ಡಿಕೆ ಶಿವಕುಮಾರ್ ಜಾಮೀನು ಅರ್ಜಿ ವಜಾ, ತಿಹಾರ್ ಜೈಲುವಾಸ ಮುಂದುವರಿಕೆ
ನವದೆಹಲಿ: ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೊಳಗಾಗಿರುವ ಹಿರಿಯ ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿರುವುದಾಗಿ 2019 ಸೆಪ್ಟೆಂಬರ್ 25ರ ಬುಧವಾರ ಸಂಜೆ ದೆಹಲಿಯ ವಿಶೇಷ ನ್ಯಾಯಾಲಯದ ತೀರ್ಪು ಪ್ರಕಟಿಸಿತು. ಇದರಿಂದಾಗಿ ಶಿವಕುಮಾರ್ ಅವರಿಗೆ ಗೆ ತಿಹಾರ್ ಜೈಲುವಾಸ ಮುಂದುವರಿಯುವಂತಾಯಿತು.
ಈದಿನ ಮಧ್ಯಾಹ್ನ 3.30ಕ್ಕೆ ಡಿಕೆ ಶಿವಕುಮಾರ್ ಜಾಮೀನು ಅರ್ಜಿ ಕುರಿತ ಆದೇಶ ಪ್ರಕಟವಾಗಬೇಕಿತ್ತು. ಆದರೆ ಸುಮಾರು ಒಂದೂವರೆ ಗಂಟೆಗಳ ಕಾಲ ನ್ಯಾಯಾಧೀಶ ಕುಹರ್ ಅವರು ತಮ್ಮ ಕೋಣೆಯಲ್ಲಿಯೇ ಹಾಜರಾದ ವಕೀಲರಿಂದ ಮಾಹಿತಿಯನ್ನು ಪಡೆದುಕೊಂಡು, 5.15ಕ್ಕೆ ಜಾಮೀನು ಅರ್ಜಿ ವಜಾಗೊಳಿಸಿರುವುದಾಗಿ ಒಂದೇ ವಾಕ್ಯದ ತೀರ್ಪು ಪ್ರಕಟಿಸಿದರು..
ನ್ಯಾಯಾಲಯಕ್ಕೆ ಡಿಕೆ ಶಿವಕುಮಾರ್ ಪರ ಹಾಗೂ ಜಾರಿ ನಿರ್ದೇಶನಾಲಯದ ಪರ ವಕೀಲರು ಹಾಜರಾಗಿದ್ದರು.
ಜಾರಿ ನಿರ್ದೇಶನಾಲಯದ ವಶದಲ್ಲಿದ್ದ ಡಿಕೆ ಶಿವಕುಮಾರ್ ಅವರ ನಿರಂತರ ವಿಚಾರಣೆ ಬಳಿಕ ದೆಹಲಿಯ ರೌಸ್ ಅವೆನ್ಯೂ ಸಮುಚ್ಚಯದಲ್ಲಿನ ವಿಶೇಷ ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಕಳೆದ ಆರು ದಿನಗಳಿಂದ ಡಿಕೆ ಶಿವಕುಮಾರ್ ತಿಹಾರ್ ಜೈಲಿನಲ್ಲಿದ್ದರು.
ಸೆಪ್ಟೆಂಬರ್ 17ರಿಂದ ನ್ಯಾಯಾಂಗ ಬಂಧನದಲ್ಲಿರುವ ಡಿಕೆ ಶಿವಕುಮಾರ್ ತಮಗೆ ಜಾಮೀನು ನೀಡಬೇಕು, ವಿಚಾರಣೆಗೆ ಸಹಕರಿಸಲು ಸಿದ್ದ ಎಂದು ನ್ಯಾಯಾಲಯಕ್ಕೆ ಜಾಮೀನು ಅರ್ಜಿ ವಿಚಾರಣೆ ವೇಳೆ ತಿಳಿಸಿದ್ದರು. ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಅಜಯ್ ಕುಮಾರ್ ಕುಹರ್ ಅವರು ವಾದ, ಪ್ರತಿವಾದ ಆಲಿಸಿದ ಬಳಿಕ ತೀರ್ಪನ್ನು ಸೆ.25ಕ್ಕೆ ಕಾಯ್ದಿರಿಸಿದ್ದರು.
ಜಾಮೀನು ಕೋರಿ ದೆಹಲಿ ಹೈಕೋರ್ಟ್ ಮೊರೆ:
ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ಡಿಕೆ ಶಿವಕುಮಾರ್ ಜಾಮೀನು ಅರ್ಜಿಯನ್ನು ವಜಾಗೊಳಿಸಿದ ಬೆನ್ನಲ್ಲೇ ಜಾಮೀನು ಕೋರಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಲು ಡಿಕೆ ಶಿವಕುಮಾರ್ ಪರ ವಕೀಲರು ಸಿದ್ದತೆ ನಡೆಸಿದರು.
ಕೋರ್ಟ್ ತೀರ್ಪಿನ ಮುಖ್ಯಾಂಶಗಳು
1)ಡಿಕೆ ಶಿವಕುಮಾರ್ ಈ ಹಂತದಲ್ಲಿ ಜಾಮೀನಿಗೆ ಅರ್ಹರಲ್ಲ
2)ವೈದ್ಯಕೀಯ ವರದಿ ಪ್ರಕಾರ ಡಿಕೆ ಶಿವಕುಮಾರ್ ಆರೋಗ್ಯ ಸ್ಥಿರವಾಗಿದೆ
3)ತಿಹಾರ್ ಜೈಲಿನಲ್ಲಿಯೇ ಎಲ್ಲಾ ವೈದ್ಯಕೀಯ ಸೌಲಭ್ಯವಿದೆ.
4) ತನಿಖೆ ಇನ್ನೂ ಆರಂಭದ ಹಂತದಲ್ಲಿದೆ
5)ಡಿಕೆಶಿ ಹಾಗೂ ಉಳಿದ ಆರೋಪಿಗಳ ವಿಚಾರಣೆಯೂ ನಡೆಯುತ್ತಿದೆ
6)ಡಿಕೆ ಶಿವಕುಮಾರ್ ಅವರನ್ನು ಬಿಡುಗಡೆ ಮಾಡಿದರೆ ತನಿಖೆಗೆ ತೊಂದರೆ ಆಗಬಹುದು
7)ಡಿಕೆ ಶಿವಕುಮಾರ್ ಪ್ರಭಾವಿ ವ್ಯಕ್ತಿಯಾಗಿದ್ದರಿಂದ ಸಾಕ್ಷ್ಯ ನಾಶಪಡಿಸಬಹುದು
No comments yet.
Leave a comment