SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಶಿವಸೇನೆಗೆ ಸರ್ಕಾರದಲ್ಲಿ ೫೦:೫೦ ಪಾಲು: ಬಿಜೆಪಿಗೆ ಉದ್ಧವ್ ಠಾಕ್ರೆ ಸಂದೇಶ


24 Uddhav-Thackeray
ಮುಂಬೈ:
ಮಹಾರಾಷ್ಟ್ರ ವಿಧಾನಸಭೆಗೆ ನಡೆದ ಚುನಾವಣೆಯ ಫಲಿತಾಂಶಗಳು ಹೊರಬರುತ್ತಿದ್ದಂತೆಯೇ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಮಿತ್ರ ಪಕ್ಷ ಭಾರತೀಯ ಜನತಾ ಪಕ್ಷಕ್ಕೆ ಸರ್ಕಾರ ರಚನೆ ಸುಲಭವಲ್ಲ ಎಂಬ ಸಂದೇಶವನ್ನು 2019 ಅಕ್ಟೋಬರ್ 24ರ ಗುರುವಾರ ರವಾನಿಸಿದರು.

ಮಹಾರಾಷ್ಟ್ರ ಚುನಾವಣೆಗಳಲ್ಲಿ ಕಿರಿಯ ಪಾಲುದಾರನಾಗಲು ಮನಸ್ಸಿಲ್ಲದ ಮನಸ್ಸಿನಿಂದಲೇ ಒಪ್ಪಿಕೊಂಡಿದ್ದ ಶಿವಸೇನಾ ಮುಖ್ಯಸ್ಥ, ಸರ್ಕಾರ ರಚನೆಯ ವಿಚಾರದಲ್ಲಿ ತನ್ನ ನಡೆಯನ್ನು ಶಿವಸೇನೆ ಒಪ್ಪಿಕೊಳ್ಳುತ್ತದೆ ಎಂದು ಬಿಜೆಪಿ ತೀರ್ಮಾನಿಸಬೇಕಾಗಿಲ್ಲ, ಇದು ಚರ್ಚಿಸಬೇಕಾದ ವಿಷಯ ಎಂದು ವರದಿಗಾರರ ಜೊತೆ ಮಾತನಾಡುತ್ತಾ ಹೇಳಿದರು.

ವಿಧಾನಸಭಾ ಚುನಾವಣಾ ಫಲಿತಾಂಶದ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿದ ಉದ್ಧವ್, ಫೆಬ್ರುವರಿಯಲ್ಲಿ ಉಭಯ ಪಕ್ಷಗಳೂ ೫೦:೫೦ ಅಧಿಕಾರ ಹಂಚಿಕೆಯನ್ನು ಒಪ್ಪಿಕೊಂಡಿದ್ದವು ಎಂಬ ವಿಚಾರನ್ನು ನಿರ್ದಿಷ್ಟವಾಗಿ ನೆನಪಿಸಿದರು. ಆದರೆ ಹಲವಾರು ಬಾರಿ ಇದನ್ನೂ ನೆನಪಿಸಿದರೂ ಬಿಜೆಪಿ ತನ್ನ ವಚನವನ್ನು ಪಾಲಿಸದೆ ೧೬೪ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತ್ತು. ಶಿವಸೇನೆ ೧೨೪ ಅಭ್ಯರ್ಥಿಗಳನ್ನೂ ಮಾತ್ರ ಕಣಕ್ಕೆ ಇಳಿಸಿತ್ತು.

ಬಿಜೆಪಿಯು ೧೦೩ ಸ್ಥಾನಗಳೊಂದಿಗೆ ದೊಡ್ಡ ಪಕ್ಷವಾಗಿ ಉದಯಿಸಿದ್ದರೂ, ೨೮೮ ಸದಸ್ಯ ಬಲದ ವಿಧಾನಸಭೆಯಲ್ಲಿ ಶಿವಸೇನೆಯನ್ನು ಸರ್ಕಾರ ರಚನೆಗಾಗಿ ನೆಚ್ಚಿಕೊಳ್ಳಲೇಬೇಕಾಗಿದೆ. ಈ ಅವಕಾಶವನ್ನು ಠಾಕ್ರೆ ಅತ್ಯಂತ ಕ್ಷಿಪ್ರವಾಗಿ ಬಳಸಿಕೊಂಡಿದ್ದಾರೆ.

