ಮಾರಕ ಪೆಟ್ಟು ಕೊಡುವ ಸಾಮರ್ಥ್ಯ ನಮಗಿದೆ: ಪಾಕಿಸ್ತಾನಕ್ಕೆ ರಾಜನಾಥ್ ಸಿಂಗ್ ಎಚ್ಚರಿಕೆ
ಶಬ್ಧರಹಿತ ದೇಶೀ ನಿರ್ಮಿತ ಐಎನ್ಎಸ್ ಖಂಡೂರಿ ಜಲಾಂರ್ಗಾಮಿಗೆ ಚಾಲನೆ
ಮುಂಬೈ: ಭಾರತದ ಜೊತೆಗೆ ಸಶಸ್ತ್ರ ಘರ್ಷಣೆಗೆ ಇಳಿಯುವುದರ ವಿರುದ್ಧ 2019 ಸೆಪ್ಟೆಂಬರ್ 28ರ ಶನಿವಾರ ಇಲ್ಲಿ ಪಾಕಿಸ್ತಾನಕ್ಕೆ ಗಂಭೀರ ಎಚ್ಚರಿಕೆ ನೀಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ’ಮಾರಕ ಹೊಡೆತ ನೀಡುವ ಸಾಮರ್ಥ್ಯ ನಮಗಿದೆ’ ಎಂದು ಹೇಳಿದರು.
ಭಾರತದ ಎರಡನೆಯ ಸ್ಕಾರ್ಪೇನ್ ದರ್ಜೆಯ ದೇಶೀ ನಿರ್ಮಿತ ಶಬ್ಧರಹಿತ ಜಲಾಂತರ್ಗಾಮಿ ಐಎನ್ಎನ್ ಖಂಡೂರಿ ಕಾರ್ಯಾರಂಭ ಸಮಾರಂಭದಲ್ಲಿ ಪಾಲ್ಗೊಂಡಿದ್ದ ರಕ್ಷಣಾ ಸಚಿವರು, ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಮಾಡಿದ ಭಾಷಣದ ಹಿನ್ನೆಲೆಯಲ್ಲಿ ನೆರೆರಾಷ್ಟ್ರಕ್ಕೆ ಈ ಸಂದೇಶವನ್ನು ರವಾನಿಸಿದರು.
ವಿಶ್ವಸಂಸ್ಥೆ ಮಹಾ ಅಧಿವೇಶನದಲ್ಲಿ ಶುಕ್ರವಾರ ಮಾತನಾಡಿದ್ದ ಇಮ್ರಾನ್ ಖಾನ್ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿ ಅಣ್ವಸ್ತ್ರಸಜ್ಜಿತ ರಾಷ್ಟ್ರಗಳಾದ ಭಾರತ ಮತ್ತು ಪಾಕಿಸ್ತಾನ ಸಮರಕ್ಕೆ ಇಳಿದರೆ ಸಂಭವಿಸಬಹುದಾದ ಪರಿಣಾಮಗಳ ಬಗ್ಗೆ ವಿಶ್ವಸಂಸ್ಥೆಗೆ ಎಚ್ಚರಿಕೆ ನೀಡಿದ್ದರು.
’ಐಎನ್ಎಸ್ ಖಂಡೂರಿ ಕಾರ್ಯಾರಂಭದೊಂದಿಗೆ ಭಾರತೀಯ ನೌಕಾಪಡೆಯು ಅತ್ಯಂತ ಪ್ರಬಲವಾಗಿದೆ ಎಂಬುದನ್ನು ಪಾಕಿಸ್ತಾನವು ಅರ್ಥ ಮಾಡಿಕೊಳ್ಳುವ ಅಗತ್ಯವಿದೆ. ಅವರು ನಮ್ಮ ಸಾಮರ್ಥ್ಯವನ್ನು ತಿಳಿದುಕೊಳ್ಳಬೇಕು ಮತ್ತು ಅಗತ್ಯ ಬಿದ್ದಲ್ಲಿ ನಾವು ಅದನ್ನು ಬಳಸಬಹುದು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ರಕ್ಷಣಾ ಸಚಿವರು ಮುಂಬೈಯಲ್ಲಿ ಶನಿವಾರ ಮುಂಜಾನೆ ಕಾರ್ಯಾರಂಭ ಮಾಡಿದ ಸ್ಕಾರ್ಪೇನ್ ದರ್ಜೆಯ ದಾಳಿ ಜಲಾಂತರ್ಗಾಮಿಯ ಕಾರ್ಯಾರಂಭವನ್ನು ಉಲ್ಲೇಖಿಸುತ್ತಾ ಘೋಷಿಸಿದರು.
