇನೆ ಪ್ರತೀಕಾರದ ಕಾರ್ಯಾಚರಣೆಗೆ ಇಳಿಯಿತು.
ಕೆಲವು ಪ್ರದೇಶಗಳಲ್ಲಿ ಗುಂಡಿನದಾಳಿ ಆರಂಭಿಸಿದ ಭಾರತ ಸ್ವಲ್ಪವೇ ಹೊತ್ತಿನಲ್ಲಿ ಪಾಕಿಸ್ತಾನವು ಮೊದಲು ಕದನವಿರಾಮ ಉಲ್ಲಂಘನೆ ಮಾಡಿದ ತಂಗ್ಧರ್ ವಿಭಾಗದಲ್ಲಿ ತನ್ನ ದಾಳಿಯನ್ನು ಗಡಿಯಾಚೆಗೂ ವಿಸ್ತರಿಸಿತು.
ಶನಿವಾರ ಸಂಜೆ ನಡೆದ ಕದನವಿರಾಮ ಉಲ್ಲಂಘನೆಯ ಬಳಿಕ ಭಾರತೀಯ ಸೇನೆಯು ಪಾಕಿಸ್ತಾನಕ್ಕೆ ಪ್ರಬಲ ಪ್ರತಿಕ್ರಿಯೆ ನೀಡಿತು.
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸಿದ್ದ ಸಂವಿಧಾನದ ೩೭೦ನೇ ವಿಧಿಯನ್ನು ರದ್ದು ಪಡಿಸಲು ಭಾರತವು ಕೈಗೊಂಡ ತೀರ್ಮಾನಕ್ಕೆ ವಿರುದ್ಧವಾಗಿ ಪ್ರತಿಕ್ರಿಯಿಸುತ್ತಿರುವ ಪಾಕಿಸ್ತಾನ ಶಿಬಿರಗಳಲ್ಲಿ ಜಮಾಯಿಸಿದ ಭಯೋತ್ಪಾದಕರನ್ನು ತನ್ನ ಸೇನೆಯ ಬೆಂಬಲದೊಂದಿಗೆ ಭಾರತಕ್ಕೆ ನುಸುಳಿಸಲು ಯತ್ನ ನಡೆಸಿತ್ತು ಎಂದು ಹೇಳಲಾಯಿತು.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರ ಜೊತೆಗೆ ತಂಗ್ಧರ್ ವಿಭಾಗದಲ್ಲಿನ ಪರಿಸ್ಥಿತಿ ಬಗ್ಗೆ ಮಾತನಾಡಿದರು.
ರಕ್ಷಣಾ ಸಚಿವರು ಪರಿಸ್ಥಿತಿ ಬಗ್ಗೆ ವೈಯಕ್ತಿಕ ನಿಗಾ ಇರಿಸಿದ್ದು, ತಮಗೆ ನಿರಂತರ ಮಾಹಿತಿ ಒದಗಿಸುವಂತೆ ಸೇನಾ ಮುಖ್ಯಸ್ಥರನ್ನು ಕೋರಿದ್ದಾರೆ ಎಂದು ಮೂಲಗಳು ಹೇಳಿದವು.
ಈ ವರ್ಷ ಸೆಪ್ಟೆಂಬರವರೆಗೆ ಪಾಕಿಸ್ತಾನವು ಗಡಿ ನಿಯಂತ್ರಣ ರೇಖೆಯಲ್ಲಿ ಕನಿಷ್ಠ ೨೦೦೦ ಸಲ ಕದನ ವಿರಾಮ ಉಲ್ಲಂಘನೆ ಮಾಡಿ ಹಲವಾರು ನಾಗರಿಕರು ಮತ್ತು ಯೋಧರನ್ನು ಬಲಿ ಪಡೆದದ್ದಲ್ಲದೆ, ಹಲವರನ್ನು ಗಾಯಗೊಳಿಸಿತ್ತು.
೨೦೦೩ ಕದನವಿರಾಮ ತಿಳುವಳಿಕೆಗೆ ಬದ್ಧವಾಗುವಂತೆ ಮತ್ತು ಗಡಿ ನಿಯಂತ್ರಣ ರೇಖೆ ಮತ್ತು ಅಂತಾರಾಷ್ಟ್ರೀಯ ಗಡಿಯಲ್ಲಿ ಪ್ರಶಾಂತತೆಯನ್ನು ಕಾಯ್ದುಕೊಳ್ಳಲು ಸೇನೆಗೆ ಸೂಚಿಸುವಂತೆ ಭಾರತವು ಪಾಕಿಸ್ತಾನಕ್ಕೆ ಪದೇ ಪದೇ ಆಗ್ರಹಿಸಿತ್ತು.
ಪಾಕ್ ಕುತುಂತ್ರ ಬಯಲು: ಈ ಮಧ್ಯೆ, ಪಾಕ್ ಸೇನೆಯ ಮತ್ತೊಂದು ಮಹಾ ಕುತಂತ್ರ ಬಯಲಾಯಿತು. ಭಾರತ ಮತ್ತು ಪಾಕ್ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಅಪ್ರಚೋದಿತವಾಗಿ ಕದನ ವಿರಾಮ ಉಲ್ಲಂಘನೆ ಮಾಡುತ್ತಿರುವ ಪಾಕಿಸ್ತಾನ ಸೇನೆ, ನಾಗರಿಕರನ್ನೇ ತನ್ನ ಗುರಿಯಾಗಿಸಿ ದಾಳಿ ನಡೆಸುವ ಮೂಲಕ ಭಾರತದಲ್ಲಿ ಅತಿ ಹೆಚ್ಚು ಹಾನಿ ಮಾಡಲು ಹಂಚಿಕೆ ಹೂಡಿದೆ ಎಂದು ವರದಿಗಳು ತಿಳಿಸಿದವು.
