ಸಿದ್ದರಾಮಯ್ಯ ಮತ್ತೆ ಪ್ರತಿಪಕ್ಷ ನಾಯಕ: ಕಾಂಗ್ರೆಸ್ ಹೈ ಕಮಾಂಡ್ ಘೋಷಣೆ
ನವದೆಹಲಿ: ಸಾಕಷ್ಟು ವಾದ-ಪ್ರತಿವಾದ, ಚರ್ಚೆಗೆ ಕಾರಣವಾಗಿದ್ದ ಪ್ರತಿಪಕ್ಷ ನಾಯಕ ಸ್ಥಾನದ ಆಯ್ಕೆ ಕೊನೆಗೂ ಆಗಿದ್ದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರತಿಪಕ್ಷದ ನಾಯಕ ಎಂಬುದಾಗಿ ಕಾಂಗ್ರೆಸ್ ಹೈಕಮಾಂಡ್ 2019 ಅಕ್ಟೋಬರ್ 09ರ ಬುಧವಾರ ಘೋಷಿಸಿತು.
ನವದೆಹಲಿಯಲ್ಲಿ ಕೆಸಿ ವೇಣುಗೋಪಾಲ್ ಅವರು ಸುದ್ದಿಗೋಷ್ಠಿ ನಡೆಸಿ ಈ ವಿಷಯವನ್ನು ಪ್ರಕಟಿಸಿದರು.
ಕಾಂಗ್ರೆಸ್ಸಿನಲ್ಲಿ ಪ್ರತಿಪಕ್ಷ ನಾಯಕ ಓಟದಲ್ಲಿ ಎಚ್ಕೆ ಪಾಟೀಲ್, ಜಿ. ಪರಮೇಶ್ವರ್ ಇದ್ದರು. ಈ ವಿಷಯದಲ್ಲಿ ಶಾಸಕರ ಅಭಿಪ್ರಾಯ ಪಡೆಯಲು ಕಾಂಗ್ರೆಸ್ ವರಿಷ್ಠ ನಾಯಕರು ನಿರ್ಧರಿಸಿದರು.
ಅದರಂತೆ ಸಿದ್ದರಾಮಯ್ಯ ಪರವಾಗಿ ಹಲವಾರು ಶಾಸಕರು ಬೆಂಬಲ ಸೂಚಿಸಿದ್ದು ಕಾಂಗ್ರೆಸ್ ಹೈ ಕಮಾಂಡ್ಗೆ ನಿರ್ಧಾರ ಕೈಗೊಳ್ಳಲು ಅನುಕೂಲವಾಯಿತು.
ಬಾಂಗ್ಲಾದಲ್ಲಿ “ಕನ್ಯೆ” ಪದಕ್ಕೆ ಕೊಕ್: ಕೋರ್ಟ್ ಅಸ್ತು
ಢಾಕಾ: ‘ಕನ್ಯೆ ‘ಎಂಬ ಪದವನ್ನು ಬಾಂಗ್ಲಾದೇಶದ ಮುಸ್ಲಿಂ ವಿವಾಹ ಪ್ರಮಾಣಪತ್ರಗಳಿಂದ ತೆಗೆದುಹಾಕಬೇಕೆಂದು ಸ್ತ್ರೀ ಪರ ಹೋರಾಟಗಾರರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿ ಇಲ್ಲಿನ ನ್ಯಾಯಾಲಯ ಮಹತ್ವದ ತೀರ್ಪು ನೀಡಿತು. ಪ್ರಮಾಣ ಪತ್ರದಲ್ಲಿ ಕನ್ಯೆ ಎಂಬ ಪದದ ಬದಲು ಪರ್ಯಾಯ ಪದವನ್ನು ನ್ಯಾಯಾಲಯ ಸೂಚಿಸಿತು.
