SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಅಯೋಧ್ಯೆ: ಹಕ್ಕು ಬಿಟ್ಟು ಕೊಡಲು ಸುನ್ನಿ ವಕ್ಫ್ ಮಂಡಳಿ ಸಿದ್ಧ

16 supreme-court Mediation committee
ಸಂಧಾನ ಸಮಿತಿ ವರದಿ ಬಗ್ಗೆ ಗುರುವಾರ ಸುಪ್ರೀಂ ರಹಸ್ಯ ಕಲಾಪ

ನವದೆಹಲಿ:  ಅಯೋಧ್ಯೆಯ ವಿವಾದಾತ್ಮಕ ರಾಮಜನ್ಮಭೂಮಿ- ಬಾಬರಿ ಮಸೀದಿ ಭೂಮಿಯ ಮೇಲಿನ ಹಕ್ಕು ಪ್ರತಿಪಾದನೆಯನ್ನು ಬಿಟ್ಟುಕೊಡುವ ಕೊಡುಗೆಯನ್ನು ಸುನ್ನಿ ವಕ್ಫ್ ಮಂಡಳಿಯು ಸುಪ್ರೀಂಕೋರ್ಟಿನಿಂದ ನೇಮಕಗೊಂಡ ತ್ರಿಸದಸ್ಯ ಸಂಧಾನ ಪೀಠದ ಮುಂದಿಟ್ಟಿದೆ ಎಂದು ವರದಿಯಾಗಿದ್ದು, ಸುಪ್ರೀಂಕೋರ್ಟಿನ ಪಂಚಸದಸ್ಯ ಸಂವಿಧಾನ ಪೀಠವು  2019 ಅಕ್ಟೋಬರ್ 17ರ ಗುರುವಾರ ಕೊಠಡಿಯಲ್ಲಿ ಸಂಧಾನ ಸಮಿತಿಯ ವರದಿ ಬಗ್ಗೆ ರಹಸ್ಯ ಕಲಾಪ ನಡೆಸಲಿದೆ.

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ನೇತೃತ್ವದ ಸಂವಿಧಾನಪೀಠವು ಸಂಧಾನಸಮಿತಿಯ ವರದಿಯನ್ನು ಪರಿಶೀಲಿಸಿ ಮುಂದಿನ ಕ್ರಮದ ಬಗ್ಗೆ ಚರ್ಚಿಸಲಿದೆ ಎಂದು  2019 ಅಕ್ಟೋಬರ್ 16ರ  ಬುಧವಾರ ವರದಿಗಳು ಹೇಳಿದವು.

ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಇಬ್ರಾಹಿಂ ಕಲೀಫುಲ್ಲ ನೇತೃತ್ವದ ಸಂಧಾನ ಸಮಿತಿಯು ಅಯೋಧ್ಯಾ ಪ್ರಕರಣದ ಕೊನೆಯ ದಿನವಾದ  2019 ಅಕ್ಟೋಬರ್ 16ರ ಬುಧವಾರ ತನ್ನ ಇತ್ತೀಚಿನ ಸಂಧಾನ ಯತ್ನಗಳ ಕುರಿತ ವರದಿಯನ್ನು ಸಂವಿಧಾನಪೀಠಕ್ಕೆ ಸಲ್ಲಿಸಿತ್ತು. ಈ ವರದಿಯಲ್ಲಿ ಅದು ಸಂಧಾನ ಪ್ರಸ್ತಾಪವನ್ನು ಇಟ್ಟಿದೆ ಎಂದು ಹೇಳಲಾಗಿತ್ತು.

ಸಂಜೆ ಟ್ವೀಟ್ ಒಂದನ್ನು ಮಾಡಿದ ಸಮಿತಿಯ ಸದಸ್ಯರಲ್ಲಿ ಒಬ್ಬರಾದ ಶ್ರೀ ಶ್ರೀ ರವಿಶಂಕರ ಅವರು ’ಸಂಪೂರ್ಣ ಸಂಧಾನ ಪ್ರಕ್ರಿಯೆಯನ್ನು ಎಲ್ಲ ಪಕ್ಷಗಳ ನಡುವಣ ತಿಳುವಳಿಕೆ ಮತ್ತು ಸಹೋದರತ್ವದ ಭಾವನೆಯೊಂದಿಗೆ ನಡೆಸಲಾಗಿದೆ’ ಎಂದು ತಿಳಿಸಿದರು.

ಖ್ಯಾತ ಸಂಧಾನಕಾರ ವಕೀಲ ಶ್ರೀರಾಮ್ ಪಂಚು ಅವರು ಸಂಧಾನಸಮಿತಿಯ ಇನ್ನೊಬ್ಬ ಸದಸ್ಯರಾಗಿದ್ದರು.

ಶ್ರೀ ಶ್ರೀ ರವಿಶಂಕರ ಅವರ ಟ್ವೀಟ್ ಪ್ರಕಟವಾಗುತ್ತಿದ್ದಂತೆಯೇ ಕಾಕತಾಳಿಯವಾಗಿ ಮಾಧ್ಯಮವೊಂದು ಸುನ್ನಿ ವಕ್ಫ್ ಮಂಡಳಿಯು ವಿವಾದಿತ ಭೂಮಿ ಮೇಲಿನ ತನ್ನ ಹಕ್ಕು ಬಿಟ್ಟುಕೊಡುವ ಕೊಡುಗೆ ಮುಂದಿಟ್ಟಿದೆ ಎಂಬ ವರದಿಯನ್ನು ಪ್ರಕಟಿಸಿತು. ರಾಮಮಂದಿರಕ್ಕಾಗಿ ಭೂಮಿಯನ್ನು ಸರ್ಕಾರವು ಸ್ವಾಧೀನ ಪಡಿಸಿಕೊಳ್ಳಲು ತನ್ನ ಆಕ್ಷೇಪ ಇಲ್ಲ ಎಂಬುದಾಗಿ ಮಂಡಳಿಯು ತಿಳಿಸಿರುವುದಾಗಿ ಸಂಧಾನಸಮಿತಿಯು ಸುಪ್ರೀಂಕೋರ್ಟಿಗೆ ಸಲ್ಲಿಸಿದ ತನ್ನ ವರದಿಯಲ್ಲಿ ತಿಳಿಸಿದೆ ಎಂದು ಸುದ್ದಿಮೂಲಗಳನ್ನು ಉಲ್ಲೇಖಿಸಿದ ಮಾಧ್ಯಮ ವರದಿ ಹೇಳಿತು.

ನೆಲಸಮಗೊಂಡಿರುವ ಬಾಬರಿಮಸೀದಿ ನಿವೇಶನದ ಮೇಲಿನ ಹಕ್ಕು ಪ್ರತಿಪಾದನೆಯನ್ನು ಬಿಟ್ಟುಕೊಡಲು ಒಪ್ಪುವುದರ ಜೊತೆಗೆ ಅಯೋಧ್ಯೆಯಲ್ಲಿನ ಇತರ ಮಸೀದಿಗಳನ್ನು ಸರ್ಕಾರವು ನವೀಕರಿಸಬೇಕು ಎಂದು ವಕ್ಫ್ ಮಂಡಳಿಯು ಕೋರಿದೆ ಎಂದು ಹೇಳಲಾಯಿತು.

