ಗ್ರಾಮೀಣ ಭಾರತ ಬಯಲು ಶೌಚ ಮುಕ್ತ: ಪ್ರಧಾನಿ ಘೋಷಣೆ
೧೫೦ ರೂಪಾಯಿಗಳ ಗಾಂಧಿ ಸ್ಮಾರಕ ನಾಣ್ಯ, ೬ ಅಂಚೆ ಚೀಟಿ ಬಿಡುಗಡೆ
ಅಹ್ಮದಾಬಾದ್: ರಾಷ್ಟ್ರಪಿತ ಮಹಾತ್ಮ ಗಾಂಧಿರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ೧೫೦ನೇ ಜನ್ಮ ದಿನಾಚರಣೆಯ ನೆನಪಿಗಾಗಿ ೧೫೦ ರೂಪಾಯಿಗಳ ನಾಣ್ಯ ಮತ್ತು ೬ ಸ್ಮಾರಕ ಅಂಚೆ ಚೀಟಿಗಳನ್ನು 2019ರ ಅಕ್ಟೋಬರ್ 02ರ ಬುಧವಾರ ಇಲ್ಲಿ ಬಿಡುಗಡೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ’ಗ್ರಾಮೀಣ ಭಾರತವು ಬಯಲುಶೌಚ ಮುಕ್ತ ದೇಶವಾಗಿದೆ’ ಎಂದು ಘೋಷಿಸಿದರು..
ಗಾಂಧಿ ಜಯಂತಿಯ ಅಂಗವಾಗಿ ಅಹ್ಮದಾಬಾದಿನ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದ ಪ್ರಧಾನಿಯವರು ಸಬರಮತಿ ನದಿಯ ಮುಂಭಾಗದಲ್ಲಿ ಸ್ವಚ್ಛ ಭಾರತ ದಿವಸ್-೨೦೧೯ನ್ನು ಉದ್ಘಾಟಿಸಿ ಭಾರತವು ಬಯಲು ಶೌಚ ಮುಕ್ತ ದೇಶವಾಗಿದೆ ಎಂಬುದಾಗಿ ಪ್ರಕಟಿಸಿದರು.
ಇದಕ್ಕೂ ಮುನ್ನ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದ ಪ್ರಧಾನಿ ಅಲ್ಲಿನ ಸಂದರ್ಶಕರ ಪುಸ್ತಕದಲ್ಲಿ ’ಮಹಾತ್ಮ ಗಾಂಧಿ ಅವರ ೧೫೦ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ ಅವರ ’ಸ್ವಚ್ಛ ಭಾರತ’ ಕನಸನ್ನು ನನಸಾಗುತ್ತಿರುವುದಕ್ಕೆ ಸಾಕ್ಷಿಯಾಗುತ್ತಿರುವುದಕ್ಕಾಗಿನನಗೆ ತೃಪ್ತಿ ಇದೆ. ಈ ಸಂದರ್ಭದಲ್ಲಿ ಭಾರತವು ಯಶಸ್ವಿಯಾಗಿ ಬಯಲು ಶೌಚಾಲಯವನ್ನು ಸ್ಥಗಿತಗೊಳಿಸಿದೆ ಎಂಬುದಾಗಿ ಈ ಆಶ್ರಮದಲ್ಲಿ ಹೇಳುವ ಅದೃಷ್ಟ ನನ್ನದಾಗಿದೆ’ ಎಂದು ಬರೆದರು.
ನರ್ಮದಾ ನದಿಯ ಮುಂಭಾಗದಲ್ಲಿ ೨೦,೦೦೦ ಮಂದಿ ಪಂಚಾಯತ್ ಮುಖ್ಯಸ್ಥರನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಿದರು.
‘ಇಡೀ ಜಗತ್ತು ಬಾಪು ಅವರ ಜನ್ಮದಿನವನ್ನು ಆಚರಿಸುತ್ತಿದೆ. ಕೆಲವು ದಿನಗಗಳ ಹಿಂದೆ ವಿಶ್ವಸಂಸ್ಥೆಯು ಈ ಸಂದರ್ಭವನ್ನು ಸ್ಮರಣೀಯವಾಗಿಸಲು ಸ್ಮಾರಕ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿತ್ತು. ಈಗ ಇಲ್ಲೂ ಸ್ಮಾರಕ ಅಂಚೆ ಚೀಟಿಗಳು ಮತ್ತು ನಾಣ್ಯಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಪ್ರಧಾನಿ ಹೇಳಿದರು.
ಗ್ರಾಮೀಣ ಭಾರತ ಮತ್ತು ಅದರ ಹಳ್ಳಿಗಳು ಈದಿನ ಸ್ವತಃ ಸಂಪೂರ್ಣವಾಗಿ ಬಯಲು ಶೌಚ ಮುಕ್ತವಾಗಿರುವುದಾಗಿ ಘೋಷಿಸಿವೆ ಎಂದು ಪ್ರಧಾನಿ ಈ ಸಂದರ್ಭದಲ್ಲಿ ಹೇಳಿದರು.
ಜಗತ್ತಿನಲ್ಲಿ ಕಾಣಬಯಸುವ ಬದಲಾವಣೆಯನ್ನು ನೀವೇ ಮಾಡಿಕೊಳ್ಳಿ ಎಂದು ಗಾಂಧೀಜಿ ಹೇಳುತ್ತಿದ್ದರು. ಈ ಮಂತ್ರವನ್ನು ಆಧರಿಸಿಯೇ ನಾವು ಪೊರಕೆಗಳನ್ನು ಕೈಗೆತ್ತಿಕೊಂಡು ನಮ್ಮ ಸಮಾಜವನ್ನು ಸ್ವಚ್ಛಗೊಳಿಸಲು ಆರಂಭಿಸಿದ್ದೇವೆ. ಭಾರತೀಯರು ಶೌಚಾಲಯಗಳ ಬಗ್ಗೆ ಮಾತನಾಡಲು ಹಿಂಜರಿಯುತ್ತಿದ್ದರು, ಆದರೆ ಈಗ ಅದು ಭಾರತೀಯರ ಚಿಂತನಾ ಪ್ರಕ್ರಿಯೆಯಲ್ಲೇ ಸೇರಿದೆ ಎಂದು ಪ್ರಧಾನಿ ನುಡಿದರು.