ದಕ್ಷಿಣ ಏಷ್ಯಾದ ಮುಸ್ಲಿಂ ವಿವಾಹ ಕಾನೂನುಗಳ ಪ್ರಕಾರ, ವಧುವನ್ನು ಆಯ್ಕೆ ಮಾಡುವಾಗ ಮೂರು ಆಯ್ಕೆಗಳನ್ನು ಅನುಸರಿಸಲಾಗುತ್ತದೆ. ಕುಮಾರಿ, ವಿಧವೆ ಹಾಗೂ ವಿಚ್ಚೇದಿತೆ ಎಂಬ ವಿಗಂಡನೆಗಳ ಆಧಾರದ ಮೇಲೆ ವಧುವನ್ನು ಆಯ್ಕೆ ಮಾಡಲಾಗುತ್ತದೆ. ಇಲ್ಲಿ ಕುಮಾರಿ ಅವಿವಾಹಿತೆ ಎಂದು ಸೂಚಿಸಿದ್ದರು, ಆದರೆ ವಿಸ್ತರಣೆ ರೂಪ ಕನ್ಯೆ ಎಂಬುದಾಗಿದೆ ಅಲ್ಲದೇ ಈ ಪದ ಬಳಕೆಯಿಂದ ಅವಳ ಅಸ್ತಿತ್ವವನ್ನು ಪ್ರಶ್ನಿಸಿದಂತೆ ಆಗುತ್ತದೆ ಎಂಬುದು ಹೋರಾಟಗಾರರ ವಾದವಾಗಿತ್ತು.
2019 ಅಕ್ಟೋಬರ್ 06ರ ಭಾನುವಾರ ಈ ಪ್ರಕರಣ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯ ಮುಂದಿನ ದಿನಗಳಲ್ಲಿ ಈ ಪದ ಬಳಕೆಯನ್ನು ನಿಷೇಧ ಮಾಡುವುದಾಗಿ ಹೇಳಿ, ಪರ್ಯಾಯ ಪದವಾಗಿ ‘ಒಬಿಬಾಹಿತೊ’ ಎಂದು ಬದಲಾಯಿಸುವಂತೆ ಸರ್ಕಾರಕ್ಕೆ ಆದೇಶಿಸಿತು.
ನ್ಯಾಯಾಲಯ ತನ್ನ ಸಂಕ್ಷಿಪ್ತ ತೀರ್ಪಿನಲ್ಲಿ ಈ ಪದದ ವಿವರಣೆ ನೀಡಿದ್ದು, ಅದು ಹುಡುಗಿ ಅಥವಾ ಅವಿವಾಹಿತ ಎಂದು ನಿರ್ದಿಷ್ಟ ಅರ್ಥವನ್ನು ಸೂಚಿಸುತ್ತದೆ ಎಂದು ತಿಳಿಸಿತು.
ಈ ಪ್ರಕರಣ ಕುರಿತಾಗಿ ಸಂಪೂರ್ಣ ತೀರ್ಪನ್ನು ಅಕ್ಟೋಬರ್ ಅಂತ್ಯಕ್ಕೆ ನೀಡುವುದಾಗಿ ನ್ಯಾಯಾಲಯ ತಿಳಿಸಿತು. ಪ್ರಮಾಣಪತ್ರದಲ್ಲಿನ ಬದಲಾವಣೆ ಅಂದಿನಿಂದ ಜಾರಿಯಾಗುವ ನಿರೀಕ್ಷೆ ಇದೆ.
ಸರ್ಕಾರಿ ನೌಕರರಿಗೆ ದೀಪಾವಳಿ ಕೊಡುಗೆ, ತುಟ್ಟಿ ಭತ್ಯೆ ಶೇ.೫ರಷ್ಟು ಏರಿಕೆ
ಕೇಂದ್ರ ಸಂಪುಟದ ತೀರ್ಮಾನ
ನವದೆಹಲಿ: ದೀಪಾವಳಿ ಹಬ್ಬಕ್ಕೆ ಮುಂಚಿತವಾಗಿ ಸರ್ಕಾರಿ ನೌಕರರ ತುಟ್ಟಿ ಭತ್ಯೆಯನ್ನು ಶೇಕಡಾ ೧೨ರಿಂದ ಶೇಕಡಾ ೧೭ಕ್ಕೆ ಅಂದರೆ ಶೇಕಡಾ ೫ರಷ್ಟು ಹೆಚ್ಚಿಸಲು ಕೇಂದ್ರ ಸಚಿವ ಸಂಪುಟವು 2019 ಅಕ್ಟೋಬರ್ 09ರ ಬುಧವಾರ ನಿರ್ಧರಿಸಿತು.