ಬೇರೆ ಸೂಕ್ತ ಸ್ಥಳದಲ್ಲಿ ಮಸೀದಿ ನಿರ್ಮಿಸುವ ಕೊಡುಗೆಯನ್ನೂ ಮಂಡಳಿಯು ಮುಂದಿಟ್ಟಿದೆ ಎಂದು ಮೂಲಗಳು ಹೇಳಿದವು.

ಸಂಧಾನಸಮಿತಿಯು ಸುಪ್ರೀಂಕೋರ್ಟಿಗೆ ಸಲ್ಲಿಸಿರುವ ವರದಿಯು ೧೩೪ ವರ್ಷಗಳಿಂದ ಕಗ್ಗಂಟಾಗಿರುವ ರಾಮ ಜನ್ಮಭೂಮಿ- ಬಾಬರಿ ಮಸೀದಿ ವಿವಾದವನ್ನು ಇತ್ಯರ್ಥಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸುವ ಸಾಧ್ಯತೆಗಳಿವೆ ಎಂದೂ ಮೂಲಗಳನ್ನು ಉಲ್ಲೇಖಿಸಿದ ಮಾಧ್ಯಮ ವರದಿ ಹೇಳಿತು.

ಪ್ರಾರ್ಥನೆಗಾಗಿ ಬಳಸಬಹುದಾದ, ಭಾರತದ ಪ್ರಾಕ್ತನ ಸಮೀಕ್ಷೆಯ (ಎಎಸ್‌ಐ) ಮಸೀದಿಗಳ ಪಟ್ಟಿಯನ್ನು ವಕ್ಫ್ ಮಂಡಳಿಯು ಸಲ್ಲಿಸಬಹುದು ಎಂದೂ ಸಂಧಾನ ಸಮಿತಿಯ ವರದಿ ಹೇಳಿದೆ ಎನ್ನಲಾಯಿತು.

ಅಯೋಧ್ಯೆಯಲ್ಲಿ ಸೌಹಾರ್ದಕ್ಕಾಗಿ ರಾಷ್ಟ್ರೀಯ ಸಂಸ್ಥೆಯೊಂದನ್ನು ರಚಿಸುವಂತೆಯೂ ವರದಿಯೂ ಸಲಹೆ ಮಾಡಿದ್ದು, ಈ ಸಂಸ್ಥೆಗೆ ಭೂಮಿ ನೀಡಲು ಮಹಂತ ಧರಮ್ ದಾಸ್ ಮತ್ತು ಪುದುಚೆರಿಯ ಶ್ರೀ ಅರಬಿಂದೋ ಆಶ್ರಮ ಮುಂದೆ ಬಂದಿವೆ ಎಂದು ವರದಿ ಹೇಳಿತು.’

‘ಸಾಕಪ್ಪಾ ಸಾಕು’ ಎಂಬ ಉದ್ಘಾರದೊಂದಿಗೆ ಸುಪ್ರೀಂಕೋರ್ಟ್ ಈದಿನ  ತನ್ನ ದೈನಂದಿನ ವಿಚಾರಣೆಗಳನ್ನು ಮುಕ್ತಾಯಗೊಳಿಸಿದ ಬಳಿಕ ಸಂಧಾನ ಸಮಿತಿಯ ಇತ್ತೀಚಿನ ಸಂಧಾನ ಯತ್ನಗಳ ಕುರಿತ ವಿವರಗಳು ಹೊರಬಂದಿವೆ ಎಂದು ಮಾಧ್ಯಮ ವರದಿ ತಿಳಿಸಿತು.

October 16, 2019 Posted by | Award, ಅಯೋಧ್ಯೆ, ಭಾರತ, ರಾಷ್ಟ್ರೀಯ, ಸುಪ್ರೀಂಕೋರ್ಟ್, culture, Flash News, General Knowledge, India, Nation, News, Spardha, supreme court, Temples, Temples, ದೇವಾಲಯಗಳು | | Leave a comment

ಅಯೋಧ್ಯಾ ಪ್ರಕರಣ: ವಿಚಾರಣೆ ಅಂತ್ಯ, ತೀರ್ಪು ಕಾದಿರಿಸಿದ ಸುಪ್ರೀಂ

16 ayodhya
೪೦ ದಿನಗಳ ವಿಚಾರಣೆ ಕೊನೆಯ ದಿನ ಹೈಡ್ರಾಮ, ನ.೧೭ಕ್ಕೆ ಮುನ್ನ ತೀರ್ಪು ಸಂಭವ

ನವದೆಹಲಿ: ರಾಜಕೀಯವಾಗಿ ಅತ್ಯಂತ  ಸೂಕ್ಷ್ಮವಾಗಿರುವ ಅಯೋಧ್ಯೆಯ ರಾಮ ಜನ್ಮ ಭೂಮಿ- ಬಾಬರಿ ಮಸೀದಿ ಭೂವಿವಾದ ಪ್ರಕರಣದಲ್ಲಿ ಉಭಯ  ಕಡೆಯ ವಕೀಲರ ವಾದ-ಪ್ರತಿವಾದಗಳು 2019 ಅಕ್ಟೋಬರ್ 16ರ ಬುಧವಾರ ಮುಕ್ತಾಯಗೊಂಡಿದ್ದು, ಸತತ ೪೦ ದಿನಗಳಿಂದ ವಾದ-ಪ್ರತಿವಾದ ಆಲಿಸಿದ ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ನೇತೃತ್ವದ ಸುಪ್ರೀಂಕೋರ್ಟ್ ಪಂಚ ಸದಸ್ಯ ಸಂವಿಧಾನ ಪೀಠವು ಅತ್ಯಂತ ಕುತೂಹಲಕರವಾದ ತನ್ನ ತೀರ್ಪನ್ನು ಕಾಯ್ದಿರಿಸಿತು.

ನ್ಯಾಯಮೂರ್ತಿಗಳಾದ ಎಸ್.ಎ. ಬೊಬ್ಡೆ, ವೈವಿ ಚಂದ್ರಚೂಡ್, ಅಶೋಕ ಭೂಷಣ್ ಮತ್ತು ಅಬ್ದುಲ್ ನಜೀರ್ ಅವರನ್ನೂ ಒಳಗೊಂಡಿರುವ ಸಿಜೆಐ ರಂಜನ್ ಗೊಗೋಯಿ ನೇತೃತ್ವದ ಪಂಚ ಸದಸ್ಯ ಪೀಠವು ದಶಕಗಳಿಂದ ಕಗ್ಗಂಟಾಗಿ ಉಳಿದಿದ್ದ ಅಯೋಧ್ಯೆಯ ಭೂವಿವಾದ ಪ್ರಕರಣದ ೧೪ಕ್ಕೂ ಹೆಚ್ಚು ಮೇಲ್ಮನವಿಗಳ ವಿಚಾರಣೆಯನ್ನು ಸಂಜೆ ೪.೩೦ ಗಂಟೆಗೆ ಮುಕ್ತಾಯಗೊಳಿಸಿ, ತೀರ್ಪನ್ನು ಕಾಯ್ದಿರಿಸಿರುವುದಾಗಿ ಪ್ರಕಟಿಸಿತು.