‘ಭಾರತಕ್ಕೆ ತನ್ನ ನೌಕಾಪಡೆಯ ಬಗ್ಗೆ ಹೆಮ್ಮೆ ಇದೆ. ೧೯೭೧ರ ಯುದ್ಧದಲ್ಲಿ ಭಾರತೀಯ ನೌಕಾಪಡೆಯು ವಹಿಸಿದ ಪಾತ್ರವನ್ನು ಮರೆಯಲು ಸಾಧ್ಯವಿಲ್ಲ. ಆಪರೇಷನ್ ಟ್ರೈಡೆಂಟ್ ಮತ್ತು ಆಪರೇಷನ್ ಪೈಥೋನ್ ಪಾಕಿಸ್ತಾನಿ ನೌಕಾಪಡೆಯ ಬೆನ್ನುಮೂಳೆಯನ್ನೇ ಮುರಿದಿದ್ದವು’ ಎಂದು ಆಧುನಿಕ ಆಯಕಟ್ಟಿನ ಸಮರದಲ್ಲಿ ಜಲಾಂತರ್ಗಾಮಿಗಳ ಮಹತ್ವವನ್ನು ಉಲ್ಲೇಖಿಸುತ್ತಾ ಸಚಿವರು ನುಡಿದರು.
ಕಳೆದ ಒಂದು ತಿಂಗಳಿನಿಂದ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಕನಿಷ್ಠ ೩೦ ಪ್ರಮುಖ ನಗರಗಳ ಮೇಲೆ ಭಯೋತ್ಪಾದಕ ದಾಳಿಗಳು ನಡೆಯಬಹುದು ಎಂಬ ಸುಳಿವುಗಳು ಭಾರತಕ್ಕೆ ಲಭಿಸಿದ್ದವು.
ಪಾಕಿಸ್ತಾನಿ ಡ್ರೋಣ್ಗಳು ಅಮೃತಸರದಲ್ಲಿ ಎಕೆ-೪೭ ಅಸಾಲ್ಟ್ ರೈಫಲ್ಗಳು ಮತ್ತು ಗ್ರೆನೇಡ್ಗಳನ್ನು ಇಳಿಸಿದ್ದವು ಎಂಬುದಾಗಿ ಪಂಜಾಬ್ ಪೊಲೀಸರು ಕಳೆದ ವಾರ ಪ್ರಕಟಿಸಿದ್ದರು.
ಈ ಶಸ್ತ್ರಾಸ್ತ್ರಗಳನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಕೋಲಾಹಲ ಸೃಷ್ಟಿಸುವ ಸಲುವಾಗಿ ಭಯೋತ್ಪಾದಕರಿಗೆ ತಲುಪಿಸುವ ಉದ್ದೇಶದೊಂದಿಗೆ ಅಮೃತಸರಕ್ಕೆ ರವಾನಿಸಲಾಗಿತ್ತು.
