SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಬಿಜೆಪಿಗೆ ‘ಮಹಾ’  ಆಘಾತ: ಸಿಗಲಿಲ್ಲ ನಿರೀಕ್ಷಿತ ‘ಪ್ರಚಂಡ’ ಬಹುಮತ


24 modi amith shah
ಮಹಾರಾಷ್ಟ್ರದಲ್ಲಿ ಸರಳ ಬಹುಮತ, ಅತಂತ್ರ ಹರಿಯಾಣದಲ್ಲಿ ಸರ್ಕಾರ ರಚನೆಗೆ ತಂತ್ರ

ನವದೆಹಲಿ: ಭಾರತೀಯ ಜನತಾ ಪಕ್ಷ ನೇತೃತ್ವದ ಎನ್‌ಡಿಎ-೨ ಸರ್ಕಾರವು ಕೇಂದ್ರದಲ್ಲಿ ಅಧಿಕಾರಕ್ಕೆ ಏರಿದ ಬಳಿಕ ಮಹಾರಾಷ್ಟ್ರ ಮತ್ತು ಹರಿಯಾಣ ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಉದಯಿಸಿ, ಸರ್ಕಾರ ರಚನೆಯ ಘೋಷಣೆ ಮಾಡಿದ್ದರೂ, ನಿರೀಕ್ಷೆಗಳಿಗೆ ವಿರುದ್ಧವಾಗಿ ಸ್ಥಾನಗಳ ನಷ್ಟದ ಭಾರೀ ಆಘಾತವನ್ನು 2019 ಅಕ್ಟೋಬರ್ 24ರ ಗುರುವಾರ ಅನುಭವಿಸಿತು.

ಮಹಾರಾಷ್ಟ್ರದಲ್ಲಿ ೨೮೮ ಸ್ಥಾನಗಳ ಪೈಕಿ ಬಿಜೆಪಿ ಮತ್ತು ಶಿವಸೇನಾ ಮೈತ್ರಿಕೂಟ ೧೬೨ ಸ್ಥಾನಗಳೊಂದಿಗೆ ಬಹುಮತ ಪಡೆದರೂ, ೨೦೧೪ಕ್ಕೆ ಹೋಲಿಸಿದರೆ ಮೈತ್ರಿಕೂಟ ೨೩ ಸ್ಥಾನಗಳ ನಷ್ಟ ಅನುಭವಿಸಿತು. ೯೦ ಸದಸ್ಯಬಲದ ಹರಿಯಾಣದಲ್ಲಿ ಅತಂತ್ರ ವಿಧಾನಸಭೆ ರೂಪುಗೊಂಡಿದ್ದು, ೪೦ ಸ್ಥಾನಗಳೊಂದಿಗೆ ಏಕೈಕ ದೊಡ್ಡ ಪಕ್ಷವಾಗಿ ಉದಯಿಸಿದ ಬಿಜೆಪಿ ೭ ಸ್ಥಾನಗಳ ನಷ್ಟ ಅನುಭವಿಸಿತು.

ಉಭಯ ರಾಜ್ಯಗಳಲ್ಲೂ ವಿರೋಧಿ ಕಾಂಗ್ರೆಸ್ ಚೇತರಿಸಿಕೊಂಡಿತು. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಮತ್ತು ಎನ್‌ಸಿಪಿ ಮೈತ್ರಿಕೂಟ ೧೨ ಸ್ಥಾನಗಳ ಹೆಚ್ಚುವರಿ ಗಳಿಕೆಯೊಂದಿಗೆ 104  ಸ್ಥಾನಗಳನ್ನು ಗೆದ್ದಿವೆ. ಹರಿಯಾಣದಲ್ಲಿ ೧೬ ಹೆಚ್ಚುವರಿ ಸ್ಥಾನಗಳಿಕೆಯೊಂದಿಗೆ ೩೧ ಸ್ಥಾನಗಳನ್ನು ಕಾಂಗ್ರೆಸ್ ಗೆದ್ದಿದೆ. ಮಹಾರಾಷ್ಟ್ರದಲ್ಲಿ ಇತರರು ೩೧ ಸ್ಥಾನಗಳನ್ನು ಗೆದ್ದರೆ, ಹರಿಯಾಣದಲ್ಲಿ ೧೯ ಮಂದಿ ಇತರರು ಗೆದ್ದಿದ್ದು ಈ ಪೈಕಿ ಜನನಾಯಕ ಜನತಾ ಪಕ್ಷದ (ಜೆಜೆಪಿ) ನಾಯಕ ದುಶ್ಯಂತ್ ’ಕಿಂಗ್ ಮೇಕರ್’ ಸ್ಥಾನಕ್ಕೆ ಏರಿದರು.