ಈದಿನ ಬೆಳಗ್ಗೆ ಕುಪ್ವಾರದಲ್ಲಿ ಕದನ ವಿರಾಮ ಉಲ್ಲಂಘನೆ ಮಾಡಿದ ಪಾಕಿಸ್ತಾನ, ಭಾರತೀಯ ನಾಗರಿಕನೊಬ್ಬನನ್ನು ಹತ್ಯೆಗೈದಿತ್ತು. ಮೂವರು ನಾಗರಿಕರು ಗಾಯಗೊಂಡಿದ್ದರು. ಈ ದಾಳಿಯಲ್ಲಿ ಗಡಿಯಾಚೆಯಿಂದ ಪಾಕಿಸ್ತಾನ ಸೇನೆ ಭಾರೀ ಪ್ರಮಾಣದ ಶೆಲ್ ದಾಳಿ ನಡೆಸಿತು. ಅದೂ ಕೂಡಾ ಜನ ವಸತಿ ಪ್ರದೇಶಗಳ ಮೇಲೇ ಪಾಕಿಸ್ತಾನದ ಶೆಲ್ಗಳು ತೂರಿಬಂದವು. ಭಾರತ ಮತ್ತು ಪಾಕ್ ಗಡಿಯಲ್ಲಿರುವ ಮನ್ಯಾರಿ ಎಂಬ ಗ್ರಾಮದಲ್ಲಿ ಈ ದಾಳಿ ನಡೆದಿದ್ದು, ಮನ್ಯಾರಿ ಗ್ರಾಮ ಕತುವಾ ಜಿಲ್ಲೆಯ ವ್ಯಾಪ್ತಿಯಲ್ಲಿದೆ. ಹಿಂದಿನ ದಿನ ತಡರಾತ್ರಿ ಹಾಗೂ ಈದಿನ ಮುಂಜಾನೆವರೆಗೂ ನಡೆದ ದಾಳಿಯಲ್ಲಿ ಮನೆಯೊಂದು ಸಂಪೂರ್ಣವಾಗಿ ಛಿದ್ರಗೊಂಡಿದ್ದು, ಅಕ್ಕಿ ಗೋದಾಮು ಕೂಡಾ ಹಾಳಾಯಿತು. ೨ ವಾಹನಗಳು, ದನದ ಕೊಟ್ಟಿಗೆ ನಾಶವಾಗಿದ್ದು ೧೯ ದನಗಳು ಸಾವನ್ನಪ್ಪಿದ್ದವು.
ಪಾಕಿಸಾನಿ ಸೇನೆ ನಾಗರಿಕರನ್ನೇ ಗುರಿಯಾಗಿಸಿ ದಾಳಿ ನಡೆಸಿದ್ದರಿಂದ ಇಲ್ಲಿನ ಜನರ ರಕ್ಷಣೆ ಭಾರತೀಯ ಸೇನೆಗೆ ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಪಾಕಿಸ್ತಾನಿ ಸೇನೆಯ ನಿರಂತರ ದಾಳಿಯಿಂದಾಗಿ ಸಾಕಷ್ಟು ಹಾನಿ ಸಂಭವಿಸಿದ ಹಿನ್ನೆಲೆಯಲ್ಲಿ, ಸೇನೆ ತಕ್ಕ ಪ್ರತ್ಯುತ್ತರ ನೀಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದರು.
ಪಾಕಿಸ್ತಾನ ಸೇನೆ ಜನ ವಸತಿ ಪ್ರದೇಶಗಳನ್ನೇ ಗುರಿಯಾಗಿಸಿ ದಾಳಿ ನಡೆಸುವ ಹಿನ್ನೆಲೆಯಲ್ಲಿ ಸ್ಥಳೀಯರು ಬಂಕರುಗಳಲ್ಲಿ ರಕ್ಷಣೆ ಪಡೆಯಬೇಕಾದ ಅನಿವಾರ್ಯತೆ ಎದುರಾಗಿದೆ. ಸಂಜೆ ೭ ಗಂಟೆಗೆ ಆರಂಭವಾಗುವ ಗುಂಡಿನ ದಾಳಿ ಮರುದಿನ ಬೆಳಗಿನ ಜಾವದವರೆಗೂ ನಿರಂತರವಾಗಿ ನಡೆಯುತ್ತಿರುತ್ತದೆ. ನಮಗೆ ನಮ್ಮ ಮಕ್ಕಳ ಜೀವ ರಕ್ಷಣೆಯೇ ದೊಡ್ಡ ಸವಾಲಾಗಿದೆ ಎನ್ನುತ್ತಾರೆ ಸ್ಥಳೀಯರು. ಪ್ರಧಾನಿ ಮೋದಿ ಅವರು ವಿಚಾರದಲ್ಲಿ ಕೂಡಲೇ ಏನಾದರೂ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದರು.
