ಹೈಕೋರ್ಟ್ ನ್ಯಾಯಮೂರ್ತಿಯಾಗಿ ಪಿ. ಕೃಷ್ಣಭಟ್ ಮುಂಬಡ್ತಿ: ಕೊಲಿಜಿಯಂ ಮರುಶಿಫಾರಸು
ಪ್ರಕಿಯೆ ತ್ವರಿತಕ್ಕೆ ಸುಪ್ರೀಂಕೋರ್ಟ್ ಕೊಲಿಜಿಯಂ ಸೂಚನೆ
ನವದೆಹಲಿ: ಕರ್ನಾಟಕದ ಜಿಲ್ಲಾ ನ್ಯಾಯಾಧೀಶ ಪಿ. ಕೃಷ್ಣಭಟ್ ಅವರಿಗೆ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಬಡ್ತಿ ನೀಡುವ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಸುಪ್ರೀಂಕೋರ್ಟ್ ಕೊಲಿಜಿಯಂ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತು. ಮಹಿಳಾ ನ್ಯಾಯಾಂಗ ಅಧಿಕಾರಿಯೊಬ್ಬರು ಮಾಡಿದ್ದ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ಕಳೆದ ೪೪ ತಿಂಗಳುಗಳಿಂದ ಅವರ ಬಡ್ತಿ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರವು ತಡೆ ಹಿಡಿದಿತ್ತು.
ಜಿಲ್ಲಾ ನ್ಯಾಯಾಧೀಶರ ವಿರುದ್ಧದ ಕಿರುಕುಳ ಆರೋಪವನ್ನು ಹಾಗೂ ಆ ಬಗ್ಗೆ ತನಿಖೆ ನಡೆಸಬೇಕೆಂಬ ಕೇಂದ್ರದ ಸಲಹೆಯನ್ನು ಕೊಲಿಜಿಯಂ 2019 ಅಕ್ಟೋಬರ್ 17ರ ಗುರುವಾರ ತಳ್ಳಿಹಾಕಿತು.
ವಿಷಯವನ್ನು ಕೊಲಿಜಿಯಂಗೆ ಒಪ್ಪಿಸದೆ ಜಿಲ್ಲಾ ನ್ಯಾಯಾಧೀಶ ಪಿ. ಕೃಷ್ಣಭಟ್ ವಿರುದ್ಧ ತನಿಖೆಯನ್ನು ನಡೆಸುವಂತೆ ಕೋರುವ ಮೂಲಕ ನ್ಯಾಯಾಂಗದ ಸ್ವಾತಂತ್ರ್ಯದಲ್ಲಿ ಹಸ್ತಕ್ಷೇಪ ಮಾಡಲಾಗುತ್ತಿದೆ ಎಂದು ನ್ಯಾಯಮೂರ್ತಿ ಜೆ. ಚೆಲಮೇಶ್ವರ ಅವರು ಕೇಂದ್ರದ ಕಾನೂನು ಸಚಿವಾಲಯವನ್ನು ತರಾಟೆಗೆ ತೆಗೆದುಕೊಳ್ಳುವುದರೊಂದಿಗೆ ಈ ಪ್ರಕರಣವು ನ್ಯಾಯಾಂಗ ಮತ್ತು ಸರ್ಕಾರದ ನಡುವೆ ಘರ್ಷಣೆಗೆ ಕಾರಣವಾಗಿತ್ತು.
ನ್ಯಾಯಮೂರ್ತಿ ಚೆಲಮೇಶ್ವರ ಅವರು ೨೦೧೮ರಲ್ಲಿ ಬರೆದಿದ್ದ ಪತ್ರಕ್ಕೆ ಪ್ರತಿಯಾಗಿ ಕಾನೂನು ಸಚಿವ ರವಿ ಶಂಕರ ಪ್ರಸಾದ್ ಅವರು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ದೀಪಕ್ ಮಿಶ್ರ ಅವರಿಗೆ ಪತ್ರ ಬರೆದು ಮಹಿಳಾ ನ್ಯಾಯಾಂಗ ಅಧಿಕಾರಿಯ ದೂರನ್ನು ಸಮರ್ಪಕವಾಗಿ ನಿಭಾಯಿಸಲಾಗಿಲ್ಲ ಎಂದು ಸೂಚಿಸಿದ್ದರು.
ಏನಿದ್ದರೂ, ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ನೇತೃತ್ವದ ಸುಪ್ರೀಂಕೋರ್ಟ್ ಕೊಲಿಜಿಯಂ ಈಗ ಕೃಷ್ಣಭಟ್ ಅವರಿಗೆ ಬಡ್ತಿ ನೀಡುವುದರ ಪರ ಒಲವು ವ್ಯಕ್ತ ಪಡಿಸಿದ್ದು, ಬಡ್ತಿ ನೀಡುವಂತೆ ಹಿಂದೆ ಮಾಡಿದ್ದ ತನ್ನ ಶಿಫಾರಸನ್ನು ಪುನರುಚ್ಚರಿಸುವ ಮೂಲಕ ಸರ್ಕಾರದ ಆಕ್ಷೇಪವನ್ನು ತಳ್ಳಿಹಾಕಿತು..
