ದೆಹಲಿ ಅನಧಿಕೃತ ಕಾಲೋನಿಗಳ ೪೦ ಲಕ್ಷ ಮಂದಿಗೆ ಮಾಲೀಕತ್ವ ಹಕ್ಕು: ಕೇಂದ್ರ ನಿರ್ಧಾರ
ನವದೆಹಲಿ: ರಾಷ್ಟ್ರದ ರಾಜಧಾನಿ ದೆಹಲಿಯ ಅನಧಿಕೃತ ಕಾಲೋನಿಗಳಲ್ಲಿ ವಾಸವಾಗಿರುವ ೪೦ ಲಕ್ಷ ಮಂದಿಗೆ ಈ ಕಾಲೋನಿಗಳ ತಮ್ಮ ಮನೆಗಳ ಮೇಲಿನ ಮಾಲೀಕತ್ವ ಹಕ್ಕು ಒದಗಿಸಲು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ 2019 ಅಕ್ಟೋಬರ್ 23ರ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ನಿರ್ಧರಿಸಿತು.
ಈ ಅನಧಿಕೃತ ಕಾಲೋನಿಗಳಲ್ಲಿನ ಮನೆಗಳು ಸರ್ಕಾರಿ ಭೂಮಿಯಲ್ಲಿ ನಿರ್ಮಿಸಲ್ಪಟ್ಟಿರಲಿ ಅಥವಾ ಖಾಸಗಿ ಭೂಮಿಯಲ್ಲಿ ನಿರ್ಮಿಸಲ್ಪಟ್ಟಿರಲಿ ಅವುಗಳ ಮೇಲಿನ ಮಾಲೀಕತ್ವ ಹಕ್ಕು ಅಂತಹ ಮನೆಗಳಲ್ಲಿ ವಾಸವಾಗಿರುವವರಿಗೆ ಲಭಿಸಲಿದೆ ಎಂದು ನಗರಾಭಿವೃದ್ಧಿ ಸಚಿವ ಹರದೀಪ್ ಸಿಂಗ್ ಪುರಿ ಹೇಳಿದರು.
ಸೈನಿಕ್ ಫಾಮ್ಸ್, ಮಹೇಂದ್ರು ಎನ್ ಕ್ಲೇವ್ ಮತ್ತು ಅನಂತರಾಮ್ ಡೈರಿಗಳಂತಹ ೬೭ ಶ್ರೀಮಂತ ಆದರೆ ಅನಧಿಕೃತ ಕಾಲೋನಿಗಳು ಮಾತ್ರ ಸರ್ಕಾರದ ನಿರ್ಣಯಕ್ಕೆ ಅಪವಾದವಾಗಿವೆ. ಅಂದರೆ ಈ ಕಾಲೋನಿಗಳಲ್ಲಿ ವಾಸವಾಗಿರುವವರಿಗೆ ಮಾಲೀಕತ್ವ ಹಕ್ಕು ಲಭಿಸುವುದಿಲ್ಲ.
‘ಬುಧವಾರದ ಸಚಿವ ಸಂಪುಟ ಸಭೆಗೆ ಅತ್ಯಂತ ದೊಡ್ಡ ನಿರ್ಣಯ ಇದು. ಈ ಕಾಲೋನಿಗಳಲ್ಲಿ ವಾಸವಾಗಿರುವವರಿಗೆ ಮಾಲೀಕತ್ವದ ಹಕ್ಕು ನೀಡುವ ಈ ನಿರ್ಣಯ ಚಾರಿತ್ರಿಕ’ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ ಜಾವಡೇಕರ್ ಸಂಪುಟ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಬಣ್ಣಿಸಿದರು. ನಗರಾಭಿವೃದ್ಧಿ ಸಚಿವ ಹರದೀಪ್ ಸಿಂಗ್ ಪುರಿ ಅವರು ನಿರ್ಣಯವನ್ನು ’ದೂರ ದೃಷ್ಟಿಯ ಕ್ರಾಂತಿಕಾರಿ ನಿರ್ಣಯ’ ಎಂದು ಹೇಳಿದರು.
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಕೂಡಾ ಈ ವರ್ಷ ಜುಲೈ ತಿಂಗಳಲ್ಲಿ ಈ ಕಾಲೋನಿಗಳಲ್ಲಿ ವಾಸವಾಗಿರುವ ಜನರಿಗೆ ಮಾಲೀಕತ್ವ ಹಕ್ಕು ನೀಡುವ ಪ್ರಸ್ತಾವವನ್ನು ಪ್ರಕಟಿಸಿದ್ದರು. ಆಮ್ ಆದ್ಮಿ ಪಕ್ಷಕ್ಕೆ ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ಸಮ್ಮತಿ ಲಭಿಸಿದೆ ಎಂದು ಕೇಜ್ರಿವಾಲ್ ಅವರು ಆಗ ಪ್ರಕಟಿಸಿದ್ದರು.
ಮುಂದಿನ ವರ್ಷ ದೆಹಲಿಯಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳಿಗೆ ಕೆಲವು ತಿಂಗಳುಗಳಷ್ಟು ಮುಂಚಿತವಾಗಿ ದೆಹಲಿಯಲ್ಲಿನ ಈ ೧,೭೯೭ ಕಾಲೋನಿಗಳಲ್ಲಿ ವಾಸವಾಗಿರುವವರಿಗೆ ಮಾಲೀಕತ್ವ ಹಕ್ಕು ನೀಡುವ ವಿಚಾರದ ಮೇಲೆ ಬೆಳಕು ಬಿದ್ದಿದೆ.
ಆಮ್ ಆದ್ಮಿ ಪಕ್ಷ ಅಥವಾ ಆಪ್ (ಎಎಪಿ) ಸರ್ಕಾರ ತನ್ನ ಕಾಲೆಳೆಯುತ್ತಿದೆ ಎಂಬುದಾಗಿ ಹೇಳುವ ಮೂಲಕ ಹರದೀಪ್ ಪುರಿ ಅವರು ಅರವಿಂದ ಕೇಜ್ರಿವಾಲ್ ಸರ್ಕಾರದ ವಿರುದ್ಧ ಬುಧವಾರ ಹರಿಹಾಯ್ದರು.
