SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

೨೫,೦೦೦ ರೂ ಉಳಿಸಲು ಮೇಲ್ಮನವಿ, ಲಕ್ಷಾಂತರ ರೂ ವೆಚ್ಚ!

01 supreme courtಕೇರಳ ಸರ್ಕಾರಕ್ಕೆ ಸುಪ್ರೀಂಕೋರ್ಟ್  ತಪರಾಕಿ

ನವದೆಹಲಿ: ೨೫,೦೦೦ ರೂಪಾಯಿಗಳ ಜುಜುಬಿ ದಂಡದ ಹಣವನ್ನು ಉಳಿಸುವ ಸಲುವಾಗಿ ಲಕ್ಷಾಂತರ ರೂಪಾಯಿಗಳನ್ನು ಖಟ್ಲೆಗಾಗಿ ವೆಚ್ಚ ಮಾಡಿದ ಕೇರಳ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಚಾಟಿ ಬೀಸಿತು.

ಕೇರಳ ಸರ್ಕಾರವು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ’ಇಂತಹ ಕ್ಷುಲ್ಲಕ ಮತ್ತು ಅನಗತ್ಯ ಪ್ರಕರಣ’ ದಾಖಲಿಸಿದ್ದಕ್ಕಾಗಿ ಅದನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು. ಇಂತಹ ದುಸ್ಸಾಹಸಗಳನ್ನು ಮಾಡುವುದರ ವಿರುದ್ಧ ಕಠಿಣ ಎಚ್ಚರಿಕೆ ನೀಡಿತು.

‘ಭವಿಷ್ಯದಲ್ಲಿ ಕೇರಳ ಸರ್ಕಾರದಿಂದ ಇಂತಹ ಅರ್ಜಿ ಸಲ್ಲಿಕೆಯಾದರೆ ನಾವು ಭಾರೀ ದಂಡ ವಿಧಿಸಬೇಕಾಗುತ್ತದೆ ಎಂಬದಾಗಿ ನಾವು ಸ್ಪಷ್ಟ ಪಡಿಸಬಯಸುತ್ತೇವೆ’ ಎಂದು ಸುಪ್ರೀಂಕೋರ್ಟ್ ಇತ್ತೀಚೆಗೆ ನೀಡಿದ ತನ್ನ ಆದೇಶದಲ್ಲಿ ಎಚ್ಚರಿಸಿತು.

ಹೈಕೋರ್ಟ್ ತೀರ್ಪೊಂದನ್ನು ಪ್ರಶ್ನಿಸಿ ರಾಜ್ಯ ಸರ್ಕಾರವು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ವೇಳೆಯಲ್ಲಿ ಸುಪ್ರೀಂಕೋರ್ಟ್ ಕೇರಳ ಸರ್ಕಾರವನ್ನು ಈ ರೀತಿ ಕಟುವಾಗಿ ತರಾಟೆಗೆ ತೆಗೆದುಕೊಂಡಿತು.

ಎರಡು ದಿನಾಂಕಗಳಲ್ಲಿ ಆರೋಪಿಯನ್ನು ಹಾಜರು ಪಡಿಸಲು ರಾಜ್ಯ ಸರ್ಕಾರ ವಿಫಲವಾದ ಬಳಿಕ ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರು ದುಬೈಯಿಂದ ಸಾಕ್ಷ ನೀಡುವ ಸಲುವಾಗಿ ಬಂದಿದ್ದ ಸಾಕ್ಷಿದಾರನಿಗೆ ೨೫,೦೦೦ ರೂಪಾಯಿಗಳನ್ನು ಪಾವತಿ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಆಜ್ಞಾಪಿಸಿದ್ದರು. ಆರೋಪಿ ಹಾಜರಿಲ್ಲದ ಕಾರಣ ಸಾಕ್ಷ್ಯ ನೀಡಿಕೆಯನ್ನು ಮುಂದೂಡಬೇಕಾಗಿ ಬಂದಿತ್ತು.

ವಿಚಾರಣಾ ನ್ಯಾಯಾಧೀಶರ ಈ ಆದೇಶದ ವಿರುದ್ಧ ಕೇರಳ ಸರ್ಕಾರವು ಹೈಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿತು. ವಿಚಾರಣಾ ನ್ಯಾಯಾಧೀಶರ ಆದೇಶವು ಸರಿಯಾಗಿಯೇ ಇದೆ ಎಂದು ಹೇಳಿ ಹೈಕೋರ್ಟ್ ಅದನ್ನು ಎತ್ತಿ ಹಿಡಿಯಿತು.

ವಿಚಾರಣಾ ನ್ಯಾಯಾಧೀಶರ ಆದೇಶವನ್ನು ಎತ್ತಿ ಹಿಡಿದ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರವು ಸುಪ್ರೀಂಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿತು. ಮತ್ತು ತನ್ಮೂಲಕ, ೨೫,೦೦೦ ರೂಪಾಯಿಗಳನ್ನು ಉಳಿಸಲು ಖಟ್ಲೆಗಳಿಗಾಗಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡುವ ಮಾರ್ಗವನ್ನು ಆರಿಸಿಕೊಂಡಿತು.

ಈ ಅರ್ಜಿಯು ಸುಪ್ರೀಂಕೋರ್ಟಿನ ಮುಂದೆ ವಿಚಾರಣೆಗೆ ಬಂದಾಗ, ಇಂತಹ ಖಟ್ಲೆಗಳಿಗಾಗಿ ಸರ್ಕಾರಿ ಬೊಕ್ಕಸದಿಂದ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡುವಂತೆ ಕೆಲವು ಅಧಿಕಾರಿಗಳು ಮತ್ತು ವಕೀಲರು ಮಾಡುವ ಸಲಹೆಯನ್ನು ನ್ಯಾಯಮೂರ್ತಿಗಳು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

‘ರಾಜ್ಯ ಸರ್ಕಾರವು ಮೊದಲಿಗೆ ವಿಚಾರಣಾ ನ್ಯಾಯಾಧೀಶರ ಆದೇಶವನ್ನು ಹೈಕೋರ್ಟಿನ ಮುಂದೆ ಪ್ರಶ್ನಿಸಿತು. ಈಗ ನಮ್ಮ ಮುಂದೆ ಈ ಅರ್ಜಿ ಬಂದಿದೆ. ಇಂತಹ ಕ್ಷುಲ್ಲಕ ಅರ್ಜಿಗಾಗಿ ಲಕ್ಷಾಂತರ ರೂಪಾಯಿಗಳು ವೆಚ್ಚವಾಗಿರಬಹುದು. ಈ ಅರ್ಜಿಯನ್ನು ವಜಾಗೊಳಿಸಲಾಗಿದೆ’ ಎಂದು ಸುಪ್ರೀಂಕೋರ್ಟ್ ಪೀಠವು ಹೇಳಿತು.

ಭವಿಷ್ಯದಲ್ಲಿ ಇಂತಹ ಕ್ಷುಲ್ಲಕ ಅರ್ಜಿಗಳನ್ನು ಸಲ್ಲಿಸದಂತೆ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಸುಪ್ರೀಂಕೋರ್ಟ್ ಇಂತಹ ಮೇಲ್ಮನವಿಗಳಿಗೆ ಭಾರೀ ದಂಡ ವಿಧಿಸಲಾಗುವುದು ಎಂದು ಹೇಳಿತು.

November 1, 2019 Posted by | ಆರ್ಥಿಕ, ಭಾರತ, ರಾಷ್ಟ್ರೀಯ, ಸುಪ್ರೀಂಕೋರ್ಟ್, Finance, Flash News, General Knowledge, India, Nation, News, Spardha, supreme court | , , , , | Leave a comment

ಬಿಜೆಪಿ-ಶಿವಸೇನೆ ಜಗಳಕ್ಕೆ ‘ಮಹಾ’ ರೈತನ ವಿಶಿಷ್ಟ ಪರಿಹಾರ

01 farmer srikant gadale‘ಅವರ ಜಗಳ ಮುಗಿವವರೆಗೆ ನಾನೇ ಮುಖ್ಯಮಂತ್ರಿ ಆಗುತ್ತೇನೆ..!’

ಔರಂಗಾಬಾದ್: ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟದ ಅಂಗಪಕ್ಷಗಳಾದ ಬಿಜೆಪಿ ಮತ್ತು ಶಿವಸೇನೆ ಅಧಿಕಾರ ಹಂಚಿಕೆ ಮತ್ತು ಮುಂದಿನ ಸರ್ಕಾರ ರಚನೆಯ ಬಗೆಗಿನ ತಮ್ಮ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುವವರೆಗೆ  ‘ನಾನೇ ಮುಖ್ಯಮಂತ್ರಿಯಾಗುತ್ತೇನೆ, ಅವಕಾಶ ಕೊಡಿ’ ಎಂದು ಹೇಳುವ ಮೂಲಕ ಮಹಾರಾಷ್ಟ್ರದ ಬೀಡ್ ಜಿಲ್ಲೆಯ ರೈತರೊಬ್ಬರು ಆಡಳಿತಾರೂಢ ಮೈತ್ರಿಕೂಟದ ‘ಜಗಳ’ಕ್ಕೆ ವಿಶಿಷ್ಟ ಪರಿಹಾರ ಸೂಚಿಸಿದರು.

ಕೇಜ್‌ತಾಲ್ಲೂಕಿನ ವಡ್ಮೌಲಿ ನಿವಾಸಿ ಶ್ರೀಕಾಂತ್ ವಿಷ್ಣು ಗಡಲೆ ಎಂಬ ರೈತ 2019ರ ಅಕ್ಟೋಬರ್ 31ರ ಗುರುವಾರ ಬೀಡ್ ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಿದ ಪತ್ರದಲ್ಲಿ ಈ ಪರಿಹಾರವನ್ನು ಸಲಹೆ ಮಾಡಿದರು.

ವಿಧಾನಸಭಾ ಚುನಾವಣಾ ಫಲಿತಾಂಶದ ನಂತರ ಭುಗಿಲೆದ್ದಿರುವ ಮುಖ್ಯಮಂತ್ರಿ ಹುದ್ದೆಗೆ ಸಂಬಂಧಿಸಿದ ತಮ್ಮ ಸಮಸ್ಯೆಯನ್ನು ಶಿವಸೇನೆ ಮತ್ತು ಬಿಜೆಪಿ ಇನ್ನೂ ಬಗೆಹರಿಸಿಕೊಂಡಿಲ್ಲ ಎಂದು ಅವರು ಪತ್ರದಲ್ಲಿ ಅಸಮಾಧಾನ ವ್ಯಕ್ತ ಪಡಿಸಿದರು.

“ನೈಸರ್ಗಿಕ ವಿಪತ್ತುಗಳು (ಅಕಾಲಿಕ ಮಳೆ) ರಾಜ್ಯದಲ್ಲಿ ಕೊಯ್ಲು ಮಾಡಲು ಸಿದ್ಧವಾದ ಬೆಳೆಗಳಿಗೆ ಅಡ್ಡಿಯಾಗಿದೆ. ಈ ವಿಪತ್ತುಗಳ ಬಗ್ಗೆ ರೈತರು ಉದ್ವಿಗ್ನರಾಗಿದ್ದಾರೆ. ರೈತರು ಬಳಲುತ್ತಿರುವ ಈ ಸಮಯದಲ್ಲಿ, ಶಿವಸೇನೆ ಮತ್ತು ಬಿಜೆಪಿ ಮುಖ್ಯಸ್ಥರಿಗೆ ತಮ್ಮ ‘ಅಧಿಕಾರದ ಸಮಸ್ಯೆಯನ್ನು’  ಪರಿಹರಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ಟೀಕಿಸಿದರು.

“ಆದ್ದರಿಂದ, ಇವರ ಸಮಸ್ಯೆ ಬಗೆಹರಿಯುವವರೆಗೆ, ರಾಜ್ಯಪಾಲರು ಮುಖ್ಯಮಂತ್ರಿ ಹುದ್ದೆಯ ಜವಾಬ್ದಾರಿಯನ್ನು ನನಗೆ ಹಸ್ತಾಂತರಿಸಬೇಕು” ಎಂದು ಗಡಾಲೆ ಹೇಳಿದ್ದಾರೆ. ‘ನಾನು ರೈತರ ಸಮಸ್ಯೆಗಳನ್ನು ಬಗೆಹರಿಸಿ ಅವರಿಗೆ ನ್ಯಾಯ ನೀಡುತ್ತೇನೆ’ ಎಂದು ಗಡಾಲೆ ತಿಳಿಸಿದರು.

