ಸಂಧಾನಯತ್ನದಲ್ಲಿ ರಾಮಲಲ್ಲಾ ಇಲ್ಲ: ಸುಪ್ರೀಂಗೆ ವಕೀಲರ ಸ್ಪಷ್ಟನೆ
ಅಯೋಧ್ಯೆ ರಾಮಜನ್ಮಭೂಮಿ- ಬಾಬರಿ ಮಸೀದಿ ಭೂ ವಿವಾದ ಪ್ರಕರಣ
ನವದೆಹಲಿ: ಅಯೋಧ್ಯೆಯ ರಾಮಜನ್ಮಭೂಮಿ- ಬಾಬರಿ ಮಸೀದಿ ಭೂ ವಿವಾದದ ಪ್ರಕರಣದ ವಿಚಾರಣೆಯ ಜೊತೆಗೇ ಪುನರಾಂಭಗೊಂಡಿರುವ ಸಂಧಾನ ಮಾತುಕತೆ ಯತ್ನದಲ್ಲಿ ಪ್ರಕರಣದ ಪ್ರಮುಖ ಕಕ್ಷಿದಾರರಲ್ಲಿ ಒಬ್ಬರಾಗಿರುವ ರಾಮಲಲ್ಲಾ ವಿರಾಜಮಾನ್ ಪಾಲ್ಗೊಳ್ಳುವುದಿಲ್ಲ ಎಂದು ರಾಮಲಲ್ಲಾ ಪರ ಹಾಜರಾದ ಹಿರಿಯ ವಕೀಲ ಸಿಎಸ್ ವೈದ್ಯನಾಥನ್ ಅವರು 2019 ಸೆಪ್ಟೆಂಬರ್ 30ರ ಸೋಮವಾರ ಸುಪ್ರಿಂಕೋರ್ಟಿನ ಪಂಚ ಸದಸ್ಯ ಸಂವಿಧಾನಪೀಠಕ್ಕೆ ತಿಳಿಸಿದರು.
ಮುಸ್ಲಿಂ ಕಕ್ಷಿದಾರರ ಮನವಿ ಮೇರೆಗೆ ಭೂ ವಿವಾದಕ್ಕೆ ಸಂಧಾನದ ಇತ್ಯರ್ಥ ಸಲುವಾಗಿ ನ್ಯಾಯಾಲಯ ಕಲಾಪಕ್ಕೆ ಪರ್ಯಾಯವಾಗಿ ಸಂಧಾನ ಮಾತುಕತೆ ಯತ್ನವನ್ನೂ ನಡೆಸಲು ಸುಪ್ರೀಂಕೋಟ್ ಅನುಮತಿ ನೀಡಿದ ಕೆಲವು ದಿನಗಳ ಬಳಿಕ ರಾಮಲಲ್ಲಾ ಪರ ವಕೀಲರು ಈ ಸ್ಪಷ್ಟನೆಯನ್ನು ನ್ಯಾಯಾಲಯಕ್ಕೆ ನೀಡಿದರು.
ಪರ್ಯಾಯವಾಗಿ ಸಂಧಾನಯತ್ನ ನಡೆದರೂ, ಕೋರ್ಟ್ ವಿಚಾರಣೆಯ ಪ್ರಕ್ರಿಯೆಯಲ್ಲಿ ವಾದ ಮಂಡನೆಗಳು ಅಕ್ಟೋಬರ್ ೧೮ರ ವೇಳೆಗೆ ಮುಗಿಯಬೇಕು ಎಂದು ನ್ಯಾಯಾಲಯ ಸ್ಪಷ್ಟ ಪಡಿಸಿತ್ತು. ವಿಚಾರಣೆ ಮತ್ತು ಸಂಧಾನಯತ್ನ ಎರಡೂ ಏಕಕಾಲಕ್ಕೆ ನಡೆಯುತ್ತವೆ ಎಂದು ಪೀಠ ತಿಳಿಸಿತ್ತು.
ಅಯೋಧ್ಯೆಯ ವಿವಾದಿತ ಭೂಮಿಯನ್ನು ಪ್ರಕರಣದ ಮೂವರು ಕಕ್ಷಿದಾರರಾದ ಸುನ್ನಿ ವಕ್ಫ್ ಮಂಡಳಿ, ನಿರ್ಮೋಹಿ ಅಖಾರ ಮತ್ತು ರಾಮ ಲಲ್ಲಾ ವಿರಾಜಮಾನ ಅವರಿಗೆ ಸಮಾನವಾಗಿ ಹಂಚಬೇಕು ಎಂಬುದಾಗಿ ೨೦೧೦ರಲ್ಲಿ ಅಲಹಾಬಾದ್ ಹೈಕೋರ್ಟ್ ನೀಡಿದ ತೀರ್ಪಿನ ವಿರುದ್ಧ ಒಟ್ಟು ೧೪ ಮೇಲ್ಮನವಿಗಳು ಸುಪ್ರೀಂಕೋಟಿಗೆ ಸಲ್ಲಿಕೆಯಾಗಿದ್ದವು.
