ಜಂಬೂ ಸವಾರಿಯೊಂದಿಗೆ ಐತಿಹಾಸಿಕ ಮೈಸೂರು ದಸರಾಗೆ ತೆರೆ
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಸಂಭ್ರಮದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯೊಂದಿಗೆ 2019 ಅಕ್ಟೋಬರ್ 08ರ ಮಂಗಳವಾರ ದಸರಾ ಉತ್ಸವಕ್ಕೆ ತೆರೆ ಬಿದ್ದಿತು. ದಸರಾ ಮೆರವಣಿಗೆಯ ವೈಭವದ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಜನರು ಅರಮನೆಯ ಮುಂದಿನ ರಸ್ತೆಗಳಲ್ಲಿ ನೆರೆದಿದ್ದರು. ಕ್ಯಾಪ್ಟನ್ ಅರ್ಜುನ 8 ಬಾರಿ ಅಂಬಾರಿ ಹೊತ್ತು ಜಂಬೂ ಸವಾರಿ ಯಶಸ್ವಿಗೊಳಿಸಿದ.
ಕ್ಯಾಪ್ಟನ್ ಅರ್ಜುನನಿಗೆ 59 ವರ್ಷವಾಗಿದ್ದು ಜಂಬೂ ಸವಾರಿ ಮೆರವಣಿಗೆಯಲ್ಲಿ ಅರ್ಜುನನನ್ನು ಮಾವುತ ವಿನು ,ಕಾವಾಡಿ ಮಧು ಮುನ್ನಡೆಸಿದರು. ಅರ್ಜುನ ಕಳೆದ 19-20 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗಿಯಾಗಿದ್ದು, 2012 ರಿಂದ ಚಿನ್ನದ ಅಂಬಾರಿ ಹೊರುವ ಜವಾಬ್ದಾರಿಯನ್ನ ನಿರ್ವಹಿಸಿದ್ದಾನೆ.
ಬಣ್ಣಗಳ ಚಿತ್ತಾರದಿಂದ ಅಲಂಕೃತನಾದ ಅರ್ಜುನ ಆನೆಯ ಮೇಲೆ ಹೊರಟ ಚಿನ್ನದ ಅಂಬಾರಿ ಮೈಸೂರಿನ ಮುಖ್ಯರಸ್ತೆಗಳಲ್ಲಿ ಸಾಗಿ ಬನ್ನಿ ಮಂಟಪವನ್ನು ತಲುಪಿತು.
ಅರ್ಜುನನ ಮೇಲಿನ 750 ಕೆ.ಜಿ. ತೂಕದ ಚಿನ್ನದ ಅಂಬಾರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪುಷ್ಪನಮನ ಸಲ್ಲಿಸಿ ಐತಿಹಾಸಿಕ ಜಂಬೂಸವಾರಿಗೆ ಚಾಲನೆ ನೀಡಿದ್ದರು. ಚಾಮುಂಡೇಶ್ವರಿ ಉತ್ಸವಮೂರ್ತಿಯನ್ನು ಹೊತ್ತ ಅರ್ಜುನ ಗಾಂಭೀರ್ಯದಿಂದ ಹೆಜ್ಜೆಹಾಕಿದ. ತಾಯಿ ಚಾಮುಂಡೇಶ್ವರಿಗೆ ಜೈಕಾರ ಹಾಕುತ್ತಾ ಮೈಸೂರಿನ ಜನರು ಸಂಭ್ರಮದಿಂದ ಜಂಬೂಸವಾರಿಯನ್ನು ಕಣ್ತುಂಬಿಕೊಂಡರು.
ಈದಿನ ಬೆಳಗ್ಗೆಯಿಂದ ಅನೇಕ ಸ್ಪರ್ಧೆಗಳು ನಡೆದಿದ್ದು, ವಜ್ರಮುಷ್ಠಿ ಕಾಳಗದಲ್ಲಿ ರಾಮನಗರ ನರಸಿಂಹ ಜಟ್ಟಿ, ಬೆಂಗಳೂರಿನ ನಾರಾಯಣ ಜಟ್ಟಿ, ಚಾಮರಾಜನಗರ ಗಿರೀಶ್ ಜಟ್ಟಿ, ಮೈಸೂರಿನ ಬಲರಾಮ ಜಟ್ಟಿ ನಡುವೆ ಕಾಳಗ ನಡೆಯಿತು. ಬೆಳಗ್ಗೆ ಆಯುಧಗಳಿಗೆ ಪೂಜೆ ನೆರವೇರಿಸಿದ ಯದುವೀರ್ ಒಡೆಯರ್ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿದರು. ರಾಜಪೋಷಾಕಿನಲ್ಲಿ ಕಂಗೊಳಿಸಿದ ಯದುವೀರ ಒಡೆಯರ್ ಕುಟುಂಬಸ್ಥರೊಂದಿಗೆ ಜಂಬೂಸವಾರಿಯನ್ನು ಕಣ್ತುಂಬಿಕೊಂಡರು.
No comments yet.
Leave a comment