ಸ್ಪೈಸ್ ಜೆಟ್ ವಿಮಾನವನ್ನು ಅಡ್ಡಗಟ್ಟಿದ್ದ ಪಾಕ್ ವಾಯುಪಡೆ
ಸೆಪ್ಟೆಂಬರಿನಲ್ಲಿ ಘಟಿಸಿದ ಘಟನೆ ತಡವಾಗಿ ಬೆಳಕಿಗೆ
ನವದೆಹಲಿ: ದೆಹಲಿಯಿಂದ ಆಫ್ಘಾನಿಸ್ಥಾನದ ಕಾಬೂಲಿಗೆ ೧೨೦ ಪ್ರಯಾಣಿಕರನ್ನು ಹೊತ್ತು ಹಾರುತ್ತಿದ್ದ ಸ್ಪೈಸ್ ಜೆಟ್ ವಿಮಾನವನ್ನು ಪಾಕ್ ವಾಯುಪಡೆ ಸೆಪ್ಟೆಂಬರ್ ೨೩ರಂದು ಅಡ್ಡಗಟ್ಟಿದ್ದ ಪ್ರಕರಣದ ತಡವಾಗಿ 2019 ಅಕ್ಟೋಬರ್ 17ರ ಗುರುವಾರ ಬೆಳಕಿಗೆ ಬಂದಿತು.
ಸ್ಪೈಸ್ ಜೆಟ್ ವಿಮಾನವನ್ನು ಅಡ್ಡಗಟ್ಟಿದ ಪಾಕಿಸ್ತಾನ ವಾಯುಪಡೆಯ ಯುದ್ಧ ವಿಮಾನಗಳು ಅದನ್ನು ಪಾಕಿಸ್ತಾನದ ಗಡಿ ದಾಟುವವರೆಗೆ ಅದನ್ನು ಹಿಂಬಾಲಿಸಿದ್ದವು ಎಂದು ಮಾಧ್ಯಮವೊಂದು ವರದಿ ಮಾಡಿತು.
ಸ್ಪೈಸ್ ಜೆಟ್ ಸಂಸ್ಥೆಯ ’ಬೋಯಿಂಗ್ ೭೩೭’ ವಿಮಾನದ ’ಕರೆ ಸಂಕೇತ’ (ಕಾಲ್ ಸೈನ್) ವಿಚಾರದಲ್ಲಿ ಆದ ಗೊಂದಲದಿಂದಾಗಿ ಪಾಕ್ ವಾಯುಪಡೆ ತುರ್ತಾಗಿ ತನ್ನ ಯುದ್ಧ ವಿಮಾನಗಳನ್ನು ನಿಯೋಜಿಸಿತು ಎಂದು ನಾಗರಿಕ ವಿಮಾನಯಾನ ಇಲಾಖೆ ನಿರ್ದೇಶಕರ ಕಚೇರಿ (ಡಿಜಿಸಿಎ) ಅಧಿಕಾರಿಗಳು ಹೇಳಿದರು.
ಸ್ಪೈಸ್ ಜೆಟ್ ವಿಮಾನವನ್ನು ಅಡ್ಡಗಟ್ಟಿದ ಪಾಕ್ ವಾಯುಪಡೆಯ ಅತ್ಯಾಧುನಿಕ ಎಫ್-೧೬ ಯುದ್ಧವಿಮಾನಗಳು ಹಾರಾಟದ ಎತ್ತರ ತಗ್ಗಿಸುವಂತೆ ಸೂಚಿಸಿದವು. ನಂತರ ಸ್ಪೈಸ್ ಜೆಟ್ ವಿಮಾನದ ಪೈಲಟ್, ಇದು ವಾಣಿಜ್ಯ ವಿಮಾನ ಎಂದು ಪಾಕ್ ವಾಯುಪಡೆಯ ಪೈಲಟ್ಗಳಿಗೆ ಸ್ಪಷ್ಟಪಡಿಸಿದರು ಎಂದು ಸುದ್ದಿ ಸಂಸ್ಥೆಯ ವರದಿ ತಿಳಿಸಿತು.
ಸ್ಪೈಸ್ ಜೆಟ್ ಪೈಲಟ್ ಸ್ಪಷ್ಟನೆಯ ಬಳಿಕ ವಿಮಾನಕ್ಕೆ ಹಾರಾಟ ಮುಂದುವರೆಸಲು ಪಾಕಿಸ್ತಾನ ಅನುಮತಿ ನೀಡಿತು. ಅಷ್ಟೇ ಅಲ್ಲ ವಿಮಾನವು ಪಾಕಿಸ್ತಾನದ ಗಡಿ ದಾಟುವವರೆಗೂ ಅದನ್ನು ಸುತ್ತುವರೆದಿತ್ತು ಎಂದು ಸುದ್ದಿ ಮೂಲಗಳು ಹೇಳಿವೆ. ಏನಿದ್ದರೂ ಈ ಘಟನೆಯ ಬಗ್ಗೆ ಸ್ಪೈಸ್ ಜೆಟ್ ಈವರೆಗೆ ಏನ್ನೂ ಹೇಳಿಲ್ಲ.
‘ಪ್ರತಿ ವಿಮಾನಯಾನ ಸಂಸ್ಥೆಗೂ ಒಂದು ಸಂಕೇತ (ಕೋಡ್) ಇರುತ್ತದೆ. ಸ್ಪೈಸ್ ಜೆಟ್ಗೆ ’ಎಸ್ಜಿ’ ಎಂಬ ಸಂಕೇತ ಇದೆ. ಇದನ್ನು ಪಾಕಿಸ್ತಾನದ ವಿಮಾನಯಾನ ನಿಯಂತ್ರಣ ಅಧಿಕಾರಿಗಳು ’ಐಎ’ ಎಂದು ತಪ್ಪಾಗಿ ಅರ್ಥೈಸಿಕೊಂಡಿರುವ ಸಾಧ್ಯತೆ ಇದೆ. ಹೀಗಾಗಿಯೇ ಐಎ ಎನ್ನುವುದನ್ನು ಇಂಡಿಯನ್ ಏರ್ ಫೋರ್ಸ್ ಎಂದು ತಪ್ಪಾಗಿ ಭಾವಿಸಿ ಪಾಕಿಸ್ತಾನದ ವಾಯುಪಡೆಗೆ ಸೂಚನೆ ರವಾನೆಯಾಗಿರಬಹುದು ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಗಳ ಹೇಳಿದರು ಎಂದು ಸುದ್ದಿ ಸಂಸ್ಥೆ ವರದಿ ಮಾಡಿತು.