‘ಆಡಳಿತವು ನನ್ನ ಪತ್ರವನ್ನು ಗಮನಿಸದಿದ್ದರೆ, ಪ್ರಜಾತಾಂತ್ರಿಕ ವಿಧಾನಗಳ ಮೂಲಕ ಪ್ರತಿಭಟನೆ ಮಾಡುವೆ’ ಎಂದೂ ರೈv ತಮ್ಮ ಪತ್ರದಲ್ಲಿ ದರು.

ಮುಖ್ಯಮಂತ್ರಿ ಹುದ್ದೆಯನ್ನು  ತಲಾಎರಡೂವರೆ  ವರ್ಷ ಹಂಚಿಕೊಳ್ಳಬೇಕು ಮತ್ತು ಅಧಿಕಾರವನ್ನು ೫೦:೫೦ ಸೂತ್ರದಂತೆ ಹಂಚಿಕೆ ಮಾಡಬೇಕು ಎಂದು ಶಿವಸೇನೆ ಆಗ್ರಹಿಸುತ್ತಿದೆ.  ಈ ಎರಡೂ ಬೇಡಿಕೆಗಳನ್ನು ಬಿಜೆಪಿ ತಿರಸ್ಕರಿಸಿದೆ. ಮುಂದಿನ ಐದು ವರ್ಷಗಳವರೆಗೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ಅವರು ಈ ಹುದ್ದೆಯಲ್ಲಿ ಮುಂದುವರಿಯುವುದಾಗಿಯೂ ಬಿಜೆಪಿ ಹೇಳಿದೆ.

ಶಿವಸೇನೆಯು ಕಾಂಗ್ರೆಸ್ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಜೊತೆಗೂ ಮಾತುಕತೆ ನಡೆಸುತ್ತಿದ್ದು, ಗುರುವಾರ ರಾತ್ರಿ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್‌ಅವರನ್ನೂ ಶಿವಸೇನಾ ನಾಯಕ ಸಂಜಯ್ ರಾವತ್ ಭೇಟಿ ಮಾಡಿ  ಮಾತುಕತೆ ನಡೆಸಿದ್ದು, ಬಿಜೆಪಿ ಒಪ್ಪಂದ ಪಾಲಿಸದೇ ಇದ್ದಲ್ಲಿ ‘ಇತರ ರಾಜಕೀಯ ಮಾರ್ಗಗಳು ನಮ್ಮ ಮುಂದಿವೆ’ ಎಂದು ಹೇಳಿದ್ದಾರೆ.

ಶುಕ್ರವಾರ ಸುದ್ದಿ ಸಂಸ್ಥೆ ಒಂದರ ಜೊತೆಗೆ ಮಾತನಾಡಿದ ಶರದ್ ಪವಾರ್‌ಅವರು ರಾವತ್ ಅವರು ತಮ್ಮನ್ನು ಭೇಟಿ ಮಾಡಿದ್ದನ್ನು ದೃಢ ಪಡಿಸಿದರು.  ಆದರೆ ರಾಜಕೀಯದ ವಿಷಯ ಚರ್ಚಿಸಿಲ್ಲ, ರಾವತ್ ಆಗಾಗ ತಮ್ಮನ್ನು ಭೇಟಿ ಮಾಡುತ್ತಿರುತ್ತಾರೆ’ ಎಂದು ಹೇಳಿದರು.  ಬಿಜೆಪಿ ಮಾತಿಗೆ ಬದ್ಧವಾಗಿರಬೇಕು ಎಂಬ ಮಾತನ್ನೂ ಪವಾರ್ ಹೇಳಿದರು.

ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ತಮ್ಮೊಂದಿಗೆ ಮಾತನಾಡಿದ್ದಾರೆ ಎಂಬ ವರದಿಗಳನ್ನು ಕೂಡಾ 2019 ನವೆಂಬರ್ 1ರ ಶುಕ್ರವಾರ ರಾತ್ರಿ ತಳ್ಳಿಹಾಕಿದ ಶರದ್ ಪವಾರ್ ಶಿವಸೇನೆಯಿಂದ ಯಾವ ಪ್ರಸ್ತಾವೂ ಬಂದಿಲ್ಲ ಎಂದು ಹೇಳಿದರು.

November 1, 2019 Posted by | Agriculture, ಆರ್ಥಿಕ, ಭಾರತ, ರಾಷ್ಟ್ರೀಯ, Finance, Flash News, General Knowledge, India, Nation, News, Politics, Spardha | , , , , , | Leave a comment

ಜಮ್ಮು-ಕಾಶ್ಮೀರದ ಕುಲಗಮ್​ ಜಿಲ್ಲೆಯಲ್ಲಿ ಉಗ್ರರ ದಾಳಿ: 5 ಕಾಶ್ಮೀರೇತರ ಕಾರ್ಮಿಕರ ಹತ್ಯೆ

29 Kashmir labourers killed
ಜಮ್ಮು
: ಕಣಿವೆ ರಾಜ್ಯದಲ್ಲಿ ಉಗ್ರರ ಅಟ್ಟಹಾಸ ಅತಿಯಾಗಿದ್ದು, 2019 ಅಕ್ಟೋಬರ್ 29ರ ಮಂಗಳವಾರ ಸಂಜೆ ಜಮ್ಮು ಕಾಶ್ಮೀರದ ಕುಲಗಮ್  ಜಿಲ್ಲೆಯಲ್ಲಿ ಉಗ್ರರ ದಾಳಿಗೆ 5 ಮಂದಿ ಕಾಶ್ಮೀರೇತರ ಕಾರ್ಮಿಕರು ಸಾವನ್ನಪ್ಪಿದರು.  ದಾಳಿಯಲ್ಲಿ ಓರ್ವ ಕಾರ್ಮಿಕ ಗಂಭೀರ ಗಾಯಗೊಂಡಿದ್ಧಾನೆ ಎಂದು ಪೊಲೀಸರು ತಿಳಿಸಿದರು.

ಗಾಯಾಳುವನ್ನು ಪಶ್ಚಿಮ ಬಂಗಾಳ ಮೂಲದ ದಿನಗೂಲಿ ಕಾರ್ಮಿಕ ಜಹುರುದ್ದೀನ್​ ಎಂದು ಗುರುತಿಸಲಾಗಿದ್ದು, ದಾಳಿ ನಡೆದಾಗ ಈತ ಕತ್ರಾಸು ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿದ್ದ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಯಿತು.

ಐರೋಪ್ಯ  ಒಕ್ಕೂಟದ ಶಾಸನಕರ್ತರ ತಂಡವು ಜಮ್ಮು ಕಾಶ್ಮೀರಕ್ಕೆ ಆಗಮಿಸಿದ ದಿನವೇ ಉಗ್ರರ ದಾಳಿಗಳು ನಡೆದವು. ಈದಿನ ಸಂಜೆ ಪುಲ್ವಾಮಾದಲ್ಲಿ ಪರೀಕ್ಷಾ ಕೇಂದ್ರದ ಹೊರಗೆ ಉಗ್ರರು ಭದ್ರತಾ ಪಡೆ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದರು. ಯಾವುದೇ ಸಾವು-ನೋವು ಸಂಭವಿಸಿರಲಿಲ್ಲ.

ಜಮ್ಮು ಕಾಶ್ಮೀರದಲ್ಲಿ ಆಗಸ್ಟ್​  5ರಂದು 370ನೇ ವಿಧಿಯನ್ನು ಕೇಂದ್ರ ಸರ್ಕಾರ ರದ್ದುಪಡಿಸಿತ್ತು. ಅಂದಿನಿಂದ ಉಗ್ರರು ಲಾರಿ ಚಾಲಕರು, ಕಾರ್ಮಿಕರು ಮತ್ತು ವ್ಯಾಪಾರಿಗಳನ್ನೇ ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿದ್ದಾರೆ. ಅದರಲ್ಲೂ ಹೊರರಾಜ್ಯಗಳಿಂದ ಕಣಿವೆಗೆ ಬಂದಿರುವ ಕಾಶ್ಮೀರೇತರರ ಮೇಲೆ ದಾಳಿ ನಡೆಸುತ್ತಿದ್ಧಾರೆ.

ಹಿಂದಿನ ದಿನ  ಉಗ್ರರು ಉಧಮ್​ಪುರ ಜಿಲ್ಲೆ ಮೂಲದ ಟ್ರಕ್​ ಚಾಲಕನನ್ನು ಅನಂತ​ನಾಗ್​ ಜಿಲ್ಲೆಯಲ್ಲಿ ಹತ್ಯೆ ಮಾಡಿದ್ದರು. ಅ.24ರಂದು ಉಗ್ರರು ಶೋಪಿಯಾನ್​ ಜಿಲ್ಲೆಯಲ್ಲಿ ಇಬ್ಬರು ಕಾಶ್ಮೀರೇತರ ಟ್ರಕ್​ ಚಾಲಕರನ್ನು ಕೊಂದಿದ್ದರು.

October 29, 2019 Posted by | ಭಯೋತ್ಪಾದಕ, ಭಾರತ, ರಾಷ್ಟ್ರೀಯ, Flash News, General Knowledge, India, Nation, News, Spardha, Terror | , , , | Leave a comment

೫.೪ ಲಕ್ಷ ಹಣತೆಗಳ ಬೆಳಕಿನಲ್ಲಿ ಅಯೋಧ್ಯೆ ಝಗಮಗ, ಹೊಸ ವಿಶ್ವದಾಖಲೆ ಸೃಷ್ಟಿ

This slideshow requires JavaScript.

ದೀಪೋತ್ಸವಕ್ಕೆ ಸಾಕ್ಷಿಯಾದ ಸಿಎಂ ಯೋಗಿ ಆದಿತ್ಯನಾಥ್

ನವದೆಹಲಿ/ ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯ ಸರಯೂ ನದಿ ದಂಡೆಯಲ್ಲಿನ ’ರಾಮ್ ಕಿ ಪೈದಿ’2019 ಅಕ್ಟೋಬರ್ 26ರ  ಶನಿವಾರ ಬೆಳಕಿನ ಹಬ್ಬವಾದ ’ದೀಪೋತ್ಸವ’ದಲ್ಲಿ ೫ ಲಕ್ಷಕ್ಕೂ ಹೆಚ್ಚು ಮಣ್ಣಿನ ಹಣತೆಗಳ ದೀಪಗಳ ಬೆಳಕಿನಲ್ಲಿ ಝಗಮಗಿಸಿತು. ಇದರೊಂದಿಗೆ ಹೊಸ ವಿಶ್ವದಾಖಲೆಯೂ ಸೃಷ್ಟಿಯಾಯಿತು.

ರಾಜ್ಯದ ಬಿಜೆಪಿ ಸರ್ಕಾರವು ಆಯೋಜಿಸಿದ ದೀಪೋತ್ಸವದ ಅಂಗವಾಗಿ ಅಯೋಧ್ಯೆಯನ್ನು ಝಗಮಗಿಸುವಂತೆ ಮಾಡಿದ ಈ ಸಂಭ್ರಮಕ್ಕೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಾಕ್ಷಿಯಾದರು.

ಈ ವರ್ಷದ ದೀಪೋತ್ಸವದಲ್ಲಿ ಫಿಜಿಯ ಸಚಿವೆ ವೀಣಾ ಭಟ್ನಾಗರ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮೊದಲ ಹಣತೆಯನ್ನು ಬೆಳಗಿದರು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಜೊತೆಗೆ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಮತ್ತು ರಾಜ್ಯ ಸರ್ಕಾರದ ಹಲವಾರು ಸಚಿವರು ಈ ಸಂದರ್ಭದಲ್ಲಿ ಹಾಜರಿದ್ದರು.

‘ಲಕ್ಷ ದೀಪೋತ್ಸವ’ವನ್ನು ಕಣ್ತುಂಬಿಕೊಳ್ಳಲು ಸಹಸ್ರಾರು ಮಂದಿ ರಾಮ್ ಕಿ ಪೈದಿಯಲ್ಲಿ ಜಮಾಯಿಸಿದ್ದರು.

ಭಾರತೀಯ ಮೂಲದವರಾದ ಫಿಜಿಯ ಮಹಿಳೆಯರು, ಮಕ್ಕಳು ಮತ್ತು ದಾರಿದ್ರ್ಯ ನಿವಾರಣಾ ಸಹಾಯಕ ಸಚಿವೆ ವೀಣಾ ಭಟ್ನಾಗರ್ ಅವರು ಸಮಾರಂಭದಲ್ಲಿ ಪಾಲ್ಗೊಳ್ಳುವ ಸಲುವಾಗಿ ಶುಕ್ರವಾರ ಸಂಜೆಯೇ ಲಕ್ನೋ ತಲುಪಿದ್ದರು. ಈ ಸಂದರ್ಭದಲ್ಲಿ ಅವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಜೊತೆಗೆ ಸಂಕ್ಷಿಪ್ತ ಸಂಭಾಷಣೆ ನಡೆಸಿದರು.