‘ಈ ಕಾಲೋನಿಗಳನ್ನು ಗುರುತಿಸುವ ವಿಚಾರವನ್ನು ಮುಂದಕ್ಕೆ ಒಯ್ಯಬೇಕಾದ್ದು ನಿಮ್ಮ ಜವಾಬ್ದಾರಿಯಾಗಿದೆ ಎಂಬುದಾಗಿ ಸೂಚಿಸುವ ಮೂಲಕ ದೆಹಲಿ ಮುಖ್ಯಮಂತ್ರಿಯನ್ನು ಪ್ರೋತ್ಸಾಹಿಸಲು ನಾನು ಹಲವಾರು ಪ್ರಯತ್ನಗಳನ್ನು ಮಾಡಿದೆ. ಆದರೆ ನಗರದ ಸರ್ಕಾರವು ಈ ಕಾಲೋನಿಗಳ ಗಡಿ ಗುರುತಿಸುವ ಕೆಲಸ ನಿರ್ವಹಿಸಲು ಸಂಸ್ಥೆಯೊಂದನ್ನು ಕೂಡಾ ಆಯ್ಕೆ ಮಾಡಲಿಲ್ಲ’ ಎಂದು ಪುರಿ ದೂರಿದರು.
‘೨೦೦೮ರಲ್ಲಿ ದೆಹಲಿ ಅಭಿವೃದ್ಧಿ ಪ್ರಾಧಿಕಾರ (ಡಿಡಿಎ) ರೂಪಿಸಿದ್ದ ನಿಯಮಾವಳಿಗಳ ಪ್ರಕಾರ ಸಕ್ರಮೀಕರಣಕ್ಕೆ ಈ ಕಾಲೋನಿಗಳ ಗಡಿ ಗುರುತಿಸುವ ಪ್ರಕಿಯೆಯೇ ಆರಂಭಿಕ ಹಂತ’ ಎಂದು ಕೇಂದ್ರ ಸಚಿವ ಹೇಳಿದರು.
‘ದೆಹಲಿ ಸರ್ಕಾರವು ನಿಯಮಾವಳಿಗಳನ್ನು ಪ್ರಕಟಿಸಿದ ೧೧ ವರ್ಷಗಳ ಬಳಿಕ ಕೂಡಾ ಈ ಕಾಲೋನಿಗಳ ಗಡಿ ಗುರುತಿಸುವ ಪ್ರಕ್ರಿಯೆ ಆರಂಭಿಸಿಲ್ಲ, ಬದಲಿಗೆ ಈ ಪ್ರಕ್ರಿಯೆ ಪೂರ್ಣಗೊಳಿಸಲು ೨೦೨೧ರವರೆಗೆ ಕಾಲಾವಕಾಶ ಕೋರಿದೆ’ ಎಂದು ಅವರು ನುಡಿದರು.
ಹೀಗಾಗಿ ಈ ಹಂತದಲ್ಲಿ ಮಧ್ಯಪ್ರವೇಶಕ್ಕೆ ಕೇಂದ್ರ ಸರ್ಕಾರ ನಿರ್ಧರಿಸಿತು ಎಂದು ಪುರಿ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
ಕೇಂದ್ರದ ನಿರ್ಧಾರವನ್ನು ಆಮ್ ಆದ್ಮಿ ಪಕ್ಷದ ನಾಯಕ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸ್ವಾಗತಿಸಿದರು.
ಅನಧಿಕೃತ ಕಾಲೋನಿಗಳ ಸಕ್ರಮೀಕರಣ ಮತ್ತು ಮಾಲೀಕತ್ವ ಹಕ್ಕು ನೀಡುವ ವಿಚಾರವು ನಗರದ ರಾಜಕಾರಣದಲ್ಲಿ ರಾಜಕೀಯವಾಗಿ ಅತ್ಯಂತ ಸೂಕ್ಷ್ಮವಾಗಿರುವ ವಿಷಯವಾಗಿದೆ. ಈ ಕಾಲೋನಿಗಳಲ್ಲಿ ದೆಹಲಿಯ ಜನಸಂಖ್ಯೆಯ ಮೂರನೇ ಒಂದರಷ್ಟು ಜನರು ವಾಸವಾಗಿದ್ದು, ಅಷ್ಟೂ ಮಂದಿಗೆ ಮತದಾನದ ಹಕ್ಕಿದೆ.
‘ಪ್ಲಾಟಿನ ಗಾತ್ರ ಮತ್ತು ವಾಸಿಸುವಷ್ಟು ಸ್ಥಳದ (ಕಾರ್ಪೆಟ್ ಏರಿಯಾ) ಆಧಾರದಲ್ಲಿ ಸಾಂಕೇತಿಕ ಶುಲ್ಕವನ್ನು ಪಡೆದು ಮಾಲೀಕತ್ವ ಹಕ್ಕು ನೀಡಲಾಗುವುದು’ ಎಂದು ಸಚಿವರು ಹೇಳಿದರು.
ಸರ್ಕಾರಿ ಭೂಮಿಯಲ್ಲಿನ ಕಾಲೋನಿಗಳಿಗೆ ಅನಧಿಕೃತ ಕಾಲೋನಿಗಳನ್ನು ಸುತ್ತುವರಿದಿರುವ ವಸತಿ ಪ್ರದೇಶದ ಸ್ಥಳಗಳಲ್ಲಿನ ಗರಿಷ್ಠ ವರ್ಗದ ದರದ ಶೇಕಡಾ ೦.೫ (೧೦೦ ಚದರ ಮೀಟರುಗಳಿಗಿಂತ ಕಡಿಮೆ ಸ್ಥಳಕ್ಕೆ), ಶೇಕಡಾ ೧ (೧೦೦-೨೫೦ ಚದರ ಮೀಟರುಗಳು), ಶೇಕಡಾ ೨.೫ (೨೫೦ ಚದರ ಮೀಟರುಗಳಿಗಿಂತ ಹೆಚ್ಚಿನ ಸ್ಥಳ) ಶುಲ್ಕ ಪಡೆಯಲಾಗುವುದು. ಖಾಸಗಿ ಭೂಮಿಯಲ್ಲಿನ ಕಾಲೋನಿಗಳಿಗೆ ಸರ್ಕಾರಿ ಭೂಮಿಯಲ್ಲಿ ವಿಧಿಸಲಾಗುವ ದರದ ಅರ್ಧದಷ್ಟು ಶುಲ್ಕ ವಿಧಿಸಲಾಗುವುದು.
