ಗ್ರಾಮೀಣ ಭಾರತ ಬಯಲು ಶೌಚ ಮುಕ್ತ: ಪ್ರಧಾನಿ ಘೋಷಣೆ
೧೫೦ ರೂಪಾಯಿಗಳ ಗಾಂಧಿ ಸ್ಮಾರಕ ನಾಣ್ಯ, ೬ ಅಂಚೆ ಚೀಟಿ ಬಿಡುಗಡೆ
ಅಹ್ಮದಾಬಾದ್: ರಾಷ್ಟ್ರಪಿತ ಮಹಾತ್ಮ ಗಾಂಧಿರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ೧೫೦ನೇ ಜನ್ಮ ದಿನಾಚರಣೆಯ ನೆನಪಿಗಾಗಿ ೧೫೦ ರೂಪಾಯಿಗಳ ನಾಣ್ಯ ಮತ್ತು ೬ ಸ್ಮಾರಕ ಅಂಚೆ ಚೀಟಿಗಳನ್ನು 2019ರ ಅಕ್ಟೋಬರ್ 02ರ ಬುಧವಾರ ಇಲ್ಲಿ ಬಿಡುಗಡೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ’ಗ್ರಾಮೀಣ ಭಾರತವು ಬಯಲುಶೌಚ ಮುಕ್ತ ದೇಶವಾಗಿದೆ’ ಎಂದು ಘೋಷಿಸಿದರು..
ಗಾಂಧಿ ಜಯಂತಿಯ ಅಂಗವಾಗಿ ಅಹ್ಮದಾಬಾದಿನ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದ ಪ್ರಧಾನಿಯವರು ಸಬರಮತಿ ನದಿಯ ಮುಂಭಾಗದಲ್ಲಿ ಸ್ವಚ್ಛ ಭಾರತ ದಿವಸ್-೨೦೧೯ನ್ನು ಉದ್ಘಾಟಿಸಿ ಭಾರತವು ಬಯಲು ಶೌಚ ಮುಕ್ತ ದೇಶವಾಗಿದೆ ಎಂಬುದಾಗಿ ಪ್ರಕಟಿಸಿದರು.
ಇದಕ್ಕೂ ಮುನ್ನ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದ ಪ್ರಧಾನಿ ಅಲ್ಲಿನ ಸಂದರ್ಶಕರ ಪುಸ್ತಕದಲ್ಲಿ ’ಮಹಾತ್ಮ ಗಾಂಧಿ ಅವರ ೧೫೦ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ ಅವರ ’ಸ್ವಚ್ಛ ಭಾರತ’ ಕನಸನ್ನು ನನಸಾಗುತ್ತಿರುವುದಕ್ಕೆ ಸಾಕ್ಷಿಯಾಗುತ್ತಿರುವುದಕ್ಕಾಗಿನನಗೆ ತೃಪ್ತಿ ಇದೆ. ಈ ಸಂದರ್ಭದಲ್ಲಿ ಭಾರತವು ಯಶಸ್ವಿಯಾಗಿ ಬಯಲು ಶೌಚಾಲಯವನ್ನು ಸ್ಥಗಿತಗೊಳಿಸಿದೆ ಎಂಬುದಾಗಿ ಈ ಆಶ್ರಮದಲ್ಲಿ ಹೇಳುವ ಅದೃಷ್ಟ ನನ್ನದಾಗಿದೆ’ ಎಂದು ಬರೆದರು.
ನರ್ಮದಾ ನದಿಯ ಮುಂಭಾಗದಲ್ಲಿ ೨೦,೦೦೦ ಮಂದಿ ಪಂಚಾಯತ್ ಮುಖ್ಯಸ್ಥರನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಿದರು.