೨೦೧೭ರ ಮಾರ್ಚ್ ತಿಂಗಳಲ್ಲಿ ಭಾರತೀಯ ಜನತಾ ಪಕ್ಷವು ಅಧಿಕಾರಕ್ಕೆ ಬಂದ ೭ ತಿಂಗಳ ಬಳಿಕ, ಯೋಗಿ ಆದಿತ್ಯನಾಥ್ ಸರ್ಕಾರವು ೨೦೧೭ರ ಅಕ್ಟೋಬರಿನಲ್ಲಿ ಮೊತ್ತ ಮೊದಲ ಬಾರಿಗೆ ಅಯೋಧ್ಯೆಯಲ್ಲಿ ದೀಪೋತ್ಸವವನ್ನು ಆಚರಿಸಿತ್ತು. ಕಳೆದ ವರ್ಷವೂ ದೀಪೋತ್ಸವ ನಡೆದಿತ್ತು. ದಕ್ಷಿಣ ಕೊರಿಯಾದ ಪ್ರಥಮ ಮಹಿಳೆ ಕಿಮ್ ಜುಂಗ್-ಸೂಕ್ ಅವರು ಮುಖ್ಯ ಅತಿಥಿಯಾಗಿ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಕಳೆದ ವರ್ಷ ೩೦೦,೧೫೨ ಹಣತೆಗಳನ್ನು ಬೆಳಗುವ ಮೂಲಕ ವಿಶ್ವದಾಖಲೆ ಸ್ಥಾಪಿಸಲಾಗಿತ್ತು. ಈ ವರ್ಷ ಈ ದಾಖಲೆಯನ್ನು ಮುರಿದು ಹೊಸ ಗಿನ್ನೆಸ್ ವಿಶ್ವದಾಖಲೆ ಸ್ಥಾಪಿಸುವ ಸಲುವಾಗಿ ಜಿಲ್ಲಾ ಆಡಳಿತವು ೫,೫೧,೦೦೦ ಮಣ್ಣಿನ ಹಣತೆಗಳನ್ನು ಬೆಳಗುವ ಕಾರ್‍ಯಕ್ರಮ ಹಮ್ಮಿಕೊಂಡಿತ್ತು.

ಯೋಜನೆಯ ಪ್ರಕಾರ ರಾಮ್ ಕಿ ಪೈದಿಯಲ್ಲಿ ಸುಮಾರು ೪ ಲಕ್ಷ ಮತ್ತು ದೇಗುಲ ನಗರಿಯ ಇತರ ಕಡೆಗಳಲ್ಲಿ ಉಳಿದ ಹಣತೆಗಳನ್ನು ಬೆಳಗಲಾಯಿತು.

ದೀಪೋತ್ಸವವನ್ನು ದಾಖಲಿಸಿಕೊಳ್ಳಲು ಗಿನ್ನೆಸ್ ವಿಶ್ವದಾಖಲೆಯ ತಂಡವೊಂದು ಕೂಡಾ ಅಯೋಧ್ಯೆಗೆ ಆಗಮಿಸಿತ್ತು.

ಹಣತೆಗಳನ್ನು ಬೆಳಗುವುದಕ್ಕೆ ಮುನ್ನ ಆದಿತ್ಯನಾಥ್ ಅವರ ಸಮ್ಮುಖದಲ್ಲಿ ಶ್ರೀರಾಮನ ಟ್ಯಾಬ್ಲೋ ಮೆರವಣಿಗೆಯನ್ನೂ ನಡೆಸಲಾಯಿತು.

ಮಧ್ಯಪ್ರದೇಶ, ಜಾರ್ಖಂಡ್ ಮತ್ತು ರಾಜಸ್ಥಾನದಂತಹ ವಿವಿಧ ರಾಜ್ಯಗಳ ಕಲಾವಿದರು ದೀಪೋತ್ಸವಕ್ಕಾಗಿ ಶ್ರೀರಾಮ, ಶ್ರೀಕೃಷ್ಣ ಮತ್ತು ಹನುಮಾನ್ ವೇಷಗಳನ್ನು ಧರಿಸಿ ವಿವಿಧ ಸಾಂಸ್ಕೃತಿಕ ಕಾರ್‍ಯಕ್ರಮಗಳ ಮೂಲಕ ಸಂಭ್ರಮಕ್ಕೆ ಕಳೆಗಟ್ಟಿದರು.

‘ಇಲ್ಲಿಗೆ ಬಂದಿರುವುದಕ್ಕೆ ಅತ್ಯಂತ ಖುಷಿಯಾಗುತ್ತಿದೆ. ಇದೊಂದು ಮಹಾನ್ ಅನುಭವ. ನಮಗೆ ಇಲ್ಲಿ ಹಲವಾರು ಮಂದಿಯನ್ನು ವಿವಿಧ ರಾಜ್ಯಗಳ ಕಲಾವಿದರನ್ನು ಭೇಟಿ ಮಾಡಲು ಸಾಧ್ಯವಾಯಿತು’ ಎಂದು ಕಲಾವಿದರೊಬ್ಬರು ಸುದ್ದಿ ಸಂಸ್ಥೆಯ ಬಳಿ ಮಾತನಾಡುತ್ತಾ ಹೇಳಿದರು.

ಅಮೋಘ ದೀಪೋತ್ಸವ ಸಂಭ್ರಮಕ್ಕಾಗಿ ಪ್ರದೇಶದ ನಿವಾಸಿಗಳಲ್ಲದೆ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರೂ ಆಗಮಿಸಿದ್ದರು.

‘ನಾವು ಇಲ್ಲಿಗೆ ಮಧ್ಯಪ್ರದೇಶದ ನೇಪಾನಗರದಿಂದ ಬಂದಿದ್ದೇವೆ. ದೀಪೋತ್ಸವದಲ್ಲಿ ಪಾಲ್ಗೊಂಡಿರುವುದು ನಮ್ಮಗೆ ಗೌರವದ ಸಂಗತಿಯಾಗಿದೆ. ನಾವು ಇಲ್ಲಿ ಭಗೋರಿಯಾ ಜಾನಪದ ನೃತ್ಯವನ್ನು ಪ್ರದರ್ಶಿಸುತ್ತಿದ್ದೇವೆ’ ಎಂದು ನೇಪಾನಗರ ಮೂಲಕ ನೃತ್ಯ ತಂಡದ ಅಧ್ಯಕ್ಷ ಮುಖೇಶ ದರ್ಬಾರ್ ಹೇಳಿದರು.

ಅಯೋಧ್ಯೆಯಲ್ಲಿ ಮೂರು ದಿನಗಳ ದೀಪೋತ್ಸವ ಸಂಭ್ರಮ ಗುರುವಾರ ಆರಂಭವಾಗಿತ್ತು. ಎರಡನೇ ದಿನ ಗುಪ್ತರ ಘಾಟ್ ಮತ್ತು ಭಜನಾಸ್ಥಳದಲ್ಲಿ ಹಲವಾರು ಸಾಂಸ್ಕೃತಿಕ ಕಾರ್‍ಯಕ್ರಮಗಳನ್ನು ಆಯೋಜಿಸಲಾಗಿತ್ತು. ಇಂಡೋನೇಷ್ಯ ಮತ್ತು ನೇಪಾಳದ ಕಲಾವಿದರು ರಾಮಲೀಲಾ ಪ್ರದರ್ಶಿಸಿದರು.

ಬಿಹಾರದ ಜಾನಪದ ಗೀತೆಗಳೂ ಮತ್ತು ಛತ್ತಿಸ್ ಗಢದ ಜಾನಪದ ನೃತ್ಯ ಎರಡನೇ ದಿನದ ಪ್ರಮುಖ ಆಕರ್ಷಣೆಗಳಾಗಿದ್ದವು.

ದೀಪಾವಳಿಯ ದಿನವಾದ ಭಾನುವಾರ ರಾಮಕೋಟ್ ಪ್ರದೇಶದಲ್ಲಿನ ಎಲ್ಲ ದೇವಾಲಯಗಳು ಮತ್ತು ರಾಮಜನ್ಮಭೂಮಿ-ಬಾಬರಿ ಮಸೀದಿ ಆವರಣದ ಸುತ್ತಮುತ್ತಣ ಮನೆಗಳಲ್ಲಿ ಸಂತರು ೧,೫೦,೦೦ ಹಣತೆಗಳನ್ನು ಬೆಳಗಲಿದ್ದಾರೆ.

ರಾಮ ಜನ್ಮಭೂಮಿ ನ್ಯಾಸವು ವಿವಾದಿತ ನಿವೇಶನ ಮತ್ತು ಸುತ್ತಮುತ್ತಣ ಜಾಗದಲ್ಲಿ ದೀಪಾವಳಿಯಂದು ಹಣತೆ ಬೆಳಗಲು ಅನುಮತಿ ನೀಡುವಂತೆ ಫೈಜಾಬಾದ್ ವಿಭಾಗದ ಡಿವಿಷನಲ್ ಕಮೀಷನರ್ ಅವರ ಬಳಿ ಅನುಮತಿ ಕೋರಿತ್ತು. ಆದರೆ ಅದಕ್ಕೆ ಅನುಮತಿ ನಿರಾಕರಿಸಲಾಗಿತ್ತು.

October 26, 2019 Posted by | ಅಯೋಧ್ಯೆ, ಭಾರತ, ರಾಷ್ಟ್ರೀಯ, culture, Festival, Flash News, General Knowledge, India, Nation, News, Spardha, Temples, Temples, ದೇವಾಲಯಗಳು | , , , , , , , | Leave a comment

ಜೆಜೆಪಿ+ ಪಕ್ಷೇತರರ ಬೆಂಬಲ: ಮರಳಿ ಅಧಿಕಾರಕ್ಕೆ ಏರಲು ಖಟ್ಟರ್ ಸಜ್ಜು

25 amith shah khattar dushyant choutala
ಬಿಜೆಪಿಯಿಂದ ಮುಖ್ಯಮಂತ್ರಿ, ಜೆಜೆಪಿಯಿಂದ ಉಪಮುಖ್ಯಮಂತ್ರಿ: ಅಮಿತ್ ಶಾ ಘೋಷಣೆ

ನವದೆಹಲಿ: 90 ಸದಸ್ಯಬಲದ ಹರಿಯಾಣ ವಿಧಾನಸಭೆಯಲ್ಲಿ 10 ಸದಸ್ಯರನ್ನು ಹೊಂದಿರುವ ಜನನಾಯಕ ಜನತಾ ಪಕ್ಷ (ಜೆಜೆಪಿ)  ಹಾಗೂ 7 ಮಂದಿ ಪಕ್ಷೇತರರ ಬೆಂಬಲದೊಂದಿಗೆ ಎರಡನೇ ಅವಧಿಗೆ ಹರಿಯಾಣದ ಮುಖ್ಯಮಂತ್ರಿಯಾಗಲು ಬಿಜೆಪಿ ನಾಯಕ ಮನೋಹರಲಾಲ್ ಖಟ್ಟರ್  2019 ಅಕ್ಟೋಬರ್ 25ರ ಶುಕ್ರವಾರ ಸಜ್ಜಾದರು.

ಜೆಜೆಪಿ ನಾಯಕ ದುಷ್ಯಂತ ಚೌಟಾಲ ಜೊತೆಗೆ ಮೈತ್ರಿ ಸಾಧಿಸಿರುವ ವಿಷಯವನ್ನು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.ದುಷ್ಯಂತ ಚೌಟಾಲ ಜೊತೆಗೇ ಪತ್ರಿಕಾಗೋಷ್ಠಿ ನಡೆಸಿದ ಶಾ ತಮ್ಮ ಪಕ್ಷದಿಂದ ಮುಖ್ಯಮಂತ್ರಿ ಹಾಗೂ ಪ್ರಾದೇಶಿಕ ಪಕ್ಷದಿಂದ  ಉಪ ಮುಖ್ಯಮಂತ್ರಿ ಇರುತ್ತಾರೆ ಎಂದು ಘೋಷಿಸಿದರು.