೨೦೧೬ರ ಆಗಸ್ಟ್ ತಿಂಗಳಲ್ಲಿ ಮಾಡಲಾಗಿದ್ದ ಮೂಲ ಶಿಫಾರಸಿನ ಪ್ರಕಾರವೇ ಪಿ. ಕೃಷ್ಣಭಟ್ ಅವರ ನೇಮಕಾತಿ ಪ್ರಕ್ರಿಯೆಯನು ತ್ವರಿತಗೊಳಿಸುವಂತೆ ಕೊಲಿಜಿಯಂ ಗುರುವಾರ ಬಿಡುಗಡೆ ಮಾಡಲಾದ ತನ್ನ ಹೇಳಿಕೆಯಲ್ಲಿ ಸರ್ಕಾರಕ್ಕೆ ಸೂಚಿಸಿತು..
ರಾಜ್ಯದ ಅತ್ಯಂತ ಹಿರಿಯ ನ್ಯಾಯಾಂಗ ಅಧಿಕಾರಿಗಳಲ್ಲಿ ಒಬ್ಬರಾದ ಕೃಷ್ಣ ಭಟ್ ಅವರಿಗೆ ಬಡ್ತಿ ನೀಡಿ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕ ಮಾಡುವಂತೆ ಕರ್ನಾಟಕ ಹೈಕೋರ್ಟ್ ಶಿಫಾರಸು ಮಾಡಿತ್ತು. ಸುಪ್ರೀಂಕೋರ್ಟ್ ಕೊಲಿಜಿಯಂ ಅದನ್ನು ಅನುಮೋದಿಸಿತ್ತು.
ಆದರೆ ಮಹಳಾ ನ್ಯಾಯಾಂಗ ಅಧಿಕಾರಿ ಕಳುಹಿಸಿದ್ದ ಹೊಸ ದೂರನ್ನು ಆಧರಿಸಿ ಭಟ್ ವಿರುದ್ಧ ಆರೋಪಗಳ ಬಗ್ಗೆ ತನಿಖೆ ನಡೆಸುವಂತೆ ಸೂಚಿಸಿ ಕರ್ನಾಟಕ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ದಿನೇಶ ಮಹೇಶ್ವರಿ ಅವರಿಗೆ ಕೇಂದ್ರ ಸರ್ಕಾರ ಪತ್ರ ಬರೆದಿತ್ತು.
ಕರ್ನಾಟಕ ಹೈಕೋರ್ಟಿನ ಆಗಿನ ಮುಖ್ಯ ನ್ಯಾಯಮೂರ್ತಿ ಸುಭ್ರೋ ಕಮಲ್ ಮುಖರ್ಜಿ ಅವರು ಹಿಂದಿನ ಸಿಜೆಐ ಟಿಎಸ್. ಠಾಕೂರ್ ನೀಡಿದ್ದ ನಿರ್ದೇಶನದ ಮೇರೆಗೆ ತನಿಖೆ ನಡೆಸಿ ಮಹಿಳಾ ನ್ಯಾಯಾಂಗ ಅಧಿಕಾರಿಯ ದೂರು ಬುಡರಹಿತವಾದದ್ದು ಎಂಬ ತೀರ್ಮಾನಕ್ಕೆ ಬಂದಿದ್ದುದರ ಹೊರತಾಗಿಯೂ ಕೇಂದ್ರ ಸರ್ಕಾರ ಮರು ತನಿಖೆಯ ನಿರ್ದೇಶನ ನೀಡಿತ್ತು. ಮುಖ್ಯ ನ್ಯಾಯಮೂರ್ತಿ ಎಸ್.ಕೆ. ಮುಖರ್ಜಿ ಅವರು ತಮ್ಮ ವರದಿಯಲ್ಲಿ ಆರೋಪಗಳನ್ನು ’ಅಸಮರ್ಪಕ ಮತ್ತು ಸೃಷ್ಟಿತ’ ಎಂಬುದಾಗಿ ಬಣ್ಣಿಸಿದ್ದಲ್ಲದೆ, ಭಟ್ ಅವರಿಗೆ ಮಸಿಬಳಿಯುವ ಮತ್ತು ಹೈಕೋರ್ಟ್ ನ್ಯಾಯಮೂರ್ತಿಯಾಗಿ ಅವರ ನೇಮಕಾತಿಯನ್ನು ತಡೆಗಟ್ಟುವ ಸಲುವಾಗಿ ದೂರು ನೀಡಲಾಗಿತ್ತು ಎಂದು ತಿಳಿಸಿದ್ದರು
No comments yet.
Leave a comment