‘ಇಡೀ ಜಗತ್ತು ಬಾಪು ಅವರ ಜನ್ಮದಿನವನ್ನು ಆಚರಿಸುತ್ತಿದೆ. ಕೆಲವು ದಿನಗಗಳ ಹಿಂದೆ ವಿಶ್ವಸಂಸ್ಥೆಯು ಈ ಸಂದರ್ಭವನ್ನು ಸ್ಮರಣೀಯವಾಗಿಸಲು ಸ್ಮಾರಕ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿತ್ತು. ಈಗ ಇಲ್ಲೂ ಸ್ಮಾರಕ ಅಂಚೆ ಚೀಟಿಗಳು ಮತ್ತು ನಾಣ್ಯಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಪ್ರಧಾನಿ ಹೇಳಿದರು.
ಗ್ರಾಮೀಣ ಭಾರತ ಮತ್ತು ಅದರ ಹಳ್ಳಿಗಳು ಈದಿನ ಸ್ವತಃ ಸಂಪೂರ್ಣವಾಗಿ ಬಯಲು ಶೌಚ ಮುಕ್ತವಾಗಿರುವುದಾಗಿ ಘೋಷಿಸಿವೆ ಎಂದು ಪ್ರಧಾನಿ ಈ ಸಂದರ್ಭದಲ್ಲಿ ಹೇಳಿದರು.
ಜಗತ್ತಿನಲ್ಲಿ ಕಾಣಬಯಸುವ ಬದಲಾವಣೆಯನ್ನು ನೀವೇ ಮಾಡಿಕೊಳ್ಳಿ ಎಂದು ಗಾಂಧೀಜಿ ಹೇಳುತ್ತಿದ್ದರು. ಈ ಮಂತ್ರವನ್ನು ಆಧರಿಸಿಯೇ ನಾವು ಪೊರಕೆಗಳನ್ನು ಕೈಗೆತ್ತಿಕೊಂಡು ನಮ್ಮ ಸಮಾಜವನ್ನು ಸ್ವಚ್ಛಗೊಳಿಸಲು ಆರಂಭಿಸಿದ್ದೇವೆ. ಭಾರತೀಯರು ಶೌಚಾಲಯಗಳ ಬಗ್ಗೆ ಮಾತನಾಡಲು ಹಿಂಜರಿಯುತ್ತಿದ್ದರು, ಆದರೆ ಈಗ ಅದು ಭಾರತೀಯರ ಚಿಂತನಾ ಪ್ರಕ್ರಿಯೆಯಲ್ಲೇ ಸೇರಿದೆ ಎಂದು ಪ್ರಧಾನಿ ನುಡಿದರು.
‘ನಮ್ಮ ಯಶಸ್ಸನ್ನು ಕಂಡು ಜಗತ್ತು ದಿಗ್ಭ್ರಮೆಗೊಂಡಿದೆ. ವಿಶ್ವವು ಈ ಸಾಧನೆಗಾಗಿ ನಮ್ಮನ್ನು ಗೌರವಿಸುತ್ತಿದೆ. ೬೦ ತಿಂಗಳುಗಳಲ್ಲಿ ನಾವು ೬೦ ಕೋಟಿಗೂ ಹೆಚ್ಚು ಜನರಿಗೆ ೧೧ ಕೋಟಿ ಶೌಚಾಲಯಗಳನ್ನು ನಿರ್ಮಿಸಿಕೊಡುವ ಕೆಲಸ ಮಾಡಿದ್ದೇವೆ. ಇದನ್ನು ಕೇಳಿ ಜಗತ್ತು ದಿಗ್ಭ್ರಮೆಗೊಂಡಿದೆ’ ಎಂದು ಅವರು ಹೇಳಿದರು.
