ರಫೇಲ್ ಗೆ ಆಯುಧ ಪೂಜೆ ನಡೆಸಿ ಮೊದಲ ಹಾರಾಟ ನಡೆಸಿದ ರಾಜನಾಥ್ ಸಿಂಗ್
ಪ್ಯಾರಿಸ್: ದೇಶದ ವಾಯುಪಡೆಗೆ ವಿಶೇಷ ಬಲ ತುಂಬಲಿರುವ ಅತ್ಯಾಧುನಿಕ ಮಾದರಿಯ ರಫೇಲ್ ಯುದ್ಧವಿಮಾನವನ್ನು ಭಾರತಕ್ಕೆ ಹಸ್ತಾಂತರಿಸುವ ಔಪಚಾರಿಕ ಪ್ರಕ್ರಿಯೆ ಫ್ರಾನ್ಸಿನ ಮೆರಿಗ್ನ್ಯಾಕ್ ನಲ್ಲಿ 2019 ಅಕ್ಟೋಬರ್ 08ರ ಮಂಗಳವಾರ ಯಶಸ್ವಿಯಾಗಿ ನೆರವೇರಿತು.
ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ರಫೇಲ್ ಡಸಾಲ್ಟ್ ಕಂಪೆನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಎರಿಕ್ ಟ್ರ್ಯಾಪಿಯರ್ ಅವರು ಮೊದಲ ರಫೇಲ್ ಯುದ್ಧ ವಿಮಾನವನ್ನು ಅಧಿಕೃತವಾಗಿ ಹಸ್ತಾಂತರಿಸಿದರು.
ಪ್ರಥಮ ರಫೇಲ್ ವಿಮಾನವನ್ನು ಸ್ವೀಕರಿಸಿದ ಬಳಿಕ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಈ ಯುದ್ಧ ವಿಮಾನಕ್ಕೆ ಆಯುಧ ಪೂಜೆಯನ್ನು ನೆರವೇರಿಸಿದರು. ವಿಮಾನದ ಎದುರು ಭಾಗದಲ್ಲಿ ‘ಓಂ’ ಎಂದು ಕುಂಕುಮದಲ್ಲಿ ಬರೆದ ಸಿಂಗ್ ಬಳಿಕ ವಿಮಾನದ ಚಕ್ರಗಳಿಗೆ ಲಿಂಬೆ ಹಣ್ಣನ್ನು ಮತ್ತು ವಿಮಾನದ ಮುಂಭಾಗದಲ್ಲಿ ತೆಂಗಿನ ಕಾಯಿಯನ್ನು ಇರಿಸಿ ಸಾಂಪ್ರದಾಯಿಕ ರೀತಿಯಲ್ಲೇ ಆಯುಧ ಪೂಜೆಯನ್ನು ನೆರವೇರಿಸಿದರು.
ಬಳಿಕ ರಾಜನಾಥ್ ಸಿಂಗ್ ಅವರು ರಫೇಲ್ ಯುದ್ಧ ವಿಮಾನವನ್ನು ಏರಿ ಅದರಲ್ಲಿ ಹಾರಾಟ ನಡೆಸಿದರು. ಪೈಲಟ್ ಫಿಲಿಪ್ ಡ್ಯುಶಾಟ್ ಅವರು ರಕ್ಷಣಾ ಸಚಿವರಿದ್ದ ಈ ರಫೇಲ್ ವಿಮಾನವನ್ನು ಚಲಾಯಿಸಿದರು. ಇದರೊಂದಿಗೆ ರಫೇಲ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ಪ್ರಥಮ ರಕ್ಷಣಾ ಸಚಿವರೆಂಬ ಹೆಗ್ಗಳಿಕೆಗೆ ರಾಜನಾಥ್ ಸಿಂಗ್ ಅವರು ಪಾತ್ರರಾದರು.
36 ಯುದ್ಧ ವಿಮಾನಗಳಲ್ಲಿ ಫ್ರಾನ್ಸ್ ಮೊದಲ ಹಂತದ ನಾಲ್ಕು ರಫೇಲ್ ವಿಮಾನಗಳನ್ನು ಮುಂದಿನ ವರ್ಷದ ಮೇ ತಿಂಗಳಿನಲ್ಲಿ ಭಾರತಕ್ಕೆ ಹಸ್ತಾಂತರಿಸಲಿದೆ. ಭಾರತ ಮತ್ತು ಫ್ರಾನ್ಸ್ ನಡುವೆ 36 ರಫೇಲ್ ಯುದ್ಧ ವಿಮಾನ ಖರೀದಿಗಾಗಿ 59 ಸಾವಿರ ಕೋಟಿ ರೂಪಾಯಿ ಒಪ್ಪಂದ ಮಾಡಿಕೊಂಡಿದೆ.
ಇದಕ್ಕೆ ಮುನ್ನ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ ಅವರನ್ನು ಪ್ಯಾರಿಸ್ ನಲ್ಲಿ ಭೇಟಿಯಾಗಿ ರಕ್ಷಣೆ ಮತ್ತು ಭದ್ರತಾ ಸಂಬಂಧಿ ವಿಷಯಗಳ ಕುರಿತು ಚರ್ಚೆ ನಡೆಸಿದ್ದರು.
No comments yet.
Leave a comment