‘ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬುದು ಅತ್ಯಂತ ಮಹತ್ವದ ಪ್ರಶ್ನೆ’ ಎಂದು ಉದ್ಧವ್ ಠಾಕ್ರೆ ಹೇಳಿದರು.

ಲೋಕಸಭಾ ಚುನಾವಣೆಗೆ ಮುನ್ನ ೫೦:೫೦ ಸೂತ್ರವನ್ನು ಒಪ್ಪಿಕೊಳ್ಳಲಾಗಿತ್ತು ಎಂಬುದು ನೆನಪಿರಲಿ. ಇದರ ಪ್ರಕಾರ ಸ್ಥಾನ ಹಂಚಿಕೆ ಸೂತ್ರ ೧೪೪:೧೪೪. ಬಿಜೆಪಿಯ ಚಂದ್ರಕಾಂತ ಪಾಟೀಲ್ ಅವರು ಶಿವಸೇನೆಯ ತನ್ನ ಸ್ಥಾನವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದರು. ನಾನು ಕೆಲವು ಸ್ಥಾನಗಳಿಗೆ ಒಪ್ಪಿಕೊಂಡಿದ್ದೆ. ಆದರೆ ಈಗ ಅವರು ಅಡಚಣೆಗಳನ್ನು ಎದುರಿಸಲು ಹೋಗುವುದಾದಲ್ಲಿ ನಾನು ಅವರನ್ನು ಅರ್ಥ ಮಾಡಿಕೊಂಡು ಕೂರಲು ಸಾಧ್ಯವಿಲ್ಲ. ಏಕೆಂದರೆ ನನಗೆ ನನ್ನ ಪಕ್ಷವನ್ನು ಮುನ್ನಡೆಸಬೇಕಾಗಿದೆ ಎಂದು ಠಾಕ್ರೆ ನುಡಿದರು.

ಬಿಜೆಪಿಯ ಸ್ಥಾನ ಹಂಚಿಕೆಯ ಹೊಸ ಸೂತ್ರ ಮುಂದಿಟ್ಟ ಸೂತ್ರವನ್ನು ಪಕ್ಷವು ಒಪ್ಪಿಕೊಳ್ಳಬೇಕಾಗಿ ಬಂದ ಬಳಿಕ ೫೦:೫೦ ಸೂತ್ರದ ಬಗ್ಗೆ ಮಾತನಾಡುವುದನ್ನು ಸ್ಥಗಿತಗೊಳಿಸಿದ್ದ ಠಾಕ್ರೆ, ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮತ್ತೆ ಮತ್ತೆ ಫೆಬ್ರುವರಿಯಲ್ಲಿ ಮಾತುಕತೆ ನಡೆಸಲಾಗಿದ್ದ ’ವ್ಯವಸ್ಥೆ’ ಬಗ್ಗೆ ಮಾತನಾಡಿದರು. ಮತ್ತು ತಮ್ಮ ಪಕ್ಷಕ್ಕೆ ಅಧಿಕ ಲಾಭ ಗಳಿಸಬೇಕೆಂಬುದು ತಮ್ಮ ಉದ್ದೇಶ ಎಂದು ಹೇಳಿದರು.

ಸರ್ಕಾರ ರಚನೆಗೆ ನನಗೆ ಅವಸರವಿಲ್ಲ ಎಂದೂ ಅವರು ಒತ್ತಿ ಹೇಳಿದರು.