ಈದಿನ  ಸಂಜೆ ೫ ಗಂಟೆಯ ಒಳಗಾಗಿ ವಾದ-ಪ್ರತಿವಾದ ಮುಗಿಸಲು ಸೂಚನೆ ನೀಡಿದ್ದ ಸುಪ್ರೀಂ ಕೋರ್ಟ್  ಪ್ರಕರಣದ ವಾದಗಳ ಲಿಖಿತ ಸಾರಾಂಶವನ್ನು ಸಲ್ಲಿಸಲು ಮೂರು ದಿನಗಳ ಕಾಲಾವಕಾಶ ನೀಡಿತು.  ಸಿಜೆಐ ರಂಜನ್ ಗೊಗೋಯಿ ಅವರು ನವೆಂಬರ್ ೧೭ರಂದು ನಿವೃತ್ತರಾಗಲಿರುವುದರಿಂದ ಅದಕ್ಕೆ ಮುನ್ನವೇ ತೀರ್ಪು ಹೊರಬೀಳುವ ನಿರೀಕ್ಷೆ ಇದೆ.

ಅಲಹಾಬಾದ್ ಹೈಕೋರ್ಟ್ ೨೦೧೦ರಲ್ಲಿ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿಗಳ ವಿಚಾರಣೆಯನ್ನು ಸುಪ್ರಿಂಕೋರ್ಟ್ ಸಂವಿಧಾನ ಪೀಠವು ನಡೆಸಿತ್ತು. ಅಯೋಧ್ಯೆಯಲ್ಲಿ ವಿವಾದಾತ್ಮಕ ಬಾಬರಿ ಮಸೀದಿ ಕಟ್ಟಡವೂ ಇದ್ದ ನಿವೇಶನ ಸೇರಿದಂತೆ ೨.೭೭ ಎಕರೆ ವಿವಾದಿತ ಭೂಮಿಯನ್ನು ಕಕ್ಷಿದಾರರಾದ ಸುನ್ನಿ ವಕ್ಫ್ ಮಂಡಳಿ, ನಿರ್ಮೋಹಿ ಅಖಾರ ಹಾಗೂ ರಾಮ್ ಲಲ್ಲಾ ನಡುವೆ ಸಮಾನವಾಗಿ ಹಂಚಿಕೆ ಮಾಡುವಂತೆ ಅಲಹಾಬಾದ್ ಹೈಕೋರ್ಟ್ ೨:೧ ಬಹುಮತದ ಆದೇಶವನ್ನು  ನೀಡಿತ್ತು.

ಈದಿನ  ವಾದ, ಪ್ರತಿವಾದಕ್ಕೆ ಉಭಯ ಪಕ್ಷಗಳ ವಕೀಲರಿಗೂ ಸಂಜೆ ೫ಗಂಟೆಯವರೆಗೆ ಸಿಜೆಐ ಗಡುವು ನೀಡಿದ್ದರು. ಅದರಂತೆಯೇ ಅಯೋಧ್ಯೆಯ ರಾಮಜನ್ಮಭೂಮಿ-ಬಾಬರಿ ಮಸೀದಿ ಭೂ ವಿವಾದದ ವಿಚಾರಣೆ ಅಂತ್ಯಗೊಂಡಿದ್ದು, ೧೩೪ ವರ್ಷಗಳಷ್ಟು ಹಳೆಯ ವಿವಾದದ ಅಂತಿಮ ತೀರ್ಪನ್ನು ಸಿಜೆಐ ಗೋಗೊಯಿ ನಿವೃತ್ತಿಗೂ ಮುನ್ನ ಘೋಷಿಸುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿತು.

ಕಳೆದ ೪೦ ದಿನಗಳಿಂದ ನಡೆದ ಅಯೋಧ್ಯಾ ಪ್ರಕರಣದ ವಿಚಾರಣೆಯು ಚರಿತ್ರೆಯಲ್ಲಿ ಅತೀ ದೀರ್ಘಕಾಲದ ವಿಚಾರಣೆಯ ಎರಡನೇ ಪ್ರಕರಣವಾಗಿದೆ. ಈ ಹಿಂದೆ ೧೯೭೨ಲ್ಲಿ ಕೇಶವಾನಂದ ಭಾರತಿ ಪ್ರಕರಣದ ವಿಚಾರಣೆಯನ್ನು ೧೩ ನ್ಯಾಯಾಧೀಶರಿದ್ದ ಸಂವಿಧಾನ ಪೀಠವು ೬೮ ದಿನಗಳ ಕಾಲ ನಡೆಸಿತ್ತು. ನಂತರ ಸಂಸತ್ತಿನ ಅಧಿಕಾರಗಳ ಬಗ್ಗೆ ಚಾರಿತ್ರಿಕ ತೀರ್ಪು ನೀಡಿತ್ತು.

ಸೆಪ್ಟೆಂಬರ್ ೬ರಂದು ಆರಂಭಗೊಂಡಿದ್ದ ಅಯೋಧ್ಯಾ ಪ್ರಕರಣದ ದೈನಂದಿನ ವಿಚಾರಣೆಯನ್ನು ಅಕ್ಟೋಬರ್ ೧೭ ಮುಕ್ತಾಯಗೊಳಿಸಲು ನಿರ್ಧರಿಸಿದ್ದ ಪೀಠವು ಅದನ್ನು ಇನ್ನೂ ಒಂದು ದಿನ ಮುಂಚಿತವಾಗಿ ಮುಗಿಸುವುದಾಗಿ ಹೇಳಿತ್ತು. ಇದರಂತೆ ಕೊನೆಯ ವಿಚಾರಣೆಯನ್ನು ಪೀಠವು ಈದಿನ ಪೂರ್ಣಗೊಳಿಸಿತು.

ಚರಿತ್ರಾರ್ಹ ಅಯೋಧ್ಯಾ ಪ್ರಕರಣದ ವಿಚಾರಣೆಯ ಕೊನೆಯ ದಿನ ಹೈಡ್ರಾಮ ನಡೆದು, ಒಂದು ಹಂತದಲ್ಲಿ ಮುಸ್ಲಿಮರ ಪರ ವಕೀಲರು ರಾಮಜನ್ಮಭೂಮಿ ನಕ್ಷೆಯನ್ನು ಹರಿದು ಹಾಕಿದ ಘಟನೆ ಘಟಿಸಿತು. ಈ ವರ್ತನೆಗೆ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ ಮುಖ್ಯ ನ್ಯಾಯಮೂರ್ತಿ ಗೊಗೋಯಿ ಅವರು ಶಿಷ್ಟಾಚಾರಗಳ ಪಾಲನೆ ಆಗದೇ ಇದ್ದಲ್ಲಿ ತಾವು ಸ್ಥಾನದಿಂದ ಎದ್ದು ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದರು. ಇನ್ನೊಂದು ಹಂತದಲ್ಲಿ ರಾಮಲಲ್ಲಾ ಪರ ವಕೀಲರು ವಾದ ಮಂಡನೆಗೆ ಇನ್ನಷ್ಟು ಕಾಲಾವಕಾಶ ಕೋರಿದಾಗ, ಒಪ್ಪದ ಮುಖ್ಯ ನ್ಯಾಯಮೂರ್ತಿಯವರು ಈದಿನವೇ ವಿಚಾರಣೆ ಅಂತ್ಯಗೊಳ್ಳುತ್ತದೆ ಮತ್ತು ನವೆಂಬರ್ ೧೭ಕ್ಕೆ ತೀರ್ಪು ಹೊರಬೀಳುತ್ತದೆ ಎಂದು ಹೇಳಿದರು.