ಬಿಜೆಪಿ ಮತ್ತು ಕಾಂಗ್ರೆಸ್ ಅಧಿಕಾರಕ್ಕಾಗಿ ಹಣಾಹಣಿಗೆ ಇಳಿದಿದ್ದು, ಬೆಂಬಲಕ್ಕಾಗಿ ದುಶ್ಯಂತ್ ಕಡೆಗೆ ನೋಡುವಂತಾಗಿದೆ. ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ಅವರು ಸರ್ಕಾರ ರಚನೆಗೆ ರಾಜ್ಯಪಾಲ ಸತ್ಯದೇವ್ ನಾರಾಯಣ್ ಆರ್ಯ ಬಳಿ ಹಕ್ಕು ಮಂಡಿಸಿ, ಏಕೈಕ ದೊಡ್ಡ ಪಕ್ಷವಾಗಿರುವ ನೆಲೆಯಲ್ಲಿ ಬಿಜೆಪಿಯನ್ನು ಸರ್ಕಾರ ರಚಿಸಲು ಆಹ್ವಾನಿಸಬೇಕು ಎಂದು ಕೋರಿದರು.

ಚುನಾವಣಾ ಫಲಿತಾಂಶದ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರು ಪಕ್ಷದ ಸಾಧನೆಗಾಗಿ ಮಹಾರಾಷ್ಟ್ರ ಮತ್ತು ಹರಿಯಣದ ಮುಖ್ಯಮಂತ್ರಿಗಳನ್ನು ಅಭಿನಂದಿಸಿ ಪಕ್ಷಕ್ಕೆ ಮತ್ತೊಮ್ಮೆ ಜನರ ಸೇವೆ ಮಾಡಲು ಅವಕಾಶ ಕಲ್ಪಿಸಿಕೊಟ್ಟದ್ದಕ್ಕಾಗಿ ಧನ್ಯವಾದ ಸಲ್ಲಿಸಿದರು.

ಮಹಾರಾಷ್ಟ್ರದಲ್ಲಿ ೨೨೦ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲುವ ಮಹತ್ವಾಕಾಂಕ್ಷೆಯ ಗುರಿ ಇಟ್ಟುಕೊಂಡಿದ್ದ ಬಿಜೆಪಿ-ಶಿವಸೇನಾ ಮೈತ್ರಿಕೂಟ ತನ್ನ ಗುರಿ ತಲುಪುವಲ್ಲಿ ಮುಗ್ಗರಿಸಿತು. ಆದರೆ ಸರ್ಕಾರ ರಚನೆಗೆ ಬೇಕಾದ ಸರಳ ಬಹುಮತವನ್ನು ಪಡೆಯಿತು. ಆದರೆ ಬಿಜೆಪಿಯ ಸ್ಥಾನ ನಷ್ಟದ ಲಾಭ ಪಡೆಯಲು ಹೆಜ್ಜೆ ಮುಂದಿಟ್ಟಿರುವ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ  ಅಧಿಕಾರ ಹಂಚಿಕೆಯಲ್ಲಿ  ೫೦:೫೦ ಸೂತ್ರದ ಪಾಲನೆಯಾಗಬೇಕು’ ಎಂಬ ಸಂದೇಶವನ್ನು ಬಿಜೆಪಿಗೆ ರವಾನಿಸಿದರು. ಸರ್ಕಾರ ರಚನೆಗೆ ತಮಗೆ ಅವಸರವಿಲ್ಲ ಎಂಬುದಾಗಿ ಹೇಳುವ ಮೂಲಕ ಬಿಜೆಪಿಯು ತರಾತುರಿಯಲ್ಲಿ ಸರ್ಕಾರ ರಚಿಸದಂತೆ ತಡೆಯುವ ನಿಟ್ಟಿನಲ್ಲಿ ಅವರು ಕಾಲಿಟ್ಟರು.