ಕಳೆದ ತಿಂಗಳು ವಿಚಾರಣೆ ಕಾಲದಲ್ಲಿ ಹಿರಿಯ ವಕೀಲ ಸಿ.ಎಸ್. ವೈದ್ಯನಾಥನ್ ಅವರು ’ಭಗವಾನ್ ಶೀರಾಮನ ಜನ್ಮಸ್ಥಾನವು ಸ್ವತಃ ದೇವತೆಯಾಗಿರುವುದರಿಂದ ಅದರ ಮೇಲೆ ಜಂಟಿ ಸ್ವಾಮ್ಯ ಸಾಧ್ಯವಿಲ್ಲ’ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು. ಜಂಟಿ ಸ್ವಾಮ್ಯದಿಂದ ಹಾನಿಯಾಗುತ್ತದೆ ಮತ್ತು ದೇವತೆಯ ವಿಭಜನೆ ಸಾಧ್ಯವಿಲ್ಲ’ ಎಂದು ಅವರು ಹೇಳಿದ್ದರು.
ಸೋಮವಾರ ವಿಚಾರಣೆ ಕಾಲದಲ್ಲಿ ಯಾವುದೇ ಸಂಧಾನಯತ್ನದಲ್ಲಿ ಪಾಲ್ಗೊಳ್ಳುವ ಸಾಧ್ಯತೆಯನ್ನು ವೈದ್ಯನಾಥನ್ ಅವರು ತಳ್ಳಿ ಹಾಕಿದರು. ಹಲವಾರ ಸುತ್ತಿನ ಸಂಧಾನಗಳು ನಡೆಯುತ್ತಿವೆ ಎಂಬ ಬಗೆಗಿನ ಹಲವಾರು ವರದಿಗಳ ಹಿನ್ನೆಲೆಯಲ್ಲಿ ನಾನು ನಮ್ಮ ನಿಲುವನ್ನು ಸ್ಪಷ್ಟ ಪಡಿಸುತ್ತಿದ್ದೇನೆ. ’ರಾಮಲಲ್ಲಾ ಕಡೆಯಿಂದ ಯಾರು ಕೂಡಾ ಯಾವುದೇ ಸಂಧಾನದಲ್ಲಿ ಪಾಲ್ಗೊಳ್ಳುವುದಿಲ್ಲ’ ಎಂದು ಅವರು ನುಡಿದರು.
ಸಂಧಾನ ಯೋಜನೆಗೆ ಹಿಂದು ಕಕ್ಷಿದಾರರಿಂದ ಕಡಿಮೆ ಪ್ರಮಾಣದ ಬೆಂಬಲ ವ್ಯಕ್ತವಾಗಿದ್ದು, ಅವರು ಸ್ವತಃ ಸುಪ್ರೀಂಕೋರ್ಟ್ ತನ್ನ ತೀರ್ಪು ನೀಡಲಿ ಎಂದು ಬಯಸಿದ್ದಾರೆ.
ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ನೇತೃತ್ವದ ಪಂಚ ಸದಸ್ಯ ಸಂವಿಧಾನಪೀಠವು ಈ ವರ್ಷ ಆಗಸ್ಟ್ ತಿಂಗಳಿಂದ ತ್ವರಿತಗತಿಯಲ್ಲಿ ದಶಕಗಳಷ್ಟು ಹಳೆಯದಾದ ಪ್ರಕರಣದ ವಿಚಾರಣೆ ನಡೆಸುತ್ತಿದೆ. ಇದಕ್ಕೆ ಮುನ್ನ ಸುಪ್ರೀಂಕೋರ್ಟ್ ನೇಮಿಸಿದ್ದ ಸಂಧಾನ ಸಮಿತಿಯ ಕಕ್ಷಿದಾರರ ಮಧ್ಯೆ ಸಹಮತದ ಮೂಲಕ ಸೌಹಾರ್ದಯುತ ಇತ್ಯರ್ಥ ಕಂಡುಕೊಳ್ಳಲು ನಡೆಸಿದ್ದ ಯತ್ನ ವಿಫಲಗೊಂಡಿತ್ತು.
ಅಯೋಧ್ಯೆಯ ಸಂತರ ಸಮಿತಿಯೊಂದು ಈಗಾಗಲೇ ಮುಸ್ಲಿಮರ ಗುಂಪೊಂದು ಪುನಾರಂಭಿಸಿರುವ ಹೊಸ ಸಂಧಾನ ಯತ್ನದಿಂದ ದೂರ ಸರಿದಿದೆ.
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ಅವರು ನವೆಂಬರ್ ೧೭ರಂದು ನಿವೃತ್ತರಾಗಲಿರುವುದರಿಂದ ಅದಕ್ಕೂ ಮುನ್ನ ತನ್ನ ತೀರ್ಪು ನೀಡುವ ಬಗೆಗೆ ಪೀಠವು ಸುಳಿವು ನೀಡಿದೆ.
No comments yet.
Leave a comment