‘ನಮ್ಮ ಯಶಸ್ಸನ್ನು ಕಂಡು ಜಗತ್ತು ದಿಗ್ಭ್ರಮೆಗೊಂಡಿದೆ. ವಿಶ್ವವು ಈ ಸಾಧನೆಗಾಗಿ ನಮ್ಮನ್ನು ಗೌರವಿಸುತ್ತಿದೆ. ೬೦ ತಿಂಗಳುಗಳಲ್ಲಿ ನಾವು ೬೦ ಕೋಟಿಗೂ ಹೆಚ್ಚು ಜನರಿಗೆ ೧೧ ಕೋಟಿ ಶೌಚಾಲಯಗಳನ್ನು ನಿರ್ಮಿಸಿಕೊಡುವ ಕೆಲಸ ಮಾಡಿದ್ದೇವೆ. ಇದನ್ನು ಕೇಳಿ ಜಗತ್ತು ದಿಗ್ಭ್ರಮೆಗೊಂಡಿದೆ’ ಎಂದು ಅವರು ಹೇಳಿದರು.
ಯುನಿಸೆಫ್ ವರದಿಯ ಪ್ರಕಾರ ಕಳೆದ ಐದು ವರ್ಷಗಳಲ್ಲಿ ಸ್ವಚ್ಛ ಭಾರತ ಅಭಿಯಾನದ ಪರಿಣಾಮವಾಗಿ ೨೦ ಲಕ್ಷ ಕೋಟಿ ರೂಪಾಯಿಗಳಿಗೂ ಹೆಚ್ಚಿನ ಮೌಲ್ಯದ ಧನಾತ್ಮಕ ಪರಿಣಾಮಗಳಾಗಿವೆ. ಈ ಯೋಜನೆಯ ಪರಿಣಾಮವಾಗಿ ೭೫ ಲಕ್ಷಕ್ಕೂ ಹೆಚ್ಚು ಮಂದಿಗೆ ನೌಕರಿ ಲಭಿಸಿದೆ. ಇದೆ ಬಹುತೇಕ ಲಾಭ ರಾಷ್ಟ್ರದ ಗ್ರಾಮೀಣ ಭಾಗಗಳಿಗೆ ಆಗಿದೆ ಎಂದು ಪ್ರಧಾನಿ ನುಡಿದರು.
ಭಾರತ ಸರ್ಕಾರವು ಇತ್ತೀಚೆಗೆ ಜಲ ಜೀವನ ಮಿಷನ್ ಆರಂಭಿಸಿದೆ. ನಮ್ಮ ಸಮಾಜದ ಹಿತಕ್ಕಾಗಿ ನಾವು ನೀರು ಮರುಪೂರಣ, ನೀರು ಮರುಬಳಕೆಗೆ ಸಾಧ್ಯವಿರುವ ಎಲ್ಲ ಕ್ರಮಗಳನ್ನೂ ಕೈಗೊಳ್ಳಬೇಕು. ಜಲ ಜೀವನ ಮಿಷನ್ ಗಾಗಿ ೩.೫ ಲಕ್ಷ ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲು ನಾವು ತೀರ್ಮಾನಿಸಿದ್ದೇವೆ. ಆದರೆ ಭಾರತದ ನಾಗರಿಕರ ಸಕ್ರಿಯ ಪಾಲುದಾರಿಕೆ ಇಲ್ಲದೇ ಇದ್ದಲ್ಲಿ ಇದು ಅಪೂರ್ಣವಾಗುತ್ತದೆ ಎಂದು ಮೋದಿ ಹೇಳಿದರು.
ಪ್ರತಿಯೊಂದು ಗ್ರಾಮವೂ ಸ್ವಯಂ ಸ್ವಾವಲಂಬಿಯಾಗಿರಬೇಕು ಎಂಬುದು ಮಹಾತ್ಮ ಗಾಂಧಿಯವರ ಕನಸಾಗಿತ್ತು. ರಾಷ್ಟ್ರೀಯ ಗ್ರಾಮ ಸ್ವರಾಜ್ ಮಾಧ್ಯಮ ಮೂಲಕ ನಾವು ಈ ಕನಸನ್ನೂ ನನಸಾಗಿಸುವತ್ತ ಸಾಗುತ್ತಿದ್ದೇವೆ ಎಂದು ಪ್ರಧಾನಿ ಹೇಳಿದರು.
ಸ್ವಚ್ಛತೆ, ಪರಿಸರ ಮತ್ತು ಪ್ರಾಣಿಗಳ ಸಂರಕ್ಷಣೆ ಇವೆಲ್ಲವೂ ಗಾಂಧಿಜಿಯವರಿಗೆ ಆಪ್ತವಾಗಿದ್ದ ವಿಷಯಗಳು. ಅವುಗಳಲ್ಲಿ ಪ್ಲಾಸ್ಟಿಕ್ ಅತ್ಯಂತ ಹೆಚ್ಚು ಅಪಾಯಕಾರಿ. ಆದ್ದರಿಂದ ೨೦೨೨ರ ವೇಳೆಗೆ ದೇಶದಿಂದ ಬಳಸಿ ಬಿಸಾಡುವ (ಏಕ ಬಳಕೆಯ) ಪ್ಲಾಸ್ಟಿಕ್ಕನ್ನುಸಂಪೂರ್ಣವಾಗಿ ನಿವಾರಿಸಬೇಕು ಎಂದು ಅವರು ಹೇಳಿದರು.
ವಿಶ್ವದ ಯಾವುದೇ ಸಮಸ್ಯೆ, ಸವಾಲಿಗೆ ಗಾಂಧಿ ಬೋಧನೆಯಲ್ಲಿ ಪರಿಹಾರ: ಪ್ರಧಾನಿ ಮೋದಿ
ದೇಶಾದ್ಯಂತ ಮಹಾತ್ಮ ಗಾಂಧಿ ೧೫೦ನೇ ಜನ್ಮದಿನ:
ರಾಷ್ಟ್ಪಪತಿ ಕೋವಿಂದ್, ಪ್ರಧಾನಿ ಗೌರವಾರ್ಪಣೆ
ನವದೆಹಲಿ/ ಅಹ್ಮದಾಬಾದ್: ’ವಿಶ್ವವು ಎದುರಿಸುತ್ತಿರುವ ಯಾವುದೇ ಸಮಸ್ಯೆಯನ್ನು ತೆಗೆದುಕೊಳ್ಳಿ, ಈ ಸವಾಲುಗಳಿಗೆ ಮಹಾತ್ಮ ಗಾಂಧಿ ಅವರ ಬೋಧನೆಗಳಲ್ಲಿ ಪರಿಹಾರವಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು 2019 ಅಕ್ಟೋಬರ್ 02ರ ಬುಧವಾರ ಗುಜರಾತಿನ ಅಹ್ಮದಾಬಾದಿನಲ್ಲಿ ಹೇಳಿದರು.
ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ೧೫೦ನೇ ಜನ್ಮದಿನದ ಅಂಗವಾಗಿ ಅಹ್ಮದಾಬಾದಿನ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿ ಮಹಾತ್ಮಾಗಾಂಧಿ ಅವರ ಪ್ರತಿಮಗೆ ಹಾರಾರ್ಪಣೆ ಮಾಡಿ ಗೌರವಾರ್ಪಣೆ ಮಾಡಿದ ಪ್ರಧಾನಿ, ಆ ಬಳಿಕ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಅವರು ಸಬರಮತಿ ಆಶ್ರಮದ ಮಕ್ಕಳು ಮತ್ತು ಸ್ವಯಂಸೇವಕರ ಜೊತೆಗೆ ಸಂವಹನ ನಡೆಸಿದರು.
ಅಮೆರಿಕದ ಹ್ಯೂಸ್ಟನ್ನಲಿ ನಡೆದ ’ಹೌಡಿ ಮೋದಿ’ ಕಾರ್ಯಕ್ರಮದ ಸಂದರ್ಭದಲ್ಲಿ ವಿಶ್ವ ವೇದಿಕೆಯಲ್ಲಿ ಭಾರತಕ್ಕೆ ಇರುವ ಗೌರವದ ಮಿನುಗುನೋಟವನ್ನು ನಾವು ಕಂಡಿದ್ದೇವೆ. ಆ ಕಾರ್ಯಕ್ರಮದಲಿ ರಿಪಬ್ಲಿಕನ್ಸ್ ಮತ್ತು ಡೆಮಾಕ್ರಾಟ್ ನಾಯಕರು ಮಾತನಾಡಿದರು. ಅವರು ಅಲ್ಲಿಗೆ ಬಂದದ್ದೇ ವಿಶೇಷವಾಗಿತ್ತು’ ಎಂದು ಪ್ರಧಾನಿ ಮೋದಿ ಹೇಳಿದರು.
ವಿಶ್ವ ವೇದಿಕೆಯಲ್ಲಿ ಸಂಭವಿಸುತ್ತಿರುವ ಹಲವಾರು ಧನಾತ್ಮಕ ಬದಲಾವಣೆಗಳಲ್ಲಿ ಭಾರತ ಮುಂಚೂಣಿಯಲ್ಲಿರುವದನ್ನು ಜಗತ್ತು ಗಮನಿಸುತ್ತಿದೆ ಎಂದು ಅವರು ನುಡಿದರು.
‘ವಾಸ್ತವವಾಗಿ ಪ್ರತಿಯೊಬ್ಬರನ್ನೂ ಜೊತೆಯಲ್ಲಿ ಕರೆದೊಯ್ಯುವುದರಲ್ಲಿ ಭಾಋತ ನಂಬಿಕೆ ಇರಿಸಿದೆ. ಇದನ್ನೂ ಜಗತ್ತು ಗಮನಕ್ಕೆ ತೆಗೆದುಕೊಂಡಿದೆ’ ಎಂದು ಪ್ರಧಾನಿ ಹೇಳಿದರು.
ವಿಶ್ವಸಂಸ್ಥೆಯಲ್ಲಿ ಮಹಾತ್ಮ ಗಾಂಧಿ ಅವರು ೧೫೦ನೇ ಜನ್ಮದಿನೋತ್ಸವವು ಅತ್ಯಂತ ಕುತೂಹಲವನ್ನು ಮೂಡಿಸಿದೆ. ಜಗತ್ತು ಎದುರಿಸುವ ಯಾವುದೇ ಸವಾಲುಗಳಿಗೆ ಗಾಂಧಿ ಅವರ ಬೋಧನೆಗಳಲ್ಲಿ ಪರಿಹಾರ ಲಭಿಸುತ್ತದೆ ಎಂದು ಪ್ರಧಾನಿ ಅಹ್ಮದಾಬಾದ್ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಾ ನುಡಿದರು.
ರಾಷ್ಟ್ರವ್ಯಾಪಿ ಕಾರ್ಯಕ್ರಮ: ಜಾಥಾಗಳು, ಸ್ವಚ್ಛತಾ ಅಭಿಯಾನಗಳು, ರಕ್ತದಾನ ಶಿಬಿರಗಳು, ಭಜನೆಗಳ ಮೂಲಕ ದೇಶಾದ್ಯಂತ ಬುಧವಾರ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ೧೫೦ನೇ ಜನ್ಮದಿನಾಚರಣೆಯನ್ನು ಬುಧವಾರ ದೇಶಾದ್ಯಂತ ಆಚರಿಸಲಾಗಿದ್ದು, ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಬೆಳಗ್ಗೆಯೇ ರಾಜಘಾಟ್ಗೆ ತೆರಳಿ ಮಹಾತ್ಮಾ ಗಾಂಧಿ ಅವರಿಗೆ ಶ್ರದ್ಧಾಂಜಲಿಗಳನ್ನು ಸಲ್ಲಿಸಿದರು.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಹಿರಿಯ ಬಿಜೆಪಿ ನಾಯಕ ಲಾಲ್ ಕೃಷ್ಣ ಅಡ್ವಾಣಿ, ಕೇಂದ್ರ ಸಚಿವರಾದ ಪೀಯೂಶ್ ಗೋಯೆಲ್ ಮತ್ತು ಹರದೀಪ್ ಸಿಂಗ್ ಪುರಿ ಮತ್ತು ಬಿಜೆಪಿ ಕಾರ್ಯಾಧ್ಯಕ್ಷ ಜೆಪಿ ನಡ್ಡಾ ಅವರು ರಾಷ್ಟ್ರಪಿತನಿಗೆ ಪುಷ್ಪಾಂಜಲಿ ಸಲ್ಲಿಸಿದವರಲ್ಲಿ ಸೇರಿದ್ದರು.
ಬಿಜೆಪಿ ಅಧ್ಯಕ್ಷೆ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೆಹಲಿಯಲ್ಲಿ ಗಾಂಧಿ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿದರೆ, ಕಾಂಗ್ರೆಸ್ ನಾಯಕರು ಪಕ್ಷದ ಹಂಗಾಮೀ ಅಧ್ಯಕ್ಷೆ ಸೋನಿಯಗಾಂಧಿ ನೇತೃತ್ವದಲ್ಲಿ ಪಕ್ಷದ ದೆಹಲಿ ಕಚೇರಿಯಿಂz ಗಾಂಧಿ ಸಂದೇಶ ಪಾದಯಾತ್ರೆ ನಡೆಸಿದರು.
