SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ರಫೇಲ್ ಗೆ ಆಯುಧ ಪೂಜೆ ನಡೆಸಿ ಮೊದಲ ಹಾರಾಟ ನಡೆಸಿದ ರಾಜನಾಥ್ ಸಿಂಗ್

This slideshow requires JavaScript.

ಪ್ಯಾರಿಸ್:  ದೇಶದ ವಾಯುಪಡೆಗೆ ವಿಶೇಷ ಬಲ ತುಂಬಲಿರುವ ಅತ್ಯಾಧುನಿಕ ಮಾದರಿಯ ರಫೇಲ್ ಯುದ್ಧವಿಮಾನವನ್ನು ಭಾರತಕ್ಕೆ ಹಸ್ತಾಂತರಿಸುವ ಔಪಚಾರಿಕ ಪ್ರಕ್ರಿಯೆ ಫ್ರಾನ್ಸಿನ  ಮೆರಿಗ್ನ್ಯಾಕ್ ನಲ್ಲಿ  2019 ಅಕ್ಟೋಬರ್ 08ರ ಮಂಗಳವಾರ ಯಶಸ್ವಿಯಾಗಿ ನೆರವೇರಿತು.

ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ರಫೇಲ್ ಡಸಾಲ್ಟ್ ಕಂಪೆನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಎರಿಕ್ ಟ್ರ್ಯಾಪಿಯರ್ ಅವರು ಮೊದಲ ರಫೇಲ್ ಯುದ್ಧ ವಿಮಾನವನ್ನು ಅಧಿಕೃತವಾಗಿ ಹಸ್ತಾಂತರಿಸಿದರು.

ಪ್ರಥಮ ರಫೇಲ್ ವಿಮಾನವನ್ನು ಸ್ವೀಕರಿಸಿದ ಬಳಿಕ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಈ ಯುದ್ಧ ವಿಮಾನಕ್ಕೆ ಆಯುಧ ಪೂಜೆಯನ್ನು ನೆರವೇರಿಸಿದರು. ವಿಮಾನದ ಎದುರು ಭಾಗದಲ್ಲಿ ‘ಓಂ’ ಎಂದು ಕುಂಕುಮದಲ್ಲಿ ಬರೆದ ಸಿಂಗ್ ಬಳಿಕ ವಿಮಾನದ ಚಕ್ರಗಳಿಗೆ ಲಿಂಬೆ ಹಣ್ಣನ್ನು ಮತ್ತು ವಿಮಾನದ  ಮುಂಭಾಗದಲ್ಲಿ ತೆಂಗಿನ ಕಾಯಿಯನ್ನು ಇರಿಸಿ ಸಾಂಪ್ರದಾಯಿಕ ರೀತಿಯಲ್ಲೇ ಆಯುಧ ಪೂಜೆಯನ್ನು ನೆರವೇರಿಸಿದರು.

ಬಳಿಕ ರಾಜನಾಥ್ ಸಿಂಗ್ ಅವರು ರಫೇಲ್ ಯುದ್ಧ ವಿಮಾನವನ್ನು ಏರಿ ಅದರಲ್ಲಿ ಹಾರಾಟ ನಡೆಸಿದರು. ಪೈಲಟ್ ಫಿಲಿಪ್ ಡ್ಯುಶಾಟ್ ಅವರು ರಕ್ಷಣಾ ಸಚಿವರಿದ್ದ ಈ ರಫೇಲ್  ವಿಮಾನವನ್ನು  ಚಲಾಯಿಸಿದರು. ಇದರೊಂದಿಗೆ  ರಫೇಲ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ಪ್ರಥಮ ರಕ್ಷಣಾ ಸಚಿವರೆಂಬ ಹೆಗ್ಗಳಿಕೆಗೆ ರಾಜನಾಥ್ ಸಿಂಗ್ ಅವರು ಪಾತ್ರರಾದರು.