ಇತ್ತ ೯೦ ಸ್ಥಾನಗಳಿಗೂ ಸ್ಪರ್ಧಿಸಿದ್ದ ಹರಿಯಾಣದಲ್ಲಿ ಕೇವಲ ೪೦ ಸ್ಥಾನ ಗೆಲ್ಲಲು ಸಮರ್ಥವಾಗಿರುವ ಬಿಜೆಪಿಗೆ ಬಹುಮತದ ಅಂಚಿಗೆ ಬರಲು ಅಸಾಧ್ಯವಾದ್ದರಿಂದ ಸರ್ಕಾರ ರಚನೆ ಅಷ್ಟೊಂದು ಸುಲಭವಲ್ಲ. ೯೦ ಸದಸ್ಯಬಲದ ವಿಧಾನಸಭೆಯಲ್ಲಿ ಬಹುಮತಕ್ಕೆ ೪೬ ಸ್ಥಾನಗಳು ಬೇಕಾಗಿವೆ.

ಹರಿಯಾಣದಲ್ಲಿ ಅತಂತ್ರ ವಿಧಾನಸಭೆ ರಚನೆಯಾಗುತ್ತಿದ್ದಂತೆಯೇ  ಮ್ಯಾಜಿಕ್ ಸಂಖ್ಯೆ ೪೬ ತಲುಪಲು ರಾಜಕೀಯ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆ ಶುರುವಾಯಿತು. ರಾಜ್ಯದಲ್ಲಿ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ವಿರುದ್ಧ ಪ್ರಚಾರ ಸಮರದ ನೇತೃತ್ವ ವಹಿಸಿದ್ದ ಕಾಂಗ್ರೆಸ್ ನಾಯಕ ಭೂಪೀಂದರ್ ಹೂಡಾ ಅವರು ಬಿಜೆಪಿಯು ಅಧಿಕಾರಕ್ಕೆ ಮರಳದಂತೆ ತಡೆಯಲು ಕೈಜೋಡಿಸುವಂತೆ ಇತರ ಪಕ್ಷಗಳು ಮತ್ತು ಪಕ್ಷೇತರರಿಗೆ ಕ್ಷಿಪ್ರ ಮನವಿ ಮಾಡಿದರು.

ಬಿಜೆಪಿಯು ಸರ್ಕಾರ ರಚನೆಯ ಹಕ್ಕು ಮಂಡನೆಯ ಸುಳಿವನ್ನು ನೀಡಿತು. ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷಾಧ್ಯಕ್ಷ ಅಮಿತ್ ಶಾ ಅವರು ತಮ್ಮ ಟ್ವೀಟ್‌ಗಳಲ್ಲಿ ಈ ಇಂಗಿತ ವ್ಯಕ್ತ ಪಡಿಸುವುದರ ಜೊತೆಗೆ ಮನೋಹರಲಾಲ್ ಖಟ್ಟರ್ ಮೊದಲಿಗರಾಗಿ ರಾಜ್ಯಪಾಲರ ಬಳಿ ಸರ್ಕಾರ ರಚನೆಯ ಹಕ್ಕು ಮಂಡಿಸಿದರು.

‘ಹರಿಯಾಣದಲ್ಲಿ ಮನೋಹರಲಾಲ್ ಖಟ್ಟರ್ ಅವರ ಸರ್ಕಾರವು ಜನರ ಕಲ್ಯಾಣಕ್ಕಾಗಿ ಕೇಂದ್ರದಲ್ಲಿನ (ನರೇಂದ್ರ) ಮೋದಿ ನಾಯಕತ್ವದ ಅಡಿಯಲ್ಲಿ ಸರ್ವ ಪ್ರಯತ್ನ ಮಾಡಿದೆ. ಬಿಜೆಪಿಯನ್ನು ಏಕೈಕ ದೊಡ್ಡ ಪಕ್ಷವಾಗಿ ಆಯ್ಕೆ ಮಾಡಿರುವುದಕ್ಕಾಗಿ ಮತ್ತು ಇನ್ನೊಮ್ಮೆ ಅವರ ಸೇವೆ ಸಲ್ಲಿಸಲು ಅವಕಾಶ ನೀಡಿರುವುದಕ್ಕಾಗಿ ನಾನು ಜನತೆಗೆ ಧನ್ಯವಾದ ಸಲ್ಲಿಸುತ್ತೇನೆ’ ಎಂದು ಶಾ ತಮ್ಮ ಟ್ವೀಟಿನಲ್ಲಿ  ತಿಳಿಸಿದರು.