ಕೊಳಚೆಗೇರಿಗಳನ್ನು ಹೊರತು ಪಡಿಸಿ, ಬೆಳವಣಿಗೆ ಹೊಂದಿರುವ ಈ ಅನಧಿಕೃತ ಕಾಲೋನಿಗಳು ಶುಲ್ಕಪಾವತಿಗೆ ಸಿದ್ಧರಿರುವ ಜನರಿಗೆ ವಸತಿ ವ್ಯವಸ್ಥೆ ಒದಗಿಸುವಲ್ಲಿನ ವೈಫಲ್ಯದ ಪರಿಣಾಮವಾಗಿದೆ. ಈ ಹಿಂದೆಯೂ ಬಹುತೇಕ ಚುನಾವಣೆಗಳು ಹತ್ತಿರ ಬಂದಾಗ ಅನಧಿಕೃತ ಕಾಲೋನಿಗಳಿಗೆ ಸಂಬಂಧಿಸಿದಂತೆ ಅನೇಕ ಪ್ರಕಟಣೆಗಳು, ನಿರ್ಣಯಗಳು ಹೊರಬಿದ್ದಿದ್ದವು.
ತಪ್ಪು ಸಂದೇಶಕ್ಕಾಗಿ ಮಾಧ್ಯಮಗಳಿಗೆ ಮದ್ರಾಸ್ ಹೈಕೋರ್ಟ್ ತರಾಟೆ
ಮಹಾಬಲಿಪುರಂ: ಮೋದಿ-ಕ್ಸಿ ಭೇಟಿಯ ಫ್ಲೆಕ್ಸ್ ಬೋರ್ಡ್
ಚೆನ್ನೈ: ಮಹಾಬಲಿಪುರಂನಲ್ಲಿ ಇತ್ತೀಚೆಗೆ ನಡೆದ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನೀ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರ ಅನೌಪಚಾರಿಕ ಶೃಂಗಕ್ಕೆ ಸಂಬಂಧಿಸಿದಂತೆ ಫ್ಲೆಕ್ಸ್ ಬೋರ್ಡ್ಗಳನ್ನು ಹಾಕಲು ತಾನು ಅನುಮತಿ ನೀಡಿದ್ದುದಾಗಿ ಮಾಧ್ಯಮಗಳಲ್ಲಿ ಬಂದ ವರದಿಯನ್ನು ಮದ್ರಾಸ್ ಹೈಕೋರ್ಟ್ 2019 ಅಕ್ಟೋಬರ್ 23ರ ಬುಧವಾರ ನಿರಾಕರಿಸಿತು ಮತ್ತು ತಪ್ಪು ವರದಿಗಳಿಗಾಗಿ ಮಾಧ್ಯಮಗಳನ್ನು ತರಾಟೆಗೆ ತೆಗೆದುಕೊಂಡಿತು.
‘ನಾವು ಫ್ಲೆಕ್ಸ್ ಬೋರ್ಡ್ಗಳನ್ನು ಹಾಕಲು ಅನುಮತಿ ಕೊಟ್ಟಿರಲಿಲ್ಲ. ನಿಯಮಾವಳಿಗಳನ್ನು ಪಾಲಿಸಿ ಎಂದಷ್ಟೇ ನಾವು ಹೇಳಿದ್ದೆವು. ಮಾಧ್ಯಮವು ಆದೇಶವನ್ನು ಸಮರ್ಪಕವಾಗಿ ಓದದೇ ಸಾರ್ವಜನಿಕರಿಗೆ ತಪ್ಪು ಸಂದೇಶವನ್ನು ರವಾನಿಸಿತು. ಮುಂದಿನಬಾರಿ, ಕೋರ್ಟ್ ಆದೇಶಗಳನ್ನು ತಪ್ಪಾಗಿ ವರದಿ ಮಾಡಿದ್ದು ನಮ್ಮ ಗಮನಕ್ಕೆ ಬಂದಲ್ಲಿ ನ್ಯಾಯಾಂಗ ನಿಂದನೆಯ ಕಷ್ಟಕ್ಕೆ ಗುರಿಯಾಗಬೇಕಾದೀತು’ ಎಂದು ನ್ಯಾಯಾಲಯ ಎಚ್ಚರಿಕೆ ನೀಡಿತು.
೬೦ಕಿಮೀ ವ್ಯಾಪ್ತಿಯಲ್ಲಿ ಫ್ಲೆಕ್ಸ್ ಬೋರ್ಡ್ಗಳನ್ನು ಹಾಕಲು ಈ ತಿಂಗಳ ಆದಿಯಲ್ಲಿ ಹಸಿರು ನಿಶಾನೆ ತೋರಿದ್ದ ನ್ಯಾಯಮೂರ್ತಿ ಎಂ. ಸತ್ಯನಾರಾಯಣನ್ ಮತ್ತು ನ್ಯಾಯಮೂರ್ತಿ ಎನ್ ಶೇಷಸಾಯಿ ಅವರನ್ನು ಒಳಗೊಂಡ ವಿಭಾಗೀಯ ಪೀಠವು ಫ್ಲೆಕ್ಸ್ ಬೋರ್ಡ್ಗಳನ್ನು ಹಾಕದಂತೆ ತಾನು ನಿರ್ಬಧಿಸಿರುವುದು ಸರ್ಕಾರವನ್ನಲ್ಲ, ಕೇವಲ ರಾಜಕೀಯ ಪಕ್ಷಗಳನ್ನಾದ್ದರಿಂದ ನಿಜವಾಗಿ ಅನುಮತಿ ಪಡೆಯುವ ಅಗತ್ಯವಿಲ್ಲ ಎಂದು ಹೇಳಿತ್ತು.
ಸರ್ಕಾರದ ಮನವಿಯನ್ನು ವಿರೋಧಿಸಿದ್ದ ಡಿಎಂಕೆಯು ಆಡಳಿತಾರೂಢ ಎಐಎಡಿಎಂಕೆಯು ’ಹಲವಾರು ಬ್ಯಾನರುಗಳನ್ನು ಹಾಕುವ’ ರಹಸ್ಯ ಕಾರ್ಯಸೂಚಿ ಇಟ್ಟುಕೊಂಡಿರುವಂತಿದೆ ಎಂದು ಆಪಾದಿಸಿತ್ತು.
