ಹರಿಯಾಣ: ಬಿಜೆಪಿ ನೇತೃತ್ವದ ಮೈತ್ರಿಕೂಟಕ್ಕೆ ಸರ್ಕಾರ ರಚನೆಗೆ ಆಹ್ವಾನ
ಇಂದು ಎಂಎಲ್ ಖಟ್ಟರ್, ದುಷ್ಯಂತ ಚೌಟಾಲ ಪ್ರಮಾಣವಚನ
ನವದೆಹಲಿ: ಹರಿಯಾಣ ರಾಜ್ಯಪಾಲ ಸತ್ಯದೇವ್ ನಾರಾಯಣ್ ಆರ್ಯ ಅವರು ರಾಜ್ಯದಲ್ಲಿ ಸರ್ಕಾರ ರಚಿಸುವಂತೆ ಬಿಜೆಪಿ ನೇತೃತ್ವದ ಮೈತ್ರಿಕೂಟಕ್ಕೆ ಶನಿವಾರ ಆಹ್ವಾನ ನೀಡಿದ್ದು, ಭಾರತೀಯ ಜನತಾ ಪಕ್ಷದ (ಬಿಜೆಪಿ) ಶಾಸಕಾಂಗ ನಾಯಕ ಮನೋಹರ ಲಾಲ್ ಖಟ್ಟರ್ ಮುಖ್ಯಮಂತ್ರಿಯಾಗಿಯೂ ಜನನಾಯಕ ಜನತಾ ಪಕ್ಷದ (ಜೆಜೆಪಿ) ನಾಯಕ ದುಷ್ಯಂತ ಚೌಟಾಲ ಅವರು ಉಪಮುಖ್ಯಮಂತ್ರಿಯಾಗಿಯೂ 2019 ಅಕ್ಟೋಬರ್ 27ರ ಭಾನುವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ದುಷ್ಯಂತ ಚೌಟಾಲ ನೇತೃತ್ವದ ಜನನಾಯಕ ಜನತಾ ಪಕ್ಷದ (ಜೆಜೆಪಿ) ಬೆಂಬಲದೊಂದಿಗೆ ಬಿಜೆಪಿಯು ರಾಜ್ಯದಲ್ಲಿ ಸರ್ಕಾರ ರಚನೆಯ ಹಕ್ಕು ಮಂಡಿಸಿದ ಬಳಿಕ ಈ ಸ್ವತಃ ಖಟ್ಟರ್ ಅವರು 2019 ಅಕ್ಟೋಬರ್ 26ರ ಶನಿವಾರ ಈ ವಿಚಾರವನ್ನು ಪ್ರಕಟಿಸಿದರು.
‘ಹರಿಯಾಣ ರಾಜ್ಯಪಾಲರು ಭಾನುವಾರ ಸರ್ಕಾರ ರಚಿಸುವಂತೆ ನಮಗೆ ಆಹ್ವಾನ ನೀಡಿದ್ದಾರೆ’ ಎಂದು ಖಟ್ಟರ್ ನುಡಿದರು. ದೀಪಾವಳಿ ಹಬ್ಬದ ದಿನವಾದ ಭಾನುವಾರ ಮಧ್ಯಾಹ್ನ ೨.೧೫ ಗಂಟೆಗೆ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಅವರು ನುಡಿದರು.
‘ಚೌಟಾಲ ಅವರು ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವರು. ಬಿಜೆಪಿಯ ೪೦, ಜೆಜೆಪಿಯ ೧೦ ಮತ್ತು ೭ ಮಂದಿ ಪಕ್ಷೇತರರು ಸೇರಿದಂತೆ ೫೭ ಶಾಸಕರು ಹರಿಯಾಣದಲ್ಲಿ ಸರ್ಕಾರ ರಚನೆಗೆ ರಾಜ್ಯಪಾಲರ ಎದುರು ಹಕ್ಕು ಪ್ರತಿಪಾದನೆ ಮಾಡಿದ್ದಾರೆ’ ಎಂದು ಖಟ್ಟರ್ ಹೇಳಿದರು.
‘ರಾಜ್ಯಪಾಲರು ಇದನ್ನು ಅಂಗೀಕರಿಸಿದ್ದು, ಭಾನುವಾರ ಸರ್ಕಾರ ರಚಿಸುವಂತೆ ನಮ್ಮನ್ನು ಆಹ್ವಾನಿಸಿದರು’ ಎಂದ ಖಟ್ಟರ್ ನುಡಿದರು.
ಇದಕ್ಕೆ ಮುನ್ನ ಖಟ್ಟರ್ ಮತ್ತು ಅವರ ಸಂಪುಟ ಸಹೋದ್ಯೋಗಿಗಳು ರಾಜ್ಯಪಾಲರಿಗೆ ತಮ್ಮ ರಾಜೀನಾಮೆಗಳನ್ನು ಸಲ್ಲಿಸಿದರು. ರಾಜ್ಯಪಾಲ ಆರ್ಯ ಅವರು ರಾಜೀನಾಮೆಗಳನ್ನು ಅಂಗೀಕರಿಸಿದರು ಮತ್ತು ನೂತನ ಸರ್ಕಾರವು ಅಧಿಕಾರ ವಹಿಸಿಕೊಳ್ಳುವವರೆಗೆ ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರೆಯುವಂತೆ ಖಟ್ಟರ್ ಅವರಿಗೆ ಸೂಚಿಸಿದರು.
