ಅಯೋಧ್ಯೆ ವಿವಾದ: ಸಂಧಾನದ ಮಾತು ನಿರಾಕರಿಸಿದ ಮುಸ್ಲಿಮ್ ಕಕ್ಷಿದಾರರು
ನವದೆಹಲಿ: ಅಯೋಧ್ಯೆಯ ವಿವಾದಿತ ಭೂ ಪ್ರದೇಶದ ಒಡೆತನವನ್ನು ಹಿಂದೂ ಸಂಘಟನೆಗಳಿಗೆ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ ಎಂದು ಸುನ್ನಿ ವಕ್ಫ್ ಮಂಡಳಿ ಹೊರತುಪಡಿಸಿ ಇತರ ಮುಸ್ಲಿಮ್ ಕಕ್ಷಿದಾರರು 2019 ಅಕ್ಟೋಬರ್ 18ರ ಶುಕ್ರವಾರ ಸ್ಪಷ್ಟ ಪಡಿಸಿದರು.
ಸುನ್ನಿ ವಕ್ಫ್ ಮಂಡಳಿಯು ಸಂಧಾನ ಸಮಿತಿ ಮೂಲಕ ವಿವಾದಿತ ಸ್ಥಳದ ಮೇಲಿನ ಹಕ್ಕು ಪ್ರತಿಪಾದನೆಯಿಂದ ಹಿಂದೆ ಸರಿಯುವ ಪ್ರಸ್ತಾಪವನ್ನು ಸಲ್ಲಿಸಿದೆ ಎಂಬ ವರದಿಗಳ ಬೆನ್ನಲ್ಲೇ ಮುಸ್ಲಿಮ್ ಕಕ್ಷಿದಾರರ ಪರ ವಾದಿಸುತ್ತಿರುವ ವಕೀಲ ಇಜಾಜ್ ಮಕ್ಬೂಲ್ ಈ ಸ್ಪಷ್ಟೀಕರಣ ನೀಡಿದರು.
‘ಸುನ್ನಿ ವಕ್ಫ್ ಮಂಡಳಿ ಈ ಪ್ರಸ್ತಾವ ಮಂಡಿಸಿರಬಹುದು, ನಾವಂತೂ ಸಂಧಾನ ಸಮಿತಿ ಮುಂದೆ ಇಂತಹ ಯಾವುದೇ ಪ್ರಸ್ತಾವ ಇರಿಸಿಲ್ಲ. ವಿವಾದ ನ್ಯಾಯಾಲಯದಲ್ಲಿಯೇ ಇತ್ಯರ್ಥವಾಗಲಿ ಎಂಬುದು ನಮ್ಮ ಸ್ಪಷ್ಟ ನಿಲುವು’ ಎಂದೂ ಇಜಾಜ್ ತಿಳಿಸಿದರು.
ಸಂಧಾನ ಸಮಿತಿಯ ಮುಂದೆ ಅಯೋಧ್ಯೆ ವಿವಾದವನ್ನು ಸೌಹಾರ್ದಯುತವಾಗಿ ಪರಿಹರಿಸುವ ನಿಟ್ಟಿನಲ್ಲಿ ನಮ್ಮ ನಿಲುವುಗಳನ್ನು ಸಲ್ಲಿಸಲಾಗಿದೆ. ವಿವಾದಿತ ಸ್ಥಳದ ಮೇಲಿನ ಹಕ್ಕು ಪ್ರತಿಪಾದನೆಯಿಂದ ಸುನ್ನಿ ವಕ್ಫ್ ಬೋರ್ಡ್ ಹಿಂದೆ ಸರಿಯಲು ನಾಲ್ಕು ಷರತ್ತುಗಳನ್ನು ಮುಂದಿಟ್ಟಿದೆ ಎಂಬ ವರದಿಗಳು ನಮಗೆ ಅಚ್ಚರಿ ತರಿಸಿವೆ. ಈ ಪ್ರಸ್ತಾವನೆಯನ್ನು ಸುನ್ನಿ ವಕ್ಫ್ ಬೋರ್ಡ್ ಬಿಟ್ಟರೆ ಬೇರೆಲ್ಲಾ ಮುಸ್ಲಿಮ್ ಕಕ್ಷಿದಾರರು ವಿರೋಧಿಸಿದ್ದಾರೆ ಎಂದೂ ವಕೀಲ ಇಜಾಜ್ ಮಕ್ಬೂಲ್ ಹೇಳಿದರು.
