ಸಾಮಾಜಿಕ ಮಾಧ್ಯಮ ಖಾತೆಗಳಿಗೆ ಆಧಾರ್ ಲಿಂಕ್
ಕೇಂದ್ರ ಮಾಡದಿದ್ದರೆ ನಾವೇ ಮಾಡ್ಬೇಕಾಗ್ತದೆ: ಸುಪ್ರೀಂ
ನವದೆಹಲಿ: ಸಾಮಾಜಿಕ ಮಾಧ್ಯಮ (ಸೋಶಿಯಲ್ ಮೀಡಿಯಾ) ಖಾತೆಗಳನ್ನು ಆಧಾರ್ ಕಾರ್ಡಿನೊಂದಿಗೆ ಜೋಡಣೆ (ಲಿಂಕ್) ಮಾಡುವ ಬಗ್ಗೆ ಕೇಂದ್ರದ ಔಪಚಾರಿಕ ಪ್ರತಿಕ್ರಿಯೆ ಕೋರಿದ ಸುಪ್ರೀಂಕೋರ್ಟ್, ಈ ವಿಷಯವನ್ನು ಶೀಘ್ರವಾಗಿ ತೀರ್ಮಾನಿಸುವ ಅಗತ್ಯವಿದೆ ಎಂದು 2019 ಸೆಪ್ಟೆಂಬರ್ 13ರ ಶುಕ್ರವಾರ ಹೇಳಿತು.
ಸಾಮಾಜಿಕ ಮಾಧ್ಯಮಕ್ಕೆ ಸಂಬಂಧಿಸಿದಂತೆ ಸರ್ಕಾರ ಏನಾದರೂ ಕಾನೂನು ಅಥವಾ ನಿಬಂಧನೆಗಳನ್ನು ರೂಪಿಸುತ್ತಿದೆಯೇ ಎಂದು ನ್ಯಾಯಮೂರ್ತಿಗಳಾದ ದೀಪಕ್ ಗುಪ್ತ ಮತ್ತು ಅನಿರುದ್ಧ ಬೋಸ್ ಅವರನ್ನು ಒಳಗೊಂಡ ಸುಪ್ರೀಂಕೋರ್ಟ್ ಪೀಠವು ಕೇಂದ್ರ ಸರ್ಕಾರದ ಪರ ಹಾಜರಾದ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರನ್ನು ಪ್ರಶ್ನಿಸಿತು.
“ಕೇಂದ್ರವು ಇಲ್ಲಿನ ಸಮಸ್ಯೆಗಳ ಬಗ್ಗೆ ಏನನ್ನೂ ಮಾಡದಿದ್ದರೆ ನಾವು ಏನನ್ನಾದರೂ ಮಾಡಬೇಕಾಗುತ್ತದೆ. ಈ ಹಂತದಲ್ಲಿ ನಾವು ಏನಾದರೂ ನಿರ್ಧರಿಸಬೇಕೇ ಅಥವಾ ಹೈಕೋರ್ಟ್ ನಿರ್ಧರಿಸುತ್ತದೆಯೇ ಎಂಬುದು ನಮಗೆ ಗೊತ್ತಿಲ್ಲ’ ಎಂದು ಸುಪ್ರೀಂಕೋರ್ಟ್ ಹೇಳಿತು.
’ಪ್ರಕರಣದ ಅರ್ಹತೆ ವಿಚಾರವನ್ನು ನಾವು ಈಗ ಪರಿಶೀಲಿಸುವುದಿಲ್ಲ. ಮದ್ರಾಸ್, ಬಾಂಬೆ ಮತ್ತು ಮಧ್ಯಪ್ರದೇಶ ಹೈಕೋರ್ಟ್ಗಳಲ್ಲಿ ಇರುವ ಇಂತಹ ಪ್ರಕರಣಗಳನ್ನು ಸುಪ್ರೀಂಕೋರ್ಟಿಗೆ ವರ್ಗಾಯಿಸುವಂತೆ ಕೋರಿ ಫೇಸ್ ಬುಕ್ ಸಲ್ಲಿಸಿದ ವರ್ಗಾವಣೆ ಕೋರಿಕೆ ಅರ್ಜಿಯ ಬಗ್ಗೆ ನಿರ್ಧರಿಸುತ್ತೇವೆ’ ಎಂದು ಪೀಠ ಹೇಳಿತು.