36 ಯುದ್ಧ ವಿಮಾನಗಳಲ್ಲಿ ಫ್ರಾನ್ಸ್ ಮೊದಲ ಹಂತದ ನಾಲ್ಕು ರಫೇಲ್ ವಿಮಾನಗಳನ್ನು ಮುಂದಿನ ವರ್ಷದ ಮೇ ತಿಂಗಳಿನಲ್ಲಿ ಭಾರತಕ್ಕೆ ಹಸ್ತಾಂತರಿಸಲಿದೆ. ಭಾರತ ಮತ್ತು ಫ್ರಾನ್ಸ್ ನಡುವೆ 36 ರಫೇಲ್ ಯುದ್ಧ ವಿಮಾನ ಖರೀದಿಗಾಗಿ 59 ಸಾವಿರ ಕೋಟಿ ರೂಪಾಯಿ ಒಪ್ಪಂದ ಮಾಡಿಕೊಂಡಿದೆ.

ಇದಕ್ಕೆ ಮುನ್ನ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು  ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ ಅವರನ್ನು ಪ್ಯಾರಿಸ್ ನಲ್ಲಿ ಭೇಟಿಯಾಗಿ ರಕ್ಷಣೆ ಮತ್ತು ಭದ್ರತಾ ಸಂಬಂಧಿ ವಿಷಯಗಳ ಕುರಿತು ಚರ್ಚೆ ನಡೆಸಿದ್ದರು.

October 8, 2019 Posted by | ಪೈಲಟ್, ಪ್ರಧಾನಿ, ಭಾರತ, ರಾಷ್ಟ್ರೀಯ, ವಿಮಾನ, ವಿಶ್ವ/ ಜಗತ್ತು, Finance, Flash News, General Knowledge, India, Nation, News, Spardha, World | , , , , , | Leave a comment

ಮೂವರು ವಿಜ್ಞಾನಿಗಳಿಗೆ 2019ರ ಸಾಲಿನ ಭೌತಶಾಸ್ತ್ರ ನೊಬೆಲ್ ಪ್ರಶಸ್ತಿ

SWEDEN-NOBEL-PHYSICS
ಸ್ಟಾಕ್
ಹೋಮ್:  ಜೇಮ್ಸ್ ಪೀಬಲ್ಸ್, ಮಿಶೆಲ್ ಮೇಯರ್ ಮತ್ತು ಡಿಡಿಯರ್ ಕ್ವೆಲೋಜ್ ಅವರಿಗೆ 2019ನೇ ಸಾಲಿನ ಭೌತಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿ ನೀಡಲಾಗಿದೆ ಎಂದು ನೊಬೆಲ್ ಪ್ರಶಸ್ತಿ ಸಮಿತಿಯು 2019 ಅಕ್ಟೋಬರ್  08ರ ಮಂಗಳವಾರ ಪ್ರಕಟಿಸಿತು.

ನಮ್ಮ ವಿಶ್ವ ಬೆಳೆದು ಬಂದದ್ದು ಹೇಗೆ, ಈ ವಿಶ್ವದಲ್ಲಿ ಭೂಮಿಯ ಸ್ಥಾನ ಏನು ಎಂಬುದನ್ನು ಅರ್ಥ ಮಾಡಿಕೊಳ್ಳಲು ಈ ವಿಜ್ಞಾನಿಗಳ ಸಂಶೋಧನೆ ಮತ್ತು ಅಧ್ಯಯನ ಬಹಳ ಮಹತ್ವಪೂರ್ಣವಾದುದು ಎಂದು ಪರಿಗಣಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಇವರಿಗೆ ನೊಬೆಲ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದು ತೀರ್ಪುಗಾರರ ಸಮಿತಿ ತಿಳಿಸಿತು.

