ಚಿಕ್ಕಮಗಳೂರಿನ ಇಬ್ಬರು ಸೇರಿ ಒಟ್ಟು ಮೂವರು ನಕ್ಸಲರ ಹತ್ಯೆ
ಪಾಲಕ್ಕಾಡ್: ಓರ್ವ ಮಹಿಳೆ ಸೇರಿದಂತೆ ಒಟ್ಟು ಮೂವರು ನಕ್ಸಲರನ್ನು ಗುಂಡಿನ ಘರ್ಷಣೆಯಲ್ಲಿ ಕೊಂದ ಘಟನೆ ಕೇರಳದ ಪಾಲಕ್ಕಡ್ ಜಿಲ್ಲೆಯ ಮಂಜಕಟ್ಟಿ ಬೆಟ್ಟದಲ್ಲಿ ಘಟಿಸಿತು. ಗುಂಡಿನ ದಾಳಿಯಲ್ಲಿ ಹತರಾದ ನಕ್ಸಲರನ್ನು ಕೇರಳದಲ್ಲಿ ಸಿಪಿಐ (ಮಾಕ್ರ್ಸಿಸ್ಟ್) ಪಕ್ಷದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭವಾನಿದಳಂ ತಂಡದ ಸದಸ್ಯರಾದ ಶ್ರೀಮತಿ, ಎ.ಎಸ್.ಸುರೇಶ್ ಹಾಗೂ ಕಾರ್ತಿ ಎಂದು ಗುರುತಿಸಲಾಗಿದೆ..
ನಕ್ಸಲ್ ನಿಗ್ರಹ ಪಡೆ ಮತ್ತು ಥಂಡರ್ ಬೋಲ್ಟ್ ತಂಡ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಈ ಗುಂಡಿನ ಘರ್ಷಣೆ ನಡೆಸಲಾಯಿತು. ನಾಲ್ವರು ನಕ್ಸಲರು ಪರಾರಿಯಾಗಿದ್ದಾರೆಂದು ತಿಳಿದುಬಂದಿತು.
ಘಟನೆಯಲ್ಲಿ ಮೃತರಾದವರಲ್ಲಿ ಇಬ್ಬರು ರಾಜ್ಯದ ಚಿಕ್ಕಮಗಳೂರಿನವರು ಎಂದು ಹೇಳಲಾಯಿತು. ಶ್ರೀಮತಿ ಮತ್ತು ಸುರೇಶ್ ಚಿಕ್ಕಮಗಳೂರು ಜಿಲ್ಲೆಯವರಾಗಿದ್ದು ಹಲವಾರು ವರ್ಷಗಳಿಂದ ನಕ್ಸಲ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದರು. ಮತ್ತೋರ್ವ ನಕ್ಸಲ್ ಕಾರ್ತಿ ತಮಿಳುನಾಡು ಮೂಲದವನು ಎಂದು ಹೇಳಲಾಯಿತು. ಶೃಂಗೇರಿ ತಾಲೂಕಿನ ಬೆಳಗೋಡು ಕೂಡಿಗೆ ಗ್ರಾಮದ ಶ್ರೀಮತಿ 2008ರಿಂದ ನಕ್ಸಲ್ ಚಟುವಟಿಕೆಯಲ್ಲಿದ್ದು, ಆಕೆಯ ಮೇಲೆ 12 ಪ್ರಕರಣಗಳು ದಾಖಲಾಗಿದ್ದವು. ಸುರೇಶ್ ಮೂಡಿಗೆರೆ ತಾಲೂಕಿನ ಅಂಗಡಿ ಗ್ರಾಮದವನಾಗಿದ್ದು, 2004ರಲ್ಲಿ ನಕ್ಸಲ್ ಗುಂಪಿಗೆ ಸೇರಿದ್ದ.
ಪಾಲಕ್ಕಾಡಿನಲ್ಲಿ 2019 ಅಕ್ಟೋಬರ್ 28ರ ಸೋಮವಾರ ಗುಂಡೇಟಿಗೆ ಬಲಿಯಾದ ಸುರೇಶ್ ಮೇಲೆ 21 ಕ್ಕೂ ಹೆಚ್ಚು ಪ್ರಕರಣಗಳಿವೆ ಎಂದು ವರದಿಯಾಯಿತು. ಮಲೆನಾಡಿನಲ್ಲಿ ನಕ್ಸಲ್ ಚಳವಳಿ ವಿರುದ್ಧ ಪೊಲೀಸರ ಕಾರ್ಯಾಚರಣೆ ಹೆಚ್ಚಾಗಿ, ನಕ್ಸಲ್ ಚಳವಳಿಯಲ್ಲಿದ್ದ ಸದಸ್ಯರು ಪೊಲೀಸರ ಗುಂಡಿಗೆ ಬಲಿಯಾಗಿದ್ದರಿಂದ ಹಾಗೂ ಕೆಲವು ನಕ್ಸಲರು ಸರ್ಕಾರದ ಶರಣಾಗತಿ ಪ್ಯಾಕೇಜ್ ಅಡಿಯಲ್ಲಿ ಮುಖ್ಯವಾಹಿನಿಗೆ ಬಂದಿದ್ದರಿಂದ ಅಳಿದುಳಿದ ನಕ್ಸಲರು ಮಲೆನಾಡಿನಿಂದ ಹೊರ ರಾಜ್ಯಗಳ ನಕ್ಸಲ್ ಗುಂಪು ಸೇರಲಾರಂಭಿಸಿದ್ದರು.
ಈ ಪೈಕಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಸುರೇಶ್ ಹಾಗೂ ಶೃಂಗೇರಿ ತಾಲೂಕಿ ಶ್ರೀಮತಿ ಕೂಡ ಕೇರಳ ರಾಜ್ಯದಲ್ಲಿನ ನಕ್ಸಲ್ ಗುಂಪು ಸೇರಿದ್ದರೆಂದು ಹೇಳಲಾಗಿದ್ದು, ಕಳೆದ ಎರಡು ವರ್ಷಗಳಿಂದ ಇವರು ಕೇರಳದಲ್ಲಿ ನಕ್ಸಲ್ ಚಳವಳಿಯಲ್ಲಿ ಸಕ್ರಿಯರಾಗಿದ್ದರೆಂದು ಹೇಳಲಾಗಿದೆ.
No comments yet.
Leave a comment