ಸಚಿವ ಸಂಪುಟ ಸಭೆಯ ಬಳಿಕ ಕೇಂದ್ರ ಸಚಿವ ಪ್ರಕಾಶ ಜಾವಡೇಕರ್ ಅವರು ಈ ವಿಚಾರವನ್ನು ಪ್ರಕಟಿಸಿದರು. ಸದರಿ ಕ್ರಮದಿಂದ ೫೦ ಲಕ್ಷ ನೌಕರರು ಮತ್ತು ೬೨ ಲಕ್ಷ ಪಿಂಚಣಿದಾರರಿಗೆ ಅನುಕೂಲವಾಗಲಿದೆ ಎಂದು ಅವರು ನುಡಿದರು.
ಸಚಿವ ಸಂಪುಟ ನಿರ್ಧಾರದಿಂದ ಕಳೆದ ವರ್ಷ ಶೇಕಡಾ ೧೨ರಷ್ಟಿದ್ದ ತುಟ್ಟಿಭತ್ಯೆ ಈಗ ಶೇಕಡಾ ೧೭ಕ್ಕೆ ಏರುವುದು. ಇದು ನೌಕರರಿಗೆ ದೀಪಾವಳಿ ಕೊಡುಗೆ. ಈ ಪ್ರಸ್ತಾಪದಿಂದ ಸರ್ಕಾರದ ಬೊಕ್ಕಸಕ್ಕೆ ಒಟ್ಟು ೧೬,೦೦೦ ಕೋಟಿ ರೂಪಾಯಿ ಹೊರೆ ಬೀಳಲಿದೆ ಎಂದು ಸಚಿವರು ತಿಳಿಸಿದರು.
ತುಟ್ಟಿ ಭತ್ಯೆಯು ಜೀವನ ವೆಚ್ಚ ಏರಿಕೆಗಾಗಿ ನೌಕರರು, ಸಾರ್ವಜನಿಕ ರಂಗದ ನೌಕರರು ಮತ್ತು ಪಿಂಚಣಿದಾರರಿಗೆ ಸರ್ಕಾರವು ಒದಗಿಸುವ ಹೊಂದಾಣಿಕೆ ಭತ್ಯೆಯಾಗಿದೆ. ಹಣದುಬ್ಬರದ ಪರಿಣಾಮವನ್ನು ಕಡಿಮೆಗೊಳಿಸಲು ಮೂಲ ವೇತನದ ಪ್ರತಿಶತವಾಗಿ ಇದನ್ನು ಲೆಕ್ಕಹಾಕಲಾಗುತ್ತದೆ.
ಸರ್ಕಾರದ ಕ್ರಮವು ವೇತನ ವರ್ಗ ಮತ್ತು ಸರ್ಕಾರಿ ನೌಕರರಿಗೆ ನಿರಾಳತೆ ಒದಗಿಸಲಿದ್ದು, ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಆರ್ಥಿಕ ಹಿನ್ನಡೆಯ ಹಿನ್ನೆಲೆಯಲ್ಲಿ ವಿವಿಧ ರಂಗಗಳಲ್ಲಿ ಉದ್ಭವಿಸಿರುವ ಸಮಸ್ಯೆಗಳನ್ನು ನಿವಾರಿಸುವ ಕ್ರಮಗಳು ಮುಂದುವರೆಯಲಿವೆ ಎಂದು ಜಾವಡೆಕರ್ ಹೇಳಿದರು.
ಆಧಾರ್ ಜೋಡಣೆ ಗಡುವು ವಿಸ್ತರಣೆ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಡಿಯಲ್ಲಿ ೨೦೧೯ ಆಗಸ್ಟ್ ೩೧ರ ಬಳಿಕ ಫಲಾನುಭವಿಗಳಿಗೆ ಸರ್ಕಾರಿ ಸವಲತ್ತುಗಳನ್ನು ಬಿಡುಗಡೆ ಮಾಡುವ ಸಲುವಾಗಿ ಕಡ್ಡಾಯ ಆಧಾರ್ ಜೋಡಣೆಗೆ ನೀಡಲಾಗಿದ್ದ ಗಡುವನ್ನು ನವೆಂಬರ್ ೩೦ರವರೆಗೆ ವಿಸ್ತರಿಸಲೂ ಸಂಪುಟ ನಿರ್ಧರಿಸಿದೆ ಎಂದು ಸಚಿವರು ಹೇಳಿದರು.