ಯುನಿಸೆಫ್ ವರದಿಯ ಪ್ರಕಾರ ಕಳೆದ ಐದು ವರ್ಷಗಳಲ್ಲಿ ಸ್ವಚ್ಛ ಭಾರತ ಅಭಿಯಾನದ ಪರಿಣಾಮವಾಗಿ ೨೦ ಲಕ್ಷ ಕೋಟಿ ರೂಪಾಯಿಗಳಿಗೂ ಹೆಚ್ಚಿನ ಮೌಲ್ಯದ ಧನಾತ್ಮಕ ಪರಿಣಾಮಗಳಾಗಿವೆ. ಈ ಯೋಜನೆಯ ಪರಿಣಾಮವಾಗಿ ೭೫ ಲಕ್ಷಕ್ಕೂ ಹೆಚ್ಚು ಮಂದಿಗೆ ನೌಕರಿ ಲಭಿಸಿದೆ. ಇದೆ ಬಹುತೇಕ ಲಾಭ ರಾಷ್ಟ್ರದ ಗ್ರಾಮೀಣ ಭಾಗಗಳಿಗೆ ಆಗಿದೆ ಎಂದು ಪ್ರಧಾನಿ ನುಡಿದರು.
ಭಾರತ ಸರ್ಕಾರವು ಇತ್ತೀಚೆಗೆ ಜಲ ಜೀವನ ಮಿಷನ್ ಆರಂಭಿಸಿದೆ. ನಮ್ಮ ಸಮಾಜದ ಹಿತಕ್ಕಾಗಿ ನಾವು ನೀರು ಮರುಪೂರಣ, ನೀರು ಮರುಬಳಕೆಗೆ ಸಾಧ್ಯವಿರುವ ಎಲ್ಲ ಕ್ರಮಗಳನ್ನೂ ಕೈಗೊಳ್ಳಬೇಕು. ಜಲ ಜೀವನ ಮಿಷನ್ ಗಾಗಿ ೩.೫ ಲಕ್ಷ ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲು ನಾವು ತೀರ್ಮಾನಿಸಿದ್ದೇವೆ. ಆದರೆ ಭಾರತದ ನಾಗರಿಕರ ಸಕ್ರಿಯ ಪಾಲುದಾರಿಕೆ ಇಲ್ಲದೇ ಇದ್ದಲ್ಲಿ ಇದು ಅಪೂರ್ಣವಾಗುತ್ತದೆ ಎಂದು ಮೋದಿ ಹೇಳಿದರು.
ಪ್ರತಿಯೊಂದು ಗ್ರಾಮವೂ ಸ್ವಯಂ ಸ್ವಾವಲಂಬಿಯಾಗಿರಬೇಕು ಎಂಬುದು ಮಹಾತ್ಮ ಗಾಂಧಿಯವರ ಕನಸಾಗಿತ್ತು. ರಾಷ್ಟ್ರೀಯ ಗ್ರಾಮ ಸ್ವರಾಜ್ ಮಾಧ್ಯಮ ಮೂಲಕ ನಾವು ಈ ಕನಸನ್ನೂ ನನಸಾಗಿಸುವತ್ತ ಸಾಗುತ್ತಿದ್ದೇವೆ ಎಂದು ಪ್ರಧಾನಿ ಹೇಳಿದರು.
ಸ್ವಚ್ಛತೆ, ಪರಿಸರ ಮತ್ತು ಪ್ರಾಣಿಗಳ ಸಂರಕ್ಷಣೆ ಇವೆಲ್ಲವೂ ಗಾಂಧಿಜಿಯವರಿಗೆ ಆಪ್ತವಾಗಿದ್ದ ವಿಷಯಗಳು. ಅವುಗಳಲ್ಲಿ ಪ್ಲಾಸ್ಟಿಕ್ ಅತ್ಯಂತ ಹೆಚ್ಚು ಅಪಾಯಕಾರಿ. ಆದ್ದರಿಂದ ೨೦೨೨ರ ವೇಳೆಗೆ ದೇಶದಿಂದ ಬಳಸಿ ಬಿಸಾಡುವ (ಏಕ ಬಳಕೆಯ) ಪ್ಲಾಸ್ಟಿಕ್ಕನ್ನುಸಂಪೂರ್ಣವಾಗಿ ನಿವಾರಿಸಬೇಕು ಎಂದು ಅವರು ಹೇಳಿದರು.
No comments yet.
Leave a comment