ಕಾಶ್ಮೀರ: ಮುಂದುವರೆದ ಉಗ್ರರ ಅಟ್ಟಹಾಸ, ದಾಳಿಗೆ ಮತ್ತೊಬ್ಬ ಟ್ರಕ್ ಚಾಲಕ ಬಲಿ
ಜಮ್ಮು: ಕಣಿವೆ ರಾಜ್ಯದಲ್ಲಿ ಉಗ್ರಗಾಮಿಗಳ ಉಪಟಳ ಹೆಚ್ಚಾಗಿದ್ದು, ಭಯೋತ್ಪಾದಕರ ದಾಳಿಗೆ ಮತ್ತೊಬ್ಬ ಲಾರಿ ಚಾಲಕ 2019 ಅಕ್ಟೋಬರ್ 28ರ ಸೋಮವಾರ ಬಲಿಯಾದ. ದಕ್ಷಿಣ ಕಾಶ್ಮೀರದ ಅನಂತ್ನಾಗ್ ಜಿಲ್ಲೆಯ ಬಿಜ್ಬೆಹರಾದಲ್ಲಿ ಉಗ್ರರು ಚಾಲಕನನ್ನು ಗುಂಡು ಹಾರಿಸಿ ಹತ್ಯೆ ಮಾಡಿದರು.
ಚಾಲಕನನ್ನು ಉಧಮ್ಪುರ ಜಿಲ್ಲೆಯ ಕಾತ್ರಾ ಪ್ರದೇಶದ ನಾರಾಯಣ್ ದತ್ ಎಂದು ಗುರುತಿಸಲಾಯಿತು. ಈದಿನ ಸಂಜೆ ಈ ಘಟನೆ ಘಟಿಸಿದ್ದು, ಟ್ರಕ್ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಎಂದು ವರದಿಗಳು ತಿಳಿಸಿದವು.
ವಿಷಯ ತಿಳಿದ ಕೂಡಲೇ ಸ್ಥಳೀಯ ಪೊಲೀಸ್ ಅಧಿಕಾರಿ ಸ್ಥಳಕ್ಕೆ ಧಾವಿಸಿದರು. ಸುತ್ತಮುತ್ತಲ ಪ್ರದೇಶದಲ್ಲಿ ಇದ್ದ ಇನ್ನಿಬ್ಬರು ಟ್ರಕ್ ಚಾಲಕರನ್ನು ಪೊಲೀಸರು ರಕ್ಷಿಸಿದರು. ಬಳಿಕ ದಾಳಿಕೋರರನ್ನು ಸೆದೆ ಬಡೆಯಲು ಆ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಿದರು.
ಈ ದಾಳಿ ಸೇರಿ ದಕ್ಷಿಣ ಕಾಶ್ಮೀರದಲ್ಲಿ ಕಳೆದ 2 ವಾರಗಳಿಂದೀಚೆಗೆ ನಡೆದ ಉಗ್ರರ ದಾಳಿಗೆ 6 ಮಂದಿ ಟ್ರಕ್ ಚಾಲಕರು ಬಲಿಯಾಗಿದ್ದಾರೆ. ಬಲಿಯಾದವರೆಲ್ಲರೂ ಕಾಶ್ಮೀರೇತರರು ಎಂದು ತಿಳಿದು ಬಂದಿದೆ.
ದಕ್ಷಿಣ ಕಾಶ್ಮೀರದಲ್ಲಿ ಕಳೆದೆರಡು ವಾರಗಳಿಂದ ಕಾಶ್ಮೀರೇತರರನ್ನೇ ಗುರಿಯಾಗಿಸಿಕೊಂಡು ಉಗ್ರರು ದಾಳಿ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಹಿಂದಿನ ದಿನ ಹೊರ ರಾಜ್ಯಗಳ ಟ್ರಕ್ ಚಾಲಕರನ್ನು ಶೋಫಿಯಾನ್ ನಗರದಿಂದ ಹೊರ ಕಳಿಸಲು ಮುಂದಾಗಿದ್ದರು. ಮರುದಿನವೇ ಮತ್ತೊಂದು ದಾಳಿ ನಡೆಯಿತು.
ಕಾಶ್ಮೀರದ ಸೊಪೋರ್ನಲ್ಲಿ ಗ್ರೆನೇಡ್ ದಾಳಿ: ೧೯ ಜನರಿಗೆ ಗಾಯ
ಈ ಮಧ್ಯೆ, ಜಮ್ಮು-ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೊಪೋರ್ ಪಟ್ಟಣದ ಬಸ್ಸು ನಿಲ್ದಾಣದಲ್ಲಿ ಉಗ್ರಗಾಮಿಗಳು ಗ್ರೆನೇಡ್ ಎಸೆದ ಪರಿಣಾಮವಾಗಿ 2019 ಅಕ್ಟೋಬರ್ 28ರ ಸೋಮವಾರ ೧೯ ಮಂದಿ ಗಾಯಗೊಂಡರು ಎಂದು ಪೊಲೀಸರು ತಿಳಿಸಿದರು.
ಹೊಟೇಲ್ ಪ್ಲಾಜಾ ಸಮೀಪ ಸಂಜೆ ೪.೧೫ರ ವೇಳೆಗೆ ಸಂಭವಿಸಿದ ಗ್ರೆನೇಡ್ ದಾಳಿಯ ಗಾಯಾಳುಗಳ ಪೈಕಿ ಮೂವರಿಗೆ ಗಂಭೀರ ಗಾಯಗಳಾದವು. ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಮೇಲೆ ಎರಡು ದಿನಗಳ ಹಿಂದೆ 2019 ಅಕ್ಟೋಬರ್ 26ರ ಶನಿವಾರ ಸಂಜೆ ಶ್ರೀನಗರದಲ್ಲಿ ನಡೆದ ಇಂತಹುದೇ ದಾಳಿಯಲ್ಲಿ ೬ ಮಂದಿ ಸಿಆರ್ಪಿಎಫ್ ಯೋಧರು ಗಾಯಗೊಂಡಿದ್ದರು.
ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ೧೭೯ನೇ ಬೆಟಾಲಿಯನ್ ಪಡೆಗಳು ತತ್ ಕ್ಷಣವೇ ಸ್ಥಳಕ್ಕೆ ಧಾವಿಸಿ ಘಟನಾ ಸ್ಥಳವನ್ನು ಸುತ್ತುವರಿದವು ಎಂದು ಪೊಲೀಸರು ಹೇಳಿದರು.
ಆಗಸ್ಟ್ ೫ರಂದು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಪಡಿಸಿ, ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲು ಕೇಂದ್ರವು ನಿರ್ಧರಿಸಿದಂದಿನಿಂದ ಇಲ್ಲಿಯವರೆಗೆ ನಡೆದಿರುವ ಐದನೇ ದಾಳಿ ಇದು. ರಾಜ್ಯವು ಅಕ್ಟೋಬರ್ ೩೧ರಂದು ಅಧಿಕೃತವಾಗಿ ವಿಭಜನಗೊಳ್ಳಲಿದೆ.
No comments yet.
Leave a comment