ವಿಷಯವು ಅತ್ಯಂತ ಸೂಕ್ಷ್ಮ ಸ್ವರೂಪದ್ದಾದ ಕಾರಣ ಹೆಚ್ಚಿನ ವಿವರಗಳನ್ನು ನೀಡಲು ಡಿಜಿಸಿಎ ಅಧಿಕಾರಿಗಳು ನಿರಾಕರಿಸಿದರು.
ಫೆಬ್ರುವರಿ ೨೬ರಂದು ಭಾರತದ ವಾಯುಪಡೆ ವಿಮಾನಗಳು ಪಾಕಿಸ್ತಾನದ ಬಾಲಾಕೋಟ್ನಲ್ಲಿನ ಜೈಶ್-ಇ-ಮೊಹಮ್ಮದ್ (ಜೆಇಎಂ) ಭಯೋತ್ಪಾದಕ ತರಬೇತಿ ಶಿಬಿರದ ಮೇಲೆ ವಾಯುದಾಳಿ ನಡೆಸಿದ ಬಳಿಕ ಪಾಕಿಸ್ತಾನವು ಭಾರತಕ್ಕೆ ತನ್ನ ವಾಯುಮಾರ್ಗ ಬಳಸದಂತೆ ನಿಷೇಧ ಹೇರಿತ್ತು. ಆದರೆ ಜುಲೈ ತಿಂಗಳಲ್ಲಿ ತನ್ನ ವಾಯುಮಾರ್ಗವನ್ನು ಭಾಗಶಃ ತೆರೆದಿತ್ತು
ವಾಯುಮಾರ್ಗ ನಿರ್ಬಂಧಗಳ ಪರಿಣಾಮವಾಗಿ ತಮ್ಮ ರಾಷ್ಟವು ೫೦ ಮಿಲಿಯನ್ (೫ ಕೋಟಿ) ಡಾಲರ್ನಷ್ಟು ನಷ್ಟ ಅನುಭವಿಸಿತು ಎಂದು ಕೆಲವು ದಿನಗಳ ಬಳಿಕ ಪಾಕಿಸ್ತಾನದ ವಿಮಾನಯಾನ ಸಚಿವರು ಹೇಳಿದ್ದರು.
ಕಳೆದ ತಿಂಗಳು ಪಾಕಿಸ್ತಾನವು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಮೆರಿಕ ಪ್ರವಾಸಕ್ಕೆ ತನ್ನ ವಾಯುಮಾರ್ಗ ಬಳಸಲು ನಿರಾಕರಿಸಿತು. ಇದೇ ರೀತಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಐಸ್ ಲ್ಯಾಂಡ್ ಪಯಣ ಕಾಲದಲ್ಲೂ ತನ್ನ ವಾಯುಮಾರ್ಗ ಬಳಸಲು ಅನುಮತಿ ನಿರಾಕರಿಸಿತ್ತು.
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸಿದ್ದ ಸಂವಿಧಾನದ ೩೭೦ನೇ ವಿಧಿ ರದ್ದು ಪಡಿಸಿದ ಭಾರತದ ಇತ್ತೀಚಿನ ಕ್ರಮವನ್ನು ವಿರೋಧಿಸಿ ಭಾರತದ ಪ್ರಧಾನಿ ಮತ್ತು ರಾಷ್ಟ್ರಪತಿಯವರ ವಿಮಾನ ಪಾಕಿಸ್ತಾನದ ವಾಯುಮಾರ್ಗ ಮೂಲಕ ಸಾಗದಂತೆ ನಿರ್ಬಂಧಿಸಲಾಯಿತು ಎಂದು ಪಾಕ್ ವಿದೇಶಾಂಗ ಸಚಿವ ಮೆಹಮೂದ್ ಖುರೇಶಿ ಹೇಳಿದ್ದರು.
ಪಾಕಿಸ್ತಾನದ ನಿರ್ಧಾರಕ್ಕೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ವಿಷಾದ ವ್ಯಕ್ತ ಪಡಿಸಿತ್ತು. ವಿವಿಐಪಿಗಳ ವಿಶೇಷ ವಿಮಾನ ಹಾರಾಟಕ್ಕೆ ಯಾವುದೇ ರಾಷ್ಟ್ರ ಸಾಮಾನ್ಯವಾಗಿ ತನ್ನ ಅನುಮತಿಯನ್ನು ನೀಡುತ್ತದೆ.
‘ಅಂತಾರಾಷ್ಟ್ರೀಯ ಪದ್ಧತಿಯಿಂದ ವಿಮುಖವಾಗುವ ತನ್ನ ನಿರ್ಣಯವನ್ನು ಪಾಕಿಸ್ತಾನ ಪರಿಶೀಲಿಸಿಕೊಳ್ಳಬೇಕು ಮತ್ತು ಏಕಪಕ್ಷೀಯ ನಿರ್ಣಯಗಳನ್ನು ಕೈಗೊಳ್ಳಲು ಕಾರಣಗಳನ್ನು ತಪ್ಪಾಗಿ ಊಹಿಸಿಕೊಳ್ಳುವ ತನ್ನ ಹಳೆಯ ಚಾಳಿಯನ್ನು ಮರುಪರಿಶೀಲನೆ ಮಾಡಿಕೊಳ್ಳಬೇಕು’ ಎಂದು ವಕ್ತಾರ ರವೀಶ್ ಕುಮಾರ್ ಹೇಳಿದ್ದರು.