ದೈನಂದಿನ ಬದುಕಿನಲ್ಲಿ ಗಾಂಧಿ ತತ್ವಗಳನ್ನು ಅನುಷ್ಠಾನಗೊಳಿಸುವಂತೆ ವೆಂಕಯ್ಯ ನಾಯ್ಡು ಅವರು ಈ ಸಂದರ್ಭದಲ್ಲಿ ಜನತೆಯನ್ನು ಆಗ್ರಹಿಸಿದರು.
‘ಮಹಾತ್ಮ ಅವರ ೧೫೦ನೇ ಜನ್ಮ ದಿನವನ್ನು ಗೌರವಪೂರ್ವಕವಾಗಿ ಆಚರಿಸುವುದರ ಜೊತೆಗೆ ನಮ್ಮ ದೈನಂದಿನ ಬದುಕಿನಲ್ಲಿ ಗಾಂಧಿ ತತ್ವಗಳನನು ಅಳವಡಿಸಿಕೊಳ್ಳುವುದರ ಮೂಲಕ ನಮ್ಮ ಆಂತರಿಕ ಬದುಕನ್ನು ಪರಿವರ್ತಿಸಿಕೊಳ್ಳಲು ನಾವು ಯತ್ನಿಸಬೇಕು’ ಎಂದು ಉಪರಾಷ್ಟ್ರಪತಿ ತಮ್ಮ ಟ್ವಿಟ್ಟರ್ ಸಂದೇಶದಲ್ಲಿ ತಿಳಿಸಿದರು.
ಮಾನವತೆಗೆ ಚಿರಂತನವಾದ ಕೊಟ್ಟ ಕೊಡುಗೆಗಾಗಿ ರಾಷ್ಟ್ರವು ಅವರಿಗೆ ತನ್ನ ಕೃತಜ್ಞತೆ ವ್ಯಕ್ತ ಪಡಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.
‘ಅವರ ಕನಸುಗಳನ್ನು ನನಸಾಗಿಸಲು ಮತ್ತು ಉತ್ತಮ ಭೂಗ್ರಹದ ಸೃಷ್ಟಿಗಾಗಿ ಕಠಿಣ ಶ್ರಮ ಮುಂದುವರೆಸಲು ನಾವು ಪ್ರತಿಜ್ಞೆ ಮಾಡುತ್ತೇವೆ’ ಎಂದು ಮೋದಿ ಅವರು ಟ್ವಿಟ್ಟರ್ ಸಂದೇಶದಲ್ಲಿ ಬರೆದರು.
ಗಾಂಧಿ ಅವರಿಗೆ ಸಂಬಂಧಿಸಿದ ಕಿರು ವಿಡಿಯೋ ಒಂದರಲ್ಲಿ ’ಮಹಾತ್ಮ ಗಾಂಧಿ ಅವರು ಶಾಂತಿಯ ಸಂದೇಶವೂ ಈಗಲೂ ಜಾಗತಿಕ ಸಮುದಾಯಕ್ಕೆ ಪ್ರಸ್ತುತವಾದದ್ದು’ ಎಂದು ಮೋದಿ ಹೇಳಿದರು.
‘ಗಾಂಧಿಯವರು ಎಚ್ಚರಿಕೆ ನೀಡಿದ ಏಳು ವಿಕೃತಗಳನ್ನು ಕೂಡಾ ಉಲ್ಲೇಖಿಸಿದ ಪ್ರಧಾನಿ ಶ್ರಮ ಪಡದ ಸಂಪತ್ತು, ಪ್ರಜ್ಞೆ ಇಲ್ಲದ ಖುಷಿ, ಚಾರಿತ್ರ್ಯ ಇಲ್ಲದ ಜ್ಞಾನ, ನೀತಿ ಇಲ್ಲದ ಭೇಟಿ, ಮಾನವೀಯತೆ ಇಲ್ಲದ ವಿಜ್ಞಾನ, ಸಮರ್ಪಣೆ ಇಲ್ಲದ ಧರ್ಮ, ನೀತಿಗಳಿಲ್ಲದ ರಾಜಕೀಯ ಇವೇ ಗಾಂಧಿಯವರು ಹೇಳಿದ್ದ ವಿಕೃತಗಳು ಎಂದು ಮೋದಿ ನುಡಿದರು.
ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಪಕ್ಷವು ನವದೆಹಲಿಯ ಶಾಲಿಮಾರ್ ಬಾಗ್ ಪ್ರದೇಶದಲ್ಲಿ ಸಂಘಟಿಸಿದ ’ಗಾಂಧಿ ಸಂಕಲ್ಪ ಯಾತ್ರೆ’ಗೆ ಚಾಲನೆ ನೀಡಿ ಪಕ್ಷ ಕಾರ್ಯಕರ್ತರೊಂದಿಗೆ ಸುಮಾರು ಒಂದು ಕಿಮೀ ಪಾದಯಾತ್ರೆಯಲ್ಲಿ ಪಾಲ್ಗೊಂಡರು. ’ಮನ್ ಮೆ ಬಾಪು’ ಹೆಸರಿನಲ್ಲಿ ಸಂಘಟಿಸಲಾದ ಈ ಕಾರ್ಯಕ್ರಮದಲ್ಲಿ ಸ್ವಚ್ಛತೆ, ಖಾದಿ ಬಳಕೆ, ಅಹಿಂಸೆಯನ್ನು ಇತ್ಯಾದಿ ಗಾಂಧಿ ಆದರ್ಶಗಳ ಪ್ರಚಾರ ಮಾಡಲಾಯಿತು.
ರಾಜಘಾಟ್ ನಲ್ಲಿ ಗಾಂಧಿ ಜಯಂತಿ ಆಚರಣೆ ಸಂದರ್ಭದಲ್ಲಿ ಪಕ್ಷ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ’ಬಿಜೆಪಿಯು ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು (ಆರ್ ಎಸ್ ಎಸ್) ರಾಷ್ಟ್ರದ ಸಂಕೇತವನ್ನಾಗಿ ಮಾಡುವ ಸಲುವಾಗಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರನ್ನು ಮೂಲೆಪಾಲು ಮಾಡುತ್ತಿದೆ ಎಂದು ಆಪಾದಿಸಿದರು.
