ಬಿಜೆಪಿ-ಶಿವಸೇನೆ ಜಗಳಕ್ಕೆ ‘ಮಹಾ’ ರೈತನ ವಿಶಿಷ್ಟ ಪರಿಹಾರ
‘ಅವರ ಜಗಳ ಮುಗಿವವರೆಗೆ ನಾನೇ ಮುಖ್ಯಮಂತ್ರಿ ಆಗುತ್ತೇನೆ..!’
ಔರಂಗಾಬಾದ್: ಆಡಳಿತಾರೂಢ ಎನ್ಡಿಎ ಮೈತ್ರಿಕೂಟದ ಅಂಗಪಕ್ಷಗಳಾದ ಬಿಜೆಪಿ ಮತ್ತು ಶಿವಸೇನೆ ಅಧಿಕಾರ ಹಂಚಿಕೆ ಮತ್ತು ಮುಂದಿನ ಸರ್ಕಾರ ರಚನೆಯ ಬಗೆಗಿನ ತಮ್ಮ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುವವರೆಗೆ ‘ನಾನೇ ಮುಖ್ಯಮಂತ್ರಿಯಾಗುತ್ತೇನೆ, ಅವಕಾಶ ಕೊಡಿ’ ಎಂದು ಹೇಳುವ ಮೂಲಕ ಮಹಾರಾಷ್ಟ್ರದ ಬೀಡ್ ಜಿಲ್ಲೆಯ ರೈತರೊಬ್ಬರು ಆಡಳಿತಾರೂಢ ಮೈತ್ರಿಕೂಟದ ‘ಜಗಳ’ಕ್ಕೆ ವಿಶಿಷ್ಟ ಪರಿಹಾರ ಸೂಚಿಸಿದರು.
ಕೇಜ್ತಾಲ್ಲೂಕಿನ ವಡ್ಮೌಲಿ ನಿವಾಸಿ ಶ್ರೀಕಾಂತ್ ವಿಷ್ಣು ಗಡಲೆ ಎಂಬ ರೈತ 2019ರ ಅಕ್ಟೋಬರ್ 31ರ ಗುರುವಾರ ಬೀಡ್ ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಿದ ಪತ್ರದಲ್ಲಿ ಈ ಪರಿಹಾರವನ್ನು ಸಲಹೆ ಮಾಡಿದರು.
ವಿಧಾನಸಭಾ ಚುನಾವಣಾ ಫಲಿತಾಂಶದ ನಂತರ ಭುಗಿಲೆದ್ದಿರುವ ಮುಖ್ಯಮಂತ್ರಿ ಹುದ್ದೆಗೆ ಸಂಬಂಧಿಸಿದ ತಮ್ಮ ಸಮಸ್ಯೆಯನ್ನು ಶಿವಸೇನೆ ಮತ್ತು ಬಿಜೆಪಿ ಇನ್ನೂ ಬಗೆಹರಿಸಿಕೊಂಡಿಲ್ಲ ಎಂದು ಅವರು ಪತ್ರದಲ್ಲಿ ಅಸಮಾಧಾನ ವ್ಯಕ್ತ ಪಡಿಸಿದರು.
“ನೈಸರ್ಗಿಕ ವಿಪತ್ತುಗಳು (ಅಕಾಲಿಕ ಮಳೆ) ರಾಜ್ಯದಲ್ಲಿ ಕೊಯ್ಲು ಮಾಡಲು ಸಿದ್ಧವಾದ ಬೆಳೆಗಳಿಗೆ ಅಡ್ಡಿಯಾಗಿದೆ. ಈ ವಿಪತ್ತುಗಳ ಬಗ್ಗೆ ರೈತರು ಉದ್ವಿಗ್ನರಾಗಿದ್ದಾರೆ. ರೈತರು ಬಳಲುತ್ತಿರುವ ಈ ಸಮಯದಲ್ಲಿ, ಶಿವಸೇನೆ ಮತ್ತು ಬಿಜೆಪಿ ಮುಖ್ಯಸ್ಥರಿಗೆ ತಮ್ಮ ‘ಅಧಿಕಾರದ ಸಮಸ್ಯೆಯನ್ನು’ ಪರಿಹರಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ಟೀಕಿಸಿದರು.