ಇದಕ್ಕೆ ಮುನ್ನ ಇಂಡಿಯನ್ ನ್ಯಾಷನಲ್ ಲೋಕದಳ (ಐಎನ್‌ಎಲ್‌ಡಿ) ಶಾಸಕ ಅಭಯ್ ಚೌಟಾಲ, ಹರಿಯಾಣ ಲೋಕಹಿತ ಪಕ್ಷದ (ಎಚ್‌ಎಲ್‌ಪಿ) ಶಾಸಕ ಗೋಪಾಲ್ ಕಾಂಡ ಮತ್ತು ೭ ಮಂದಿ ಪಕ್ಷೇತರರ ಬೆಂಬಲದೊಂದಿಗೆ ಮತ್ತೆ ಹರಿಯಾಣದ ಮುಖ್ಯಮಂತ್ರಿಯಾಗಲು ಬಿಜೆಪಿ ನಾಯಕ ಮನೋಹರ ಲಾಲ್ ಖಟ್ಟರ್ ಸಜ್ಜಾಗಿದ್ದರು.

ಇದೇ ವೇಳೆಗೆ ತಮ್ಮ ಜನನಾಯಕ ಜನತಾ ಪಕ್ಷದ (ಜೆಜೆಪಿ) ನೂತನ ಶಾಸಕರ ಸಭೆ ನಡೆಸಿದ ಬಳಿಕ ’ಈಗಲೂ ಸ್ಥಿರ ಸರ್ಕಾರದ ಕೀಲಿ ಕೈ ಇರುವುದು ನಮ್ಮ ಕೈಯಲ್ಲೇ’ ಎಂಬುದಾಗಿ ಘೋಷಿಸಿರುವ ಜೆಜೆಪಿ ನಾಯಕ ದುಷ್ಯಂತ ಚೌಟಾಲ, ಚುನಾವಣೆಗೆ ಮುನ್ನ ನಾವು ಮುಂದಿಟ್ಟಿರುವ ಕನಿಷ್ಠ ಸಾಮಾನ್ಯ ಕಾರ್ಯಕ್ರಮದ ಬೇಡಿಕೆ ಒಪ್ಪುವ ಯಾವುದೇ ಪಕ್ಷಕ್ಕೆ ನಮ್ಮ ಬೆಂಬಲ ಇದೆ’ ಎಂದು ಪ್ರಕಟಿಸಿದರು. ಬಳಿಕ ನಡೆದ ಬೆಳವಣಿಗೆಗಳಲ್ಲಿ ದುಷ್ಯಂತ ಚೌಟಾಲ ಬಿಜೆಪಿ ಜೊತೆಗೆ ಕೈಜೋಡಿಸುವ ನಿರ್ಧಾರ ಕೈಗೊಂಡರು.

ದೆಹಲಿಯಲ್ಲಿ ಪಕ್ಷದ ವರಿಷ್ಠ ನಾಯಕರ ಜೊತೆ ಶುಕ್ರವಾರ ಸಮಾಲೋಚನೆ ನಡೆಸಿರುವ ಮನೋಹರ ಲಾಲ್ ಖಟ್ಟರ್ ಅವರು ಬೆಂಬಲ ನೀಡಲು ಮುಂದೆ ಬಂದಿರುವ ೭ ಮಂದಿ ಶಾಸಕರು ಮತ್ತು ಪಕ್ಷದ ನಾಯಕತ್ವದ ಜೊತೆಗೆ ಜಂಟಿ ಮಾತುಕತೆಗಳನ್ನು ನಡೆಸಿ ಚಂಡೀಗಢದಲ್ಲಿ ಶನಿವಾರ ಹಕ್ಕು ಮಂಡನೆಗೆ ಬೇಕಾದ ವಿಧಿ ವಿಧಾನಗಳನ್ನು ಪೂರೈಸಿದರು.

೯೦ ಸದಸ್ಯ ಬಲದ ಹರಿಯಾಣ ವಿಧಾನಸಭೆಯಲ್ಲಿ ಭಾರತೀಯ ಜನತಾ ಪಕ್ಷವು (ಬಿಜೆಪಿ) ೪೦ ಸ್ಥಾನಗಳನ್ನು ಗೆದ್ದಿದ್ದು ಸರಳ ಬಹುಮತಕ್ಕೆ ೬ ಸ್ಥಾನಗಳ ಕೊರತೆ ಅನುಭವಿಸಿತ್ತು.

‘ಶಾಸಕಾಂಗ ಪಕ್ಷದ ಸಭೆ ಶನಿವಾರ ನಡೆಯಲಿದೆ’ ಎಂದು ಖಟ್ಟರ್, ಬಿಜೆಪಿಯ ಕಾರ್ಯಾಧ್ಯಕ್ಷ ಜೆಪಿ ನಡ್ಡಾ ಮತ್ತು ಏಳು ಮಂದಿ ಪಕ್ಷೇತರ ಶಾಸಕರ ಜಂಟಿ ಸಭೆಯ ಬಳಿಕ ಅನಿಲ್ ಜೈನ್ ಹೇಳಿದರು. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರು ಚಂಡೀಗಢಕ್ಕೆ ಕೇಂದ್ರದ ವೀಕ್ಷಕರಾಗಿ ತೆರಳಲಿದ್ದಾರೆ.

ಚುನಾವಣೆಯಲ್ಲಿ ಗೆದ್ದಿರುವ ಪಕ್ಷೇತರ ಸದಸ್ಯರಾದ ಸೊಂಬೀರ್ ಸಂಗ್ವಾನ್ (ದಾದ್ರಿ), ಬಲರಾಜ್ ಕುಂಡು (ಮೆಹಮ್), ಧರಮ್ ಪಾಲ್ ಗೊಂಡರ್ (ನಿಲೋಖೇರಿ), ನೈನ್ ಪಾಲ್ ರಾವತ್ (ಪ್ರಿಥ್ಲಾ) ಮತ್ತು ರಣಧೀರ ಗೊಲ್ಲೆನ್ (ಪುಂಡ್ರಿ) ಅವರ ಬಿಜೆಪಿ ಬಂಡುಕೋರರಾಗಿದ್ದು ತಮಗೆ ಟಿಕೆಟ್ ಕೊಡದೇ ಇದ್ದುದಕ್ಕಾಗಿ ಮುನಿಸಿಕೊಂಡು ಪಕ್ಷೇತರ ಅಭ್ಯರ್ಥಿಗಳಾಗಿ ಕಣಕ್ಕೆ ಇಳಿದಿದ್ದರು. ಮಾಜಿ ಉಪಪ್ರಧಾನಿ ದೇವಿಲಾಲ್ ಅವರ ಪುತ್ರ ಹಾಗೂ ಮಾಜಿ ಮುಖ್ಯಮಂತ್ರಿ ಒಪಿ ಚೌಟಾಲ ಅವರ ಕಿರಿಯ ಸಹೋದರ ರಣಜಿತ್ ಸಿಂಗ್ ಮತ್ತು ಬಾದಶಾಪುರದ ರಾಕೇಶ್ ದೌಲತಾಬಾದ್ ಇವರು ಬೆಂಬಲ ನೀಡಿರುವ ಉಳಿದ ಇಬ್ಬರು ಶಾಸಕರು. ಎಲ್ಲ ಏಳೂ ಮಂದಿ ಶಾಸಕರೂ ತಮ್ಮ ಬೆಂಬಲ ಪತ್ರವನ್ನು ಶುಕ್ರವಾರ ನೀಡಿದರು.

ದಾದ್ರಿಯ ಪಕ್ಷೇತರ ಶಾಸಕ ಸೊಂಬೀರ್ ಸಂಗ್ವಾನ್ ಅವರು ತಾವು ಶುಕ್ರವಾರ ಮುಖ್ಯಮಂತ್ರಿಯನ್ನು ಭೇಟಿ ಮಾಡುವುದಾಗಿ ಹೇಳಿದ್ದು ’ನಾನು ಬಿಜೆಪಿಗೆ ನನ್ನ ಬೆಂಬಲ ನೀಡುತ್ತೇನೆ’ ಎಂದು ಮಾಧ್ಯಮ ಒಂದರ ಬಳಿ ಇದಕ್ಕೆ ಮುನ್ನ ಹೇಳಿದ್ದರು.

ಬಹುತೇಕ ಎಲ್ಲ ಪಕ್ಷೇತರರೂ ಬಿಜೆಪಿಗೆ ಬೆಂಬಲ ನೀಡುವರು ಎಂದು ಕಾಂಡಾ ಮತ್ತು ಬಿಜೆಪಿ ಕಾರ್‍ಯಾಧ್ಯಕ್ಷ ಜೆಪಿ ನಡ್ಡಾ ಸಭೆಗೆ ವ್ಯವಸ್ಥೆ ಮಾಡಿದ ಸಿರ್ಸಾ ಸಂಸದರಾದ ಸುನೀತಾ ದುಗ್ಗಲ್ ನುಡಿದರು.

‘ಪಕ್ಷೇತರರಲ್ಲಿ ಐವರು ಬಿಜೆಪಿ ಬಂಡುಕೋರರು. ಕಾಂಡಾ ಮತ್ತು ರಣಜಿತ್ ಸಿಂಗ್ ಅವರೂ ಬೆಂಬಲ ನೀಡುತ್ತಿದ್ದಾರೆ. ಅವರೆಲ್ಲರೂ ಭೇಷರತ್ ಬೆಂಬಲಕ್ಕೆ ಬದ್ಧರಾಗಿದ್ದಾರೆ’ ಎಂದು ದುಗ್ಗಲ್ ಹೇಳಿದ್ದರು.

ತಾನು ಮತ್ತು ಇತರ ಕೆಲವು ಪಕ್ಷೇತರರು ಬಿಜೆಪಿಗೆ ಬೆಂಬಲ ವ್ಯಕ್ತ ಪಡಿಸಲು ಒಲವು ಹೊಂದಿರುವುದಾಗಿ ಗೋಪಾಲ್ ಕಾಂಡಾ ತಿಳಿಸಿದ್ದರು. ಐಎನ್‌ಎಲ್‌ಡಿ ಶಾಸಕ ಅಭಯ್ ಚೌಟಾಲ ಅವರೂ ಬಿಜೆಪಿಗೆ ಬೆಂಬಲ ನೀಡುವುದೇ ಅತ್ಯಂತ ಯೋಗ್ಯವಾದ ಮಾರ್ಗ ಎಂದು ಹೇಳಿದರು. ’ತಾತ್ವಿಕವಾಗಿ ನಾನು ಕಾಂಗ್ರೆಸ್ ಜೊತೆ ಸೇರಲಾರೆ’ ಎಂದು ಅವರು ನುಡಿದರು.

ಗೋಪಾಲ್ ಕಾಂಡಾ, ಅಭಯ್ ಚೌಟಾಲಾ ಮತ್ತು ೭ ಮಂದಿ ಪಕ್ಷೇತರರ ಲಭಿಸಿದಲ್ಲಿ ಬಿಜೆಪಿಗೆ ದುಷ್ಯಂತ ಚೌಟಾಲ ನೇತ್ವತ್ವದ ಜೆಜೆಪಿ ಬೆಂಬಲದ ಅಗತ್ಯ ಬೀಳಲಾರದು. ಆದಾಗ್ಯೂ, ಜೆಜೆಪಿಯ ೧೦ ಶಾಸಕರ ಬೆಂಬಲ ಪಡೆಯುವುದು ಬಿಜೆಪಿಗೆ ಅಪ್ರಿಯವೇನೂ ಅಲ್ಲ. ಜೆಜೆಪಿಯ ಬೆಂಬಲ ಲಭಿಸಿದಲ್ಲಿ ಸರ್ಕಾರ ಇನ್ನಷ್ಟು ದೃಢವಾಗಬಲ್ಲುದು. ದುಷ್ಯಂತ ಚೌಟಾಲ ಅವರ ಪಕ್ಷದ ಬೆಂಬಲವನ್ನು ಬಿಜೆಪಿ ಶರತ್ತಿಗೆ ಒಳಪಟ್ಟು ಪಡೆಯಲು ಪಕ್ಷ ಮುಕ್ತವಾಗಿದೆ, ಆದರೆ ಜೆಜೆಪಿ ತನ್ನ ಶರತ್ತುಗಳನ್ನು ಹೇರಲು ಪಕ್ಷವು ಅವಕಾಶ ನೀಡುವುದಿಲ್ಲ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ದೆಹಲಿಯಲ್ಲಿ ಮಾಧ್ಯಮ ಒಂದಕ್ಕೆ ತಿಳಿಸಿದ್ದರು.