ಅಲ್ಲದೆ ಇಂತಹದ್ದೊಂದು ಸೋರಿಕೆಯ ಹಿಂದೆ ನಿರ್ಮೋಹಿ ಅಖಾರದ ಕೈವಾಡವಿದೆ ಎಂದೂ ಅವರು ಆರೋಪಿಸಿದರು. ಮುಸ್ಲಿಮ್ ಕಕ್ಷಿದಾರರಲ್ಲಿ ಪ್ರಮುಖರಾಗಿರುವ ಎಂ. ಸಿದ್ದಿಕಿ ಪರವಾಗಿ ಮಕ್ಬೂಲ್ ಸುಪ್ರೀಂ ಕೋರ್ಟ್ನಲ್ಲಿ ವಾದ ಮಂಡಿಸಿದ್ದರು.
ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ರಂಜನ್ ಗೊಗೋಯಿ ನೇತೃತ್ವದ ಪಂಚ ಸದಸ್ಯ ಸಂವಿಧಾನ ಪೀಠವು ಅಕ್ಟೋಬರ್ 16ರಂದು ವಿಚಾರಣೆ ಪೂರ್ಣಗೊಳಿಸಿದ್ದು, ಇದಕ್ಕೂ ಮೊದಲೇ ನಿವೃತ್ತ ನ್ಯಾಯಮೂರ್ತಿ ಎಫ್.ಎಂ.ಐ ಕಲೀಫುಲ್ಲಾ ನೇತೃತ್ವದ ತ್ರಿಸದಸ್ಯ ಸಂಧಾನ ಸಮಿತಿ ತನ್ನ ವರದಿ ಸಲ್ಲಿಸಿತ್ತು. ಯಾವೆಲ್ಲ ವಿಚಾರಗಳನ್ನು ನ್ಯಾಯಾಲಯವು ಗಣನೆಗೆ ತೆಗೆದುಕೊಳ್ಳಬೇಕು ಮತ್ತು ತಮ್ಮ ಬೇಡಿಕೆ ಏನು ಎಂಬ ಬಗ್ಗೆ ಲಿಖಿತ ಟಿಪ್ಪಣಿ ಸಲ್ಲಿಸಲು ಕಕ್ಷಿದಾರರಿಗೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ನೇತೃತ್ವದ ಪೀಠವು ಮೂರು ದಿನಗಳ ಕಾಲಾವಕಾಶವನ್ನೂ ನೀಡಿತ್ತು.
ಸಂಧಾನ ಸಮಿತಿಯು ಮೊಹರಾದ ಲಕೋಟೆಯಲ್ಲಿ ಸಂವಿಧಾನ ಪೀಠಕ್ಕೆ ಈ ಹಿಂದೆಯೇ ಸಲ್ಲಿಸಿದ ವರದಿಯಲ್ಲಿ ಮುಸ್ಲಿಮ್ ಹಾಗೂ ಹಿಂದೂ ಕಕ್ಷಿದಾರರು ಅಯೋಧ್ಯಾ ವಿವಾದ ಸೌಹಾರ್ದಯುತವಾಗಿ ಇತ್ಯರ್ಥವಾಗಲಿ ಎಂಬ ಆಶಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿತ್ತು.
ಸುನ್ನಿ ವಕ್ಫ್ ಮಂಡಳಿ, ನಿರ್ವಾಣಿ ಅಖಾರ, ನಿರ್ಮೋಹಿ ಅಖಾರ,ರಾಮ ಜನ್ಮಭೂಮಿ ಪುನರುದ್ಧಾರ ಸಮಿತಿ ಸಂಧಾನದ ಪರವಾಗಿವೆ ಎಂದೂ ಸಮಿತಿ ವರದಿಯಲ್ಲಿ ತಿಳಿಸಿದೆ ಎನ್ನಲಾಗಿತ್ತು. ಜಾಗದ ಒಡೆತನವನ್ನು ಹಿಂದೂಗಳಿಗೆ ಬಿಟ್ಟುಕೊಡುವುದು ಸೂಕ್ತ ಎಂದು ಶಿಯಾ ವಕ್ಫ್ ಮಂಡಳಿ ಬಹಿರಂಗವಾಗಿಯೇ ತನ್ನ ಅಭಿಪ್ರಾಯ ವ್ಯಕ್ತಪಡಿಸಿತ್ತು.