ಹಿಂಗಾರು (ಚಳಿಗಾಲದ) ಬಿತ್ತನೆಗೆ ಮುನ್ನ ರೈತರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಆಧಾರ್ ಕಡ್ಡಾಯ ಜೋಡಣೆ ಕಾಲಾವಕಾಶವನ್ನು ವಿಸ್ತರಿಸಲಾಗಿದೆ ಎಂದು ಸಚಿವರು ಹೇಳಿದರು.
೭ ಕೋಟಿಗೂ ಹೆಚ್ಚು ರೈತರಿಗೆ ಈಗಾಗಲೇ ಪ್ರಧಾನಮಂತ್ರಿ ಕಿಸಾನ್ ಯೋಜನೆಯ ಅಡಿಯಲ್ಲಿ ಅನುಕೂಲ ಲಭಿಸಿದೆ. ಯೋಜನೆಯ ಅಡಿಯಲ್ಲಿ ಪ್ರತಿಯೊಬ್ಬ ರೈತನಿಗೂ ಒಟ್ಟು ೬೦೦೦ ರೂಪಾಯಿಗಳನ್ನು ತಲಾ ೨೦೦೦ ರೂಪಾಯಿಗಳಂತೆ ಮೂರು ಸಮಾನ ಕಂತುಗಳಲ್ಲಿ ಒದಗಿಸಲಾಗುವುದು.
ಜಮ್ಮು – ಕಾಶ್ಮೀರ ನಿರ್ವಸಿತರಿಗೆ ಪರಿಹಾರ: ವಸತಿ ಕಳೆದು ಜಮ್ಮು ಮತ್ತು ಕಾಶ್ಮೀರದ ಹೊರತಾಗಿ ಇತರ ಪ್ರದೇಶಗಳಲ್ಲಿ ನೆಲೆಸಿ, ಇತ್ತೀಚೆಗೆ ರಾಜ್ಯಕ್ಕೆ ವಾಪಸಾಗಿರುವ ೫೩೦೦ ನಿರ್ವಸಿತ ಕುಟುಂಬಗಳಿಗೆ ಕೂಡಾ ತಲಾ ೫.೫ ಲಕ್ಷ ರೂಪಾಯಿಗಳನ್ನು ಒದಗಿಸಲು ಸಭೆ ನಿರ್ಧರಿಸಿತು. ಇದು ನೆಲೆ ಕಳೆದುಕೊಂಡ ಈ ಕುಟುಂಬಗಳಿಗೆ ನ್ಯಾಯ ಒದಗಿಸುವುದು ಎಂದು ಜಾವಡೆಕರ್ ನುಡಿದರು.
ಇದು ಐತಿಹಾಸಿಕ ತಪ್ಪನ್ನು ಸರಿಪಡಿಸುವ ಕ್ರಮ ಎಂದು ಸಚಿವರು ವರ್ಣಿಸಿದರು.
ಲಿಥಿಯಂ- ಅಯಾನ್ ಬ್ಯಾಟರಿ ಅವಿಷ್ಕಾರಕ್ಕಾಗಿ ಮೂವರು ವಿಜ್ಞಾನಿಗಳಿಗೆ ರಸಾಯನಶಾಸ್ತ್ರ ನೊಬೆಲ್ ಪ್ರಶಸ್ತಿ
ಸ್ಟಾಕ್ ಹೋಮ್: ಲಿಥಿಯಂ -ಅಯಾನ್ ಬ್ಯಾಟರಿಗಳನ್ನು ಅಭಿವೃದ್ಧಿ ಪಡಿಸಿದ್ದಕ್ಕಾಗಿ ಜಾನ್ ಡಿ ಗುಡೆನೊಫ್, ಎಂ ಸ್ಟಾನ್ಲೀ ವೈಟಿಂಗ್ಹಾಮ್ ಮತ್ತು ಅಕೀರಾ ಯೋಶಿನೊ ಈ ಮೂವರು ವಿಜ್ಞಾನಿಗಳಿಗೆ ೨೦೧೯ರ ಸಾಲಿನ ರಸಾಯನಶಾಸ್ತ್ರ ನೊಬೆಲ್ ಪ್ರಶಸ್ತಿಯನ್ನು ಘೋಷಿಸಲಾಗಿದೆ ಎಂದು ನೊಬೆಲ್ ಸಮಿತಿಯು 2019 ಅಕ್ಟೋಬರ್ 09ರ ಬುಧವಾರ ಪ್ರಕಟಿಸಿತು.
