ಸಂತ ರವಿದಾಸ ದೇಗುಲ ಅದೇ ಸ್ಥಳದಲ್ಲಿ ಮರುನಿರ್ಮಾಣ: ಸುಪ್ರೀಂಕೋರ್ಟ್ ಆದೇಶ
ನವದೆಹಲಿ: ಸಂತ ರವಿದಾಸ ದೇಗುಲವನ್ನು ಮರುನಿರ್ಮಾಣ ಮಾಡುವಂತೆ ಸುಪ್ರೀಂಕೋರ್ಟ್2019 ಅಕ್ಟೋಬರ್ 21ರ ಸೋಮವಾರ ಆದೇಶ ನೀಡಿತು. ನ್ಯಾಯಾಲಯದ ಆದೇಶದ ಮೇರೆಗೆ ಕಳೆದ ಆಗಸ್ಟ್ನಲ್ಲಿ ಒಡೆದು ಹಾಕಲಾಗಿದ್ದ ಸಂತ ರವಿದಾಸ ದೇಗುಲವನ್ನು ಅದೇ ಜಾಗದಲ್ಲಿ ಮರುನಿರ್ಮಾಣ ಮಾಡುವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡ ಬಳಿಕ ಸುಪ್ರೀಂಕೋರ್ಟ್ ಈ ಆದೇಶ ನೀಡಿತು.
ದಕ್ಷಿಣ ದೆಹಲಿಯ ತುಘ್ಲಕ್ ಬಾದಿನಲ್ಲಿದ್ದ ಸಂತ ರವಿದಾಸ ದೇಗುಲವನ್ನು ಒಡೆದುಹಾಕಿದ್ದರಿಂದ ಭಕ್ತಾದಿಗಳ ಪ್ರತಿಭಟನೆ ಕಾಡ್ಗಿಚ್ಚಿನಂತೆ ಎಲ್ಲೆಡೆ ವ್ಯಾಪಿಸಿತ್ತು. ಶಾಂತಿ ಮತ್ತು ಸೌಹಾರ್ದತೆ ದೃಷ್ಟಿಯಿಂದ ಅದೇ ಸ್ಥಳದಲ್ಲಿ ದೇವಾಲಯ ಮರುನಿರ್ಮಾಣಕ್ಕೆ ಸರ್ಕಾರ ಒಪ್ಪಿಕೊಂಡಿದೆ ಎಂದು ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರು ಇದಕ್ಕೂ ಮುನ್ನ ನ್ಯಾಯಾಲಯಕ್ಕೆ ಸರ್ಕಾರದ ನಿರ್ಧಾರವನ್ನು ತಿಳಿಸಿದ್ದರು..
ದೇವಾಲಯ ಮರುನಿರ್ಮಾಣಕ್ಕೆ ಸರ್ಕಾರ 400 ಚದರ ಅಡಿ ದುಪ್ಪಟ್ಟು ಜಾಗವನ್ನು ಹಂಚಿಕೆ ಮಾಡಿದೆ. ಮರುನಿರ್ಮಾಣವಾದ ದೇಗುಲ ನಿರ್ವಹಣೆಗಾಗಿ ಭಕ್ತಾದಿಗಳ ಸಮಿತಿ ರಚನೆಯ ಪ್ರಸ್ತಾವನೆಯನ್ನು ಕೂಡ ಸರ್ಕಾರ ಮಾಡಿದೆ ಎಂದು ನ್ಯಾಯಾಲಯಕ್ಕೆಕೆ.ಕೆ.ವೇಣುಗೋಪಾಲ್ ತಿಳಿಸಿದರು.
ದೆಹಲಿ ನ್ಯಾಯಾಲಯದ ನಿರ್ದೇಶನದ ಮೇರೆಗೆ ದೆಹಲಿ ಅಭಿವೃದ್ಧಿ ಪ್ರಾಧಿಕಾರ (ಡಿಡಿಎ) ಆಗಸ್ಟ್ 10ರಂದು 500 ವರ್ಷ ಇತಿಹಾಸವಿರುವ ರವಿದಾಸ ದೇವಾಲಯವನ್ನು ನೆಲಸಮ ಮಾಡಿತ್ತು. ಇದರಿಂದ ಕೆರಳಿದ ಪಂಜಾಬ್ ಮತ್ತು ದೆಹಲಿಯ ಹಲವು ರಾಜಕೀಯ ಪಕ್ಷಗಳು ಮತ್ತು ದಲಿತ ಸಮುದಾಯದ ಸದಸ್ಯರು ತೀವ್ರ ಪ್ರತಿಭಟನೆ ನಡೆಸಿದರು. ದಲಿತ ಹಕ್ಕುಗಳ ಹೋರಾಟಗಾರರು ಮತ್ತು ಬೆಂಬಲಿಗರು ಭಾರತ್ ಬಂದ್ಗೂ ಕರೆ ನೀಡಿದ್ದರು.
ದೇಗುಲವನ್ನು ತುಘ್ಲಕ್ ಬಾದ್ ರಸ್ತೆಯಲ್ಲಿ ಅಥವಾ ಬೇರೆ ಸ್ಥಳದಲ್ಲಿ ಮರುನಿರ್ಮಾಣ ಮಾಡಬೇಕು ಎಂದು ಹಲವು ರಾಜಕೀಯ ಪಕ್ಷಗಳು ಆಗ್ರಹಿಸಿದ್ದವು. ದೆಹಲಿ ಸಾಮಾಜಿಕ ನ್ಯಾಯ ಸಚಿವ ರಾಜೇಂದ್ರ ಪಾಲ್ ಗೌತಮ್, ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಸೇರಿದಂತೆ ಸಮುದಾಯದ ಆಧ್ಯಾತ್ಮಿಕ ಗುರುಗಳು ದೆಹಲಿಯಲ್ಲಿ ಸೇರಿ, ಪ್ರತಿಭಟನೆಗೆ ದೊಡ್ಡ ಆಯಾಮ ನೀಡಿದ್ದರು.
No comments yet.
Leave a comment