ಭೌತ ವಿಶ್ವಶಾಸ್ತ್ರದಲ್ಲಿ ಜೇಮ್ಸ್ ಪೀಬಲ್ಸ್ ಹಲವು ಮಹತ್ವದ ಸಂಶೋಧನೆಗಳನ್ನು ಮಾಡಿದ್ದಾರೆ. ಇನ್ನು, ಮಿಶೆಲ್ ಮೇಯರ್ ಮತ್ತು ಡಿಡಿಯರ್ ಕ್ವಿಲೋಜ್ ಅವರು ಎಕ್ಸೋಪ್ಲಾನೆಟ್​ವೊಂದನ್ನು ಪತ್ತೆ ಹೆಚ್ಚಿದ್ದರು. ಎಕ್ಸೋಪ್ಲಾನೆಟ್ ಎಂಬುದು ಸೌರ ವ್ಯವಸ್ಥೆ ಹೊರಗಿರುವ ಗ್ರಹವಾಗಿದೆ. ಈ ಬಾಹ್ಯ ಗ್ರಹದ ಪತ್ತೆಯಿಂದ ವಿಶ್ವ ರಚನೆಯ ಅಭ್ಯಾಸಕ್ಕೆ ಸಹಾಯವಾಗಲಿದೆ.

2019 ಅಕ್ಟೋಬರ್ 07ರ ಸೋಮವಾರ ವೈದ್ಯವಿಜ್ಞಾನ ವಿಭಾಗದಲ್ಲಿ ವಿಜ್ಞಾನಿಗಳಾದ ವಿಲಿಯಮ್ ಕೈಲಿನ್ ಜೂನಿಯರ್, ಗ್ರೆಗ್ ಸೆಮೆಂಜಾ ಮತ್ತು ಪೀಟರ್ ರಾಟ್​ಕ್ಲಿಫ್ ಅವರಿಗೆ ವೈದ್ಯಕೀಯ ನೊಬೆಲ್ ಬಹುಮಾನ ಘೋಷಿಸಲಾಗಿತ್ತು. ಬುಧವಾರ ರಸಾಯಶಾಸ್ತ್ರ, ಗುರುವಾರ ಸಾಹಿತ್ಯ ವಿಭಾಗ ಹಾಗೂ ಶುಕ್ರವಾರ ಶಾಂತಿ ವಿಭಾಗದಲ್ಲಿ ನೊಬೆಲ್ ಬಹುಮಾನ ಘೋಷಿಸಲಾಗುತ್ತದೆ.

ಈ ಎಲ್ಲಾ ನೊಬೆಲ್ ಪ್ರಶಸ್ತಿ ವಿಜೇತರಿಗೆ ಡಿಸೆಂಬರ್ 10ರಂದು ಸ್ವೀಡನ್​ನ ಸ್ಟಾಕ್​ ಹೋಮ್ ನಗರದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುತ್ತದೆ.

October 8, 2019 Posted by | Award, ವಿಶ್ವ/ ಜಗತ್ತು, ಸಂಶೋಧನೆ, ಸೌರ ವ್ಯವಸ್ಥೆ, Flash News, General Knowledge, News, Science, Space, Spardha, Technology | , | Leave a comment

ಜಂಬೂ ಸವಾರಿಯೊಂದಿಗೆ ಐತಿಹಾಸಿಕ ಮೈಸೂರು ದಸರಾಗೆ ತೆರೆ

08 mysore dasara
ಮೈಸೂರು: 
ವಿಶ್ವವಿಖ್ಯಾತ ಮೈಸೂರು ದಸರಾ ಸಂಭ್ರಮದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯೊಂದಿಗೆ  2019 ಅಕ್ಟೋಬರ್ 08ರ ಮಂಗಳವಾರ ದಸರಾ  ಉತ್ಸವಕ್ಕೆ ತೆರೆ ಬಿದ್ದಿತು. ದಸರಾ ಮೆರವಣಿಗೆಯ  ವೈಭವದ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಜನರು ಅರಮನೆಯ ಮುಂದಿನ ರಸ್ತೆಗಳಲ್ಲಿ ನೆರೆದಿದ್ದರು. ಕ್ಯಾಪ್ಟನ್ ಅರ್ಜುನ 8 ಬಾರಿ ಅಂಬಾರಿ ಹೊತ್ತು ಜಂಬೂ ಸವಾರಿ ಯಶಸ್ವಿಗೊಳಿಸಿದ.