‘ಈಗ ಫಲಿತಾಂಶಗಳು ಬಂದಿವೆ. ಶೀಘ್ರವೇ ನಾವು ಬಿಜೆಪಿಯ ದೆಹಲಿ ನಾಯಕರ ಜೊತೆ ಚರ್ಚೆಗೆ ಕೂರುತ್ತೇವೆ. ಅಮಿತ್ ಭಾಯಿ ಬರುತ್ತಾರೆ. ನಿರ್ಧರಿಸಲಾಗಿದ್ದ ಸೂತ್ರವನ್ನು ಆಧರಿಸಿ ನಾವು ಜನರ ಮುಂದೆ ಪಾರದರ್ಶಕವಾಗಿ ಹೋಗುತ್ತೇವೆ’ ಎಂಬುದಾಗಿ ಹೇಳುವ ಮೂಲಕ ಮಾತುಕತೆಗಳಿಗೆ ನಿಯಮಗಳ ಅಡಿಗಟ್ಟನ್ನು ಅವರು ಸಿದ್ಧ ಪಡಿಸಿದರು. ’ಯಾವುದನ್ನು ಒಪ್ಪಿದ್ದೇವೋ ಅದಕ್ಕೆ ಅಂಟಿಕೊಳ್ಳಬೇಕು’ ಎಂದೂ ಉದ್ಧವ್ ನುಡಿದರು.

ಸೇನಾ ನಾಯಕ ಈ ತಿಂಗಳ ಆದಿಯಲ್ಲಿ ಮಾಧ್ಯಮದ ಜೊತೆ ಮಾತನಾಡುತ್ತಾ ’ಸೇನೆಯು ಮಹಾರಾಷ್ಟ್ರಕ್ಕಾಗಿ ಮೈತ್ರಿಯಲ್ಲಿ ರಾಜಿ ಮಾಡಿಕೊಂಡಿದೆ’ ಎಂದು ಹೇಳಿದ್ದರು.

‘ನಾವು ಕಡಿಮೆ ಸ್ಥಾನಗಳಿಗೆ ಸ್ಪರ್ಧಿಸುತ್ತಿದ್ದೇವೆ, ಏಕೆಂದರೆ (ಮಹಾರಾಷ್ಟ್ರ ಮುಖ್ಯಮಂತ್ರಿ ದೇವೆಂದ್ರ) ಫಡ್ನಿವಿಸ್ ಮತ್ತು ರಾಜ್ಯ ಬಿಜೆಪಿ ಮುಖ್ಯಸ್ಥ ಚಂದ್ರಕಾಂತ್ ಪಾಟೀಲ್ ಅವರು ತಮ್ಮ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವಂತೆ ಕೋರಿದ್ದರು. ನಾನು ಅದನ್ನು ಪರಿಗಣಿಸಿದ್ದೆ’ ಎಂದು ಉದ್ಧವ್ ಸಂದರ್ಶನ ಒಂದರಲ್ಲಿ ತಿಳಿಸಿದ್ದರು.

ಮುಖ್ಯಮಂತ್ರಿ ಸ್ಥಾನವು ಚರ್ಚಾರ್ಹ ಅಲ್ಲ ಎಂಬುದಾಗಿ ಬಿಜೆಪಿ ನಾಯಕರು ಸೂಚಿಸಿದ್ದಾರೆ ಮತ್ತು ಸೇನಾ ಮುಖ್ಯಸ್ಥರು ಫೆಬ್ರುವರಿ ಸೂತ್ರದ ಪ್ರಕಾರ ಉಪಮುಖ್ಯಮಂತ್ರಿ ಸ್ಥಾನ ಪಡೆಯುವ ಗುರಿ ಹೊಂದಿದ್ದಾರೆ.

ಶಿವಸೇನೆಯಲ್ಲಿ ಯಾರು ಮುಖ್ಯಮಂತ್ರಿ ಅಥವಾ ಉಪ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುದಾಗಿ ಉದ್ಧವ್ ಠಾಕ್ರೆ ಸ್ಪಷ್ಟ ಪಡಿಸಿಲ್ಲ. ಹೊಸದಾಗಿ ಚುನಾಯಿತರಾದ ಶಾಸಕರು ವಿಷಯವನ್ನು ಇತ್ಯರ್ಥ ಪಡಿಸುವರು ಎಂದು ಠಾಕ್ರೆ ಹೇಳಿದರು.

October 24, 2019 - Posted by | ಭಾರತ, ರಾಷ್ಟ್ರೀಯ, Flash News, General Knowledge, India, Nation, News, Politics, Spardha | , , , , ,

No comments yet.

Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