ಇಮ್ರಾನ್ ಖಾನ್ ಭೇಟಿ ಬಗ್ಗೆ ಹೇಳಿದ ಕ್ಸಿ, ಸುಮ್ಮನೇ ಕೇಳಿಸಿಕೊಂಡ ಪ್ರಧಾನಿ ಮೋದಿ
ನವದೆಹಲಿ: ತಮಿಳುನಾಡಿನ ಚಾರಿತ್ರಿಕ ತಾಣ ಮಹಾಬಲಿಪುರಂ (ಮಾಮಲ್ಲಪುರಂ) ಪಟ್ಟಣದಲ್ಲಿ ನಡೆದ ಎರಡನೇ ಅನೌಪಚಾರಿಕ ಶೃಂಗ ಸಭೆಯಲ್ಲಿ ಕಾಶ್ಮೀರದ ವಿಷಯ ಪ್ರಸ್ತಾಪಗೊಳ್ಳಲಿಲ್ಲ, ಚೀನೀ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಭೇಟಿ ಬಗ್ಗೆ ಉಸುರಿದರು, ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಸುಮ್ಮನೇ ಕೇಳಿಸಿಕೊಂಡರು ಅಷ್ಟೆ.
ಎರಡು ದಿನಗಳ ಶೃಂಗಸಭೆ ಸಮಾಪ್ತಿಯ ಬಳಿಕ 2019 ಅಕ್ಟೋಬರ್ 12ರ ಶನಿವಾರ ವಿಶೇಷ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಅವರು ಈ ವಿಷಯವನ್ನು ತಿಳಿಸಿದರು.
‘ಈ (ಕಾಶ್ಮೀರ) ವಿಷಯದ ಪ್ರಸ್ತಾಪವಾಗಲಿಲ್ಲ, ಅಥವಾ ಚರ್ಚೆ ನಡೆಯಲಿಲ್ಲ. ಏನಿದ್ದರೂ, ಇದು ಭಾರತದ ಆಂತರಿಕ ವಿಷಯ ಎಂಬ ನಮ್ಮ ನಿಲುವಂತೂ ಸ್ಪಷ್ಟವಾಗಿದೆ’ ಎಂದು ಹೇಳಿದರು.
ಆದಾಗ್ಯೂ ಕ್ಸಿ ಅವರು ಪ್ರಧಾನಿ ಮೋದಿ ಅವರಿಗೆ ಪಾಕಿಸ್ತಾನಿ ಪ್ರಧಾನಿ ಇಮ್ರಾನ್ ಖಾನ್ ಅವರು ಈ ವಾರಾರಂಭದಲ್ಲಿ ಬೀಜಿಂಗ್ಗೆ ನೀಡಿದ್ದ ಭೇಟಿಯ ಬಗ್ಗೆ ವಿವರಿಸಿದರು. ಪ್ರಧಾನಿ ಮೋದಿಯವರು ಅದನ್ನು ಸುಮ್ಮನೇ ಕೇಳಿಸಿಕೊಂಡರು, ಆದರೆ ಪ್ರತಿಕ್ರಿಯಿಸಲಿಲ್ಲ ಎಂದು ಗೋಖಲೆ ನುಡಿದರು.
ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿದ ಬಳಿಕ ಕಳೆದ ಕೆಲವು ತಿಂಗಳುಗಳಲ್ಲಿ ಭಾರತ-ಚೀನಾ ಬಾಂಧವ್ಯ ಪ್ರಕ್ಷುಬ್ಧಗೊಂಡಿತ್ತು. ಈ ಹಿನ್ನೆಲೆಯಲ್ಲಿ ಭಾರತ -ಚೀನಾ ಅನೌಪಚಾರಿಕ ಶೃಂಗಸಭೆ ನಡೆದಿತ್ತು. ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿದ ಭಾರತದ ಕ್ರಮವನ್ನು ವಿರೋಧಿಸಿದ ಪಾಕಿಸ್ತಾನವನ್ನು ಚೀನಾ ಬೆಂಬಲಿಸಿದ್ದರಿಂದ ಆ ದೇಶದ ಜೊತೆಗಿನ ಭಾರತದ ಬಾಂಧವ್ಯ ಬಿಗಡಾಯಿಸಿತ್ತು.
ಚೀನೀ ಅಧ್ಯಕ್ಷರು ಅನೌಪಚಾರಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಭಾರತ ಪ್ರವಾಸ ಮಾಡುವುದಕ್ಕೆ ಮುಂಚಿತವಾಗಿ ಚೀನಾಕ್ಕೆ ಭೇಟಿ ನೀಡಿದ್ದ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಮತ್ತು ಅಧ್ಯಕ್ಷ ಕ್ಸಿ ಅವರು ಕಾಶ್ಮೀರದ ಬೆಳವಣಿಗೆಗಳ ಬಗ್ಗೆ ಮಾತುಕತೆ ನಡೆಸಿದ್ದಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತ ಪಡಿಸಿತ್ತು
No comments yet.
Leave a comment