ಕೆಲವೇ ನಿಮಿಷಗಳಲ್ಲಿ ಇದಕ್ಕೆ ಬೆಂಬಲವಾಗಿ ಟ್ವೀಟ್ ಮಾಡಿದ ಪ್ರಧಾನಿ ಮೋದಿ, ’ನಮ್ಮನ್ನು ಆಶೀರ್ವದಿಸಿದ್ದಕ್ಕಾಗಿ ಹರಿಯಾಣದ ಜನತೆಗೆ ಧನ್ಯವಾದ ಅರ್ಪಿಸುವೆ. ಇದೇ ಉತ್ಸಾಹ ಮತ್ತು ಸಮರ್ಪಣಾ ಭಾವದೊಂದಿಗೆ ನಾವು ಕೆಲಸ ಮುಂದುವರೆಸುತ್ತೇವೆ. ನಮ್ಮ ಅಭಿವೃದ್ಧಿ ಕಾರ್‍ಯಸೂಚಿಯನ್ನು ಜನತೆಯ ಬಳಿಗೆ ಒಯ್ಯಲು ವಿಶೇಷವಾಗಿ ಶ್ರಮಿಸಿದ ಹರಿಯಾಣದ ಬಿಜೆಪಿ ಕಾರ್‍ಯಕರ್ತರಿಗೂ ನನ್ನ ವಂದನೆಗಳು ಸಲ್ಲುತ್ತವೆ’ ಎಂದು ಬರೆದರು.

ಮಹಾರಾಷ್ಟ್ರ ಮತ್ತು ಹರಿಯಾಣ ಎರಡೂ ಕಡೆ ಗೆದ್ದಿರುವ ಕೆಲವು ಬಂಡಾಯ ಶಾಸಕರ ಜೊತೆಗೆ ಬಿಜೆಪಿಯ ಸಂಪರ್ಕ ಸಾಧಿಸಿದೆ ಎನ್ನಲಾಯಿತು. ಹರಿಯಾಣದಲ್ಲಿ ಬಂಡಾಯ ಶಾಸಕರು ಮತ್ತು ಸಣ್ಣ ಪಕ್ಷಗಳ ಬೆಂಬಲದೊಂದಿಗೆ ಮುಂದಿನ  ಸರ್ಕಾರ ರಚಿಸಲು  ಬಿಜೆಪಿ ಮುಂದಾಗಲಿದೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಮಾಧ್ಯಮ ಒಂದಕ್ಕೆ ತಿಳಿಸಿದರು.

ಪಕ್ಷದ ತಂತ್ರದ ಬಗ್ಗೆ ಬಿಜೆಪಿ ನಾಯಕ ವಿವರಿಸಲಿಲ್ಲ. ಆದರೆ ಇಂಡಿಯನ್ ನ್ಯಾಷನಲ್ ಲೋಕದಳದ ಅಭಯ್ ಸಿಂಗ್ ಚೌಟಾಲರಂತಹ ಕೆಲವರು ಜನನಾಯಕ ಜನತಾ ಪಕ್ಷದ ಪ್ರತಿಸ್ಪರ್ಧಿ ದುಶ್ಯಂತ ಚೌಟಾಲ ’ಕಿಂಗ್ ಮೇಕರ್’ ಆಗದಂತೆ ತಡೆಯಲು ಬಿಜೆಪಿಯನ್ನು ಬೆಂಬಲಿಸುವ ಸಾಧ್ಯತೆ ಇದೆ ಎಂದು ಹೇಳಿದರು.

ಹರಿಯಾಣ ಸಮೀಕ್ಷೆ ಲೆಕ್ಕಾಚಾರ ತಪ್ಪಾಗಿದ್ದು ಹೇಗೆ?

ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭಾ ಮತಎಣಿಕೆಯ ಅಂತಿಮ ಘಟ್ಟ ತಲುಪುತ್ತಿದ್ದಂತೆಯೇ ಫಲಿತಾಂಶ ಎಲ್ಲರಿಗೂ ಅಚ್ಚರಿ ತಂದಿತು. ೨೦೧೯ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹರಿಯಾಣದ ಹತ್ತೂ ಲೋಕಸಭಾ ಕ್ಷೇತ್ರಗಳಲ್ಲಿ ಜಯಗಳಿಸಿತ್ತು. ಅಲ್ಲದೇ ಇಂಡಿಯಾ ಟುಡೇ, ಆಕ್ಸಿಸ್ ಹೊರತು ಪಡಿಸಿ ಇತರ ಎಲ್ಲಾ ಮತದಾನೋತ್ತರ ಸಮೀಕ್ಷೆಗಳೂ ೯೦ ಸದಸ್ಯಬಲದ ಹರಿಯಾಣದಲ್ಲಿ ಬಿಜೆಪಿ ೭೦ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಭವಿಷ್ಯ ನುಡಿದಿದ್ದವು. ಮಹಾರಾಷ್ಟ್ರದಲ್ಲೂ ಬಿಜೆಪಿ-ಶಿವಸೇನಾ ಮೈತ್ರಿಕೂಟದ ಬಲ ೨೦೦ರ ಗಡಿ ದಾಟಬಹುದು ಎಂದು ಹೇಳಿದ್ದವು.

ಆದರೆ ಇದೀಗ ಹರಿಯಾಣ ಅತಂತ್ರ ವಿಧಾನಸಭೆಯಾದರೆ, ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನಾ ಮೈತ್ರಿಕೂಟದಕ್ಕೆ ಸರಳ ಬಹುಮತವಷ್ಟೇ ಲಭಿಸಿದೆ.

ಬಿಜೆಪಿ ೪೦ ಸ್ಥಾನಗಳಲ್ಲಿ, ಕಾಂಗ್ರೆಸ್ ೩೧ ಹಾಗೂ ಜೆಜೆಪಿ ೧೨ ಸ್ಥಾನಗಳಲ್ಲಿ ಜಯ ಸಾಧಿಸುವತ್ತ ಹೆಜ್ಜೆ ಇಟ್ಟವು. ಶೇ.೪೦ರಷ್ಟು ಮತಎಣಿಕೆ ಮುಕ್ತಾಯಗೊಂಡಾಗ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿಗೆ ಸಾಕ್ಷಿಯಾಗಿತ್ತು.

ಈ ಹಿನ್ನೆಲೆಯಲ್ಲಿ ಎಲ್ಲಾ ಸಮೀಕ್ಷೆಗಳ ಲೆಕ್ಕಚಾರ ತಲೆಕೆಳಗಾಗಿದ್ದು ಹೇಗೆ ಎಂಬ ಪ್ರಶ್ನೆ ಉದ್ಭವಿಸಿತು. ಅದಕ್ಕೆ ಮುಖ್ಯ ಕಾರಣ ಬಹುತೇಕ ಸಮೀಕ್ಷೆಗಳು ೨೦೧೯ರ ಲೋಕಸಭಾ ಚುನಾವಣೆಯ ಫಲಿತಾಂಶವನ್ನೇ ನೂತನ ಮಾನದಂಡವಾಗಿ ಪರಿಗಣಿಸಿದ್ದು ಎಂದು ಇದೀಗ ವಿಶ್ಲೇಷಿಸಲಾಗಿದೆ.

೨೦೧೯ರ ಲೋಕಸಭಾ ಚುನಾವಣೆಯಲ್ಲಿ ಹರಿಯಾಣದಲ್ಲಿ ಬಿಜೆಪಿ ಶೇ.೫೮ರಷ್ಟು ಮತ ಪಡೆದಿತ್ತು. ಇದೀಗ ವಿಧಾನಸಭಾ ಚುನಾವಣೆಯಲ್ಲಿ ಶೇ.೩೬ಕ್ಕೆ ಕುಸಿತ ಕಂಡಿದೆ. ೨೦೧೪ರ ಚುನಾವಣೆಗೆ ಹೋಲಿಸಿದರೆ ಬಿಜೆಪಿ ಕೇವಲ ಶೇ.೨-೩ರಷ್ಟು ಮತಗಳನ್ನಷ್ಟೇ ಹೆಚ್ಚು ಪಡೆದಿದೆ. ಆದರೆ ೨೦೧೯ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಶೇ.೨೦ರಷ್ಟು ಭಾರೀ ನಷ್ಟ ಅನುಭವಿಸಿದೆ.