ಈ ಮಧ್ಯೆ, ಜನನಾಯಕ ಜನತಾ ಪಕ್ಷದ (ಜೆಜೆಪಿ) ೧೦ ಮಂದಿ ಶಾಸಕರ ಜೊತೆ ಸಭೆ ನಡೆಸಿದ ಬಳಿಕ ಪಕ್ಷದ ನಾಯಕ ದುಷ್ಯಂತ ಚೌಟಾಲ ಅವರು ಸಭೆಯ ಬಳಿಕ ’ಯಾವ ಪಕ್ಷವೂ ನಮಗೆ ಅಸ್ಪೃಶ್ಯವಲ್ಲ, ಸ್ಥಿರ ಸರ್ಕಾರ ಕೀಲಿ ಕೈ ನಮ್ಮ ಕೈಯಲ್ಲೇ ಇದೆ. ಚುನಾವಣೆಗೆ ಮುನ್ನ ನಾವು ಬಿಡುಗಡೆ ಮಾಡಿದ ಕನಿಷ್ಠ ಸಾಮಾನ್ಯ ಕಾರ್ಯಕ್ರಮದ ಬೇಡಿಕೆಗಳನ್ನು ಬೆಂಬಲಿಸುವ ಪಕ್ಷಕ್ಕೆ ನಮ್ಮ ಬೆಂಬಲ ಇದೆ’ ಎಂದು ಘೋಷಿಸಿದ್ದರು.

ಜೆಜೆಪಿಯು ರಾಜ್ಯದಲ್ಲಿ ಸ್ಥಳೀಯ ಯುವಕರಿಗೆ ಶೇಕಡಾ ೭೫ರಷ್ಟು ಉದ್ಯೋಗಳನ್ನು ಮೀಸಲು ಇಡುವ ಮತ್ತು ಹಿರಿಯರಿಗೆ ಪಿಂಚಣಿ ಒದಗಿಸುವ ಭರವಸೆಯನ್ನು ನೀಡಿತ್ತು. ಈ ಬೇಡಿಕೆ ಬೆಂಬಲಿಸುವವರಿಗೆ ನಮ್ಮ ಬೆಂಬಲ ಎಂದು ಚೌಟಾಲ ಹೇಳಿದ್ದರು.

‘ಕೆಲವರು ಕಾಂಗ್ರೆಸ್ಸನ್ನು ಬೆಂಬಲಿಸಲು, ಇತರ ಕೆಲವರು ಬಿಜೆಪಿಯನ್ನು ಬೆಂಬಲಿಸಲು ಸಲಹೆ ಮಾಡಿದ್ದಾರೆ. ಆದರೆ ನಮಗೆ ಯಾವ ಪಕ್ಷವೂ ಅಸ್ಪೃಶ್ಯವಲ್ಲ, ನಮ್ಮ ಪ್ರಣಾಳಿಕೆಯ ಬೇಡಿಕೆಗಳನ್ನು ಯಾರು ಬೆಂಬಲಿಸುತ್ತಾರೋ ಅವರಿಗೆ ನಮ್ಮ ಬೆಂಬಲವಿದೆ. ಹೊರಗಿನಿಂದ ಬೆಂಬಲ ನೀಡುವ ಆಸಕ್ತಿ ನಮಗಿಲ್ಲ’ ಎಂದು ದುಷ್ಯಂತ ಚೌಟಾಲ ತಿಳಿಸಿದ್ದರು.

ಈ ಮಧ್ಯೆ ಹರಿಯಾಣ ಲೋಕಹಿತ ಪಕ್ಷದ ಗೋಪಾಲ ಕಾಂಡಾ ಅವರು ಬಿಜೆಪಿಗೆ ಬೆಂಬಲ ನೀಡಿದರೂ ಅದನ್ನು ಪಡೆಯಬಾರದು ಎಂದು ಪಕ್ಷದ ಹಿರಿಯ ನಾಯಕಿ ಉಮಾಭಾರತಿ ಪಕ್ಷದ ನಾಯಕತ್ವವನ್ನು ಆಗ್ರಹಿಸಿದ್ದರು. ಎಂಡಿಎಲ್ ಆರ್ ಏರ್ ಲೈನ್ಸ್‌ನ ಗಗನಸಖಿಯೊಬ್ಬರು ಬರೆದಿಟ್ಟ ಆತ್ಮಹತ್ಯಾ ಟಿಪ್ಪಣಿಯ ಹಿನ್ನೆಲೆಯಲ್ಲಿ ಕಾಂಡಾ ಅವರ ರಾಜಕೀಯ ಅಧಃಪತನವಾಗಿದೆ ಎಂದು ಅವರು ಹೇಳಿದ್ದಾರೆ. ಗೋಪಾಲ್ ಕಾಂಡಾ ವಿರುದ್ಧ ಅತ್ಯಾಚಾರ ಮತ್ತು ಆತ್ಮಹತ್ಯೆಗೆ ಪ್ರಚೋದನೆಯ ಆರೋಪವಿದೆ. ಒಂದು ವರ್ಷದ ಒಳಗಾಗಿ ನಾಟಕೀಯವಾಗಿ ಅತ್ಯಾಚಾರ ಆರೋಪವನ್ನು ಕೈಬಿಡಲಾಗಿತ್ತು ಮತ್ತು ಮಹಿಳೆಯ ತಾಯಿ ಕೂಡಾ ಆತ್ಮಹತ್ಯೆ ಮಾಡಿಕೊಂಡಿದ್ದರು. ಕಾಂಡಾ ಬೆಂಬಲ ಪಡೆಯುವುದನ್ನು ಕಾಂಗ್ರೆಸ್ ಪಕ್ಷ ಕೂಡಾ ಲೇವಡಿ ಮಾಡಿತ್ತು.

October 25, 2019 Posted by | ಭಾರತ, ರಾಷ್ಟ್ರೀಯ, Flash News, General Knowledge, India, Nation, News, Politics, Spardha | , , , | Leave a comment

ಕರ್ತಾರಪುರ ಕಾರಿಡಾರ್ ಕಾರ್ಯಗತ ಒಪ್ಪಂದಕ್ಕೆ ಭಾರತ- ಪಾಕ್ ಸಹಿ

24 kartarpur corridar agreement signed
ನವದೆಹಲಿ:
ಸಿಖ್ ಪಂಥದ ಸಂಸ್ಥಾಪಕ ಗುರುನಾನಕ್ ದೇವ್ ಅವರು ತಮ್ಮ ಜೀವನದ ಅಂತಿಮ ವರ್ಷಗಳನ್ನು ಕಳೆದ ಸ್ಥಳದಲ್ಲಿ ನಿರ್ಮಿಸಲಾದ ಗುರುದ್ವಾರವನ್ನು ಸಂದರ್ಶನಕ್ಕೆ  ಭಾರತೀಯ ಯಾತ್ರಾರ್ಥಿಗಳಿಗೆ ಅವಕಾಶ ನೀಡುವ ಕರ್ತಾರಪುರ ಕಾರಿಡಾರ್ ಕಾರ್ಯಗತ ಒಪ್ಪಂದಕ್ಕೆ  ಭಾರತ ಮತ್ತು ಪಾಕಿಸ್ತಾನ 2019 ಅಕ್ಟೋಬರ್ 24ರ ಗುರುವಾರ ಗಡಿಯಲ್ಲಿನ ‘ಶೂನ್ಯ ರೇಖೆ’ ಯಲ್ಲಿ ಸಹಿ ಮಾಡಿದವು. ಉಭಯ ರಾಷ್ಟ್ರಗಳ  ಅಧಿಕಾರಿಗಳು ಒಪ್ಪಂದಕ್ಕೆ ಸಹಿ ಹಾಕಿದರು.

ಒಪ್ಪಂದಕ್ಕೆ ಸಹಿ ಹಾಕಲು ಅಕ್ಟೋಬರ್ ೨೩ ರ ದಿನಾಂಕವನ್ನು ಭಾರತವು ಸೋಮವಾರ ಪ್ರಸ್ತಾಪಿಸಿತ್ತು. ಆದರೆ ಪಾಕಿಸ್ತಾನದ ಕಡೆಯ “ಆಡಳಿತಾತ್ಮಕ ಸಮಸ್ಯೆಗಳ’ ಕಾರಣ ಈ ದಿನಾಂಕವನ್ನು ಒಂದು ದಿನ ಮುಂದೂಡಬೇಕಾಯಿತು ಎಂದು ಅಧಿಕಾರಿಗಳು ತಿಳಿಸಿದರು. ಪಾಕಿಸ್ತಾನ ನಿಯೋಗದ ನೇತೃತ್ವವನ್ನು ವಿದೇಶಾಂಗ ಕಚೇರಿ ವಕ್ತಾರ ಮೊಹಮ್ಮದ್ ಫೈಸಲ್ ವಹಿಸಿದ್ದರು.

“ಕರ್ತಾರಪುರ ಸಾಹಿಬ್  ತಲುಪಲು ಕರ್ತಾರಪುರ ಕಾರಿಡಾರ್ ತೆರೆಯುವ ಬಗೆಗಿನ ಐತಿಹಾಸಿಕ ಪಾಕಿಸ್ತಾನ- ಭಾರತ ಒಪ್ಪಂದಕ್ಕೆ ಸಹಿ ಹಾಕಲು  ತೆರಳುತ್ತಿರುವೆ.  ನವೆಂಬರ್ ೯ ರಂದು ಪಾಕಿಸ್ತಾನದ ನರೋವಾಲದಲ್ಲಿ  ಕರ್ತಾರಪುರ ಸಾಹಿಬ್ ಕಾರಿಡಾರನ್ನು ಪ್ರಧಾನಿ ಇಮ್ರಾನ್ ಖಾನ್ ಉದ್ಘಾಟಿಸಲಿದ್ದಾರೆ ”ಎಂದು ಶೂನ್ಯ ರೇಖೆಯತ್ತ ಹೊರಡುವ ಮುನ್ನ ಫೈಸಲ್ ಟ್ವೀಟ್ ಮಾಡಿದ್ದರು.

ಗುರುನಾನಕ್ ದೇವ್‌ಅವರ ೫೫೦ ನೇ ಜನ್ಮದಿನಾಚರಣೆಗೆ ಮುನ್ನ ಮುನ್ನ ಕಾರಿಡಾರ್ ಕಾರ್ಯಗತಕ್ಕಾಗಿ ಭಾರತ ಮತ್ತು ಪಾಕಿಸ್ತಾನ  ಉನ್ನತ ಮಟ್ಟದ ಮಾತುಕತೆ ನಡೆಸಿವೆ. ಭಾರತೀಯ ಯಾತ್ರಿಕರ ವೀಸಾ ಮುಕ್ತ ಸಂಚಾರಕ್ಕೆ ಕಾರಿಡಾರ್ ಅನುಕೂಲಕರವಾಗಲಿದೆ. ೧೫೨೨ ರಲ್ಲಿ ಸಿಖ್ ಪಂಥದ  ಸಂಸ್ಥಾಪಕ ಗುರುನಾನಕ್ ದೇವ್‌ಅವರು ಸ್ಥಾಪಿಸಿದ ಕರ್ತಾರಪುರ ಸಾಹಿಬ್‌ಗೆ ಭೇಟಿ ನೀಡಲು ಭಾರತೀಯ ಯಾತ್ರಿಕರು ಅನುಮತಿ ಪಡೆದರೆ ಸಾಕಾಗುತ್ತದೆ. ವೀಸಾದ ಅಗತ್ಯ ಬೀಳುವುದಿಲ್ಲ.

ಏನಿದು ಕಾರಿಡಾರ್?

ಪಂಜಾಬಿನ ಕರ್ತಾರಪುರದಲ್ಲಿರುವ ಗುರುದ್ವಾರ ದರ್ಬಾರ್ ಸಾಹಿಬ್ ತಲುಪಲು ಸಿದ್ಧ ಪಡಿಸಲಾಗಿರುವ ನೂತನ ಪ್ರವೇಶ ಮಾರ್ಗವಾಗಿದೆ ಈ ಕರ್ತಾರಪುರ ಕಾರಿಡಾರ್.

ಉಭಯ ರಾಷ್ಟ್ರಗಳ ನಡುವಣ ಪ್ರಕ್ಷುಬ್ಧತೆಯ ಪರಿಣಾಮವಾಗಿ ಭಾರತೀಯ ಯಾತ್ರಾರ್ಥಿಗಳಿಗೆ ಈ ದರ್ಬಾರ್ ಸಾಹಿಬ್‌ಗೆ ಪ್ರವೇಶ ಪಡೆಯುವುದು ಈವರೆಗೆ ದುಸ್ತರವಾಗಿತ್ತು.

