ಆದೇಶ ಪಾಲಿಸದ 32 ಕಂಪೆನಿ ಅಧಿಕಾರಿಗಳಿಗೆ ಸುಪ್ರೀಂ ಜಾಮೀನು ರಹಿತ ವಾರೆಂಟ್
ನವದೆಹಲಿ: ಮುಂಬೈ ಮೂಲದ 32 ಕಂಪೆನಿಗಳ ನಿರ್ವಾಹಕ ನಿರ್ದೇಶಕರಿಗೆ ಬಂಧನದ ಭೀತಿ ಎದುರಾಯಿತು. ತನ್ನ ಆದೇಶವನ್ನು ಪಾಲಿಸದ ಈ 32 ಕಂಪನಿಗಳ ಉನ್ನತಾಧಿಕಾರಿಗಳಿಗೆ ಸುಪ್ರೀಂ ಕೋರ್ಟ್ ಜಾಮೀನು ರಹಿತ ವಾರಂಟ್ ಹೊರಡಿಸಿತು.
ಮೂರು ವರ್ಷಗಳ ಹಿಂದೆ ನೀಡಿದ ಆದೇಶವನ್ನು ಇವರು ಪಾಲಿಸಿಲ್ಲ ಎಂಬುದು ಕಾರಣ. ಮುಂಬೈ ಮೂಲದ ಕಂಪನಿಗಳಾದ ಅಕ್ಷರ್ ಮರ್ಸಾಂಟೈಲ್, ಬೀಟಾ ಟ್ರೇಡಿಂಗ್, ವಿನಯ್ ಮರ್ಸಾಂಟೈಲ್, ಅನೂಪ್ ಮಲ್ಟಿಟ್ರೇಡ್, ಅನ್ಶುಲ್ ಮೆರ್ಸಾಂಟೈಲ್, ಎವರ್ಫ್ರೇಮ್ ಟ್ರೇಡಿಂಗ್, ಹೈಝೋನ್ ಟ್ರೇಡಿಂಗ್, ಇನಾರ್ಬಿಟ್ ಟ್ರೇಡಿಂಗ್, ಲಕ್ಷ್ ಮರ್ಸಾಂಟೈಲ್, ಮ್ಯಾಜಿನೋಟ್ ಟ್ರೇಡಿಂಗ್, ಮಾಂಟ್ರಿಯಲ್ ಟ್ರೇಡಿಂಗ್, ನ್ಯೂಟ್ರೀ ಮರ್ಸಾಂಟೈಲ್, ಸರ್ವೇಶ್ವರ ಟ್ರೇಡಿಂಗ್ ಮೊದಲಾದ ಕಂಪನಿಗಳು ಸುಪ್ರೀಂ ಕೆಂಗಣ್ಣಿಗೆ ಗುರಿಯಾದವು.
2016ರಲ್ಲಿ ಪ್ರಕರಣವೊಂದರ ಸಂಬಂಧ ಈ 32 ಕಂಪನಿಗಳು ಷೇರು ಪೇಟೆ ನಿಯಂತ್ರಣ ಸಂಸ್ಥೆಯಾದ ಸೆಬಿಗೆ ತಲಾ 5 ಲಕ್ಷ ದಂಡ ಕಟ್ಟುವಂತೆ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿತ್ತು. ಮೂರು ವರ್ಷಗಳಾದರೂ ಕಂಪನಿಗಳಿಂದ ಯಾವುದೇ ಸ್ಪಂದನೆ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಸೆಬಿ 2017ರಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾಗಿತ್ತು. ಇದರ ವಿಚಾರಣೆ ನಡೆಸಿದ ನ್ಯಾ| ರೋಹಿಂಗ್ಟನ್ ಎಫ್ ನಾರಿಮನ್ ನೇತೃತ್ವದ ಸುಪ್ರೀಂಕೋರ್ಟ್ ನ್ಯಾಯಪೀಠ ಈಗ ಈ ಕಂಪನಿಗಳ ಅಧಿಕಾರಿಗಳಿಗೆ ಜಾಮೀನುರಹಿತ ವಾರೆಂಟ್ ಹೊರಡಿಸಿತು.
ಏನಿದು ಪ್ರಕರಣ?
ಬ್ಯಾಂಕ್ ಆಫ್ ರಾಜಸ್ಥಾನ ಸಂಸ್ಥೆಯ ಮಾಜಿ ಪ್ರವರ್ತಕರಾದ ಟಯಾಲ್ ಕುಟುಂಬ ಮತ್ತಿತರ ಸಂಸ್ಥೆಗಳು ವಂಚನೆ ಎಸಗಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಸೆಬಿ 2013ರಲ್ಲಿ ಪ್ರವೀಣ್ ಟಯಾಲ್, ಅವರ ಕುಟುಂಬ ಸದಸ್ಯರಾದ ಸಂಯಜ್ ಟಯಾಲ್, ನವೀನ್ ಟಯಾಲ್, ಸೌರಭ್ ಟಯಾಲ್ ಸೇರಿದಂತೆ ಈ ವಂಚನೆಯಲ್ಲಿ ಷಾಮೀಲಾದ ಹಲವು ಸಂಸ್ಥೆಗಳಿಗೆ ತಲಾ 5 ಲಕ್ಷ ರೂ ದಂಡ ಕಟ್ಟುವಂತೆ ಆದೇಶಿಸಲಾಗಿತ್ತು.
ಸುಪ್ರೀಂ ಕೋರ್ಟ್ 2016ರಲ್ಲಿ ಈ ಆದೇಶವನ್ನು ಎತ್ತಿ ಹಿಡಿದು ತೀರ್ಪು ನೀಡಿತು. ಸರ್ವೋಚ್ಚ ನ್ಯಾಯಾಲಯದ ಆದೇಶದ ನಂತರವೂ ಹಲವು ಕಂಪನಿಗಳು ದಂಡ ಕಟ್ಟಲು ಆಸಕ್ತಿ ತೋರಲಿಲ್ಲ. ಕೋರ್ಟ್ ನೋಟೀಸ್ ಅನ್ನು ಮಾಧ್ಯಮಗಳಲ್ಲಿ ಪ್ರಕಟಿಸಿದಾಗಲೂ 32 ಕಂಪನಿಗಳು 5 ಲಕ್ಷ ರೂ ಕಟ್ಟಲು ಮುಂದೆ ಬರಲಿಲ್ಲ. ಈ ಹಿನ್ನೆಲೆಯಲ್ಲಿ ಸೆಬಿ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಿತು. ಈಗ ಸುಪ್ರೀಂಕೋರ್ಟ್ ಜಾಮೀನು ರಹಿತ ವಾರೆಂಟ್ ಹೊರಡಿಸಿದೆ.
No comments yet.
Leave a comment