ಐಎನ್ ಎಕ್ಸ್ ಮೀಡಿಯಾ ಪ್ರಕರಣ: ಇಡಿಯಿಂದ ಅ.೨೪ರವರೆಗೆ ಚಿದು ತನಿಖೆ: ಕೋರ್ಟ್ ಅಸ್ತು
ನವದೆಹಲಿ: ಐಎನ್ಎಕ್ಸ್ ಮೀಡಿಯಾ ಹಣ ವರ್ಗಾವಣೆ ಪ್ರಕರಣದಲ್ಲಿ ಕೇಂದ್ರದ ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಅವರನ್ನು ಅಕ್ಟೋಬರ್ ೨೪ರವರೆಗೆ ವಶದಲ್ಲಿ ಇಟ್ಟುಕೊಂಡು ತನಿಖೆ ನಡೆಸಲು 2019 ಅಕ್ಟೋಬರ್ 17ರ ಗುರುವಾರ ಅನುಮತಿ ನೀಡಿದ ದೆಹಲಿ ನ್ಯಾಯಾಲಯವು ಅಲ್ಲಿಯವರೆಗೆ ಕಾಂಗ್ರೆಸ್ ನಾಯಕನನ್ನು ಜಾರಿ ನಿರ್ದೇಶನಾಲಯದ (ಇಡಿ) ವಶಕ್ಕೆ ಒಪ್ಪಿಸಿತು.
ವಿಶೇಷ ನ್ಯಾಯಾಧೀಶ ಅಜಯ್ ಕುಮಾರ್ ಕುಹರ್ ಅವರು ಚಿದಂಬರಂ ಅವರನ್ನು ಪ್ರಶ್ನಿಸಲು ಜಾರಿ ನಿರ್ದೇಶನಾಲಯಕ್ಕೆ ಅನುಮತಿ ನೀಡಿದರು ಮತ್ತು ಜಾರಿ ನಿರ್ದೇಶನಾಲಯದ ವಶದಲ್ಲಿ ಇರುವಾಗ ಮನೆಯಲ್ಲೇ ತಯಾರು ಮಾಡಿದ ಆಹಾರ ನೀಡಲು, ಪಾಶ್ಚಾತ್ಯ ಶೌಚಾಲಯ ಬಳಕೆ ಮಾಡಲು ಮತ್ತು ಔಷಧಗಳನ್ನು ಪಡೆಯಲು ಅವಕಾಶ ನೀಡಿದರು.
ತನಿಖಾ ಸಂಸ್ಥೆಯು ೭೪ರ ಹರೆಯದ ಹಿರಿಯ ಕಾಂಗ್ರೆಸ್ ನಾಯಕನನ್ನು ತನಿಖೆಯ ಸಲುವಾಗಿ ೧೪ ದಿನಗಳ ಕಾಲ ತನ್ನ ವಶಕ್ಕೆ ಒಪ್ಪಿಸುವಂತೆ ಕೋರಿತ್ತು.
ನ್ಯಾಯಾಲಯವು ಐಎನ್ ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳವು (ಸಿಬಿಐ) ದಾಖಲಿಸಿದ ಪ್ರಕರಣದಲ್ಲಿ ಚಿದಂಬರಂ ಅವರ ನ್ಯಾಯಾಂಗ ಬಂಧನವನ್ನು ಕೂಡಾ ಅಕ್ಟೋಬರ್ ೨೪ರವರೆಗೆ ವಿಸ್ತರಿಸಿತು.
ಜಾರಿ ನಿರ್ದೇಶನಾಲಯವು ಸಲ್ಲಿಸಿದ್ದ ಐಎನ್ಎಕ್ಸ್ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿದಂಬರಂ ಅವರನ್ನು ತನ್ನ ಮುಂದೆ ಹಾಜರು ಪಡಿಸಲು ನ್ಯಾಯಾಲಯವು ಬುಧವಾರ ವಾರಂಟ್ ಹೊರಡಿಸಿತ್ತು.
ನ್ಯಾಯಾಲಯದ ನಿರ್ದೇಶನದ ಮೇರೆಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬುಧವಾರ ಬೆಳಗ್ಗೆ ಚಿದಂಬರಂ ಅವರನ್ನು ತಿಹಾರ್ ಸೆರೆಮನೆಯಲ್ಲಿ ಕೆಲಕಾಲ ಪ್ರಶ್ನಿಸಿ ಬಳಿಕ ಬಂಧಿಸಿದ್ದರು.
No comments yet.
Leave a comment