‘ಬ್ಯಾನರ್ ಸಂಸ್ಕೃತಿ’ಯನ್ನು ನ್ಯಾಯಾಲಯವು ನಿಷೇಧಿಸಿದ ಬಳಿಕ, ರಾಜ್ಯಾದ್ಯಂತ ಬ್ಯಾನರುಗಳನ್ನು ಹಾಕಲು ಅಧಿಕಾರಿಗಳು ಅನುಮತಿ ನೀಡುತ್ತಿಲ್ಲ ಎಂದು ಸರ್ಕಾರದ ಪರವಾಗಿ ಮುನಿಸಿಪಲ್ ಆಡಳಿತದ ಕಮೀಷನರ್ ಸಲ್ಲಿಸಿದ್ದ ಅರ್ಜಿಯು ಹೇಳಿತ್ತು. ಕಳೆದ ತಿಂಗಳು ೨೩ರ ಹರೆಯದ ಸಾಫ್ಟ್ವೇರ್ ಎಂಜಿನಿಯರ್ ಒಬ್ಬರು ಸಾವನ್ನಪ್ಪಿದ ಬಳಿಕ ನ್ಯಾಯಾಲಯವು ಬ್ಯಾನರ್ ಸಂಸ್ಕೃತಿ ವಿರುದ್ಧ ಹರಿಹಾಯ್ದಿತ್ತು.
ಇದಕ್ಕೆ ಮುನ್ನ ರಸ್ತೆ ಬದಿಗಳಲ್ಲಿ ಬ್ಯಾನರ್ ಅಳವಡಿಸುವುದನ್ನು ನಿಷೇಧಿಸಿದ್ದ ಮದ್ರಾಸ್ ಹೈಕೋರ್ಟ್, ಮಹಿಳಾ ಟೆಕ್ಕಿಯ ಸಾವಿನ ಹಿನ್ನೆಲೆಯಲ್ಲಿ ತಾನು ನೀಡಿದ್ದ ಆದೇಶವನ್ನು ಸರ್ಕಾರವು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುತ್ತಿಲ್ಲ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು.
೨೩ರ ಹರೆಯದ ಮಹಿಳೆ ದ್ವಿಚ್ರಕ್ರವಾಹನದಲ್ಲಿ ಸವಾರಿ ಮಾಡುತ್ತಿದ್ದಾಗ ಅಕ್ರಮವಾಗಿ ಹಾಕಲಾಗಿದ್ದ ಬ್ಯಾನರ್ ಒಂದು ಆಕೆಯ ಮೇಲೆ ಬಿದ್ದು ಆಕೆ ಕೆಳಕ್ಕೆ ಬಿದ್ದಿದ್ದಳು. ಆಗ ಹಿಂದಿನಿಂದ ಬಂದ ಟ್ಯಾಂಕರ್ ಆಕೆಯ ಮೇಲೆಯೇ ಚಲಿಸಿತ್ತು. ಈ ಸಾವು ಚೆನ್ನೆಯಲ್ಲಿ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿತ್ತು. ಅದನ್ನು ಅನುಸರಿಸಿ ರಾಜಕೀಯ ಪಕ್ಷಗಳು ಭಿತ್ತಿ ಫಲಕ ಮತ್ತು ಬ್ಯಾನರ್ ಅಳವಡಿಸುವುದನ್ನು ನಿಲ್ಲಿಸುವಂತೆ ತಮ್ಮ ಕಾರ್ಯಕರ್ತರಿಗೆ ಸೂಚಿಸಿದ್ದವು.
ಘಟನೆಯ ಬಳಿಕ ತಮಿಳುನಾಡು ಸರ್ಕಾರ, ಚೆನ್ನೈ ಮುನಿಸಿಪಲ್ ಕಾರ್ಪೋರೇಷನ್ ಗೆ ಮಹಿಳೆಯ ಸಾವಿಗೆ ಕಾರಣವಾದ ಫ್ಲೆಕ್ಸ್ ಬೋರ್ಡ್ನ್ನು ಅಕ್ರಮವಾಗಿ ಹಾಕಿದ್ದನ್ನು ತಡೆಗಟ್ಟುವಲ್ಲಿ ವಿಫಲರಾದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಮದ್ರಾಸ್ ಹೈಕೋರ್ಟ್ ಆಜ್ಞಾಪಿಸಿತ್ತು.
ಬ್ಯಾನರ್ ಸಂಸ್ಕೃತಿಯ ಹಾವಳಿಯನ್ನು ಕಿತ್ತು ಹಾಕಲು ಕ್ರಮಗಳನ್ನು ಸೂಚಿಸಿ ವರದಿಯೊಂದನ್ನು ಸಲ್ಲಿಸಬೇಕು ಮತ್ತು ಮಹಿಳೆ ಸಾವನ್ನಪ್ಪಿದ ನಿರ್ದಿಷ್ಟ ಪ್ರಕರಣದಲ್ಲಿ ಕೈಗೊಳ್ಳಲಾದ ಕ್ರಮಗಳ ಬಗೆ ತಿಳಿಸಬೇಕು ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿತ್ತು.
ಡಿಕೆ ಶಿವಕುಮಾರ್ಗೆ ದೆಹಲಿ ಹೈಕೋರ್ಟ್ ಶರತ್ತಿನ ಜಾಮೀನು
೪೮ ದಿನಗಳ ಸೆರೆವಾಸದ ಬಳಿಕ ಲಭಿಸಿದ ನಿರಾಳತೆ
ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಿಂದ (ಇಡಿ) ಒಂದೂವರೆ ತಿಂಗಳ ಹಿಂದೆ ಬಂಧನಕ್ಕೆ ಒಳಗಾಗಿ ತಿಹಾರ್ ಸೆರೆಮನೆ ಸೇರಿದ್ದ ಕರ್ನಾಟಕದ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಅವರಿಗೆ ದೆಹಲಿ ಹೈಕೋರ್ಟ್ 2019 ಅಕ್ಟೋಬರ್ 23ರ ಬುಧವಾರ ಶರತ್ತಿನ ಜಾಮೀನು ಮಂಜೂರು ಮಾಡಿತು. ಇದರೊಂದಿಗೆ ಬಂಧನಕ್ಕೆ ಒಳಗಾದ ೪೮ ದಿನಗಳ ಬಳಿಕ ೫೭ರ ಹರೆಯದ ಕಾಂಗ್ರೆಸ್ ನಾಯಕನಿಗೆ ನಿರಾಳತೆ ಲಭಿಸಿತು.
ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈಟ್ ಅವರು ಐಪಿಸಿ ಸೆಕ್ಷನ್ ೧೨೦ ಬಿ ಬಗ್ಗೆ ವಿವರಣೆ ನೀಡಿ ತೀರ್ಪನ್ನು ಪ್ರಕಟಿಸಿದರು. ಡಿಕೆ ಶಿವಕುಮಾರ್ ಜಾಮೀನು ಅರ್ಜಿ ಕುರಿತು ವಾದ, ಪ್ರತಿವಾದ ಆಲಿಸಿದ್ದ ನ್ಯಾಯಮೂರ್ತಿ ತಮ್ಮ ತೀರ್ಪನ್ನು 2019 ಅಕ್ಟೋಬರ್ 23ರ ಬುಧವಾರಕ್ಕೆ ಕಾಯ್ದಿರಿಸಿದ್ದರು.