ಬಿಜೆಪಿಯು ಮೊದಲ ಸತ್ಯದ ಹಾದಿಯಲಿ ಸಾಗುವುದನ್ನು ಕಲಿಯಬೇಕು, ಬಳಿಕ ಮಹಾತ್ಮ ಗಾಂಧಿಯವರ ಬಗ್ಗೆ ಮಾತನಾಡಬೇಕು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ರಾಜಘಾಟ್ ಗೆ ಪಕ್ಷವು ದೀನದಯಾಳು ಉಪಾಧ್ಯಾಯ ಮಾರ್ಗದಲ್ಲಿನ ದೆಹಲಿ ರಾಜ್ಯ ಕಾಂಗ್ರೆಸ್ ಕಚೇರಿ ರಾಜೀವ ಭವನದಿಂದ ಸಂಘಟಿಸಿದ ’ಗಾಂಧಿ ಸಂದೇಶ ಯಾತ್ರೆ’ಯ ನೇತೃತ್ವ ವಹಿಸಿದ್ದರು.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಎಂದೂ ಸತ್ಯ, ಅಹಿಂಸೆ ಮತ್ತು ಸಾಮಾಜಿಕ ಸೌಹಾರ್ದದ ಮಾರ್ಗದಲ್ಲಿ ನಡೆಯದೇ ಇದ್ದವರು ಮಹಾತ್ಮ ಗಾಂಧಿಯವರ ೧೫೦ನೇ ಜನ್ಮದಿನ ಆಚರಿಸುತ್ತಿದ್ದಾರೆ ಎಂದು ಟೀಕಿಸುವ ಮೂಲಕ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು.
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಉಪ ಮುಖ್ಯಮಂತ್ರಿ ಮನಿಶ್ ಸಿಸೋಡಿಯಾ ಅವರು ಮಹಾತ್ಮಗಾಂಧಿ ಮತ್ತು ಲಾಲ್ ಬಹಾದುರ್ ಶಾಸ್ತಿ ಅವರ ಸಮಾಧಿಗಳಿಗೆ ತೆರಳಿ ಶ್ರದ್ಧಾಂಜಲಿ ಸಲ್ಲಿಸಿದರು.
ಇಂಗ್ಲೆಂಡಿನಲ್ಲಿ ಭಜನೆ: ಬ್ರಿಟನ್ನಿನ ಹಲವಡೆಗಳಲ್ಲಿ ನಡೆಸಲಾದ ಸಮಾರಂಭಗಳಲ್ಲಿ ಮಹಾತ್ಮ ಗಾಂಧಿಯವರಿಗೆ ಪ್ರಿಯವಾದ ಭಜನೆಗಳನ್ನು ಹಾಡುವ ಮೂಲಕ ದಿವಂಗತ ನಾಯಕನಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಟವಿಸ್ಟೋಕ್ ಚೌಕ ಮತ್ತು ಲಂಡನ್ನಿನ ಸಂಸತ್ ಚೌಕದಲ್ಲಿ ನಡೆದ ಸಮಾರಂಭಗಳಲ್ಲಿ ಇಂಗ್ಲೆಂಡಿನ ಭಾರತೀಯ ಹೈ ಕಮೀಷನರ್ ರುಚಿ ಘನಶ್ಯಾಮ್ ಗೌರವಾರ್ಪಣೆ ಮಾಡಿದರು.
ಮಾನವ ದ್ವಂದ್ವಗಳ ಮಧ್ಯೆ ಸೇತುವೆಯಾಗಬಲ್ಲ ಅನನ್ಯ ಶಕ್ತಿ ಮಹಾತ್ಮಗೆ ಇತ್ತು
ನ್ಯೂಯಾರ್ಕ್ ಟೈಮ್ಸ್ನಲ್ಲಿ ಒಪೆಡ್ ಲೇಖನ ಬರೆದ ಪ್ರಧಾನಿ ಮೋದಿ
ನವದೆಹಲಿ: ಮಾನವ ಸಮಾಜದ ಕೆಲವೊಂದು ಮಹಾನ್ ದ್ವಂದ್ವಗಳ ಮಧ್ಯೆ ಸೇತುವೆಯಾಗಬಲ್ಲಂತಹ ಅನನ್ಯ ಸಾಮರ್ಥ್ಯ ಮಹಾತ್ಮ ಗಾಂಧಿ ಅವರಿಗೆ ಇತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ೧೫೦ನೇ ಗಾಂಧಿ ಜಯಂತಿ ಅಂಗವಾಗಿ ದಿ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯಲ್ಲಿ 2019 ಅಕ್ಟೋಬರ್ 02ರ ಬುಧವಾರ ಬರೆದ ತಮ್ಮ ಲೇಖನದಲ್ಲಿ ಅಭಿಪ್ರಾಯಪಟ್ಟರು.
ಮಹಾತ್ಮ ಗಾಂಧಿಯವರು ರಾಷ್ಟ್ರೀಯವಾದಕ್ಕೆ ಮಹತ್ವ ನೀಡಿದ್ದೇಕೆ ಎಂಬುದಕ್ಕೆ ಲೇಖನದಲ್ಲಿ ಒತ್ತು ನೀಡಿದ ಪ್ರಧಾನಿ ಮೋದಿಯವರು, ೧೯೨೫ರಷ್ಟು ಹಿಂದೆಯೇ ’ರಾಷ್ಟ್ರೀಯತೆ ವಾಸ್ತವವಾದಾಗ ಮಾತ್ರವೇ ಅಂತಾರಾಷ್ಟ್ರೀಯತೆ ಸಾಧ್ಯ’ ಎಂಬುದಾಗಿ ಹೇಳಿದ್ದನ್ನು ಉಲ್ಲೇಖಿಸಿದರು.
‘ಆದರೆ ಗಾಂಧೀಜಿಯವರು ಭಾರತದ ರಾಷ್ಟ್ರೀಯತೆಯನ್ನು ಎಂದಿಗೂ ಸಂಕುಚಿತ ಅಥವಾ ಪ್ರತ್ಯೇಕವಾಗಿರದ, ಆದರೆ ಮಾನವೀಯತೆಯ ಸೇವೆಗಾಗಿ ಕೆಲಸ ಮಾಡುವಂತಹುದ್ದು ಎಂಬುದಾಗಿ ಕಲ್ಪಿಸಿಕೊಂಡಿದ್ದರು’ ಎಂದು ಪ್ರಧಾನಿ ಹೇಳಿದರು.