ಕೆಲವು ಸಚಿವರು ಭಾನುವಾರ ಪ್ರಮಾಣ ವಚನ ಸ್ವೀಕರಿಸುವರು ಎಂದು ಖಟ್ಟರ್ ಹೇಳಿದರು. ಆದರೆ ಪ್ರಮಾಣ ವಚನ ಸ್ವೀಕರಿಸುವವರ ಸಂಖ್ಯೆಯನ್ನು ಅವರು ತಿಳಿಸಲಿಲ್ಲ.
೯೦ ಸದಸ್ಯ ಬಲದ ಹರಿಯಾಣ ವಿಧಾನಸಭೆಯಲ್ಲಿ ಸರ್ಕಾರ ರಚನೆಗೆ ಕನಿಷ್ಠ ೪೬ ಶಾಸಕರ ಬೆಂಬಲ ಬೇಕಾಗುತ್ತದೆ.
ಇದಕ್ಕೆ ಮುನ್ನ ಶನಿವಾರ ಬೆಳಗ್ಗೆ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಮನೋಹರಲಾಲ್ ಖಟ್ಟರ್ ಅವರನ್ನು ಪಕ್ಷದ ಶಾಸಕಾಂಗ ನಾಯಕರಾಗಿ ಆಯ್ಕೆ ಮಾಡಲಾಯಿತು.
ಇತ್ತೀಚೆಗೆ ನಡೆದಿದ್ದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ೪೦ ಸ್ಥಾನಗಳನ್ನು ಗೆದ್ದು ಸರಳ ಬಹುಮತಕ್ಕೆ ೬ ಸ್ಥಾನಗಳ ಕೊರತೆ ಅನುಭವಿಸಿತ್ತು. ೨೦೧೪ರ ಚುನಾವಣೆಯಲ್ಲಿ ಬಿಜೆಪಿ ೪೭ ಸ್ಥಾನಗಳನ್ನು ಗೆದ್ದಿತ್ತು. ಈ ಬಾರಿ ಅದಕ್ಕೆ ೭ ಸ್ಥಾನಗಳು ನಷ್ಟವಾಗಿದ್ದವು.
೧೦ ಸ್ಥಾನಗಳನ್ನು ಗೆದ್ದಿರುವ ಜೆಜೆಪಿಯು ಬೆಂಬಲ ನೀಡುವ ಮೂಲಕ ಈ ಕೊರತೆಯನ್ನು ನೀಗಿಸಿ ಖಟ್ಟರ್ ಅವರಿಗೆ ಮುಖ್ಯಮಂತ್ರಿಯಾಗಿ ಮರಳಿ ಬರಲು ನೆರವಾಯಿತು. ದಿವಂಗತ ಉಪ ಪ್ರಧಾನಿ ಚೌಧರಿ ದೇವಿಲಾಲ್ ಅವರ ಮರಿಮೊಮ್ಮಗ ದುಷ್ಯಂತ ಚೌಟಾಲ ಅವರು ಹರಿಯಾಣದಲ್ಲಿ ಸ್ಥಿರ ಸರ್ಕಾರ ನೀಡುವ ದೃಷ್ಟಿಯಿಂದ ಮೈತ್ರಿಕೂಟ ಅನಿವಾರ್ಯವಾಗಿದೆ ಎಂದು ತಮ್ಮ ಪಕ್ಷವು ನಂಬಿದೆ ಎಂದು ಹೇಳಿದ್ದರು.
ಶನಿವಾರ ಬೆಳಗ್ಗೆ ಮನೋಹರ ಲಾಲ್ ಖಟ್ಟರ್ ಅವರನ್ನು ಹರಿಯಾಣ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಮಾಡಲಾಯಿತು. ಇದರೊಂದಿಗೆ ಎರಡನೇ ಅವಧಿಗೆ ರಾಜ್ಯದ ಮುಖ್ಯಮಂತ್ರಿಯಾಗುವ ಅವಕಾಶ ಖಟ್ಟರ್ ಅವರಿಗೆ ಒದಗಿ ಬಂದಿತು. ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ಬಳಿಕ ಖಟ್ಟರ್ ಅವರು ಸರ್ಕಾರ ರಚನೆಯ ಹಕ್ಕು ಮಂಡಿಸುವ ಸಲುವಾಗಿ ರಾಜ್ಯಪಾಲರನ್ನು ಭೇಟಿ ಮಾಡಿದ್ದರು.
ಇದಕ್ಕೂ ಮುನ್ನ ಶುಕ್ರವಾರ ಜನನಾಯಕ ಜನತಾ ಪಕ್ಷದ (ಜೆಜೆಪಿ) ಬೆಂಬಲ ಪಡೆಯುವ ನಿಟ್ಟಿನಲ್ಲಿ ದುಷ್ಯಂತ ಚೌಟಾಲ ಜೊತೆಗೆ ಮಾತುಕತೆ ನಡೆಸಿ ಯಶಸ್ವಿಯಾಗಿರುವ ಬಗ್ಗೆ ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರು ಖಟ್ಟರ್ ಹಾಗೂ ಚೌಟಾಲ ಜೊತೆಗಿನ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ರಾತ್ರಿ ಪ್ರಕಟಿಸಿದ್ದರು.
ಈ ಮಧ್ಯೆ ವಿವಾದಾತ್ಮಕ ಶಾಸಕ ಗೋಪಾಲ್ ಕಂಡಾ ಅವರ ಬೆಂಬಲವನ್ನು ಹರಿಯಾಣ ಬಿಜೆಪಿ ಸರ್ಕಾರ ಪಡೆಯುವುದಿಲ್ಲ ಎಂದು ಕೇಂದ್ರ ಸಚಿವ ರವಿಶಂಕರ ಪ್ರಸಾದ್ ಶನಿವಾರ ಸ್ಪಪ್ಟ ಪಡಿಸಿದ್ದರು.
No comments yet.
Leave a comment