ತಿಹಾರ್ ಜೈಲು ವಾಸ ಅನುಭವಿಸುತ್ತಿದ್ದ ಶಿವಕುಮಾರ್ ಅವರ ಆರೋಗ್ಯ ಸ್ಥಿತಿ ಗಮನಿಸಿ ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈಟ್ ಅವರ ಏಕಸದಸ್ಯ ಪೀಠ ಜಾಮೀನು ಮಂಜೂರು ಮಾಡಿತು. ಇದರ ಜೊತೆಗೆ ೨೫ ಲಕ್ಷ ರೂಪಾಯಿ ಮೌಲ್ಯದ ಎರಡು ಬಾಂಡುಗಳನ್ನು ಒದಗಿಸಬೇಕು, ಪಾಸ್ ಪೋರ್ಟ್ನ್ನು ಒಪ್ಪಿಸಬೇಕು ಮತ್ತು ವಿಚಾರಣೆಗೆ ಸಹರಿಸಬೇಕು ಎಂಬ ಶರತ್ತುಗಳನ್ನು ವಿಧಿಸಿತು.
ಕಾಂಗ್ರೆಸ್ ನಾಯಕ ವಿದೇಶಕ್ಕೆ ಪರಾರಿಯಾಗಬಹುದು ಎಂಬುದನ್ನು ತೋರಿಸುವಂತಹ ಯಾವುದೇ ಸಾಕ್ಷ್ಯಧಾರವೂ ಇಲ್ಲವಾದ್ದರಿಂದ ಅವರು ಜಾಮೀನು ಪಡೆಯಲು ಅರ್ಹರಾಗಿದ್ದಾರೆ ಎಂದು ಜಾಮೀನು ಮಂಜೂರು ಮಾಡುತ್ತಾ ನ್ಯಾಯಮೂರ್ತಿ ಸುರೇಶ್ ಕೈಟ್ ಹೇಳಿದರು.
ದಾಖಲೆಗಳು ತನಿಖಾ ಸಂಸ್ಥೆಯ ಬಳಿ ಇರುವುದರಿಂದ ಶಿವಕುಮಾರ್ ಅವರು ಸಾಕ್ಷ್ಯಾಧಾರ ನಾಶಪಡಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಹೇಳಿದರು.
ಶಿವಕುಮಾರ್ ಅವರು ಅಧಿಕಾರದಲ್ಲಿ ಇಲ್ಲ ಮತ್ತು ಅವರು ಅಥವಾ ಅವರ ಕುಟುಂಬ ಸದಸ್ಯರು ಅಥವಾ ನಿಕಟವರ್ತಿಗಳು ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಯತ್ನಿಸಿದ್ದಾರೆ ಎಂಬುದನ್ನು ತೋರಿಸುವಂತಹ ಯಾವುದೇ ಪುರಾವೆ ಇಲ್ಲ ಎಂದೂ ಪೀಠ ಹೇಳಿತು.
ಆದಾಗ್ಯೂ, ಶಿವಕುಮಾರ್ ಅವರನ್ನು ೨೫ಲಕ್ಷ ರೂಪಾಯಿಗಳ ಬಾಂಡ್ ಮತ್ತು ಎರಡು ಖಾತರಿಗಳನ್ನು ಹಾಜರು ಪಡಿಸಿದ ಬಳಿಕ ಬಿಡುಗಡೆ ಮಾಡಬೇಕು ಎಂದು ನ್ಯಾಯಾಲಯ ನಿರ್ದೇಶನ ನೀಡಿತು.
ಶಿವಕುಮಾರ್ ಅವರು ವಿಚಾರಣಾ ನ್ಯಾಯಾಲಯದ ಅನುಮತಿ ಇಲ್ಲದೆ ದೇಶದಿಂದ ಹೊರ ಹೋಗುವಂತಿಲ್ಲ, ತನಿಖೆಗೆ ಲಭ್ಯರಿರಬೇಕು/ ಸಹಕರಿಸಬೇಕು ಮತ್ತು ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು ಎಂದೂ ಹೈಕೋರ್ಟ್ ಜಾಮೀನು ಮಂಜೂರು ಮಾಡುತ್ತಾ ಶರತ್ತುಗಳನ್ನು ವಿಧಿಸಿತು.
ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯವು ತನಿಖೆಗಾಗಿ ದೆಹಲಿಗೆ ಕರೆಸಿಕೊಂಡು ನಾಲ್ಕು ದಿನಗಳ ಬಳಿಕ ಸೆಪ್ಟೆಂಬರ್ ೩ರಂದು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ಅಡಿಯಲ್ಲಿ ಬಂಧಿಸಿತ್ತು. ಜಾರಿ ನಿರ್ದೇಶನಾಲಯ ತನಿಖೆಯ ಬಳಿಕ ಅವರನ್ನು ತಿಹಾರ್ ಸೆರೆಮನೆಯಲ್ಲಿ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿತ್ತು.
ತಮಗೆ ಜಾರಿ ನಿರ್ದೇಶನಾಲಯದ (ಇಡಿ) ವಿಶೇಷ ನ್ಯಾಯಾಲಯವು ಜಾಮೀನು ನಿರಾಕರಿಸಿದ್ದನ್ನು ಪ್ರಶ್ನಿಸಿ ಡಿಕೆ ಶಿವಕುಮಾರ್ ಅವರು ದೆಹಲಿ ಹೈಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.
ಶಿವಕುಮಾರ್ ಅವರು ಪ್ರಭಾವಶಾಲಿ ವ್ಯಕ್ತಿಯಾಗಿದ್ದು, ಬಿಡುಗಡೆಯಾದರೆ ಸಾಕ್ಷ್ಯದಲ್ಲಿ ಕೈಯಾಡಿಸುವ ಹಾಗೂ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂಬುದಾಗಿ ವಾದಿಸುವ ಮೂಲಕ ಜಾರಿ ನಿರ್ದೇಶನಾಲಯವು ಅವರಿಗೆ ಜಾಮೀನು ಮಂಜೂರು ಮಾಡಲು ತೀವ್ರ ವಿರೋಧ ವ್ಯಕ್ತ ಪಡಿಸಿತ್ತು.