ಇದಕ್ಕೆ ಮುನ್ನ ಭಯೋತ್ಪಾದಕರು ದಕ್ಷಿಣ ಭಾರತದ ಮೇಲೆ ದಾಳಿ ನಡೆಸಬಹುದು ಎಂದು ಸೇನೆಯು ಗುಪ್ತಚರ ವರದಿಗಳನ್ನು ಅಧರಿಸಿ ತಿಳಿಸಿತ್ತು. ಕಛ್ ಪ್ರದೇಶದ ಮೂಲಕ ಜಲಮಾರ್ಗವಾಗಿ ಪಾಕಿಸ್ತಾನಿ ಕಮಾಂಡೋಗಳು ನುಸುಳಲು ಯತ್ನಿಸಬಹುದು ಎಂಬುದಾಗಿ ಸುಳಿವುಗಳು ಲಭಿಸಿದ ಹಿನ್ನೆಲೆಯಲ್ಲಿ ಗಜುರಾತಿನ ಬಂದರುಗಳಲ್ಲಿ ಕಟ್ಟೆಚ್ಚರ ಜಾರಿಗೊಳಿಸಿದ ಕೆಲವೇ ವಾರಗಳ ಬಳಿಕ ಸೇನೆಯು ದಕ್ಷಿಣ ಭಾರತದಲ್ಲಿ ಭಯೋತ್ಪಾದಕ ದಾಳಿ ಸಾಧ್ಯತೆಗಳ ಬಗ್ಗೆ ಎಚ್ಚರಿಕೆ ನೀಡಿತ್ತು.
‘ರಾಷ್ಟ್ರ ಪ್ರಾಯೋಜಿತ ಭಯೋತ್ಪಾದನೆಯು ದೊಡ್ಡ ಸವಾಲು. ನಮ್ಮ ಸರ್ಕಾರವು ಪ್ರಬಲ ಇಚ್ಛಾಶಕ್ತಿಯನ್ನು ಹೊಂದಿದೆ ಮತ್ತು ಯಾವುದೇ ಕಠಿಣ ನಿರ್ಧಾರಗಳನ್ನು ಕೈಗೊಳ್ಳಲು ನಾವು ಹಿಂಜರಿಯುವುದಿಲ್ಲ’ ಎಂದು ಸಿಂಗ್ ಮುಂಬೈಯಲ್ಲಿ ಮಾತನಾಡುತ್ತಾ ಹೇಳಿದರು. ರಾಜನಾಥ್ ಸಿಂಗ್ ಅವರು ನೀಲಗಿರಿ ಪಿ-೧೭ ಎ ಯುದ್ಧನಾವೆಗೆ (ಫ್ರಿಗೇಟ್) ಮುಂಬೈಯಲ್ಲಿ ಚಾಲನೆ ನೀಡಿದರು. ’ದ್ವೇಷ ಸಾಧಿಸುತ್ತಿರುವ ನೆರೆಹೊರೆಯು ಭಾರತವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದೆ’ ಎಂದು ಅವರು ನುಡಿದರು.
ಫೆಬ್ರುವರಿಯಲ್ಲಿ ಭಾರತೀಯ ವಾಯುಪಡೆ ವಿಮಾನಗಳು ಬಾಂಬ್ ಎಸೆದು ಧ್ವಂಸಗೊಳಿಸಿದ್ದ ಬಾಲಾಕೋಟ್ನ ಭಯೋತ್ಪಾದಕ ತರಬೇತಿ ಶಿಬಿರಗಳನ್ನು ಪಾಕಿಸ್ತಾನವು ಮತ್ತೆ ಸಕ್ರಿಯಗೊಳಿಸಿರುವುದನ್ನೂ ರಾಜನಾಥ್ ಸಿಂಗ್ ಉಲ್ಲೇಖಿಸಿದರು.
ಬಾಲಾಕೋಟ್ ಭಯೋತ್ಪಾದಕ ತರಬೇತಿ ಶಿಬಿರಗಳು ಮತ್ತ ಸಕ್ರಿಯಗೊಂಡಿರುವುದನ್ನು ಭಾರತದ ಸೇನಾ ದಂಡನಾಯಕ ಜನರಲ್ ಬಿಪಿನ್ ರಾವತ್ ಅವರು ದೃಢಪಡಿಸಿದ ಎರಡು ದಿನಗಳ ಬಳಿಕ ರಕ್ಷಣಾ ಸಚಿವರು ’ಯಾವುದೇ ಸ್ಥಿತಿ ಎದುರಿಸಲು ಭಾರತ ಸಂಪೂರ್ಣ ಸಿದ್ಧವಾಗಿದೆ’ ಎಂದು ಹೇಳಿದರು.