ಕಲ್ಕಿ ಭಗವಾನ್ ಆಶ್ರಮಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ
ಚೆನ್ನೈ: ಸ್ವಯಂ ಘೋಷಿತ ‘ದೇವಮಾನವ’ ಕಲ್ಕಿ ಭಗವಾನ್ ಅವರಿಗೆ ಸೇರಿದ ಆಂಧ್ರ ಪ್ರದೇಶದ ವರದೈಪಾಲಂ, ಚೆನ್ನೈ, ಹೈದರಾಬಾದ್ ಮತ್ತು ಬೆಂಗಳೂರಿನ ಅಧ್ಯಾತ್ಮ ಮತ್ತು ವೇದಾಂತ ಬೋಧನೆ ಹಾಗೂ ತರಬೇತಿ ಕೇಂದ್ರಗಳ ಮೇಲೆ ಆದಾಯ ತೆರಿಗೆ ಇಲಾಖೆ 2019 ಅಕ್ಟೋಬರ್ 18ರ ಶುಕ್ರವಾರ ದಾಳಿ ನಡೆಸಿತು.
ಅಕ್ಟೋಬರ್ 16 ಬುಧವಾರವೇ ಈ ದಾಳಿ ಆರಂಭವಾಗಿದ್ದು ಚೆನ್ನೈ, ಹೈದರಾಬಾದ್, ಬೆಂಗಳೂರು ಮತ್ತು ವರದೈಪಾಲಂನಲ್ಲಿರುವ 40 ಪ್ರಮುಖ ಪ್ರದೇಶಗಳಲ್ಲಿ ದಾಳಿ ಮುಂದುವರೆಯಿತು.
ಸ್ವಯಂ ಘೋಷಿತ ‘ದೇವಮಾನವ’ ಕಲ್ಕಿ ಭಗವಾನ್ ಮತ್ತು ಅವರ ಮಗ ಕೃಷ್ಣ ಅವರ ಮಾಲೀಕತ್ವದ ಸ್ಥಳಗಳ ಮೇಲೆ ದಾಳಿ ನಡೆಸಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇದುವರೆಗೆ ರೂ. 43.9 ಕೋಟಿ ನಗದು ಹಾಗೂ ಡಾಲರ್ ರೂಪದಲ್ಲಿದ್ದ 18 ಕೋಟಿ ಮತ್ತು ರೂ 26 ಕೋಟಿ ಮೌಲ್ಯದ 88 ಕೆ.ಜಿ. ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ ಎಂದು ಸುದ್ದಿ ಮೂಲಗಳು ತಿಳಿಸಿದವು.
ಕೋಟ್ಯಂತರ ರೂಪಾಯಿ ತೆರಿಗೆ ವಂಚಿಸಲಾಗಿದೆ ಎನ್ನುವ ಖಚಿತ ಮಾಹಿತಿ ಪಡೆದು ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿನ ಆಶ್ರಮಗಳು ಸೇರಿದಂತೆ 40ಕ್ಕೂ ಹೆಚ್ಚು ಸ್ಥಳಗಳ ಮೇಲೆ ಈ ದಾಳಿ ನಡೆಸಲಾಗಿತ್ತು.
ಈ ಸ್ಥಳಗಳಲ್ಲಿ ವಶಪಡಿಸಿಕೊಳ್ಳಲಾದ ದಾಖಲೆಗಳ ಅನ್ವಯ ಸುಮಾರು ರೂ.500 ಕೋಟಿ ತೆರಿಗೆಯನ್ನು ವಂಚಿಸಿರುವುದು ಪತ್ತೆಯಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಮೂಲಗಳು ತಿಳಿಸಿದವು.
ಕೆಲವು ಉದ್ಯಮಗಳಲ್ಲಿ ಅಪಾರ ಹಣವನ್ನು ಕೃಷ್ಣ ಹೂಡಿಕೆ ಮಾಡಿದ್ದು, ಇವುಗಳ ಮೂಲಕವೇ ತೆರಿಗೆ ವಂಚಿಸಲಾಗಿದೆ ಎನ್ನುವ ಅನುಮಾನ ಮೂಡಿದೆ. ತಂದೆಯ ಆಶ್ರಮದ ಹಣವನ್ನು ತನ್ನ ಕಂಪನಿಗಳಿಗೆ ಈತ ವರ್ಗಾಯಿಸಿದ್ದರೆನ್ನಲಾಯಿತು..