ಕರ್ನಾಟಕದಲ್ಲಿ ಏಳು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಶಿವಕುಮಾರ್ ಅವರ ವಿರುದ್ಧ ನವದೆಹಲಿಯ ಕರ್ನಾಟಕ ಭವನದ ನೌಕರ ಹನುಮಂತಯ್ಯ ಮತ್ತು ಇತರರ ಜೊತೆಗೆ ಅಕ್ರಮ ಹಣ ವರ್ಗಾವಣೆ ತಡೆ (ಪಿಎಂಎಲ್ ಎ) ಕಾಯ್ದೆಯ ಅಡಿಯಲ್ಲಿ ವಿವಿಧ ಅಪರಾಧ ಎಸಗಿದ ಆರೋಪಕ್ಕಾಗಿ ಪ್ರಕರಣ ದಾಖಲಿಸಲಾಗಿತ್ತು.
ಜಾರಿ ನಿರ್ದೇಶನಾಲಯದಿಂದ ಸೆಪ್ಟೆಂಬರ್ ೩ರಂದು ಬಂಧಿತರಾದ ಒಂದೂವರೆ ತಿಂಗಳ ಸೆರೆ ವಾಸದ ಬಳಿಕೆ ಡಿಕೆ ಶಿವಕುಮಾರ್ ಬಂಧಮುಕ್ತಿಯ ಆದೇಶವನ್ನು ಪಡೆದರು.
ಪ್ರಕರಣದ ಹಿನ್ನೆಲೆ:
ಆದಾಯ ತೆರಿಗೆ ಇಲಖೆಯು ಕಳೆದ ವರ್ಷ ಬೆಂಗಳೂರಿನ ವಿಶೇಷ ನ್ಯಾಯಾಲಯದಲ್ಲಿ ದಾಖಲಿಸಿದ್ದ ಕೋಟ್ಯಂತರ ರೂಪಾಯಿಗಳ ಹವಾಲಾ ವಹಿವಾಟು ಮತ್ತು ತೆರಿಗೆ ವಂಚನೆ ಆರೋಪದ ಪ್ರಕರಣದಲ್ಲಿ ಸಲ್ಲಿಸಲಾಗಿದ್ದ ದೋಷಾರೋಪ ಪಟ್ಟಿಯನ್ನು (ಚಾರ್ಜ್ಶೀಟ್) ಆಧರಿಸಿ ಜಾರಿ ನಿರ್ದೇಶನಾಲಯವು ಹಣ ವಗಾವಣೆ ಪ್ರಕರಣವನ್ನು ದಾಖಲಿಸಿತ್ತು.
ಶಿವಕುಮಾರ್ ಮತ್ತು ಅವರ ನಿಕಟವರ್ತಿ ಎಸ್ಕೆ ಶರ್ಮ ಅವರು ಭಾರೀ ಮೊತ್ತದ ಲೆಕ್ಕರಹಿತ ಹಣವನ್ನು ಇತರ ಮೂವರು ಆರೋಪಿಗಳ ನೆರವಿನೊಂದಿಗೆ ನಿಯಮಿತವಾಗಿ ಹವಾಲಾ ಜಾಲದ ಮೂಲ ಕಳುಹಿಸುತ್ತಿದ್ದರು ಎಂದು ಆದಾಯ ತೆರಿಗೆ ಇಲಾಖೆ ತನ್ನ ದೋಷಾರೋಪ ಪಟ್ಟಿಯಲ್ಲಿ ಆಪಾದಿಸಿತ್ತು.
೨೦೧೭ರ ನಿರ್ಣಾಯಕ ರಾಜ್ಯಸಭಾ ಚುನಾವಣೆಗೆ ಮುನ್ನ ಗುಜರಾತಿನ ಶಾಸಕರಿಗೆ ಕರ್ನಾಟಕದ ರಾಜಧಾನಿ ಬೆಂಗಳೂರಿನ ಹೊರವಲಯದ ರೆಸಾರ್ಟ್ನಲ್ಲಿ ಆಶ್ರಯ ಒದಗಿಸುವಲ್ಲಿ ಶಿವಕುಮಾರ್ ಪ್ರಮುಖ ಪಾತ್ರ ವಹಿಸಿದ್ದರು. ಇದೇ ವೇಳೆಯಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಶಿವಕುಮಾರ್ ಅವರಿಗೆ ಸಂಬಂಧಿಸಿದ ಆಸ್ತಿಗಳ ಮೇಲೆದಾಳಿ ನಡೆಸಿದ್ದರು.
ಈ ದಾಳಿಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಶಿವಕುಮಾರ್ ಅವರ ದೆಹಲಿ ಮನೆಯಲ್ಲಿ ೮.೮೨ ಕೋಟಿ ರೂಪಾಯಿಗಳ ಲೆಕ್ಕವಿಲ್ಲದ ಹಣವನ್ನು ವಶಪಡಿಸಿಕೊಂಡಿದ್ದರು.
ಮುಖ್ಯಾಂಶಗಳು:
* ಡಿಕೆ ಶಿವಕುಮಾರ್ಗೆ ಶರತ್ತಿನ ಜಾಮೀನು ನೀಡಿದ ದೆಹಲಿ ಹೈಕೋರ್ಟ್
* ಅನಾರೋಗ್ಯದ ಕಾರಣ ನೀಡಿ ಜಾಮೀನು ಮಂಜೂರು
* ವಿದೇಶಕ್ಕೆ ಪಲಾಯನ ಮಾಡುವ ಸಾಧ್ಯತೆ ಇಲ್ಲ
* ವಿದೇಶಕ್ಕೆ ಹೋಗಲು ಕೋರ್ಟ್ ಅನುಮತಿ ಪಡೆಯಬೇಕು
* ೨೫ ಲಕ್ಷ ರೂಪಾಯಿ ಬಾಂಡ್ ನೀಡಬೇಕು
* ಸಾಕ್ಷ್ಯ ನಾಶಕ್ಕೆ ಪುರಾವೆ ಇಲ್ಲ
* ಡಿ.ಕೆ. ಶಿವಕುಮಾರ್ ಪಾಸ್ ಪೋರ್ಟ್ನ್ನು ನ್ಯಾಯಾಲಯದ ವಶಕ್ಕೆ ಒಪ್ಪಿಸಬೇಕು.