ನಾಟಕೀಯ ಬೆಳವಣಿಗೆಯಲ್ಲಿ ಮುಸ್ಲಿಂ ಸಂಘಟನೆಗಳ ಪರ ವಕೀಲ ರಾಜೀವ್ ಧವನ್ ಅವರು ನ್ಯಾಯಾಲಯದಲ್ಲಿ  ರಾಮಜನ್ಮಭೂಮಿ ನಕ್ಷೆಯನ್ನು ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಮುಸ್ಲಿಮ್ ವಕ್ಫ್ ಮಂಡಳಿಯ  ಪರ ವಕೀಲರಾಗಿ ವಾದ ಮಂಡಿಸಲು ರಾಜೀವ್ ಧವನ್ ಕೋರ್ಟಿಗೆ ಹಾಜರಾಗಿದ್ದರು. ಈ ಮಧ್ಯೆ ಅಖಿಲ ಭಾರತ ಹಿಂದೂ ಮಹಾಸಭಾದ ವಕೀಲರಾದ ವಿಕಾಸ್ ಸಿಂಗ್ ಅವರು ಕುನಾಲ್ ಕಿಶೋರ್ ಪ್ರಕಟಣೆಯ ಪುಸ್ತಕದಲ್ಲಿರುವ ರಾಮಜನ್ಮಭೂಮಿ ನಕ್ಷೆಯನ್ನು ಪುರಾವೆಯನ್ನಾಗಿ ಕೋರ್ಟ್ ಗೆ ಸಲ್ಲಿಸಲು ಮುಂದಾದರು.

ಉತ್ತರಪ್ರದೇಶದ ಅಯೋಧ್ಯೆಯಲ್ಲಿ ರಾಮಜನ್ಮ ಸ್ಥಾನ ಇತ್ತು ಎಂಬುದಕ್ಕೆ ಪುರಾವೆಯಾಗಿ ವಿಕಾಸ್ ಸಿಂಗ್ ಅವರು ನಕ್ಷೆಯನ್ನು ನೀಡಿದರು. ಆಗ ಏಕಾಏಕಿ ಮುಸ್ಲಿಮ್ ಸಂಘಟನೆ ಪರ ವಕೀಲ ರಾಜೀವ್ ಧವನ್ ಅವರು ನಕ್ಷೆಯನ್ನು ಹರಿದು ಹಾಕಿದರು.

ಸುಪ್ರೀಂಕೋರ್ಟ್ ಈ ಪುಸ್ತಕದಲ್ಲಿರುವ ನಕ್ಷೆಯನ್ನು ಪುರಾವೆಯನ್ನಾಗಿ ನಂಬಬಾರದು ಎಂದು ವಕೀಲ ರಾಜೀವ್ ಧವನ್ ಅವರು ವಿನಂತಿಸಿಕೊಂಡರು. ನಿಮಗೆ ಈಗ ಏನು ಬೇಕಾಗಿದೆ ಎಂದು ಧವನ್ ಅವರನ್ನು ಪ್ರಶ್ನಿಸಿದ ಸಿಜೆಐ ರಂಜನ್ ಗೋಗೊಯಿ ’ನೀವು ಮತ್ತೆ ಇದನ್ನು ಹರಿಯುತ್ತೀರಾ?’ ಎಂದು ಅಸಮಾಧಾನದಿಂದ ಪ್ರಶ್ನಿಸಿದರು.

ನೀವು (ಧವನ್) ಶಿಷ್ಟಾಚಾರವನ್ನು ಹಾಳುಗೆಡುವುತ್ತಿದ್ದೀರಿ. ಶಿಷ್ಟಾಚಾರ ಪಾಲಿಸದೇ ಹೋದರೆ ಮತ್ತು ಇದೇ ರೀತಿಯಲ್ಲಿ ಪ್ರಕ್ರಿಯೆ ಮುಂದುವರಿದರೆ ನಾವು ನಮ್ಮ ಸ್ಥಾನದಿಂದ ಎದ್ದು ಹೋಗಬೇಕಾಗುತ್ತದೆ ಎಂದೂ ಸಿಜೆಐ ಎಚ್ಚರಿಕೆ ನೀಡಿದರು.

ಹಿಂದೂ ಕಕ್ಷಿದಾರರ ಪರ ವಕೀಲ ಸಿ.ಎಸ್. ವೈದ್ಯನಾಥನ್ ಅವರು ಕೊನೆಯ ದಿನವೂ ಸುನ್ನಿ ವಕ್ಫ್ ಮಂಡಳಿ ಈಗಾಗಲೇ ಸಲ್ಲಿಸಿದ ಸಾಕ್ಷ್ಯಾಧಾರದ ವಿರುದ್ಧ ಪ್ರಬಲ ವಾದ ಮಂಡಿಸಿದರು.

ಉಭಯ ಕಡೆಗಳ ವಾದ -ಪ್ರತಿವಾದ ಆಲಿಸಿದ ಪಂಚ ಸದಸ್ಯ ಪೀಠವು ೪೦ ದಿನಗಳ ವಿಚಾರಣೆ ಮುಕ್ತಾಯಗೊಂಡಿದೆ. ತಮ್ಮ ವಾದದ ಲಿಖಿತ ಸಾರಾಂಶವನ್ನು ಸಲ್ಲಿಸಲು ಕಕ್ಷಿದಾರರಿಗೆ ಮೂರು ದಿನಗಳ ಕಾಲಾವಕಾಶ ನೀಡಲಾಗಿದೆ ಎಂದು ಪ್ರಕಟಿಸಿತು.

ಕೊನೆಯ ವಿಚಾರಣೆಯ ಕೊನೆಯ ದಿನವಾದ ಬುಧವಾರ ಈ ಹಿಂದೆ ಸುಪ್ರೀಂಕೋರ್ಟಿನಿಂದ ನೇಮಕಗೊಂಡಿದ್ದ ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಇಬ್ರಾಹಿಂ ಕಲೀಫುಲ್ಲ ಅಧ್ಯಕ್ಷತೆಯ ತ್ರಿಸದಸ್ಯ ಸಮಿತಿಯು ತನ್ನ ಸಂಧಾನಯತ್ನಗಳ ದಾಖಲೆಯನ್ನು ಪೀಠಕ್ಕೆ ಸಲ್ಲಿಸಿತು. ಖ್ಯಾತ  ಸಂಧಾನಕಾರ ಶ್ರೀರಾಮ್ ಪಂಚು, ಶ್ರೀ ಶ್ರೀ ರವಿಶಂಕರ ಗುರೂಜಿ ಅವರು ಈ ಸಮಿತಿಯ ಸದಸ್ಯರಾಗಿದ್ದರು.

ಪ್ರಕರಣದ ಇತಿಹಾಸ

೧೫೨೮ – ಮೊಘಲ್ ಸಾಮ್ರಾಟ್ ಬಾಬರನ ಕಮಾಂಡರ್ ಮಿರ್ ಬಾಕಿಯಿಂದ ಅಯೋಧ್ಯೆಯಲ್ಲಿ ಬಾಬರ್ರಿ ಮಸೀದಿ ನಿರ್ಮಾಣ.

೧೮೮೫ – ವಿವಾದಗ್ರಸ್ತ ರಾಮಜನ್ಮಭೂಮಿ- ಬಾಬರಿ ಮಸೀದಿ ಹೊರಗಿನ ಜಾಗದಲ್ಲಿ ಗೋಪುರ ನಿರ್ಮಾಣಕ್ಕೆ ಅವಕಾಶ ಕೋರಿ ಮಹಾಂತ ರಘುಬೀರ್ ದಾಸ್ ಫೈಜಾಬಾದ್ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ, ಅದು ತಿರಸ್ಕೃತ.