ಲಿಥಿಯಂ -ಅಯಾನ್ ಬ್ಯಾಟರಿಗಳು ನಮ್ಮ ಬದುಕನ್ನು ಕ್ರಾಂತಿಕಾರಕವನ್ನಾಗಿ ಮಾಡಿವೆ. ಅವುಗಳನನ್ನು ಈಗ ಮೊಬೈಲ್ ಫೋನ್ನಿಂದ ಹಿಡಿದು ಲ್ಯಾಪ್ ಟಾಪ್ಗಳು ಮತ್ತು ಎಲೆಕ್ಟ್ರಿಕ್ ವಾಹನಗಳವರೆಗೆ ಎಲ್ಲವುಗಳಲ್ಲೂ ಬಳಸುತ್ತಿದ್ದೇವೆ. ತಮ್ಮ ಶ್ರಮದ ಮೂಲಕ ಈ ಬಾರಿಯ ರಸಾಯನಶಾಸ್ರ್ರ ನೊಬೆಲ್ ಪ್ರಶಸ್ತಿ ವಿಜೇತರು ವೈರ್ಲೆಸ್, ಪಳೆಯುಳಿಕೆ ಇಂಧನ (ಫಾಸಿಲ್ ಫ್ಯುಯೆಲ್) ಮುಕ್ತ ಸಮಾಜಕ್ಕೆ ಅಡಿಪಾಯ ಹಾಕಿದ್ದಾರೆ ಎಂದು ನೊಬೆಲ್ ಸಮಿತಿಯು ತನ್ನ ಹೇಳಿಕೆಯಲ್ಲಿ ತಿಳಿಸಿತು.
ಈ ವರ್ಷದ ರಸಾಯನಶಾಸ್ತ್ರ ಪ್ರಶಸ್ತಿ ವಿಜೇತರಾದ ಡಾ. ವೈಟಿಂಗ್ಹಾಮ್ ಅವರು ೧೯೭೦ರ ಆದಿಯಲ್ಲಿ ಲಿಥಿಯಂನ್ನು ಹೊರ ಎಲೆಕ್ಟ್ರಾನ್ ಬಿಡುಗಡೆಗಾಗಿ ಬಳಸಿ ಮೊದಲ ಕಾರ್ಯ ಸಾಧ್ಯ ಲಿಥಿಯಂ ಬ್ಯಾಟರಿಯನ್ನು ಅಭಿವೃದ್ಧಿ ಪಡಿಸಿದ್ದರು. ಡಾ. ಗುಡೆನೊಫ್ ಅವರು ಶಕ್ತಿಶಾಲಿ ಮತ್ತು ಉಪಯಕ್ತ ಬ್ಯಾಟರಿಗೆ ಸೂಕ್ತವಾದ ಪರಿಸ್ಥಿತಿಯನ್ನು ಸೃಷ್ಟಿಸುವ ಮೂಲಕ ಲಿಥಿಯಂ ಬ್ಯಾಟರಿಯ ಸಾಮರ್ಥ್ಯವನ್ನು ದುಪ್ಪಟ್ಟುಗೊಳಿಸಿದ್ದರು.
ಮೊಬೈಲ್ ಫೋನುಗಗಳಿಂದ ಎಲೆಕ್ಟ್ರಿಕ್ ವಾಹನಗಳವರೆಗೆ ದೈನಂದಿನ ಬದುಕಿನಲ್ಲಿ ಬಳಸುವಂತಹ ಲಿಥಿಯಂ ಅಯಾನ್ ಬ್ಯಾಟರಿಗಳನ್ನು ಅಭಿವೃದ್ಧಿ ಪಡಿಸಿದ್ದಕ್ಕಾಗಿ ಜಾನ್ ಡಿ ಗುಡೆನೊಫ್, ಎಂ. ಸ್ಟಾನ್ಲೀ ವೈಟಿಂಗ್ಹಾಮ್ ಮತ್ತು ಅಕಿರಾ ಯೋಶಿನೊ ಅವರಿಗೆ ಧನ್ಯವಾದಗಳು ಎಂದು ಸಮಿತಿಯ ಹೇಳಿಕೆ ತಿಳಿಸಿತು.