೨೦೨೦ ಫೆಬ್ರುವರಿವರೆಗೂ ಬೂದು ಪಟ್ಟಿಯಲ್ಲೇ ಪಾಕಿಸ್ತಾನ
ಭಯೋತ್ಪಾದಕರಿಗೆ ಹಣ ಪೂರೈಕೆ ಸ್ಥಗಿತಕ್ಕೆ ಎಫ್ಎಟಿಎಫ್ ತಾಕೀತು
ನವದೆಹಲಿ: ಭಯೋತ್ಪಾದಕರ ಹಣಕಾಸು ವ್ಯವಸ್ಥೆಯ ಮೇಲಿನ ಕಣ್ಗಾವಲು ಸಂಸ್ಥೆಯು (ಎಫ್ಎಟಿಎಫ್) ೨೦೨೦ರ ಫೆಬ್ರವರಿ ವರೆಗೂ ಪಾಕಿಸ್ತಾನವನ್ನು ಬೂದು ಪಟ್ಟಿಯಲ್ಲಿಯೇ (’ಗ್ರೇ ಲಿಸ್ಟ್’) ಮುಂದುವರೆಸಲು ಬುಧವಾರ ತೀರ್ಮಾನ ಕೈಗೊಂಡಿದೆ ಎಂದು ಮಾಧ್ಯಮ ವರದಿಗಳು 2019 ಅಕ್ಟೋಬರ್ 16ರ ಬುಧವಾರ ತಿಳಿಸಿದವು.
ಭಯೋತ್ಪಾದಕ ಸಂಘಟನೆಗಳು ಹಾಗೂ ಭಯೋತ್ಪಾದಕರಿಗೆ ಹಣಕಾಸು ಒದಗಿಸುವ ಹಾಗೂ ಅಕ್ರಮ ಹಣ ವರ್ಗಾವಣೆ ಜಾಲವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವಂತೆ ಕಣ್ಗಾವಲು ಸಂಸ್ಥೆಯು ಪಾಕಿಸ್ತಾನಕ್ಕೆ ತಾಕೀತು ಮಾಡಿದೆ ಎಂದು ವರದಿ ಹೇಳಿತು.
ಫ್ರಾನ್ಸ್ ರಾಜಧಾನಿ ಪ್ಯಾರಿಸ್ಸಿನಲ್ಲಿ 2019 ಅಕ್ಟೋಬರ್ 15ರ ಮಂಗಳವಾರ ನಡೆದ ಸಭೆಯಲ್ಲಿ ಭಯೋತ್ಪಾದಕರಿಗೆ ಹಣಕಾಸು ಒದಗಿಸುವ ಹಾಗೂ ಅಕ್ರಮ ಹಣ ವರ್ಗಾವಣೆ ಜಾಲವನ್ನು ಹತ್ತಿಕ್ಕಲು ಪಾಕಿಸ್ತಾನ ಕೈಗೊಂಡ ಕ್ರಮಗಳ ಕುರಿತು ವಿಶ್ಲೇಷಣೆ ನಡೆಸಿದ ಬಳಿಕ ಎಫ್ಎಟಿಎಫ್ ಈ ನಿರ್ಧಾರ ಕೈಗೊಂಡಿತು. ೨೦೨೦ರ ಫೆಬ್ರವರಿ ನಂತರ ಪಾಕಿಸ್ತಾನವನ್ನು ಬೂದು ಪಟ್ಟಿಯಲ್ಲಿ ಮುಂದುವರಿಸಬೇಕೋ, ಕಡುಬೂದು ಪಟ್ಟಿಗೆ ಸೇರಿಸಬೇಕೊ, ಇಲ್ಲವೇ ಕಪ್ಪುಪಟ್ಟಿಗೆ ಸೇರಿಸಬೇಕೋ ಎಂಬ ಬಗ್ಗೆ ಎಫ್ಎಟಿಎಫ್ ತೀರ್ಮಾನ ಕೈಗೊಳ್ಳಲಿದೆ.
ಭಯೋತ್ಪಾದಕರಿಗೆ ಹಣಕಾಸು ಒದಗಿಸುವ ಹಾಗೂ ಅಕ್ರಮ ಹಣ ವರ್ಗಾವಣೆ ಜಾಲವನ್ನು ಪೂರ್ಣವಾಗಿ ನಿರ್ಮೂಲನೆ ಮಾಡಲು ಎಫ್ಎಟಿಎಫ್ ಪಾಕಿಸ್ತಾನಕ್ಕೆ ಕಾಲಮಿತಿಯ ಗಡುವು ನೀಡಿ, ಈ ಗಡುವಿನೊಳಗೆ ಭಯೋತ್ಪಾದಕರಿಗೆ ಹಣಕಾಸು ಒದಗಿಸುವ ಹಾಗೂ ಅಕ್ರಮ ಹಣ ವರ್ಗಾವಣೆ ಜಾಲ ಹತ್ತಿಕ್ಕದಿದ್ದರೆ, ಕಪ್ಪು ಪಟ್ಟಿಗೆ ಸೇರಿಸುವುದಾಗಿ ಹೇಳಿತ್ತು.
ಆದರೆ ಈ ಬಗ್ಗೆ ಪಾಕಿಸ್ತಾನ ಯಾವುದೇ ತೋರಿಸದ ಕಾರಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅದು ಕಪ್ಪು ಪಟ್ಟಿ ಸೇರುವ ಎಲ್ಲ ಲಕ್ಷಣಗಳೂ ಕಾಣಿಸಿವೆ.