‘ಭಾರತ ಮತ್ತು ಜಗತ್ತಿಗೆ ಗಾಂಧಿ ಏಕೆ ಬೇಕು’ ಶೀರ್ಷಿಕೆಯ ಲೇಖನದಲ್ಲಿ ಭಾರತ ಮತ್ತು ಅದರಿಂದಾಚೆಗೆ ವ್ಯಾಪಿಸಿದ ಮಹಾತ್ಮ ಗಾಂಧಿಯವರ ಚಿಂತನೆಯ ಶಕ್ತಿ ಮತ್ತು ಪರಿಣಾಮದ ಬಗ್ಗೆ ’ಒಂದು ವಿಶೇಷವಾದ ಐನ್ಸ್ಟೀನ್ ಸವಾಲು’ ಎಂಬುದಾಗಿ ಬಣ್ಣಿಸಿ ಪ್ರಧಾನಿ ಮೋದಿ ಬರೆದರು.
‘ರಕ್ತ ಮತ್ತು ಮಾಂಸಭರಿತವಾದ ಇಂತಹ ವ್ಯಕ್ತಿಯೊಬ್ಬ ಈ ಭೂಮಿಯಲ್ಲಿ ನಡೆದಾಡಿದ್ದ ಎಂಬುದನ್ನು ನಂಬಲು ಕೂಡಾ ಮುಂಬರುವ ತಲೆಮಾರುಗಳು ಹೆದರಬಹುದು’ ಎಂಬುದಾಗಿ ಮಹಾತ್ಮ ಗಾಂಧಿಯವರ ಬಗ್ಗೆ ಆಲ್ಬರ್ಟ್ ಐನ್ಸ್ಟೀನ್ ಅವರು ಹೇಳಿದ್ದನ್ನು ಪ್ರಧಾನಿ ಉಲ್ಲೇಖಿಸಿದರು.
‘ಭವಿಷ್ಯದ ತಲೆಮಾರುಗಳು ಗಾಂಧಿಯವರ ಆದರ್ಶಗಳನ್ನು ನೆನಪಿಟ್ಟುಕೊಳ್ಳುವಂತೆ ಖಾತರಿ ಮಾಡಿಕೊಳ್ಳುವುದು ಹೇಗೆ? ಎಂದು ಪ್ರಶ್ನಿಸಿದ ಪ್ರಧಾನಿ ಮೋದಿ, ಹೊಸ ಆವಿಷ್ಕಾರಗಳ ಮೂಲಕ ಗಾಂಧಿಯವರ ಆದರ್ಶಗಳನ್ನು ಹರಡುವ ನಿಟ್ಟಿನಲ್ಲಿ ನಾಯಕತ್ವ ವಹಿಸುವಂತೆ ಚಿಂತಕರು, ಉದ್ಯಮಿಗಳು ಮತ್ತು ತಂತ್ರಜ್ಞಾನ ನಾಯಕರಿಗೆ ಸೂಚಿಸಿದರು.
ಮಾರ್ಟಿನ್ ಲೂಥರ್ ಕಿಂಗ್ ೧೯೫೯ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದಾಗ ತಾವು ಯಾತ್ರಾರ್ಥಿಯಾಗಿ ಭಾರತಕ್ಕೆ ಬರುತ್ತಿರುವುದಾಗಿ ಹೇಳಿದ್ದನ್ನು ಪ್ರಧಾನಿ ಉಲ್ಲೇಖಿಸಿದ್ದಾರೆ. ’ಭಾರತವು ಅಹಿಂಸಾತ್ಮಕ ಸಾಮಾಜಿಕ ಬದಲಾವಣೆಯ ತಂತ್ರಗಳು ಬೆಳೆದಿರುವ ಭೂಮಿ’ ಎಂಬುದಾಗಿ ಅಮೆರಿಕದಲ್ಲಿ ನಾಗರಿಕ ಹಕ್ಕುಗಳ ಚಳವಳಿಯ ಮಹಾನ್ ನಾಯಕರಾದ ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್ ಹೇಳಿದ್ದರು ಎಂದು ಪ್ರಧಾನಿ ಬರೆದರು.
ಮಹಾತ್ಮಾ ಗಾಂಧಿಯವರಿಂದ ಸ್ಫೂರ್ತಿ ಪಡೆದವರು ದೊಡ್ಡ ಪ್ರಮಾಣದಲ್ಲಿ ಸಾರ್ವಜನಿಕವಾಗಿ ಪಾಲ್ಗೊಳ್ಳುತ್ತಿದ್ದುದು ಗಾಂಧಿ ಹೋರಾಟವನ್ನು ವಿಶಿಷ್ಟ ಹೋರಾಟವನ್ನಾಗಿ ಮಾಡಿತ್ತು ಎಂದು ಪ್ರಧಾನಿ ಮೋದಿ ಹೇಳಿದರು.
‘ಅವರು ಎಂದೂ ಆಡಳಿತಾತ್ಮಕ ಅಥವಾ ಚುನಾಯಿತ ಹುದ್ದೆಯನ್ನು ಹೊಂದಿರಲಿಲ್ಲ. ಅವರು ಎಂದೂ ಅಧಿಕಾರದ ಆಮಿಷಕ್ಕೆ ಒಳಗಾಗಲಿಲ್ಲ’ ಎಂಬುದಾಗಿ ಬರೆದ ಮೋದಿ, ’ಈ ಹಿನ್ನೆಲೆಯಲ್ಲಿಯೇ ನೆಲ್ಸನ್ ಮಂಡೇಲಾ ಅವರು ಗಾಂಧಿಯವರನ್ನು ’ಪವಿತ್ರ ಯೋಧ’ ಎಂಬುದಾಗಿ ಬಣ್ಣಿಸಿದ್ದರು ಎಂದು ಹೇಳಿದರು.
ಮಹಾತ್ಮ ಗಾಂಧಿಯವರು ಸಮಾಜದ ಎಲ್ಲ ವರ್ಗಗಳಿಂದಲೂ ವಿಶ್ವಾಸ ಪಡೆದುಕೊಂಡಿದ್ದರು ಎಂದು ಬರೆದ ಮೋದಿ, ೧೯೧೭ರಲ್ಲಿ ಅಹ್ಮದಾಬಾದಿನಲ್ಲಿ ನಡೆದ ಗುಜರಾತಿನ ಭಾರೀ ಜವುಳಿ ಮುಷ್ಕರವನ್ನು ಬಗೆಹರಿಸಲು ಮಿಲ್ ಕಾರ್ಮಿಕರು ಮತ್ತು ಮಾಲೀಕರು ಹೇಗೆ ಅವರ ಬಳಿಗೆ ಬರುತ್ತಿದ್ದರು ಎಂಬುದನ್ನು ನೆನಪಿಸಿದರು.