೧೯೪೯ – ವಿವಾದಗ್ರಸ್ತ ಮಸೀದಿಯ ಕೇಂದ್ರ ಗುಮ್ಮಟದೊಳಗೆ ರಾಮಲಲ್ಲಾ ವಿಗ್ರಹಗಳ ಪ್ರತಿಷ್ಠಾಪನೆ.

೧೯೫೦- ರಾಮ ಲಲ್ಲಾ ವಿಗ್ರಹಗಳ ಪೂಜೆಗೆ ಅನುಮತಿ ನೀಡುವಂತೆ ಕೋರಿ ಗೋಪಾಲ್ ಸಿಮ್ಲಾ ವಿಶಾರದ್ ಅವರಿಂದ ಫೈಜಾಬಾದ್ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ. ಪರಮಹಂಸ ರಾಮಚಂದ್ರ ದಾಸ್ ಅವರಿಂದಲೂ ಅಂತಹದ್ದೇ ಅರ್ಜಿ ಸಲ್ಲಿಕೆ.

೧೯೫೯- ಜಾಗದ ಸ್ವಾಧೀನ ಕೋರಿ ನಿರ್ಮೋಹಿ ಅಖಾರದಿಂದ ಅರ್ಜಿ.

೧೯೮೧- ಸುನ್ನಿ ವಕ್ಫ್ ಮಂಡಳಿಯಿಂದಲೂ ಜಾಗದ ಒಡೆತನಕ್ಕಾಗಿ ಮನವಿ.

೧೯೮೬ – ವಿವಾದಗ್ರಸ್ತ ಜಾಗದಲ್ಲಿ ಹಿಂದೂಗಳ ಪೂಜೆಗೆ ಅನುವು ಮಾಡಿಕೊಡುವಂತೆ ಸ್ಥಳೀಯ ನ್ಯಾಯಾಲಯದ ಆದೇಶ.

೧೯೮೯- ವಿವಾದಗ್ರಸ್ತ ಜಾಗದ ವಿಷಯದಲ್ಲಿ ಯಥಾಸ್ಥಿತಿ ಕಾಯ್ದುಕೊಂಡು ಹೋಗುವಂತೆ ಅಲಹಬಾದ್ ಹೈಕೋರ್ಟ್ ಆದೇಶ.

೧೯೯೨- ಡಿಸೆಂಬರ್ ೬ರಂದು ಕರಸೇವಕರಿಂದ ಬಾಬರೀ ಮಸೀದಿ ಧ್ವಂಸ .

೧೯೯೩- ವಿವಾದಿತ ಜಾಗವನ್ನು ಕೇಂದ್ರ ಸ್ವಾಧೀನ ಪಡಿಸಿಕೊಳ್ಳುವುದಕ್ಕಾಗಿ ಅಯೋಧ್ಯೆ ನಿರ್ದಿಷ್ಟ ಪ್ರದೇಶದ ಸ್ವಾಧೀನ ಕಾಯ್ದೆ  ಅಂಗೀಕಾರ. ಇದರ ವಿರುದ್ಧ ಇಸ್ಮಾಯಿಲ್ ಫಾರೂಕಿ ಸೇರಿದಂತೆ ಹಲವರಿಂದ ತಕರಾರು ಅರ್ಜಿ.

೨೦೦೨ – ಜಾಗದ ಒಡೆತನ ಯಾರಿಗೆ ಸೇರಿದ್ದು ಎನ್ನುವ ವ್ಯಾಜ್ಯ ಕುರಿತು ಅಲಹಾಬಾದ್ ಹೈಕೋರ್ಟ್ ವಿಚಾರಣೆ ಆರಂಭ.

೨೦೧೦ – ಸುನ್ನಿ ವಕ್ಫ್ ಮಂಡಳಿ, ನಿರ್ಮೋಹಿ ಅಖಾರ ಮತ್ತು ರಾಮ್ ಲಲ್ಲಾ ಮೂರು ವಾರಸುದಾರರಿಗೆ ವಿವಾದಿತ ಜಾಗದ ಸಮಾನ ಹಂಚಿಕೆ ಮಾಡಿ ಅಲಹಾಬಾದ್ ಹೈಕೋರ್ಟ್ ತೀರ್ಪು.

೨೦೧೧- ಅಯೋಧ್ಯೆ ಭೂ ವಿವಾದ ಕುರಿತ ಹೈಕೋರ್ಟ್ ತೀರ್ಪಿಗೆ ಸುಪ್ರೀಂಕೋರ್ಟ್ ತಡೆ.

೨೦೧೭ – ಪರಸ್ಪರ ಸಂಧಾನ ಸಮ್ಮತಿ ಮೂಲಕ ವ್ಯಾಜ್ಯ ಇತ್ಯರ್ಥ ಪಡಿಸಿಕೊಳ್ಳಲು ಸಿಜೆಐ ಜೆ.ಎಸ್ ಖೇಹರ್ ಸಲಹೆ.

೨೦೧೭ – ಅಲಹಾಬಾದ್ ಹೈಕೋರ್ಟ್‌ನ ೧೯೯೪ರ ತೀರ್ಪಿನ ವಿರುದ್ಧ ಸಲ್ಲಿಕೆಯಾದ ಅರ್ಜಿಗಳ ವಿಚಾರಣೆಗೆ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠದ ರಚನೆ.

೨೦೧೮ – ತನ್ನ ೧೯೯೪ರ ತೀರ್ಪಿನ ಮರು ಪರಿಶೀಲನೆ ಕೋರಿದ ಅರ್ಜಿಗಳ ವಿಚಾರಣೆಯನ್ನು ೫ ಸದಸ್ಯರ ವಿಸ್ತೃತ ಪೀಠಕ್ಕೆ ಒಪ್ಪಿಸಲು ಕೋರಿ ರಾಜೀವ್ ಧವನ್ ಅವರಿಂದ ಅರ್ಜಿ.

೨೦೧೮- ಸೆ. ೨೭ – ವಿಸ್ತೃತ ಪೀಠಕ್ಕೆ ಒಪ್ಪಿಸಲು ನಿರಾಕರಿಸಿ ಸುಪ್ರೀಂಕೋರ್ಟ್ ತೀರ್ಪು.

October 16, 2019 Posted by | ಅಯೋಧ್ಯೆ, ಭಾರತ, ಸುಪ್ರೀಂಕೋರ್ಟ್, culture, Flash News, General Knowledge, Nation, News, Spardha, supreme court, Temples, Temples, ದೇವಾಲಯಗಳು | , , , | Leave a comment

೨೦೨೦ ಫೆಬ್ರುವರಿವರೆಗೂ ಬೂದು ಪಟ್ಟಿಯಲ್ಲೇ ಪಾಕಿಸ್ತಾನ

16 fatf-pakistan-grey-listಭಯೋತ್ಪಾದಕರಿಗೆ ಹಣ ಪೂರೈಕೆ ಸ್ಥಗಿತಕ್ಕೆ ಎಫ್‌ಎಟಿಎಫ್ ತಾಕೀತು

ನವದೆಹಲಿ: ಭಯೋತ್ಪಾದಕರ ಹಣಕಾಸು ವ್ಯವಸ್ಥೆಯ ಮೇಲಿನ ಕಣ್ಗಾವಲು ಸಂಸ್ಥೆಯು (ಎಫ್‌ಎಟಿಎಫ್) ೨೦೨೦ರ ಫೆಬ್ರವರಿ ವರೆಗೂ ಪಾಕಿಸ್ತಾನವನ್ನು ಬೂದು ಪಟ್ಟಿಯಲ್ಲಿಯೇ (’ಗ್ರೇ ಲಿಸ್ಟ್’) ಮುಂದುವರೆಸಲು ಬುಧವಾರ ತೀರ್ಮಾನ ಕೈಗೊಂಡಿದೆ ಎಂದು ಮಾಧ್ಯಮ ವರದಿಗಳು  2019 ಅಕ್ಟೋಬರ್  16ರ ಬುಧವಾರ ತಿಳಿಸಿದವು.