ಹಣಕಾಸು ವ್ಯವಸ್ಥೆಯ ಮೇಲಿನ ಕಣ್ಗಾವಲು ಸಂಸ್ಥೆಯು ಅಂತಾರಾಷ್ಟ್ರೀಯ ಮಟ್ಟದ ಸರ್ಕಾರಿ ಸಂಸ್ಥೆಯಾಗಿದ್ದು, ೧೯೮೯ರಲ್ಲಿ ಸ್ಥಾಪನೆಯಾಗಿದೆ. ಇದು ಅಕ್ರಮ ಹಣ ವರ್ಗಾವಣೆ, ಭಯೋತ್ಪಾದಕರಿಗೆ ಹಣಕಾಸು ಒದಗಿಸುವ ಜಾಲ ಮತ್ತು ಯಾವುದೇ ರಾಷ್ಟ್ರದ ಹಣಕಾಸು ವ್ಯವಸ್ಥೆ ಮೇಲೆ ಪರಿಣಾಮ ಬೀರುವ ಚಟುವಟಿಕೆಗಳ ಮೇಲೆ ನಿಗಾ ಇರಿಸುತ್ತದೆ.
ಪಾಕಿಸ್ತಾನದ ಉಗ್ರ ಚಟುವಟಿಕೆಗಳ ಮೇಲೆ ನಿಗಾ ಇರಿಸಿರುವ ಭಯೋತ್ಪಾದಕರ ಹಣಕಾಸು ವ್ಯವಸ್ಥೆಯ ಮೇಲಿನ ಕಣ್ಗಾವಲು ಸಂಸ್ಥೆಯು (ಎಫ್ಎಟಿಎಫ್) ಪಾಕಿಸ್ತಾನವನ್ನು ಈ ಹಿಂದೆಯೇ ಬೂದು ಪಟ್ಟಿಗೆ (ಗ್ರೇ ಲಿಸ್ಟ್) ಸೇರಿಸಿತ್ತು. ಉಗ್ರ ಚಟುವಟಿಕೆಗಳ ನಿಯಂತ್ರಣಕ್ಕೆ ’೨೭ ಅಂಶಗಳ ಕಾರ್ಯಯೋಜನೆ’ ಸಿದ್ದಪಡಿಸಿ, ಪಾಕಿಸ್ತಾನಕ್ಕೆ ಕಳುಹಿಸಿತ್ತು. ಅಕ್ಟೋಬರ್ ಒಳಗಾಗಿ ನಿರ್ದಿಷ್ಟ ಕ್ರಮ ಕೈಗೊಳ್ಳದಿದ್ದಲ್ಲಿ ’ಎಫ್ಎಟಿಎಫ್’ ಕಪ್ಪು ಪಟ್ಟಿಗೆ ಸೇರಿಸುವುದಾಗಿಯೂ ಎಚ್ಚರಿಸಿತ್ತು. ಇದಾದ ನಂತರವೂ ಪಾಕಿಸ್ತಾನವು ತನ್ನ ನರಿಬುದ್ದಿಯನ್ನು ಮುಂದುವರೆಸಿರುವುದರಿಂದ ಅದು ಈಗ ಕಪ್ಪು ಪಟ್ಟಿಗೆ ಸೇರ್ಪಡೆಯಾಗುವ ಸಾಧ್ಯತೆ ಜ್ವಲಂತಗೊಂಡಿದೆ.
ಎಫ್ಎಟಿಎಫ್ ಸೂಚಿಸಿದ್ದ ೨೭ ಬೇಡಿಕೆಗಳ ಪೈಕಿ ಇದುವರೆಗೆ ಕೇವಲ ೬ ಬೇಡಿಕೆಗಳನ್ನು ಪೂರೈಸಲು ಮಾತ್ರವೇ ಪಾಕಿಸ್ತಾನಕ್ಕೆ ಸಾಧ್ಯವಾಗಿದೆ. ಅದಲ್ಲದೆ ಇತ್ತೀಚೆಗೆ ಪಾಕಿಸ್ತಾನದಲ್ಲಿ ಉಗ್ರ ಚಟುವಟಿಕೆಗಳು ಹೆಚ್ಚಾಗಿವೆ.
ಅಕ್ಟೋಬರ್ ೨೦೧೯ರ ಒಳಗಾಗಿ ಕ್ರಿಯಾ ಯೋಜನೆ ಸಿದ್ಧಪಡಿಸುವಂತೆ ಎಫ್ಎಟಿಎಫ್ ಪಾಕಿಸ್ತಾನವನ್ನು ಆಗ್ರಹಿಸಿತ್ತು. ಇದೇ ಕೊನೆಯ ಗಡುವಾಗಿದ್ದು, ಮತ್ತೆ ವಿಫಲವಾದಲ್ಲಿ ಕಪ್ಪು ಪಟ್ಟಿಗೆ ಸೇರಿಸುವುದು ಅನಿವಾರ್ಯ ಎಂದು ಎಫ್ಎಟಿಎಫ್ ಎಚ್ಚರಿಸಿದೆ.