ತಿಹಾರ್ ಜೈಲಿನಲ್ಲಿ ಭೇಟಿಯಾಗಿದ್ದ ಸೋನಿಯಾ, ಎಚ್ಡಿಕೆ
ಈ ಮಧ್ಯೆ, ತಿಹಾರ್ ಸೆರೆಮನೆಯಲ್ಲಿದ್ದ ಕರ್ನಾಟಕ ಮೈತ್ರಿಸರ್ಕಾರದ ಪ್ರಮುಖ ’ಸಂಕಷ್ಟ ನಿವಾರಕ’ರಾಗಿದ್ದ ಡಿಕೆ ಶಿವಕುಮಾರ್ ಅವರನ್ನು ಮಂಗಳವಾರ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಮತ್ತು ಬುಧವಾರ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಭೇಟಿಯಾಗಿದ್ದರು.
ಈ ಮಧ್ಯೆ, ಶಿವಕುಮಾರ್ ಅವರಿಗೆ ಜಾಮೀನು ಮಂಜೂರು ಮಾಡಿದ ದೆಹಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯವು ಸುಪ್ರೀಂಕೋರ್ಟಿಗೆ ಮನವಿ ತತ್ ಕ್ಷಣವೇ ಮನವಿ ಸಲ್ಲಿಸಿದ್ದು, ಮೇಲ್ಮನವಿಯು 2019 ಅಕ್ಟೋಬರ್ 24ರ ಗುರುವಾರ ವಿಚಾರಣೆಗೆ ಬರುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿದವು.
ದೀಪಾವಳಿ ದಿನ ಲಂಡನ್ನಿನಲ್ಲಿ ಭಾರತ ವಿರೋಧಿ ಪ್ರತಿಭಟನೆ
ಬ್ರಿಟಿಷ್ ಸರ್ಕಾರಕ್ಕೆ ಭಾರತದ ಪತ್ರ, ಭದ್ರತೆಗೆ ಆಗ್ರಹ
ನವದೆಹಲಿ: ಅಕ್ಟೋಬರ್ ೨೭ರ ಭಾನುವಾರ ’ದೀಪಾವಳಿ’ ದಿನದಂದು ಲಂಡನ್ನಿನಲ್ಲಿ ಜಮ್ಮ ಮತ್ತು ಕಾಶ್ಮೀರದ ವಿಷಯವಾಗಿ ನಡೆಸಲು ಉದ್ದೇಶಿಸಲಾಗಿರುವ ಭಾರತ ವಿರೋಧಿ ಪ್ರತಿಭಟನೆ ಬಗ್ಗೆ ಬ್ರಿಟಿಷ್ ಸರ್ಕಾರದ ಗಮನ ಸೆಳೆದು 2019 ಅಕ್ಟೋಬರ್ 23ರ ಬುಧವಾರ ಭಾರತವು ಪತ್ರ ಬರೆಯಿತು ಮತ್ತು ಲಂಡನ್ನಿನಲ್ಲಿ ಇರುವ ಭಾರತದ ರಾಯಭಾರಿ ಕಚೇರಿ ಮತ್ತು ಸಿಬ್ಬಂದಿಗೆ ಭದ್ರತೆ ಒದಗಿಸುವಂತೆ ಆಗ್ರಹಿಸಿತು.
ಕಾಶ್ಮೀರ ವಿಷಯಕ್ಕೆ ಸಂಬಂಧಿಸಿದಂತೆ ಇಂಗ್ಲೆಂಡಿನಲ್ಲಿ ಭಾರತ ವಿರೋಧಿ ಭಾವನೆಗಳನ್ನು ಹುಟು ಹಾಕಲು ನಡೆಯುತ್ತಿರುವ ಯತ್ನಗಳ ಬಗ್ಗೆ ಮತ್ತು ಲಂಡನ್ನಿನ ಭಾರತೀಯ ರಾಯಭಾರ ಕಚೇರಿಯ ಸಿಬ್ಬಂದಿ ಸುರಕ್ಷತೆ ಮತ್ತು ಭದ್ರತೆ ಬಗ್ಗೆ ಕಳವಳ ವ್ಯಕ್ತ ಪಡಿಸಿ ಭಾರತವು ಲಂಡನ್ನಿನ ರಾಜತಾಂತ್ರಿಕ ಕಚೇರಿಯ ಮೂಲಕ ಇಂಗ್ಲೆಂಡ್ ಸರ್ಕಾರಕ್ಕೆ ರಾಜತಾಂತ್ರಿಕ ಪತ್ರವನ್ನು ರವಾನಿಸಿತು.
ಕಾಶ್ಮೀರ ವಿಷಯಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಪರ ಗುಂಪುಗಳು ಲಂಡನ್ನಿನ ಭಾರತೀಯ ರಾಯಭಾರ ಕಚೇರಿಯ ಮುಂದೆ ಆಗಸ್ಟ್ ೧೫ ಮತ್ತು ಸೆಪ್ಟೆಂಬರ್ ೩ರಂದು ಪ್ರತಿಭಟನೆಗಳನ್ನು ನಡೆಸಿದ್ದವು. ಆಗಸ್ಟ್ ೧೫ರಂದು ಭಾರತದ ರಾಯಭಾರ ಕಚೇರಿಯಲ್ಲಿ ನಡೆಯುವ ಸ್ವಾತಂತ್ರ್ಯೋತ್ಸವ ಸಮಾರಂಭವನ್ನು ಹಾಳುಗೆಡಹುವ ಉದ್ದೇಶದೊಂದಿಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ವಿಚಾರವನ್ನು ಪ್ರಧಾನಿ ನರೇಂದ್ರ ಮೋದಿಯವರು ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಜೊತೆಗೆ ಆಗಸ್ಟ್ ೨೦ರಂದು ನಡೆಸಿದ ದೂರವಾಣಿ ಮಾತುಕತೆಯಲ್ಲಿ ಪ್ರಸ್ತಾಪಿಸಿದ್ದರು.
ಲಂಡನ್ನಿನ ಭಾರತೀಯ ರಾಯಭಾರ ಕಚೇರಿಯ ಮುಂಭಾಗದಲ್ಲಿ ಭಾರೀ ಗುಂಪೊಂದರಿಂದ ನಡೆದ ಹಿಂಸಾಚಾರ ಮತ್ತು ವಿಧ್ವಂಸಕ ಕೃತ್ಯದ ಬಗ್ಗೆ ಮೋದಿ ಪ್ರಸ್ತಾಪಿಸಿದ್ದು, ಜಾನ್ಸನ್ ಅವರು ಘಟನೆ ಬಗ್ಗೆ ವಿಷಾದ ವ್ಯಕ್ತ ಪಡಿಸಿದರು ಮತ್ತು ಹೈಕಮೀಷನ್, ಸಿಬ್ಬಂದಿ ಮತ್ತು ಸಂದರ್ಶಕರಿಗೆ ಭದ್ರತೆ ಹಾಗೂ ಸುರಕ್ಷತೆ ಒದಿಗುಸ ಬಗ್ಗೆ ಅಗತ್ಯ ಕ್ರಮದ ಭರವಸೆ ನೀಡಿದ್ದಾರೆ ಎಂದು ಭಾರತದ ಕಡೆಯಿಂದ ಬಿಡುಗಡೆ ಮಾಡಲಾದ ಮಾಹಿತಿ ತಿಳಿಸಿತ್ತು.