ಭಯೋತ್ಪಾದಕ ಸಂಘಟನೆಗಳು ಹಾಗೂ ಭಯೋತ್ಪಾದಕರಿಗೆ ಹಣಕಾಸು ಒದಗಿಸುವ ಹಾಗೂ ಅಕ್ರಮ ಹಣ ವರ್ಗಾವಣೆ ಜಾಲವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವಂತೆ ಕಣ್ಗಾವಲು ಸಂಸ್ಥೆಯು ಪಾಕಿಸ್ತಾನಕ್ಕೆ ತಾಕೀತು ಮಾಡಿದೆ ಎಂದು ವರದಿ ಹೇಳಿತು.

ಫ್ರಾನ್ಸ್ ರಾಜಧಾನಿ ಪ್ಯಾರಿಸ್ಸಿನಲ್ಲಿ 2019 ಅಕ್ಟೋಬರ್ 15ರ ಮಂಗಳವಾರ ನಡೆದ ಸಭೆಯಲ್ಲಿ ಭಯೋತ್ಪಾದಕರಿಗೆ ಹಣಕಾಸು ಒದಗಿಸುವ ಹಾಗೂ ಅಕ್ರಮ ಹಣ ವರ್ಗಾವಣೆ ಜಾಲವನ್ನು ಹತ್ತಿಕ್ಕಲು ಪಾಕಿಸ್ತಾನ ಕೈಗೊಂಡ ಕ್ರಮಗಳ ಕುರಿತು ವಿಶ್ಲೇಷಣೆ ನಡೆಸಿದ ಬಳಿಕ ಎಫ್‌ಎಟಿಎಫ್ ಈ ನಿರ್ಧಾರ ಕೈಗೊಂಡಿತು.  ೨೦೨೦ರ ಫೆಬ್ರವರಿ ನಂತರ ಪಾಕಿಸ್ತಾನವನ್ನು ಬೂದು ಪಟ್ಟಿಯಲ್ಲಿ ಮುಂದುವರಿಸಬೇಕೋ, ಕಡುಬೂದು ಪಟ್ಟಿಗೆ ಸೇರಿಸಬೇಕೊ, ಇಲ್ಲವೇ ಕಪ್ಪುಪಟ್ಟಿಗೆ ಸೇರಿಸಬೇಕೋ ಎಂಬ ಬಗ್ಗೆ ಎಫ್‌ಎಟಿಎಫ್ ತೀರ್ಮಾನ  ಕೈಗೊಳ್ಳಲಿದೆ.

ಭಯೋತ್ಪಾದಕರಿಗೆ ಹಣಕಾಸು ಒದಗಿಸುವ ಹಾಗೂ ಅಕ್ರಮ ಹಣ ವರ್ಗಾವಣೆ ಜಾಲವನ್ನು ಪೂರ್ಣವಾಗಿ ನಿರ್ಮೂಲನೆ ಮಾಡಲು ಎಫ್‌ಎಟಿಎಫ್ ಪಾಕಿಸ್ತಾನಕ್ಕೆ ಕಾಲಮಿತಿಯ ಗಡುವು ನೀಡಿ, ಈ ಗಡುವಿನೊಳಗೆ ಭಯೋತ್ಪಾದಕರಿಗೆ ಹಣಕಾಸು ಒದಗಿಸುವ ಹಾಗೂ ಅಕ್ರಮ ಹಣ ವರ್ಗಾವಣೆ ಜಾಲ ಹತ್ತಿಕ್ಕದಿದ್ದರೆ, ಕಪ್ಪು ಪಟ್ಟಿಗೆ ಸೇರಿಸುವುದಾಗಿ ಹೇಳಿತ್ತು.

ಆದರೆ ಈ ಬಗ್ಗೆ ಪಾಕಿಸ್ತಾನ ಯಾವುದೇ ತೋರಿಸದ ಕಾರಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅದು ಕಪ್ಪು ಪಟ್ಟಿ ಸೇರುವ ಎಲ್ಲ ಲಕ್ಷಣಗಳೂ ಕಾಣಿಸಿವೆ.

ಹಣಕಾಸು ವ್ಯವಸ್ಥೆಯ ಮೇಲಿನ ಕಣ್ಗಾವಲು ಸಂಸ್ಥೆಯು ಅಂತಾರಾಷ್ಟ್ರೀಯ ಮಟ್ಟದ ಸರ್ಕಾರಿ ಸಂಸ್ಥೆಯಾಗಿದ್ದು, ೧೯೮೯ರಲ್ಲಿ ಸ್ಥಾಪನೆಯಾಗಿದೆ. ಇದು ಅಕ್ರಮ ಹಣ ವರ್ಗಾವಣೆ, ಭಯೋತ್ಪಾದಕರಿಗೆ ಹಣಕಾಸು ಒದಗಿಸುವ ಜಾಲ ಮತ್ತು ಯಾವುದೇ ರಾಷ್ಟ್ರದ ಹಣಕಾಸು ವ್ಯವಸ್ಥೆ ಮೇಲೆ ಪರಿಣಾಮ ಬೀರುವ ಚಟುವಟಿಕೆಗಳ ಮೇಲೆ ನಿಗಾ ಇರಿಸುತ್ತದೆ.

ಪಾಕಿಸ್ತಾನದ ಉಗ್ರ ಚಟುವಟಿಕೆಗಳ ಮೇಲೆ ನಿಗಾ ಇರಿಸಿರುವ ಭಯೋತ್ಪಾದಕರ ಹಣಕಾಸು ವ್ಯವಸ್ಥೆಯ ಮೇಲಿನ ಕಣ್ಗಾವಲು ಸಂಸ್ಥೆಯು (ಎಫ್‌ಎಟಿಎಫ್) ಪಾಕಿಸ್ತಾನವನ್ನು ಈ ಹಿಂದೆಯೇ ಬೂದು ಪಟ್ಟಿಗೆ (ಗ್ರೇ ಲಿಸ್ಟ್) ಸೇರಿಸಿತ್ತು. ಉಗ್ರ ಚಟುವಟಿಕೆಗಳ ನಿಯಂತ್ರಣಕ್ಕೆ ’೨೭ ಅಂಶಗಳ ಕಾರ್‍ಯಯೋಜನೆ’ ಸಿದ್ದಪಡಿಸಿ, ಪಾಕಿಸ್ತಾನಕ್ಕೆ ಕಳುಹಿಸಿತ್ತು. ಅಕ್ಟೋಬರ್ ಒಳಗಾಗಿ ನಿರ್ದಿಷ್ಟ ಕ್ರಮ ಕೈಗೊಳ್ಳದಿದ್ದಲ್ಲಿ ’ಎಫ್‌ಎಟಿಎಫ್’ ಕಪ್ಪು ಪಟ್ಟಿಗೆ ಸೇರಿಸುವುದಾಗಿಯೂ  ಎಚ್ಚರಿಸಿತ್ತು. ಇದಾದ ನಂತರವೂ ಪಾಕಿಸ್ತಾನವು ತನ್ನ ನರಿಬುದ್ದಿಯನ್ನು ಮುಂದುವರೆಸಿರುವುದರಿಂದ ಅದು ಈಗ ಕಪ್ಪು ಪಟ್ಟಿಗೆ ಸೇರ್ಪಡೆಯಾಗುವ ಸಾಧ್ಯತೆ ಜ್ವಲಂತಗೊಂಡಿದೆ.