ಕೊನೆಯ ಎಚ್ಚರಿಕೆ: ಕಡುಬೂದು ಪಟ್ಟಿಗೆ ಸೇರ್ಪಡೆ ಎಂದರೆ, ಕಟ್ಟಕಡೆಯ ಎಚ್ಚರಿಕೆಯಾಗಿದೆ. ಈ ಬಳಿಕವೂ ಮಾರ್ಗಸೂಚಿಗಳ ಪಾಲನೆಯಾಗದೇ ಇದ್ದಲ್ಲಿ ಪಾಕಿಸ್ತಾನವನ್ನು ಕಪ್ಪು ಪಟ್ಟಿಗೆ ಸೇರ್ಪಡೆ ಮಾಡಲಾಗುವುದು. ಹಾಗಾದಲ್ಲಿ ಪಾಕಿಸ್ತಾನಕ್ಕೆ ಜಾಗತಿಕವಾಗಿ ಯಾವುದೇ ರಾಷ್ಟ್ರದಿಂದ ಆರ್ಥಿಕ ನೆರವು ಅಥವಾ ಇತರ ಯಾವುದೇ ನೆರವು ಲಭಿಸುವುದಿಲ್ಲ. ಜೊತೆಗೆ ಅಂತಾರಾಷ್ಟ್ರೀಯ ಹಣಕಾಸು ನಿಧಿ, ವಿಶ್ವಬ್ಯಾಂಕ್, ಯುರೋಪಿಯನ್ ಬ್ಯಾಂಕುಗಳ ನೆರವು ಕೂಡಾ ದೊರೆಯುವುದಿಲ್ಲ.
ಎಫ್ಎಟಿಎಫ್ ಪಾಕಿಸ್ತಾನವನ್ನು ಕಳೆದ ವರ್ಷ ಜೂನ್ ತಿಂಗಳಲ್ಲಿ ಬೂದು ಪಟ್ಟಿಗೆ ಸೇರ್ಪಡೆ ಮಾಡಿತ್ತು.
೫೦ ಕಟ್ಟಾ ಭಯೋತ್ಪಾದಕರು, ಅತ್ಮಹತ್ಯಾ ಬಾಂಬರ್ಗಳಿಗೆ ಬಾಲಾಕೋಟ್ ಜೆಇಎಂ ಶಿಬಿರದಲ್ಲಿ ತರಬೇತಿ
ನವದೆಹಲಿ: ಆತ್ಮಹತ್ಯಾ ಬಾಂಬರ್ಗಳು ಸೇರಿದಂತೆ ೪೦-೫೦ ಮಂದಿ ಕಟ್ಟಾ ಭಯೋತ್ಪಾದಕರಿಗೆ ಪಾಕಿಸ್ತಾನದ ಬಾಲಾಕೋಟ್ನಲ್ಲಿರುವ ಜೈಶ್-ಎ-ಮೊಹಮ್ಮದ್ (ಜೆಇಎಂ) ಭಯೋತ್ಪಾದಕ ಶಿಬಿರದಲ್ಲಿ ತರಬೇತಿ ನೀಡಲಾಗುತ್ತಿದೆ ಎಂದು 2019ರ ಅಕ್ಟೋಬರ್ 14ರ ಸೋಮವಾರ ವರದಿಯಾಯಿತು.
ಇದೇ ಭಯೋತ್ಪಾದಕ ಶಿಬಿರದ ಮೇಲೆ ಎಂಟು ತಿಂಗಳ ಹಿಂದೆ ಭಾರತೀಯ ವಾಯುಪಡೆ ವಿಮಾನಗಳು ವೈಮಾನಿಕ ದಾಳಿ ನಡೆಸಿದ್ದವು.
‘ಸುಮಾರು ೪೫-೫೦ ಆತ್ಮಹತ್ಯಾ ಬಾಂಬರ್ಗಳಿಗೆ ಪಾಕಿಸ್ತಾನದ ಬಾಲಾಕೋಟ್ನ ಜೈಶ್-ಇ-ಮೊಹಮ್ಮದ್ ಭಯೋತ್ಪಾದಕ ಶಿಬಿರದಲ್ಲಿ ತರಬೇತಿ ನೀಡಲಾಗುತ್ತಿದೆ’ ಎಂದು ಉನ್ನತ ಸರ್ಕಾರಿ ಮೂಲಗಳು ತಿಳಿಸಿದವು.
ಬಾಲಾಕೋಟ್ನ ಜೈಶ್-ಎ-ಮೊಹಮ್ಮದ್ ತರಬೇತಿ ಶಿಬಿರದ ಚಟುವಟಿಕೆಗಳ ಮೇಲೆ ನಾವು ಕಣ್ಣಿಟ್ಟಿದ್ದೇವೆ ಮತ್ತು ಅಲ್ಲಿನ ಬೆಳವಣಿಗೆಗಳ ಬಗ್ಗೆ ಅರಿತುಕೊಳ್ಳ್ಳುವುದಕ್ಕಾಗಿ ತಾಂತ್ರಿಕ ಕಣ್ಗಾವಲನ್ನು ಹೆಚ್ಚಿಸಿದ್ದೇವೆ ಎಂದು ಮೂಲಗಳು ಹೇಳಿದವು.
ಈ ಉಗ್ರ ಶಿಬಿರದಲ್ಲಿ ತರಬೇತಿ ಪಡೆದ ಕೆಲವು ಭಯೋತ್ಪಾದಕರನ್ನು ಭಾರತೀಯ ಭದ್ರತಾ ನೆಲೆಗಳ ಮೇಲೆ ಭಯೋತ್ಪಾದಕ ದಾಳಿ ನಡೆಸುವ ಸಲುವಾಗಿ ಕಾಶ್ಮೀರಕ್ಕೆ ಕಳುಹಿಸಲಾಗಿದೆ ಎಂದೂ ಮೂಲಗಳು ತಿಳಿಸಿದವು.
ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಭಾರತವು ರದ್ದು ಪಡಿಸಿದ ಬಳಿಕ ಕಣಿವೆಯಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ ಎಂಬುದಾಗಿ ಅಂತಾರಾಷ್ಟ್ರೀಯ ಸಮುದಾಯಕ್ಕೆ ಮನವರಿಕೆ ಮಾಡಿಸಿಕೊಡುವ ಗುರಿ ಇಟ್ಟುಕೊಂಡು ಕಾಶ್ಮೀರದಲ್ಲಿ ಅಶಾಂತಿ ಸೃಷ್ಟಿಸುವುದು ಪಾಕಿಸ್ತಾನದ ಯೋಜನೆಯಾಗಿದೆ ಎಂದು ಮೂಲಗಳು ಹೇಳಿದವು.
ಸೇನೆಯು ಕಟ್ಟೆಚ್ಚರದಲ್ಲಿದ್ದು, ಯಾವುದೇ ಭದ್ರತಾ ಸವಾಲಿನ ಜೊತೆ ’ಪರಿಣಾಮಕಾರಿ’ಯಾಗಿ ವ್ಯವಹರಿಸಲು ಅದಕ್ಕೆ ಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ ಎಂದು ಮೂಲಗಳು ತಿಳಿಸಿದವು.
ಭಾರತೀಯ ವಾಯುಪಡೆಯ ವೈಮಾನಿಕ ದಾಳಿಯಲ್ಲಿ ಧ್ವಂಸವಾಗಿದ್ದ ಬಾಲಾಕೋಟ್ ಭಯೋತ್ಪಾದಕ ಸಮುಚ್ಚಯವು ಮತ್ತೆ ’ಸಕ್ರಿಯಗೊಂಡಿದ್ದು’ ಸುಮಾರು ೫೦೦ ಭಯೋತ್ಪಾದಕರು ಭಾರತಕ್ಕೆ ನುಸುಳಲು ಕಾಯುತ್ತಿದ್ದಾರೆ ಎಂದು ಭಾರತದ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಕಳೆದ ತಿಂಗಳು ಹೇಳಿದ್ದರು. ಕಳೆದ ಆರು ತಿಂಗಳುಗಳಿಂದ ಪಾಕ್ ಮೂಲದ ಭಯೋತ್ಪಾದಕರ ನುಸುಳುವಿಕೆ ಸ್ಥಗಿತಗೊಂಡಿತ್ತು ಎಂದೂ ಅವರು ನುಡಿದಿದ್ದರು.
‘ಬಾಲಾಕೋಟ್ ಶಿಬಿರವನ್ನು ಪಾಕಿಸ್ತಾನವು ತೀರಾ ಇತ್ತೀಚೆಗೆ ಮತ್ತೆ ಸಕ್ರಿಯಗೊಳಿಸಿದೆ. ಬಾಲಾಕೋಟ್ ಶಿಬಿರದ ಮೇಲೆ ದಾಳಿಯ ಪರಿಣಾಮವಾಗಿತ್ತು ಎಂಬುದನ್ನು ಇದು ಸಾಬೀತು ಪಡಿಸಿದೆ. ಅದು ಹಾನಿಗೊಂಡಿತ್ತು ಮತ್ತು ನಾಶಗೊಂಡಿತ್ತು. ಈ ಕಾರಣದಿಂದಲೇ ಅಲ್ಲಿದ್ದ ಜನರು ಬೇರೆ ಕಡೆಗೆ ಸ್ಥಳಾಂತರಗೊಂಡಿದ್ದರು. ಈಗ ಮತ್ತೆ ಅದು ಸಕ್ರಿಯಗೊಂಡಿದೆ’ ಎಂದು ರಾವತ್ ಅವರು ಅಧಿಕಾರಿಗಳ ತರಬೇತಿ ಅಕಾಡೆಮಿಯಲ್ಲಿ ಮಾತನಾಡುತ್ತಾ ಹೇಳಿದ್ದರು.
ಭಾರತೀಯ ವಾಯುಪಡೆಯು ಕೆಲವೊಂದು ಕ್ರಮಗಳನ್ನು ಕೈಗೊಂಡಿತ್ತು. ಈಗ ಅವರು (ಪಾಕಿಸ್ತಾನ) ಮತ್ತೆ ಅಲ್ಲಿಗೆ ಜನರನ್ನು ಮರಳಿ ಕರೆತರುತ್ತಿದ್ದಾರೆ ಎಂದು ಸೇನಾ ಮುಖ್ಯಸ್ಥರು ಹೇಳಿದ್ದರು.
ಭಾರತೀಯ ವಾಯುಪಡೆಯ ವಿಮಾನಗಳ ತಂಡವೊಂದು ಬಾಲಾಕೋಟ್ನ ಭಯೋತ್ಪಾದಕರ ಉಡಾವಣಾ ಸ್ಥಳಗಳ ಮೇಲೆ ಫೆಬ್ರುವರಿ ೨೭ರಂದು ಸೂರ್ಯೋದಯಕ್ಕೂ ಮುನ್ನ ವೈಮಾನಿಕ ದಾಳಿ ನಡೆಸಿತ್ತು. ಪುಲ್ವಾಮದಲ್ಲಿ ಭಯೋತ್ಪಾದಕ ದಾಳಿಯಲ್ಲಿ ಸಿಆರ್ಪಿಎಫ್ ಯೋಧರು ಹುತಾತ್ಮರಾದ ಸುಮಾರು ೧೫ ದಿನಗಳ ಬಳಿಕ ಪ್ರತೀಕಾರದ ಕ್ರಮವಾಗಿ ಭಾರತ ಈ ಕಾರ್ಯಾಚರಣೆ ಕೈಗೊಂಡಿತ್ತು.