“ಆದ್ದರಿಂದ, ಇವರ ಸಮಸ್ಯೆ ಬಗೆಹರಿಯುವವರೆಗೆ, ರಾಜ್ಯಪಾಲರು ಮುಖ್ಯಮಂತ್ರಿ ಹುದ್ದೆಯ ಜವಾಬ್ದಾರಿಯನ್ನು ನನಗೆ ಹಸ್ತಾಂತರಿಸಬೇಕು” ಎಂದು ಗಡಾಲೆ ಹೇಳಿದ್ದಾರೆ. ‘ನಾನು ರೈತರ ಸಮಸ್ಯೆಗಳನ್ನು ಬಗೆಹರಿಸಿ ಅವರಿಗೆ ನ್ಯಾಯ ನೀಡುತ್ತೇನೆ’ ಎಂದು ಗಡಾಲೆ ತಿಳಿಸಿದರು.
‘ಆಡಳಿತವು ನನ್ನ ಪತ್ರವನ್ನು ಗಮನಿಸದಿದ್ದರೆ, ಪ್ರಜಾತಾಂತ್ರಿಕ ವಿಧಾನಗಳ ಮೂಲಕ ಪ್ರತಿಭಟನೆ ಮಾಡುವೆ’ ಎಂದೂ ರೈv ತಮ್ಮ ಪತ್ರದಲ್ಲಿ ದರು.
ಮುಖ್ಯಮಂತ್ರಿ ಹುದ್ದೆಯನ್ನು ತಲಾಎರಡೂವರೆ ವರ್ಷ ಹಂಚಿಕೊಳ್ಳಬೇಕು ಮತ್ತು ಅಧಿಕಾರವನ್ನು ೫೦:೫೦ ಸೂತ್ರದಂತೆ ಹಂಚಿಕೆ ಮಾಡಬೇಕು ಎಂದು ಶಿವಸೇನೆ ಆಗ್ರಹಿಸುತ್ತಿದೆ. ಈ ಎರಡೂ ಬೇಡಿಕೆಗಳನ್ನು ಬಿಜೆಪಿ ತಿರಸ್ಕರಿಸಿದೆ. ಮುಂದಿನ ಐದು ವರ್ಷಗಳವರೆಗೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ಅವರು ಈ ಹುದ್ದೆಯಲ್ಲಿ ಮುಂದುವರಿಯುವುದಾಗಿಯೂ ಬಿಜೆಪಿ ಹೇಳಿದೆ.
ಶಿವಸೇನೆಯು ಕಾಂಗ್ರೆಸ್ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಜೊತೆಗೂ ಮಾತುಕತೆ ನಡೆಸುತ್ತಿದ್ದು, ಗುರುವಾರ ರಾತ್ರಿ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ಅವರನ್ನೂ ಶಿವಸೇನಾ ನಾಯಕ ಸಂಜಯ್ ರಾವತ್ ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಬಿಜೆಪಿ ಒಪ್ಪಂದ ಪಾಲಿಸದೇ ಇದ್ದಲ್ಲಿ ‘ಇತರ ರಾಜಕೀಯ ಮಾರ್ಗಗಳು ನಮ್ಮ ಮುಂದಿವೆ’ ಎಂದು ಹೇಳಿದ್ದಾರೆ.
ಶುಕ್ರವಾರ ಸುದ್ದಿ ಸಂಸ್ಥೆ ಒಂದರ ಜೊತೆಗೆ ಮಾತನಾಡಿದ ಶರದ್ ಪವಾರ್ಅವರು ರಾವತ್ ಅವರು ತಮ್ಮನ್ನು ಭೇಟಿ ಮಾಡಿದ್ದನ್ನು ದೃಢ ಪಡಿಸಿದರು. ಆದರೆ ರಾಜಕೀಯದ ವಿಷಯ ಚರ್ಚಿಸಿಲ್ಲ, ರಾವತ್ ಆಗಾಗ ತಮ್ಮನ್ನು ಭೇಟಿ ಮಾಡುತ್ತಿರುತ್ತಾರೆ’ ಎಂದು ಹೇಳಿದರು. ಬಿಜೆಪಿ ಮಾತಿಗೆ ಬದ್ಧವಾಗಿರಬೇಕು ಎಂಬ ಮಾತನ್ನೂ ಪವಾರ್ ಹೇಳಿದರು.
ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ತಮ್ಮೊಂದಿಗೆ ಮಾತನಾಡಿದ್ದಾರೆ ಎಂಬ ವರದಿಗಳನ್ನು ಕೂಡಾ 2019 ನವೆಂಬರ್ 1ರ ಶುಕ್ರವಾರ ರಾತ್ರಿ ತಳ್ಳಿಹಾಕಿದ ಶರದ್ ಪವಾರ್ ಶಿವಸೇನೆಯಿಂದ ಯಾವ ಪ್ರಸ್ತಾವೂ ಬಂದಿಲ್ಲ ಎಂದು ಹೇಳಿದರು.
No comments yet.
Leave a comment