ಆದಾಗ್ಯೂ, ಆ ಬಳಿಕ ಸೆಪ್ಟೆಂಬರ್ ೩ರಂದು ನಡೆದ ಪ್ರತಿಭಟನೆ ಇನ್ನಷ್ಟು ಅಸಹ್ಯಕರ ತಿರುವು ಪಡೆದಿತ್ತು. ಪ್ರತಿಭಟನಕಾರರು ರಾಯಭಾರ ಕಚೇರಿಯ ಆವರಣದ ಸಮೀಪದವರೆಗೂ ಬಂದದ್ದಲ್ಲದೆ ಟೊಮ್ಯಾಟೋ, ಕೋಳಿ ಮೊಟ್ಟೆ ಎಸೆದು, ಕಿಟಕಿ ಗಾಜುಗಳನ್ನೂ ಪುಡಿ ಮಾಡಿದ್ದರು.
ಘಟನೆ ಬಗ್ಗೆ ಇಂಗ್ಲೆಂಡಿನ ಭಾರತೀಯ ಹೈಕಮೀಷನ್ ಟ್ವೀಟ್ ಮಾಡಿದಾಗ ಲಂಡನ್ ಮೇಯರ್ ಸಾದಿಖ್ ಖಾನ್ ದಾಳಿಯನ್ನು ಖಂಡಿಸಿದರು. ಆದರೆ ಪೊಲೀಸರು ಪ್ರತಿಭಟನಕಾರರನ್ನು ಹೈಕಮೀಷನ್ನಿಂದ ಸಾಕಷ್ಟು ದೂರದಲ್ಲಿಯೇ ತಡೆಯಲು ವಿಫಲರಾದದ್ದು ಹೇಗೆ ಎಂಬ ಬಗ್ಗೆ ಪ್ರಶ್ನೆಗಳು ಎದ್ದಿದ್ದವು.
ಈ ಮಧ್ಯೆ, ವಿಷಯವು ಇಂಗ್ಲೆಂಡಿನ ಸಂಸತ್ತಿನಲ್ಲೂ ಬುಧವಾರ ಪ್ರತಿಧ್ವನಿಸಿದ್ದು ಹ್ಯಾರೋ ಪೂರ್ವದ ಸಂಸತ್ ಸದಸ್ಯರ ಬಾಬ್ ಬ್ಲಾಕ್ಮ್ಯಾನ್ ಅವರು ಭಾನುವಾರಕ್ಕೆ ನಿಗದಿಯಾಗಿರುವ ಹಿಂಸಾತ್ಮಕ ಪ್ರತಿಭಟನೆಯನ್ನು ತಡೆಯಲು ಸರ್ಕಾರ ಕೈಗೊಂಡಿರುವ ಕ್ರಮಗಳು ಏನು ಎಂದು ಪ್ರಶ್ನಿಸಿದರು.
ಹಿಂಸಾಚಾರಕ್ಕೆ ತಿರುಗುವ ಯಾವುದೇ ಪ್ರತಿಭಟನೆಯನ್ನು ಪ್ರಧಾನಿ ಜಾನ್ಸನ್ ಖಂಡಿಸಿ, ’ಇದನ್ನುಅಂಗೀಕರಿಸಲು ಸಾಧ್ಯವಿಲ್ಲ’ ಎಂದು ಹೇಳಿದರು. ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ಅವರು ವಿಷಯವನ್ನು ಪೊಲೀಸರ ಬಳಿ ಪ್ರಸ್ತಾಪಿಸುವರು ಎಂದು ಪ್ರಧಾನಿ ಭರವಸೆ ನೀಡಿದರು.
ದೆಹಲಿ ಕಾಂಗ್ರೆಸ್ ಅಧ್ಯಕ್ಷರಾಗಿ ಸುಭಾಶ್ ಛೋಪ್ರಾ ನೇಮಕ
ನವದೆಹಲಿ: ಕಾಂಗ್ರೆಸ್ ಪಕ್ಷವು ಪಕ್ಷದ ನಾಯಕ ಸುಭಾಶ್ ಛೋಪ್ರಾ ಅವರನ್ನು ಪಕ್ಷದ ದೆಹಲಿ ಘಟಕದ ಅಧ್ಯಕ್ಷರಾಗಿ 2019 ಅಕ್ಟೋಬರ್ 23ರ ಬುಧವಾರ ನೇಮಕ ಮಾಡಿತು. ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರು ಜುಲೈ ೨೦ರಂದು ನಿಧನರಾದಂದಿನಿಂದ ಹುದ್ದೆಯು ಖಾಲಿ ಬಿದ್ದಿತ್ತು.
ದೆಹಲಿಯ ಪಕ್ಷದ ನಾಯಕರ ಜೊತೆಗೆ ಮಾತುಕತೆಗಳನ್ನು ನಡೆಸಿದ ಬಳಿಕ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸುಭಾಶ್ ಛೋಪ್ರಾ ಅವರನ್ನು ಪಕ್ಷದ ಹುದ್ದೆಗೆ ಆಯ್ಕೆ ಮಾಡಿದರು.
ಕಳೆದ ಕೆಲವು ತಿಂಗಳುಗಳಿಂದ ಕಾಂಗ್ರೆಸ್ ಪಕ್ಷವು ರಾಷ್ಟ್ರದ ರಾಜಧಾನಿಯಲ್ಲಿ ಪಕ್ಷದ ವ್ಯವಹಾರಗಳನ್ನು ಹರೂನ್ ಯೂಸುಫ್, ದೇವೇಂದ್ರ ಯಾದವ್ ಮತ್ತು ರಾಜೇಶ್ ಲಿಲೋಥಿಯ ಈ ಮೂವರು ಕಾರ್ಯಾಧ್ಯಕ್ಷರ ಮೂಲಕ ನಿಭಾಯಿಸುತ್ತಿತ್ತು.