‘ಕಲ್ಕಿ ಭಗವಾನ್ ಮಾಲೀಕತ್ವ ಹೊಂದಿರುವ ಆಶ್ರಮದಿಂದ ಅಪಾರ ಪ್ರಮಾಣದಲ್ಲಿ ನಗದು ಮತ್ತು ಚಿನ್ನ ವಶಪಡಿಸಿಕೊಳ್ಳಲಾಗಿದೆ. ದಾಖಲೆಗಳನ್ನು ಆಶ್ರಮ ಮತ್ತು ಇತರ ಸ್ಥಳಗಳಲ್ಲಿ ವಶಪಡಿಸಿಕೊಳ್ಳಲಾಗಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಕಲ್ಕಿ ಭಗವಾನ್ಗೆ ಸೇರಿದ ಆಶ್ರಮಗಳು, ಶಿಕ್ಷಣ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದು, ವಿದೇಶಿ ಕರೆನ್ಸಿಗಳು ಸೇರಿದಂತೆ 33 ಕೋಟಿ ರೂ. ನಗದು ವಶಪಡಿಸಿಕೊಂಡರು.
ಸಿಬಿಐ ಹೊಸ ಚಾರ್ಜ್ಶೀಟ್ನಲ್ಲಿ ಪಿ. ಚಿದಂಬರಮ್ ಹೆಸರು
ನವದೆಹಲಿ: ಐಎನ್ಎಕ್ಸ್ ಮೀಡಿಯಾ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಬಿಐ ಹೊಸ ಆರೋಪ ಪಟ್ಟಿ ದಾಖಲಿಸಿತು. ರೋಸ್ ಅವೆನ್ಯೂ ಕೋರ್ಟ್ನಲ್ಲಿ ಸಲ್ಲಿಸಲಾಗಿರುವ ಈ ಚಾರ್ಜ್ಶೀಟ್ನಲ್ಲಿ ಪಿ. ಚಿದಂಬರಮ್ ಅವರ ಹೆಸರನ್ನು ಸೇರಿಸಲಾಯಿತು.
ಇದರೊಂದಿಗೆ ಪ್ರಕರಣದಲ್ಲಿ ಚಿದಂಬರಮ್ ಅವರು ಅಧಿಕೃತವಾಗಿ ಆರೋಪಿಯಾಗಲಿದ್ದಾರೆ.
71 ವರ್ಷದ ಪಿ. ಚಿದಂಬರಮ್, ಅವರ ಮಗ ಕಾರ್ತಿ ಚಿದಂಬರಮ್, ಐಎನ್ಎಕ್ಸ್ ಮೀಡಿಯಾ ಮಾಲೀಕರಾದ ಪೀಟರ್ ಮುಖರ್ಜಿಯಾ ಮತ್ತು ಇಂದ್ರಾಣಿ ಮುಖರ್ಜಿಯಾ ಸೇರಿದಂತೆ ಒಟ್ಟು 14 ಮಂದಿಯನ್ನು ಆರೋಪಿಗಳೆಂದು ಚಾರ್ಜ್ಶೀಟ್ನಲ್ಲಿ ತಿಳಿಸಲಾಯಿತು.
ಭಾರತದ ಮುಂದಿನ ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ ಬೋಬ್ಡೆ: ಸಿಜೆಐ ಗೊಗೋಯಿ ಶಿಫಾರಸು
ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ರಂಜನ್ ಗೊಗೋಯಿ ಅವರು ತಮ್ಮ ಉತ್ತರಾಧಿಕಾರಿಯಾಗಿ ನ್ಯಾಯಮೂರ್ತಿ ಶರದ್ ಅರವಿಂದ ಬೋಬ್ಡೆ ಅವರ ಹೆಸರನ್ನು ಶಿಫಾರಸು ಮಾಡಿದ್ದಾರೆ.
