ಇಂದಿನಿಂದ ಚಾರ್ಮಾಡಿ ಘಟ್ಟದಲ್ಲಿ ಲಘು ವಾಹನ ಸಂಚಾರ ಆರಂಭ
ಬೆಂಗಳೂರು/ ಚಿಕ್ಕಮಗಳೂರು: ಭಾರೀ ಮಳೆ ಮತ್ತು ಪ್ರವಾಹಕ್ಕೆ ಗುಡ್ಡ ಕುಸಿತದ ಕಾರಣದಿಂದ ಮುಚ್ಚಲಾಗಿದ್ದ ಚಿಕ್ಕಮಗಳೂರಿನಿಂದ ಉಡುಪಿ, ಧರ್ಮಸ್ಥಳ, ಮಂಗಳೂರಿಗೆ ಸಂಪರ್ಕ ಕಲ್ಪಿಸುತ್ತಿದ್ದ ಚಾರ್ಮಾಡಿ ಘಟ್ಟ ರಸ್ತೆಯನ್ನು 2019 ಸೆಪ್ಟೆಂಬರ 15ರ ಭಾನುವಾರದಿಂದ ತೆರೆಯಲಾಗಿದ್ದು ಲಘು ವಾಹನ ಸಂಚಾರಕ್ಕೆ ಅವಕಾಶ ನೀಡಲಾಯಿತು.
ಚಾರ್ಮಾಡಿ ಘಟ್ಟದಲ್ಲಿ ಲಘು ವಾಹನಗಳ ಸಂಚಾರಕ್ಕೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಬಗಾದಿ ಗೌತಮ್ ಆದೇಶ ಹೊರಡಿಸಿದ್ದಾರೆ. 20 ಕಿ.ಮೀ. ವೇಗದ ಮಿತಿ ದಾಟದಂತೆ ವಾಹನ ಸವಾರರಿಗೆ ಸೂಚನೆ ನೀಡಲಾಗಿದೆ. ಬೆಳಗ್ಗೆ 6ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಲಘು ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಯಿತು.
ಕಾಫಿನಾಡಿನಲ್ಲಿ ಮಹಾಮಳೆಗೆ ಗುಡ್ಡ ಕುಸಿದು, ಹಲವೆಡೆ ರಸ್ತೆ ಕೊಚ್ಚಿ ಹೋಗಿತ್ತು. 2019 ಆಗಸ್ಟ್ 9ರಿಂದ ಚಾರ್ಮಾಡಿ ಘಟ್ಟ ರಸ್ತೆಯಲ್ಲಿ ಸಂಚಾರ ಬಂದ್ ಆಗಿತ್ತು. ಇದರಿಂದಾಗಿ ಚಿಕ್ಕಮಗಳೂರು-ದಕ್ಷಿಣ ಕನ್ನಡ ಸಂಪರ್ಕ ಕಡಿತವಾಗಿತ್ತು. ಸದ್ಯ ಲಘು ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿರುವುದು ಪ್ರಯಾಣಿಕರಿಗೆ ಖುಷಿ ವಿಷಯ.
ಜಿಲ್ಲಾಧಿಕಾರಿ ವಾಹನ ಸಂಚಾರಕ್ಕೆ ಆದೇಶ ನೀಡಿದ್ದರೂ ಪೊಲೀಸರು ವಾಹನ ಸವಾರರಿಗೆ ಅವಕಾಶ ನೀಡಿರಲಿಲ್ಲ. ಬಳಿಕ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ ಬಳಿಕ ಪೊಲೀಸರು ಡಿಸಿ ಅವರಿಂದ ಮಾಹಿತಿ ಪಡೆದು ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿದರು.
ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಇಲಾಖೆ ನಡುವಿನ ಸಮನ್ವಯದ ಕೊರತೆಯಿಂದ ಇಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಸ್ಥಳೀಯರು ಆದೇಶ ಪ್ರತಿ ತೋರಿಸಿದ ಮೇಲೆ ಪೊಲೀಸರು ವಾಹನಗಳನ್ನು ಬಿಟ್ಟರು. ಈಗ ಕೊಟ್ಟಿಗೆಹಾರದಿಂದ ಮಂಗಳೂರು, ಧರ್ಮಸ್ಥಳಕ್ಕೆ ವಾಹನ ಸವಾರರು ತೆರಳುತ್ತಿದ್ದಾರೆ. ಎಂದು ಬೆಂಗಳೂರಿಗೆ ಬಂದಿರುವ ವರದಿಗಳು ಹೇಳಿವೆ.
No comments yet.
Leave a comment