ಕ್ಯಾಪ್ಟನ್ ಅರ್ಜುನನಿಗೆ 59 ವರ್ಷವಾಗಿದ್ದು ಜಂಬೂ ಸವಾರಿ ಮೆರವಣಿಗೆಯಲ್ಲಿ ಅರ್ಜುನನನ್ನು ಮಾವುತ ವಿನು ,ಕಾವಾಡಿ ಮಧು ಮುನ್ನಡೆಸಿದರು.  ಅರ್ಜುನ ಕಳೆದ 19-20 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗಿಯಾಗಿದ್ದು, 2012 ರಿಂದ ಚಿನ್ನದ ಅಂಬಾರಿ ಹೊರುವ ಜವಾಬ್ದಾರಿಯನ್ನ ನಿರ್ವಹಿಸಿದ್ದಾನೆ.

ಬಣ್ಣಗಳ ಚಿತ್ತಾರದಿಂದ ಅಲಂಕೃತನಾದ ಅರ್ಜುನ ಆನೆಯ ಮೇಲೆ ಹೊರಟ ಚಿನ್ನದ ಅಂಬಾರಿ ಮೈಸೂರಿನ ಮುಖ್ಯರಸ್ತೆಗಳಲ್ಲಿ ಸಾಗಿ ಬನ್ನಿ ಮಂಟಪವನ್ನು ತಲುಪಿತು.

ಅರ್ಜುನನ ಮೇಲಿನ 750 ಕೆ.ಜಿ. ತೂಕದ ಚಿನ್ನದ ಅಂಬಾರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪುಷ್ಪನಮನ ಸಲ್ಲಿಸಿ ಐತಿಹಾಸಿಕ ಜಂಬೂಸವಾರಿಗೆ ಚಾಲನೆ ನೀಡಿದ್ದರು. ಚಾಮುಂಡೇಶ್ವರಿ ಉತ್ಸವಮೂರ್ತಿಯನ್ನು ಹೊತ್ತ ಅರ್ಜುನ ಗಾಂಭೀರ್ಯದಿಂದ ಹೆಜ್ಜೆಹಾಕಿದ. ತಾಯಿ ಚಾಮುಂಡೇಶ್ವರಿಗೆ ಜೈಕಾರ ಹಾಕುತ್ತಾ ಮೈಸೂರಿನ ಜನರು ಸಂಭ್ರಮದಿಂದ ಜಂಬೂಸವಾರಿಯನ್ನು ಕಣ್ತುಂಬಿಕೊಂಡರು.

ಈದಿನ ಬೆಳಗ್ಗೆಯಿಂದ ಅನೇಕ ಸ್ಪರ್ಧೆಗಳು ನಡೆದಿದ್ದು, ವಜ್ರಮುಷ್ಠಿ ಕಾಳಗದಲ್ಲಿ ರಾಮನಗರ ನರಸಿಂಹ ಜಟ್ಟಿ, ಬೆಂಗಳೂರಿನ ನಾರಾಯಣ ಜಟ್ಟಿ, ಚಾಮರಾಜನಗರ ಗಿರೀಶ್ ಜಟ್ಟಿ, ಮೈಸೂರಿನ ಬಲರಾಮ ಜಟ್ಟಿ ನಡುವೆ ಕಾಳಗ ನಡೆಯಿತು. ಬೆಳಗ್ಗೆ ಆಯುಧಗಳಿಗೆ ಪೂಜೆ ನೆರವೇರಿಸಿದ ಯದುವೀರ್ ಒಡೆಯರ್ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿದರು.  ರಾಜಪೋಷಾಕಿನಲ್ಲಿ ಕಂಗೊಳಿಸಿದ ಯದುವೀರ ಒಡೆಯರ್ ಕುಟುಂಬಸ್ಥರೊಂದಿಗೆ ಜಂಬೂಸವಾರಿಯನ್ನು ಕಣ್ತುಂಬಿಕೊಂಡರು.