‘ಆರ್ಥಿಕ ಸ್ವಾವಲಂಬನೆ ಮತ್ತು ರಾಷ್ಟ್ರದ ಸಬಲೀಕರಣದ ಸಂಕೇತಳಾಗಿ ಚರಖಾ, ಖಾದಿ ಮತ್ತು ಮನೆಯಲ್ಲೇ ನೇಯ್ದ ಬಟ್ಟೆಯನ್ನು ಬಳಸಲು ಬೇರೆ ಯಾರಿಗೆ ಸಾಧ್ಯವಿತ್ತು? ಒಂದು ಮುಷ್ಠಿ ಉಪ್ಪಿನ ಮೂಲಕ ಬೇರೆ ಯಾರಿಗಾದರೂ ಸಾಮೂಹಿಕ ಚಳವಳಿ ಸೃಷ್ಟಿಸಲು ಸಾಧ್ಯವಿತ್ತೆ?’ ಎಂದು ಲೇಖನದಲ್ಲಿ ಪ್ರಶ್ನಿಸಿದ ಪ್ರಧಾನಿ ಮೋದಿ, ’ಅರಬ್ಬಿ ಸಮುದ್ರ ದಂಡೆಯಲ್ಲಿ ಒಂದು ಹಿಡಿಯಷ್ಟು ಪ್ರಮಾಣದ ಉಪ್ಪನ್ನು ಕೈಗೆತ್ತಿಕೊಳ್ಳುವ ಮೂಲಕ ಭಾರೀ ಚಳವಳಿಯನ್ನೇ ಗಾಂಧೀಜಿ ನಡೆಸಿದ್ದರು’ ಎಂದು ನೆನಪಿಸಿದರು.
ಹೈದರಾಬಾದ್ ನಿಜಾಮನ ಸಂಪತ್ತಿನ ಪ್ರಕರಣ: ಭಾರತಕ್ಕೆ ಗೆಲುವು
ಲಂಡನ್ (ಇಂಗ್ಲೆಂಡ್): ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ರದ್ದುಗೊಳಿಸಿರುವ ವಿಚಾರ ಸೇರಿದಂತೆ ಕೆಲವು ವಿಚಾರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಖಭಂಗ ಅನುಭವಿಸಿದ ಪಾಕಿಸ್ತಾನದ ವಿರುದ್ಧ ಭಾರತ ಮತ್ತೊಂದು ಐತಿಹಾಸಿಕ ಗೆಲುವು ಸಾಧಿಸಿತು.
ಹೈದರಾಬಾದ್ ನಿಜಾಮನಿಗೆ ಸೇರಿದ್ದ ಸಂಪತ್ತಿನ (ಅಂದಾಜು 35 ಮಿಲಿಯನ್ ಬ್ರಿಟಿಷ್ ಪೌಂಡ್) ಬಗೆಗಿನ ಪಾಕಿಸ್ತಾನದ ಬೇಡಿಕೆಯನ್ನು ತಿರಸ್ಕರಿಸಿ, ಭಾರತದ ನಿಲುವನ್ನು ಇಂಗ್ಲೆಂಡ್ ಹೈಕೋರ್ಟ್ (ಯುಕೆ ಹೈಕೋರ್ಟ್) 2019 ಅಕ್ಟೋಬರ್ 02ರ ಬುಧವಾರ ಎತ್ತಿಹಿಡಿಯಿತು.
ಏನಿದು ಪ್ರಕರಣ?
ಹೈದರಾಬಾದ್ ನಿಜಾಮನಿಗೆ ಸೇರಿದ್ದ ಬರೋಬ್ಬರಿ 35 ಮಿಲಿಯನ್ (ಬ್ರಿಟಿಷ್ ಪೌಂಡ್ಸ್) ನಷ್ಟು ಸಂಪತ್ತು ತನಗೆ ಸೇರಬೇಕೆಂದು ಪಾಕಿಸ್ತಾನ ವಾದಿಸಿದ್ದ 70 ವರ್ಷಗಳಷ್ಟು ಹಳೆಯ ಪ್ರಕರಣ ಇದು.
ಹೈದರಾಬಾದ್ ನಿಜಾಮನಿಗೆ ಸೇರಿದ್ದ ಸಂಪತ್ತಿನ ಮೇಲೆ ಪಾಕಿಸ್ತಾನಕ್ಕೆ ಯಾವುದೇ ಹಕ್ಕಿಲ್ಲ ಎಂದು ಯುಕೆ ಕೋರ್ಟ್ ತೀರ್ಪು ನೀಡಿತು. ಲಂಡನ್ ನ ವೆಸ್ಟ್ ಮಿನಿಸ್ಟರ್ ಬ್ಯಾಂಕ್ ನಲ್ಲಿರುವ ನಿಜಾಮನಿಗೆ ಸೇರಿದ ಸಂಪತ್ತು ತನಗೆ ಸೇರಿದ್ದು ಎಂದು ಪಾಕಿಸ್ತಾನ ಇಂಗ್ಲೆಂಡ್ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿತ್ತು.
ಆದರೆ ಹೈದರಾಬಾದ್ ನಿಜಾಮನ ಸಂಪತ್ತು ಭಾರತಕ್ಕೆ ಸೇರಿದ್ದು ಎಂದು ಇಂಗ್ಲೆಂಡ್ ಕೋರ್ಟ್ ತೀರ್ಪು ನೀಡುವ ಮೂಲಕ ಪಾಕಿಸ್ತಾನ ಮತ್ತೊಮ್ಮೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಮುಖಭಂಗ ಅನುಭವಿಸಿತು.
ಹೈದರಾಬಾದಿನ 7ನೇ ನಿಜಾಮ 1948ರಲ್ಲಿ ಒಂದು ಮಿಲಿಯನ್ ಪೌಂಡ್ ಹಣವನ್ನು ಲಂಡನ್ ಬ್ಯಾಂಕ್ ಗೆ ವರ್ಗಾಯಿಸಿದ್ದರು. ಇದರ ಮೌಲ್ಯ ಈಗ 35 ಮಿಲಿಯನ್ ಪೌಂಡ್. ಈ ಐತಿಹಾಸಿಕ ಪ್ರಕರಣ ಹಲವು ತಿರುವುಗಳನ್ನು ಪಡೆದುಕೊಂಡಿತ್ತು.