‘ಸಾಲಶೂರ’ ಇಮ್ರಾನ್ ಖಾನ್: ಒಂದೇ ವರ್ಷದಲ್ಲಿ 7,500 ಶತಕೋಟಿ ರೂ ಎರವಲು
ಇಸ್ಲಾಮಾಬಾದ್: ಪಾಕಿಸ್ತಾನದ ಆಡಳಿತಾರೂಢ ಇಮ್ರಾನ್ ಖಾನ್ ಸರ್ಕಾರವು ತನ್ನ ಅಧಿಕಾರಾವಧಿಯ ಮೊದಲ ವರ್ಷದಲ್ಲಿ ಹಣವನ್ನು ಎರವಲು ಪಡೆಯುವಲ್ಲಿ ಹಿಂದಿನ ಎಲ್ಲ ದಾಖಲೆಗಳನ್ನು ಮುರಿಯಿತು. ಅಧಿಕೃತ ಮಾಹಿತಿಯ ಪ್ರಕಾರ, ಪ್ರಸ್ತುತ ಸರ್ಕಾರದ ಒಂದು ವರ್ಷದ ಆಡಳಿತದಲ್ಲಿ ದೇಶದ ಒಟ್ಟು ಸಾಲವು 7,509 ಶತಕೋಟಿ (ಬಿಲಿಯನ್) ರೂಪಾಯಿಗಳಷ್ಟು (ಪಾಕಿಸ್ತಾನಿ ಕರೆನ್ಸಿ) ಹೆಚ್ಚಳ ದಾಖಲಾಯಿತು.
ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನವು ಈ ಸಾಲ ಮಾಹಿತಿಯನ್ನು ಪ್ರಧಾನ ಮಂತ್ರಿ ಕಚೇರಿಗೆ ಕಳುಹಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿದ ಪಾಕಿಸ್ತಾನಿ ಮಾಧ್ಯಮಗಳು 2019 ಅಕ್ಟೋಬರ್ 09ರ ಬುಧವಾರ ವರದಿ ಮಾಡಿದವು.
ಆಗಸ್ಟ್ 2018 ಮತ್ತು ಆಗಸ್ಟ್ 2019 ರ ನಡುವೆ ಸರ್ಕಾರವು ವಿದೇಶೀ ಮೂಲಗಳಿಂದ 2,804 ಶತಕೋಟಿ ( ಬಿಲಿಯನ್) ರೂಪಾಯಿ ಮತ್ತು ದೇಶೀಯ ಮೂಲಗಳಿಂದ 4,705 ಶತಕೋಟಿ (ಬಿಲಿಯನ್) ರೂಪಾಯಿಗಳನ್ನು ಎರವಲು ಪಡೆದಿದೆ ಎಂದು ವರದಿ ತಿಳಿಸಿತು.
ಸ್ಟೇಟ್ ಬ್ಯಾಂಕ್ ಅಂಕಿಅಂಶಗಳ ಪ್ರಕಾರ, ಪ್ರಸಕ್ತ ಹಣಕಾಸು ವರ್ಷದ ಮೊದಲ ಎರಡು ತಿಂಗಳಲ್ಲಿ ಪಾಕಿಸ್ತಾನದ ಸರ್ಕಾರಿ ಸಾಲದಲ್ಲಿ ಶೇಕಡಾ 1.43 ರಷ್ಟು ಏರಿಕೆ ಕಂಡುಬಂದಿದೆ. ಫೆಡರಲ್ ಸರ್ಕಾರದ ಸಾಲವು ಪ್ರಸ್ತುತ ವರ್ಷ 32,240 ಶತಕೋಟಿ (ಬಿಲಿಯನ್) ರೂಪಾಯಿಗಳಿಗೆ ತಲುಪಿದೆ, ಅದು ಕಳೆದ ವರ್ಷ ಆಗಸ್ಟಿನಲ್ಲಿ 24,732 ಶತಕೋಟಿ (ಬಿಲಿಯನ್) ರೂಪಾಯಿ ಆಗಿತ್ತು.
ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಸರ್ಕಾರದ ತೆರಿಗೆ ಸಂಗ್ರಹವು 960 ಶತಕೋಟಿ (ಬಿಲಿಯನ್) ರೂಪಾಯಿಗಳಷ್ಟಾಗಿದೆ. ಸರ್ಕಾರವು ಹೊಂದಿದ್ದ ತೆರಿಗೆ ಸಂಗ್ರಹ ಗುರಿ 1 ಟ್ರಿಲಿಯನ್ ರೂಪಾಯಿಗಳು ಎಂದು ವರದಿಗಳು ತಿಳಿಸಿದವು.