ಆಂಧ್ರ ಪ್ರದೇಶ ಮಾಜಿ ಸ್ಪೀಕರ್ ಕೋಡೇಲ ಶಿವಪ್ರಸಾದ ರಾವ್ ಆತ್ಮಹತ್ಯೆ
ಹೈದರಾಬಾದ್: ಆಂಧ್ರ ಪ್ರದೇಶದ ಮಾಜಿ ವಿಧಾನಸಭಾಧ್ಯಕ್ಷ ಹಾಗೂ ತೆಲುಗುದೇಶಂ ಪಕ್ಷದ (ಟಿಡಿಪಿ) ಮುಖಂಡ ಕೋಡೇಲ ಶಿವಪ್ರಸಾದ ರಾವ್ ಅವರು ತಮ್ಮ ನಿವಾಸದಲ್ಲಿ 2019 ಸೆಪ್ಟೆಂಬರ್ 16ರ ಸೋಮವಾರ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಬಂದಿತು.
72 ವರ್ಷದ ಶಿವ ಪ್ರಸಾದ ರಾವ್ ಅವರನ್ನು ಹೈದರಾಬಾದಿನ ಬಸವತಾರಕಂ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಟಿಡಿಪಿ ಮುಖಂಡ ಸಾವನ್ನಪ್ಪಿರುವುದನ್ನು ವೈದ್ಯರು ಖಚಿತಪಡಿಸಿದರು. ಶಿವಪ್ರಸಾದ ರಾವ್ ಅವರು ಇಬ್ಬರು ಪುತ್ರರು ಮತ್ತು ಓರ್ವ ಪುತ್ರಿಯನ್ನು ಅಗಲಿದರು.
ಇತ್ತೀಚೆಗಷ್ಟೇ ಕೋಡೇಲ ಶಿವಪ್ರಸಾದ ರಾವ್ ಅವರು ಹೃದಯಾಘಾತಗೊಂಡು ಆಸ್ಪತ್ರೆಗೆ ದಾಖಲಾಗಿ ಬಿಡುಗಡೆಗೊಂಡಿದ್ದರು. ಈಗ ಅವರು ಆತ್ಮಹತ್ಯೆ ಮಾಡಿಕೊಳ್ಳಲು ನಿಖರ ಕಾರಣ ತಿಳಿದುಬಂದಿಲ್ಲ. ಅವರ ಕುಟುಂಬದ ಮೂಲಗಳ ಪ್ರಕಾರ ಕೆಲವಾರು ದಿನಗಳಿಂದ ಅವರು ಮಾನಸಿಕವಾಗಿ ಖಿನ್ನರಾಗಿದ್ದರೆಂದು ಹೇಳಲಾಯಿತು.
ರೈತರ ಕುಟುಂಬದಿಂದ ಬಂದಿದ್ದ ಶಿವ ಪ್ರಸಾದ ರಾವ್ ಅವರು ವೃತ್ತಿಯಲ್ಲಿ ವೈದ್ಯರು. 1983ರಲ್ಲಿ ಎನ್ಟಿ ರಾಮರಾವ್ ಸ್ಥಾಪಿಸಿದ ತೆಲುಗು ದೇಶಂ ಪಕ್ಷದ ಮೂಲಕ ರಾಜಕೀಯಕ್ಕೆ ಬಂದವರು. ಆದರೆ, ಇತ್ತೀಚೆಗೆ ಜಗನ್ ಮೋಹನ ರೆಡ್ಡಿ ಸರ್ಕಾರ ತಮ್ಮ ಕುಟುಂಬದ ಮೇಲೆ ರಾಜಕೀಯ ಹಗೆತನ ಸಾಧಿಸುತ್ತಿದೆ. ತಮ್ಮ ಹಾಗೂ ತಮ್ಮ ಕುಟುಂಬ ಸದಸ್ಯರ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಅವರು ಸಾಕಷ್ಟು ನೊಂದಿದ್ದರು ಎಂದು ಹೇಳಲಾಯಿತು.
ಈದಿನ ಅವರು ಬೆಳಗ್ಗೆ ತಿಂಡಿ ತಿಂದು ನೇರವಾಗಿ ತಮ್ಮ ಕೋಣೆಗೆ ಹೋದವರು ಬಹಳ ಹೊತ್ತಾದರೂ ಹೊರಬರಲಿಲ್ಲ. ಒಳಗೆ ಹೋಗಿ ನೋಡಿದಾಗ ಅವರು ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದೆವು ಎಂದು ಅವರ ಕುಟುಂಬ ಸದಸ್ಯರು ಹೇಳಿದರು.
ಕೋಡೇಲ ಶಿವಪ್ರಸಾದ ರಾವ್ ಅವರ ನಿಧನಕ್ಕೆ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದರು.
No comments yet.
Leave a comment