October 8, 2019 Posted by | ಕರ್ನಾಟಕ, ಭಾರತ, ರಾಜ್ಯ, ರಾಷ್ಟ್ರೀಯ, culture, Festival, Flash News, General Knowledge, India, Nation, News, Spardha | , , | Leave a comment

ಪಿಲುಂಗುಳಿ ಶಾರದ ಟೀಚರ್ ದೈವಾಧೀನ

08 pilunguli sharadakka 2ಬೆಂಗಳೂರು:  ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಕನ್ಯಾನ ಗ್ರಾಮದ  ಪಿಲುಂಗುಳಿಯ ಶಾರದ ಟೀಚರ್ ಅವರು ಬೆಂಗಳೂರಿನ ಗಿರಿನಗರದಲ್ಲಿ 2019 ಅಕ್ಟೋಬರ್ 08ರ ಮಂಗಳವಾರ  ಬೆಳಗ್ಗೆ ದೈವಾಧೀನರಾದರು. ಅವರಿಗೆ 79ವರ್ಷ ವಯಸ್ಸಾಗಿತ್ತು.

ಕನ್ಯಾನ, ವಿಟ್ಲ ಆಸುಪಾಸಿನಲ್ಲಿ ಶಾರದಕ್ಕ, ಶಾರದಾ ಟೀಚರ್  ಎಂದೇ ಪರಿಚಿತರಾಗಿದ್ದ ಪಿಲುಂಗುಳಿ  ಶಾರದ  ಅವರು ದಿವಂಗತ ನಾರಾಯಣ ಭಟ್ ಮತ್ತು ಸರಸ್ವತಿ ಅಮ್ಮ ಅವರ ಪುತ್ರಿಯಾಗಿದ್ದು ಅವಿವಾಹಿತರಾಗಿದ್ದರು. ವಿಟ್ಲದ ನೆತ್ರಕೆರೆಯ ದಿವಂಗತ ಕೃಷ್ಣಭಟ್ ಅವರ  ಧರ್ಮಪತ್ನಿ ದಿವಂಗತ ಗೌರಮ್ಮ ಶಾರದಾ ಅವರ ತಾಯಿಯ ತಂಗಿ. ತಂಗಿಯರಾದ ಲಲಿತಾ,ಜಯಂತಿ ಹಾಗೂ ಅಪಾರ ಅಭಿಮಾನಿಗಳು,ಬಂಧು ಮಿತ್ರರನ್ನು ಶಾರದಾ ಅವರು ಅಗಲಿದ್ದಾರೆ.

ಕನ್ಯಾನದ ಬಾಲವಾಡಿ/ ಅಂಗನವಾಡಿ ಶಿಕ್ಷಿಕಿಯಾಗಿ ನಿವೃತ್ತರಾಗಿದ್ದ ಶಾರದ ಅವರು ಅಪಾರ  ದೈವಭಕ್ತೆಯಾಗಿದ್ದರು. ನೂರಾರು ಶೋಭಾನೆಗಳನ್ನು ಹಾಡುವುದಲ್ಲದೆ, ಸ್ವತಃ ಶೋಭಾನೆಗಳನ್ನು ರಚಿಸಿದ್ದರು.

1940ರ ಡಿಸೆಂಬರ್  8ರಂದು ಜನಿಸಿದ್ದ ಶಾರದ ಅವರು  ತಮ್ಮ  ಇಳಿವಯಸ್ಸಿನಲ್ಲಿ ಯಕ್ಷಗಾನ ಕಲಿತು,  ವೇಷ ಹಾಕಿ ಯಕ್ಷ ರಂಗಭೂಮಿಯನ್ನು ಏರಿದ್ದ ರು. ಅವರು ಹಾಸ್ಯ ಪಾತ್ರಗಳನ್ನು ಇಷ್ಟ ಪಟ್ಟು  ಆ ವೇಷಗಳನ್ನು ಹಾಕುತ್ತಿದ್ದರು.  ಹೆಣ್ಮಕ್ಕಳ  ಯಕ್ಷಗಾನ ತಂಡ ಕಟ್ಟಿ, ಹಲವಾರು ಕಡೆ ಪ್ರದರ್ಶನಗಳನ್ನೂ ಕೂಡಾ ಕೊಟ್ಟ ಧೀಮಂತೆ ಅವರಾಗಿದ್ದರು. ಇಳಿವಯಸ್ಸಿನಲ್ಲಿ ಯಕ್ಷ ರಂಗ ಭೂಮಿಯನ್ನು ಏರಿ ಪ್ರದರ್ಶನ ನೀಡಿದ್ದಕ್ಕಾಗಿ ಯಕ್ಷಗಾನದ ಹಿರಿಯ ಭಾಗವತರಾದ ಬಲಿಪ ನಾರಾಯಣ ಭಾಗವತರು ಅವರ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದರು.