ಎಫ್‌ಎಟಿಎಫ್ ಸೂಚಿಸಿದ್ದ ೨೭ ಬೇಡಿಕೆಗಳ ಪೈಕಿ ಇದುವರೆಗೆ ಕೇವಲ ೬ ಬೇಡಿಕೆಗಳನ್ನು ಪೂರೈಸಲು ಮಾತ್ರವೇ ಪಾಕಿಸ್ತಾನಕ್ಕೆ ಸಾಧ್ಯವಾಗಿದೆ.  ಅದಲ್ಲದೆ ಇತ್ತೀಚೆಗೆ ಪಾಕಿಸ್ತಾನದಲ್ಲಿ ಉಗ್ರ ಚಟುವಟಿಕೆಗಳು ಹೆಚ್ಚಾಗಿವೆ.

ಅಕ್ಟೋಬರ್ ೨೦೧೯ರ ಒಳಗಾಗಿ ಕ್ರಿಯಾ ಯೋಜನೆ ಸಿದ್ಧಪಡಿಸುವಂತೆ ಎಫ್‌ಎಟಿಎಫ್ ಪಾಕಿಸ್ತಾನವನ್ನು ಆಗ್ರಹಿಸಿತ್ತು. ಇದೇ ಕೊನೆಯ ಗಡುವಾಗಿದ್ದು, ಮತ್ತೆ ವಿಫಲವಾದಲ್ಲಿ ಕಪ್ಪು ಪಟ್ಟಿಗೆ ಸೇರಿಸುವುದು ಅನಿವಾರ್ಯ ಎಂದು ಎಫ್‌ಎಟಿಎಫ್ ಎಚ್ಚರಿಸಿದೆ.

ಕೊನೆಯ ಎಚ್ಚರಿಕೆ: ಕಡುಬೂದು ಪಟ್ಟಿಗೆ ಸೇರ್ಪಡೆ ಎಂದರೆ, ಕಟ್ಟಕಡೆಯ ಎಚ್ಚರಿಕೆಯಾಗಿದೆ. ಈ ಬಳಿಕವೂ ಮಾರ್ಗಸೂಚಿಗಳ ಪಾಲನೆಯಾಗದೇ ಇದ್ದಲ್ಲಿ ಪಾಕಿಸ್ತಾನವನ್ನು ಕಪ್ಪು ಪಟ್ಟಿಗೆ ಸೇರ್ಪಡೆ ಮಾಡಲಾಗುವುದು. ಹಾಗಾದಲ್ಲಿ ಪಾಕಿಸ್ತಾನಕ್ಕೆ ಜಾಗತಿಕವಾಗಿ ಯಾವುದೇ ರಾಷ್ಟ್ರದಿಂದ ಆರ್ಥಿಕ ನೆರವು ಅಥವಾ ಇತರ ಯಾವುದೇ ನೆರವು ಲಭಿಸುವುದಿಲ್ಲ. ಜೊತೆಗೆ ಅಂತಾರಾಷ್ಟ್ರೀಯ ಹಣಕಾಸು ನಿಧಿ, ವಿಶ್ವಬ್ಯಾಂಕ್, ಯುರೋಪಿಯನ್ ಬ್ಯಾಂಕುಗಳ ನೆರವು ಕೂಡಾ ದೊರೆಯುವುದಿಲ್ಲ.

ಎಫ್‌ಎಟಿಎಫ್ ಪಾಕಿಸ್ತಾನವನ್ನು ಕಳೆದ ವರ್ಷ ಜೂನ್ ತಿಂಗಳಲ್ಲಿ ಬೂದು ಪಟ್ಟಿಗೆ ಸೇರ್ಪಡೆ ಮಾಡಿತ್ತು.

October 16, 2019 Posted by | ಪಾಕಿಸ್ತಾನ, ಭಯೋತ್ಪಾದಕ, ರಾಷ್ಟ್ರೀಯ, Finance, Flash News, General Knowledge, News, Pakistan, Spardha, Terror | | Leave a comment

ಭಾರತದಲ್ಲಿ ಮೊದಲ ಇಂಟರ್ ಸಿಟಿ ಹೆಲಿಕಾಪ್ಟರ್ ಸೇವೆ

16 helicopter service
ಮುಂಬೈ:
ಅಮೆರಿಕದ ಅತೀ ದೊಡ್ಡ ನಾಗರಿಕ ಹೆಲಿಕಾಪ್ಟರ್ ಸೇವಾ ಸಂಸ್ಥೆಯಾಗಿರುವ ಫ್ಲೈ ಬ್ಲೇಡ್ ಈಗ ಭಾರತದಲ್ಲಿ ಮೊತ್ತ ಮೊದಲ ಬಾರಿಗೆ ನಗರಗಳನ್ನು ಸಂಪರ್ಕಿಸುವ ಹೆಲಿಕಾಪ್ಟರ್ ಸೇವೆಯನ್ನು ಆರಂಭಿಸಲಿದೆ. ಅಕ್ಟೋಬರ್ ಮಾಸಾಂತ್ಯದಲ್ಲಿ ಈ ವಿಶೇಷ ಸೇವೆ ಆರಂಭವಾಗಲಿದೆ.

ಫ್ಲೈ ಬ್ಲೇಡ್ ಸಂಸ್ಥೆಯ ಭಾರತದಲ್ಲಿನ ಬ್ಲೇಡ್ ಇಂಡಿಯಾ ವಿಭಾಗವು ಈ ಸೇವೆಯನ್ನು ಮೊತ್ತ ಮೊದಲಿಗೆ ಮಹಾರಾಷ್ಟ್ರದಲ್ಲಿ ಪರಿಚಯಿಸಲಿದೆ. ಇದು ಕೆಲಸ ಮಾಡಬೇಕಾದರೆ ನಾವು ಸಂಸ್ಥೆಯ ಮೊಬೈಲ್ ಆಪ್  ಅಥವಾ ವೆಬ್‌ಸೈಟ್‌ನಲ್ಲಿ ಟಿಕೇಟ್ ಬುಕ್ ಮಾಡಬೇಕು. ಹೆಲಿಕಾಪ್ಟರ್ ಸೇವೆಯ ಟಿಕೇಟ್ ಬುಕ್ಕಿಂಗ್ ಮತ್ತು ಸೇವಾ ವಿಧಾನ ವಿಮಾನಗಳ ಸೇವಾ ಮಾದರಿಯಲಿ ಇರುತ್ತದೆ. ಒಂದು ಕಡೆಯಿಂದ ಮತ್ತೊಂದು ಕಡೆಗೆ ನಿರ್ದಿಷ್ಟ ಸಮಯದಲ್ಲಿ ಹೆಲಿಕಾಪ್ಟರ್ ಸಂಚರಿಸಲಿದೆ.