2018 ಅಕ್ಟೋಬರ್ 3ರಂದು ದೇಶದ 46ನೇ ಮುಖ್ಯನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಂಡಿದ್ದ ನ್ಯಾಯಮೂರ್ತಿ ರಂಜನ್ ಗೊಗೋಯಿ ನವೆಂಬರ್17ರಂದು ನಿವೃತ್ತಿ ಹೊಂದಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಮುಂದಿನ ನ್ಯಾಯಮೂರ್ತಿಯ ಹೆಸರನ್ನು ಶಿಫಾರಸು ಮಾಡಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ ಎಂದು ಸುದ್ದಿ ಮೂಲಗಳು 2019 ಅಕ್ಟೋಬರ್ 18ರ ಶುಕ್ರವಾರ ತಿಳಿಸಿವೆ.
ಸುಪ್ರೀಂಕೋರ್ಟ್ ನಿಂದ ನಿವೃತ್ತಿಯಾಗಲಿರುವ ಪ್ರತಿಯೊಬ್ಬ ಸಿಜೆಐ ಕೂಡಾ ಇದೇ ಸಂಪ್ರದಾಯವನ್ನು ಅನುಸರಿಸುತ್ತಾರೆ. ತಮ್ಮ ನಂತರ ಮುಂದಿನ ಸಿಜೆಐ ಯಾರಾಗಬೇಕು ಎಂಬ ಬಗ್ಗೆ ಕೇಂದ್ರಕ್ಕೆ ಶಿಫಾರಸು ಮಾಡುವುದು ರೂಢಿ.
ಸಿಜೆಐ ರಂಜನ್ ಗೋಗೊಯಿ ನಂತರ ಸುಪ್ರೀಂಕೋರ್ಟ್ ನಲ್ಲಿ ಎರಡನೇ ಹಿರಿಯ ನ್ಯಾಯಮೂರ್ತಿ ಆಗಿದ್ದಾರೆ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ. ಅವರ ಹಿರಿತನದ ಆಧಾರದ ಮೇಲೆ ಮುಂದಿನ ನೂತನ ಸಿಜೆಐ ಆಗಿ ನೇಮಕ ಮಾಡುವಂತೆ ಗೋಗೋಯಿ ಅವರು ಕಾನೂನು ಸಚಿವಾಲಯಕ್ಕೆ ಶಿಫಾರಸು ಪತ್ರ ಬರೆದಿದ್ದಾರೆ.
ಹಾಲಿ ಸಿಜೆಐ ಶಿಫಾರಸು ಮಾಡಿದವರನ್ನೇ ಸಾಮಾನ್ಯವಾಗಿ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ಪರಿಗಣಿಸುವ ಸಾಧ್ಯತೆ ಇದೆ.
ಬೋಬ್ಡೆ ಯಾರು?
1956ರ ಏಪ್ರಿಲ್ 24ರಂದು ಎಸ್ ಎ ಬೋಬ್ಡೆ ಅವರು ಮಹಾರಾಷ್ಟ್ರದ ನಾಗ್ ಪುರದಲ್ಲಿ ಜನಿಸಿದ್ದರು. ನಾಗಪುರ ವಿಶ್ವಿವಿದ್ಯಾಲಯದಲ್ಲಿ ವಿದ್ಯಾಭ್ಯಾಸದ ಬಳಿಕ 2000ನೇ ಇಸವಿಯಲ್ಲಿ ಬಾಂಬೆ ಹೈ ಕೋರ್ಟ್ ನಲ್ಲಿ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು. 2012ರಲ್ಲಿ ಮಧ್ಯಪ್ರದೇಶ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು.
ನವೆಂಬರ್ 17ರಂದು ನಿವೃತ್ತಿ ಹೊಂದುವ ಮುನ್ನ ಸಿಜೆಐ ರಂಜನ್ ಗೊಗೋಯಿ ಅವರು ರಾಮಜನ್ಮಭೂಮಿ- ಬಾಬರಿ ಮಸೀದಿ ವಿವಾದ ಪ್ರಕರಣದಲ್ಲಿ ತೀರ್ಪು ನೀಡಲಿದ್ದಾರೆ. ನಿನ್ನೆ ಈ ಪ್ರಕರಣದ ವಾದ ಪ್ರತಿವಾದ ವಿಚಾರಣೆಗಳು ಮುಕ್ತಾಯಗೊಂಡಿದ್ದು, ತೀರ್ಪನ್ನು ಕಾಯ್ದಿರಿಸಿದ್ದಾರೆ.