೧೯೪೭ರಲ್ಲಿ ಭಾರತವನ್ನು ಬಿಟಿಷರಿಂದ ವಿಭಜಿಸಲ್ಪಟ್ಟ ಪಂಜಾಬಿನಲ್ಲಿ ಸಿಖ್ ಪಂಥವು ಶತಕಗಳಷ್ಟು ಹಿಂದೆಯೇ ಜನ್ಮತಾಳಿತ್ತು. ೧೬ನೇ ಶತಮಾನದಲ್ಲಿ ಸಿಖ್ ಪಂಥದ ಸಂಸ್ಥಾಪಕ ಗುರು ನಾನಕ್ ದೇವ್ ಅವರು ನಿರ್ಮಿಸಿದ್ದು ಎಂಬುದಾಗಿ ನಂಬಲಾದ ಕರ್ತಾರಪುರದ ಈ ಗುರುದ್ವಾರವು ಭಾರತದ ಗಡಿಯಿಂದ ಸುಮಾರು ೪ ಕಿಮೀ ದೂರದಲ್ಲಿ (೨.೫ ಮೈಲು) ಪಾಕಿಸ್ತಾನದ ಭೂಪ್ರದೇಶದಲ್ಲಿದೆ.

ಈ ವಾರಾರಂಭದಲ್ಲಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಕರ್ತಾರಪುರ ಗುರುದ್ವಾರವು ವಿಶ್ವದಲ್ಲೇ ಅತ್ಯಂತ ವಿಶಾಲವಾದ ಗುರುದ್ವಾರವಾಗಿದ್ದು, ತಮ್ಮ ರಾಷ್ಟ್ರವು ವಿಶ್ವಾದ್ಯಂತದ ಸಿಕ್ಖರಿಗೆ ಈ ಗುರುದ್ವಾರ ದರ್ಶನಕ್ಕೆ ತನ್ನ ದ್ವಾರಗಳನ್ನು ತೆರೆಯುತ್ತಿದೆ ಎಂದು ಹೇಳಿದ್ದರು.

ನವೆಂಬರ್ ೧೦ರಂದು ಸಾರ್ವಜನಿಕರಿಗೆ ಮುಕ್ತವಾಗಲಿರುವ ಕಾರಿಡಾರ್ ಭಾರತ-ಪಾಕ್ ಗಡಿಯಿಂದ ನೇರವಾಗಿ ಗುರುದ್ವಾರವನ್ನು ಸಂಪರ್ಕಿಸುತ್ತದೆ.

ಕಾರಿಡಾರ್‌ಗೆ ಸಂಬಂಧಿಸಿದ ವಿವರಗಳನ್ನು ಅಂತಿಮಗೊಳಿಸುವುದೇನೂ ಸುಲಭವಾದ ವಿಷಯವಾಗಿರಲಿಲ್ಲ. ಒಂದು ವರ್ಷದ ಹಿಂದೆ ಪ್ರಕಟಿಸಿದ ಬಳಿಕ ಈ ಪ್ರಕ್ರಿಯೆ ಹಲವಾರು ಕಾರಣಗಳಿಂದಾಗಿ ಉದ್ದಕ್ಕೆ ಎಳೆಯಲ್ಪಟ್ಟಿತ್ತು.

ಕಾರಿಡಾರ್ ಬಗ್ಗೆ ನಮಗೇನು ಗೊತ್ತಿದೆ?

ಕಾರಿಡಾರ್ ಪ್ರಸ್ತುತ ನಿರ್ಮಾಣದ ಕೊನೆಯ ಹಂತದಲ್ಲಿದ್ದು ನವೆಂಬರ್ ಆರಂಭದಲ್ಲಿ ಬಳಕೆಗೆ ಮುಕ್ತವಾಗಲಿದೆ ಎಂದು ಅಧಿಕಾರಿಗಳು ಹೇಳಿದರು.

ನೂರಾರು ಮಂದಿ ಕಾರ್ಮಿಕರು ಈಗಲೂ  ೪೨ ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಗುರುದ್ವಾರ ಮತ್ತು ಅದರ ವಿಸ್ತರಣಾ ಕಾರ್‍ಯಕ್ಕೆ ಅಂತಿಮ ಸ್ಪರ್ಶ ನೀಡುವ ಕಾರ್‍ಯದಲ್ಲಿ ಮಗ್ನರಾಗಿದ್ದಾರೆ.

ಸಂದರ್ಶಕರ ಅನುಕೂಲಕ್ಕಾಗಿ ಅಂತಾರಾಷ್ಟ್ರೀಯ ಗಡಿ ಮತ್ತು ಗುರುದ್ವಾರದ ಮಧ್ಯೆ ಹರಿಯುವ ರಾವಿ ನದಿಗೆ ಅಡ್ಡಲಾಗಿ ಒಂದು ಸೇತುವೆ ನಿರ್ಮಾಣ ಕೂಡಾ ಈ ಕಾರಿಡಾರ್ ಯೋಜನೆಯಲ್ಲಿ ಸೇರಿದೆ.

ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಅಧಿಕೃತವಾಗಿ ಯೋಜನೆಯನ್ನು ಘೋಷಿಸಿದ ಬಳಿಕ ಗುರುದ್ವಾರದ ಸುತ್ತ ಮುತ್ತ ಸವಲತ್ತುಗಳನ್ನು ಒದಗಿಸುವ ಸಲುವಾಗಿ ಕಾಮಗಾರಿಗಳೂ ಆರಂಭಗೊಂಡಿದ್ದವು.

ಗುರುದ್ವಾರದ ವಿಸ್ತರಣೆ, ನೂತನ ಸವಲತ್ತುಗಳ ಪಟ್ಟಿಯಲ್ಲಿ ನೂತನ ಪ್ರಾಂಗಣ, ವಸ್ತುಸಂಗ್ರಹಾಲಯ, ಗ್ರಂಥಾಲಯ, ವಸತಿ ನಿಲಯಗಳು (ಡಾರ್ಮೆಟ್ರಿಗಳು), ಲಾಕರ್ ಕೊಠಡಿಗಳು, ವಲಸೆ ಕೇಂದ್ರ ಮತ್ತು ಪ್ರವಾಹದ ಸಂದರ್ಭದಲ್ಲಿ ಗುರುದ್ವಾರ ರಕ್ಷಣೆಗಾಗಿ ಒಂದು ಒಡ್ಡು ನಿರ್ಮಾಣ ಕೂಡಾ ಸೇರಿವೆ.

ಪಾಕಿಸ್ತಾನದಲ್ಲಿರುವ ಗುರುದ್ವಾರಕ್ಕೆ ಕಾರಿಡಾರ್ ಮೂಲಕ ತೆರಳಲು ಭಾರತೀಯ ಯಾತ್ರಾರ್ಥಿಗಳಿಗೆ ಪಾಸ್‌ಪೋರ್ಟ್ ಅಥವಾ ವೀಸಾದ ಅಗತ್ಯವಿಲ್ಲ, ಆದರೆ ಅಲ್ಲಿಗೆ ಹೋಗುವುದಕ್ಕೆ ಮುನ್ನ ಅನುಮತಿ ಪಡೆದುಕೊಳ್ಳಬೇಕಾಗುತ್ತದೆ.

ಪ್ರಕ್ರಿಯೆಯ ಪೂರ್ಣ ಮಾಹಿತಿಗಳನ್ನು ಅಧಿಕಾರಿಗಳು ಇನ್ನೂ ಬಿಡುಗಡೆ ಮಾಡಿಲ್ಲ, ಆದರೆ ಪ್ರವಾಸಿಗರು ಅನುಮತಿಗಾಗಿ ಅಂತರ್ಜಾಲದ (ಆನ್ ಲೈನ್) ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ, ಮತ್ತು ಅದಕ್ಕೆ ಭಾರತ ಮತ್ತು ಪಾಕಿಸ್ತಾನ ಎರಡೂ ರಾಷ್ಟ್ರಗಳ ಸರ್ಕಾರಗಳು ಮಂಜೂರಾತಿ ನೀಡಬೇಕಾಗುತ್ತದೆ ಎಂದು ಹೇಳಲಾಗಿದೆ.

೧೯೯೮ರಿಂದಲೇ ಮಾತುಕತೆ

ಭಾರತದಲ್ಲಿನ ಸಿಖ್ ಸಮುದಾಯವು ಕಾರಿಡಾರ್ ಮೂಲಕ ಗುರುದ್ವಾರ ಸಂದರ್ಶನಕ್ಕೆ ವ್ಯವಸ್ಥೆ ಬೇಕು ಎಂದು ದೀರ್ಘ ಕಾಲದ ಹಿಂದೆಯೇ ಬೇಡಿಕೆ ಇಟ್ಟಿತ್ತು. ಗುರುದ್ವಾರಕ್ಕೆ ಪ್ರವೇಶ ಪಡೆಯುವ ನಿಟ್ಟಿನಲ್ಲಿ ಭಾರತದ ಹಿಂದಿನ ಸರ್ಕಾರಗಳು ಪ್ರಾಥಮಿಕ ಮಾತುಕತೆಗಳನ್ನೂ ಆರಂಭಿಸಿದ್ದವು.

೧೯೯೮ರಲ್ಲಿ ಈ ನಿಟ್ಟಿನ ಮೊದಲ ಮಾತುಕತೆ ನಡೆದಿತ್ತು. ಬಳಿಕ ೨೦೦೪ರಲ್ಲಿ ಮತ್ತು ೨೦೦೮ರಲ್ಲಿ ಮಾತುಕತೆಗಳು ನಡೆದಿದ್ದವು. ಆದರೆ ಈ ಮಾತುಕತೆಗಳಿಂದ ಸ್ಪಷ್ಟವಾದ ತೀರ್ಮಾನ ಸಾಧ್ಯವಾಗಿರಲಿಲ್ಲ.

ವಿಭಜನೆಯ ಬಳಿಕ ಭಾರತೀಯರಿಗೆ ಗುರುದ್ವಾರಕ್ಕೆ ಸೀಮಿತ ಪ್ರವೇಶದ ಅವಕಾಶವಿತ್ತು. ಭೇಟಿಗೆ ವೀಸಾ ಪಡೆಯುವುದೇ ದೊಡ್ಡ ಹೋರಾಟವಾಗುತ್ತಿತ್ತು.

ಕರ್ತಾರಪುರದಲ್ಲಿ ಪ್ರಸ್ತುತ ಇರುವ ಗುರುದ್ವಾರವನ್ನು ಮೂಲ ಗುರುದ್ವಾರವು ಪ್ರವಾಹದಲ್ಲಿ ನಾಶವಾದ ಬಳಿಕ ೧೯೨೫ರಲ್ಲಿ ನಿರ್ಮಿಸಲಾಗಿತ್ತು. ಬಳಿಕ ಪಾಕಿಸ್ತಾನಿ ಸರ್ಕಾರವು ೨೦೦೪ರಲ್ಲಿ ಅದನ್ನು ಪುನರ್ ನಿರ್ಮಿಸಿತ್ತು.

ಗುರುನಾನಕ್ ಅವರು ತಮ್ಮ ಜೀವನದ ಕೊನೆಯ ೧೮ ವರ್ಷಗಳನ್ನು ಕಳೆದುದರ ನೆನಪಿಗಾಗಿ ಇಲ್ಲಿ ಗುರುದ್ವಾರವನ್ನು ನಿರ್ಮಿಸಲಾಗಿತ್ತು.

ಗುರು ನಾನಕ್ ದೇವ್ ಅವರ ಜನ್ಮಸ್ಥಾನದ ಬಳಿಕ ಪಾಕಿಸ್ತಾನದಲ್ಲಿನ ಈ ಗುರುದ್ವಾರವು ಸಿಕ್ಖರ ಪಾಲಿನ ಎರಡನೇ ಪವಿತ್ರ ಸ್ಥಳ ಎಂಬುದಾಗಿ ಪರಿಗಣಿಸಲ್ಪಟ್ಟಿದೆ.

October 24, 2019 Posted by | ಪಾಕಿಸ್ತಾನ, ಭಾರತ, ರಾಷ್ಟ್ರೀಯ, ವಿಶ್ವ/ ಜಗತ್ತು, Festival, Flash News, General Knowledge, India, Nation, News, Spardha, Temples, Temples, ದೇವಾಲಯಗಳು, World | , , , , , , , , | Leave a comment

ಕರ್ತಾರ​ಪುರ ಕಾರಿಡಾರ್ ಯೋಜನೆ: ಪಾಕ್ ಜೊತೆ ಒಪ್ಪಂದಕ್ಕೆ ಭಾರತ ಸಿದ್ಧ; ಸೇವಾ ಶುಲ್ಕ ವಾಪಸಿಗೆ ಮನವಿ

21 kartarpur corridar
ನವದೆಹಲಿ
: ಕರ್ತಾರಪುರ ಸಾಹಿಬ್ ಕಾರಿಡಾರ್ ಯೋಜನೆ ಸಂಬಂಧ ಪಾಕಿಸ್ತಾನದ ಜೊತೆ ಒಪ್ಪಂದಕ್ಕೆ ಸಹಿ ಹಾಕಲಾಗುವುದು ಎಂದು ಭಾರತ ಸರ್ಕಾರ 2019 ಅಕ್ಟೋಬರ್ 21ರ  ಸೋಮವಾರ ಹೇಳಿದೆ.