ಮದ್ರಾಸ್ ಹೈಕೋರ್ಟಿನಲ್ಲಿ ಬಾಕಿ ಇರುವ ಆಧಾರ್ ಜೊತೆಗೆ ಸಾಮಾಜಿಕ ಮಾಧ್ಯಮ ಖಾತೆಗಳನ್ನು (ಸೋಷಿಯಲ್ ಮೀಡಿಯಾ ಪ್ರೊಫೈಲ್ ) ಜೋಡಿಸುವುದಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಉನ್ನತ ನ್ಯಾಯಾಲಯಕ್ಕೆ ವರ್ಗಾಯಿಸಿದರೆ ಅದಕ್ಕೆ ಆಕ್ಷೇಪವಿಲ್ಲ ಎಂದು ತುಷಾರ ಮೆಹ್ತ ಹೇಳಿದರು.
ಸುಪ್ರೀಂಕೋರ್ಟ್ ಛೀಮಾರಿಯ ಬಳಿಕ ಸೆಪ್ಟೆಂಬರ್ ೨೪ರ ಒಳಗೆ ತನ್ನ ನಿಲುವನ್ನು ಸ್ಪಷ್ಟ ಪಡಿಸುವುದಾಗಿ ಕೇಂದ್ರವು ಒಪ್ಪಿಕೊಂಡಿತು.
“ಕೇಂದ್ರವು ಕೆಲವು ಕಾನೂನು ಅಥವಾ ನಿಬಂಧನೆಗಳನ್ನು ರೂಪಿಸದಿದ್ದರೆ, ನಾವು ನಮ್ಮ ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ” ಎಂದು ಪೀಠ ಪುನರುಚ್ಚರಿಸಿತು.
ಫೇಸ್ ಬುಕ್ನಂತಹ ಸಾಮಾಜಿಕ ಮಾಧ್ಯಮ ದೈತ್ಯರು ಬಳಕೆದಾರರ ಗೌಪ್ಯತೆಯ ಉಲ್ಲಂಘನೆಯಾಗುತ್ತದೆ ಎಂಬ ನೆಪ ನೀಡಿ ಆಧಾರ್ ಸಂಖ್ಯೆಯನ್ನು ಸಾಮಾಜಿಕ ಮಾಧ್ಯಮ ಖಾತೆಗಳಿಗೆ ಲಿಂಕ್ ಮಾಡುವ ಸಲಹೆಯನ್ನು ವಿರೋಧಿಸಿದ್ದಾರೆ.
ಕಳೆದ ತಿಂಗಳು ನಡೆದ ವಿಚಾರಣೆಯಲ್ಲಿ, ಫೇಸ್ಬುಕ್ ತನ್ನ ತ್ವರಿತ ಸಂದೇಶ ಕಳುಹಿಸುವ ವಾಟ್ಸಪ್ನಲ್ಲಿನ ವಿಷಯವು ಕೊನೆಯಿಂದ ಕೊನೆಯವರೆಗೆ ಎನ್ಕ್ರಿಪ್ಟ್ ಮಾಡಲ್ಪಟ್ಟಿದೆ ಮತ್ತು ಅದಕ್ಕೆ ತಮಗೆ ಪ್ರವೇಶವಿಲ್ಲದ ಕಾರಣ ಮೂರನೇ ವ್ಯಕ್ತಿಯೊಂದಿಗೆ ಆಧಾರ್ ಸಂಖ್ಯೆಯನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿತ್ತು.
No comments yet.
Leave a comment