ಡಿಕೆ ಶಿವಕುಮಾರ್ ಪುತ್ರಿಗೆ ೭ ಗಂಟೆ ಇಡಿ ಡ್ರಿಲ್
ಶುಕ್ರವಾರ ಮತ್ತೆ ಐಶ್ವರ್ಯಾ ಹಾಜರಿಗೆ ಸಮನ್ಸ್
ನವದೆಹಲಿ: ಅಕ್ರಮ ಆಸ್ತಿ ಸಂಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಮಾಜಿ ಸಚಿವ, ಕಾಂಗ್ರೆಸ್ ಪಕ್ಷದ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ಅವರ ಪುತ್ರಿ ಐಶ್ವರ್ಯಾ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು 2019 ಸೆಪ್ಟೆಂಬರ್ 12ರ ಗುರುವಾರ ಏಳು ಗಂಟೆಗೂ ಹೆಚ್ಚು ಕಾಲ ವಿಚಾರಣೆಗೆ ಒಳಪಡಿಸಿದರು.
ಅಕ್ರಮ ಆಸ್ತಿ ಹಾಗೂ ಕೆಫೆ ಕಾಫಿ ಡೇ ಸಂಸ್ಥೆ ಜೊತೆಗೆ ನಡೆಸಿದ ಹಣದ ವಹಿವಾಟಿನ ಬಗ್ಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಐಶ್ವರ್ಯಾ ಅವರನ್ನು ಪ್ರಶ್ನಿಸಿದರು ಎನ್ನಲಾಗಿದ್ದು, ಶುಕ್ರವಾರ ಬೆಳಗ್ಗೆ ಮತ್ತೆ ೧೧ ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸಮನ್ಸ್ ಜಾರಿ ಮಾಡಿದ್ದಾರೆ ಎಂದು ಸುದ್ದಿ ಮೂಲಗಳು ತಿಳಿಸಿವೆ.
ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ಕೆಫೆ ಕಾಫಿ ಡೇ ಸಂಸ್ಥಾಪಕ ಸಿದ್ದಾರ್ಥ ಜತೆ ವ್ಯವಹಾರ ನಡೆಸಿದ್ದ ಐಶ್ವರ್ಯಾ ೨೦ ಕೋಟಿ ರೂಪಾಯಿಗೂ ಅಧಿಕ ಮೊತ್ತದ ಲೇವಾದೇವಿ ನಡೆಸಿದ್ದರು ಎನ್ನಲಾಗಿದೆ.
ಇದಲ್ಲದೇ ಮತ್ತೊಂದು ಕಂಪನಿಗೂ ಐಶ್ವರ್ಯಾ ಖಾತೆಯಿಂದ ಕೋಟ್ಯಂತರ ರೂ. ವಹಿವಾಟು ನಡೆಸಲಾಗಿತ್ತು ಎಂದು ಹೇಳಲಾಗಿದೆ.
ಈ ವ್ಯವಹಾರದ ನಂತರ ಕೆಲವೇ ದಿನದಲ್ಲಿ ಮತ್ತೆ ಐಶ್ವರ್ಯಾ ಖಾತೆಗೆ ಕೋಟಿ ಕೋಟಿ ರೂ. ಜಮೆಯಾಗಿತ್ತು. ಈ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇತ್ತೀಚೆಗೆ ಸಮನ್ಸ್ ಜಾರಿ ಮಾಡಿ ಐಶ್ವರ್ಯಾ ವಿಚಾರಣೆಗೆ ಸೂಚನೆ ನೀಡಿದ್ದರು.
ಅದರಂತೆ ಗುರುವಾರ ಬೆಳಗ್ಗೆ ಲೋಕನಾಯಕ ಭವನದಲ್ಲಿರುವ ಜಾರಿ ನಿರ್ದೇಶನಾಲಯದ ಕಚೇರಿಗೆ ಆಗಮಿಸಿದ್ದರು. ಅಲ್ಲಿ ಐಶ್ವರ್ಯಾರನ್ನು ಪ್ರಶ್ನಿಸಲಾಯಿತು.
ಸುಮಾರು ೭ ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಯಿತು. ಮಧ್ಯಾಹ್ನದ ಊಟವನ್ನು ಕೂಡಾ ಅಲ್ಲಿಗೇ ತರಿಸಲಾಗಿತ್ತು. ಸಂಜೆ ೭.೩೦ಕ್ಕೆ ವಿಚಾರಣೆ ಕೊನೆಗೊಂಡಿತು.
ಲೋಕನಾಯಕ ಭವನದಲ್ಲಿರುವ ಇಡಿ ಕಚೇರಿಯಿಂದ ಹೊರಬಂದ ಐಶ್ವರ್ಯಾ ನಂತರ ಸಂಸದ ಡಿಕೆ ಸುರೇಶ್ ನಿವಾಸಕ್ಕೆ ತೆರಳಿದರು.
ಡಿಕೆ ಶಿವಕುಮಾರ್ ಅವರ ನಿವಾಸ, ಕಚೇರಿಗಳ ಮೇಲೆ ೨೦೧೭ರ ಆಗಸ್ಟ್ ೧ರಂದು ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು. ಶಿವಕುಮಾರ್ ಅವರಿಗೆ ಸೇರಿದ್ದ ಒಟ್ಟು ೫೦ಕ್ಕೂ ಹೆಚ್ಚು ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು. ನವದೆಹಲಿಯ ಶಿವಕುಮಾರ್ ನಿವಾಸದ ಮೇಲೂ ದಾಳಿ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ೮.೯ ಕೋಟಿ ರೂ. ನಗದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಡಿಕೆಶಿ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆಗೆ ಗುರಿಪಡಿಸಿದ್ದಾರೆ.
No comments yet.
Leave a comment