ಈ ಸಂಬಂಧ ಪತ್ರಿಕಾ ಪ್ರಕರಣೆ ನೀಡಿರುವ ಭಾರತೀಯ ವಿದೇಶಾಂಗ ಸಚಿವಾಲಯ,ಗುರುದ್ವಾರದ ಕರ್ತಾರ​ಪುರ ಸಾಹಿಬ್​ಗೆ ವೀಸಾ ಮುಕ್ತ ಪ್ರವೇಶವನ್ನು ನೀಡಬೇಕು ಎಂಬ ಯಾತ್ರಾರ್ಥಿಗಳ ಬಹುದಿನಗಳ ಬೇಡಿಕೆಯ ಹಿನ್ನೆಲೆಯಲ್ಲಿ ನವೆಂಬರ್ 12ರ ಮೊದಲು ಕಾರಿಡಾರನ್ನು ಕಾರ್ಯಗತಗೊಳಿಸಲು ಅಕ್ಟೋಬರ್ 23ರಂದು ಒಪ್ಪಂದಕ್ಕೆ ಸಹಿ ಮಾಡಲು ಭಾರತ ಸಿದ್ಧವಿದೆ ಎಂದು ತಿಳಿಸಿತು.

ಒಪ್ಪಂದಕ್ಕೆ ಸಹಿ ಹಾಕಲು ಒಪ್ಪಿಕೊಳ್ಳಲಾಗಿದೆ. ಯಾತ್ರಾರ್ಥಿಗಳಿಗೆ ವಿಧಿಸುವ ಸೇವಾ ಶುಲ್ಕ 20  ಡಾಲರನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಪಾಕಿಸ್ತಾನ ಸರ್ಕಾರ ಮತ್ತೊಮ್ಮೆ ಮರುಪರಿಶೀಲನೆ ನಡೆಸುವಂತೆ ಮನವಿ ಮಾಡಲಾಗಿದೆ. ತಿದ್ದುಪಡಿ ಒಪ್ಪಂದಕ್ಕೆ ಯಾವುದೇ ಸಮಯದಲ್ಲಿ ಸಹಿ ಮಾಡಲು ಭಾರತ ಸಿದ್ಧವಾಗಿದೆ ಎಂದು ವಿದೇಶಾಂಗ ಇಲಾಖೆ ತಿಳಿಸಿತು.

ಹೇಳಿಕೆಯಲ್ಲಿ ಪಾಕಿಸ್ತಾನದ ಸೇವಾ ಶುಲ್ಕ ಪ್ರಸ್ತಾವನೆಗೆ ವಿದೇಶಾಂಗ ಇಲಾಖೆ ಅಸಮಾಧಾನ ವ್ಯಕ್ತಪಡಿಸಿದೆ. ಸೇವಾ ಶುಲ್ಕವನ್ನು ಹಿಂಪಡೆಯುವಂತೆ ಭಾರತ ಸರ್ಕಾರ ಮನವಿ ಮಾಡಿತ್ತು.

October 22, 2019 Posted by | ಪಾಕಿಸ್ತಾನ, ಭಾರತ, ರಾಷ್ಟ್ರೀಯ, Flash News, General Knowledge, India, Nation, News, Pakistan, Spardha, World | , , , | Leave a comment

ಸಂತ ರವಿದಾಸ ದೇಗುಲ ಅದೇ ಸ್ಥಳದಲ್ಲಿ ಮರುನಿರ್ಮಾಣ: ಸುಪ್ರೀಂಕೋರ್ಟ್ ಆದೇಶ

21 Ravidas mandir reconstruction Supreme-Court-Order
ನವದೆಹಲಿ
: ಸಂತ ರವಿದಾಸ ದೇಗುಲವನ್ನು ಮರುನಿರ್ಮಾಣ ಮಾಡುವಂತೆ ಸುಪ್ರೀಂಕೋರ್ಟ್2019 ಅಕ್ಟೋಬರ್ 21ರ ಸೋಮವಾರ ಆದೇಶ ನೀಡಿತು. ನ್ಯಾಯಾಲಯದ ಆದೇಶದ ಮೇರೆಗೆ ಕಳೆದ ಆಗಸ್ಟ್​ನಲ್ಲಿ ಒಡೆದು ಹಾಕಲಾಗಿದ್ದ ಸಂತ ರವಿದಾಸ ದೇಗುಲವನ್ನು ಅದೇ ಜಾಗದಲ್ಲಿ ಮರುನಿರ್ಮಾಣ ಮಾಡುವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡ ಬಳಿಕ ಸುಪ್ರೀಂಕೋರ್ಟ್ ಈ ಆದೇಶ ನೀಡಿತು.

ದಕ್ಷಿಣ ದೆಹಲಿಯ ತುಘ್ಲಕ್ ಬಾದಿನಲ್ಲಿದ್ದ ಸಂತ ರವಿದಾಸ ದೇಗುಲವನ್ನು ಒಡೆದುಹಾಕಿದ್ದರಿಂದ ಭಕ್ತಾದಿಗಳ ಪ್ರತಿಭಟನೆ ಕಾಡ್ಗಿಚ್ಚಿನಂತೆ ಎಲ್ಲೆಡೆ ವ್ಯಾಪಿಸಿತ್ತು. ಶಾಂತಿ ಮತ್ತು ಸೌಹಾರ್ದತೆ ದೃಷ್ಟಿಯಿಂದ ಅದೇ ಸ್ಥಳದಲ್ಲಿ ದೇವಾಲಯ ಮರುನಿರ್ಮಾಣಕ್ಕೆ ಸರ್ಕಾರ ಒಪ್ಪಿಕೊಂಡಿದೆ ಎಂದು ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರು ಇದಕ್ಕೂ ಮುನ್ನ ನ್ಯಾಯಾಲಯಕ್ಕೆ ಸರ್ಕಾರದ ನಿರ್ಧಾರವನ್ನು ತಿಳಿಸಿದ್ದರು..

ದೇವಾಲಯ ಮರುನಿರ್ಮಾಣಕ್ಕೆ ಸರ್ಕಾರ 400 ಚದರ ಅಡಿ ದುಪ್ಪಟ್ಟು ಜಾಗವನ್ನು ಹಂಚಿಕೆ ಮಾಡಿದೆ. ಮರುನಿರ್ಮಾಣವಾದ ದೇಗುಲ ನಿರ್ವಹಣೆಗಾಗಿ ಭಕ್ತಾದಿಗಳ ಸಮಿತಿ ರಚನೆಯ ಪ್ರಸ್ತಾವನೆಯನ್ನು ಕೂಡ ಸರ್ಕಾರ ಮಾಡಿದೆ ಎಂದು ನ್ಯಾಯಾಲಯಕ್ಕೆಕೆ.ಕೆ.ವೇಣುಗೋಪಾಲ್ ತಿಳಿಸಿದರು.

ದೆಹಲಿ ನ್ಯಾಯಾಲಯದ ನಿರ್ದೇಶನದ ಮೇರೆಗೆ ದೆಹಲಿ ಅಭಿವೃದ್ಧಿ ಪ್ರಾಧಿಕಾರ (ಡಿಡಿಎ) ಆಗಸ್ಟ್​ 10ರಂದು 500 ವರ್ಷ ಇತಿಹಾಸವಿರುವ ರವಿದಾಸ ದೇವಾಲಯವನ್ನು ನೆಲಸಮ ಮಾಡಿತ್ತು. ಇದರಿಂದ ಕೆರಳಿದ ಪಂಜಾಬ್​ ಮತ್ತು ದೆಹಲಿಯ ಹಲವು ರಾಜಕೀಯ ಪಕ್ಷಗಳು ಮತ್ತು ದಲಿತ ಸಮುದಾಯದ ಸದಸ್ಯರು ತೀವ್ರ ಪ್ರತಿಭಟನೆ ನಡೆಸಿದರು. ದಲಿತ ಹಕ್ಕುಗಳ ಹೋರಾಟಗಾರರು ಮತ್ತು ಬೆಂಬಲಿಗರು ಭಾರತ್​ ಬಂದ್​ಗೂ ಕರೆ ನೀಡಿದ್ದರು.

ದೇಗುಲವನ್ನು ತುಘ್ಲಕ್ ​ಬಾದ್​ ರಸ್ತೆಯಲ್ಲಿ ಅಥವಾ ಬೇರೆ ಸ್ಥಳದಲ್ಲಿ ಮರುನಿರ್ಮಾಣ ಮಾಡಬೇಕು ಎಂದು ಹಲವು ರಾಜಕೀಯ ಪಕ್ಷಗಳು ಆಗ್ರಹಿಸಿದ್ದವು. ದೆಹಲಿ ಸಾಮಾಜಿಕ ನ್ಯಾಯ ಸಚಿವ ರಾಜೇಂದ್ರ ಪಾಲ್ ಗೌತಮ್, ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಸೇರಿದಂತೆ ಸಮುದಾಯದ ಆಧ್ಯಾತ್ಮಿಕ ಗುರುಗಳು ದೆಹಲಿಯಲ್ಲಿ ಸೇರಿ, ಪ್ರತಿಭಟನೆಗೆ ದೊಡ್ಡ ಆಯಾಮ ನೀಡಿದ್ದರು.

October 22, 2019 Posted by | ಭಾರತ, ರಾಷ್ಟ್ರೀಯ, ಸುಪ್ರೀಂಕೋರ್ಟ್, culture, Flash News, General Knowledge, India, Nation, News, Spardha, supreme court, Temples, ದೇವಾಲಯಗಳು | , , , , , , , | Leave a comment

ಇಮ್ರಾನ್ ಖಾನ್ ಭೇಟಿ ಬಗ್ಗೆ ಹೇಳಿದ ಕ್ಸಿ, ಸುಮ್ಮನೇ ಕೇಳಿಸಿಕೊಂಡ ಪ್ರಧಾನಿ ಮೋದಿ

12 vijay_gokhale
ನವದೆಹಲಿ
: ತಮಿಳುನಾಡಿನ ಚಾರಿತ್ರಿಕ ತಾಣ ಮಹಾಬಲಿಪುರಂ (ಮಾಮಲ್ಲಪುರಂ) ಪಟ್ಟಣದಲ್ಲಿ ನಡೆದ ಎರಡನೇ ಅನೌಪಚಾರಿಕ ಶೃಂಗ ಸಭೆಯಲ್ಲಿ ಕಾಶ್ಮೀರದ ವಿಷಯ ಪ್ರಸ್ತಾಪಗೊಳ್ಳಲಿಲ್ಲ, ಚೀನೀ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಭೇಟಿ ಬಗ್ಗೆ ಉಸುರಿದರು, ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಸುಮ್ಮನೇ ಕೇಳಿಸಿಕೊಂಡರು ಅಷ್ಟೆ.

ಎರಡು ದಿನಗಳ ಶೃಂಗಸಭೆ ಸಮಾಪ್ತಿಯ ಬಳಿಕ  2019 ಅಕ್ಟೋಬರ್ 12ರ ಶನಿವಾರ ವಿಶೇಷ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಅವರು ಈ ವಿಷಯವನ್ನು ತಿಳಿಸಿದರು.

‘ಈ (ಕಾಶ್ಮೀರ) ವಿಷಯದ ಪ್ರಸ್ತಾಪವಾಗಲಿಲ್ಲ, ಅಥವಾ ಚರ್ಚೆ ನಡೆಯಲಿಲ್ಲ. ಏನಿದ್ದರೂ, ಇದು ಭಾರತದ ಆಂತರಿಕ ವಿಷಯ ಎಂಬ ನಮ್ಮ ನಿಲುವಂತೂ ಸ್ಪಷ್ಟವಾಗಿದೆ’ ಎಂದು ಹೇಳಿದರು.