ಬೆಂಗಳೂರಿನ ವಿಲ್ಸನ್ ಗಾರ್ಡನ್ ರುದ್ರಭೂಮಿಯಲ್ಲಿ ಅವರ ಅಂತ್ಯಕ್ರಿಯೆ ನೆರವೇರಿತು.

October 8, 2019 Posted by | ಕರ್ನಾಟಕ, ದಕ್ಷಿಣ ಕನ್ನಡ ಜಿಲ್ಲೆ, ರಾಜ್ಯ, culture, Dakshina Kannada District, Education, Entertrainment, Flash News, News, Spardha | , , | Leave a comment

ಲಂಡನ್ನಿನಲ್ಲಿ ನೀತಾ ಅಂಬಾನಿಯಿಂದ ಭಾರತದ ನಾರಿ ಶಕ್ತಿ, ಯುವ ಶಕ್ತಿ, ಕ್ರೀಡಾ ಶಕ್ತಿ ಜಾಹೀರು

08 nita-ambani-sports-london
ಲಂಡನ್:
 ಇಂಗ್ಲೆಂಡ್ ರಾಜಧಾನಿಯಲ್ಲಿ ಅ. 10ರವರೆಗೆ ನಡೆಯುತ್ತಿರುವ ದಿ ಬ್ಯುಸಿನೆಸ್ ಸ್ಪೋರ್ಟ್ಸ್ ಶೃಂಗ ಸಭೆಯಲ್ಲಿ  2019 ಅಕ್ಟೋಬರ್ 08ರ ಮಂಗಳವಾರ  ನೀತಾ ಅಂಬಾನಿ ಅವರು ಭಾಷಣ ಮಾಡಿದರು.

“ಬಿಲಿಯನ್ ಡ್ರೀಮ್ಸ್: ದಿ ಇಂಡಿಯಾ ಆಪರ್ಚುನಿಟಿ” ವಿಷಯದ ಕುರಿತು ಮಾತನಾಡಿದ ರಿಲಾಯನ್ಸ್ ಫೌಂಡೇಶನ್ ಮುಖ್ಯಸ್ಥೆ ನೀತಾ ಅಂಬಾನಿ ಅವರು ಭಾರತದ ಕ್ರೀಡಾ ಶಕ್ತಿ, ನಾರಿ ಶಕ್ತಿ ಮತ್ತು ಯುವ ಶಕ್ತಿಯ ಬಗ್ಗೆ ಹೊಸ ಬೆಳಕು ಚೆಲ್ಲುವ ಪ್ರಯತ್ನ ಮಾಡಿದರು.

