ಕುಸಿದ ಪೇದೆಯ ನೆರವಿಗೆ ಧಾವಿಸಿದ ರಾಷ್ಟ್ರಪತಿ ಕೋವಿಂದ್, ಸಚಿವೆ ನಿರ್ಮಲಾ
ನವದೆಹಲಿ: ರಾಷ್ಟ್ರೀಯ ಸಿಎಸ್ಆರ್ ಚೊಚ್ಚಲ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದ ರಾಷ್ಟ್ರಪತಿ ರಾಮನಾಥ ಕೋವಿಂದ್ ಮತ್ತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಮಾರಂಭದ ವೇಳೆಯಲ್ಲಿ ಕುಸಿದು ಬಿದ್ದ ಮಹಿಳಾ ಪೊಲೀಸ್ ಪೇದೆ ಒಬ್ಬರ ನೆರವಿಗೆ ಧಾವಿಸಿದ ಘಟನೆ 2019 ಅಕ್ಟೋಬರ್ 29ರ ಮಂಗಳವಾರ ಘಟಿಸಿತು.
ಸಮಾರಂಭದಲ್ಲಿ ದೆಹಲಿ ಪೊಲೀಸ್ ಮಹಿಳಾ ಪೇದೆ ವಿಜ್ಞಾನ ಭವನದಲ್ಲಿ ವೇದಿಕೆ ಮುಂದೆ ನಿಂತಿದ್ದರು.
ರಾಷ್ಟ್ರಗೀತೆ ನುಡಿಸುವಾಗ, ಹಠಾತ್ತನೆ ಮಹಿಳಾ ಪೇದೆಯ ಪಾದ ತಿರುಚಿ ಆಕೆ ಕುಸಿದು ಬಿದ್ದರು.ಮತ್ತು ಕಾರ್ಪೆಟ್ ಮೇಲೆ ಕುಳಿತುಕೊಂಡರು.
ರಾಷ್ಟ್ರಗೀತೆ ಮುಗಿದ ಕೂಡಲೇ ಕೋವಿಂದ್ ಅವರು ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರೊಂದಿಗೆ ಮಾತನಾಡುತ್ತಿರುವುದು ಕಂಡುಬಂತು ಮತ್ತು ಬಳಿಕ ಭದ್ರತಾ ಸಿಬ್ಬಂದಿಯೊಂದಿಗೆ ವೇದಿಕೆಯಿಂದ ಕೆಳಗಿಳಿದು ಕುಸಿದು ಕುಳಿತಿದ್ದ ಮಹಿಳಾ ಪೇದೆಯತ್ತ ನೆರವಿಗಾಗಿ ಧಾವಿಸಿದರು. ಅವರೊಂದಿಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರೂ ಪೇದೆಯ ಬಳಿಗೆ ಬಂದರು.
ಮಹಿಳಾ ಪೇದೆಯೊಂದಿಗೆ ಸಂಕ್ಷಿಪ್ತ ಸಂಭಾಷಣೆ ನಡೆಸಿದ ಕೋವಿಂದ್ ಆಕೆಗೆ ಕುಡಿಯಲು ನೀರಿನ ಬಾಟಲ್ ನೀಡಿದರು.
ರಾಷ್ಟ್ರಗೀತೆಯ ನಂತರ ರಾಷ್ಟ್ರಪತಿಯವರು ಸ್ಥಳದಿಂದ ನಿರ್ಗಮಿಸುವುದು ವಾಡಿಕೆ.
ಕೋವಿಂದ್ ಅವರು ವೇದಿಕೆಯಿಂದ ಕೆಳಗಿಳಿದು ಮಹಿಳಾ ಪೊಲೀಸ್ ಪೇದೆಯ ಸ್ವಾಸ್ಥ್ಯ ವಿಚಾರಿಸಿ ನೀರು ಕೊಟ್ಟು ಅಲ್ಲಿಂದ ತೆರಳುತ್ತಿದ್ದಂತೆಯೇ ಅವರ ಸೌಜನ್ಯಕ್ಕಾಗಿ ಸಭಿಕರು ಜೋರಾಗಿ ಚಪ್ಪಾಳೆ ತಟ್ಟಿದರು.
ರಾಷ್ಟ್ರಪತಿಯವರ ಜೊತೆಗೆ ವಿತ್ತ ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವ ನಿರ್ಮಲಾ ಸೀತಾರಾಮನ್, ಉಪಸಚಿವ ಠಾಕೂರ್ ಮತ್ತು ಕಾರ್ಪೊರೇಟ್ ವ್ಯವಹಾರಗಳ ಕಾರ್ಯದರ್ಶಿ ಇಂಜೆಟಿ ಶ್ರೀನಿವಾಸ್ ಅವರೂ ವೇದಿಕೆಯಲ್ಲಿ ಇದ್ದರು.
No comments yet.
Leave a comment