ಮಹಾರಾಷ್ಟ್ರದ ಪ್ರವಾಹಪೀಡಿತ ಪ್ರದೇಶಗಳಲ್ಲಿ ಬಿಜೆಪಿಗೆ ಸೋಲು:

ಮಹಾರಾಷ್ಟ್ರದ ಕೊಲ್ಹಾಪುರದ ಹತ್ತು ಕ್ಷೇತ್ರಗಳಲ್ಲಿ ಬಿಜೆಪಿಗೆ ಹೀನಾಯ ಸೋಲು ಅನುಭವಿಸಿದೆ. ಅಲ್ಲದೇ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಪ್ರವಾಹ ಪೀಡಿತ ಕ್ಷೇತ್ರಗಳಲ್ಲಿ ಬಿಜೆಪಿ ಪರಾಜಯಗೊಂಡಿದೆ. ೨೦೧೪ರ ಚುನಾವಣೆಯಲ್ಲಿ ಬಿಜೆಪಿ ೧೨೨ ಸ್ಥಾನಗಳಲ್ಲಿ ಜಯ ಸಾಧಿಸಿತ್ತು. ಆದರೆ ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ನೂರು ಸ್ಥಾನಗಳಲ್ಲಷ್ಟೇ ಗೆಲುವು ಪಡೆಯಲು ಯಶಸ್ವಿಯಾಗಿದೆ. ಚುನಾವಣೋತ್ತರ ಮತ್ತು ಮತದಾನೋತ್ತರ ಸಮೀಕ್ಷೆಗಳೆಲ್ಲವೂ ಮಹಾರಾಷ್ಟ್ರದಲ್ಲಿ ಬಿಜೆಪಿಯೇ ೧೫೦ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಭವಿಷ್ಯ ನುಡಿದಿದ್ದವು.

ಆದರೆ ಈ ಬಾರಿ ಬಿಜೆಪಿ 105 ಸ್ಥಾನಗಳಲ್ಲಿ ಶಿವಸೇನಾ 56, ಕಾಂಗ್ರೆಸ್ 44, ಎನ್ ಸಿಪಿ 54 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದವು. ಈ ಮೂಲಕ ಕೇವಲ ಬಿಜೆಪಿ ಏಕಾಂಗಿಯಾಗಿಯೇ ಸ್ಪಷ್ಟ ಬಹುಮತ ಪಡೆಯಲಿದೆ ಎಂಬ ಭವಿಷ್ಯ ಹುಸಿಯಾಯಿತು.

ಯಾರಿಗೆ ಎಷ್ಟು ಸ್ಥಾನ

ಮಹಾರಾಷ್ಟ್ರ    ಒಟ್ಟು ಸ್ಥಾನ 288  ಮ್ಯಾಜಿಕ್ ಸಂಖ್ಯೆ 145

ಪಕ್ಷ                           ಗೆಲುವು                                                        2014ರ ಸ್ಥಾನ

ಬಿಜೆಪಿ+                     162 (ಬಿಜೆಪಿ 103+ ಶಿವಸೇನಾ 54)                     185

ಕಾಂಗ್ರೆಸ್ +                  98  (ಕಾಂಗ್ರೆಸ್ 44+ ಎನ್‌ಸಿಪಿ 54)                      83

ಇತರರು                       22                                                                    20

 

ಹರಿಯಾಣ  ಒಟ್ಟು ಸ್ಥಾನ 90  ಮ್ಯಾಜಿಕ್ ಸಂಖ್ಯೆ  46

ಪಕ್ಷ                     ಗೆಲುವು                                                              2014ರ ಸ್ಥಾನ

ಬಿಜೆಪಿ                      40                                                                         47

ಕಾಂಗ್ರೆಸ್                   31                                                                        15

ಜೆಜೆಪಿ                       10                                                                         –

ಇತರರು                     9                                                                        28

October 24, 2019 - Posted by | ನರೇಂದ್ರ ಮೋದಿ, ಪಾಕಿಸ್ತಾನ, ಭಾರತ, ರಾಷ್ಟ್ರೀಯ, Flash News, General Knowledge, India, Nation, News, Politics, Prime Minister, Spardha | ,

No comments yet.

Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