ಆದಾಗ್ಯೂ ಕ್ಸಿ ಅವರು ಪ್ರಧಾನಿ ಮೋದಿ ಅವರಿಗೆ ಪಾಕಿಸ್ತಾನಿ ಪ್ರಧಾನಿ ಇಮ್ರಾನ್ ಖಾನ್ ಅವರು ಈ ವಾರಾರಂಭದಲ್ಲಿ ಬೀಜಿಂಗ್‌ಗೆ ನೀಡಿದ್ದ ಭೇಟಿಯ ಬಗ್ಗೆ ವಿವರಿಸಿದರು. ಪ್ರಧಾನಿ ಮೋದಿಯವರು ಅದನ್ನು ಸುಮ್ಮನೇ ಕೇಳಿಸಿಕೊಂಡರು, ಆದರೆ ಪ್ರತಿಕ್ರಿಯಿಸಲಿಲ್ಲ ಎಂದು ಗೋಖಲೆ ನುಡಿದರು.

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿದ ಬಳಿಕ ಕಳೆದ ಕೆಲವು ತಿಂಗಳುಗಳಲ್ಲಿ ಭಾರತ-ಚೀನಾ ಬಾಂಧವ್ಯ ಪ್ರಕ್ಷುಬ್ಧಗೊಂಡಿತ್ತು. ಈ ಹಿನ್ನೆಲೆಯಲ್ಲಿ ಭಾರತ -ಚೀನಾ ಅನೌಪಚಾರಿಕ ಶೃಂಗಸಭೆ ನಡೆದಿತ್ತು. ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿದ ಭಾರತದ ಕ್ರಮವನ್ನು ವಿರೋಧಿಸಿದ ಪಾಕಿಸ್ತಾನವನ್ನು ಚೀನಾ ಬೆಂಬಲಿಸಿದ್ದರಿಂದ ಆ ದೇಶದ ಜೊತೆಗಿನ ಭಾರತದ ಬಾಂಧವ್ಯ ಬಿಗಡಾಯಿಸಿತ್ತು.

ಚೀನೀ ಅಧ್ಯಕ್ಷರು ಅನೌಪಚಾರಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಭಾರತ ಪ್ರವಾಸ ಮಾಡುವುದಕ್ಕೆ ಮುಂಚಿತವಾಗಿ ಚೀನಾಕ್ಕೆ ಭೇಟಿ ನೀಡಿದ್ದ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಮತ್ತು ಅಧ್ಯಕ್ಷ ಕ್ಸಿ ಅವರು ಕಾಶ್ಮೀರದ ಬೆಳವಣಿಗೆಗಳ ಬಗ್ಗೆ ಮಾತುಕತೆ ನಡೆಸಿದ್ದಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತ ಪಡಿಸಿತ್ತು

October 14, 2019 Posted by | ನರೇಂದ್ರ ಮೋದಿ, ಪಾಕಿಸ್ತಾನ, ಪ್ರಧಾನಿ, ಭಾರತ, ರಾಷ್ಟ್ರೀಯ, ವಿಶ್ವ/ ಜಗತ್ತು, Flash News, General Knowledge, India, Nation, News, Pakistan, Prime Minister, Spardha, World | , | Leave a comment

ಕರ್ತಾರಪುರ ಕಾರಿಡಾರ್ ಉದ್ಘಾಟನೆ:  ಪಾಕ್  ಆಹ್ವಾನಕ್ಕೆ ಮನಮೋಹನ್ ಸಿಂಗ್‌ ತಿರಸ್ಕಾರ

01 manmohan-kartarpur
ನವದೆಹಲಿ
: ಗುರುನಾನಕ್ ಅವರ ೫೫೦ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ ಕರ್ತಾರಪುರ ಕಾರಿಡಾರ್ ಉದ್ಘಾಟನಾ ಸಮಾರಂಬಕ್ಕೆ ಪಾಕಿಸ್ತಾನ ನೀಡಿದ ಆಹ್ವಾನವನ್ನು ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್  ಅವರು ಸ್ವೀಕರಿಸುವುದಿಲ್ಲ ಎಂದು ಕಾಂಗ್ರೆಸ್ ಮೂಲಗಳು 2019 ಅಕ್ಟೋಬರ್ 01ರ ಮಂಗಳವಾರ ದೃಢಪಡಿಸಿದವು.

ನವೆಂಬರ್ 9ಕ್ಕೆ ನಿಗದಿಯಾದ ಕರ್ತಾರಪುರ ಕಾರಿಡಾರ್ ಉದ್ಘಾಟನೆಗೆ ಮನಮೋಹನ್ ಸಿಂಗ್ ಅವರನ್ನು ಆಹ್ವಾನಿಸಲು ತಮ್ಮ ರಾಷ್ಟ್ರವು ತೀರ್ಮಾನಿಸಿದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಶಿ ಅವರು ವಿಡಿಯೋ ಸಂದೇಶ ಒಂದರಲ್ಲಿ  2019 ಸೆಪ್ಟೆಂಬರ್ 30ರ  ಸೋಮವಾರ ತಿಳಿಸಿದ್ದರು.

‘ಕರ್ತಾರಪುರ ಕಾರಿಡಾರ್ ಉದ್ಘಾಟನೆಯು ದೊಡ್ಡ ಕಾರ್ಯಕ್ರಮವಾಗಿದ್ದು, ಪಾಕಿಸ್ತಾನವು ಇದಕ್ಕಾಗಿ ದೊಡ್ಡ ಪ್ರಮಾಣದ ಸಿದ್ಧತೆ ನಡೆಸುತ್ತಿದೆ. ಸಮಾರಂಭಕ್ಕೆ ಸಾಕ್ಷಿಯಾಗಲು ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಆಮಂತ್ರಿಸಲು ನಾವು ನಿರ್ಧರಿಸಿದ್ದೇವೆ. ನಾವು ಶೀಘ್ರದಲ್ಲೇ ಔಪಚಾರಿಕ ಪತ್ರವನ್ನು ಅವರಿಗೆ ಕಳುಹಿಸಲಿದ್ದೇವೆ. ಗುರುನಾನಕ್ ಅವರ ೫೫೦ನೇ ಜನ್ಮದಿನಾಚರಣೆಗಾಗಿ ಕರ್ತಾರಪುರಕ್ಕೆ ಆಗಮಿಸುವ ಸಿಖ್ ಯಾತ್ರಾರ್ಥಿಗಳನ್ನು ಸ್ವಾಗತಿಸಲು ನಮಗೆ ಅತ್ಯಂತ ಸಂತಸವಿದೆ’ ಎಂದು ಖುರೇಶಿ ವಿಡಿಯೋದಲ್ಲಿ ತಿಳಿಸಿದ್ದರು.

ಕರ್ತಾರಪುರ ಕಾರಿಡಾರ್ ಉದ್ಘಾಟನೆಗೆ ಪಾಕಿಸ್ತಾನವು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಆಹ್ವಾನಿಸಲಿದೆ. ಈ ಕಾರಿಡಾರ್ ಭಾರತದ ಸಿಖ್ ಯಾತ್ರಾರ್ಥಿಗಳಿಗೆ ಪ್ರಸ್ತುತ ಪಾಕಿಸ್ತಾನದಲ್ಲಿ ಇರುವ ಗುರುನಾನಕ್ ಅವರ ಅಂತಿಮ ವಿಶ್ರಾಂತಿ ತಾಣಕ್ಕೆ ಭೇಟಿ ನೀಡಲು ಅವಕಾಶ ಕಲ್ಪಿಸುತ್ತದೆ ಎಂದು ಖುರೇಶಿ ವಿಡಿಯೋದಲ್ಲಿ ಹೇಳಿದ್ದರು.

ಪಾಕಿಸ್ತಾನದ ಕರ್ತಾರಪುರದಲ್ಲಿನ ದರ್ಬಾರ್ ಸಾಹಿಬ್ ಗುರುದ್ವಾರ ಮತ್ತು ಭಾರತದ ಗುರುದಾಸಪುರ ಜಿಲ್ಲೆಯಲ್ಲಿ ಇರುವ ಡೇರಾ ಬಾಬಾ ನಾನಕ್ ಮಂದಿರವನ್ನು ಸಂಪರ್ಕಿಸುವ ಕಾರಿಡಾರ್ ನಿರ್ಮಾಣಕಾರ್ಯ ಪೂರೈಸುವುದರೊಂದಿಗೆ ಭಾರತದ ಸಿಖ್ ಯಾತ್ರಿಕರಿಗೆ ವೀಸಾಮುಕ್ತ ಪಯಣಕ್ಕೆ ಅವಕಾಶ ಲಭಿಸಲಿದೆ.

ಇದರೊಂದಿಗೆ ೧೫೨೨ರಲ್ಲಿ ಸಿಖ್ ಪಂಥದ ಸ್ಥಾಪಕ ಗುರು ನಾನಕ್ ದೇವ್ ಅವರು ಸ್ಥಾಪಿಸಿದ ಪ್ರಮುಖ ತಾಣವಾದ ಕರ್ತಾರಪುರ ಸಾಹಿಬ್ ಗೆ ಭೇಟಿ ನೀಡಲು ಅನುಮತಿ ಕೋರಿದರೆ ಸಾಕಾಗುತ್ತದೆ.

ಆದರೆ, ಪಾಕಿಸ್ತಾನವು ಕರ್ತಾರಪುರ ಕಾರಿಡಾರ್ ಮೂಲಕ ದರ್ಬಾರ್ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡುವ ಭಾರತೀಯ ಯಾತ್ರಿಗಳಿಗೆ ೨೦ ಅಮೆರಿಕನ್ ಡಾಲರುಗಳನ್ನು ಸೇವಾ ಶುಲ್ಕವಾಗಿ ವಿಧಿಸಲು ನಿರ್ಧರಿಸಿದ್ದು, ಈ ನಿರ್ಧಾರವನ್ನು ಮರುಪರಿಶೀಲಿಸುವಂತೆ ಭಾರತವು ಪಾಕಿಸ್ತಾನಕ್ಕೆ ಸೂಚಿಸಿದೆ.

ಮೊದಲಿಗೆ ಭಾರತದಿಂದ ಬರುವ ೫,೦೦೦ ಮಂದಿ ಯಾತ್ರಾರ್ಥಿಗಳಿಗೆ ಕಾರಿಡಾರ್ ಮೂಲಕ ಗುರುದ್ವಾರ ದರ್ಬಾರ್ ಸಾಹಿಬ್ ಭೇಟಿಗೆ ಅವಕಾಶ ನೀಡಲಾಗುವುದು. ಮುಂದಕ್ಕೆ ಪ್ರತಿದಿನ ೧೦,೦೦೦ ಯಾತ್ರಿಕರಿಗೆ ಭೇಟಿ ಅವಕಾಶ ಲಭಿಸಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಭಾರತದ ಕಡೆಯಿಂದ ಗುರುದ್ವಾರ ದರ್ಬಾರ್ ಸಾಹಿಬ್‌ವರೆಗೆ ತನ್ನ ನೆಲದಲ್ಲಿ ಯಾತ್ರಿಕರಿಗೆ ಸಾಗಲು ಅನುಕೂಲವಾಗುವಂತೆ ಪಾಕಿಸ್ತಾನವು ಕಾರಿಡಾರ್ ನಿರ್ಮಾಣ ಮಾಡುತ್ತಿದ್ದು ಗುರುದಾಸಪುರದ ಡೇರಾ ಬಾಬಾ ನಾನಕ್‌ನಿಂದ ಗಡಿಯವರೆಗೆ ಭಾರತವು ಕಾರಿಡಾರ್ ನಿರ್ಮಾಣ ಮಾಡುತ್ತಿದೆ.

ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ರಾಷ್ಟ್ರೀಯ ಹೆದ್ದಾರಿ -೩೫೪ರಿಂದ ಕಾರಿಡಾರ್‌ವರೆಗೆ ನಾಲ್ಕು ಪಥಗಳ  ಹೆದ್ದಾರಿಯನ್ನು ನಿರ್ಮಿಸುತ್ತಿದೆ. ಇದಲ್ಲದೆ ಪ್ರಯಾಣಿಕ ಟರ್ಮಿನಲ್‌ನ್ನು ಕೂಡಾ ನಿರ್ಮಿಸಲಾಗುತ್ತಿದೆ.

October 1, 2019 Posted by | ಪಾಕಿಸ್ತಾನ, ಪ್ರಧಾನಿ, ರಾಷ್ಟ್ರೀಯ, ವಿಶ್ವ/ ಜಗತ್ತು, culture, Flash News, General Knowledge, India, Nation, News, Environment, ಸುದ್ದಿ, ಪರಿಸರ, ಸಾಮಾನ್ಯ ಜ್ಞಾನ, ವಿಜ್ಞಾನ, Pakistan, Politics, Prime Minister, Spardha, Temples, World | , , , , , , , , , , | Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