‘ನಮಸ್ಕಾರ’ ಎಂದು ಭಾಷಣ ಆರಂಭಿಸಿದ ನೀತಾ ಅವರು, ತಮಗೆ ಈ ವೇದಿಕೆ ಏರಲು ಅವಕಾಶ ಮಾಡಿಕೊಟ್ಟ ಆಯೋಜಕರಿಗೆ ಧನ್ಯವಾದ ಅರ್ಪಿಸಿದರು. “ಇವರು ನನ್ನನ್ನು ಭಾರತದ ಕ್ರೀಡೆಯ ಮೊದಲ ಮಹಿಳೆ ಎಂದು ಪರಿಗಣಿಸಿದ್ದು ನನ್ನ ಪಾಲಿನ ಗೌರವ. ನಾನಿಲ್ಲಿ ಬಂದಿರುವುದು ಭಾರತದ ಎಲ್ಲಾ ಮಹಿಳೆಯರಿಗೂ ಗೌರವದ ವಿಷಯವಾಗಿದೆ. ಭಾರತದಲ್ಲಿರುವ ಎಲ್ಲಾ ಮಹಿಳೆಯರ ಸಬಲೀಕರಣ ಮಾಡುವುದು ನನ್ನ ಧ್ಯೇಯ ಮತ್ತು ಗುರಿಯಾಗಿದೆ” ಎಂದು ಹೇಳಿದರು.

ರಿಲಾಯನ್ಸ್ ಫೌಂಡೇಶನ್ ಸಂಸ್ಥೆ ಬಹಳಷ್ಟು ವರ್ಷಗಳಿಂದ ಭಾರತದ ಕ್ರೀಡಾ ಕ್ಷೇತ್ರದಲ್ಲಿ ಜೋಡಿಸಿಕೊಂಡಿದೆ. ಫೌಂಡೇಶನ್​ನ ಮುಖ್ಯಸ್ಥೆಯಾಗಿ ಹಾಗೂ ರಿಲಾಯನ್ಸ್ ಇಂಡಸ್ಟ್ರೀಸ್ ಎಂಬ ಬೃಹತ್ ಸಂಸ್ಥೆಯ ನಿರ್ದೇಶಕಿಯಾಗಿ ನೀತಾ ಅಂಬಾನಿ  ಅವರು ಕ್ರೀಡಾ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ.  ಭಾರತದಲ್ಲಿ ರಿಲಾಯನ್ಸ್ ತೊಡಗಿಸಿಕೊಂಡಿರುವ ಹಲವು ಕ್ರೀಡೆಗಳಲ್ಲಿ ಫುಟ್ಬಾಲ್ ಮತ್ತು ಬ್ಯಾಸ್ಕೆಟ್​ಬಾಲ್ ಕೂಡಾ ಸೇರಿವೆ. ವಿಶ್ವದ ಅತ್ಯಂತ ಜನಪ್ರಿಯ ಕ್ರೀಡಾ ಟೂರ್ನಿಗಳಲ್ಲಿ ಒಂದಾಗಿರುವ  ಎನ್​ಬಿಎ ಬ್ಯಾಸ್ಕೆಟ್​ಬಾಲ್ ಭಾರತದಲ್ಲಿ ಜನಪ್ರಿಯಗೊಳ್ಳುವಂತೆ ಮಾಡುವಲ್ಲಿ  ರಿಲಾಯನ್ಸ್ ಫೌಂಡೇಶನ್​ನ ಪ್ರಯತ್ನ ಗಣನೀಯವಾದುದು.

ಅಮೆರಿಕದ ಎನ್​ಬಿಎ ಸಂಸ್ಥೆಯೊಂದಿಗೆ ಪಾಲುದಾರಿಕೆ ಮಾಡಿಕೊಂಡಿರುವ ರಿಲಾಯನ್ಸ್ ಫೌಂಡೇಶನ್ ಜೂನಿಯರ್ ಎನ್​ಬಿಎ ಪ್ರೋಗ್ರಾಮ್ ಹಮ್ಮಿಕೊಂಡಿದೆ. ಕ್ರಿಕೆಟ್ ಅತ್ಯಂತ ಜನಪ್ರಿಯವಿರುವ ಭಾರತದಲ್ಲಿ ಬ್ಯಾಸ್ಕೆಟ್​ಬಾಲ್ ಕ್ರೀಡೆಯನ್ನು ಒಂದಷ್ಟು ಮಟ್ಟಕ್ಕೆ ಪ್ರಜ್ವಲಿಸುವಂತೆ ಮಾಡಿದೆ. 20 ರಾಜ್ಯಗಳ 34 ನಗರಗಳಲ್ಲಿ ಇಂದು 1.1 ಕೋಟಿ ಮಕ್ಕಳು ಜೂನಿಯರ್ ಎನ್​ಬಿಎ ಪ್ರೋಗ್ರಾಮ್ ಅಡಿ ತರಬೇತಿ ಪಡೆಯುತ್ತಿದ್ದಾರೆ.