ಆರಂಭದಲ್ಲಿ ಪುಣೆ, ಮುಂಬೈ, ಮತ್ತು ಶಿರ್ಡಿ ನಗರಗಳನ್ನು ಸಂಸ್ಥೆಯು ಆಯ್ದುಕೊಂಡಿದ್ದು, ಸದ್ಯ ಈ ಮೂರು ನಗರದಲ್ಲಿ ಸೇವೆ ನೀಡಲಿದೆ.

ಕಳೆದ ಮಾರ್ಚ್ ತಿಂಗಳಲ್ಲಿ ಈ ಸೇವೆ ಆರಂಭಿಸುವ ಗುರಿ ಇತ್ತು. ಆದರೆ ಲೋಕಸಭಾ ಚುನಾವಣೆ ಕಾರಣ ಅದು ಈಡೇರಲಿಲ್ಲ ಎಂದು ಸಂಸ್ಥೆ ಹೇಳಿದೆ.

ಮೊದಲ ಪಯಣ ಎಲ್ಲಿಗೆ?

ತನ್ನ ಮೊದಲ ಸೇವೆಯನ್ನು ಪುಣೆಯಿಂದ ಪ್ರಾರಂಭಿಸಲಿದ್ದು, ೬ ಪ್ರಯಾಣಿಕರನ್ನು ಹೊತ್ತು ಹೆಲಿಕಾಪ್ಟರ್ ಮುಂಬೈಗೆ ಪಯಣಿಸಲಿದೆ. ಬಳಿಕ ಮುಂಬೈಯಿಂದ ಶಿರ್ಡಿಗೆ ಯಾತ್ರಾರ್ಥಿಗಳನ್ನು ಕರೆದುಕೊಂಡು ಚಲಿಸಲಿದ್ದು, ಅಲ್ಲಿಂದ ಪುಣೆಗೆ ವಾಪಸಾಗಲಿದೆ. ಸಂಜೆ ಮುಂಬಯಿಗೆ ತೆರಳಿ ವಾಪಸಾಗಲಿದೆ. ವಾರದಲ್ಲಿ ೬ ದಿನಗಳು ಮಾತ್ರ ಸೇವೆ ನೀಡಲಿದ್ದು, ಭಾನುವಾರ ಸೇವೆ ಇರುವುದಿಲ್ಲ.

ಒಟ್ಟು ಎರಡು ಹೆಲಿಕಾಪ್ಟರುಗಳನ್ನು ಈ ಸೇವೆಗಾಗಿ ಬಳಸಲಾಗುತ್ತಿದೆ. ಪ್ರಯಾಣಿಕರು ತಮ್ಮ ಜತೆ ಒಟ್ಟು ೧೦ ಕೆ.ಜಿ.ಯಷ್ಟು ಮಾತ್ರ ಸರಕನ್ನು ಕೊಂಡೊಯ್ಯಬಹುದು ಎಂದು ಸಂಸ್ಥೆ ತಿಳಿಸಿತು.

October 16, 2019 Posted by | ಆರ್ಥಿಕ, ಭಾರತ, ರಾಷ್ಟ್ರೀಯ, Commerce, Flash News, General Knowledge, India, Nation, News, Spardha, Technology | | Leave a comment

ಕಾಶ್ಮೀರದಲ್ಲಿ ಮೂವರು ಲಷ್ಕರ್ ಉಗ್ರರ ಹತ್ಯೆ

16 kashmir-attackಗುಂಡಿನ ದಾಳಿಗೆ ಅಡಗುದಾಣ ಮನೆ ಧ್ವಂಸ

ಶ್ರೀನಗರ (ಜಮ್ಮು-ಕಾಶ್ಮೀರ): ಪಾಕಿಸ್ತಾನ ಬೆಂಬಲಿತ ಲಷ್ಕರ್ -ಇ-ತೊಯ್ಬಾ (ಎಲ್‌ಇಟಿ) ಭಯೋತ್ಪಾದಕ ಸಂಘಟನೆಗೆ ಸೇರಿದ  ಮೂವರನ್ನು ಜಮ್ಮು-ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ 2019 ಅಕ್ಟೋಬರ್ 16ರ ಬುಧವಾರ ನಡೆದ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಹತ್ಯೆಗೈದವು.

ಮಂಗಳವಾರ ತಡರಾತ್ರಿ ಪಜಲ್‌ಪೋರಾ ಪ್ರದೇಶದಲ್ಲಿ ಭಯೋತ್ಪಾದಕ ಚಟುವಟಿಕೆ ಬಗ್ಗೆ ಗುಪ್ತಚರ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸಿದ್ದವು.

ಮನೆಯೊಂದರ ಮಾಲೀಕನನ್ನು ಬೆದರಿಸಿ ಮೂವರು ಉಗ್ರರು ಅಡಗಿರುವ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ಆರಂಭಿಸಲಾಯಿತು. ಪೊಲೀಸರೂ ಕೂಡ ಪ್ರದೇಶವನ್ನು ಸುತ್ತುವರಿದರು. ಗುಂಡಿನ ದಾಳಿಗೆ ಭಯೋತ್ಪಾದಕರು ಅಡಗಿದ್ದ ಮನೆ ಸಂಪೂರ್ಣ ನಾಶವಾಯಿತು. ಮೃತ ಭಯೋತ್ಪಾದಕರು ಕಳೆದ ವರ್ಷ ಸೆಪ್ಟೆಂಬರಿನಲ್ಲಿ ಲಷ್ಕರ್ -ಇ-ತೊಯ್ಬಾ ಉಗ್ರ ಸಂಘಟನೆಗೆ ಸೇರ್ಪಡೆಯಾಗಿದ್ದರು ಎಂದು ಪೊಲೀಸರು ತಿಳಿಸಿದರು.

ಮೃತ ಭಯೋತ್ಪಾದಕರನ್ನು ನಾಸಿರ್ ಗುಲ್ಜರ್ ಛಾದ್ರೂ, ಜಾಹಿದ್ ಅಹ್ಮದ್ ಲೋನ್ ಮತ್ತು ಅಕ್ವಿಬ್ ಅಹ್ಮದ್ ಹಜಾಂ ಎಂದು ಗುರುತಿಸಲಾಗಿದೆ. ಈ ಮೂವರೂ ಸ್ಥಳೀಯ ನಿವಾಸಿಗರು ಎಂದು ಅಧಿಕಾರಿಗಳು ತಿಳಿಸಿದರು.

ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಪಡಿಸಿದ ಕೇಂದ್ರದ ನಿರ್ಧಾರದ ವಿರುದ್ಧ ಸಿಡಿದೆದ್ದಿರುವ ಪಾಕಿಸ್ತಾನ, ಕಾಶ್ಮೀರದಲ್ಲಿ ಅಶಾಂತಿ ಸೃಷ್ಟಿಸಲು ಒಳಗೊಳಗೇ ದುಷ್ಕೃತ್ಯಗಳ ಸಂಚು ರೂಪಿಸಿದ್ದು, ಪಾಕಿಸ್ತಾನದ ಪ್ರತಿಯೊಂದು ದುಸ್ಸಾಹಸಕ್ಕೂ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡುತ್ತಿದೆ.

October 16, 2019 Posted by | ಭಯೋತ್ಪಾದಕ, ಭಾರತ, ರಾಷ್ಟ್ರೀಯ, Flash News, General Knowledge, India, Nation, News, Spardha, Terror | | Leave a comment

   

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