ಸೆಪ್ಟೆಂಬರ್ 26ರ ಗುರುವಾರ ಕೇರಳದಲ್ಲಿ ಸಮಾರಂಭ ಒಂದರಲ್ಲಿ ಮಾತನಾಡಿದ್ದ ರಾಜನಾಥ್ ಸಿಂಗ್ ಅವರು ’ರಾಷ್ಟ್ರದ ನೌಕಾಭದ್ರತೆಯ ಖಾತರಿಗೆ ಕೇಂದ್ರವು ಬದ್ಧವಾಗಿದೆ’ ಎಂದು ಹೇಳಿದ್ದರು.
ಭಾರತದ ಮಿಲಿಟರಿಯನ್ನು ಬಲಪಡಿಸುವುದಕ್ಕೆ ಮತ್ತು ಆಧುನೀಕರಿಸುವುದಕ್ಕೆ ಕೇಂದ್ರವು ಬದ್ಧವಾಗಿದೆ ಎಂದೂ ಸಮಾರಂಭವನ್ನು ಉದ್ದೇಶಿಸಿ ಮಾತನಾಡುತ್ತಾ ರಾಜನಾಥ್ ಸಿಂಗ್ ನುಡಿದರು.
ಸ್ಕಾರ್ಪೇನ್ ದರ್ಜೆಯ ಜಲಾಂತರ್ಗಾಮಿಯ ಜೊತೆಗೆ ಡೀಸೆಲ್/ ಎಲೆಕ್ಟ್ರಿಕ್ ಚಆಲಿತ ವಿರೋಧಿ ಹಡಗು ಮತ್ತು ವಿರೋಧಿ ಜಲಾಂತರ್ಗಾಮಿ ಟಾರ್ಪೆಡೋಗಳತ್ತ ಗುಂಡು ಹಾರಿಸಬಲ್ಲ, ರಹಸ್ಯ ತಂತ್ರಜ್ಞಾನ ಸಹಿತವಾದ ಮತ್ತು ಗಂಟೆಗೆ ೨೦ ನಾಟಿಕಲ್ ಮೈಲು ವೇಗದಲ್ಲಿ ಸಾಗಿ ದಾಳಿ ನಡೆಸಬಲ್ಲ ಐಎನ್ಎಸ್ ನೀಲಗಿರಿ ಪಿ೧೭ಎ ರಹಸ್ಯ ಯುದ್ಧನಾವೆಯನ್ನೂ (ಸ್ಟೆಲ್ತ್ ಫ್ರಿಗೇಟ್) ಸಚಿವರು ಉದ್ಘಾಟಿಸಿದರು.
ಇದಲ್ಲದೆ ಭಾರತೀಯ ವಾಯುಪಡೆಗೆ ೩೬ ಅತ್ಯಾಧುನಿಕ ರಫೇಲ್ ಯುದ್ಧ ವಿಮಾನಗಳ ಪೈಕಿ ಮೊದಲ ವಿಮಾನ ಕೂಡಾ ಅಕ್ಟೋಬರಿನಲ್ಲಿ ಸೇರ್ಪಡೆಯಾಗಲಿದ್ದು, ಸೇನೆಯ ಎಸ್-೪೦೦ ವಾಯು ರಕ್ಷಣಾ ಕ್ಪಿಪಣಿ ವ್ಯವಸ್ಥೆಯನ್ನು ೨೦೨೧ರ ಆದಿಯಲಿ ರಶ್ಯಾದಿಂದ ಪಡೆಯಲಿದೆ.
No comments yet.
Leave a comment