ಕುಟುಂಬ ವೆಚ್ಚಕ್ಕಾಗಿ ಹಣ ಹಿಂಪಡೆಯಲು ಹಫೀಜ್ ಸಯೀದ್ಗೆ ಅನುಮತಿ
ಪಾಕಿಸ್ತಾನದ ಕೋರಿಕೆಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಮಿತಿ ಅಸ್ತು
ನವದೆಹಲಿ: ಕುಟುಂಬ ನಿರ್ವಹಣೆಗಾಗಿ ’ಮೂಲಭೂತ ವೆಚ್ಚಗಳನ್ನು’ ಭರಿಸಲು ತನ್ನ ಬ್ಯಾಂಕ್ ಖಾತೆಯನ್ನು ಬಳಸಲು ಲಷ್ಕರ್ -ಇ-ತೊಯ್ಬಾ ಮುಖ್ಯಸ್ಥ ಹಫೀಜ್ ಸಯೀದ್ಗೆ ಅವಕಾಶ ನೀಡುವಂತೆ ಪಾಕಿಸ್ತಾನವು ಮಾಡಿದ ಮನವಿಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಭಯೋತ್ಪಾದನೆ ನಿಗ್ರಹ ಸಮಿತಿಯು 2019 ಸೆಪ್ಟೆಂಬರ್ 26ರ ಗುರುವಾರ ಅನುಮೋದನೆ ನೀಡಿತು.
‘ಹಫೀಜ್ ಸಯೀದ್, ಮೊಹಮ್ಮದ್ ಸಯೀದ್, ಹಾಜಿ ಮುಹಮ್ಮದ್ ಆಶ್ರಫ್ ಮತ್ತು ಝಫರ್ ಇಕ್ಬಾಲ್ ಅವರಿಗೆ ಕೆಲವೊಂದು ಮೂಲ ವೆಚ್ಚಗಳನ್ನು ಭರಿಸುವ ಸಲುವಾಗಿ ಬ್ಯಾಂಕ್ ಖಾತೆ ಬಳಸಲು ಅನುಮತಿ ನೀಡುವ ಪಾಕಿಸ್ತಾನಿ ಅಧಿಕಾರಿಗಳ ಉದ್ದೇಶವನ್ನು ಗೌರವಿಸುವ ಸಮಿತಿಯ ನಿರ್ಧಾರವನ್ನು ಇಸ್ಲಾಮಿಕ್ ರಿಪಬ್ಲಿಕ್ ಆಫ್ ಪಾಕಿಸ್ತಾನಕ್ಕೆ ಬರೆದ ತನ್ನ ಕರಡು ಪತ್ರದಲ್ಲಿ ತಿಳಿಸಿತು.
ಪಾಕಿಸ್ತಾನವು ಉಲ್ಲೇಖಿಸಿರುವ ಮೂಲಭೂತ ವೆಚ್ಚಗಳನ್ನು ಭರಿಸುವ ಪ್ರಸ್ತಾಪವನ್ನು ಸಮಿತಿಯು ಗೌರವಿಸುತ್ತದೆ ಎಂದು ಐಸಿಸ್, ಅಲ್ -ಖೈದಾ ಮತ್ತು ಸಂಬಂಧಪಟ್ಟ ವ್ಯಕ್ತಿಗಳು, ಮತ್ತಿತರ ಭಯೋತ್ಪಾದಕ ಗುಂಪುಗಳ ಜೊತೆ ವ್ಯವಹರಿಸುವ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿರ್ಣಯ ೧೨೬೭ರ ಸಮಿತಿಯು ನೀಡಿದ ಪತ್ರ ತಿಳಿಸಿತು.
ಹಫೀಜ್ ಸಯೀದ್ಗೆ ತನ್ನ ಬ್ಯಾಂಕ್ ಖಾತೆ ಬಳಸಲು ಅವಕಾಶ ನೀಡುವಂತೆ ಕೋರಿದ ಪಾಕಿಸ್ತಾನಿ ಮನವಿಗೆ ವಿಶ್ವಸಂಸ್ಥೆ ಸಮಿತಿಯ ಸದಸ್ಯರ ಅಥವಾ ವಿಶ್ವಸಂಸ್ಥೆಯ ಬೇರೆ ಯಾರೇ ಸದಸ್ಯರ ಆಕ್ಷೇಪವಿಲ್ಲ ಎಂದು ಪತ್ರದ ಟಿಪ್ಪಣಿ ತಿಳಿಸಿತು.
ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಸಮಿತಿಗೆ ಬರೆದ ಪತ್ರದಲ್ಲಿ ಪಾಕಿಸ್ತಾನವು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಸೂಚನೆಗೆ ಅನುಗುಣವಾಗಿ ಹಫೀಜ್ ಸಯೀದ್ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ. ಈ ಬ್ಯಾಂಕ್ ಖಾತೆಗಳಲ್ಲಿ ಆತ ಭಯೋತ್ಪಾದನೆ ವ್ಯವಹಾರಗಳಲ್ಲಿ ಪೂರ್ತಿಯಾಗಿ ತೊಡಗಿಕೊಳ್ಳುವುದಕ್ಕೆ ಮುಂಚಿತವಾಗಿ, ಉಪನ್ಯಾಸಕನಾಗಿದ್ದಾಗ ಪಡೆದ ನಿವೃತ್ತಿ ವೇತನದ ಮೊತ್ತವೂ ಸೇರಿದೆ. ಇದೀಗ ಆತನ, ಆತನ ಪತ್ನಿ, ಮಕ್ಕಳ ಕುಟುಂಬ ನಿರ್ವಹಣೆಯ ಮೂಲವೆಚ್ಚಗಳನ್ನು ಭರಿಸಲು ೧.೫೦ ಲಕ್ಷ ರೂಪಾಯಿಗಳ ಮೊತ್ತವನ್ನು ಬ್ಯಾಂಕಿನಿಂದ ಬಳಸಲು ಅನುಮತಿ ನೀಡಬೇಕು ಎಂದು ಪಾಕಿಸ್ತಾನವು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಸಮಿತಿಗೆ ಬರೆದ ಪತ್ರದಲ್ಲಿ ತಿಳಿಸಿತ್ತು.
ಹಫೀಜ್ ಸಯೀದ್ ಭಾರತದ ವಿವಿಧೆಡೆಗಳಲ್ಲಿ ಮತ್ತು ನೂರಾರು ಮಂದಿಯನ್ನು ಬಲಿ ತೆಗೆದುಕೊಂಡ ಮುಂಬೈ ಮೇಲಿನ ೨೬/೧೧ರ ದಾಳಿ ಆರೋಪಿಗಳಲ್ಲಿ ಪ್ರಮುಖನಾಗಿದ್ದು, ಪ್ರಕರಣದ ವಿಚಾರಣೆ ಎದುರಿಸಲು ಆತನನ್ನು ತನ್ನ ವಶಕ್ಕೆ ಒಪ್ಪಿಸುವಂತೆ ಭಾರತ ಆಗ್ರಹಿಸಿತ್ತು.
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರ ಜೊತೆಗೆ ವಿಶ್ವಸಂಸ್ಥೆ ಮಹಾ ಆಧಿವೇಶನದಲ್ಲಿ ಪಾಲ್ಗೊಂಡಿರುವ ವೇಳೆಯಲ್ಲೇ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಭಯೋತ್ಪಾದನೆಗೆ ಸಂಬಂಧಿಸಿದ ಸಮಿತಿಯು ಈ ಪತ್ರ ನೀಡಿರುವುದು ಮಹತ್ವದ ವಿಚಾರವಾಗಿದೆ.
ಭಾರತವು ಪಾಕಿಸ್ತಾನದ ಜೊತೆಗೆ ಮಾತುಕತೆ ನಡೆಸಲು ಇಚ್ಛಿಸಿದೆ, ಆದರೆ ಆ ರಾಷ್ಟ್ರವು ಭಾರತವನ್ನು ಗುರಿಯಾಗಿಟ್ಟುಕೊಂಡು ಭಯೋತ್ಪಾದಕ ಸಂಘಟನೆಗಳಿಗೆ ಬೆಂಬಲ ನೀಡುವವರೆಗೆ ಆ ರಾಷ್ಟ್ರದ ಜೊತೆಗೆ ಮಾತುಕತೆ ನಡೆಸಲು ಸಾಧ್ಯವಿಲ್ಲ ಎಂದು ಜೈಶಂಕರ್ ಹೇಳಿದ್ದರು.
No comments yet.
Leave a comment