7ನೇ ನಿಜಾಮನ ಮೊಮ್ಮಕ್ಕಳಾದ ಪ್ರಸ್ತುತ ಟರ್ಕಿ ನಿವಾಸಿಗಳಾಗಿರುವ ಮುಕರ್ರಮ್ ಜಾ ಮತ್ತು ಮುಫಾಖಂ ಜಾ ಒಂದು ಕಡೆಯಾದರೆ, ಮತ್ತೊಂದು ಕಡೆ ಭಾರತ, ಪಾಕಿಸ್ತಾನದ ನಡುವೆ ಹಣಕ್ಕಾಗಿ ಕಾನೂನು ಸಮರ ನಡೆದಿತ್ತು. 1948ರಲ್ಲಿ ಹೈದರಬಾದ್ ಗೆ ಶಸ್ತ್ರಾಸ್ತ್ರ ಕಳುಹಿಸಿದ್ದಕ್ಕೆ ಪಾವತಿಸಿದ ಹಣವಾಗಿದ್ದು, ಅದು ತನಗೆ ಸೇರಬೇಕಾಗಿದೆ ಎಂದು ಪಾಕಿಸ್ತಾನ ವಾದ ಮಂಡಿಸಿತ್ತು.
ಅಂದು ಹೈದರಾಬಾದಿನ 7ನೇ ನಿಜಾಮ ಲಂಡನ್ನಿನನ್ಲಿದ್ದ ಪಾಕಿಸ್ತಾನದ ರಾಯಭಾರಿ ಹಬೀಬ್ ಇಬ್ರಾಹಿಂ ರಹೀಮತೊಲ್ಲಾ ಹೆಸರಿಗೆ ಒಂದು ಮಿಲಿಯನ್ ಪೌಂಡ್ ಹಣವನ್ನು ವರ್ಗಾಯಿಸಿದ್ದರು. ಇದನ್ನು ಸುರಕ್ಷತೆಯ ದೃಷ್ಟಿಯಿಂದ ಈ ಹಣವನ್ನು ನನ್ನ ಹೆಸರನ್ನು ದಾಖಲಿಸಿ ಬ್ಯಾಂಕ್ ನಲ್ಲಿ ಇರಿಸಬೇಕೆಂದು ನಿಜಾಮ ಹೇಳಿದ್ದರು. ಈ ಹಣ ಲಂಡನ್ನಿನ ವೆಸ್ಟ್ ಮಿನಿಸ್ಟರ್ ಬ್ಯಾಂಕ್ ನಲ್ಲಿ ಇದ್ದು ಇದೀಗ ಏಳು ದಶಕಗಳೇ ಕಳೆದಿದೆ.
ಈ ಕುರಿತು ತಲೆದೋರಿದ ವಿವಾದಕ್ಕೆ ಯುಕೆ ಹೈಕೋರ್ಟ್ ಜಡ್ಜ್ ಮರ್ಕ್ಯೂಸ್ ಸ್ಮಿತ್ 166 ಪುಟಗಳ ದೀರ್ಘ ತೀರ್ಪಿನಲ್ಲಿ, ಭಾರತದ ಆಪರೇಶನ್ ಪೋಲೋ ಹಾಗೂ ಆ ಬಳಿಕ ನಡೆದ ಬೆಳವಣಿಗೆ ಮತ್ತು ಲಂಡನ್ ನಲ್ಲಿರುವ ನಿಜಾಮನ ಹಣ ಭಾರತಕ್ಕೆ ಸೇರಿದ್ದು ಎಂದು ರಾಷ್ಟ್ರಪತಿ ಹಕ್ಕು ಮಂಡಿಸಿರುವ ಬಗ್ಗೆ ಉಲ್ಲೇಖಿಸಿತು.
ಹೈದರಾಬಾದ್ 7ನೇ ನಿಜಾಮ ಅಂದು ಭಾರತದೊಳಕ್ಕೆ ವಿಲೀನವಾಗಲು ನಿರಾಕರಿಸಿದ್ದು ಮತ್ತು ಈ ಹಣವನ್ನು ಶಸ್ತ್ರಾಸ್ತ್ರ ಖರೀದಿಸಲು ವರ್ಗಾಯಿಸಿದ್ದು ಎಂದು ಒಪ್ಪಲು ಸಾಧ್ಯವಿಲ್ಲ. ಅಷ್ಟೇ ಅಲ್ಲ ಶಸ್ತ್ರಾಸ್ತ್ರ ಖರೀದಿಗಾಗಿ ಪಾಕಿಸ್ತಾನಕ್ಕೆ ನೀಡಿದ ಪರಿಹಾರದ ಹಣ ಎಂಬುದನ್ನೂ ಒಪ್ಪಲು ಅಸಾಧ್ಯ ಎಂದು ತೀರ್ಪು ಹೇಳಿತು.
ನಿಜಾಮನ ಸಂಪತ್ತು ತಮಗೆ ಸೇರಬೇಕೆಂದು ವಾದಿಸುತ್ತಿರುವ ನಮ್ಮ ಕಕ್ಷಿದಾರರು ಈ ವಿವಾದ ತಲೆಎತ್ತಿದ್ದ ಸಂದರ್ಭದಲ್ಲಿ ಚಿಕ್ಕ ಮಕ್ಕಳಾಗಿದ್ದರು. ಈಗ ಅವರಿಗೆ 80 ವರ್ಷ. ಆ ನಿಟ್ಟಿನಲ್ಲಿ ಈ ವಿವಾದ ಅವರ ಜೀವಿತಾವಧಿಯಲ್ಲೇ ಬಗೆಹರಿದಿರುವುದು ದೊಡ್ಡ ನಿರಾಳತೆ ಸಿಕ್ಕಂತಾಗಿದೆ ಎಂದು ಯುಕೆ ಕೋರ್ಟ್ ಅಭಿಪ್ರಾಯವ್ಯಕ್ತಪಡಿಸಿತು.
ಅಲ್ಲದೇ ನಿಜಾಮನ ಸಂಪತ್ತು ಭಾರತಕ್ಕೆ ಸೇರಿಲ್ಲ ಎಂಬ ಪಾಕಿಸ್ತಾನದ ವಾದವನ್ನು ಸಾರಾಸಗಟಾಗಿ ತಳ್ಳಿಹಾಕಿತು. ಹೈದರಾಬಾದನ್ನು ಭಾರತ ವಶಪಡಿಸಿಕೊಂಡಿರುವುದು ಕಾನೂನು ಬಾಹಿರ ಎಂಬ ವಾದವನ್ನೂ ಕೋರ್ಟ್ ತಿರಸ್ಕರಿಸಿತು.