ಕಳೆದ ವಾರವಷ್ಟೇ ಅಮೆರಿಕದ ಎನ್​ಬಿಎ ತಂಡಗಳಾದ ಇಂಡಿಯಾನಾ ಪೇಸರ್ಸ್ ಮತ್ತು ಸ್ಯಾಕ್ರಮೆಂಟೋ ಕಿಂಗ್ಸ್ ಭಾರತದಲ್ಲಿ ಪ್ರದರ್ಶನ ಪಂದ್ಯಗಳನ್ನ ಆಡಿದ್ದವು. ಇದನ್ನ ಆಯೋಜಿಸಿದ ಶ್ರೇಯಸ್ಸು ರಿಲಾಯನ್ಸ್ ಫೌಂಡೇಶನ್​ಗೆ ಸೇರಬೇಕು. ಈ ಪಂದ್ಯಗಳನ್ನು ಜಿಯೋ ಟಿವಿ ಆ್ಯಪ್​ನಲ್ಲಿ ಲೈವ್ ಆಗಿ ಸ್ಟ್ರೀಮ್ ಮಾಡಲಾಗಿತ್ತು.

ನೀತಾ ಅಂಬಾನಿ ಅವರು ಕ್ರೀಡೆಯ ಅಭಿವೃದ್ಧಿ ವಿಚಾರದಲ್ಲಿ ಬಹಳಷ್ಟು ಆಸಕ್ತಿ ಹೊಂದಿದ್ದಾರೆ. ಶಾಲೆಯ ಪಠ್ಯದಲ್ಲಿ ಕ್ರೀಡೆಗೆ ಒತ್ತುಕೊಡಬೇಕೆಂದು ಅವರು ಕರೆ ನೀಡಿದ್ದಾರೆ. ರಿಲಾಯನ್ಸ್ ಫೌಂಡೇಶನ್ ಯೂತ್ ಸ್ಪೋರ್ಟ್ಸ್ ಮೂಲಕ ದೇಶಾದ್ಯಂತ 5 ಸಾವಿರ ಶಿಕ್ಷಣ ಸಂಸ್ಥೆಗಳಲ್ಲಿ ಇವತ್ತು ಕ್ರೀಡೆಗೆ ಉತ್ತೇಜನ ಸಿಗುತ್ತಿರಲು ನೀತಾ ಅವರ ಪಾತ್ರವೂ ಇದೆ ಎನ್ನಲಾಗಿದೆ.

2016ರಲ್ಲಿ ನೀತಾ ಅಂಬಾನಿ ಅವರು ಅಂತಾರಾಷ್ಟ್ರೀಯ ಒಲಿಂಪಿಕ್ ಕಮಿಟಿಗೆ ಆಯ್ಕೆಯಾಗಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು. ರಿಲಾಯನ್ಸ್ ಸಂಸ್ಥೆಯೇ ನಿರ್ವಹಿಸುವ ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಟೂರ್ನಿಯ ಅಧ್ಯಕ್ಷೆಯಾಗಿಯೂ ಅವರು ಕಾರ್ಯನಿರ್ವಹಿಸುತ್ತಿದ್ಧಾರೆ. ಐಪಿಎಲ್​ನ ಪ್ರಮುಖ ಭಾಗವಾಗಿರುವ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ಮಾಲೀಕರೂ ಅವರಾಗಿದ್ದಾರೆ.

October 8, 2019 Posted by | ಆರ್ಥಿಕ, ಭಾರತ, ರಾಷ್ಟ್ರೀಯ, ವಿಶ್ವ/ ಜಗತ್ತು, Flash News, General Knowledge, India, News, Spardha, Sports, World | | Leave a comment

   

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